ಬೆಂಗಳೂರು
ಇಂದು ಫ್ರೆಂಡ್ಶಿಪ್ ಡೇ! ಕುಚಿಕು ಗೆಳೆಯರಾದ ವಿಷ್ಣು-ಅಂಬಿ ಸ್ನೇಹ ಬಾಂಧವ್ಯದ ಸವಿ ನೆನಪು – Vishnu Ambi Friendship
ಕನ್ನಡ ಚಿತ್ರರಂಗದಲ್ಲಿ ಕುಚಿಕು ಗೆಳೆಯರಾಗಿ ಇವತ್ತಿಗೂ ಅಭಿಮಾನಿಗಳ ಹೃದಯವನ್ನು ಆವರಿಸಿರುವ ಇಬ್ಬರು ದಿಗ್ಗಜ ನಟರೆಂದರೆ ಅದು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್.
ಅನೇಕ ಬಾರಿ ಅಂಬರೀಶ್ ಅವರು ಸಂದರ್ಶನಗಳಲ್ಲಿ ಮಾತನಾಡುತ್ತಾ, ನನ್ನ ಮತ್ತು ವಿಷ್ಣುವರ್ಧನ್ ಸ್ನೇಹಕ್ಕೆ ಬೆಲೆನೇ ಕಟ್ಟೋಕಾಗಲ್ಲ. ವಿಷ್ಣು ಅಪರೂಪದ ಗೆಳೆಯ ಅಂದಿದ್ರು.
ಮೂಲತಃ ಮೈಸೂರಿನವರಾದ ವಿಷ್ಣುವರ್ಧನ್ ಹಾಗೂ ಅಂಬರೀಶ್ ಸ್ನೇಹ ಶುರುವಾಗಿದ್ದು ನಾಗರಹಾವು ಸಿನಿಮಾದಿಂದ.
ನಾಗರಹಾವು ಸೆಟ್ನಲ್ಲಿ ಮೊದಲ ಭೇಟಿ: ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾಗಾಗಿ ಹೊಸ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ಚಿಗುರು ಮೀಸೆಯ ತೀಕ್ಷ್ಣ ಕಣ್ಣಿನ ಹುಡುಗ ವಿಷ್ಣುವರ್ಧನ್ ನಾಯಕನಾಗಿ ಆಯ್ಕೆಯಾಗಿದ್ದರು. ಇದೇ ಚಿತ್ರದಲ್ಲಿ ಜಲೀಲನ ಪಾತ್ರಕ್ಕಾಗಿ ತುಸು ಪುಂಡನ ಲುಕ್ ಇರುವ ನಟನಿಗಾಗಿ ಪುಟ್ಟಣ್ಣ ಹುಡುಕಾಡುತ್ತಿದ್ದರು. ಆಗ ರೆಬಲ್ ಸ್ಟಾರ್ ಅಂಬರೀಶ್ ಜಲೀಲನ ಪಾತ್ರಕ್ಕೆ ಆಯ್ಕೆಯಾಗಿದ್ದರು.
ವಿಷ್ಣುವರ್ಧನ್ ಅವರದು ಸ್ವಲ್ಪ ತಮಾಷೆ ಮಾಡುವ ವ್ಯಕ್ತಿತ್ವ. ಹೀಗಾಗಿ ಅಂಬರೀಶ್ಗೆ ವಿಷ್ಣುವರ್ಧನ್ ಬಹಳ ಬೇಗನೆ ಇಷ್ಟವಾಗಿದ್ದರು. ಈ ಚಿತ್ರದಲ್ಲಿ ವಿಷ್ಣು ಹೀರೋ ಆಗಿದ್ರೆ, ಅಂಬರೀಶ್ ವಿಲನ್ ರೋಲ್ನಲ್ಲಿ ಮಿಂಚಿದ್ದರು. ನಿಜ ಜೀವನದಲ್ಲಿ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಲು ಈ ಚಿತ್ರವೂ ಕಾರಣವಾಯಿತು. ಜಲೀಲನ ಪಾತ್ರದಲ್ಲಿದ್ದ ಅಂಬರೀಶ್ ನಟಿ ಆರತಿ ಅವರನ್ನು ರೇಗಿಸುತ್ತಿದ್ದರೆ, ಇತ್ತ ವಿಷ್ಣುವರ್ಧನ್ ಸೈಕಲ್ನಲ್ಲಿ ಬಂದು ಫೈಟ್ ಮಾಡುವ ದೃಶ್ಯ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು.
ಸಾಹಸಸಿಂಹ ವಿಷ್ಣು ಬಗ್ಗೆ ಅಂಬಿಗೆ ಎಲ್ಲಿಲ್ಲದ ಅಭಿಮಾನ. ಇಬ್ಬರೂ ಗಂಟೆಗಟ್ಟಲೆ ಕೂತು ಹರಟೆ ಹೊಡೆಯುತ್ತಾ, ಒಬ್ಬರ ಕಾಲು ಮತ್ತೊಬ್ಬರು ಎಳೆದು ನಕ್ಕು ನಲಿಯುತ್ತಿದ್ದರು. ಚಿತ್ರದುರ್ಗದಲ್ಲಿ ನಾಗರಹಾವು ಶೂಟಿಂಗ್ ಸಂದರ್ಭದಲ್ಲಿ ಇಬ್ಬರೂ ಒಂದೇ ರೂಂನಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭವಿತ್ತು. ಈ ಸಂದರ್ಭದಲ್ಲಂತೂ ಇಬ್ಬರೂ ಮತ್ತಷ್ಟು ಕ್ಲೋಸ್ ಆದರು. ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ಶೂಟಿಂಗ್ ಯಾವಾಗ ಬೆಂಗಳೂರಿಗೆ ಶಿಫ್ಟ್ ಆಯ್ತೋ ಆಗ ಅಂಬರೀಶ್ ಸಿನಿಮಾ ಶೂಟಿಂಗ್ ಬಿಡುವು ಸಿಕ್ಕಾಗೆಲ್ಲಾ ವಿಷ್ಣುವರ್ಧನ್ ಮನೆಗೆ ಹೋಗುತ್ತಿದ್ದರು. ಬಹುಶಃ ನಾಗರಹಾವು ಚಿತ್ರದ ಮೂಲಕ ಚಿಗುರಿದ ಸ್ನೇಹ ಆದರ್ಶ ಸ್ನೇಹವಾಗುತ್ತೆ ಅಂತಾ ಅವರಿಬ್ಬರಿಗೂ ಅಂದು ಅರಿವೇ ಇರಲಿಲ್ಲ.
ಓ ಗೆಳೆಯ ನಿನಗೆ ಸ್ಯಾಣೆ ಕೋಪ ಕಣೋ..: ಇಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಆದರೆ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗಿದ್ದು ಡಿ.ರಾಜೇಂದ್ರ ಬಾಬು ನಿರ್ದೇಶನದ ದಿಗ್ಗಜರು ಸಿನಿಮಾದಲ್ಲಿ. ಈ ಚಿತ್ರದಲ್ಲಿ ನಿಜ ಜೀವನದಲ್ಲಿ ಅಂಬಿ ಮತ್ತು ವಿಷ್ಣು ಇರುವಂತೆಯೇ ತೋರಿಸಲಾಗಿತ್ತು. ಈ ಚಿತ್ರದಲ್ಲಿ ಅಂಬರೀಶ್ ‘ಓ ಗೆಳೆಯ ನಿನಗೆ ಸ್ಯಾಣೆ ಕೋಪ ಕಣೋ’ ಅಂತಾ ವಿಷ್ಣುವರ್ಧನ್ ಬಗ್ಗೆ ಹಾಡುವ ಗೀತೆ ಗೆಳೆತನದ ಎವರ್ಗ್ರೀನ್ ಹಾಡು ಆಗಿದೆ.
ಇಬ್ಬರೂ ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ವಿಷ್ಣುವರ್ಧನ್ ಸಿನಿಮಾ ಕಾರ್ಯಕ್ರಮವಾಗಲಿ ಅಥವಾ ಹೊರೆಗೆ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಂಬರೀಶ್ ಅಲ್ಲಿರಬೇಕಿತ್ತು. ಅಂಬಿಯಿಲ್ಲದೇ ವಿಷ್ಣುವರ್ಧನ್ ಯಾವುದೇ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ವಂತೆ.
ಈ ಸಂಗತಿ ನಿಮಗೆ ಗೊತ್ತೇ?: ಈ ಸ್ಟಾರ್ ಸ್ನೇಹಿತರ ಬಗ್ಗೆ ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅಂಬಿ-ವಿಷ್ಣು ಆಪ್ತರಾಗಿದ್ದರೂ ಅವರ ಆಲೋಚನೆಗಳು ಮಾತ್ರ ತದ್ವಿರುದ್ಧ. ಜನರ ಜೊತೆ ಬೆರೆಯುವ ವಿಚಾರದಲ್ಲಿ ವಿಷ್ಣುವರ್ಧನ್ ಸ್ವಲ್ಪ ದೂರ ಸರಿಯುತ್ತಿದ್ದರು. ಆದರೆ ಅಂಬರೀಶ್ ಸದಾ ಜನರೊಂದಿಗೆ ಬೆರೆಯುತ್ತಿದ್ದರು. ವಿಷ್ಣು ರಾಜಕೀಯ ಎಂದರೆ ದೂರ ಸರಿದು ನಿಲ್ಲುತ್ತಿದ್ದರು. ಹಾಗಾಗಿ ರಾಜಕೀಯಕ್ಕೆ ಕಾಲಿಡಲೇ ಇಲ್ಲ. ಆದರೆ ಮಂಡ್ಯದಲ್ಲಿ ಅಂಬರೀಶ್ ಸ್ಪರ್ಧಿಸುವ ವೇಳೆ ನಾಮಿನೇಷನ್ ದಿನ ಗೆಳೆಯನ ಜೊತೆ ವಿಷ್ಣುವರ್ಧನ್ ಬಂದಿದ್ದರು. ಸದ್ಯ ನಮ್ಮೊಂದಿಗೆ ಇಬ್ಬರೂ ಇಲ್ಲ. ಆದರೆ ರೀಲ್ ಹಾಗೂ ರಿಯಲ್ ಲೈಫ್ನಲ್ಲೂ ಅವರ ಗೆಳೆತನ ಇಂದಿಗೂ ಮಾದರಿ.
ಅಪರಾಧ
ಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ
ಬೆಂಗಳೂರು: ರಾಜ್ಯ ರಾಜಧಾನಿಯ ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಧಾನಸೌಧ ಲೇಔಟ್ ಸಮೀಪದ ಯರಪ್ಪನಹಳ್ಳಿ ಗ್ರಾಮದ ಕ್ವಾರಿ ಮೇಲೆ ದಾಳಿ ನಡೆಸಿದ ಪೊಲೀಸರು ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್ಗಳನ್ನು ಪತ್ತೆಹಚ್ಚಿದ್ದಾರೆ.
ಪೊಲೀಸರ ಪ್ರಕಾರ, ವೆಂಕಟೇಶ್ವರ ಗ್ರಾನೈಟ್ಸ್ ಕ್ರಶರ್ಗೆ ಸೇರಿದ ಕ್ವಾರಿಯಲ್ಲಿ ಕಲ್ಲುಬಂಡೆಗಳನ್ನು ಸ್ಫೋಟಿಸಲು ಬಳಸುವ 225 ಜಿಲೆಟಿನ್ ಕಡ್ಡಿಗಳು ಹಾಗೂ 50 ಡಿಟೊನೇಟರ್ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಸ್ಥಳೀಯರಿಂದ ಬಂದ ಮಾಹಿತಿಯ ಆಧಾರದ ಮೇಲೆ ಆವಲಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ಈ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ವಾರಿ ಮಾಲೀಕರಾದ ವೆಂಕಟರಮಣರೆಡ್ಡಿ ಹಾಗೂ ಉಸ್ತುವಾರಿ ಲೋಕೇಶ್ರೆಡ್ಡಿ ಅವರು ಸರ್ಕಾರದಿಂದ ಅಗತ್ಯವಾದ ಪರವಾನಗಿ ಪಡೆಯದೇ ಈ ಸ್ಪೋಟಕಗಳನ್ನು ಸಂಗ್ರಹಿಸಿ ಬಳಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಜೊತೆಗೆ, ಸುರಕ್ಷತಾ ನಿಯಮಗಳನ್ನು ಪಾಲಿಸದೇ ರಾತ್ರಿ ವೇಳೆ ಕಲ್ಲುಬಂಡೆಗಳನ್ನು ಸ್ಫೋಟಿಸುತ್ತಿದ್ದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಶರ್ ಮಾಲೀಕರು, ಉಸ್ತುವಾರಿ ಹಾಗೂ ಕ್ವಾರಿಯಲ್ಲಿ ಸ್ಫೋಟಕ ಬಳಕೆಯಲ್ಲಿ ತೊಡಗಿದ್ದ ವಿಕಾಸ್, ತೋಹಿದ್ ಮತ್ತು ಸಂದೀಪ್ ವಿರುದ್ಧ ನಿರ್ಲಕ್ಷ್ಯ ಆರೋಪ ಹಾಗೂ ಸ್ಫೋಟಕಗಳ ಕಾಯಿದೆ 1884 ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಸ್ಪೋಟಕಗಳನ್ನು ಕೇವಲ ಕಲ್ಲುಬಂಡೆ ಸ್ಫೋಟಕ್ಕೆ ಮಾತ್ರ ಬಳಸಲಾಗಿತ್ತೇ ಅಥವಾ ಬೇರೆ ದುರುದ್ದೇಶವಿದೆಯೇ ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ. ಈ ನಡುವೆ, ವೈಟ್ಫೀಲ್ಡ್ ಉಪ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸ್ಥಳೀಯ ಪ್ರದೇಶದಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಭದ್ರತಾ ಕ್ರಮಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ಅಪರಾಧ
ಬಿಟ್ಕಾಯಿನ್ ಹಗರಣ: ನಲಪಾಡ್ಗೆ ಎಸ್ಐಟಿ ಚಾರ್ಜ್ಶೀಟ್ ಶಾಕ್
ಬೆಂಗಳೂರು: 6 ವರ್ಷಗಳ ಹಿಂದಿನ ಬಿಟ್ಕಾಯಿನ್ ಹಗರಣವು (Karnataka Bitcoin Scam) ಮತ್ತೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ಮುಖಂಡ Mohammed Nalapad ಅವರಿಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿವೆ.
ವಿಶೇಷ ತನಿಖಾ ದಳ (SIT) ಇದೀಗ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ನಲಪಾಡ್ ಕೂಡ ಈ ಹಗರಣದಲ್ಲಿ ಪಾಲುದಾರರಾಗಿದ್ದು ಹಣದ ಲಾಭ ಪಡೆದಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ. ಹಗರಣದ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿರುವ ಹ್ಯಾಕರ್ ಶ್ರೀಕೃಷ್ಣ @ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರೊಂದಿಗೆ ನಲಪಾಡ್ ನಂಟು ಹೊಂದಿದ್ದರೆಂಬ ಅಂಶವೂ ಚಾರ್ಜ್ಶೀಟ್ನಲ್ಲಿ ಸೇರಿಸಲಾಗಿದೆ.
ಎಸ್ಐಟಿ ಆರೋಪಗಳ ಪ್ರಕಾರ, ಬಿಟ್ಕಾಯಿನ್ ನಗದೀಕರಣಕ್ಕಾಗಿ ನಲಪಾಡ್ ಅವರು ಹ್ಯಾಕರ್ ಶ್ರೀಕಿಯನ್ನು ಸಂಪರ್ಕಿಸಿದ್ದರೆಂದು ತಿಳಿದುಬಂದಿದೆ. ಮುಂಬೈ ಮೂಲದ ಸ್ನೇಹಿತ ಹಾಗೂ ಖಂಡೇವಾಲ ಮೂಲಕ ಹವಾಲಾ ಜಾಲದ ಮೂಲಕ ಹಣವನ್ನು ನಗದೀಕರಿಸಿರುವ ಆರೋಪವೂ ಇದೆ. ಈ ಪ್ರಕ್ರಿಯೆಯಲ್ಲಿ ಕಮಿಷನ್ ರೂಪದಲ್ಲಿ ನಲಪಾಡ್ಗೂ ಹಣ ಸಂದಾಯವಾಗಿರುವುದಾಗಿ ತನಿಖಾ ವರದಿಯಲ್ಲಿ ಹೇಳಲಾಗಿದೆ.
ಇದೀಗ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಕೂಡ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಮೂರನೇ ನೋಟಿಸ್ ಜಾರಿಗೊಳಿಸಿದೆ. ಇದಕ್ಕೂ ಮುನ್ನ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುನೀಶ್ ಹೆಗ್ಡೆ ಅವರನ್ನು ಇಡಿ ಸುಮಾರು 16 ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ನಡುವೆ, Enforcement Directorate ಹಾಗೂ Special Investigation Team Karnataka ತನಿಖೆ ಮುಂದುವರೆಸುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.
ದೇಶ
ಕನಕಪುರದಲ್ಲಿ ಡಿಕೆಶಿ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ
ಬೆಂಗಳೂರು: ತಮ್ಮ ತವರು ಕ್ಷೇತ್ರ ಕನಕಪುರದಲ್ಲಿ ನಡೆದ ಒಂದು ಘಟನೆ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಉಪಮುಖ್ಯಮಂತ್ರಿಗಳೂ ಆಗಿರುವ D. K. Shivakumar ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅರ್ಧ ತಿಂದ ಸೇಬುಗಳನ್ನು ಕಾರ್ಯಕರ್ತರತ್ತ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಭಾನುವಾರ ಕನಕಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ, ಸೇಬುಗಳಿಂದ ತಯಾರಿಸಿದ ಬೃಹತ್ ಹಾರವನ್ನು ಕ್ರೇನ್ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಹಾಕಲಾಗಿತ್ತು. ಕಾರ್ಯಕ್ರಮದ ಬಳಿಕ ಅವರು ಎರಡು ಸೇಬುಗಳನ್ನು ಕಚ್ಚಿ ತಿಂದ ನಂತರ ಉಳಿದ ಅರ್ಧ ಸೇಬುಗಳನ್ನು ಒಂದರ ನಂತರ ಒಂದಾಗಿ ಪಕ್ಷದ ಕಾರ್ಯಕರ್ತರತ್ತ ಎಸೆದು ಸ್ಥಳದಿಂದ ತೆರಳಿದ್ದಾರೆ. ಈ ಘಟನೆ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ರಾಜಕೀಯ ಚರ್ಚೆ ತೀವ್ರಗೊಂಡಿದೆ.
ಈ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿರುವ Bharatiya Janata Party, ಈ ನಡೆ ಕಾಂಗ್ರೆಸ್ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದೆ. ಎಕ್ಸ್ (ಹಳೆಯ ಟ್ವಿಟರ್)ನಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ಮತದಾರರ ಮೇಲೆ ಗೌರವವಿಲ್ಲದ ವರ್ತನೆ ಇದು ಎಂದು ಕಿಡಿಕಾರಿದೆ. “ಯಾರ ಮತಗಳಿಂದ ಅಧಿಕಾರಕ್ಕೆ ಬಂದಿದ್ದಾರೋ ಅವರ ಮೇಲೆಯೇ ಅವಮಾನಕಾರಿ ನಡೆ ತೋರಿಸುವುದು ಸರಿಯಲ್ಲ” ಎಂದು ಬಿಜೆಪಿ ಹೇಳಿದೆ.
ಇದೇ ವೇಳೆ, ಸಾರ್ವಜನಿಕ ಗೌರವವನ್ನು ಮಾತಿನಲ್ಲಿ ಅಲ್ಲ, ನಡೆ-ನುಡಿಯಲ್ಲಿ ತೋರಿಸಬೇಕು ಎಂಬ ಸಂದೇಶವನ್ನು ಬಿಜೆಪಿ ನೀಡಿದೆ. ಸಾರ್ವಜನಿಕರು ಭಿಕ್ಷೆ ಬೇಡುವವರಲ್ಲ, ಗೌರವಕ್ಕೆ ಅರ್ಹರು ಎಂದು ಕೂಡ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ರಾಜಕೀಯ ವಾಗ್ವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ.
-
ದೇಶ4 hours agoಕನಕಪುರದಲ್ಲಿ ಡಿಕೆಶಿ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ
-
ಅಪರಾಧ4 hours agoಬಿಟ್ಕಾಯಿನ್ ಹಗರಣ: ನಲಪಾಡ್ಗೆ ಎಸ್ಐಟಿ ಚಾರ್ಜ್ಶೀಟ್ ಶಾಕ್
-
ದೇಶ8 minutes ago4,399 ದಿನಗಳ ನಿರಂತರ ಆಡಳಿತ: ಮೋದಿ ಹೊಸ ದಾಖಲೆ ಸ್ಥಾಪನೆ
-
ಅಪರಾಧ3 hours agoಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ
-
ದೇಶ3 hours agoಅಣ್ವಸ್ತ್ರ ಶಕ್ತಿಯಲ್ಲಿ ಭಾರತ ಹೊಸ ಮೈಲಿಗಲ್ಲು? ಅಂತಾರಾಷ್ಟ್ರೀಯ ವರದಿ ಬಹಿರಂಗ
