Connect with us

ದೇಶ

Insurance ಇಲ್ಲದ ವಾಹನಗಳಿಗೆ ಶಾಕ್! ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ

Published

on

ನವದೆಹಲಿ: ದೇಶದಲ್ಲಿ ರಸ್ತೆ ಸುರಕ್ಷತೆ ಮತ್ತು ಅಪಘಾತ ಸಂತ್ರಸ್ತರ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ (Supreme Court) ಮಹತ್ವದ ನಿರ್ದೇಶನ ನೀಡಿದೆ. ವಾಹನಗಳಿಗೆ ಮಾನ್ಯ ವಿಮೆ (Insurance) ಇಲ್ಲದಿದ್ದರೆ ಇಂಧನ (Fuel) ನೀಡದ ‘No Insurance, No Fuel’ ಪೈಲಟ್ ಯೋಜನೆಯನ್ನು ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ, ದೇಶದಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳು ಮಾನ್ಯ ವಿಮೆ ಇಲ್ಲದೇ ಸಂಚರಿಸುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದೆ.

ಪಾರ್ಲಿಮೆಂಟರಿ ಸಮಿತಿಯ ವರದಿಯ ಪ್ರಕಾರ, ದೇಶದಲ್ಲಿರುವ ಸುಮಾರು 30 ಕೋಟಿ ವಾಹನಗಳ ಪೈಕಿ 16.54 ಕೋಟಿ ವಾಹನಗಳಿಗೆ ಮಾನ್ಯ ವಿಮೆ ಇಲ್ಲ. ಅಂದರೆ, ಸುಮಾರು ಶೇಕಡಾ 56ರಷ್ಟು ವಾಹನಗಳು ವಿಮೆಯಿಲ್ಲದೆ ಸಂಚರಿಸುತ್ತಿವೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕಲು ವಾಹನಗಳಿಗೆ ಕಡ್ಡಾಯ ವಿಮೆ ಅತ್ಯಗತ್ಯ ಎಂದು ನ್ಯಾಯಾಲಯ ತಿಳಿಸಿದೆ.

ಈ ಯೋಜನೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ANPR (Automatic Number Plate Recognition) ಕ್ಯಾಮೆರಾಗಳನ್ನು VAHAN ಪೋರ್ಟಲ್ ಹಾಗೂ ವಿಮಾ ಡೇಟಾಬೇಸ್‌ಗೆ ಸಂಪರ್ಕಿಸುವಂತೆ ಸೂಚಿಸಲಾಗಿದೆ. ಇದರಿಂದ ವಾಹನದ ವಿಮೆ ಮಾನ್ಯವಾಗಿದೆಯೇ ಎಂಬುದನ್ನು ತಕ್ಷಣ ಪರಿಶೀಲಿಸಲು ಸಾಧ್ಯವಾಗಲಿದೆ.

ಇದೇ ವೇಳೆ, ಪೆಟ್ರೋಲ್ ಬಂಕ್‌ಗಳಲ್ಲಿ ವಾಹನದ ನೋಂದಣಿ ಸಂಖ್ಯೆಯ ಆಧಾರದಲ್ಲಿ ವಿಮೆ ಪರಿಶೀಲಿಸುವ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ. ವಿಮೆ ನವೀಕರಿಸದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ನೀಡುವುದನ್ನು ತಡೆಯುವ ವ್ಯವಸ್ಥೆಯನ್ನೂ ರೂಪಿಸುವ ಕುರಿತು ಪರಿಶೀಲನೆ ನಡೆಯಲಿದೆ.

ಸಂಚಾರ ಪೊಲೀಸರಿಗೆ ಸಹ ವಾಹನದ ವಿಮಾ ಸ್ಥಿತಿಯನ್ನು ತಕ್ಷಣ ಪರಿಶೀಲಿಸಿ ಅಗತ್ಯವಿದ್ದರೆ ದಂಡ ವಿಧಿಸಲು ಅನುಕೂಲವಾಗುವಂತೆ ವಿಶೇಷ ಮೊಬೈಲ್ ಆ್ಯಪ್‌ಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಇದರ ಜೊತೆಗೆ, ಹೊಸ ವಾಹನಗಳ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಕುರಿತೂ ನ್ಯಾಯಾಲಯ ಮಹತ್ವದ ನಿರ್ದೇಶನ ನೀಡಿದೆ. ಇನ್ನು ಮುಂದೆ ಹೊಸ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಇರಬೇಕು ಎಂದು ಸೂಚಿಸಲಾಗಿದೆ.

ಈ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಆಗಸ್ಟ್ 14ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಈ ನಿರ್ದೇಶನ ಜಾರಿಯಾದರೆ, ದೇಶದಲ್ಲಿ ವಿಮೆಯಿಲ್ಲದ ವಾಹನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಜೊತೆಗೆ ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರಿಗೆ ಪರಿಹಾರ ದೊರಕುವ ವ್ಯವಸ್ಥೆ ಮತ್ತಷ್ಟು ಬಲವಾಗುವ ನಿರೀಕ್ಷೆಯಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bike Taxi ಸೇವೆ ತಕ್ಷಣ ನಿಷೇಧಿಸಿ: ಸಾರಿಗೆ ಆಯುಕ್ತರ ಕಚೇರಿ ಮುಂದೆ ಆಟೋ ಚಾಲಕರ ಬೃಹತ್ ಪ್ರತಿಭಟನೆ

Published

on

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ (Bike Taxi) ಸೇವೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಒತ್ತಾಯಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಒಕ್ಕೂಟ ಸಾರಿಗೆ ಆಯುಕ್ತರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದೆ. ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ನಗರಾದ್ಯಂತ Bengaluru Bandh ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಸಾರಿಗೆ ಆಯುಕ್ತರ ಕಚೇರಿ ಆವರಣದಲ್ಲಿ ನೂರಾರು ಆಟೋ ಹಾಗೂ ಕ್ಯಾಬ್ ಚಾಲಕರು ಸೇರಿ ಪ್ರತಿಭಟನೆ ನಡೆಸಿ, ಆ್ಯಪ್ ಆಧಾರಿತ ಕಂಪನಿಗಳು ನಿಯಮಬಾಹಿರವಾಗಿ ವೈಟ್‌ಬೋರ್ಡ್ ದ್ವಿಚಕ್ರ ವಾಹನಗಳನ್ನು ಪ್ರಯಾಣಿಕರ ಸಾರಿಗೆಗೆ ಬಳಸುತ್ತಿರುವುದರಿಂದ ತಮ್ಮ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.

ಚಾಲಕರ ಸಂಘಟನೆಯ ಮುಖಂಡರು ಮಾತನಾಡಿ, ತಾವು ಸರ್ಕಾರದ ನಿಯಮಗಳಂತೆ ಪರವಾನಗಿ ಪಡೆದು ತೆರಿಗೆ ಪಾವತಿಸಿ ವಾಹನ ಚಲಾಯಿಸುತ್ತಿದ್ದರೂ, ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಬೈಕ್ ಟ್ಯಾಕ್ಸಿಗಳು ರಸ್ತೆಗಿಳಿಯುತ್ತಿರುವುದರಿಂದ ಆಟೋ ಹಾಗೂ ಕ್ಯಾಬ್‌ಗಳಿಗೆ ಬಾಡಿಗೆ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಸಾವಿರಾರು ಚಾಲಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅವರು ಹೇಳಿದರು.

ಪ್ರತಿಭಟನೆ ವೇಳೆ ಮನವಿ ಸ್ವೀಕರಿಸಿದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿಗಳ ವಿರುದ್ಧ ಶೀಘ್ರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಈ ಭರವಸೆಯಿಂದ ತೃಪ್ತರಾಗದ ಚಾಲಕರು, ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ನಗರ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು.

ಇದೇ ವೇಳೆ ಆಟೋ ಹಾಗೂ ಕ್ಯಾಬ್ ಚಾಲಕರು ಸ್ವತಃ ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಗಳೂರು ನಗರದ 11 ಆರ್‌ಟಿಒ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ದಾಳಿ ನಡೆಯುತ್ತಿದ್ದು, ನಿಯಮ ಉಲ್ಲಂಘಿಸಿರುವ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಈ ಕಾರ್ಯಾಚರಣೆ ಒಂದು ವಾರ ಮುಂದುವರಿಯಲಿದ್ದು, ಅಗತ್ಯವಿದ್ದರೆ ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವುದಾಗಿಯೂ ಸಂಘಟನೆಗಳು ಘೋಷಿಸಿವೆ.

Continue Reading

ಬೆಂಗಳೂರು

KR Market ಫ್ಲೈಓವರ್ ರಸ್ತೆ 3 ತಿಂಗಳು ಬಂದ್; ವಾಹನ ಸವಾರರಿಗೆ ಟ್ರಾಫಿಕ್ ಎಚ್ಚರಿಕೆ

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಪ್ರಮುಖ ಸಂಚಾರ ಕೇಂದ್ರವಾಗಿರುವ ಕೆ.ಆರ್. ಮಾರ್ಕೆಟ್ (KR Market) ಮೇಲ್ಸೇತುವೆಯ ಚಾಮರಾಜಪೇಟೆ ತಿರುವಿನ ರಸ್ತೆ ಮುಂದಿನ ಮೂರು ತಿಂಗಳ ಕಾಲ ಬಂದ್ ಆಗಲಿದೆ. ಸುಲ್ತಾನ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಈ ಮೇಲ್ಸೇತುವೆ ಮೂಲಕ ಪ್ರತಿದಿನ ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಚಾಮರಾಜಪೇಟೆ, ಬಸವನಗುಡಿ ಸೇರಿದಂತೆ ಹಲವು ಪ್ರದೇಶಗಳಿಗೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ಇದೀಗ ರಸ್ತೆ ಬಂದ್ ಆಗಿರುವುದರಿಂದ ವಾಹನಗಳು ಮಧ್ಯದಲ್ಲೇ ಹಿಂದಿರುಗಿ ಬೇರೆ ಮಾರ್ಗ ಬಳಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಮುಂದಿನ ಕೆಲವು ತಿಂಗಳು ಈ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದರ ಜೊತೆಗೆ ಕೆ.ಆರ್. ಮಾರ್ಕೆಟ್ ಪ್ರದೇಶದಲ್ಲಿ ಬೃಹತ್ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಕೂಡ ಆರಂಭವಾಗಿದೆ. ಜಿಬಿಎ (GBA) ಅಧಿಕಾರಿಗಳು ಮೂರು ಜೆಸಿಬಿಗಳ ಸಹಾಯದಿಂದ ಫ್ಲೈಓವರ್ ಕೆಳಭಾಗದಲ್ಲಿ ನಿರ್ಮಿಸಲಾಗಿದ್ದ ಸುಮಾರು 20 ರಿಂದ 25 ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ.

ಆದರೆ, ಈ ಕಾರ್ಯಾಚರಣೆಗೆ ಕೆಲ ಅಂಗಡಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಸಾರ್ವಜನಿಕರ ಸುರಕ್ಷತೆ, ರಸ್ತೆ ವಿಸ್ತರಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಸ್ತೆ ಬಂದ್ ಹಾಗೂ ತೆರವು ಕಾರ್ಯಾಚರಣೆ ಒಂದೇ ವೇಳೆ ನಡೆಯುತ್ತಿರುವ ಕಾರಣ ಕೆ.ಆರ್. ಮಾರ್ಕೆಟ್ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗಿದ್ದು, ಈ ಭಾಗದಲ್ಲಿ ಸಂಚರಿಸುವವರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

Continue Reading

ದೇಶ

Russia ದ ಭೀಕರ ಕ್ಷಿಪಣಿ ದಾಳಿ: ಕೀವ್‌ನಲ್ಲಿ 14 ಸಾವು, 22ಕ್ಕೂ ಹೆಚ್ಚು ಗಾಯ; ಉಕ್ರೇನ್‌ಗೆ ಮತ್ತೆ ರಕ್ತರಂಜಿತ ರಾತ್ರಿ

Published

on

ಕೀವ್: ರಷ್ಯಾ (Russia) ಬುಧವಾರ ಮುಂಜಾನೆ ಉಕ್ರೇನ್ (Ukraine) ರಾಜಧಾನಿ ಕೀವ್ (Kyiv) ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಭಾರೀ ದಾಳಿ ನಡೆಸಿದ್ದು, ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ವರ್ಷ ಕೀವ್ ಮೇಲೆ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಇದೂ ಒಂದಾಗಿದೆ.

ಮಧ್ಯರಾತ್ರಿಯ ನಂತರ ಆರಂಭವಾದ ಈ ದಾಳಿಯ ವೇಳೆ ಕೀವ್ ಸೇನಾ ಆಡಳಿತದ ಮುಖ್ಯಸ್ಥ ತಿಮೂರ್ ಟ್ಕಾಚೆಂಕೊ, ಶತ್ರು ಮತ್ತೆ ಕೀವ್ ಪ್ರದೇಶದ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ವೈಮಾನಿಕ ದಾಳಿ ಎಚ್ಚರಿಕೆ ಜಾರಿಯಲ್ಲಿದ್ದು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಗರ ಹಾಗೂ ಹೊರವಲಯಗಳನ್ನು ಗುರಿಯಾಗಿಸಿಕೊಂಡಿವೆ.

ಅಧಿಕಾರಿಗಳ ಪ್ರಕಾರ, ಬೊರಿಸ್ಪಿಲ್ ಜಿಲ್ಲೆಯಲ್ಲಿ 9 ಮಂದಿ, ಬುಚಾ ಜಿಲ್ಲೆಯಲ್ಲಿ 4 ಮಂದಿ ಹಾಗೂ ಫಾಸ್ಟಿವ್ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಹಲವಾರು ವಸತಿ ಕಟ್ಟಡಗಳು, ಗೋದಾಮುಗಳು ಮತ್ತು ಇತರೆ ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ರಕ್ಷಣಾ ಸಚಿವಾಲಯ, ಕೀವ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗಳು, ಡ್ರೋನ್ ಉತ್ಪಾದನೆ ಮತ್ತು ಪೂರೈಕೆ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ. ಅಲ್ಲದೆ ಒಡೆಸಾ (Odesa) ಸಮುದ್ರ ಬಂದರು ಸಮೀಪ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಮೂರು ಸರಕು ಹಡಗುಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.

ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಮಾತನಾಡಿ, ದಾಳಿಯಿಂದ ಹಲವಾರು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಜನರು ಸಿಲುಕಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಇತ್ತೀಚಿನ ವಾರಗಳಲ್ಲಿ ರಷ್ಯಾ ಕೀವ್ ಮೇಲೆ ದಾಳಿಗಳನ್ನು ತೀವ್ರಗೊಳಿಸಿದ್ದು, ಮತ್ತೊಂದೆಡೆ ಉಕ್ರೇನ್ ಕೂಡ ರಷ್ಯಾದ ವಿದ್ಯುತ್ ಸ್ಥಾವರಗಳು ಹಾಗೂ ಮೂಲಸೌಕರ್ಯಗಳ ಮೇಲೆ ಡ್ರೋನ್ ದಾಳಿಗಳನ್ನು ಹೆಚ್ಚಿಸಿದೆ. ಇತ್ತೀಚೆಗೆ ರಷ್ಯಾದ ವೈಲ್ಡ್‌ಬೆರೀಸ್ (Wildberries) ಗೋದಾಮುಗಳ ಮೇಲಿನ ಉಕ್ರೇನ್ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರು.

ಉಕ್ರೇನ್ ಸರ್ಕಾರ, ನಾಗರಿಕರ ಮೇಲೆ ನಡೆಯುತ್ತಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳನ್ನು ತಡೆಯಲು ಅಮೆರಿಕ ನಿರ್ಮಿತ ಪೇಟ್ರಿಯಾಟ್ (Patriot) ಕ್ಷಿಪಣಿ ತಡೆ ವ್ಯವಸ್ಥೆಗಳ ಹೆಚ್ಚುವರಿ ಪೂರೈಕೆಗೆ ಮಿತ್ರ ರಾಷ್ಟ್ರಗಳಿಗೆ ಮತ್ತೆ ಮನವಿ ಮಾಡಿದೆ.

ರಷ್ಯಾ ಮತ್ತು ಉಕ್ರೇನ್ ಎರಡೂ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿಲ್ಲ ಎಂದು ಹೇಳಿಕೊಂಡಿದ್ದರೂ, ಎರಡೂ ದೇಶಗಳ ಪರಸ್ಪರ ದಾಳಿಗಳಿಂದ ಸಾಮಾನ್ಯ ನಾಗರಿಕರ ಜೀವಹಾನಿ ಮುಂದುವರಿದಿದೆ.

Continue Reading

Trending