ರಾಜಕೀಯ
ನೈಸ್ ವಿಚಾರದಲ್ಲಿ ಸಣ್ಣ ಸಾಕ್ಷಿ ತೋರಿಸಿದರೂ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ : ಕುಮಾರಸ್ವಾಮಿ ಸವಾಲು
HD Kumaraswamy reaction on NICE: ನೈಸ್ ರಸ್ತೆ ವಿಚಾರದ ಬಗ್ಗೆ ಸಂಸದ ಡಿ ಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ರಾಜಕೀಯ ನಿವೃತ್ತಿಯ ಸವಾಲು ಹಾಕಿದ್ದಾರೆ.
ಬೆಂಗಳೂರು : ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲಿ ನೈಸ್ ಆಸ್ತಿ ಇಲ್ಲ. ಒಂದು ವೇಳೆ ನಮ್ಮ ಕುಟುಂಬದ ಒಬ್ಬರ ಹೆಸರಲ್ಲಿ ಜಮೀನು ಇದ್ದರೂ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ನಡೆಯುತ್ತಿರುವ ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನೈಸ್ ವಿಚಾರವಾಗಿ ಸಂಸದ ಡಿ ಕೆ ಸುರೇಶ್ ಹೇಳಿಕೆ ವಿಚಾರಕ್ಕೆ ಗರಂ ಆದರು. ನೈಸ್ ಕಂಪನಿಗೆ ಸಹಿ ಹಾಕಿದ್ದು ಯಾರು?. ಅವನ (ಒನರ್) ಜೊತೆ ಶಾಮೀಲಾಗಿ ಜಮೀನು ಹೊಡೀಲಿ ಅಂತ ದೇವೇಗೌಡರು ಸಹಿ ಹಾಕಿದರಾ?. ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ. ಸಹಿ ಯಾರು ಹಾಕಿದ್ದು ಗೊತ್ತಿದೆಯಾ ಅವನಿಗೆ. ಅವತ್ತಿನ ಯುಡಿ ಮಿನಿಸ್ಟರ್ ಯಾರು ಇದ್ದಿದ್ದು, ಇವನ ಅಣ್ಣನೇ ಅಲ್ವಾ, ಅವನೇ ತಾನೆ ಸಹಿ ಹಾಕಿದ್ದು. ಯಾರ ಹೆಸರಿಗೆ ಮಾಡಲು ಹೊರಟಿದ್ದೀರಾ, ನಿಮ್ಮ ಕುಟುಂಬಕ್ಕೆ ಮಾಡಲು ಹೊರಟಿದ್ದೀರಾ?. ನಮ್ಮ ಬಗ್ಗೆ ಮಾತಾಡ್ತೀರಾ ನೀವು ಎಂದು ಏಕವಚನದಲ್ಲೇ ಡಿಕೆ ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯವನ್ನು ಮಾರಾಟ ಮಾಡುತ್ತಿದ್ದಾರೆ: ಶಿಕ್ಷಣ ಇಲಾಖೆಯಲ್ಲಿ ಡಿಕೆಶಿ ಸಭೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ಕೊಡಲು ಹೊರಟಿದ್ದಾರಾ ಇವರು?. ನನಗೆ ಜನ ವಿರಾಮ ಕೊಟ್ಟಿದ್ದಾರಂತೆ ಅಂತ ಇವರು ಹೇಳುತ್ತಿದ್ದಾರೆ. ನೀವು ಬೆದರಿಕೆ ಹಾಕಲು ಬರಬೇಡಿ, ಗುತ್ತಿಗೆದಾರರಿಗೆ ಬೆದರಿಕೆ ಹಾಕಿದಂತೆ ನನಗೆ ಹಾಕಲು ಆಗಲ್ಲ. ನೀವು, ನಿಮ್ಮಣ್ಣ ನಮಗೆ ಬೆದರಿಕೆ ಹಾಕಲು ಆಗಲ್ಲ ಎಂದು ಕಿಡಿಕಾರಿದರು.
40 ಪರ್ಸೆಂಟ್ ಸರ್ಕಾರ ಅನ್ನುವ ಆರೋಪ ತನಿಖೆಗೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, 2016 -17ರಲ್ಲಿ ಜಾಬ್ ಕಾರ್ಡ್ದು ನಾಗಮೋಹನ್ ಅವರ ಬಳಿ ತನಿಖೆ ಮಾಡಿಸಿದ್ದರು. ಅದು ಎಲ್ಲಿದೆ, ಹಾಗಾದರೆ ವರದಿ ಏನು?. ವೀರಪ್ಪ ನೇತೃತ್ವದಲ್ಲಿ ಅಂದರು, ಆದರೆ ಬಹುಶಃ ಒಪ್ಪಿಲ್ಲ ಅನಿಸುತ್ತದೆ. ಹಾಗಾಗಿ ಇವರಿಗೆ ವಹಿಸಿದ್ದಾರೆ ಅನಿಸುತ್ತದೆ. ನಾಗಮೋಹನ್ ದಾಸ್ ಅವರ ಕೈಯಲ್ಲಿ ತನಿಖೆ ಮಾಡಿಸಿ, ಆ ವರದಿ ಹಾಗೆ ಇಟ್ಟುಕೊಳ್ತೀರಾ ಅಷ್ಟೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾವೇರಿ ನೀರು ಹರಿಸುವ ವಿಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
ಲೂಟಿ ಹೊಡೆಯುವ ಕೆಲಸಕ್ಕೆ ಪ್ರಕೃತಿ ಸಹಕಾರ ಇಲ್ಲ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರ ಕಾಲದಲ್ಲಿ ನೀರು ಬಿಟ್ಟಿಲ್ವಾ ಅಂತ ಪ್ರಶ್ನೆ ಮಾಡ್ತಾ ಇದ್ದಾರಲ್ಲಾ?. ನಾನು ಇದ್ದಾಗ ಯಥೇಚ್ಛವಾಗಿ ನೀರು ಹರಿಸಲಾಗಿದೆ. ಅವರ ಪಾಪದ ಕೆಲಸ, ಲೂಟಿ ಹೊಡೆಯುವ ಕೆಲಸಕ್ಕೆ ಪ್ರಕೃತಿ ಸಹಕಾರ ಇಲ್ಲ ಎಂದರು.
ನೈತಿಕತೆ ಇಲ್ಲ : ಕೋರ್ಟ್ ಆದೇಶ ಕೊಟ್ಟಾಗ ದೇವೇಗೌಡರು ನೀರು ಬಿಟ್ಟಿದ್ದರು. ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ದೇವೇಗೌಡರು ನೀರು ಬಿಟ್ಟಿಲ್ಲ. ಕಾವೇರಿ ವಿಚಾರದಲ್ಲಿ ರೈತರ ಹಿತಾಸಕ್ತಿ ನೋಡಿದ್ದರೆ ಅದು ದೇವೇಗೌಡರು ಮಾತ್ರ. ಅವರ ಬಗ್ಗೆ ಮಾತನಾಡುವುದಕ್ಕೆ ಯಾರಿಗೂ ನೈತಿಕತೆ ಇಲ್ಲ. ಸುಪ್ರೀಂಕೋರ್ಟ್ಗೆ ಹೋಗಿ ತಕರಾರು ತೆಗೆದಾಗ ದೇವೇಗೌಡರು ಒಂದಿಷ್ಟು ಸಲಹೆ ಕೊಟ್ಟಿದ್ದರು ಎಂದು ಕುಮಾರಸ್ವಾಮಿ ಹೇಳಿದರು.
ಮೇಕೆದಾಟು ಪಾದಯಾತ್ರೆ ಏನಾಯ್ತು? : ಮೇಕೆದಾಟು ಪಾದಯಾತ್ರೆ ಮಾಡಿದ್ದು ಏನಾಯ್ತು?. ಕೇವಲ ಚಿಕನ್, ಮಟನ್ ತಿಂದು ಹೋರಾಟ ಮಾಡಿದ್ದಷ್ಟೆ. ಬಂದ ನಾಯಕರಿಗೆ ಚಿಕನ್ ಲೆಗ್ ಕೊಟ್ಟಿದ್ದಷ್ಟೆ. ಇವರ ಸ್ನೇಹಿತ ಅಲ್ವೇ ಸ್ಟಾಲಿನ್, ಅವರ ಜೊತೆ ಮಾತಾಡಲಿ. ನಮ್ಮಲ್ಲಿ ಇನ್ನೂ ಮೊದಲ ಬೆಳೆ ಕೂಡ ಬೆಳೆಯಲಾಗಿಲ್ಲ. ಅಲ್ಲಿ ನಾಲ್ಕು ಲಕ್ಷ ಎಕರೆಗೆ ಸೌಲಭ್ಯ ಪಡೆದುಕೊಂಡಿದ್ದಾರೆ. ಈಗ ನಮ್ಮ ರೈತರಿಗೆ ಸಮಸ್ಯೆ ಆಗಿದೆ. ರೆಡ್ ಕಾರ್ಪೆಟ್ ಹಾಕಿ ಸ್ಟಾಲಿನ್ ಅವರಿಗೆ ಸ್ವಾಗತ ಮಾಡಿದ್ದಾರೆ. ನನಗೂ ಒಮ್ಮೆ ಪೆನ್ ಕೊಡಿ ಅಂತಿದ್ದಾರೆ. ಪೆನ್ ಯಾಕೆ ಇಂತಹ ಕೆಲಸ ಮಾಡಲಿಕ್ಕಾ? ಎಂದು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಹೆಚ್ಡಿಕೆ, ನಾವು ವಿಪಕ್ಷದಲ್ಲಿ ಇರುವುದೇ ರಾಜಕೀಯ ಮಾಡುವುದಕ್ಕೆ, ಅವರು ಮಾಡುತ್ತಿರುವುದು ಏನು?. ಇವರಿಗೆ ನಮ್ಮ ರೈತರ ಮೇಲೆ ಔದಾರ್ಯ ಇಲ್ಲ. ಪೆನ್ ಕೊಡಿ ಅಂದ್ರಲಾ ಇದಕ್ಕಾ?. ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡಮಾನ ಇಡಲು ಹೊರಟಿದ್ದಾರೆ. ಇದಕ್ಕೇನಾ ನೀವು ಪೆನ್ ಕೇಳಿದ್ದು? ಎಂದು ಪ್ರಶ್ನಿಸಿದರು.
ಇಂಡಿಯಾ ಮೈತ್ರಿ ಕೂಡ ಸಂಬಂಧ ಓಲೈಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ, ಯಾವುದಕ್ಕೆ ಓಲೈಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಸುಪ್ರೀಂ ಮುಂದೆ ತಮಿಳುನಾಡಿನವರು ಮತ್ತೊಂದು ಅರ್ಜಿ ಹಾಕುತ್ತಾರೆ. ಆಗ ಏನು ಮಾಡ್ತೀರಾ? ಎಂದು ಪ್ರಶ್ನಿಸಿದರು.
ದೇಶ
ಜಮೀರ್ ಅಹ್ಮದ್ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರಿಯ ನಾಯಕನಾಗಿ ಹೊರಹೊಮ್ಮುತ್ತಿರುವ ವಸತಿ ಸಚಿವ Zameer Ahmed Khan ಅವರಿಗೆ ಎಐಸಿಸಿಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಅವರ ಪ್ರಭಾವವನ್ನು ಗಮನಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ K. C. Venugopal ಈ ನಿರ್ಧಾರ ಕೈಗೊಂಡಿದ್ದಾರೆ.
ಪ್ರಸ್ತುತ ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಜಮೀರ್ ಅಹ್ಮದ್, ರಾಜ್ಯದ ಉಪಚುನಾವಣೆಗಳ ಪ್ರಚಾರಕ್ಕೆ ಬರಲು ಸಾಧ್ಯವಾಗದೇ ಬ್ಯುಸಿಯಾಗಿದ್ದಾರೆ. ಕೇರಳದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಅಲ್ಲಿಯೇ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಭಾಗವಹಿಸಲು ಜಮೀರ್ ಅವರಿಗೆ ಆಹ್ವಾನ ನೀಡಲಾಗಿದ್ದರೂ, ಕೇರಳದ ಪ್ರಚಾರ ಕಾರ್ಯದಿಂದ ಬಿಡುವಿಲ್ಲ ಎಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ Siddaramaiah ಸೂಚನೆ ಇದ್ದರೂ, ಎಐಸಿಸಿ ನಾಯಕತ್ವದಿಂದಲೇ ತಡೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೂ ನಡುವೆ, ಎಐಸಿಸಿ ಅಲ್ಪಸಂಖ್ಯಾತ ಘಟಕದ ಸಲಹಾ ಪರಿಷತ್ತಿನ ಸದಸ್ಯರಾಗಿ ಜಮೀರ್ ಅಹ್ಮದ್ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿಗೆ ಕೇರಳದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಭವಿಷ್ಯದಲ್ಲಿ ನಾಯಕತ್ವದ ಮಟ್ಟದಲ್ಲೂ ಬದಲಾವಣೆ ಸಾಧ್ಯತೆಗಳಿವೆ ಎಂಬ ಚರ್ಚೆ ನಡೆಯುತ್ತಿದೆ.
ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಈ ನೇಮಕಾತಿ ನಡೆದಿದ್ದು, ಜಮೀರ್ ಅವರ ಜನಪ್ರಿಯತೆ ದಿನೇದಿನೇ ಏರುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯದಲ್ಲೂ ಉಪಚುನಾವಣೆಗಳ ನಡುವೆ ಅವರ ಗೈರುಹಾಜರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ದೇಶ
ಸೋಮಣ್ಣ ವಿರುದ್ಧ ಸಿಎಂ ಸಿಡಿತ: “ಕೆಲಸವಿಲ್ಲದ ಮಂತ್ರಿ!”
ಬಾಗಲಕೋಟೆ: ಬಿಜೆಪಿ ನಾಯಕ V. Somanna ವಿರುದ್ಧ ಮುಖ್ಯಮಂತ್ರಿ Siddaramaiah ತೀವ್ರ ವಾಗ್ದಾಳಿ ನಡೆಸಿದ್ದು, “ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದ ಮಂತ್ರಿ, ಅವರಿಗೆ ಯಾವುದೇ ಕಡತ ಹೋಗುವುದಿಲ್ಲ” ಎಂದು ಟೀಕಿಸಿದರು.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಸಿಎಂ, “ನಾವು ಸೋಲುತ್ತೇವೆ ಎಂಬ ಭಯದಿಂದ ಬಿಜೆಪಿ ನಾಯಕರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯವಿಲ್ಲ” ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳ ಸ್ಥಾನ ಕುರಿತು ಬಿಜೆಪಿ ನಾಯಕರು ಮಾತನಾಡುವುದಕ್ಕೆ ಯಾವುದೇ ಅರ್ಥವಿಲ್ಲ, ಅವರು ಕಾಂಗ್ರೆಸ್ ಹೈಕಮಾಂಡ್ ಅಲ್ಲ ಎಂದರು.
ಬಿಜೆಪಿಯ ಮೇಲೆ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, “ಬಿಜೆಪಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಾತಿನಲ್ಲಿ ಸತ್ಯವಿಲ್ಲ, ನಡೆದಲ್ಲಿ ನಂಬಿಕೆ ಇಲ್ಲ” ಎಂದು ಟೀಕಿಸಿದರು. ಜೊತೆಗೆ, ಪಕ್ಷದಿಂದ ಉಚ್ಛಾಟನೆಯಾದ Basanagouda Patil Yatnal ಅವರನ್ನು ಮತ್ತೆ ಪ್ರಚಾರಕ್ಕೆ ಕರೆತಂದು ಬಳಸಿಕೊಳ್ಳುತ್ತಿರುವುದು ಬಿಜೆಪಿ ದ್ವಂದ್ವ ನೀತಿಗೆ ಉದಾಹರಣೆ ಎಂದು ಹೇಳಿದರು.
ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ಸಮಸ್ಯೆ ಕುರಿತು ಮಾತನಾಡಿದ ಅವರು, “ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇವಲ ವಿತರಣೆಯನ್ನು ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ Narendra Modi ಅವರ ಮನೆಗೆ ಮುತ್ತಿಗೆ ಹಾಕಬೇಕು ಎಂಬ ಹೇಳಿಕೆಯನ್ನೂ ನೀಡಿದರು.
ಇನ್ನೂ, ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, Rahul Gandhi, Sonia Gandhi, Mallikarjun Kharge ಮತ್ತು Priyanka Gandhi ಅವರೇ ಪಕ್ಷದ ಹೈಕಮಾಂಡ್ ಎಂದು ಹೇಳಿದರು.
ಒಟ್ಟಿನಲ್ಲಿ, ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.
ದೇಶ
ಟೂಲ್ಕಿಟ್ ದಾಳಿ ಆರೋಪ: ಖರ್ಗೆ ಎಕ್ಸ್ ವಿರುದ್ಧ ಗಂಭೀರ ಪ್ರಶ್ನೆ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷದ ನಾಯಕರ ಖಾತೆಗಳ ವಿರುದ್ಧ ಟೂಲ್ಕಿಟ್ ಮೂಲಕ ಸಂಘಟಿತವಾಗಿ ರಿಪೋರ್ಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಸಚಿವ Priyank Kharge ಮಾಡಿದ್ದಾರೆ. ಈ ಕುರಿತು ಅವರು X (ಹಳೆಯ ಟ್ವಿಟ್ಟರ್) ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ನನ್ನನ್ನೂ ಒಳಗೊಂಡಂತೆ ಅನೇಕ ವಿರೋಧ ಪಕ್ಷದ ನಾಯಕರ ಖಾತೆಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಟೂಲ್ಕಿಟ್ ಮೂಲಕ ಪೋಸ್ಟ್ಗಳ ಮೇಲೆ ಸಾಮೂಹಿಕವಾಗಿ ರಿಪೋರ್ಟ್ ಮಾಡುವುದರಿಂದ ಅವುಗಳ ರೀಚ್ ಕಡಿಮೆಯಾಗುತ್ತಿದೆ. ಫೀಡ್ಗಳಲ್ಲಿ ಗೋಚರತೆ ಕುಸಿಯುತ್ತಿದೆ” ಎಂದು ಖರ್ಗೆ ಆರೋಪಿಸಿದ್ದಾರೆ. ಜೊತೆಗೆ, ಎಕ್ಸ್ ಪ್ಲಾಟ್ಫಾರ್ಮ್ ಸ್ವಯಂ ಅಥವಾ ಹೊರಗಿನ ಒತ್ತಡದಿಂದ ಈ ರೀತಿಯ ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
ಈ ಆರೋಪಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕ Shashi Tharoor ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ. “ಸುಮಾರು ಆರು ವರ್ಷಗಳ ಹಿಂದೆ ನನ್ನ ಫಾಲೋವರ್ಸ್ ಸಂಖ್ಯೆ 8.4 ಮಿಲಿಯನ್ ತಲುಪಿತ್ತು. ಪ್ರತಿದಿನ ಸಾವಿರಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರುತ್ತಿದ್ದರೂ, ಒಟ್ಟು ಸಂಖ್ಯೆ ಕುಸಿಯುತ್ತಿತ್ತು” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಟ್ವೀಟ್ಗಳು ತಮ್ಮ ಫಾಲೋವರ್ಸ್ಗಳಿಗೆ ತಲುಪುತ್ತಿಲ್ಲ, ಹೊಸ ಖಾತೆ ತೆರೆದರೂ ರಿಕಮೆಂಡ್ ಆಗುವುದಿಲ್ಲ ಎಂಬ ಗಂಭೀರ ತಾಂತ್ರಿಕ ಸಮಸ್ಯೆಗಳನ್ನೂ ತರೂರ್ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಿದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಆರೋಪಗಳು ಸಾಮಾಜಿಕ ಜಾಲತಾಣಗಳ ನಿಷ್ಪಕ್ಷಪಾತತೆ ಕುರಿತು ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ನೆಟ್ಟಿಗರೂ ಈ ವಿಷಯದ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ವಿಪಕ್ಷಗಳು ತಕ್ಕ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದ್ದಾರೆ.
-
ಚುನಾವಣೆ16 hours ago“ನಾಲ್ಕು ಮದುವೆಗೆ ಬ್ರೇಕ್” – ಶಾ ಘೋಷಣೆ ಸಂಚಲನ
-
ದೇಶ12 hours agoಪ್ರಚಾರ ವೇಳೆ ಕಾರು ತಡೆದು ಹಲ್ಲೆ: ತರೂರ್ ಬೆಂಗಾವಲು ಮೇಲೆ ದಾಂಧಲೆ
-
ದೇಶ11 hours agoಜಮೀರ್ ಅಹ್ಮದ್ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!
-
ದೇಶ5 hours agoಹಳೆಯ ವಾಹನಗಳಿಗೆ HSRP ಕಡ್ಡಾಯವೇ? ಸಾರಿಗೆ ಇಲಾಖೆಯ ಸ್ಪಷ್ಟನೆ ಏನು ಗೊತ್ತಾ?
-
ದೇಶ7 hours agoಕಾಂಗ್ರೆಸ್ ಒಳಜಗಳ ಬಯಲು: ರಾಹುಲ್ ನಿಲುವಿಗೆ ಹಿರಿಯರ ವಿರೋಧ
-
ಆರೋಗ್ಯ10 hours agoಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?
-
ಕ್ರೀಡೆ11 hours ago“ಆ ಮಾತುಗಳು ನನ್ನದಲ್ಲ”: ಯುವಿ ಸ್ಪಷ್ಟನೆ, ಧೋನಿ-ಕಪಿಲ್ಗೆ ಕ್ಷಮೆ
-
ದೇಶ7 hours agoಇರಾನ್-ಅಮೆರಿಕಾ ಮಾತುಕತೆ ವಿಫಲ: ಪಾಕಿಸ್ತಾನಕ್ಕೆ ಮುಖಭಂಗ!
