ಅಪರಾಧ
ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಸಂಕಷ್ಟ ಫಿಕ್ಸ್..! ಜೀವಾವಧಿ ಸೇರಿ ಯಾವ್ಯಾವ ಶಿಕ್ಷೆ..?
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ನಟ ದರ್ಶನ್ ಮುಳುವಾಗಿ ಪರಿಣಮಿಸುತ್ತಿದೆ. ಪೊಲೀಸರ ಕಸ್ಟಡಿಯಲ್ಲಿರುವ ದರ್ಶನ್ಗೆ ನರಕದರ್ಶನ ಆಗ್ತಿದೆ. ಈಗಾಗ್ಲೇ ಹತ್ಯೆ ಮಾಡಿದ ಆರೋಪ ಸುತ್ಕೊಂಡ ಪಾಪಕ್ಕೆ ಜೀವಾವಧಿ ನೀಡಬಹುದಾದ IPC 302 ಸೆಕ್ಷನ್ ದಾಖಲಾಗಿದೆ. ಪ್ರಾಥಮಿಕವಾಗಿ 302 ಅಂಡ್ 201 ಅಡಿ ಕೇಸ್ ದಾಖಲಾಗಿದೆ. ಮುಂದೆ 364, 120ಬಿ ಸೆಕ್ಷನ್ಗಳು ಸೇರಿಸೋ ಸಾಧ್ಯತೆಯೂ ಇದೆ..
ಯಾವ್ಯಾವ ಶಿಕ್ಷೆ?
- ಶಿಕ್ಷೆ 01 : IPC 201 ಅಡಿ ಸಾಕ್ಷಿ ತಿರುಚುವುದು ಅಥವಾ ನಾಶ ಯತ್ನಕ್ಕೆ ಜೀವಾವಧಿ
- ಶಿಕ್ಷೆ 02 : IPC 364 ಅಡಿ ಜೀವಾವಧಿ ಅಥವಾ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
- ಶಿಕ್ಷೆ 03 : IPC 120ಬಿ ಸೇರಿಸಿದ್ರೆ ಜೀವಾವಧಿ ಅಥವಾ 10 ವರ್ಷ ಕಠಿಣ ಸೆರೆಯ ಸಜೆ.
- IPC 201 ಅಡಿ ಸಾಕ್ಷಿ ತಿರುಚುವುದು, ಸಾಕ್ಷ್ಯ ನಾಶಕ್ಕೆ ಯತ್ನಿಸಿರೋದು ಜೀವಾವಧಿ ಸಜೆ ಆಗಬಹುದು.. IPC 364 ಅಡಿ ಜೀವಾವಧಿ ಅಥವಾ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆಗೂ ಅವಕಾಶ ಇದೆ.. IPC 120ಬಿ ಸೇರಿಸಿದ್ರೆ ಜೀವಾವಧಿ ಅಥವಾ10 ವರ್ಷ ಕಠಿಣ ಸೆರೆವಾಸ ಆಗಲಿದೆ. ಇದು ಸದ್ಯ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ದಾಖಲಾದ ಮತ್ತು ದಾಖಲಾಗಲಿರುವ ಸೆಕ್ಷನ್ಗಳು.. ಹಾಗಾದ್ರೆ, ದರ್ಶನ್ ವಿರುದ್ಧ ಅಷ್ಟು ಬಲವಾದ ಸಾಕ್ಷ್ಯಗಳು ಸಿಕ್ಕಿ ಬಿಟ್ವಾ?
- ದರ್ಶನ್ ಬಗ್ಗೆ ಇರುವ ಸಾಕ್ಷಿ
- ಸಾಕ್ಷಿ 1 : ಶೆಡ್ಗೆ ದರ್ಶನ್ ಬಂದು ಹೋಗಿರುವ ಸಿಸಿಟಿವಿ ದೃಶ್ಯಗಳು
- ಸಾಕ್ಷಿ 2 : ದರ್ಶನ್ನ CDR ರಿಪೋರ್ಟ್ ಸಹ ಸ್ಪಷ್ಟವಾಗಿ ಹೋಲಿಕೆ
- ಸಾಕ್ಷಿ 3 : ದರ್ಶನ್ಗೆ ರೇಣುಕಾಸ್ವಾಮಿ ಕರೆತಂದ ಬಗ್ಗೆ ಫೋನ್ ಕಾಲ್
- ಸಾಕ್ಷಿ 4 : ಆರೋಪಿ ವಿನಯ್ ಕಾಲ್ ಮಾಡಿ ಮಾಹಿತಿ ಕೊಟ್ಟ ಡಿಟೇಲ್ಸ್
- ಸಾಕ್ಷಿ 5 : ಆದಾದ ಬಳಿಕ ಪವಿತ್ರಗೌಡಗೆ ಕರೆ ಮಾಡಿರೋದು ಸಹ ಪತ್ತೆ
- ಸಾಕ್ಷಿ 6 : ಪವಿತ್ರಾ ಮನೆ ಬಳಿ ಹೋಗಿ ದರ್ಶನ್ ಕರೆತಂದ ಸಾಕ್ಷಿ ಲಭ್ಯ
- ಸಾಕ್ಷಿ 7 : ಈ ಬಗ್ಗೆ ಸಿಡಿಆರ್ ಮತ್ತು ಸಿಸಿಟಿವಿ ಸಾಕ್ಷಿಗಳು ಪತ್ತೆಯಾಗಿವೆ
- ಸಾಕ್ಷಿ 8 : ಮಹಜರ್ ವೇಳೆ ಪಂಚರ ಮುಂದೆ ದರ್ಶನ್ ಒಪ್ಪಿದ ಹೇಳಿಕೆ
- ಇವು ಟೆಕ್ನಿಕಲ್ ಎವಿಡೆನ್ಸ್.. ಇದಷ್ಟೇ ಅಲ್ಲ.. ಕೊಲೆಯಲ್ಲಿ ಭಾಗಿಯಾದ ಬಗ್ಗೆಯೂ ಸಾಕ್ಷಿಗಳು ಸಿಕ್ಕಿವೆ.. ಅವು ಕೂಡ ದರ್ಶನ್ ವಿರುದ್ಧವೇ ಸಾಕ್ಷಿ ನುಡಿತಿವೆ.
- ದರ್ಶನ್ ಕೊಲೆಯಲ್ಲಿ ಭಾಗಿಗೆ ಸಾಕ್ಷಿ
ಸ್ವತಃ ದರ್ಶನ್ ಬಗ್ಗೆ ಆತನ ಅಪ್ತ ವಿನಯ್ ಕೊಟ್ಟ ಹೇಳಿಕೆ ಮುಳುವಾಗಿದೆ. ದರ್ಶನ್ ಹೊಡೆದಾಗಲೇ ರೇಣುಕಾ ಸತ್ತಿದ್ದು ಅಂತ ವಿನಯ್ ಹೇಳಿಕೆ ನೀಡಿದ್ದಾನೆ. ಅಲ್ಲದೆ, ದರ್ಶನ್ ಹಲ್ಲೆ ಮಾಡಿರೋ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಆರೋಪಿ ದೀಪಕ್ ಹಲ್ಲೆ ಮಾಡಿದ ವಿಡಿಯೋ ರೆಕಾರ್ಡ್ ಮಾಡ್ಕೊಂಡಿದ್ದಾನೆ. ಸದ್ಯ ಇದೇ ದೀಪಕ್ನಿಂದ 164 ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.. ಮಹಜರ್ ವೇಳೆ ಆತನ ಎತ್ತಿ ಎಸೆದ ಬಗ್ಗೆ ಹತ್ಯೆ ಆರೋಪಿ ದರ್ಶನ್ ಒಪ್ಪಿದ್ದು, ಟೆಂಪೋ ಟ್ರಾವೆಲ್ಲರ್ಗೆ ರೇಣುಕಾ ತಲೆ ಬಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.. ಅಲ್ಲದೇ ಶೆಡ್ನಲ್ಲಿ ಮೃತನ ಬಯೋಲಾಜಿಕಲ್ ಎವಿಡೆನ್ಸ್ ಸಿಕ್ಕಿವೆ.. ಮೃತನ ರಕ್ತ, ಫಿಂಗರ್ ಪ್ರಿಂಟ್, ಕೂದಲು ಮತ್ತು ಚರ್ಮದ ತುಂಡು ಲಭ್ಯ ಆಗಿವೆ.ಈ ಮೂಲಕ ರೇಣುಕಾಸ್ವಾಮಿ ಶೆಡ್ನಲ್ಲೇ ಸತ್ತಿದ್ದು ಕನ್ಫರ್ಮ್ ಆಗಿದೆ.. ಜತೆಗೆ ಹಲ್ಲೆ ಮಾಡಿದ ವೆಪನ್ಸ್ಗಳು ಸೀಜ್ ಮಾಡ್ಲಾಗಿದೆ. - ಹಲ್ಲೆ ಮಾಡಿದ ವೆಫನ್ಸ್ ಸೀಜ್
- ರಿಪೀಸ್, ಸ್ಟಿಕ್ ಮತ್ತು ಹಗ್ಗದಿಂದ ಹಲ್ಲೆ ಮಾಡಲಾಗಿತ್ತು.. ಸದ್ಯ ಆ ರಿಪೀಸ್, ಸ್ಟಿಕ್ ಮತ್ತು ಹಗ್ಗವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ರೇಣುಕಾ ಮೃತದೇಹದಲ್ಲಿ ದರ್ಶನ್ ಪಿಂಗರ್ ಪ್ರಿಂಟ್ ಸಹ ಪತ್ತೆ ಆಗಿದೆ.. ಅಲ್ಲದೇ ವೆಪನ್ ಮೇಲೂ ದರ್ಶನ್ ಪಿಂಗರ್ ಪ್ರಿಂಟ್ ಇದೆ.. ಇನ್ನು, ಟೆಂಪೋ ಟ್ರಾವೆಲ್ಲರ್, ಕೃತ್ಯಕ್ಕೆ ಬಳಸಿದ ವಾಹನಗಳನ್ನ ಸೀಜ್ ಮಾಡ್ಲಾಗಿದೆ. ಈ ಪ್ರಕರಣದಲ್ಲಿ ತುಂಬಾ ಇಂಪಾರ್ಟೆಂಟ್ ಅಂದ್ರೆ ಮರಣೊತ್ತರ ಪರೀಕ್ಷೆ.. ಈ ಪರೀಕ್ಷೆಯಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡ್ಲಾಗಿದೆ ಅಂತ ವರದಿ ನೀಡ್ಲಾಗಿದೆ. ಕುತ್ತಿಗೆ, ಮೂಗು ಕಟ್ ಆಗಿದೆ, ತಲೆ ಒಡೆದಿದೆ. ದೇಹಕ್ಕೆ ಬರೆ ಹಾಕಿರೋ ಬಗ್ಗೆಯೂ ಗೊತ್ತಾಗಿದೆ. ಪೋಸ್ಟ್ಮಾರ್ಟ್ಂ ರಿಪೋರ್ಟ್ನಲ್ಲಿ 15ಕ್ಕೂ ಹೆಚ್ಚು ಕಡೆ ಗಾಯಗಳು ಪತ್ತೆ ಆಗಿವೆ. ಸದ್ಯ ದರ್ಶನ್ನ ಅಟ್ಟಹಾಸ, ಜೈಲು ದರ್ಶನವಾಗಿದೆ.
ಅಪರಾಧ
ಲೋಕಾಯುಕ್ತ ಬಿಗ್ ಶಾಕ್: 3 ಅಧಿಕಾರಿಗಳ ಮನೆ-ಕಚೇರಿಗಳ ಮೇಲೆ ಏಕಕಾಲದ ದಾಳಿ, 14 ಕಡೆ ದಾಖಲೆಗಳ ಪರಿಶೀಲನೆ
ದಾವಣಗೆರೆ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಮುಂಜಾನೆ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಸೇರಿದಂತೆ ಒಟ್ಟು 14 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ 12 ವಿಶೇಷ ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಮಹತ್ವದ ದಾಖಲೆಗಳು, ಆಸ್ತಿ ವಿವರಗಳು ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯೂಕೆಆರ್ಟಿಸಿ) ಮುಖ್ಯ ಯಾಂತ್ರಿಕ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್, ಚಿತ್ರದುರ್ಗ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಹಾಗೂ ಬೆಳಗಾವಿಯ ಕೆಆರ್ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರ ವಿರುದ್ಧದ ಆರೋಪಗಳ ಆಧಾರದ ಮೇಲೆ ಈ ದಾಳಿ ನಡೆದಿದೆ.
ಸಿದ್ದೇಶ್ವರ ಹೆಬ್ಬಾಳ್ ಅವರಿಗೆ ಸಂಬಂಧಿಸಿದ ದಾವಣಗೆರೆಯ ಆಂಜನೇಯ ಬಡಾವಣೆಯ ನಿವಾಸ ಹಾಗೂ ಹುಬ್ಬಳ್ಳಿ ಕಚೇರಿ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕೃಷ್ಣ ನಾಯ್ಕ್ ಅವರಿಗೆ ಸೇರಿದ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆ ಮನೆ ಮತ್ತು ಚಿತ್ರದುರ್ಗ ಕಚೇರಿ ಸೇರಿ ಐದು ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಇದೇ ವೇಳೆ, ಕೆಆರ್ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರಿಗೆ ಸಂಬಂಧಿಸಿದ ದಾವಣಗೆರೆ ಹಾಗೂ ಬೆಳಗಾವಿಯ ಮನೆಗಳು ಸೇರಿದಂತೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.
ಆದಾಯಕ್ಕೆ ಮೀರಿದ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆಯಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಈ ಕಾರ್ಯಾಚರಣೆ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಪ್ರಕರಣಗಳ ವಿರುದ್ಧ ಲೋಕಾಯುಕ್ತದ ಕಟ್ಟುನಿಟ್ಟಿನ ಕ್ರಮ ಮತ್ತೆ ಸುದ್ದಿಯಾಗಿದೆ.
ಅಪರಾಧ
ಪುಣೆಯಲ್ಲಿ ಐಟಿ ಇಂಜಿನಿಯರ್ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ
ಪುಣೆ: ಮಹಾರಾಷ್ಟ್ರದ ಪುಣೆಯ ಹಿಂಜಾವಡಿಯಲ್ಲಿರುವ Tata Consultancy Services (ಟಿಸಿಎಸ್) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಐಟಿ ಇಂಜಿನಿಯರ್ ಅಮಿತ್ ಅಭಯ್ ಬ್ರಾಹ್ಮೆ ಅವರ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆತ್ಮಹತ್ಯೆಗೆ ಮುನ್ನ ಅವರು ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ನೋಟ್ ಆಧಾರದ ಮೇಲೆ ಕಂಪನಿಯ ಮೂವರು ಹಿರಿಯ ಉದ್ಯೋಗಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜೂನ್ 2ರಂದು ಅಮಿತ್ ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತನಿಖೆ ವೇಳೆ ಅವರ ಕೋಣೆಯಲ್ಲಿ ಎರಡು ಪುಟಗಳ ಪತ್ರ ಪತ್ತೆಯಾಗಿದ್ದು, ಅದರಲ್ಲಿ ತಮ್ಮ ಸಾವಿಗೆ ಕೆಲ ಹಿರಿಯ ಅಧಿಕಾರಿಗಳ ವರ್ತನೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಪತ್ರದಲ್ಲಿ ಉಲ್ಲೇಖಿಸಲಾದ ಆರೋಪಗಳ ಆಧಾರದ ಮೇಲೆ ಅರ್ಚನಾ, ಶಾಶ್ವತಿ ಹಾಗೂ ವಿನೋದ್ ಪಾಲಿಚಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದೂರು ದಾಖಲಾಗಿದೆ.
ಅಮಿತ್ ಅವರು ಪತ್ರದಲ್ಲಿ, ತಾವು ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಯೋಜನೆಗಳನ್ನು ತಮ್ಮಿಂದ ತೆಗೆದು ಕಠಿಣ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ನೀಡಲಾಗುತ್ತಿತ್ತು ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಸಹೋದ್ಯೋಗಿಗಳ ಮುಂದೆ ಅವಮಾನ ಮಾಡುವುದು ಹಾಗೂ ನಿರಂತರ ಒತ್ತಡ ಹೇರುವುದು ತಮ್ಮ ಮೇಲೆ ಮಾನಸಿಕ ಪರಿಣಾಮ ಬೀರಿತ್ತು ಎಂದು ಆರೋಪಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ತನಿಖೆ ಪ್ರಗತಿಯಲ್ಲಿದ್ದು ಸದ್ಯ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಗೆ ಐಟಿ ನೌಕರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಕಳೆದ ಕೆಲ ತಿಂಗಳಲ್ಲಿ ಇದೇ ಸಂಸ್ಥೆಗೆ ಸಂಬಂಧಿಸಿದ ಮತ್ತೊಂದು ಉದ್ಯೋಗಿ ಸಾವಿನ ಘಟನೆ ಕೂಡ ನಡೆದಿರುವ ಹಿನ್ನೆಲೆಯಲ್ಲಿ, ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ಕೆಲಸದ ಒತ್ತಡದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ಸೂಚನೆ: ಈ ಪ್ರಕರಣದ ಆರೋಪಗಳು ತನಿಖೆಯ ಹಂತದಲ್ಲಿದ್ದು, ಸಂಬಂಧಿತ ವ್ಯಕ್ತಿಗಳ ವಿರುದ್ಧದ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.
ಅಪರಾಧ
ಬೆಂಗಳೂರು ರಸ್ತೆ ದುರಂತ: ಬೈಕ್ಗೆ ಲಾರಿ ಢಿಕ್ಕಿ, ಸ್ಥಳದಲ್ಲೇ ಮಹಿಳೆ ಸೇರಿ ಇಬ್ಬರು ಸಾವು
ಬೆಂಗಳೂರು: ನಗರದ ಗೊರಗುಂಟೆಪಾಳ್ಯದ ಟಿಎಂಟಿ ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಗೂಡ್ಸ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಲಭ್ಯ ಮಾಹಿತಿಯ ಪ್ರಕಾರ, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಹಾಗೂ ಪುರುಷ ರಸ್ತೆ ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಯಶವಂತಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಹಾಗೂ ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಪ್ರಾಥಮಿಕ ಮಾಹಿತಿಯಂತೆ, ಗ್ಯಾಸ್ ಸಿಲಿಂಡರ್ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯ ಬಳಿಕ ಸ್ಥಳೀಯರು ಕೂಡ ಸ್ಥಳಕ್ಕೆ ಧಾವಿಸಿ ನೆರವು ಕಾರ್ಯದಲ್ಲಿ ಭಾಗವಹಿಸಿದರು.
ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
