Connect with us

ದೇಶ

Pakistan ಸೇನೆಯಿಂದ ದೊಡ್ಡ ನಿರ್ಧಾರ: ಅಧಿಕೃತ ಸಂವಹನಕ್ಕೆ ಇನ್ನು WhatsApp ಬೇಡ

Published

on

ಇಸ್ಲಾಮಾಬಾದ್: ಸೈಬರ್ ಭದ್ರತೆ ಮತ್ತು ಹ್ಯಾಕಿಂಗ್ ಆತಂಕದ ನಡುವೆ ಪಾಕಿಸ್ತಾನ ಸೇನೆ (Pakistan Army) ಮಹತ್ವದ ನಿರ್ಧಾರ ಕೈಗೊಂಡಿದೆ. ಸೇನೆಯ ಅಧಿಕೃತ ಸಂವಹನಕ್ಕಾಗಿ ಬಳಸಲಾಗುತ್ತಿದ್ದ WhatsApp ಅನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ, ಇನ್ನು ಮುಂದೆ ಚೀನಾದ WeChat ಆ್ಯಪ್ ಬಳಸುವಂತೆ ಸೇನಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಸೇನೆಯ ಆಂತರಿಕ ಚರ್ಚೆಗಳು ಹಾಗೂ ಗೋಪ್ಯ ಮಾಹಿತಿಗಳು ಸೋರಿಕೆಯಾಗುವ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಸೇನಾ ಸಂವಹನವನ್ನು ಇನ್ನಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ ಅಧಿಕೃತ ಸಂದೇಶಗಳನ್ನು WeChat ಮೂಲಕವೇ ವಿನಿಮಯ ಮಾಡಿಕೊಳ್ಳಲು ಆದೇಶಿಸಲಾಗಿದೆ.

WeChat ಚೀನಾದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಮೆಸೇಜಿಂಗ್ ವೇದಿಕೆಯಾಗಿದ್ದು, ಸಂದೇಶ ಕಳುಹಿಸುವುದು, ಧ್ವನಿ ಹಾಗೂ ವಿಡಿಯೋ ಕರೆ, ಕಡತ ಹಂಚಿಕೆ ಮತ್ತು ಡಿಜಿಟಲ್ ಪಾವತಿ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಮತ್ತು ಪಾಕಿಸ್ತಾನ ನಡುವಿನ ರಕ್ಷಣಾ ಹಾಗೂ ಸೈಬರ್ ಸಹಕಾರ ವೃದ್ಧಿಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.

ಭಾರತವು 2020ರಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆ ಕಾರಣಗಳನ್ನು ಉಲ್ಲೇಖಿಸಿ WeChat ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ನಿಷೇಧಿಸಿತ್ತು. ಆದರೆ, ಪಾಕಿಸ್ತಾನ ಸೇನೆ ತನ್ನ ಆಂತರಿಕ ಅಧಿಕೃತ ಸಂವಹನಕ್ಕಾಗಿ ಇದೇ WeChat ಅನ್ನು ಆಯ್ಕೆ ಮಾಡಿಕೊಂಡಿರುವುದು ಗಮನ ಸೆಳೆದಿದೆ.

ರಕ್ಷಣಾ ತಜ್ಞರ ಅಭಿಪ್ರಾಯದಂತೆ, ಈ ನಿರ್ಧಾರವು ಕೇವಲ ಮೆಸೇಜಿಂಗ್ ಆ್ಯಪ್ ಬದಲಾವಣೆಯಷ್ಟೇ ಅಲ್ಲ, ಚೀನಾ–ಪಾಕಿಸ್ತಾನ ನಡುವಿನ ರಕ್ಷಣಾ ಮತ್ತು ತಂತ್ರಜ್ಞಾನ ಸಹಕಾರ ಮತ್ತಷ್ಟು ಗಟ್ಟಿಯಾಗುತ್ತಿರುವುದರ ಸೂಚಕವಾಗಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜ್ಯ

Cabinet Expansion ವಿವಾದಕ್ಕೆ ಹೊಸ ತಿರುವು; ವೈರಲ್ ಆಡಿಯೋ ರಾಜಕೀಯದಲ್ಲಿ ಸಂಚಲನ

Published

on

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್‌ರಚನೆ (Cabinet Expansion) ಬಳಿಕ ಕಾಂಗ್ರೆಸ್ (Congress) ಪಕ್ಷದಲ್ಲಿ ಅಸಮಾಧಾನ ತಣ್ಣಗಾಗಿಲ್ಲ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ ಸಂಭಾಷಣೆ ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ಆಡಿಯೋದಲ್ಲಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ (RB Timmapur) ಹಾಗೂ ಎಸ್. ಜಿ. ನಂಜಯ್ಯನಮಠ (SG Nanjayyanamata) ಅವರ ಧ್ವನಿಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಸತ್ಯಾಸತ್ಯತೆಯನ್ನು ಯಾವುದೇ ಅಧಿಕೃತ ಮೂಲ ದೃಢಪಡಿಸಿಲ್ಲ.

ವೈರಲ್ ಆಡಿಯೋದಲ್ಲಿ ಸಚಿವ ಸ್ಥಾನ ಹಂಚಿಕೆ, ಹೈಕಮಾಂಡ್ ನಿರ್ಧಾರಗಳು, ಹಿರಿಯ ನಾಯಕರಿಗೆ ಅವಕಾಶ ಸಿಗದಿರುವುದು ಹಾಗೂ ಕೆಲ ಸಚಿವರ ಆಯ್ಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿರುವ ಮಾತುಗಳು ಕೇಳಿಬಂದಿವೆ. ಕೆಲವು ನಾಯಕರ ಆಯ್ಕೆ ಕುರಿತು ಪ್ರಶ್ನೆಗಳು ಎತ್ತಲಾಗಿದ್ದು, ಪ್ರಾಮಾಣಿಕ ನಾಯಕರಿಗೆ ಅವಕಾಶ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವುದಾಗಿ ಆಡಿಯೋದಲ್ಲಿ ಕೇಳಿಬರುತ್ತದೆ.

ಸಂಭಾಷಣೆಯಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಅವರು ಯಾವುದೇ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರೂ ಅವಕಾಶ ನೀಡಲಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ಇದೇ ವೇಳೆ ಕೆಲವು ನಾಯಕರ ವಿರುದ್ಧದ ಪ್ರಕರಣಗಳು ಮತ್ತು ಸಚಿವ ಸ್ಥಾನ ಹಂಚಿಕೆ ಕುರಿತು ಆರೋಪಗಳೂ ಕೇಳಿಬಂದಿವೆ.

ಆಡಿಯೋದಲ್ಲಿ ಮುಂದಿನ ದಿನಗಳಲ್ಲಿ ಕೆಲ ಶಾಸಕರು ಒಟ್ಟಾಗಿ ಪತ್ರ ನೀಡುವ ಬಗ್ಗೆ ಹಾಗೂ ಪಕ್ಷದ ನಾಯಕತ್ವದೊಂದಿಗೆ ಚರ್ಚೆ ನಡೆಸುವ ಕುರಿತು ಮಾತುಕತೆ ನಡೆದಿರುವುದೂ ಕೇಳಿಬರುತ್ತದೆ. ಈ ಬೆಳವಣಿಗೆ ಕಾಂಗ್ರೆಸ್‌ನ ಆಂತರಿಕ ರಾಜಕೀಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆದರೆ, ಈ ವೈರಲ್ ಆಡಿಯೋದ ಧ್ವನಿಗಳು ಸಂಬಂಧಿತ ನಾಯಕರದ್ದೇ ಎಂಬುದನ್ನು ಕಾಂಗ್ರೆಸ್ ಪಕ್ಷ ಅಥವಾ ಆ ನಾಯಕರಲ್ಲಿ ಯಾರೂ ಅಧಿಕೃತವಾಗಿ ದೃಢಪಡಿಸಿಲ್ಲ. ಹೀಗಾಗಿ ಈ ಆಡಿಯೋದ ವಿಷಯವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

ಸಚಿವ ಸಂಪುಟ ಪುನರ್‌ರಚನೆಯ ನಂತರ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅಸಮಾಧಾನ ವ್ಯಕ್ತವಾಗಿರುವ ನಡುವೆ, ಈ ವೈರಲ್ ಆಡಿಯೋ ರಾಜಕೀಯ ಚರ್ಚೆಗೆ ಮತ್ತಷ್ಟು ಇಂಧನ ನೀಡಿದೆ. ಈ ಕುರಿತು ಕಾಂಗ್ರೆಸ್ ನಾಯಕತ್ವ ಯಾವುದೇ ಅಧಿಕೃತ ಸ್ಪಷ್ಟನೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Continue Reading

ದೇಶ

RBI ನೀತಿಯಿಂದ ಬ್ಯಾಂಕಿಂಗ್ ವಲಯಕ್ಕೆ ಪರಿಣಾಮ? ಫಿಚ್ ವರದಿಯಲ್ಲಿ ಪ್ರಮುಖ ಮಾಹಿತಿ

Published

on

ನವದೆಹಲಿ: ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಜಾರಿಗೆ ತಂದಿರುವ ಲಿಕ್ವಿಡಿಟಿ (ದ್ರವ್ಯತೆ) ನಿಯಂತ್ರಣ ಕ್ರಮಗಳು ಬ್ಯಾಂಕುಗಳ ಲಾಭದಾಯಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ ರೇಟಿಂಗ್ಸ್ (Fitch Ratings) ಎಚ್ಚರಿಕೆ ನೀಡಿದೆ.

ಫಿಚ್ ವರದಿ ಪ್ರಕಾರ, 2026-27ನೇ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ವಲಯದ ಲಾಭದಾಯಕತೆ (ROA) ಈಗಿನ ಅಂದಾಜಿನ ಶೇ.3.1ಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ. ಬ್ಯಾಂಕುಗಳ ಲಾಭದಲ್ಲಿ ಸುಮಾರು 20ರಿಂದ 30 ಬೇಸಿಸ್ ಪಾಯಿಂಟ್‌ಗಳ (BPS) ಇಳಿಕೆ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿನ ಭೌರಾಜಕೀಯ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ನಿಧಿ ವೆಚ್ಚ ಬ್ಯಾಂಕುಗಳ ಕಾರ್ಯಾಚರಣಾ ಲಾಭದ ಮೇಲೆ ಒತ್ತಡ ತರಲಿದ್ದು, ಸಾಲ ಮತ್ತು ಠೇವಣಿ ನಡುವಿನ ಅಸಮತೋಲನದಿಂದ ಬ್ಯಾಂಕುಗಳು ಹೆಚ್ಚಿನ ಠೇವಣಿ ಸಂಗ್ರಹಕ್ಕೆ ಒತ್ತು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.

ಆರ್‌ಬಿಐ 2024ರ ಡಿಸೆಂಬರ್‌ನಿಂದ ಇದುವರೆಗೆ ಒಟ್ಟು 125 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರವನ್ನು ಕಡಿತಗೊಳಿಸಿದ್ದರೂ, ಅದರ ಲಾಭ ಸಂಪೂರ್ಣವಾಗಿ ಠೇವಣಿದಾರರಿಗೆ ತಲುಪಿಲ್ಲ. ಜನವರಿ ವೇಳೆಗೆ ಕೇವಲ 44 ಬೇಸಿಸ್ ಪಾಯಿಂಟ್‌ಗಳಷ್ಟು ಮಾತ್ರ ಠೇವಣಿ ಬಡ್ಡಿದರದಲ್ಲಿ ಇಳಿಕೆ ಕಂಡುಬಂದಿದೆ.

ಇನ್ನೊಂದೆಡೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲಿಕ್ವಿಡಿಟಿ ಪ್ರಮಾಣವೂ ಕುಸಿಯುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕಿಂಗ್ ವ್ಯವಸ್ಥೆಯ ಹೆಚ್ಚುವರಿ ಲಿಕ್ವಿಡಿಟಿ ಒಟ್ಟು ಠೇವಣಿಗಳ ಶೇ.0.5ಕ್ಕೆ ಇಳಿದಿದ್ದು, ಫೆಬ್ರವರಿಯಲ್ಲಿ ಅದು ಶೇ.0.8ರಷ್ಟಿತ್ತು. ಇದೇ ಅವಧಿಯಲ್ಲಿ ರೂಪಾಯಿ ಮೌಲ್ಯವು ಸುಮಾರು 4.5% ಕುಸಿದಿರುವುದರಿಂದ ಸ್ಥಳೀಯ ಕರೆನ್ಸಿ ಲಿಕ್ವಿಡಿಟಿ ಮೇಲೂ ಒತ್ತಡ ಹೆಚ್ಚಾಗಿದೆ.

ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್ ಠೇವಣಿಗಳ ಮಾದರಿಯಲ್ಲೂ ಮಹತ್ವದ ಬದಲಾವಣೆ ಕಂಡುಬಂದಿದೆ. ಉಳಿತಾಯ (Savings) ಠೇವಣಿಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ದೀರ್ಘಾವಧಿಯ ಸಾವಧಿ ಠೇವಣಿಗಳ (Fixed Deposits) ಪ್ರಮಾಣ ಹೆಚ್ಚುತ್ತಿದೆ.

ಮಾರ್ಚ್ 2026ರ ವೇಳೆಗೆ ಒಟ್ಟು ಬ್ಯಾಂಕ್ ಠೇವಣಿಗಳಲ್ಲಿ ಕೌಟುಂಬಿಕ ವಲಯದ ಪಾಲು 59.3% ಆಗಿದ್ದು, ಒಂದು ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಸಾವಧಿ ಠೇವಣಿಗಳ ಪಾಲು 46.3% ತಲುಪಿದೆ.

ಇದರ ನಡುವೆ ಬ್ಯಾಂಕ್ ಸಾಲ ವಿತರಣೆಯಲ್ಲೂ ಏರಿಕೆ ದಾಖಲಾಗಿದೆ. 2025-26ರಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಸಾಲ ಬೆಳವಣಿಗೆ 14.1% ಆಗಿದ್ದು, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಸಾಲ ವಿತರಣೆಯಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ.

Continue Reading

ರಾಜ್ಯ

‘ಪ್ರಾರ್ಥನೆ ಮಾಡಿ, ತಾಯಿ ಒಳ್ಳೆಯದು ಮಾಡ್ತಾಳೆ’; ದರ್ಶನ್ ಫ್ಯಾನ್ಸ್‌ಗೆ DK Shivakumar ಸಂದೇಶ

Published

on

ರಾಮನಗರ: ರಾಮನಗರದ ಕರಗ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಭಾಷಣ ಆರಂಭಿಸಲು ಮುಂದಾದ ವೇಳೆ ನಟ ದರ್ಶನ್ (Darshan) ಅಭಿಮಾನಿಗಳು ನಿರಂತರವಾಗಿ “ಡಿ ಬಾಸ್… ಡಿ ಬಾಸ್…” ಎಂದು ಘೋಷಣೆ ಕೂಗಿದ ಘಟನೆ ಗಮನ ಸೆಳೆಯಿತು. ಅಭಿಮಾನಿಗಳ ಘೋಷಣೆಯಿಂದ ಕೆಲಕಾಲ ಮುಖ್ಯಮಂತ್ರಿ ಅವರ ಭಾಷಣಕ್ಕೆ ಅಡಚಣೆ ಉಂಟಾಯಿತು.

ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳು ಜೈಕಾರ ಕೂಗಲು ಆರಂಭಿಸಿದರು. ಘೋಷಣೆಗಳು ನಿರಂತರವಾಗಿ ಮುಂದುವರಿದ ಕಾರಣ ಮುಖ್ಯಮಂತ್ರಿ ಕೆಲ ಹೊತ್ತು ಭಾಷಣವನ್ನು ನಿಲ್ಲಿಸಿ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಯೋಜಕರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಅಭಿಮಾನಿಗಳಿಗೆ ಶಾಂತವಾಗುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ವೇಳೆ ಡಿ.ಕೆ. ಶಿವಕುಮಾರ್ ಹಲವು ಬಾರಿ ಕುರ್ಚಿಯಿಂದ ಎದ್ದು ಮತ್ತೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಯಿತು. ಇದೇ ವೇಳೆ ಪಟಾಕಿ ಸಿಡಿಸದಂತೆ ಸಹ ಅಭಿಮಾನಿಗಳಿಗೆ ಮನವಿ ಮಾಡಲಾಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮುಖ್ಯಮಂತ್ರಿ ತಮ್ಮ ಭಾಷಣವನ್ನು ಮುಂದುವರಿಸಿದರು.

ಈ ವೇಳೆ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸಿಎಂ, “ಇದು ಪವಿತ್ರವಾದ ಸಭೆ. ನಿಮ್ಮ ಅಭಿಮಾನಕ್ಕೆ ನಾನು ಗೌರವ ಕೊಡುತ್ತೇನೆ. ಆದರೆ ಕೋರ್ಟ್ ವಿಚಾರವನ್ನು ತಂದು ನನ್ನ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಡಿ. ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ನಾನು ಇಲ್ಲಿ ನಿಮ್ಮ ಸೇವಕನಾಗಿ ಬಂದಿದ್ದೇನೆ. ನಾನು ಮುಖ್ಯಮಂತ್ರಿ ಆಗಿರಬಹುದು, ಆದರೆ ರಾಮನಗರ ಜಿಲ್ಲೆಯ ಮಗ. ಈ ನಿಮ್ಮ ಮಗನನ್ನು ನೀವು ಕಾಪಾಡಿಕೊಳ್ಳಬೇಕು” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ಎಲ್ಲವೂ ಕಾನೂನು ಚೌಕಟ್ಟಿನಲ್ಲೇ ನಡೆಯಬೇಕು. ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ ನೀವು ಸಹ ದೇವರಲ್ಲಿ ಪ್ರಾರ್ಥನೆ ಮಾಡಿ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ. ಚಾಮುಂಡೇಶ್ವರಿ ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

ಸಿಎಂ ಅವರ ಈ ಹೇಳಿಕೆ ಹಾಗೂ ದರ್ಶನ್ ಅಭಿಮಾನಿಗಳ ಘೋಷಣೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Continue Reading

Trending