Connect with us

ಬೆಂಗಳೂರು

“ಹಿಂದೂಗಳ ತಂಟೆಗೆ ಹೋದ್ರೆ ಹುಷಾರ್!”: ಗಣೇಶೋತ್ಸವ ವಿಚಾರಕ್ಕೆ R Ashok ಗರಂ, ಸರ್ಕಾರಕ್ಕೆ ನೇರ ಸವಾಲು

Published

on

ಬೆಂಗಳೂರು: ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ತಿ.ನರಸೀಪುರದಲ್ಲಿ ಪೊಲೀಸರು ನೀಡಿರುವ ಸೂಚನೆಗಳ ಕುರಿತು ವಿಧಾನಸಭೆ ವಿಪಕ್ಷ ನಾಯಕ R Ashok ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹಿಂದೂಗಳ ತಂಟೆಗೆ ಹೋದರೆ ಹುಷಾರ್. ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರುತ್ತೇನೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಮ್ಮ ನಿವಾಸದ ಬಳಿ ಮಾತನಾಡಿದ ಆರ್.ಅಶೋಕ್, ತಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನೆಮ್ಮದಿಯಿಂದ ಗಣೇಶೋತ್ಸವ ಆಚರಿಸಲೂ ಬಿಡುತ್ತಿಲ್ಲ ಎಂದು ಆರೋಪಿಸಿದ ಅವರು, ರಾಜ್ಯಾದ್ಯಂತ ಗಣೇಶ ಹಬ್ಬದ ಆಚರಣೆಗೆ ಸರ್ಕಾರದಿಂದ ಕಿರುಕುಳ ನಡೆಯುತ್ತಿದೆ ಎಂದು ದೂರಿದರು.

ಗಣೇಶ ಹಬ್ಬವು ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರೂ ಶ್ರದ್ಧಾಭಕ್ತಿಯಿಂದ ಆಚರಿಸುವ ಪವಿತ್ರ ಹಬ್ಬ ಹಾಗೂ ಐಕ್ಯತೆಯ ಹಬ್ಬ ಎಂದು ಅವರು ಹೇಳಿದರು. ತಿ.ನರಸೀಪುರದಲ್ಲಿ ಇನ್ಸ್‌ಪೆಕ್ಟರ್ ಧನಂಜಯ್ ದುರಹಂಕಾರದಿಂದ ಮಾತನಾಡಿದ್ದಾರೆ ಎಂದು ಆರೋಪಿಸಿದ ಆರ್.ಅಶೋಕ್, ಮಸೀದಿ ಮುಂದೆ ಮೆರವಣಿಗೆ ನಡೆಸಬಾರದು, ಪಟಾಕಿ ಸಿಡಿಸಬಾರದು ಎಂದು ಹೇಳಿರುವುದನ್ನು ಪ್ರಶ್ನಿಸಿದರು.

“ನೀವೇನು ರೌಡಿನಾ? ಗ್ರಹಚಾರ ಬಿಡಿಸೋಕೆ ಬಂದಿದ್ದೀರಾ? ಮೆರವಣಿಗೆ ಮಾಡುವವರು ರೌಡಿಗಳಾ?” ಎಂದು ಆರ್.ಅಶೋಕ್ ಪ್ರಶ್ನಿಸಿದರು.

“ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ”

ಇನ್ಸ್‌ಪೆಕ್ಟರ್ ಧನಂಜಯ್ ಈ ರೀತಿ ಮಾತನಾಡಿದ್ದರೆ ಅದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಆರ್.ಅಶೋಕ್ ಆರೋಪಿಸಿದರು. ಇದಕ್ಕೆ ಸರ್ಕಾರದ ಕುಮ್ಮಕ್ಕು ಇರಬಹುದು ಎಂದ ಅವರು, ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಗಳಿಗೆ ತೆರಳಿ ಕುಂಕುಮ ಧರಿಸಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದರೆ ಇದೇ ಹಿಂದೂಗಳ ಕಾಳಜಿಯೇ ಎಂದು ಆರ್.ಅಶೋಕ್ ಪ್ರಶ್ನಿಸಿದರು.

“ಚುನಾವಣೆ ಹಿಂದೂ, ಕಲೆಕ್ಷನ್ ಹಿಂದೂ. ಜನರಿಗೆ ಏನು ಸಂದೇಶ ಕೊಡಲು ಹೊರಟಿದ್ದೀರಿ?” ಎಂದು ಅವರು ಕಿಡಿಕಾರಿದರು.

ಗಣೇಶ ಹಬ್ಬದ ಸಂದರ್ಭದಲ್ಲಿ ಪೊಲೀಸರು ಭಕ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ಭಕ್ತಾದಿಗಳಿಗೆ ಬೆದರಿಕೆ ಹಾಕುವುದೇ ಸರ್ಕಾರದ ಕೆಲಸವೇ ಎಂದು ಅವರು ಪ್ರಶ್ನಿಸಿದರು.

“ಇನ್ಸ್‌ಪೆಕ್ಟರ್‌ನ್ನು ಅಮಾನತು ಮಾಡಿ”

ಗಣೇಶೋತ್ಸವಕ್ಕೆ ತೊಂದರೆ ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಆರ್.ಅಶೋಕ್, ಡಿ.ಕೆ.ಶಿವಕುಮಾರ್ ನಿಜವಾಗಿಯೂ ಹಿಂದೂಗಳ ಬಗ್ಗೆ ಕಾಳಜಿ ಹೊಂದಿದ್ದರೆ ತಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ಅಮಾನತು ಮಾಡಲಿ ಎಂದು ಆಗ್ರಹಿಸಿದರು.

“ಡಿಕೆಶಿ ತೋರಿಸಲಿ ತಾವು ನಿಜ ಹಿಂದೂನಾ, ಕಪಟ ಹಿಂದೂನಾ” ಎಂದು ಸವಾಲು ಹಾಕಿದರು.

ಪಾಕ್ ಪರ ಘೋಷಣೆ ಮಾಡುವವರಿಗೆ ಬಿರಿಯಾನಿ ನೀಡಲಾಗುತ್ತದೆ, ಆದರೆ ಗಣೇಶ ಹಬ್ಬ ಆಚರಿಸುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು, ಇದನ್ನು “ಗೂಂಡಾ ಸರ್ಕಾರ, ತಾಲಿಬಾನಿ ಸರ್ಕಾರ” ಎಂದು ಟೀಕಿಸಿದರು.

ಮೈಕ್ ಬಳಕೆ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆರ್.ಅಶೋಕ್, ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಧ್ವನಿ ಮಿತಿಯನ್ನು ಎಲ್ಲ ಧಾರ್ಮಿಕ ಸ್ಥಳಗಳಲ್ಲೂ ಸಮಾನವಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.

“ಮನೆಗಳಲ್ಲಿ ಗಣಪತಿ ಕೂರಿಸಲೂ ಅನುಮತಿ ಬೇಕಾಗುವ ಸ್ಥಿತಿ ಬರಬಹುದು”

ಹಿಂದೂಗಳು ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದ ಆರ್.ಅಶೋಕ್, ಈಗ ಸುಮ್ಮನಿದ್ದರೆ ಮುಂದಿನ ದಿನಗಳಲ್ಲಿ ಗಲ್ಲಿಗಲ್ಲಿಯಲ್ಲೂ ಪೊಲೀಸರು ವಾರ್ನಿಂಗ್ ನೀಡುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ತಾವು ಈ ವಿಚಾರವನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಹೇಳಿದ ಅವರು, ಕೂಡಲೇ ತಿ.ನರಸೀಪುರಕ್ಕೆ ತೆರಳಿ ನ್ಯಾಯಕ್ಕಾಗಿ ಹೋರಾಡುವುದಾಗಿ ಘೋಷಿಸಿದರು.

ಬ್ರಿಟಿಷರ ಆಡಳಿತದ ಅವಧಿಯಲ್ಲೂ ಗಣೇಶ ಹಬ್ಬವನ್ನು ಆರಾಮವಾಗಿ ಆಚರಿಸಲಾಗುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಬ್ರಿಟಿಷರಿಗಿಂತಲೂ ಕೆಟ್ಟ ಪರಿಸ್ಥಿತಿ ನಿರ್ಮಿಸಿದೆ ಎಂದು ಆರ್.ಅಶೋಕ್ ಆರೋಪಿಸಿದರು.

“ದೂರು ಕೊಟ್ಟಿರುವವರು ನಿಮ್ಮ ಸುತ್ತಮುತ್ತಲೇ ಇರಬೇಕು”

ಇಡಿ ದೂರು ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, “ಯಾರು ದಲಿತ ವಿರೋಧಿ ಎಂಬುದು ಈಗ ಗೊತ್ತಾಯ್ತಲ್ಲ” ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಅವರು ಚಿನ್ನದ ಗಣಿ ಪಡೆದಿದ್ದಾರೆ ಹಾಗೂ ಅದರಲ್ಲಿ ಪಾಲುದಾರಿಕೆ ಇದೆ ಎಂಬ ವಿಚಾರ ಬೆಳಗಾವಿಯವರಿಗೆ ಗೊತ್ತಿದೆ. ಬೆಂಗಳೂರಿನಲ್ಲಿರುವವರಿಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ದೂರು ನೀಡಿರುವವರು ಸತೀಶ್ ಜಾರಕಿಹೊಳಿ ಅವರ ಸುತ್ತಮುತ್ತಲೇ ಇರಬೇಕು. ಮೊದಲು ಬೆಳಗಾವಿಯಲ್ಲಿ ಹುಡುಕಲಿ, ನಂತರ ಬೆಂಗಳೂರಿನಲ್ಲಿ ಹುಡುಕಲಿ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.

ಯಾರು ಬ್ರೇಕಿಂಗ್ ಸುದ್ದಿ ನೀಡಿದ್ದಾರೆ, ಕ್ಷಣಕ್ಷಣದ ಮಾಹಿತಿ ನೀಡಿದ್ದಾರೆ ಎಂಬುದನ್ನೂ ಪತ್ತೆಹಚ್ಚಬೇಕು ಎಂದು ಅವರು ಹೇಳಿದರು. ಜಾತಿಗೂ ಭ್ರಷ್ಟಾಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರ್.ಅಶೋಕ್ ಅಭಿಪ್ರಾಯಪಟ್ಟರು.

J S Vasudev is a journalist and writer with 15 years of experience in writing and journalism. He founded Hosasuddi.in in 2023 with a vision to deliver credible and timely Kannada news. With a strong passion for journalism, he focuses on presenting news in a clear, simple and reader-friendly manner. His work covers current affairs, Karnataka news, national developments, business, technology and social issues. He believes in independent journalism and responsible reporting that puts readers first. His guiding motto is “Write on Your Own,” reflecting his commitment to original and independent content. Through Hosasuddi.in, he continues to contribute to Kannada digital journalism with dedication and integrity.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜ್ಯ

ಬಿಜೆಪಿ ನಾಯಕರ ವಿರುದ್ಧ CM D K Shiv Kumar ಗಂಭೀರ ಆರೋಪ; ಆರ್.ಅಶೋಕ್, ವಿಜಯೇಂದ್ರ ಬಗ್ಗೆ ಹೇಳಿದ್ದೇನು?

Published

on

ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ CM D K Shiv Kumar ತೀವ್ರ ವಾಗ್ದಾಳಿ ನಡೆಸಿದ್ದು, ಶ್ರೀರಾಮನ ಹೆಸರಿನಲ್ಲಿ ಬಂದ ಹಣದ ವಿಚಾರವನ್ನು ಪ್ರಸ್ತಾಪಿಸಿ ಗಂಭೀರ ಆರೋಪ ಮಾಡಿದ್ದಾರೆ. “ನಿಮ್ಮ ಬೆವರೂ ಉಪ್ಪು, ನನ್ನ ಬೆವರೂ ಉಪ್ಪು, ಬಿಜೆಪಿ ನಾಯಕರ ರಕ್ತವೇನಾದರೂ ಪ್ರತ್ಯೇಕವಾಗಿದೆಯಾ?” ಎಂದು ಅವರು ಪ್ರಶ್ನಿಸಿದ್ದಾರೆ.

ಎಲ್ಲ ಜಾತಿಗಳನ್ನು ತನ್ನೊಳಗೆ ಒಳಗೊಂಡಿರುವುದೇ ನಮ್ಮ ಧರ್ಮ ಎಂದು ಹೇಳಿದ ಡಿ.ಕೆ. ಶಿವಕುಮಾರ್, ಬಿಜೆಪಿ ನಾಯಕರು ಅಲ್ಪಸಂಖ್ಯಾತರ ವಿರುದ್ಧ ನಿರಂತರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

“ಅಲ್ಪಸಂಖ್ಯಾತರಿಲ್ಲದೆ ಇವರ ಗಾಡಿ ಓಡುತ್ತಾ?”

ಬಿಜೆಪಿ ನಾಯಕರು ಅಲ್ಪಸಂಖ್ಯಾತರನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್, ಅಷ್ಟೊಂದು ವಿರೋಧವಿದ್ದರೆ ಕೇಂದ್ರ ಸರ್ಕಾರದ ಮೈನಾರಿಟಿ ಇಲಾಖೆಯನ್ನು ಮುಚ್ಚಿಬಿಡಲಿ ಎಂದು ಸವಾಲು ಹಾಕಿದರು.

ಅಲ್ಪಸಂಖ್ಯಾತರನ್ನು “ಪಂಕ್ಚರ್ ಹಾಕೋರು” ಎಂದು ಕೀಳಾಗಿ ಮಾತನಾಡುತ್ತಾರೆ. ಆದರೆ ಅವರು ಇಲ್ಲದಿದ್ದರೆ ಇವರ ಗಾಡಿ ಓಡುತ್ತದೆಯೇ ಎಂದು ಪ್ರಶ್ನಿಸಿದ ಅವರು, ಸಮಾಜದ ಎಲ್ಲ ವರ್ಗಗಳನ್ನೂ ಒಳಗೊಂಡು ಮುನ್ನಡೆಯುವುದೇ ಅಗತ್ಯ ಎಂದು ಹೇಳಿದರು.

ಆರ್.ಅಶೋಕ್, ವಿಜಯೇಂದ್ರ ಬಗ್ಗೆ ಡಿಕೆಶಿ ಲೇವಡಿ

ಬಿಜೆಪಿಯಲ್ಲಿ ಇದೀಗ ದೊಡ್ಡ ಮಟ್ಟದ ಸ್ಪರ್ಧೆ ನಡೆಯುತ್ತಿದೆ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಆರ್‌ಎಸ್‌ಎಸ್ ಅಥವಾ ಬಿಜೆಪಿ ನಾಯಕರು ಆರ್.ಅಶೋಕ್ ಅವರನ್ನು ಕೆಳಗಿಳಿಸಬೇಕಾ, ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕಾ ಅಥವಾ ದೆಹಲಿಯಿಂದ ಯಾರನ್ನಾದರೂ ಕರೆತಂದು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕಾ ಎಂಬ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಬಿಜೆಪಿಯೊಳಗಿನ ನಾಯಕತ್ವದ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳನ್ನೇ ಗುರಿಯಾಗಿಸಿಕೊಂಡು ಡಿ.ಕೆ. ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ.

ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ

ಜನರು ಅಧಿಕಾರ ನೀಡಿದಾಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಏನನ್ನೂ ಮಾಡಲಿಲ್ಲ ಎಂದು CM D K Shiv Kumar ಆರೋಪಿಸಿದರು.

ದೆಹಲಿಯಲ್ಲಿ ಬಾಂಬ್ ಬೀಳುತ್ತದೆ, ದೇಶವೇ ಅಲ್ಲೋಲ-ಕಲ್ಲೋಲವಾಗುತ್ತದೆ ಎಂದು ಹೇಳುತ್ತಾರಲ್ಲ, ಇದೀಗ ಅವರ ಸ್ಥಿತಿಯೇ ಅಲ್ಲೋಲ-ಕಲ್ಲೋಲವಾಗಿದೆ ಎಂದು ಅವರು ಟೀಕಿಸಿದರು.

“ಪೆನ್‌ಡ್ರೈವ್ ಬಗ್ಗೆ ಕೇಳಬೇಡಿ”

ಪೆನ್‌ಡ್ರೈವ್ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಪೆನ್‌ಡ್ರೈವ್ ಸುದ್ದಿ ಬಗ್ಗೆ ಕೇಳಬೇಡಿ” ಎಂದು ಹೇಳಿದರು.

ಯಾರ ಯಾರ ಕುಟುಂಬಕ್ಕೆ ಏನೇನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ ಅವರು, ಈ ವಿಚಾರದಲ್ಲಿ ಮತ್ತಷ್ಟು ರಾಜಕೀಯ ಚರ್ಚೆಗೆ ಕಾರಣವಾಗುವ ರೀತಿಯಲ್ಲಿ ಪ್ರತಿಕ್ರಿಯಿಸಿದರು.

“ಇಡಿ ಬಿಡಿ, ಜೈಲಿಗೆ ಹಾಕಿ, ನಾವು ಹೆದರಲ್ಲ”

ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯನ್ನು ಬಳಸಿದರೂ ತಾವು ಹೆದರುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

“ನಮ್ಮ ಎದುರಿಗೆ ಇಡಿ ಬಿಡಿ, ಬೇರೆ ಯಾವುದೇ ತನಿಖಾ ಸಂಸ್ಥೆ ಬಿಡಿ, ಕೊನೆಗೆ ಜೈಲಿಗಾದರೂ ಹಾಕಿ, ನಾವು ಯಾವುದಕ್ಕೂ ಹೆದರುವುದಿಲ್ಲ” ಎಂದು ಅವರು ಗುಡುಗಿದರು.

ಬಿಜೆಪಿ ವಿರುದ್ಧ ಡಿ.ಕೆ. ಶಿವಕುಮಾರ್ ಮಾಡಿರುವ ಈ ವಾಗ್ದಾಳಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

Continue Reading

ಬೆಂಗಳೂರು

CM D K Shiv Kumar 100 ದಿನಗಳ ಸಂವಾದ: ‘ಗಟ್ಟಿ ತೀರ್ಮಾನ ಮಾಡದಿದ್ದರೆ ನನ್ನನ್ನು ಕಾಲಿ ಡಬ್ಬಿ ಅಂತಾರೆ’!

Published

on

ಬೆಂಗಳೂರು: CM D K Shiv Kumar ಅವರು ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುದ್ದಿಮಾಧ್ಯಮಗಳ ಸಂಪಾದಕರೊಂದಿಗೆ ಸಂವಾದ ನಡೆಸಿ, ತಮ್ಮ ಸರ್ಕಾರದ ನೂರು ದಿನಗಳ ಹೆಜ್ಜೆಗುರುತು, ಮುಂದಿನ ಯೋಜನೆಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಆರೋಗ್ಯ ಸಹಕರಿಸಿದರೆ ಇನ್ನೂ 15 ವರ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಪರಿಸ್ಥಿತಿ ಅರಿತೇ ಯೋಜನೆಗಳ ಘೋಷಣೆ

ಕಳೆದ ನೂರು ದಿನಗಳಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಅನುಷ್ಠಾನ ಮಾಡಲು ಸಾಧ್ಯವಿರುವ ಯೋಜನೆಗಳನ್ನು ಮಾತ್ರ ಘೋಷಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನುಡಿದಂತೆ ನಡೆಯಬೇಕು ಎಂಬ ಅರಿವು ತಮ್ಮಲ್ಲಿದೆ. ಇಲ್ಲವಾದರೆ ಎಲ್ಲರ ಎದುರು ನಗೆಪಾಟಲಿಗೀಡಾಗಬೇಕಾಗುತ್ತದೆ. ಹೀಗಾಗಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಒಸಿ, ಸಿಸಿ ವಿಚಾರದಲ್ಲಿಯೂ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಸತಿ ಕಟ್ಟಡಗಳ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ವಾಣಿಜ್ಯ ಕಟ್ಟಡಗಳ ವಿಚಾರವನ್ನು ಪರಿಗಣಿಸಿದರೆ ಬೇರೆ ರೀತಿಯ ನಿರ್ಧಾರವಾಗುತ್ತದೆ. ಭೂ ಗ್ಯಾರಂಟಿಯನ್ನೂ ನೀಡಲಾಗಿದೆ ಎಂದು ಹೇಳಿದ್ದಾರೆ.

ಹೊರರಾಜ್ಯದವರಿಗೆ ಉಚಿತ ಸೌಲಭ್ಯ ಯಾಕೆ?

ಶಕ್ತಿ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್‌ ನೀಡಲು ತೀರ್ಮಾನಿಸಲಾಗಿದ್ದು, ಕಾರ್ಡ್‌ ಸ್ಕ್ಯಾನ್‌ ಮಾಡಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 14 ಲಕ್ಷದಷ್ಟು ಹೊರರಾಜ್ಯದವರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಹಾಗಿದ್ದಾಗ ಹೊರರಾಜ್ಯದವರಿಗೆ ಏಕೆ ಉಚಿತ ಅವಕಾಶ ನೀಡಬೇಕು ಎಂಬ ಪ್ರಶ್ನೆ ಇದೆ. ಇದೇ ರೀತಿ ಹೊರರಾಜ್ಯದವರಿಗೆ ಉಚಿತ ವಿದ್ಯುತ್‌ ನೀಡುವ ವಿಚಾರದಲ್ಲಿಯೂ ಪರಿಷ್ಕರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸಣ್ಣಪುಟ್ಟ ವಿಚಾರಗಳಲ್ಲಿಯೂ ಗಟ್ಟಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲವಾದರೆ ತಮ್ಮನ್ನು ‘ಕಾಲಿ ಡಬ್ಬ’ ಎಂದು ಕರೆಯುತ್ತಾರೆ ಎಂಬ ಅರಿವು ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಟನಲ್‌ ರಸ್ತೆ ಯಾರಿಗಾಗಿ?

ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ನೀಡಲು ಉದ್ದೇಶಿಸಿರುವ ಟನಲ್‌ ರಸ್ತೆ ಯೋಜನೆಗೆ ಹಲವು ಅಡೆತಡೆಗಳಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪಾರ್ಕ್‌ನ ಒಂದು ಮೂಲೆಯ ಜಾಗವನ್ನು ಬಳಸಿಕೊಳ್ಳುವುದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. ಸಣ್ಣ ಬಂಡೆಯೊಂದನ್ನು ತೆಗೆಯಬೇಕಾದ ಪರಿಸ್ಥಿತಿಯನ್ನೂ ದೊಡ್ಡ ವಿಚಾರವನ್ನಾಗಿ ಮಾಡಲಾಗುತ್ತಿದೆ. ಬೇರೆ ಕಟ್ಟಡಗಳನ್ನು ಒಡೆಯಲು ಸಾಧ್ಯವಿಲ್ಲ. ಹಾಗಾದರೆ ಈ ಟನಲ್‌ ರಸ್ತೆ ಯಾರಿಗಾಗಿ ಎಂಬ ಪ್ರಶ್ನೆಯನ್ನು ಡಿಕೆಶಿ ಮುಂದಿಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಏಳು ಟನಲ್‌ ರಸ್ತೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಕರ್ನಾಟಕದ ದಾಖಲೆಗಳನ್ನು ತೆಗೆದುಕೊಂಡು ಕೆಲವು ರಾಜ್ಯಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಟನಲ್‌ ರಸ್ತೆಯನ್ನು ನಿರ್ಮಿಸಲು ಸರ್ಕಾರ ಸುಮಾರು ₹4,000 ಕೋಟಿ ಮಾತ್ರ ನೀಡಲಿದೆ. ಉಳಿದ ಹಣವನ್ನು ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡಿ, 25ರಿಂದ 30 ವರ್ಷಗಳ ಕಾಲ ನಿರ್ವಹಣೆ ಮಾಡುವ ರೀತಿಯಲ್ಲಿ ಬಿಲ್ಡ್‌-ಆಪರೇಟ್‌-ಟ್ರಾನ್ಸ್‌ಫರ್‌ ಮಾದರಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಹಣ ಪಾವತಿಸಲು ಸಿದ್ಧರಿರುವವರು ಟನಲ್‌ ರಸ್ತೆಯಲ್ಲಿ ಸಂಚರಿಸಿ ಸಮಯ ಉಳಿಸಿಕೊಳ್ಳಬಹುದು. ಹಣ ನೀಡಲು ಸಾಧ್ಯವಾಗದವರು ಮೇಲಿನ ಸಾಮಾನ್ಯ ರಸ್ತೆಯಲ್ಲಿ ಸಂಚರಿಸಬಹುದು. ಟನಲ್‌ ರಸ್ತೆಯಿಂದ ಕನಿಷ್ಠ ಒಂದು ಗಂಟೆ ಸಮಯ ಉಳಿಯಬಹುದು ಎಂದು ಡಿಕೆಶಿ ಹೇಳಿದ್ದಾರೆ.

ನಿದ್ದೆಗೆ ಕಡಿಮೆ ಸಮಯ: ‘ರಾಜಕೀಯವೇ ನನ್ನ ದೊಡ್ಡ ಅಭ್ಯಾಸ’

ತಮ್ಮ ನಿದ್ದೆಯ ಅವಧಿ ಕಳೆದ ಐದಾರು ವರ್ಷಗಳಿಂದ ಬಹಳ ಕಡಿಮೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ರಾತ್ರಿ 2 ಗಂಟೆಗೆ ಮಲಗಿ, ಬೆಳಗ್ಗೆ 5.15ಕ್ಕೆ ಎದ್ದು ಎಪಿಎಂಸಿ ಭೇಟಿ ನೀಡಿದ್ದೆ. ಬೆಳಗ್ಗೆ 9.45ರ ವೇಳೆಗೆ ವಾಪಸ್‌ ಬಂದಿದ್ದೆ. ಮೊದಲ ಬಾರಿಗೆ ಮಧ್ಯಾಹ್ನ ದೈಹಿಕವಾಗಿ ವ್ಯತ್ಯಾಸ ಕಂಡುಬಂತು ಎಂದು ತಿಳಿಸಿದ್ದಾರೆ.

ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕನಿಷ್ಠ ಐದಾರು ಗಂಟೆಗಳ ವಿಶ್ರಾಂತಿಯೂ ಸಿಗುತ್ತಿಲ್ಲ. ಗುರಿ ಮುಟ್ಟಬೇಕು ಎಂಬ ಪ್ರಯತ್ನದಿಂದ ಪ್ರತಿದಿನ ರಾತ್ರಿ 2 ಗಂಟೆಯವರೆಗೂ ಯಾರಾದರೂ ಭೇಟಿಯಾಗುತ್ತಿರುತ್ತಾರೆ. ಹಲವು ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ತಮ್ಮ ಕುಟುಂಬ ಸಂಪೂರ್ಣ ಸಹಕಾರ ನೀಡುತ್ತಿದೆ. ಅದೇ ತಮ್ಮ ದೊಡ್ಡ ಶಕ್ತಿ. ಬೇರೆ ಯಾವುದೇ ಅಭ್ಯಾಸವಿಲ್ಲ, ರಾಜಕೀಯವೇ ತಮ್ಮ ದೊಡ್ಡ ಅಭ್ಯಾಸ ಎಂದು ಡಿಕೆಶಿ ಹೇಳಿದ್ದಾರೆ.

ಸರ್ಕಾರದ ಮುಂದೆ ಹಲವು ಸವಾಲುಗಳು

ತಮ್ಮ ಸರ್ಕಾರದ ಕಾಲಾವಧಿ ಕಡಿಮೆ ಇದೆ ಎಂಬ ಅರಿವಿದೆ. ಆದರೆ ಇದು ಡಿಕ್ಟೇಟರ್‌ಶಿಪ್‌ ಸರ್ಕಾರವಲ್ಲ, ಪ್ರಜಾಪ್ರಭುತ್ವದ ಸರ್ಕಾರ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ಸೇರಿದಂತೆ ಹಲವು ಹಂತಗಳಲ್ಲಿ ಸರ್ಕಾರದ ಪ್ರತಿಯೊಂದು ತೀರ್ಮಾನವೂ ಪ್ರಶ್ನೆಗೆ ಒಳಗಾಗುತ್ತದೆ. ಅಧಿಕಾರಿಗಳು ಕೂಡ ಎಲ್ಲ ನಿರ್ಧಾರಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಯಾರೂ ಅಪಾಯ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜಕೀಯದಲ್ಲಿ ಮೇಲೇರಲು ಪ್ರಯತ್ನಿಸುವವರ ಕಾಲೆಳೆಯುವುದು ಸಹಜ. ನ್ಯಾಯಾಲಯಕ್ಕೆ ಯಾರಾದರೂ ಹೋಗಿ ತಡೆಯಾಜ್ಞೆ ತಂದರೂ ಯೋಜನೆಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ಇದೆ. ಶಿವರಾಮ ಕಾರಂತ ಬಡಾವಣೆ ವಿಚಾರವೇ ಇದಕ್ಕೆ ಉದಾಹರಣೆ. ಈ ಎಲ್ಲ ಕಾರಣಗಳಿಂದ ಸಾಕಷ್ಟು ಸವಾಲುಗಳಿವೆ ಎಂದು ಡಿಕೆಶಿ ಹೇಳಿದ್ದಾರೆ.

ಪ್ರಧಾನಿ ಮೋದಿ ಜತೆಗಿನ ಮಾತುಕತೆ ಬಹಿರಂಗಪಡಿಸುವುದಿಲ್ಲ

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಕರೆದು ಮಾತನಾಡಿದ್ದರು. ಅದು ಅವರ ಹೃದಯಶ್ರೀಮಂತಿಕೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಜನರು, ದೇಶ ಹಾಗೂ ಸ್ವಾಮಿ ವಿವೇಕಾನಂದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರಧಾನಿ ಮತ್ತು ಮುಖ್ಯಮಂತ್ರಿ ನಡುವೆ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅದಾನಿ ಭೇಟಿ ಬಗ್ಗೆ ರಾಹುಲ್‌ ಗಾಂಧಿ ಕೇಳಿಲ್ಲ

ಉದ್ಯಮಿ ಗೌತಮ್‌ ಅದಾನಿ ಬಹಳ ದಿನಗಳಿಂದ ಪರಿಚಯವಿರುವವರು. ವಿದ್ಯುತ್‌, ಸಿಮೆಂಟ್‌ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಒಬ್ಬ ಉದ್ಯಮಿಯಾಗಿ ಅದಾನಿ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಬಂದಾಗ ಬೇಡ ಎಂದು ಹೇಳಲು ಸಾಧ್ಯವಿಲ್ಲ. ರಾಹುಲ್‌ ಗಾಂಧಿಯವರು ಅದಾನಿ ಜತೆಗಿನ ತಮ್ಮ ಭೇಟಿಯ ಬಗ್ಗೆ ಯಾವುದೇ ಪ್ರಶ್ನೆ ಕೇಳಿಲ್ಲ ಎಂದು ತಿಳಿಸಿದ್ದಾರೆ.

‘ಜನರನ್ನು ಗೊಂದಲಕ್ಕೆ ಸಿಲುಕಿಸುವುದಿಲ್ಲ’

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಲವು ರಾಜ್ಯಗಳಲ್ಲಿ ಯೋಜನೆಗಳನ್ನು ಘೋಷಿಸಿದರೂ ಮುಂದುವರಿಸಲು ಸಾಧ್ಯವಾಗದೆ ನಿಲ್ಲಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಯನ್ನೂ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

‘ವಿ ವಿಲ್ ಕನ್ವಿನ್ಸ್ಡ್ ದಿ ಪೀಪಲ್, ವಿ ವಿಲ್ ನಾಟ್ ಕನ್ಫ್ಯೂಸ್ಡ್ ದಿ ಪೀಪಲ್’ ಎಂದು ಹೇಳಿರುವ ಡಿಕೆಶಿ, ಜನರಲ್ಲಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ ಎಂದು ಹೇಳಿದ್ದಾರೆ.

‘ಜನರ ಬಗ್ಗೆ ಕಾಳಜಿಯಷ್ಟೇ’

ಪಾರ್ಕ್‌ ಜಾಗ ಬಳಕೆ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಸರ್ಕಾರ ಯುಟರ್ನ್‌ ಹೊಡೆದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಾಡಿನ ಜನರ ಕುರಿತು ಕಾಳಜಿ ಮತ್ತು ಗೌರವ ಮಾತ್ರ ಸರ್ಕಾರದ ಉದ್ದೇಶ. ಜನರ ಭಾವನೆಗಳಿಗೆ ಗೌರವ ನೀಡಬೇಕು ಮತ್ತು ಅದನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಕಸ: ‘ದೊಡ್ಡ ಮಾಫಿಯಾ’

ಬೆಂಗಳೂರು ಕಸ ನಿರ್ವಹಣೆ ವಿಚಾರವೂ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.

ಕಳೆದ 15 ವರ್ಷಗಳಿಂದ ಬೆಂಗಳೂರಿನ ಕಸದ ಟೆಂಡರ್‌ ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌, ಬಿಜೆಪಿ ಅಥವಾ ಜೆಡಿಎಸ್‌ ಸರ್ಕಾರವಿದ್ದರೂ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿರಲಿಲ್ಲ. ಇದು ದೊಡ್ಡ ಮಾಫಿಯಾ ಆಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈಗ ಕಸ ನಿರ್ವಹಣೆಗೆ ಪ್ಯಾಕೇಜ್‌ಗಳನ್ನು ರೂಪಿಸಿ ಟೆಂಡರ್‌ ನೀಡಲಾಗಿದೆ. ನ್ಯಾಯಾಲಯದ ಮಧ್ಯಪ್ರವೇಶ ಸೇರಿದಂತೆ ಹಲವು ವಿಚಾರಗಳು ಇದರಲ್ಲಿವೆ. ಈ ಸಮಸ್ಯೆಯನ್ನು ಒಂದು ಹಂತಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Continue Reading

ಬೆಂಗಳೂರು

ತಾಯಂದಿರ ಕನಸುಗಳಿಗೆ ಮತ್ತೆ ರೆಕ್ಕೆ; ಜೀ ಕನ್ನಡದಲ್ಲಿ ‘Dance Karnataka Dance – ಸೂಪರ್ ಮಾಮ್’!

Published

on

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ಜೀ ಕನ್ನಡ, ಕರ್ನಾಟಕದ ತಾಯಂದಿರ ನೃತ್ಯ ಪ್ರತಿಭೆ ಹಾಗೂ ಕನಸುಗಳಿಗೆ ಹೊಸ ವೇದಿಕೆ ಕಲ್ಪಿಸಲು ‘Dance Karnataka Dance – ಸೂಪರ್ ಮಾಮ್’ ರಿಯಾಲಿಟಿ ಶೋನೊಂದಿಗೆ ಮತ್ತೆ ವೀಕ್ಷಕರ ಮನೆಮನ ತಲುಪಲು ಸಜ್ಜಾಗಿದೆ.

ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. ಕುಟುಂಬ, ಉದ್ಯೋಗ ಹಾಗೂ ದಿನನಿತ್ಯದ ನೂರಾರು ಜವಾಬ್ದಾರಿಗಳ ನಡುವೆಯೂ ನೃತ್ಯದ ಮೇಲಿನ ತಮ್ಮ ಆಸಕ್ತಿಯನ್ನು ಜೀವಂತವಾಗಿರಿಸಿಕೊಂಡಿರುವ ಸ್ಪೂರ್ತಿದಾಯಕ ತಾಯಂದಿರ ಕಥೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿವೆ.

ಕುಟುಂಬದ ನಡುವೆ ಬದಿಗೊತ್ತಿದ್ದ ಕನಸುಗಳಿಗೆ ಮರುಜೀವ

ತಾಯಂದಿರು ತಮ್ಮ ಜೀವನದ ಬಹುಪಾಲು ಸಮಯವನ್ನು ಕುಟುಂಬ ಹಾಗೂ ಮನೆಯ ಜವಾಬ್ದಾರಿಗಳಿಗೆ ಮೀಸಲಿಡುತ್ತಾರೆ. ಈ ಜವಾಬ್ದಾರಿಗಳ ನಡುವೆ ಅವರ ಸ್ವಂತ ಆಸೆ-ಆಕಾಂಕ್ಷೆಗಳು ಮತ್ತು ಕನಸುಗಳು ಕೆಲವೊಮ್ಮೆ ಹಿಂದೆ ಸರಿಯುತ್ತವೆ.

ಅಂತಹ ತಾಯಂದಿರಿಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ತಮ್ಮ ನೃತ್ಯದ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಕಂಡುಕೊಳ್ಳಲು ಹಾಗೂ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯಾಗಲಿದೆ.

ವರ್ಷಗಳಿಂದ ಬದಿಗೊತ್ತಿದ್ದ ಕನಸುಗಳಿಗೆ ಮರುಜೀವ ನೀಡುವುದರ ಜೊತೆಗೆ, ತಮ್ಮ ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಮತ್ತೊಮ್ಮೆ ಪ್ರದರ್ಶಿಸಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಲಿದೆ.

ವಿವಿಧ ಭಾಗಗಳ ತಾಯಂದಿರ ವಿಭಿನ್ನ ಕಥೆಗಳು

ಆಡಿಷನ್ ಸಂಚಿಕೆಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿರುವ ತಾಯಂದಿರನ್ನು ವೀಕ್ಷಕರಿಗೆ ಪರಿಚಯಿಸಲಾಗುತ್ತದೆ. ನೃತ್ಯದ ಮೇಲಿನ ತಮ್ಮ ಆಸಕ್ತಿ ಹಾಗೂ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಲಿರುವ ಅವರು, ತಮ್ಮ ವೈಯಕ್ತಿಕ ಬದುಕಿನ ಪಯಣ, ಕನಸುಗಳು ಮತ್ತು ಆಕಾಂಕ್ಷೆಗಳನ್ನೂ ಹಂಚಿಕೊಳ್ಳಲಿದ್ದಾರೆ.

ಕುಟುಂಬ ಹಾಗೂ ಇತರ ಜವಾಬ್ದಾರಿಗಳ ನಡುವೆ ತಮ್ಮ ಕನಸುಗಳಿಗೆ ಮತ್ತೊಮ್ಮೆ ಆದ್ಯತೆ ನೀಡುವ ಅವರ ಪ್ರಯತ್ನಗಳು ಕಾರ್ಯಕ್ರಮದ ಪ್ರಮುಖ ಹೈಲೈಟ್‌ಗಳಾಗಲಿವೆ.

ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಆದ ಕಥೆ ಮತ್ತು ನೃತ್ಯ ಶೈಲಿಯೊಂದಿಗೆ ವೇದಿಕೆಯೇರಲಿದ್ದು, ವಿಭಿನ್ನ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿವೆ.

ಅನುಶ್ರೀ ನಿರೂಪಣೆ, ಶಿವರಾಜ್ ಕುಮಾರ್ ಸೇರಿ ತಾರೆಯರ ತೀರ್ಪುಗಾರರ ಬಳಗ

ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ವಿಶಿಷ್ಟ ನಿರೂಪಣಾ ಶೈಲಿಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿರುವ ತೀರ್ಪುಗಾರರ ಬಳಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟ ವಿಜಯ್ ರಾಘವೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇರಲಿದ್ದಾರೆ.

ತಮ್ಮ ಅನುಭವ ಮತ್ತು ವಿಭಿನ್ನ ದೃಷ್ಟಿಕೋನಗಳ ಮೂಲಕ ತೀರ್ಪುಗಾರರು ಸ್ಪರ್ಧಿಗಳ ನೃತ್ಯ ಪ್ರದರ್ಶನವನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸೆ.12ರಿಂದ ‘ಸೂಪರ್ ಮಾಮ್’ಗಳ ನೃತ್ಯ ಪಯಣ

ವಿವಿಧ ಹಿನ್ನೆಲೆಯಿಂದ ಬಂದಿರುವ ತಾಯಂದಿರು ತಮ್ಮದೇ ಆದ ಅನುಭವ, ವ್ಯಕ್ತಿತ್ವ ಮತ್ತು ನೃತ್ಯ ಪ್ರತಿಭೆಯೊಂದಿಗೆ ವೇದಿಕೆಯೇರಲಿದ್ದಾರೆ. ಅವರ ನೃತ್ಯ ಪ್ರದರ್ಶನಗಳ ಜತೆಗೆ ಬದುಕಿನ ಕಥೆಗಳೂ ವೀಕ್ಷಕರಿಗೆ ಪರಿಚಯವಾಗಲಿವೆ.

ಕುಟುಂಬದವರ ಕನಸುಗಳಿಗೆ ಸದಾ ಬೆಂಬಲವಾಗಿ ನಿಂತಿರುವ ಈ ತಾಯಂದಿರು, ಇದೀಗ ತಮ್ಮದೇ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡಲಿದ್ದಾರೆ.

ಸೆಪ್ಟೆಂಬರ್ 12 ಮತ್ತು 13ರಂದು ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ಪ್ರಸಾರವಾಗಲಿದೆ. ಕಾರ್ಯಕ್ರಮವನ್ನು ಯಾವುದೇ ಸಮಯದಲ್ಲೂ ಕನ್ನಡ ಜೀ5ನಲ್ಲಿ ವೀಕ್ಷಿಸಬಹುದು.

Continue Reading

Trending