Connect with us

ಬೆಂಗಳೂರು

ಕಾಂಗ್ರೆಸ್ ಒಕ್ಕಲಿಗ ಸಚಿವರು, ಶಾಸಕರ ನಿಯೋಗದಿಂದ ಸಿಎಂ ಭೇಟಿ; ಮುನಿರತ್ನ ವಿರುದ್ಧ ಕ್ರಮಕ್ಕೆ ಪತ್ರ – BJP MLA Munirathna Remarks Row

Published

on

ಬೆಂಗಳೂರು: ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ, ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಸಿಎಂ ನಿವಾಸ ಕಾವೇರಿಯಲ್ಲಿಂದು ಭೇಟಿಯಾದ ನಿಯೋಗ, ಸಿಎಂಗೆ ಮನವಿ ಪತ್ರ ಸಲ್ಲಿಸಿದರು. ನಿಯೋಗದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ಎಂ.ಸಿ.ಸುಧಾಕರ್, ಶರತ್ ಬಚ್ಚೇಗೌಡ, ಮಾಗಡಿ ಬಾಲಕೃಷ್ಣ, ಮಾಲೂರು ಮಂಜೇಗೌಡ, ಕುಣಿಗಲ್ ರಂಗನಾಥ್, ಎಸ್​.ರವಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, “ಮುನಿರತ್ನ ವಿರುದ್ಧ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಪಡೆದು ಮತ್ತಷ್ಟು ಕ್ರಮ ಆಗಬೇಕು ಅಂತ ಸಿಎಂಗೆ ಮನವಿ ಮಾಡಿದ್ದೇವೆ. ಮುನಿರತ್ನ ಇಲ್ಲಸಲ್ಲದ ಟ್ವೀಟ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನ ಮಾಡುತ್ತಿದ್ದಾರೆ. ಬಿಬಿಎಂಪಿಯಲ್ಲಿ ದಾಖಲೆ ಸುಟ್ಟು ಹಾಕಿದ ಇತಿಹಾಸ ಇದೆ. ಅಂತಹದರಲ್ಲಿ ಮುನಿರತ್ನ ‌ನಿಸ್ಸೀಮರು. ಕಾನೂನು ವ್ಯಾಪ್ತಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಕ್ಕೆ ಅವಕಾಶ ಕೊಡದಂತೆ ಸಿಎಂಗೆ ಮನವಿ ಮಾಡಿದ್ದೇವೆ. ನ್ಯಾಯಾಂಗದಲ್ಲಿ ಸರ್ಕಾರ ಗಟ್ಟಿಯಾಗಿ ಕೆಲಸ ಮಾಡಬೇಕು. ಸರ್ಕಾರಿ ವಕೀಲರು ದಾಖಲಾತಿ ಸಮೇತ ಅವರ ವಿರುದ್ಧ ವಾದ ಮಾಡಿ ಶಿಕ್ಷೆ ಕೊಡಿಸಬೇಕು. ಈ ಕೇಸ್​ನಲ್ಲಿ ಹೆಚ್ಚು ಗಮನಕೊಡುವಂತೆ ಮನವಿ ಮಾಡಿದ್ದೇವೆ” ಎಂದರು.

ಮುಂದುವರೆದು, “ಪ್ರತ್ಯೇಕ ತನಿಖೆ ತಂಡದಿಂದ ತನಿಖೆ ಮಾಡಲು ಮನವಿ ಮಾಡಿದ್ದೇವೆ. SIT, ಲೋಕಾಯುಕ್ತದಿಂದ ತನಿಖೆ ಮಾಡೋಕೆ ಸಾಧ್ಯನಾ ಅಂತ ಪರಿಶೀಲನೆ ಮಾಡೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಮುನಿರತ್ನ ಶಾಸಕನಾಗಲು ಅನರ್ಹ. ಚುನಾವಣೆಗೆ ನಿಲ್ಲಲು ಕನಿಷ್ಠ ಅರ್ಹತೆ ಬೇಕು. ಆದರೆ ಅದು ಅವರಲ್ಲಿಲ್ಲ” ಎಂದರು.

ಅವರು ನಿಮ್ಮ ಪಕ್ಷದಲ್ಲಿದ್ದವರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ, “ಮಗು ಹುಟ್ಟುತ್ತದೆ. ತಂದೆ-ತಾಯಿ ಬೆಳೆಸುತ್ತಾರೆ. ವಾತಾವರಣ ಸರಿ ಇದ್ದರೂ ಕೂಡಾ ಹುಟ್ಟುಗುಣ ಹಾಗೇ ಇರುತ್ತೆ. ಶಾಸಕನಾದ ನಂತರ ಅವರ ಬಣ್ಣ ಬಯಲಾಗಿದೆ. ಮುನಿರತ್ನ ವಿರುದ್ಧ ಮಹಿಳೆಯ ಸೀರೆ ಎಳೆದ ಕೇಸ್ ಸೇರಿ ಅನೇಕ ಕೇಸ್‌ಗಳಿವೆ. ಅವರ ಗ್ರಹಚಾರ ಕೆಟ್ಟಿದೆ. ಬಿಜೆಪಿ ಮುನಿರತ್ನ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಕುಮಾರಸ್ವಾಮಿ, ಅಶೋಕ್, ರವಿ, ಅಮಿತ್ ಶಾ, ಮೋದಿ ಬಳಿ ಹೋಗಿ ಕ್ರಮಕ್ಕೆ ಒತ್ತಾಯ ಮಾಡಲಿ. ಇಲ್ಲದೇ ಹೋದರೆ ಇವರನ್ನು ಸಮಾಜ ವಿರೋಧಿ ಎನ್ನಬೇಕಾಗುತ್ತದೆ. ಮೂವರು ಮುನಿರತ್ನ ಪರ ಮಾತಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಬೇಕು” ಎಂದು ಒತ್ತಾಯಿಸಿದರು.

ನಾಗಮಂಗಲ ಘಟನೆ ಮುಚ್ಚಿ ಹಾಕೋಕೆ ಸರ್ಕಾರ ಮುನಿರತ್ನ ವಿಷಯ ದೊಡ್ಡದು ಮಾಡಲು ಮುಂದಾಗಿದೆ ಎಂಬ ಬಿಜೆಪಿ ಆರೋಪ‌ ವಿಚಾರವಾಗಿ ಪ್ರತಿಕ್ರಿಯಿಸಿ, “ನಾಗಮಂಗಲದಲ್ಲಿ ಹಿಂದೂಗಳು-ಮುಸ್ಲಿಮರು ಒಟ್ಟಾಗಿ ಗಣೇಶ ಬಿಟ್ಟಿದ್ದಾರೆ. ಬಿಜೆಪಿಯವರಿಗೆ ಇಷ್ಟು ಬೇಗ ಇದು ಮುಗಿದು ಹೋಯ್ತು ಅಂತ ಬೇಸರ ಇದೆ. ಮುಸ್ಲಿಮರು ಮತ್ತು ಹಿಂದೂಗಳು ಒಟ್ಟಾಗಿ ಇದ್ದಾರೆ‌. ಸಣ್ಣ ಪುಟ್ಟ ಗೊಂದಲ ಮಾಡೋರು ಬೇರೆ ಇದ್ದಾರೆ ಬಿಟ್ಟರೆ ಈಗ ಎಲ್ಲರೂ ಒಂದಾಗಿದ್ದಾರೆ. ಬಿಜೆಪಿ ಅವರು ಇದಕ್ಕೆ ಸಂತೋಷಪಡೋದು ಬಿಟ್ಟು ಸಮಿತಿ ಕಳಿಸಿದ್ದಾರೆ. ಇದಕ್ಕೇನು ಹೇಳೋಣ?. ಕೆರಗೋಡು, ನಾಗಮಂಗಲ ಕೇಸ್ ಪ್ರಯತ್ನ ಫೇಲ್ ಆಯ್ತು ಅಂತ ಬಿಜೆಪಿ ಅವರಿಗೆ ರಾತ್ರಿ ನಿದ್ರೆ ಇಲ್ಲವಂತೆ. ಇದನ್ನು ಬಿಟ್ಟು ಬೇರೆ ರಾಜಕೀಯ ಮಾಡಲಿ ಎಂದು ಟಾಂಗ್​ ಕೊಟ್ಟರು.

ಸಿಎಂ ಸಿದ್ದರಾಮಯ್ಯ ಭೇಟಿಯ ಬಳಿಕ ಮಾತನಾಡಿದ ಸಚಿವ ಎಂ.ಸಿ ಸುಧಾಕರ್​, “ಮುನಿರತ್ನ ಅವರು ಮಾತನಾಡಿರುವ ಆಡಿಯೋ ಬಂದಿದೆ. ಅದರಲ್ಲಿ ಒಕ್ಕಲಿಗ ಹಾಗೂ ದಲಿತರ ಕುರಿತಾಗಿ ಮಾತನಾಡಿರುವುದು ಖಂಡನೀಯ. ಅದು ಬಹಳಷ್ಟು ನೋವು ಉಂಟು ಮಾಡಿದೆ. ಸರ್ಕಾರ ಅವರನ್ನು ಬಂಧಿಸುವ ಕೆಲಸ ಮಾಡಿದೆ. ಇದೀಗ ಒಂದು ಆಡಿಯೋ ಮಾತ್ರ ಬೆಳಕಿಗೆ ಬಂದಿದೆ. ಈ ಹಿಂದೆ ಹಲವು ಬಾರಿ ಈ ರೀತಿ ಮಾತನಾಡಿದ್ದಾರೆ” ಎಂದು ಆರೋಪಿಸಿದರು.

ಹನುಮಂತರಾಯಪ್ಪ ಆಡಿಯೋ ವೈರಲ್ ವಿಚಾರವಾಗಿ,‌ “ಹನುಮಂತರಾಯಪ್ಪ ಆಡಿಯೋ ನಾನು ಕೇಳಿದ್ದೇನೆ. ಅವರೇನು ತಪ್ಪಾಗಿ ಮಾತಾಡಿಲ್ಲ. ಗುತ್ತಿಗೆಯಲ್ಲಿ ಆಗಿರುವ ಸಮಸ್ಯೆ ಪರಿಹಾರ ಮಾಡೋದಾಗಿ ಮಾತ್ರ ಹೇಳಿದ್ದಾರೆ. ಇದಕ್ಕೂ ಮುನಿರತ್ನ ಮಾತಾಡಿರೋದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

ದೇಶ

ಕಾಂಗ್ರೆಸ್‌ನಲ್ಲಿ ಭಾರಿ ಶಿಸ್ತು ಕ್ರಮ: ನಟಿ ಭಾವನಾ ರಾಮಣ್ಣ ಸೇರಿ ಹಲವರಿಗೆ ಶಾಕ್

Published

on

ಬೆಂಗಳೂರು: Karnataka Pradesh Congress Committee ಪ್ರಮುಖ ಸಭೆಗೆ ಗೈರಾಗಿದ್ದ ಪದಾಧಿಕಾರಿಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ D. K. Shivakumar ಭಾರೀ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SSR) ಕುರಿತ ಮಹತ್ವದ ಸಭೆಯನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಮೇಲೆ ಹಲವು ಹಿರಿಯ ನಾಯಕರನ್ನು ಪಕ್ಷದ ಹುದ್ದೆಗಳಿಂದ ತಕ್ಷಣದಿಂದಲೇ ವಜಾಗೊಳಿಸಲಾಗಿದೆ.

ಈ ಕ್ರಮದಡಿ ಕೆಪಿಸಿಸಿ ವಕ್ತಾರರಾದ Niketh Raj Maurya, Bhavana Ramanna ಸೇರಿದಂತೆ ಶಿವಮೂರ್ತಿ ನಾಯಕ್, ಎಂ.ಸಿ. ವೇಣುಗೋಪಾಲ್, ಷಣ್ಮುಖ ಶಿವಳ್ಳಿ ಹಾಗೂ ಸಿ.ಆರ್. ಮನೋಹರ್ ಅವರಿಗೆ ಪಕ್ಷದಿಂದ “ಗೇಟ್ ಪಾಸ್” ನೀಡಲಾಗಿದೆ. ಇವರ ಜೊತೆಗೆ ಮೂವರು ಉಪಾಧ್ಯಕ್ಷರು ಮತ್ತು 29 ಪ್ರಧಾನ ಕಾರ್ಯದರ್ಶಿಗಳನ್ನೂ ಹುದ್ದೆಗಳಿಂದ ಕೈಬಿಡಲಾಗಿದೆ.

ಬೆಂಗಳೂರಿನಲ್ಲಿ ನಡೆದ ಈ ಮಹತ್ವದ ಸಭೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ Randeep Singh Surjewala ಕೂಡ ಭಾಗವಹಿಸಿದ್ದರು. ಪಕ್ಷದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದ ಸಭೆಗೆ ಇಷ್ಟೊಂದು ಪ್ರಮಾಣದಲ್ಲಿ ನಾಯಕರು ಗೈರಾಗಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದರು ಎನ್ನಲಾಗಿದೆ.

ಸಭೆಯನ್ನು ಲಘುವಾಗಿ ತೆಗೆದುಕೊಂಡವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸುರ್ಜೇವಾಲಾ ಸೂಚನೆ ನೀಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಆಕ್ಷನ್ ಮೋಡ್‌ಗೆ ಇಳಿದಿದ್ದಾರೆ. ಈ ಮೂಲಕ ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಇದೇ ವೇಳೆ ರಾಜ್ಯ ರಾಜಕೀಯದಲ್ಲಿ Siddaramaiah ಅವರ ರಾಜೀನಾಮೆ ಹಾಗೂ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ ಈ ಕ್ರಮ ಕಾಂಗ್ರೆಸ್ ಪಾಳಯದಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.

ಪಕ್ಷದಲ್ಲಿ ಹಿರಿಯರಾಗಿರಲಿ ಅಥವಾ ಪ್ರಮುಖ ಹುದ್ದೆಯಲ್ಲಿರಲಿ, ಜವಾಬ್ದಾರಿ ಮತ್ತು ಶಿಸ್ತು ಪಾಲನೆ ಕಡ್ಡಾಯ ಎಂಬುದನ್ನು ಡಿಕೆ ಶಿವಕುಮಾರ್ ಈ ನಿರ್ಧಾರದ ಮೂಲಕ ಸ್ಪಷ್ಟಪಡಿಸಿದ್ದಾರೆ.

Continue Reading

ದೇಶ

“ಭಗವಂತ ನನ್ನ ಆಸೆ ಈಡೇರಿಸಿದ್ದಾನೆ”: ಇಕ್ಬಾಲ್ ಹುಸೇನ್ ಭಾವನಾತ್ಮಕ ಮಾತು

Published

on

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರಗೊಂಡಿರುವ ನಡುವೆಯೇ Iqbal Hussain ನೀಡಿರುವ ಹೇಳಿಕೆ ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಉಪಮುಖ್ಯಮಂತ್ರಿ D. K. Shivakumar ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ವಿಚಾರವಾಗಿ ಮಾತನಾಡಿದ ಅವರು, “ಭಗವಂತ ನನ್ನ ಆಸೆ ಈಡೇರಿಸಿದ್ದಾನೆ” ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, “ಭಗವಂತನ ದಯೆಯಿಂದ ಒಳ್ಳೆ ಕಾಲ ಬಂದಿದೆ. ನಮ್ಮ ನಾಯಕರಿಗೆ ರಾಜ್ಯದ ಜನರು ಬಯಸಿದ್ದನ್ನು ಭಗವಂತ ನೆರವೇರಿಸಿದ್ದಾನೆ. ಅವನಿಗೆ ಕೋಟಿ ಕೋಟಿ ನಮಸ್ಕಾರಗಳು” ಎಂದು ಹೇಳಿದ್ದಾರೆ.

“ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಪಕ್ಷದ ವರಿಷ್ಠರು ಶಿಸ್ತಿನಿಂದ ಇರಲು ಸೂಚಿಸಿದ್ದರು. ಕಾಲ ಬಂದಾಗ ಮಾತನಾಡಿ ಎಂದಿದ್ದರು. ಈಗ ಆ ಸಮಯ ಬಂದಿದೆ” ಎಂದು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಸುಳಿವನ್ನೂ ನೀಡಿದ್ದಾರೆ.

ಇನ್ನೂ ನಾಯಕರು ಬೆಂಗಳೂರಿಗೆ ಬಂದ ಬಳಿಕ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ ಅವರು, ಕಾರ್ಯಕರ್ತರು ಹಾಗೂ ನಾಯಕರ ಜೊತೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಇಕ್ಬಾಲ್ ಹುಸೇನ್, “ರಾತ್ರಿ ನನಗೆ ನಿದ್ದೆ ಬರಲಿಲ್ಲ. ದೆಹಲಿಯಲ್ಲಿ ಮಾತನಾಡಬೇಕಾದವರ ಜೊತೆ ಮಾತನಾಡುತ್ತಿದ್ದೆ. ಕ್ಷಣಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದೆ” ಎಂದು ಹೇಳಿದ್ದಾರೆ.

ಈ ಹೇಳಿಕೆ ಇದೀಗ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ.

Continue Reading

ಬೆಂಗಳೂರು

“ನಾಳೆ ಎಲ್ಲ ಹೇಳುತ್ತೇನೆ”: ರಾಜಕೀಯ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸಸ್ಪೆನ್ಸ್ ಉತ್ತರ!

Published

on

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ತೀವ್ರವಾಗಿರುವ ನಡುವೆಯೇ Siddaramaiah ಅವರು “ನಾಳೆ ಮಾತನಾಡುತ್ತೇನೆ” ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಮಾಜಿ ಪ್ರಧಾನಿ Jawaharlal Nehru ಅವರ 62ನೇ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು. ಬಳಿಕ ನೆಹರು ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದ ವೇಳೆ ಮಾಧ್ಯಮ ಪ್ರತಿನಿಧಿಗಳು ದೆಹಲಿ ಪ್ರವಾಸ, ಕಾಂಗ್ರೆಸ್ ಹೈಕಮಾಂಡ್ ಸಭೆ ಹಾಗೂ ಸಿಎಂ ಬದಲಾವಣೆ ಕುರಿತ ಪ್ರಶ್ನೆಗಳನ್ನು ಕೇಳಿದಾಗ ಸಿದ್ದರಾಮಯ್ಯ ಯಾವುದೇ ವಿವರವಾದ ಪ್ರತಿಕ್ರಿಯೆ ನೀಡಲಿಲ್ಲ. “ಏನೇ ಇದ್ದರೂ ನಾಳೆ ಮಾತನಾಡುತ್ತೇನೆ” ಎಂದು ಒಂದೇ ಸಾಲಿನಲ್ಲಿ ಉತ್ತರಿಸಿ ಅಲ್ಲಿಂದ ತೆರಳಿದರು.

ಸಾಮಾನ್ಯವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಗಟ್ಟಿಯಾಗಿ ಪ್ರತಿಕ್ರಿಯಿಸುವ ಸಿದ್ದರಾಮಯ್ಯ, ಇಂದು ಮಾತ್ರ ಮೌನವಾಗಿದ್ದದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅವರ ಮುಖಭಾವದಲ್ಲೂ ಬೇಸರ ಸ್ಪಷ್ಟವಾಗಿ ಕಾಣಿಸುತ್ತಿತ್ತು ಎಂದು ಕಾರ್ಯಕ್ರಮದಲ್ಲಿ ಭಾಗಿಯಾದವರು ಹೇಳುತ್ತಿದ್ದಾರೆ.

ಇಂದು ಮುಖ್ಯಮಂತ್ರಿ ಅವರಿಗೆ ಯಾವುದೇ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಿರಲಿಲ್ಲ. ಹೀಗಾಗಿ ವಿಧಾನಸೌಧದಿಂದ ನೇರವಾಗಿ ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಗೆ ತೆರಳಿದ್ದಾರೆ.

ಇದೀಗ ನಾಳೆ ಬೆಳಗ್ಗೆ ತಮ್ಮ ಆಪ್ತ ಸಚಿವರು ಹಾಗೂ ಶಾಸಕರೊಂದಿಗೆ ಬ್ರೇಕ್‌ಫಾಸ್ಟ್ ಸಭೆ ನಡೆಸಲಿರುವ ಸಿದ್ದರಾಮಯ್ಯ, ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲಾ ರಾಜಕೀಯ ಬೆಳವಣಿಗೆಗಳ ಬಗ್ಗೆ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.

Continue Reading

Trending