ದೇಶ
ಪರೀಕ್ಷೆಗೆ ಮುನ್ನ 10 ನಿಮಿಷ ನಕ್ಕುಬಿಡಿ, ಜೋಕ್ ಮಾಡಿ: ಮಕ್ಕಳಿಗೆ ಪ್ರಧಾನಿ ಮೋದಿ ಕಿವಿಮಾತು
ಹೊಸದಿಲ್ಲಿ: ಪರೀಕ್ಷೆಗೂ ಮುನ್ನ ಆರಾಮವಾಗಿ ಕುಳಿತುಕೊಳ್ಳಿ; 5-10 ನಿಮಿಷ ಜೋಕ್ ಮಾಡಿ, ನಕ್ಕು ಮನಸ್ಸನ್ನು ಹಗರಾಗಿಸಿಕೊಳ್ಳಿ; ಪರೀಕ್ಷೆಯ ಹಾಲ್ಗೆ ಅರ್ಧ ಗಂಟೆ ಮೊದಲೇ ತಲುಪಿಕೊಳ್ಳಿ… ಇವೇ ಮುಂತಾದ ಹಲವು ಕಿವಿಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಹೇಳಿದ್ದಾರೆ.
10ನೇ ಮತ್ತು 12ನೇ ತರಗತಿಯ 2024ರ ಬೋರ್ಡ್ ಎಕ್ಸಾಮ್ಗೆ ಮುನ್ನ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುತ್ತಿರುವ ʼಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಇದೂ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು. ಸೋಮವಾರ ದಿಲ್ಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಕಾರ್ಯಕ್ರಮ ನಡೆಯಿತು. ದೇಶಾದ್ಯಂತದಿಂದ ಬಂದ ಹಲವು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ನೇರವಾಗಿ ಹಾಗೂ ಆನ್ಲೈನ್ ಮೂಲಕ ಪ್ರಧಾನಿಗೆ ಪ್ರಶ್ನೆಗಳನ್ನು ಕೇಳಿದರು. ಪ್ರಧಾನಿಯವರು ನೀಡಿದ ಹಲವು ಟಿಪ್ಸ್ ಈ ಕೆಳಗಿನಂತಿದ್ದವು:
• ಪರೀಕ್ಷೆಯ ಹಾಲ್ಗೆ ಅರ್ಧ ಗಂಟೆಗೂ ಮೊದಲು ತಲುಪಿಕೊಂಡರೆ ಯಾವುದೇ ಉದ್ವೇಗ ಇರುವುದಿಲ್ಲ. ಹತ್ತು ನಿಮಿಷದಷ್ಟು ಕಾಲ ಜೋಕ್ ಮಾಡಲು, ನಗಲು ಮೀಸಲಿಡಿ. ಅದರಿಂದ ಮನಸ್ಸು ಹಗುರಾಗುತ್ತದೆ. ನಂತರ ಪ್ರಶ್ನೆ ಪತ್ರಿಕೆ ನಿಮ್ಮ ಕೈಗೆ ಬಂದಾಗ, ನೀವು ಅದನ್ನು ಆರಾಮವಾಗಿ ಮಾಡಲು ಸಾಧ್ಯವಾಗುತ್ತದೆ.
• ಪರೀಕ್ಷಾ ಹಾಲ್ನಲ್ಲಿ ನಾವು ಸಬ್ಜೆಕ್ಟ್ ಹೊರತುಪಡಿಸಿ ಇತರ ವಿಷಯಗಳ ಮೇಲೆ ಮನಸ್ಸು ಕೇಂದ್ರೀಕರಿಸುವುದರಿಂದ ನಮ್ಮ ಶಕ್ತಿ ಅನಗತ್ಯವಾಗಿ ವ್ಯರ್ಥವಾಗುತ್ತದೆ. ನಾವು ನಮ್ಮಲ್ಲೇ ಕಳೆದುಹೋಗಬೇಕು. ಮಹಾಭಾರತದ ಅರ್ಜುನ ಮತ್ತು ಪಕ್ಷಿನೋಟದ ಕಥೆಯನ್ನು ನೀವು ಕೇಳಿರಬಹುದು. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
• ಆತಂಕಕ್ಕೆ ಕಾರಣವೇನೆಂದರೆ, ಪರೀಕ್ಷೆಯ ಸಮಯದಲ್ಲಿ, ಸಮಯ ಸಾಕಾಗಲಿಕ್ಕಿಲ್ಲ ಎಂದು ನೀವು ಭಾವಿಸುತ್ತೀರಿ. ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಸಮಗ್ರವಾಗಿ ಓದಿ. ಮೊದಲು ಯಾವ ಪ್ರಶ್ನೆಗಳನ್ನು ಪ್ರಯತ್ನಿಸಿದರೆ ಉತ್ತಮ ಎಂದು ನೋಟ್ ಮಾಡಿಕೊಳ್ಳಿ. ಪ್ರತೀ ಪ್ರಶ್ನೆಗೂ ಸಮಯ ನಿಗದಿಪಡಿಸಿಕೊಳ್ಳಿ.
• ಮೊಬೈಲ್ನಲ್ಲಿ ಒಂದರ ಹಿಂದೆ ಒಂದರಂತೆ ರೀಲುಗಳನ್ನು ನೋಡುತ್ತಾ ಹೋದರೆ ಸಮಯ ವ್ಯರ್ಥವಾಗುತ್ತದೆ. ನಿದ್ದೆ ಕೆಡುತ್ತದೆ, ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನಿದ್ರೆಯನ್ನು ಕೀಳಂದಾಜು ಮಾಡಬೇಡಿ. ಆಧುನಿಕ ಆರೋಗ್ಯ ವಿಜ್ಞಾನವು ನಿದ್ರೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಿಮಗೆ ಬೇಕಾದಷ್ಟು ನಿದ್ದೆ ಮಾಡುತ್ತೀರೋ ಇಲ್ಲವೋ ಎಂಬುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
• ನಿಮ್ಮ ಆಹಾರದಲ್ಲಿ ನಿಮ್ಮ ವಯಸ್ಸಿಗೆ ಅಗತ್ಯವಿರುವ ವಸ್ತುಗಳು ಇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಮ್ಮ ಆಹಾರದಲ್ಲಿ ಸಮತೋಲನವು ಆರೋಗ್ಯಕ್ಕೆ ಮುಖ್ಯವಾಗಿದೆ. ಫಿಟ್ನೆಸ್ಗಾಗಿ ವ್ಯಾಯಾಮವನ್ನು ಮಾಡಬೇಕು. ನೀವು ಪ್ರತಿದಿನ ಹಲ್ಲುಜ್ಜುವ ರೀತಿಯಲ್ಲಿ ವ್ಯಾಯಾಮ ಮಾಡಬೇಕು; ಅದರಲ್ಲಿ ಯಾವುದೇ ರಾಜಿ ಬೇಡ.
• ನಾವು ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡದಿದ್ದರೆ. ಅದರ ಬಳಕೆಯ ಅವಧಿ ಕಡಿಮೆಯಾಗುತ್ತದೆ. ಮೊಬೈಲ್ ಕೆಲಸ ಮಾಡಲು ಚಾರ್ಜ್ ಬೇಕಾದಂತೆ, ದೇಹವನ್ನೂ ಚಾರ್ಜ್ ಮಾಡಬೇಕು. ಮೊಬೈಲ್ ಫೋನ್ಗೆ ಚಾರ್ಜಿಂಗ್ ಅಗತ್ಯವಿರುವಂತೆ ದೇಹಕ್ಕೂ ಚಾರ್ಜ್ ಅಗತ್ಯವಿದೆ. ಅದಿಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ, ಹಾಗಾಗಿ ಜೀವನವನ್ನು ಸ್ವಲ್ಪ ಸಮತೋಲನಗೊಳಿಸಬೇಕು. ನಾವು ಆರೋಗ್ಯವಾಗಿಲ್ಲದಿದ್ದರೆ, ಮೂರು ಗಂಟೆಗಳ ಕಾಲ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗದಿರಬಹುದು. ಆರೋಗ್ಯಕರ ಮನಸ್ಸಿಗೆ ಆರೋಗ್ಯಕರ ದೇಹ ಅಗತ್ಯ. ಇದರರ್ಥ ನೀವು ಕುಸ್ತಿ ಮಾಡಬೇಕು ಎಂದಲ್ಲ. ಒಂದು ಪುಸ್ತಕವನ್ನು ತೆಗೆದುಕೊಂಡು ಅದನ್ನು ಸೂರ್ಯನ ಬೆಳಕಿನಲ್ಲಿ ಕುಳಿತು ಓದಿ. ಏಕೆಂದರೆ ದೇಹವನ್ನು ರೀಚಾರ್ಜ್ ಮಾಡಲು ಸೂರ್ಯನ ಬೆಳಕು ಕೂಡ ಬೇಕಾಗುತ್ತದೆ.
• ಹೆತ್ತವರಿಗೆ ಕಿವಿಮಾತು: ಇಂದು ಪರೀಕ್ಷೆ ಇರುವುದರಿಂದ ಮಗುವಿಗೆ ಹೊಸ ಪೆನ್ ಬೇಕು ಎಂದು ಭಾವಿಸಬೇಡಿ. ಆದರೆ ಮಗು ದಿನನಿತ್ಯ ಬಳಸುವ ಪೆನ್ನನ್ನೇ ಬಳಸಬೇಕು. ಅದು ಅಬ್ಯಾಸವಾಗಿರುತ್ತದೆ. ಅವನ ಬಟ್ಟೆಯ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಅವನಿಗೆ ಹಿತಕರವಾಗಿದ್ದನ್ನು ಅವನು ಧರಿಸಲಿ. ಪರೀಕ್ಷೆಯ ಸಮಯ ಮಕ್ಕಳಿಗೆ ಆರಾಮದಾಯಕವಾಗಿರುವಂತೆ ಮಾಡಿ.
• ಇಂದು, ಪರೀಕ್ಷೆಯಲ್ಲಿ ದೊಡ್ಡ ಸವಾಲು ಎಂದರೆ ಕೈಯಲ್ಲಿ ಬರೆಯುವುದು. ಇಂದು ಎಲ್ಲವೂ ಮೊಬೈಲ್, ಐಪ್ಯಾಡ್, ಕಂಪ್ಯೂಟರ್ನಲ್ಲಿ ನಡೆಯುತ್ತದಾದ್ದರಿಂದ ಬರೆಯುವ ಅಭ್ಯಾಸವೇ ಬಿಟ್ಟುಹೋಗಿದೆ. ಹೀಗಾಗಿ ದಿನನಿತ್ಯ ಅಧ್ಯಯನಕ್ಕಾಗಿ ಮೀಸಲಿಡುವ ಸಮಯದಲ್ಲಿ ಅರ್ಧ ಭಾಗ ಬರೆಯುವುದಕ್ಕಾಗಿಯೇ ಇಟ್ಟುಕೊಳ್ಳಿ.
• ಅಭ್ಯಾಸದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಪರೀಕ್ಷೆಯ ಮೊದಲು, ವಿಷಯದ ಬಗ್ಗೆ ನೀವು ಓದಿದ್ದನ್ನು ಬರೆಯಿರಿ ಮತ್ತು ನಂತರ ಅದನ್ನು ನೀವೇ ಸರಿಪಡಿಸಿ. ನಿಮಗೆ ಈಜಲು ತಿಳಿದಿದ್ದರೆ ನೀರಿಗೆ ಇಳಿಯುವ ಭಯವಿಲ್ಲ. ಅಭ್ಯಾಸ ಮಾಡುವವನಿಗೆ ತಾನು ಜಯಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ. ನೀವು ಎಷ್ಟು ಹೆಚ್ಚು ಬರೆಯುತ್ತೀರೋ ಅಷ್ಟು ತೀಕ್ಷ್ಣತೆ ನಿಮಗೆ ಸಿಗುತ್ತದೆ.
• ಪರೀಕ್ಷಾ ಹಾಲ್ನಲ್ಲಿ ನಿಮ್ಮ ಪಕ್ಕದ ವಿದ್ಯಾರ್ಥಿ ಎಷ್ಟು ವೇಗವಾಗಿ ಬರೆಯುತ್ತಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಯಾರಿಗೆ ಗೊತ್ತು, ಆತ ಸಿನಿಮಾ ಕಥೆ ಬರೆಯುತ್ತಿರಬಹುದು!
ಬೆಂಗಳೂರು
Liver ಚಿಕಿತ್ಸೆಗೆ ಗುಡ್ ನ್ಯೂಸ್: ಹಲವು ತಜ್ಞರು ಒಂದೇ ಕಡೆ, ರೋಗಿಗಳಿಗೆ ಸುಲಭ ಚಿಕಿತ್ಸೆ
ಬೆಂಗಳೂರು: ಯಕೃತ್ತಿನಲ್ಲಿ ಕಂಡುಬರುವ ಗಂಟು, ಗೆಡ್ಡೆ ಹಾಗೂ ಅಸಹಜ ಬೆಳವಣಿಗೆಗಳಿಗೆ ಸಮನ್ವಯದ ತಪಾಸಣೆ, ನಿಖರ ರೋಗನಿರ್ಣಯ ಮತ್ತು ಸಮಗ್ರ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಬೆಂಗಳೂರಿನ ಕೆಂಗೇರಿಯಲ್ಲಿರುವ ಫೋರ್ಟಿಸ್ ಹೆಲ್ತ್ಕೇರ್ ಜಾಲದ ಭಾಗವಾಗಿರುವ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಲಾಗಿದೆ.
ರೋಗಿಗಳು ವಿವಿಧ ವೈದ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಒಂದೇ ರೀತಿಯ ಪರೀಕ್ಷೆಗಳನ್ನು ಪುನರಾವರ್ತಿಸುವ ಅಗತ್ಯವನ್ನು ಕಡಿಮೆ ಮಾಡುವುದು ಕ್ಲಿನಿಕ್ನ ಪ್ರಮುಖ ಉದ್ದೇಶವಾಗಿದೆ. ಯಕೃತ್ತಿನ ತಜ್ಞರು, ಲಿವರ್ ಟ್ರಾನ್ಸ್ಪ್ಲಾಂಟ್ ಮತ್ತು ಎಚ್ಪಿಬಿ ಸರ್ಜರಿ ತಜ್ಞರು, ಜಠರ-ಕರುಳಿನ ತಜ್ಞರು, ರೇಡಿಯಾಲಜಿಸ್ಟ್ಗಳು, ಕ್ಯಾನ್ಸರ್ ತಜ್ಞರು, ರೋಗಶಾಸ್ತ್ರ ತಜ್ಞರು ಹಾಗೂ ಪೌಷ್ಟಿಕ ಆಹಾರ ತಜ್ಞರು ಒಂದೇ ತಂಡವಾಗಿ ರೋಗಿಯ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ವೈದ್ಯಕೀಯ ಜಠರರೋಗ ಶಾಸ್ತ್ರ, ಹೆಪಟಾಲಜಿ ಮತ್ತು ಸುಧಾರಿತ ಎಂಡೋಸ್ಕೋಪಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರ ಡಾ. ಆದರ್ಶ್ ಸಿ.ಕೆ. ಮಾತನಾಡಿ, ನಿಯಮಿತ ತಪಾಸಣೆ ವೇಳೆ ಯಕೃತ್ತಿನ ಗೆಡ್ಡೆಗಳು ಮತ್ತು ದ್ರವ ತುಂಬಿದ ಚೀಲಗಳು ಆಕಸ್ಮಿಕವಾಗಿ ಪತ್ತೆಯಾಗುತ್ತಿರುವುದು ಹೆಚ್ಚಾಗಿದೆ. ಇವುಗಳಲ್ಲಿ ಅನೇಕವು ಅಪಾಯಕಾರಿಯಲ್ಲದಿದ್ದರೂ, ಕೆಲವು ಯಕೃತ್ತಿನ ಕಾಯಿಲೆ ಅಥವಾ ಆರಂಭಿಕ ಹಂತದ ಕ್ಯಾನ್ಸರ್ನ ಸೂಚನೆಯಾಗಿರಬಹುದು. ಹೀಗಾಗಿ ಯಾವ ಗೆಡ್ಡೆಗೆ ಚಿಕಿತ್ಸೆ ಬೇಕು ಮತ್ತು ಯಾವುದನ್ನು ಮೇಲ್ವಿಚಾರಣೆ ಮಾಡಿದರೆ ಸಾಕು ಎಂಬುದನ್ನು ಗುರುತಿಸುವುದು ಪ್ರಮುಖ ಸವಾಲಾಗಿದೆ ಎಂದು ಹೇಳಿದ್ದಾರೆ.
ಲಿವರ್ ಟ್ರಾನ್ಸ್ಪ್ಲಾಂಟ್ ಮತ್ತು ಎಚ್ಪಿಬಿ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಗೋಪಸೆಟ್ಟಿ, ಚಿಕಿತ್ಸೆಯ ನಿರ್ಧಾರವು ಗೆಡ್ಡೆಯ ಗಾತ್ರ ಮತ್ತು ಸ್ಥಳಕ್ಕೆ ಮಾತ್ರ ಸೀಮಿತವಾಗಿರದೆ ಯಕೃತ್ತಿನ ಕಾರ್ಯಕ್ಷಮತೆ ಹಾಗೂ ರೋಗಿಯ ಒಟ್ಟಾರೆ ಆರೋಗ್ಯವನ್ನೂ ಆಧರಿಸಿರಬೇಕು ಎಂದು ತಿಳಿಸಿದ್ದಾರೆ. ಸಮಗ್ರ ಮೌಲ್ಯಮಾಪನದಿಂದ ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡುವುದರ ಜೊತೆಗೆ, ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದಿದ್ದಾರೆ.
ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಬಗಲಿ ಮಾತನಾಡಿ, ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಿರುವುದು ರೋಗಿ ಕೇಂದ್ರಿತ ಹಾಗೂ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದ ಆರೋಗ್ಯ ಸೇವೆ ಒದಗಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಪರಿಣತಿಯನ್ನು ಒಂದೇ ವ್ಯವಸ್ಥೆಯಲ್ಲಿ ಒದಗಿಸುವ ಮೂಲಕ ಚಿಕಿತ್ಸಾ ಫಲಿತಾಂಶ ಮತ್ತು ರೋಗಿಗಳ ಅನುಭವ ಸುಧಾರಿಸುವುದು ಕ್ಲಿನಿಕ್ನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಯಕೃತ್ತಿನ ಚೀಲಗಳು, ರಕ್ತನಾಳದ ಗೆಡ್ಡೆಗಳು, ಫೋಕಲ್ ನೊಡ್ಯುಲರ್ ಹೈಪರ್ಪ್ಲಾಸಿಯಾ, ಯಕೃತ್ತಿನ ಕ್ಯಾನ್ಸರ್, ದೇಹದ ಇತರ ಭಾಗಗಳಿಂದ ಯಕೃತ್ತಿಗೆ ಹರಡಿದ ಕ್ಯಾನ್ಸರ್ ಹಾಗೂ ಸಂಕೀರ್ಣ ಯಕೃತ್ತಿನ ಗೆಡ್ಡೆಗಳಿಗೆ ಇಲ್ಲಿ ಸಮಗ್ರ ಮೌಲ್ಯಮಾಪನ ಮತ್ತು ಚಿಕಿತ್ಸಾ ಸಲಹೆ ದೊರೆಯಲಿದೆ. ರೋಗನಿರ್ಣಯದ ನಿಖರತೆ ಹೆಚ್ಚಿಸುವುದು ಮತ್ತು ಚಿಕಿತ್ಸೆಯಲ್ಲಿನ ವಿಳಂಬ ಕಡಿಮೆ ಮಾಡುವುದು ಕ್ಲಿನಿಕ್ನ ಪ್ರಮುಖ ಗುರಿಯಾಗಿದೆ.
ದೇಶ
Nepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್
ಬಹ್ರೈಚ್: Nepal flood ದಲ್ಲಿ ಉಂಟಾದ ಭೀಕರ ಜಲಪ್ರಳಯದ ರಭಸಕ್ಕೆ ಸಿಲುಕಿದ್ದ 5 ಕಾಡಾನೆಗಳ ಹಿಂಡು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಟರ್ನಿಯಾಘಾಟ್ ಬಳಿಯ ಗಿರ್ಜಾಪುರಿ ಬ್ಯಾರೇಜ್ ಸಮೀಪ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದೆ. ಆಗಸ್ಟ್ 25ರಂದು ನಡೆದ ಈ ಘಟನೆಯಲ್ಲಿ ಮೂರು ವಯಸ್ಕ ಆನೆಗಳು ಹಾಗೂ ಎರಡು ಮರಿಗಳು ಪ್ರವಾಹದ ಸುಳಿಗೆ ಸಿಲುಕಿದ್ದವು.
ಕೌಡಿಯಾಲ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಸಂಕಷ್ಟಕ್ಕೆ ಸಿಲುಕಿತ್ತು. ನೀರಿನ ರಭಸ ಹೆಚ್ಚಿದ್ದರಿಂದ ಆನೆ ಮರಿಗಳಿಗೆ ತೇಲುವುದು ಕಷ್ಟವಾಗಿತ್ತು. ಈ ವೇಳೆ ವಯಸ್ಕ ಆನೆಗಳು ಮರಿಗಳನ್ನು ಸುತ್ತುವರಿದು ನಿಂತು, ಅವುಗಳನ್ನು ಪ್ರವಾಹದ ರಭಸದಿಂದ ರಕ್ಷಿಸಲು ಪ್ರಯತ್ನಿಸಿರುವುದು ಗಮನ ಸೆಳೆದಿದೆ.
ಮರಿಗಳನ್ನು ಬಿಟ್ಟು ಕದಲದ ದೊಡ್ಡ ಆನೆಗಳು
ಪ್ರವಾಹದ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದರೂ ವಯಸ್ಕ ಆನೆಗಳು ಮರಿಗಳನ್ನು ಏಕಾಂಗಿಯಾಗಿ ಬಿಡಲಿಲ್ಲ. ಅವುಗಳ ಸುತ್ತಲೂ ನಿಂತು ಮರಿಗಳಿಗೆ ರಕ್ಷಣೆ ನೀಡುವ ಮೂಲಕ ಸುರಕ್ಷಿತವಾಗಿ ದಡ ಸೇರುವಂತೆ ನೆರವಾದವು.
ಈ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ಬ್ಯಾರೇಜ್ ಗೇಟ್ಗಳನ್ನು ಬಂದ್ ಮಾಡಿದ ಅಧಿಕಾರಿಗಳು
ಆನೆಗಳ ಹಿಂಡು ಅಪಾಯದಲ್ಲಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬಳಿಕ ಗಿರ್ಜಾಪುರಿ ಬ್ಯಾರೇಜ್ನ ಗೇಟ್ಗಳನ್ನು ಮುಚ್ಚಲಾಗಿದ್ದು, ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ನೀರಿನ ರಭಸ ಕಡಿಮೆಯಾದ ಬಳಿಕ ವಯಸ್ಕ ಆನೆಗಳು ಚೇತರಿಸಿಕೊಂಡಿವೆ. ನಂತರ ಅವು ಎರಡು ಆನೆ ಮರಿಗಳನ್ನು ಸುರಕ್ಷಿತವಾಗಿ ದಂಡೆಯತ್ತ ಕರೆದೊಯ್ದಿವೆ.
ಸುರಕ್ಷಿತವಾಗಿ ಕಾಡಿಗೆ ಮರಳಿದ ಆನೆಗಳು
ಆನೆಗಳ ಹಿಂಡು ದಡ ತಲುಪಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಬ್ಯಾರೇಜ್ ಪ್ರದೇಶದಿಂದ ದೂರಕ್ಕೆ ಕಳುಹಿಸಿ ಸುರಕ್ಷಿತವಾಗಿ ಕಾಡಿನತ್ತ ಸಾಗುವಂತೆ ಮಾಡಿದ್ದಾರೆ.
ಆಪತ್ತಿನ ಸಮಯದಲ್ಲೂ ಮರಿಗಳನ್ನು ಬಿಟ್ಟು ಹೋಗದೆ ಅವುಗಳನ್ನು ಸುತ್ತುವರಿದು ರಕ್ಷಿಸಿದ ಆನೆಗಳ ವರ್ತನೆ ಸಾರ್ವಜನಿಕರ ಗಮನ ಸೆಳೆದಿದೆ. ಮತ್ತೊಂದೆಡೆ, ಪರಿಸ್ಥಿತಿಯನ್ನು ತ್ವರಿತವಾಗಿ ಅರಿತು ನೀರಾವರಿ ಇಲಾಖೆಯ ಸಹಕಾರದೊಂದಿಗೆ ಬ್ಯಾರೇಜ್ ಗೇಟ್ಗಳನ್ನು ಬಂದ್ ಮಾಡಿ ಆನೆಗಳ ಜೀವ ಉಳಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಗೂ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯ
Mysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ
ಮೈಸೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್ಶಿಪ್ ಭೂಸ್ವಾಧೀನ ವಿವಾದದ ಬೆನ್ನಲ್ಲೇ ಇದೀಗ Mysuru ಜಿಲ್ಲೆಯಲ್ಲೂ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 165 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದ್ದು, ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದ ಸಮೀಪದಲ್ಲಿರುವ ವರುಣಾ ಕ್ಷೇತ್ರದ ಮರಸೆ ಹಾಗೂ ಮದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಈ ಪ್ರದೇಶದ ಜಮೀನುಗಳಲ್ಲಿ ರೈತರು ಅಡಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಿವಿಧ ವಾಣಿಜ್ಯ ಹಾಗೂ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಫಲವತ್ತಾದ ಜಮೀನು ಕೈಗಾರಿಕೆಗೆ?
ತಮ್ಮ ಜೀವನಾಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ಜಮೀನುಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಸ್ಥಳೀಯ ರೈತರು ಪಟ್ಟುಹಿಡಿದಿದ್ದಾರೆ.
ವಿಮಾನ ನಿಲ್ದಾಣದ ಸಮೀಪವಿರುವ ಮರಸೆ-ಮದರಗಳ್ಳಿ ಭಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಉದ್ದೇಶದಿಂದ KIADB ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದಾಗಿ ತಿಳಿದುಬಂದಿದೆ. ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದರೆ ತಮ್ಮ ಕೃಷಿ ಮತ್ತು ಜೀವನೋಪಾಯಕ್ಕೆ ತೀವ್ರ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಡದಿ ಮಾದರಿಯಲ್ಲಿ ಮೈಸೂರಲ್ಲೂ ಹೋರಾಟ?
ಬೆಂಗಳೂರು ಸಮೀಪದ ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಮಾದರಿಯಲ್ಲೇ ಮೈಸೂರಿನಲ್ಲೂ ಪ್ರತಿಭಟನೆ ತೀವ್ರಗೊಳಿಸಲು ರೈತ ಸಂಘಟನೆಗಳು ಹಾಗೂ ಭೂಮಾಲೀಕರು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
165 ಎಕರೆ ಕೃಷಿ ಭೂಮಿ ಸ್ವಾಧೀನದ ವಿಚಾರ ಇದೀಗ ವರುಣಾ ಕ್ಷೇತ್ರದಲ್ಲಿ ರಾಜಕೀಯ ಹಾಗೂ ರೈತ ಹೋರಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸರ್ಕಾರದ ಭೂಸ್ವಾಧೀನ ಪ್ರಸ್ತಾವನೆಗೆ ರೈತರ ಪ್ರತಿಕ್ರಿಯೆ ಮತ್ತು ಮುಂದಿನ ಕ್ರಮಗಳತ್ತ ಇದೀಗ ಗಮನ ಹರಿದಿದೆ
-
ಬೆಂಗಳೂರು19 ಗಂಟೆಗಳು agoBengaluru ನಲ್ಲಿ ಖಾಲಿ ಸೈಟ್ ಮಾಲೀಕರಿಗೆ ಬಿಗ್ ಶಾಕ್: ಕಸ ತೆರವು ಮಾಡದಿದ್ದರೆ ₹38,400 ದಂಡ, ದೊಡ್ಡ ಸೈಟ್ಗೆ ಲಕ್ಷಕ್ಕೂ ಹೆಚ್ಚು!
-
ಬೆಂಗಳೂರು22 ಗಂಟೆಗಳು agoNalanda English Medium School ವಾರ್ಷಿಕೋತ್ಸವದಲ್ಲಿ ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನೃತ್ಯ ನಮನ
-
ದೇಶ22 ಗಂಟೆಗಳು agoMantralaya: ಇಂದಿನಿಂದ ಸಪ್ತರಾತ್ರೋತ್ಸವ ಆರಂಭ; ಮಹಾರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ
-
ದೇಶ20 ಗಂಟೆಗಳು agoNepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್
-
ಬೆಂಗಳೂರು23 ಗಂಟೆಗಳು agoEid Milad ಮೆರವಣಿಗೆ ಗಲಾಟೆ: ಪುನೀತ್ ಕೆರೆಹಳ್ಳಿ ಸೇರಿ ಹಲವರ ವಿರುದ್ಧ FIR, 6 ಮಂದಿ ಬಂಧನ
-
ರಾಜ್ಯ20 ಗಂಟೆಗಳು agoMysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ
-
ಬೆಂಗಳೂರು20 ಗಂಟೆಗಳು agoBengaluru ಪಾರ್ಕ್ ಜಾಗ ಬಳಕೆಗೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು, 6 ಪ್ರಮುಖ ಬೇಡಿಕೆ
-
ಬೆಂಗಳೂರು16 ಗಂಟೆಗಳು agoLiver ಚಿಕಿತ್ಸೆಗೆ ಗುಡ್ ನ್ಯೂಸ್: ಹಲವು ತಜ್ಞರು ಒಂದೇ ಕಡೆ, ರೋಗಿಗಳಿಗೆ ಸುಲಭ ಚಿಕಿತ್ಸೆ
