ಬೆಂಗಳೂರು
ಜಿಲ್ಲೆಯ ಹೆಸರು ಬದಲಾವಣೆ ಕೂಗು, ಪ್ರತಿಪಕ್ಷಗಳ ವಿರೋಧ: ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾದ ರಾಮನಗರದ ಇತಿಹಾಸವೇನು? – Ramanagara District Name change
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೈತಪ್ಪಿದ ಹಿನ್ನೆಲೆಯಲ್ಲಿ ರಾಜಕೀಯ ಮೇಲಾಟ ಮುಂದುವರೆದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವೆ ರಾಜಕೀಯ ಜಟಾಪಟಿ ನಡೆಯುತ್ತಲೇ ಇದೆ. ಇದಕ್ಕೆ ರಾಮನಗರ ಜಿಲ್ಲೆಯ ಮರುನಾಮಕರಣ ಪ್ರಸ್ತಾಪ ಹೊಸದಾಗಿ ಸೇರಿಕೊಂಡಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಪ್ರಸ್ತಾವನೆ ಸಲ್ಲಿಸಿದೆ. ಆರಂಭದಲ್ಲಿ ಬೆಂಗಳೂರು ಜಿಲ್ಲೆಗೆ ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳು ಸೇರಿದ್ದವು. 1986ರಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಘೋಷಿಸಲಾಯಿತು.
2007ರಲ್ಲಿ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡ ಬಳ್ಳಾಪುರ ತಾಲ್ಲೂಕುಗಳನ್ನು ಒಳಗೊಂಡಂತೆ ಹೊಸ ಜಿಲ್ಲೆಯನ್ನು ಘೋಷಿಸಿ ಬೆಂಗಳೂರು ಗ್ರಾಮಾಂತರ ಹೆಸರನ್ನೇ ಉಳಿಸಿಕೊಳ್ಳಲಾಯಿತು. ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ, ರಾಮನಗರ ತಾಲ್ಲೂಕುಗಳನ್ನು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಗಿದೆ.
ಪ್ರಸ್ತುತ ಬೆಂಗಳೂರು ನಗರ, ಅಂತಾರಾಷ್ಟ್ರೀಯ ಖ್ಯಾತಿ ಸಾರ್ವಭೌಮತ್ವ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲ್ಲೂಕುಗಳಿಗೆ ಲಭ್ಯವಾಗಬೇಕು ಎಂಬುದು ಜನರ ಆಶಯ ಮತ್ತು ನಮ್ಮ ಚಿಂತನೆಯಾಗಿದೆ ಎಂದು ಡಿಕೆಶಿ ನಿಯೋಗ ಮನವಿಯಲ್ಲಿ ತಿಳಿಸಿದೆ. ಈ ಐದು ತಾಲ್ಲೂಕುಗಳನ್ನು ಒಳಗೊಂಡು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಚನೆ ಮಾಡುವಂತೆ ಒತ್ತಾಯಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ.
ವಿವಾದ ಸೃಷ್ಟಿ: ರಾಮನಗರದ ಹೆಸರು ಬದಲಿಸಿ ‘ನವ ಬೆಂಗಳೂರು’ ಎಂದು ಮರುನಾಮಕರಣ ಮಾಡುವ ಕುರಿತು ವಿವಾದ ಸೃಷ್ಟಿಯಾಗಿದೆ. ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣವಾಗಿದೆ. ಜಿಲ್ಲೆ ಬದಲಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಮನಗರದ ಹೆಸರು ಹೇಳುತ್ತಿದ್ದಂತೆ ರೇಷ್ಮೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಚನ್ನಪಟ್ಟಣದ ಗೊಂಬೆಗಳು, ‘ಕ್ಲೋಸ್ ಪೇಟೆ’ಯ ಗ್ರಾನೈಟ್, ನಾಗೇಗೌಡರ ಜಾನಪದ ಲೋಕ, ರಾಮನಗರದ ಬೆಟ್ಟ ಮತ್ತಿತರ ಹೆಸರುಗಳು ನೆನಪಾಗುತ್ತವೆ.
ರಾಮನಗರ ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. 2007ರ ಆಗಸ್ಟ್ 23ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ರಾಜ್ಯದ 28ನೇ ಜಿಲ್ಲೆಯಾಗಿ ರಾಮನಗರ ಅಸ್ಥಿತ್ವಕ್ಕೆ ಬಂತು. ರಾಮನಗರ ಜಿಲ್ಲೆಯ ಉತ್ತರಕ್ಕೆ ಬೆಂಗಳೂರು ಗ್ರಾಮಾಂತರ, ದಕ್ಷಿಣಕ್ಕೆ ಚಾಮರಾಜನಗರ, ಮಂಡ್ಯ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳು, ಪೂರ್ವಕ್ಕೆ ಬೆಂಗಳೂರು ನಗರ ಜಿಲ್ಲೆ, ಪಶ್ಚಿಮಕ್ಕೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಹೊಂದಿಕೊಂಡಿವೆ.
ರಾಮನಗರಕ್ಕಿದೆ ಶತಮಾನಗಳ ಇತಿಹಾಸ: ಕ್ರಿ.ಶ 4ನೇ ಶತಮಾನದಲ್ಲಿ ಗಂಗ ವಂಶಸ್ಥ ರಾಜರು ರಾಮನಗರ ಭಾಗದಲ್ಲಿ ಆಳ್ವಿಕೆ ನಡೆಸಿದರು. ಚನ್ನಪಟ್ಟಣ ಬಳಿಯ ಮಾಕುಂದ (ಮಂಕುಂದ) ಅವರ ರಾಜಧಾನಿಯಾಗಿತ್ತು. ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ಕೆಂಪೇಗೌಡರ ವಂಶಸ್ಥರು, ಟಿಪ್ಪು ಸುಲ್ತಾನ್, ಮೈಸೂರು ಅರಸರು ಹಾಗೂ ಬ್ರಿಟಿಷರ ಆಡಳಿತಕ್ಕೆ ಈ ಭಾಗ ಒಳಪಟ್ಟಿತ್ತು. ಜಿಲ್ಲೆಯ ಕೆಲವೆಡೆ ಇತಿಹಾಸ ಪೂರ್ವ ಕಾಲದ ಪಳಿಯುಳಿಕೆಗಳು ಲಭ್ಯವಾಗಿವೆ.
ಬ್ರಿಟಿಷ್ ಅಧಿಕಾರಿ ‘ಸರ್ ಬ್ಯಾರಿ ಕ್ಲೋಸ್’ (1756-1813) ಸ್ವಾತಂತ್ರ ಪೂರ್ವ ಕಾಲದಲ್ಲಿ ಆಳ್ವಿಕೆ ನಡೆಸಿದ್ದರು, ಆದ್ದರಿಂದ ರಾಮನಗರವನ್ನು ಹಿಂದೆ ಕ್ಲೋಸ್ ಪೇಟೆ ಎಂದು ಕರೆಯಲಾಯಿತು. ಇದನ್ನು ಮಾಜಿ ಮುಖ್ಯಮಂತ್ರಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ಮರುನಾಮಕರಣ ಮಾಡಿದರು.
ಪ್ರಸಿದ್ಧ ಸ್ಥಳಗಳು: ಖ್ಯಾತಿಗಳಿಸಿದ್ದ ಹಿಂದಿ ಚಿತ್ರ ‘ಶೋಲೆ’ ಈ ಬೆಟ್ಟಗಳ ಸುತ್ತಲೂ ಚಿತ್ರೀಕರಣಗೊಂಡಿದೆ. ಆದ್ದರಿಂದ SHOLAY HILLS ಎಂಬ ಹೆಸರು ಬಂದಿದೆ. ರಾಮನಗರದಲ್ಲಿರುವ ಹಂದಿ-ಗುಂದಿ ಮೀಸಲು ಅರಣ್ಯದ ಭವ್ಯವಾದ ಕಲ್ಲುಗಳು ಭೂದೃಶ್ಯಕ್ಕೆ ಬಹಳ ಹಳೆಯದು ಮತ್ತು ಪ್ರಸಿದ್ಧವಾಗಿವೆ. ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟ, ಕೆಂಗಲ್ ಆಂಜನೇಯ ಸ್ವಾಮಿ, ಶ್ರೀ ಬ್ರಾಹ್ಮಣ ತೀರ್ಥ ಬೃಂದಾವನ, ಮಾಗಡಿಯಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಮಂಚನಬೆಲೆ ಅಣೆಕಟ್ಟು, ಹಾರೋಬೆಲೆ ಅಣೆಕಟ್ಟು ಚುಂಚಿ ಜಲಪಾತ, ಕನಕಪುರದಲ್ಲಿ ಮೆಕೆದಾಟು, ಸಾವನದುರ್ಗ, ತಿಪ್ಪಗೊಂಡನಹಳ್ಳಿ ಜಲಾಶಯ, ಜನಪದ ಲೋಕವು ಪ್ರಸಿದ್ಧಿ ಪಡೆದುಕೊಂಡಿದೆ. ರಾಮನಗರ ಜಿಲ್ಲೆಯು ಸಾಂಪ್ರದಾಯಿಕ ಆಟಿಕೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಏಷ್ಯಾದಲ್ಲೇ ಇದು ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ.
ಪಂಚಾಯತ್ ಭವನ, ಕಂದಾಯ ಭವನ, ಮಿನಿ ವಿಧಾನಸೌಧ, ತಾಲ್ಲೂಕು ಆಫೀಸ್, ಉಪ ಕಮಿಷನರ್ ಕಚೇರಿ, ಉಪ ಅಧೀನ ಕಚೇರಿಗಳು, ಆರಕ್ಷಕ ಇಲಾಖೆ ಮತ್ತು ಜಿಲ್ಲಾ ನ್ಯಾಯಾಲಯ, ಪೊಲೀಸ್ ಭವನಗಳಂತ ಆಧುನಿಕ ಕಚೇರಿ ಕಟ್ಟಡಗಳನ್ನು ರಾಮನಗರ ಜಿಲ್ಲೆ ಹೊಂದಿದೆ.
ಸಿಲ್ಕ್ ಸಿಟಿ ರಾಮನಗರ: ರಾಮನಗರವು ತನ್ನ ರೇಷ್ಮೆ ಕೃಷಿಗಾಗಿ ಹೆಸರುವಾಸಿ. ಇದನ್ನು ಸಿಲ್ಕ್ ಟೌನ್ ಮತ್ತು ಸಿಲ್ಕ್ ಸಿಟಿ ಎಂದು ಅಡ್ಡ ಹೆಸರು ಸಹ ಇದೆ. ಈ ಪ್ರದೇಶದಲ್ಲಿ ತಯಾರಿಸಿದ ರೇಷ್ಮೆ ಪ್ರಸಿದ್ಧ ಮೈಸೂರು ಸಿಲ್ಕ್ ಇನ್ಪುಟ್ ಅನ್ನು ರೂಪಿಸುತ್ತದೆ. ಏಷ್ಯಾದ ರೇಷ್ಮೆ ಕೋಕೋನ್ಗಳಿಗೆ ರಾಮನಗರ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶವು ಟೊಯೋಟಾ ಮತ್ತು ಕೋಕಾಕೋಲಾದ ತಯಾರಿಕಾ ಘಟಕಗಳನ್ನು ಹೊಂದಿದೆ. 1,400 ಮೆವ್ಯಾಟ್ ಅನಿಲ ಆಧಾರಿತ ವಿದ್ಯುತ್ ಸ್ಥಾವರವನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಕಣ್ವ, ಶಿಂಷಾ, ವೃಷಭಾವತಿ, ಕಾವೇರಿ, ಅರ್ಕಾವತಿ, ಕುಮುದ್ವತಿ ನದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತವೆ. ಇಷ್ಟೊಂದು ನದಿ, ಕೆರೆ, ಜಲಾಶಯಗಳಿದ್ದರೂ ಜಿಲ್ಲೆಯ ಬಹುಪಾಲು ಭೂಮಿ ಮಳೆಯನ್ನೇ ಅವಲಂಬಿಸಿದೆ.
ಪ್ರಸಿದ್ಧಿ ಪಡೆದ ಗ್ರಾನೈಟ್ಸ್: ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳು ‘ಗ್ರಾನೈಟ್’ ಶಿಲೆಗಳಿಗೆ ಹೆಸರುವಾಸಿ. ದಪ್ಪ ಕಣದ ಸ್ಫಟಿಕ ರಚನೆಯ ಗ್ರಾನೈಟ್ ಇಲ್ಲಿನ ವಿಶೇಷ. ರಾಮನಗರ ಸುತ್ತಮುತ್ತ ಸಿಗುವ ಗ್ರಾನೈಟ್ ‘ಕ್ಲೋಸ್ ಪೇಟೆ’ ಗ್ರಾನೈಟ್ ಎಂದೇ ಹೆಸರುಗಳಿಸಿದೆ.
ರಾಜಕೀಯ ಇತಿಹಾಸ: 1952ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆಂಗಲ್ ಹನುಮಂತಯ್ಯ ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಜಿಲ್ಲೆಯಿಂದ ಮುಖ್ಯಮಂತ್ರಿಯಾದ ಮೊದಲಿಗರು ಕೆಂಗಲ್ ಹನುಮಂತಯ್ಯ. ಇದಾದ ನಂತರ 1983ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು. 1994 ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. 2004ರಲ್ಲಿ ರಾಮನಗರದಿಂದ ಪ್ರಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.
ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದರು. ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಮೂರು (ರಾಮನಗರ, ಕನಕಪುರ, ಚನ್ನಪಟ್ಟಣ) ತಾಲೂಕುಗಳಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ರಾಮನಗರ ಕ್ಷೇತ್ರಕ್ಕೆ ಮೂರು ಬಾರಿ ಸಿಎಂ ಹುದ್ದೆ ಸಿಕ್ಕಿದೆ. ಆದರೆ, ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದ ಯಾವೊಬ್ಬ ನಾಯಕರೂ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ಕುತೂಹಲದ ಸಂಗತಿ.
ಜಿಲ್ಲೆ ಬದಲಾವಣೆಗೆ ವಿರೋಧ: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಯತ್ನಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದು, ”ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಬಹುದು. ಮತ್ತೆ ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆಗ ಇವರು ಇಟ್ಟಿರುವ ಹೆಸರನ್ನು ತೆಗೆಯುತ್ತೇನೆ” ಎಂದು ಗುಡುಗಿದ್ದಾರೆ.
”ನಾನು ಅಧಿಕಾರದಲ್ಲಿದ್ದಾಗ ರಾಮನಗರ ಜಿಲ್ಲೆ ಮಾಡಿದ್ದೆ ಅದನ್ನು ತೆಗೆಯಬೇಕು ಎನ್ನುವುದು ಸರ್ಕಾರದ ಉದ್ದೇಶ. ದೇವೇಗೌಡರು ಮತ್ತು ನಾನು ಏನು ಅಭಿವೃದ್ಧಿ ಮಾಡಿದ್ದೇವೆ ಎನ್ನುವುದು ಜನರಿಗೆ ಗೊತ್ತಿದೆ. ಅದಕ್ಕೆ ಇವರ ಸರ್ಟಿಫಿಕೇಟ್ ಬೇಕಿಲ್ಲ. ಹೆಸರು ಬದಲಿಸುವುದು ಅನಗತ್ಯ” ಎಂದಿದ್ದಾರೆ.
ಅಶೋಕ್ ವಿರೋಧ: ”ರಾಮನಗರದಲ್ಲಿ ರಾಮನಿದ್ದಾನೆ ಎಂಬ ದ್ವೇಷಕ್ಕೋ ಅಥವಾ ರಿಯಲ್ ಎಸ್ಟೇಟ್ ಕುಬೇರರಾಗುವ ದುರಾಸೆಯೋ, ತಮ್ಮ ಸಹೋದರನನ್ನು ಸೋಲಿಸಿದ ಬಿಜೆಪಿ- ಜೆಡಿಎಸ್ ಮೈತ್ರಿ ವಿರುದ್ಧ ದ್ವೇಷ ಸಾಧಿಸಲು ಹೆಸರು ಬದಲಾವಣೆ ಮಾಡುತ್ತಿದ್ದೀರಾ?” ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
“ನಾವು ಹೊಸ ಜಿಲ್ಲೆಯನ್ನು ಸೃಷ್ಟಿಸುತ್ತಿಲ್ಲ. ಇರುವ ಜಿಲ್ಲೆ ಹಾಗೆ ಇರಲಿದೆ. ಒಂದು ಕಡೆ ಆಂಧ್ರಪ್ರದೇಶ, ಇನ್ನೊಂದು ಕಡೆ ತಮಿಳುನಾಡು ಗಡಿಯನ್ನು ಬೆಂಗಳೂರಿನ ಭಾಗಗಳು ಹಂಚಿಕೊಂಡಿವೆ. ತುಮಕೂರು ಮತ್ತು ಬಳ್ಳಾರಿ ರಸ್ತೆಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲಾ ದಿಕ್ಕುಗಳಲ್ಲೂ ಬೆಂಗಳೂರು ವಿಸ್ತರಣೆಯಾಗಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದರಿಂದ ಭೂಮಿಯ ಬೆಲೆ ಹೆಚ್ಚಾಗುತ್ತದೆ. ಕೈಗಾರಿಕೆಗಳ ಅಭಿವೃದ್ಧಿಯೂ ಆಗುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೇಶ
ರಾಜ್ಯಸಭೆ ಸ್ಥಾನದಿಂದ ಮೋದಿ ಜೊತೆಗಿನ ಸಂಬಂಧ ಮುಗಿಯಲ್ಲ: ದೇವೇಗೌಡ ಸ್ಪಷ್ಟನೆ
ಬೆಂಗಳೂರು: ಒಂದು ರಾಜ್ಯಸಭೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ತಮ್ಮ ಹಾಗೂ ಪ್ರಧಾನಿ Narendra Modi ಅವರ ನಡುವಿನ ಸಂಬಂಧ ಕೊನೆಗೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ H. D. Deve Gowda ಸ್ಪಷ್ಟಪಡಿಸಿದ್ದಾರೆ. ಎನ್ಡಿಎ ಮೈತ್ರಿಕೂಟದೊಂದಿಗಿನ ತಮ್ಮ ಬಾಂಧವ್ಯ ಜೀವನದ ಕೊನೆಯವರೆಗೂ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವೇಗೌಡರು, ರಾಜ್ಯಸಭೆ ಸದಸ್ಯತ್ವದ ವಿಚಾರವಾಗಿ ತಾವು ಎಂದಿಗೂ ಬಿಜೆಪಿ ಅಥವಾ ಕೇಂದ್ರ ನಾಯಕರ ಬಳಿ ಮನವಿ ಮಾಡಿಲ್ಲ ಎಂದು ತಿಳಿಸಿದರು. “ನನಗೆ ರಾಜ್ಯಸಭೆ ಸದಸ್ಯನಾಗಿ ಮುಂದುವರಿಯಬೇಕೆಂಬ ಆಸೆ ಇದ್ದಿದ್ದರೆ ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿಯಾಗಿ ಮಾತನಾಡಬಹುದಿತ್ತು. ಆದರೆ ನಾನು ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ” ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಮೋದಿ ಅವರೊಂದಿಗೆ ವೈಯಕ್ತಿಕ ಸಂಬಂಧ ಹೊಂದಿರುವುದಾಗಿ ತಿಳಿಸಿದ ಅವರು, ಒಂದು ಸ್ಥಾನಕ್ಕಾಗಿ ಆ ಬಾಂಧವ್ಯವನ್ನು ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದರು. “ಮೋದಿ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕ. ನನ್ನ ಮತ್ತು ಅವರ ನಡುವಿನ ಸಂಬಂಧ ರಾಜಕೀಯವನ್ನು ಮೀರಿದೆ” ಎಂದು ಹೇಳಿದರು.
ಇದೇ ವೇಳೆ, ತಮ್ಮ ಪಕ್ಷ ಎನ್ಡಿಎ ಮೈತ್ರಿಕೂಟದಲ್ಲೇ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ ದೇವೇಗೌಡರು, ಕೇಂದ್ರ ಸಚಿವರಾಗಿರುವ H. D. Kumaraswamy ತಮ್ಮ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ ಎಂದರು.
ಪಕ್ಷ ಸಂಘಟನೆ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಮುಂದೆಯೂ ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿದ ಅವರು, ಆರೋಗ್ಯ ಸಮಸ್ಯೆಗಳ ನಡುವೆಯೂ ದೇಶ ಮತ್ತು ರಾಜ್ಯದ ಹಿತಾಸಕ್ತಿಯ ವಿಚಾರಗಳಲ್ಲಿ ಸಕ್ರಿಯವಾಗಿರುವುದಾಗಿ ಹೇಳಿದರು. ಕಾಂಗ್ರೆಸ್ ಟೀಕೆಗಳಿಗೆ ಈ ಮೂಲಕ ದೇವೇಗೌಡರು ಸ್ಪಷ್ಟ ಉತ್ತರ ನೀಡಿದ್ದಾರೆ.
ಅಪರಾಧ
ಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ
ಬೆಂಗಳೂರು: ರಾಜ್ಯ ರಾಜಧಾನಿಯ ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಧಾನಸೌಧ ಲೇಔಟ್ ಸಮೀಪದ ಯರಪ್ಪನಹಳ್ಳಿ ಗ್ರಾಮದ ಕ್ವಾರಿ ಮೇಲೆ ದಾಳಿ ನಡೆಸಿದ ಪೊಲೀಸರು ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್ಗಳನ್ನು ಪತ್ತೆಹಚ್ಚಿದ್ದಾರೆ.
ಪೊಲೀಸರ ಪ್ರಕಾರ, ವೆಂಕಟೇಶ್ವರ ಗ್ರಾನೈಟ್ಸ್ ಕ್ರಶರ್ಗೆ ಸೇರಿದ ಕ್ವಾರಿಯಲ್ಲಿ ಕಲ್ಲುಬಂಡೆಗಳನ್ನು ಸ್ಫೋಟಿಸಲು ಬಳಸುವ 225 ಜಿಲೆಟಿನ್ ಕಡ್ಡಿಗಳು ಹಾಗೂ 50 ಡಿಟೊನೇಟರ್ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಸ್ಥಳೀಯರಿಂದ ಬಂದ ಮಾಹಿತಿಯ ಆಧಾರದ ಮೇಲೆ ಆವಲಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ಈ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ವಾರಿ ಮಾಲೀಕರಾದ ವೆಂಕಟರಮಣರೆಡ್ಡಿ ಹಾಗೂ ಉಸ್ತುವಾರಿ ಲೋಕೇಶ್ರೆಡ್ಡಿ ಅವರು ಸರ್ಕಾರದಿಂದ ಅಗತ್ಯವಾದ ಪರವಾನಗಿ ಪಡೆಯದೇ ಈ ಸ್ಪೋಟಕಗಳನ್ನು ಸಂಗ್ರಹಿಸಿ ಬಳಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಜೊತೆಗೆ, ಸುರಕ್ಷತಾ ನಿಯಮಗಳನ್ನು ಪಾಲಿಸದೇ ರಾತ್ರಿ ವೇಳೆ ಕಲ್ಲುಬಂಡೆಗಳನ್ನು ಸ್ಫೋಟಿಸುತ್ತಿದ್ದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಶರ್ ಮಾಲೀಕರು, ಉಸ್ತುವಾರಿ ಹಾಗೂ ಕ್ವಾರಿಯಲ್ಲಿ ಸ್ಫೋಟಕ ಬಳಕೆಯಲ್ಲಿ ತೊಡಗಿದ್ದ ವಿಕಾಸ್, ತೋಹಿದ್ ಮತ್ತು ಸಂದೀಪ್ ವಿರುದ್ಧ ನಿರ್ಲಕ್ಷ್ಯ ಆರೋಪ ಹಾಗೂ ಸ್ಫೋಟಕಗಳ ಕಾಯಿದೆ 1884 ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಸ್ಪೋಟಕಗಳನ್ನು ಕೇವಲ ಕಲ್ಲುಬಂಡೆ ಸ್ಫೋಟಕ್ಕೆ ಮಾತ್ರ ಬಳಸಲಾಗಿತ್ತೇ ಅಥವಾ ಬೇರೆ ದುರುದ್ದೇಶವಿದೆಯೇ ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ. ಈ ನಡುವೆ, ವೈಟ್ಫೀಲ್ಡ್ ಉಪ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸ್ಥಳೀಯ ಪ್ರದೇಶದಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಭದ್ರತಾ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ಅಪರಾಧ
ಬಿಟ್ಕಾಯಿನ್ ಹಗರಣ: ನಲಪಾಡ್ಗೆ ಎಸ್ಐಟಿ ಚಾರ್ಜ್ಶೀಟ್ ಶಾಕ್
ಬೆಂಗಳೂರು: 6 ವರ್ಷಗಳ ಹಿಂದಿನ ಬಿಟ್ಕಾಯಿನ್ ಹಗರಣವು (Karnataka Bitcoin Scam) ಮತ್ತೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ಮುಖಂಡ Mohammed Nalapad ಅವರಿಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿವೆ.
ವಿಶೇಷ ತನಿಖಾ ದಳ (SIT) ಇದೀಗ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ನಲಪಾಡ್ ಕೂಡ ಈ ಹಗರಣದಲ್ಲಿ ಪಾಲುದಾರರಾಗಿದ್ದು ಹಣದ ಲಾಭ ಪಡೆದಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ. ಹಗರಣದ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿರುವ ಹ್ಯಾಕರ್ ಶ್ರೀಕೃಷ್ಣ @ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರೊಂದಿಗೆ ನಲಪಾಡ್ ನಂಟು ಹೊಂದಿದ್ದರೆಂಬ ಅಂಶವೂ ಚಾರ್ಜ್ಶೀಟ್ನಲ್ಲಿ ಸೇರಿಸಲಾಗಿದೆ.
ಎಸ್ಐಟಿ ಆರೋಪಗಳ ಪ್ರಕಾರ, ಬಿಟ್ಕಾಯಿನ್ ನಗದೀಕರಣಕ್ಕಾಗಿ ನಲಪಾಡ್ ಅವರು ಹ್ಯಾಕರ್ ಶ್ರೀಕಿಯನ್ನು ಸಂಪರ್ಕಿಸಿದ್ದರೆಂದು ತಿಳಿದುಬಂದಿದೆ. ಮುಂಬೈ ಮೂಲದ ಸ್ನೇಹಿತ ಹಾಗೂ ಖಂಡೇವಾಲ ಮೂಲಕ ಹವಾಲಾ ಜಾಲದ ಮೂಲಕ ಹಣವನ್ನು ನಗದೀಕರಿಸಿರುವ ಆರೋಪವೂ ಇದೆ. ಈ ಪ್ರಕ್ರಿಯೆಯಲ್ಲಿ ಕಮಿಷನ್ ರೂಪದಲ್ಲಿ ನಲಪಾಡ್ಗೂ ಹಣ ಸಂದಾಯವಾಗಿರುವುದಾಗಿ ತನಿಖಾ ವರದಿಯಲ್ಲಿ ಹೇಳಲಾಗಿದೆ.
ಇದೀಗ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಕೂಡ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಮೂರನೇ ನೋಟಿಸ್ ಜಾರಿಗೊಳಿಸಿದೆ. ಇದಕ್ಕೂ ಮುನ್ನ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುನೀಶ್ ಹೆಗ್ಡೆ ಅವರನ್ನು ಇಡಿ ಸುಮಾರು 16 ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ನಡುವೆ, Enforcement Directorate ಹಾಗೂ Special Investigation Team Karnataka ತನಿಖೆ ಮುಂದುವರೆಸುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.
-
ಅಪರಾಧ8 hours agoಕಾರು ಓಡಿಸುವ ವಿಚಾರಕ್ಕೆ ಮಾರಾಮಾರಿ: ಕೃಷ್ಣ ಮಠದಲ್ಲಿ ಗಲಾಟೆ
-
ದೇಶ2 hours agoರಾಜ್ಯಸಭೆ ಸ್ಥಾನದಿಂದ ಮೋದಿ ಜೊತೆಗಿನ ಸಂಬಂಧ ಮುಗಿಯಲ್ಲ: ದೇವೇಗೌಡ ಸ್ಪಷ್ಟನೆ
-
ದೇಶ9 hours ago4,399 ದಿನಗಳ ನಿರಂತರ ಆಡಳಿತ: ಮೋದಿ ಹೊಸ ದಾಖಲೆ ಸ್ಥಾಪನೆ
-
ಕ್ರೀಡೆ9 hours agoಫಿಫಾ ವಿಶ್ವಕಪ್ 2026 ಆರಂಭ: ಜಗತ್ತೆಲ್ಲಾ ಫುಟ್ಬಾಲ್ ಜ್ವರದಲ್ಲಿ
-
ದೇಶ12 hours agoಕನಕಪುರದಲ್ಲಿ ಡಿಕೆಶಿ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ
-
ಅಪರಾಧ12 hours agoಬಿಟ್ಕಾಯಿನ್ ಹಗರಣ: ನಲಪಾಡ್ಗೆ ಎಸ್ಐಟಿ ಚಾರ್ಜ್ಶೀಟ್ ಶಾಕ್
-
ಅಪರಾಧ12 hours agoಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ
-
ದೇಶ4 hours agoನೆಹರೂ 64 ವರ್ಷದ ದಾಖಲೆ ಹಿಂದಿಕ್ಕಿದ ಮೋದಿ; ಸಂಪುಟ ಸಭೆಯಲ್ಲಿ ಸಂಭ್ರಮ
