Connect with us

ದೇಶ

NEET ಪ್ರತಿಭಟನೆ ವಿವಾದಕ್ಕೆ ಹೊಸ ಟ್ವಿಸ್ಟ್! ಪ್ರಧಾನಿ ಮೋದಿಗೆ ತಾಯಿಯ ಭಾವನಾತ್ಮಕ ಸಂದೇಶ ವೈರಲ್

Published

on

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ (NEET) ಪ್ರತಿಭಟನೆಯ ವೇಳೆ PM Narendra Modi ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪದಲ್ಲಿ ಪೊಲೀಸ್ ಪ್ರಕರಣಕ್ಕೆ ಗುರಿಯಾಗಿದ್ದ ಅಪ್ರಾಪ್ತ ಬಾಲಕಿಯ ವಿಷಯದಲ್ಲಿ ಹೊಸ ಬೆಳವಣಿಗೆ ನಡೆದಿದೆ. ತನ್ನ ಮಗಳನ್ನು ಕ್ಷಮಿಸಿದ್ದಕ್ಕಾಗಿ ಪ್ರಧಾನಿ ಮೋದಿಗೆ ಬಾಲಕಿಯ ತಾಯಿ ಭಾವುಕವಾಗಿ ಧನ್ಯವಾದ ಅರ್ಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕಿಯ ತಾಯಿ, “PM Modi ಈ ದೇಶದ ನಾಯಕ. ಅವರ ಮುಂದೆ ನಾವು ಏನೂ ಅಲ್ಲ. ಅವರನ್ನು ತುಂಬಾ ಕೆಟ್ಟ ರೀತಿಯಲ್ಲಿ ನಿಂದಿಸಿದ್ದ ನನ್ನ ಮಗಳನ್ನು ಕ್ಷಮಿಸುವ ಮೂಲಕ ಅವರು ದೊಡ್ಡ ಮನಸ್ಸು ತೋರಿದ್ದಾರೆ. ಅವರಿಗೆ ಕೈಮುಗಿದು ಧನ್ಯವಾದ ಹೇಳುತ್ತೇನೆ” ಎಂದು ಹೇಳಿದ್ದಾರೆ.

ಇಂದು ತಮ್ಮ ಮಗಳ ಹುಟ್ಟುಹಬ್ಬವಾಗಿದ್ದು, “ಪ್ರಧಾನಿ ಮೋದಿ ಅವರ ಕ್ಷಮೆಯೇ ಆಕೆಗೆ ಸಿಕ್ಕಿರುವ ಅತಿದೊಡ್ಡ ಉಡುಗೊರೆ. ನನ್ನ ಮಗಳಿಗೆ ಅವರು ಜೀವದಾನ ನೀಡಿದ್ದಾರೆ. ಆಕೆ ಹೊಸ ಜೀವನವನ್ನು ಪಡೆದಿದ್ದಾಳೆ” ಎಂದು ತಾಯಿ ಭಾವನಾತ್ಮಕವಾಗಿ ತಿಳಿಸಿದ್ದಾರೆ.

ಇದೇ ವೇಳೆ, ಪ್ರಧಾನಿ ಮೋದಿ ತಮ್ಮ ಮಗಳ ಭವಿಷ್ಯಕ್ಕೆ ನೆರವಾಗುವಂತೆ ಹಾಗೂ ಆಕೆಯನ್ನು ದತ್ತು ಪಡೆದು ಮಾರ್ಗದರ್ಶನ ನೀಡುವಂತೆ ತಾಯಿ ಮನವಿ ಮಾಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ, ದೆಹಲಿಯಲ್ಲಿ ನಡೆದ NEET ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಆರೋಪದ ಹಿನ್ನೆಲೆಯಲ್ಲಿ ಅಪ್ರಾಪ್ತೆಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿತ್ತು. ಬಳಿಕ ಆಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು.

ಈ ಪ್ರಕರಣದ ಬಗ್ಗೆ ವಿವಿಧ ವಲಯಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕ್ಷಮೆಯಾಚನೆಯ ನಂತರದ ಬೆಳವಣಿಗೆಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

Indonesia ದಲ್ಲಿ ದೋಣಿ ದುರಂತ; ಬೆಂಕಿ ಹೊತ್ತಿಕೊಂಡು ಭಸ್ಮ, 225 ಮಂದಿಯ ರಕ್ಷಣೆ

Published

on

ಜಕಾರ್ತಾ: Indonesia ದ ಮದುರಾ ದ್ವೀಪದ (Madura Island) ಸಮೀಪ ಇಂದು (ಆಗಸ್ಟ್ 2) ಸಂಭವಿಸಿದ ಭೀಕರ ಫೆರ್ರಿ ದೋಣಿ (Ferry Boat) ದುರಂತದಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, 41 ಮಂದಿ ನಾಪತ್ತೆಯಾಗಿದ್ದಾರೆ. ಒಟ್ಟು 271 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ‘ಕೆಎಂಪಿ ಮುಟಿಯಾರಾ ಸೆಂಟೋಸಾ 2’ (KMP Mutiara Sentosa 2) ದೋಣಿಯಲ್ಲಿ ಸಮುದ್ರ ಮಧ್ಯೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ (Basarnas) ನೀಡಿರುವ ಮಾಹಿತಿಯ ಪ್ರಕಾರ, ಇದುವರೆಗೆ 225 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಾಪತ್ತೆಯಾಗಿರುವ 41 ಮಂದಿಗಾಗಿ ಸಮುದ್ರದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಈ ಫೆರ್ರಿ ದೋಣಿ ಪೂರ್ವ ಜಾವಾದ ಸುರಬಯಾ (Surabaya) ನಗರದ ತಂಜುಂಗ್ ಪೆರಾಕ್ ಬಂದರಿನಿಂದ ದಕ್ಷಿಣ ಸುಲವೇಸಿಯ ಮಕಾಸ್ಸರ್ (Makassar) ಕಡೆಗೆ ಪ್ರಯಾಣಿಸುತ್ತಿತ್ತು. ಪ್ರಯಾಣ ಆರಂಭವಾಗಿ ಕೆಲವೇ ಗಂಟೆಗಳಲ್ಲಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಯಾಪ್ಟನ್ ತುರ್ತು ಸಂದೇಶ ರವಾನಿಸಿದ ಕೆಲವೇ ಕ್ಷಣಗಳಲ್ಲಿ ಹಡಗಿನ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ವ್ಯಾಪಿಸುತ್ತಿದ್ದಂತೆ ಆತಂಕಗೊಂಡ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದಾರೆ. ಸಪುಡಿ ದ್ವೀಪದ ಉತ್ತರಕ್ಕೆ ಸುಮಾರು 19 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ದುರಂತ ಸಂಭವಿಸಿದ್ದು, ಹಡಗು ಬಹುತೇಕ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಹತ್ತಿರದಲ್ಲಿದ್ದ ‘ಟಿಬಿ ಹಸ್ನೂರ್ 26’ ಹಾಗೂ ‘ಬ್ರಿಟಿಷ್ ಮೆಂಟರ್’ ಸೇರಿದಂತೆ ಹಲವು ನೌಕೆಗಳು ಕೈಜೋಡಿಸಿವೆ. ಸದ್ಯ ನಾಲ್ಕು ನೌಕೆಗಳು ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಪ್ರಯಾಣಿಕರ ಪತ್ತೆಗೆ ಶೋಧ ಮುಂದುವರೆದಿದೆ ಎಂದು ಸುರಬಯಾ ಶೋಧ ಮತ್ತು ರಕ್ಷಣಾ ಕಚೇರಿ ಮುಖ್ಯಸ್ಥ ನಾನಾಂಗ್ ಸಿಗಿಟ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ದೋಣಿಯ ಮೇಲ್ಭಾಗದಿಂದ ದಟ್ಟ ಕಪ್ಪು ಹೊಗೆ ಆವರಿಸಿರುವ ದೃಶ್ಯಗಳು, ಲೈಫ್ ಜಾಕೆಟ್ ಧರಿಸಿದ ಪ್ರಯಾಣಿಕರು ಸಹಾಯಕ್ಕಾಗಿ ಕೂಗುತ್ತಿರುವುದು ಹಾಗೂ ಕೆಲವರು ಸಮುದ್ರಕ್ಕೆ ಜಿಗಿಯುತ್ತಿರುವ ಭಯಾನಕ ದೃಶ್ಯಗಳು ಕಾಣಿಸುತ್ತಿವೆ.

ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷವೇ ಅಥವಾ ಬೇರೆ ಕಾರಣವೇ ಎಂಬುದರ ಕುರಿತು ಇಂಡೋನೇಷ್ಯಾ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾಗಿರುವವರ ಪೈಕಿ ಹಲವರು ಮೃತಪಟ್ಟಿರುವ ಶಂಕೆಯನ್ನು ರಕ್ಷಣಾ ತಂಡಗಳು ವ್ಯಕ್ತಪಡಿಸಿವೆ.

Continue Reading

ದೇಶ

Commonwealth Games ನಲ್ಲಿ ಭಾರತದ ನಕ್ಷೆ ಎಡವಟ್ಟು! ಲೊವ್ಲಿನಾ ಬೊರ್ಗೊಹೈನ್ ಆಕ್ರೋಶ

Published

on

ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್‌ 2026 (Commonwealth Games 2026) ವೇಳೆ ಭಾರತದ ಕ್ರೀಡಾಪಟುಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಭೋಜನ ಕಾರ್ಯಕ್ರಮದಲ್ಲಿ ಭಾರತದ ನಕ್ಷೆ (India Map) ಸಂಬಂಧ ಹೊಸ ವಿವಾದ ಭುಗಿಲೆದ್ದಿದೆ. ಗ್ಲಾಸ್ಗೋದಲ್ಲಿರುವ ‘ಮಿಸ್ಟರ್ ಸಿಂಗ್ಸ್ ಇಂಡಿಯಾ – ಕರಿ ಹೌಸ್’ ರೆಸ್ಟೋರೆಂಟ್‌ನಲ್ಲಿ ನೀಡಲಾದ ಪೇಪರ್ ನ್ಯಾಪ್ಕಿನ್‌ನಲ್ಲಿ ಭಾರತದ ನಕ್ಷೆ ಮುದ್ರಿಸಲಾಗಿದ್ದು, ಅದರಲ್ಲಿ ಸಂಪೂರ್ಣ ಈಶಾನ್ಯ ಭಾರತವೇ ಕಾಣೆಯಾಗಿರುವುದು ಭಾರತೀಯ ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಎಡವಟ್ಟನ್ನು ಮೊದಲಿಗೆ ಗಮನಿಸಿದ ಒಲಿಂಪಿಕ್ ಕಂಚಿನ ಪದಕ ವಿಜೇತೆ ಹಾಗೂ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾರತದ ಪ್ರತಿಯೊಂದು ಭಾಗವೂ ದೇಶದ ಅವಿಭಾಜ್ಯ ಅಂಗವಾಗಿದ್ದು, ಈಶಾನ್ಯ ರಾಜ್ಯಗಳನ್ನು ನಕ್ಷೆಯಿಂದ ಕೈಬಿಡುವುದು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಅವರು ಹೇಳಿದ್ದಾರೆ.

ಈ ಘಟನೆಗೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಅಜಯ್ ಸಿಂಗ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಪ್ಕಿನ್‌ನಲ್ಲಿ ಜಮ್ಮು-ಕಾಶ್ಮೀರದ ಚಿತ್ರಣದಲ್ಲೂ ದೋಷವಿದೆ ಎಂದು ಅವರು ಸೂಚಿಸಿದ್ದು, ರೆಸ್ಟೋರೆಂಟ್ ಆಡಳಿತ ಕೂಡಲೇ ಈ ತಪ್ಪನ್ನು ಸರಿಪಡಿಸಿ, ತಪ್ಪಾಗಿ ಮುದ್ರಿಸಿರುವ ನ್ಯಾಪ್ಕಿನ್‌ಗಳನ್ನು ಬಳಕೆ ಮಾಡದಂತೆ ಒತ್ತಾಯಿಸಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದಂತಹ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಭೌಗೋಳಿಕ ಚಿತ್ರಣದ ಬಗ್ಗೆ ಇಂತಹ ನಿರ್ಲಕ್ಷ್ಯ ಕಂಡುಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನೇಕರು ಭಾರತದ ಅಧಿಕೃತ ನಕ್ಷೆಯನ್ನು ಗೌರವಿಸುವಂತೆ ಹಾಗೂ ಇಂತಹ ತಪ್ಪುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ, ಈ ವಿವಾದದ ಬಗ್ಗೆ ‘ಮಿಸ್ಟರ್ ಸಿಂಗ್ಸ್ ಇಂಡಿಯಾ – ಕರಿ ಹೌಸ್’ ರೆಸ್ಟೋರೆಂಟ್ ಆಡಳಿತದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ತಪ್ಪು ಉದ್ದೇಶಪೂರ್ವಕವಾಗಿದೆಯೇ ಅಥವಾ ಮುದ್ರಣದ ಎಡವಟ್ಟೇ ಎಂಬ ಕುರಿತು ಸ್ಪಷ್ಟನೆಗಾಗಿ ಭಾರತೀಯ ಅಭಿಮಾನಿಗಳು ಹಾಗೂ ಕ್ರೀಡಾಪಟುಗಳು ಕಾಯುತ್ತಿದ್ದಾರೆ.

ಭಾರತದ ನಕ್ಷೆಗೆ ಸಂಬಂಧಿಸಿದ ಯಾವುದೇ ತಪ್ಪುಗಳು ದೇಶದ ಭಾವನೆಗಳಿಗೆ ಧಕ್ಕೆ ತರುವ ವಿಚಾರವಾಗಿರುವುದರಿಂದ, ಈ ಘಟನೆ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

Continue Reading

ರಾಜ್ಯ

‘Karntaka-Tamil Nadu India-Pakisthan ಅಲ್ಲ’; ಕಾವೇರಿ ವಿವಾದಕ್ಕೆ ಕಾಂಗ್ರೆಸ್ ಸಂಸದರ ಹೊಸ ಸಲಹೆ

Published

on

ಬೆಂಗಳೂರು: Tamil Nadu ಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶದ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ಮುಂದುವರಿದಿದೆ. ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಕಾವೇರಿ ವಿವಾದದ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ರಾಜ್ಯಗಳ ನಡುವಿನ ಈ ವಿವಾದವನ್ನು ರಾಜಕೀಯ ಸಂಘರ್ಷವನ್ನಾಗಿ ಮಾಡದೆ, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಣಿಕಂ ಠಾಗೋರ್, ಕರ್ನಾಟಕ ಮತ್ತು ತಮಿಳುನಾಡು ಎರಡೂ ಸಹೋದರ ರಾಜ್ಯಗಳಾಗಿದ್ದು, ಇವುಗಳನ್ನು ಭಾರತ ಮತ್ತು ಪಾಕಿಸ್ತಾನದಂತೆ ಪರಿಗಣಿಸುವುದು ಸರಿಯಲ್ಲ ಎಂದು ಹೇಳಿದರು. ಕರ್ನಾಟಕ ಮುಖ್ಯಮಂತ್ರಿ ತಮ್ಮ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವುದು ಹೇಗೆ ಮುಖ್ಯವೋ, ಅದೇ ರೀತಿ ತಮಿಳುನಾಡು ಸರ್ಕಾರಕ್ಕೂ ತನ್ನ ರಾಜ್ಯದ ಹಿತಾಸಕ್ತಿ ಪ್ರಮುಖವಾಗಿದೆ. ಆದ್ದರಿಂದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮುಖಾಮುಖಿ ಕುಳಿತು ಚರ್ಚೆ ನಡೆಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ತಿಳಿಸಿದರು.

ಕಾವೇರಿ ನೀರಿನ ವಿಷಯದಲ್ಲಿ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, ತಮಿಳುನಾಡಿನಲ್ಲೂ ನೀರಿನ ಹಕ್ಕಿನ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ಹೋರಾಟ ನಡೆಸುತ್ತಿವೆ ಎಂದರು. ಈಗಾಗಲೇ ತಮಿಳುನಾಡು ವಿಧಾನಸಭೆಯಲ್ಲಿ ಎಲ್ಲಾ ಪಕ್ಷಗಳು ಒಮ್ಮತದಿಂದ ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಸರ್ವಪಕ್ಷ ಸಭೆ ನಡೆಸಬೇಕೆಂದು ಕೆಲವರು ಕೇಳುತ್ತಿರುವುದು ಏಕೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂ.ಜಿ.ಆರ್.) ಅವರ ಆಡಳಿತ ಮಾದರಿಯನ್ನು ಉಲ್ಲೇಖಿಸಿದ ಠಾಗೋರ್, ಪ್ರಸ್ತುತ ಮುಖ್ಯಮಂತ್ರಿ ವಿಜಯ್ ಕೂಡ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಡುವೆ ನೇರ ಮಾತುಕತೆ ನಡೆದರೆ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಇಂತಹ ಯಾವುದೇ ಸಂವಾದಕ್ಕೆ ತಮಿಳುನಾಡು ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದ ಮಾಣಿಕಂ ಠಾಗೋರ್, “ರಾಹುಲ್ ಗಾಂಧಿ ತಮಿಳುನಾಡಿಗೆ ಭೇಟಿ ನೀಡಿದ ತಕ್ಷಣವೇ ಉತ್ತಮ ಮಳೆಯಾಗಿದೆ. ಅವರು ಮತ್ತೆ ರಾಜ್ಯಕ್ಕೆ ಬಂದರೆ ಇನ್ನೂ ಹೆಚ್ಚಿನ ಮಳೆಯಾಗಬಹುದು” ಎಂದು ಹೇಳಿದ್ದು ಗಮನ ಸೆಳೆಯಿತು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ, ಕರ್ನಾಟಕದಲ್ಲಿ ಕಾವೇರಿ ನೀರಿನ ವಿಚಾರವಾಗಿ ಪ್ರತಿಭಟನೆಗಳು ಮುಂದುವರಿದಿದ್ದು, ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಸರ್ಕಾರ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಒತ್ತಾಯಿಸುತ್ತಿವೆ. ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವುದಾಗಿ ಹಾಗೂ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಕಾವೇರಿ ನೀರಿನ ವಿವಾದ ಮತ್ತೊಮ್ಮೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಎರಡು ರಾಜ್ಯಗಳ ನಡುವೆ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಮಾಣಿಕಂ ಠಾಗೋರ್ ಒತ್ತಿ ಹೇಳಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

Continue Reading

Trending