Connect with us

ದೇಶ

ಮುಂಬೈ ಮಳೆ ಆರ್ಭಟ: ನದಿಯಲ್ಲಿ ತೇಲಿದ ಗ್ಯಾಸ್ ಸಿಲಿಂಡರ್‌ಗಳು!

Published

on

ಮುಂಬೈ, ಜು.8: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಪನ್ವೇಲ್ ತಾಲ್ಲೂಕಿನ ಎಂಐಡಿಸಿ ಚವಾಣೆ ಪ್ರದೇಶದಲ್ಲಿರುವ HPCL (ಹಿಂದೂಸ್ತಾನ್ ಪೆಟ್ರೋಲಿಯಂ) ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ್ದು, ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳು ಪ್ರವಾಹದಲ್ಲಿ ಕೊಚ್ಚಿಹೋಗಿರುವ ಘಟನೆ ಆತಂಕ ಮೂಡಿಸಿದೆ.

ತುಂಬಿದ ಮತ್ತು ಖಾಲಿ ಸಿಲಿಂಡರ್‌ಗಳು ಪಾತಾಳಗಂಗಾ ನದಿಯಲ್ಲಿ ತೇಲಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಉಚಿತವಾಗಿ ಸಿಲಿಂಡರ್ ಸಿಗುತ್ತದೆ ಎಂಬ ಆಸೆಯಿಂದ ಕೆಲವರು ಪ್ರವಾಹದ ನೀರಿನಲ್ಲೇ ಇಳಿದು ಅವುಗಳನ್ನು ದಡಕ್ಕೆ ಎಳೆಯಲು ಮುಂದಾಗಿರುವುದು ಕೂಡ ವಿಡಿಯೊಗಳಲ್ಲಿ ಕಂಡುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಯಗಡ ಜಿಲ್ಲಾಧಿಕಾರಿ ಕಿಶನ್ ಜಾವಳೆ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದ್ದಾರೆ. ನದಿ ಅಥವಾ ಹಳ್ಳಗಳಲ್ಲಿ ಸಿಲಿಂಡರ್‌ಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ಅವುಗಳನ್ನು ಮುಟ್ಟಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಸೂಚಿಸಿದ್ದಾರೆ.

ಪ್ರವಾಹದಲ್ಲಿ ತೇಲುತ್ತಿರುವ ಸಿಲಿಂಡರ್‌ಗಳು ಸುರಕ್ಷಿತವಾಗಿವೆಯೇ ಅಥವಾ ಅವುಗಳಿಂದ ಗ್ಯಾಸ್ ಸೋರಿಕೆ ಆಗುತ್ತಿದೆಯೇ ಎಂಬುದು ತಿಳಿದಿಲ್ಲ. ಇಂತಹ ಸಿಲಿಂಡರ್‌ಗಳನ್ನು ಮನೆಗೆ ಕೊಂಡೊಯ್ದು ಬಳಸಲು ಯತ್ನಿಸಿದರೆ ಭಾರೀ ಸ್ಫೋಟ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಪ್ರಸ್ತುತ HPCL ತಾಂತ್ರಿಕ ತಂಡ ಹಾಗೂ ಸ್ಥಳೀಯ ಆಡಳಿತ ಪ್ರವಾಹದಲ್ಲಿ ಕೊಚ್ಚಿಹೋದ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸುತ್ತಿದೆ. ಸಾರ್ವಜನಿಕರು ಎಲ್ಲಿಯಾದರೂ ಗ್ಯಾಸ್ ಸಿಲಿಂಡರ್ ಕಂಡುಬಂದರೆ ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ದೇಶ

ಮಾರ್ನಿಂಗ್ ವಾಕ್ ವೇಳೆ ಎಚ್ಚರ! ದೊಡ್ಡ ಗೊಲ್ಲರಹಟ್ಟಿ ಬಳಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಭೀತಿ

Published

on

ಬೆಂಗಳೂರು, ಜು.10: ಸಿಲಿಕಾನ್ ಸಿಟಿ ಬೆಂಗಳೂರುದಲ್ಲಿ ಮತ್ತೆ ಚಿರತೆ (Leopard) ಪ್ರತ್ಯಕ್ಷವಾಗಿದ್ದು, ನಗರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ದೊಡ್ಡ ಗೊಲ್ಲರಹಟ್ಟಿ ಸಮೀಪದ ನೈಸ್ ರಸ್ತೆ (NICE Road) ಬಳಿಯ BEL ಲೇಔಟ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಮಾಹಿತಿ ಪ್ರಕಾರ, ಇಂದು ಬೆಳಗ್ಗೆ ಸುಮಾರು 6:50ರ ವೇಳೆಗೆ ರಸ್ತೆಯಲ್ಲಿ ವಾಹನ ಹಾಗೂ ಜನರ ಸಂಚಾರ ಕಡಿಮೆ ಇದ್ದ ಸಂದರ್ಭದಲ್ಲಿ ಚಿರತೆ ನಿರಾತಂಕವಾಗಿ ರಸ್ತೆ ದಾಟಿದೆ. ಬಳಿಕ ಅದು BEL ಲೇಔಟ್‌ನಲ್ಲಿರುವ ಮನೆಯೊಂದರ ಕಾಂಪೌಂಡ್ ಒಳಗೆ ಜಿಗಿದಿರುವ ದೃಶ್ಯವೂ ಕ್ಯಾಮೆರಾದಲ್ಲಿ ದಾಖಲಾಗಿದೆ.

ಚಿರತೆ ಕಾಣಿಸಿಕೊಂಡ ಸಮಯವೇ ಬೆಳಗಿನ ವಾಯುವಿಹಾರಕ್ಕೆ ತೆರಳುವವರು, ಶಾಲಾ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಸಂಚರಿಸುವ ಸಮಯವಾಗಿದ್ದರಿಂದ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಲವರು ಮನೆಯಿಂದ ಹೊರಬರಲು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳನ್ನು ಹೊರಗೆ ಕಳುಹಿಸದಂತೆ ಪೋಷಕರು ಎಚ್ಚರಿಕೆ ವಹಿಸುತ್ತಿದ್ದಾರೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಚಿರತೆ ಯಾವ ಪ್ರದೇಶದಲ್ಲಿ ಅಡಗಿದೆ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಅಗತ್ಯವಿದ್ದರೆ ಬೋನು ಅಳವಡಿಸಿ ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ.

ಅರಣ್ಯ ಇಲಾಖೆ ಸಾರ್ವಜನಿಕರಿಗೆ ಅನಗತ್ಯವಾಗಿ ಚಿರತೆಯನ್ನು ಹುಡುಕಲು ಹೋಗಬಾರದು, ಒಂಟಿಯಾಗಿ ಸಂಚರಿಸಬಾರದು ಹಾಗೂ ಚಿರತೆ ಕಂಡುಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಪರಿಸ್ಥಿತಿಯನ್ನು ಅಧಿಕಾರಿಗಳು ನಿಕಟವಾಗಿ ಗಮನಿಸುತ್ತಿದ್ದು, ಸ್ಥಳೀಯರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

Continue Reading

ದೇಶ

ಜಾರ್ಖಂಡ್ ವಸತಿ ಶಾಲೆಯಲ್ಲಿ ದುರಂತ; ಹಾವು ಕಚ್ಚಿ ಬಾಲಕಿ ಸಾವು, ಮೂವರು ಆಸ್ಪತ್ರೆಗೆ ದಾಖಲು

Published

on

ಲೋಹರ್ದಗಾ (ಜಾರ್ಖಂಡ್), ಜು.09: ಜಾರ್ಖಂಡ್‌ನ ಲೋಹರ್ದಗಾ ಜಿಲ್ಲೆಯ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ವಿಷಪೂರಿತ ಹಾವು ಕಚ್ಚಿ 12 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಇನ್ನೂ ಮೂವರು ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಡು ಪೊಲೀಸ್ ಠಾಣೆ ವ್ಯಾಪ್ತಿಯ ಸಂಸೀರಾ ಹೈಯರ್ ಸೆಕೆಂಡರಿ ವಸತಿ ಶಾಲೆ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ವಿದ್ಯಾರ್ಥಿನಿಯರು ನಿದ್ರಿಸುತ್ತಿದ್ದ ವೇಳೆ ಹಾಸ್ಟೆಲ್ ಕೊಠಡಿಗೆ ನುಗ್ಗಿದ ಹಾವು ನಾಲ್ವರು ಬಾಲಕಿಯರಿಗೆ ಸರಣಿ ರೀತಿಯಲ್ಲಿ ಕಚ್ಚಿದೆ ಎಂದು ತಿಳಿದುಬಂದಿದೆ.

ಮೃತ ವಿದ್ಯಾರ್ಥಿನಿಯನ್ನು ವರ್ಷಾ ಓರಾನ್ (12) ಎಂದು ಗುರುತಿಸಲಾಗಿದೆ. ಹಾವು ಕಚ್ಚಿದ ತಕ್ಷಣ ವಿದ್ಯಾರ್ಥಿನಿಯರು ಕಿರುಚಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರು ಗಾಯಾಳುಗಳನ್ನು ಕೂಡಲೇ ಸಮೀಪದ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವರ್ಷಾ ಓರಾನ್ ಮೃತಪಟ್ಟಿದ್ದಾಳೆ.

ಗಾಯಗೊಂಡಿರುವ ಮನಿಷಾ ಕುಮಾರಿ (14) ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಇಬ್ಬರು ವಿದ್ಯಾರ್ಥಿನಿಯರಾದ ಫುಲ್ಮಾನಿಯಾ ಓರಾನ್ (11) ಮತ್ತು ಅನಿಸಾ ಕುಮಾರಿ (11) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ಮೃತ ಬಾಲಕಿಯ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಜಮಾಯಿಸಿ ದುಃಖ ವ್ಯಕ್ತಪಡಿಸಿದರು. ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕುಡು ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹಾಸ್ಟೆಲ್ ಆವರಣದಲ್ಲಿ ಹಾವು ಪ್ರವೇಶಿಸಲು ಕಾರಣವಾದ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯ ಬಳಿಕ ಶಾಲಾ ವಸತಿ ನಿಲಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯದ ಬಗ್ಗೆ ಚರ್ಚೆ ಆರಂಭವಾಗಿದೆ.

Continue Reading

ದೇಶ

ರೈತರು ಸಂಕಷ್ಟದಲ್ಲಿ, ಮಕ್ಕಳು ಇನ್ಸುಲಿನ್‌ಗಾಗಿ ಕಾಯುತ್ತಿದ್ದಾರೆ; ಸರ್ಕಾರದ ವಿರುದ್ಧ ಆರ್. ಅಶೋಕ್ ಟೀಕೆ

Published

on

ಬೆಂಗಳೂರು, ಜು.10: ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು, ಸಚಿವ ಸಂಪುಟ ವಿಸ್ತರಣೆ ವಿಳಂಬ ಹಾಗೂ ಉಚಿತ ಇನ್ಸುಲಿನ್ ಯೋಜನೆ ಜಾರಿಯಾಗದಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈರುಳ್ಳಿ ಬೆಳೆ ನಾಶವಾಗುತ್ತಿದೆ. ಟೊಮೇಟೊ ಬೆಲೆ ಕುಸಿತ ಹಾಗೂ ಮಧ್ಯವರ್ತಿಗಳ ಸಮಸ್ಯೆಯಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ. ಚಿತ್ರದುರ್ಗ, ವಿಜಯಪುರ, ಗದಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಅವರು ಟೀಕಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿಯೂ ಸರ್ಕಾರವನ್ನು ಟಾರ್ಗೆಟ್ ಮಾಡಿದ ಅಶೋಕ್, ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡು ತಿಂಗಳುಗಳಾದರೂ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಕೃಷಿ ಸೇರಿದಂತೆ ಖಾಲಿ ಇರುವ ಪ್ರಮುಖ ಇಲಾಖೆಗೆ ಶೀಘ್ರ ಪೂರ್ಣಾವಧಿ ಸಚಿವರನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ, ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಘೋಷಿಸಲಾಗಿದ್ದ ಉಚಿತ ಇನ್ಸುಲಿನ್ ಯೋಜನೆ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಅಶೋಕ್ ಆರೋಪಿಸಿದರು. ಟೆಂಡರ್ ಪ್ರಕ್ರಿಯೆ ವಿಳಂಬದಿಂದ ಸಾವಿರಾರು ಮಕ್ಕಳಿಗೆ ಅಗತ್ಯ ಇನ್ಸುಲಿನ್ ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ ಎಂದು ಅವರು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಸುಲಿನ್ ಕೊರತೆಯಿಂದ ಕೆಲವೆಡೆ ಸ್ವಯಂಸೇವಾ ಸಂಸ್ಥೆಗಳ ನೆರವು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದರು.

ಉಚಿತ ಇನ್ಸುಲಿನ್ ವಿತರಣೆಯನ್ನು ತಕ್ಷಣ ಆರಂಭಿಸಬೇಕು ಹಾಗೂ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಸರ್ಕಾರವನ್ನು ಆಗ್ರಹಿಸಿದರು.

Continue Reading

Trending