Connect with us

ದೇಶ

ಅರ್ಜುನನಿದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ: ಮಾಜಿ ಕ್ಯಾಪ್ಟನ್ ಸ್ಥಾನ ತುಂಬಲು ರೆಡಿ

Published

on

ಮೈಸೂರು: ದಸರಾ ಗಜಪಡೆ ಮಾಜಿ ಕ್ಯಾಪ್ಟನ್ ಅರ್ಜುನ ಸಾವಿನ ಬಳಿಕ ಸಾಕಾನೆಗಳಿಲ್ಲದೇ ಭಣಗುಡುತ್ತಿದ್ದ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಶಿಬಿರಕ್ಕೆ ಭವಿಷ್ಯದ ಕ್ಯಾಪ್ಟನ್​ ಆಗಮನದಿಂದ ಜೀವ ಕಳೆ ಬಂದಿದೆ. ಭವಿಷ್ಯದಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿರುವ 41 ವರ್ಷದ ಮಹೇಂದ್ರ ಆನೆಯನ್ನು ದಸರಾ ಬಳಿಕ ಮತ್ತಿಗೋಡು ಆನೆ ಶಿಬಿರದಿಂದ ಬಳ್ಳೆಗೆ ಸ್ಥಳಾಂತರ ಮಾಡಲಾಗಿದೆ.

ಬಳ್ಳೆ ಆನೆ ಶಿಬಿರದಲ್ಲಿದ್ದ ಅರ್ಜುನ ಕಳೆದ ವರ್ಷ ಡಿ.4ರಂದು ಸಕಲೇಶಪುರ ಸಮೀಪ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ದುರಂತ ಅಂತ್ಯ ಕಂಡಿತ್ತು. ಅಲ್ಲದೇ, ಬಳಿಕ ಕುಮಾರಸ್ವಾಮಿ, ದುರ್ಗಪರಮೇಶ್ವರಿ ಆನೆಗಳೂ ಸಾವನ್ನಪ್ಪಿದ ನಂತರ ಆನೆಗಳಿಲ್ಲದೇ ಬಳ್ಳೆ ಶಿಬಿರ ಖಾಲಿಯಾಗಿತ್ತು. ಇದೀಗ ಅರ್ಜುನನ ಸ್ಥಳಕ್ಕೆ ಮಹೇಂದ್ರ ಆನೆಯನ್ನು ಸ್ಥಳಾಂತರಿಸಲಾಗಿದೆ. ಮಹೇಂದ್ರನ ಜೊತೆ ರಾಮಪುರ ಲಕ್ಷ್ಮೀ ಆನೆಯನ್ನೂ ಕರೆ ತಂದಿರುವುದು ಈ ಶಿಬಿರಕ್ಕೆ ಮರುಜೀವ ಬಂದಂತಾಗಿದೆ. ಕ್ಯಾಂಪ್​ಗೆ ಬಂದ ಆನೆಗಳಿಗೆ ಬಳ್ಳೆಯ ಮಾಸ್ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸ್ವಾಗತಿಸಿಕೊಳ್ಳಲಾಗಿದೆ.

2018ರಲ್ಲಿ ರಾಮನಗರದ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾದ 41 ವರ್ಷದ ಮಹೇಂದ್ರ ಕಳೆದ 2 ವರ್ಷಗಳಿಂದ ಶ್ರೀರಂಗಪಟ್ಟಣದ ಗ್ರಾಮೀಣ ದಸರಾದಲ್ಲಿ ಅಂಬಾರಿ ಆನೆಯಾಗಿ ಭಾಗವಹಿಸುತ್ತಿತ್ತು. ಇದನ್ನು ಈ ಬಾರಿ ಮೈಸೂರು ದಸರಾಗೆ ಕರೆತರಲಾಗಿತ್ತು. 2002ರಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಲಕ್ಷ್ಮೀ ಆನೆಯು ಇಲಾಖೆಯ ಶಿಬಿರದಲ್ಲಿ ಸಾಕಲಾಗಿದ್ದ ಆನೆಯಾಗಿದೆ. ಇವರೆಡೂ ಈಗ ಬಳ್ಳೆ ಆನೆ ಶಿಬಿರ ಸೇರಿವೆ.

ಅಂಬಾರಿ ಹೊರುವ ಭರವಸೆ ಮೂಡಿಸಿದ ಮಹೇಂದ್ರ: ಸದ್ಯ ಮಹೇಂದ್ರ ಭವಿಷ್ಯದ ಅಂಬಾರಿ ಆನೆಯಾಗುವ ಭರವಸೆ ಮೂಡಿಸಿದ್ದಾನೆ. ಈಗಾಗಲೇ ಆನೆಪ್ರಿಯರು ಮುಂದಿನ ಅಂಬಾರಿ ಆನೆ ಮಹೇಂದ್ರ ಎಂದೇ ಹೇಳುತ್ತಿದ್ದಾರೆ. ಮಹೇಂದ್ರನನ್ನು ಬಲಿಷ್ಠವಾಗಿ ತಯಾರುಗೊಳಿಸುವ ಜವಾಬ್ದಾರಿ ಮಾವುತ ರಾಜಣ್ಣ ಮತ್ತು ಕಾವಾಡಿ ಮಲ್ಲಿಕಾರ್ಜುನ ಹಾಗೂ ಜಮೇದಾರನಾಗಿ ನೇಮಕಗೊಂಡಿರುವ ಅರ್ಜುನ ಆನೆಯ ಮಾವುತನಾಗಿದ್ದ ವಿನುವಿನ ಹೆಗಲ ಮೇಲಿದೆ.

ಬಳ್ಳೆಯಲ್ಲಿದ್ದ ದಸರಾ ಆನೆಗಳು: ಈ ಹಿಂದೆ ಬಳ್ಳೆ ಆನೆ ಶಿಬಿರದ ರಾಜೇಂದ್ರ 3 ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಆನೆ. ವಯೋ ಸಹಜವಾಗಿ ದಸರಾದಿಂದ ರಾಜೇಂದ್ರನಿಗೆ ನಿವೃತ್ತಿ ನೀಡಲಾಗಿತ್ತು. ಕೊನೆಗೆ ಇಳಿ ವಯಸ್ಸಿನಲ್ಲಿ ರಾಜೇಂದ್ರ ಸಾವನ್ನಪ್ಪಿತ್ತು.

ಬಳಿಕ 1971ರಲ್ಲಿ ಕಾಕನಕೋಟೆ ಖೆಡ್ಡದಲ್ಲಿ ಸೆರೆಯಾದ ದ್ರೋಣ ಆನೆಯನ್ನು ಮಾವುತ ದೊಡ್ಡಪ್ಪಾಜಿ ಪಳಗಿಸಿದರು. 1981ರಲ್ಲಿ ಅಂಬಾರಿ ಹೊರುವ ಕಾಯಕ ಆರಂಭಿಸಿದ ದ್ರೋಣ 1997ರ ನಡುವೆ 18 ಬಾರಿ ಅಂಬಾರಿ ಹೊತ್ತು ದಾಖಲೆ ಬರೆದಿತ್ತು. 1998ರಲ್ಲಿ ವಿಪರ್ಯಾಸವೆಂಬಂತೆ ಮೇಯುವಾಗ ವಿದ್ಯುತ್ ತಗುಲಿ ಮೃತಪಟ್ಟಿತ್ತು.

ಬಲರಾಮನ ಬಳಿಕ ಅಂಬಾರಿ ಹೊತ್ತ ಆನೆ ಅರ್ಜುನ: ಬಳ್ಳೆ ಆನೆ ಶಿಬಿರದ ಅರ್ಜುನ ಆನೆಯು 9 ಬಾರಿ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದ. ಅತ್ಯಾಕರ್ಷಕ ಮೈಕಟ್ಟಿನಿಂದಲೇ ಹಾಗೂ ಲಕ್ಷಣವಾದ ಮುಖದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ ಆನೆ ಇದಾಗಿತ್ತು. 1968ರಲ್ಲಿ ಕಾಕನಕೋಟೆಯ ಖೆಡ್ಡದಲ್ಲಿ ಸೆರೆಹಿಡಿಯಲಾದ ಅರ್ಜುನ ಆನೆಯನ್ನು ಬಳ್ಳೆ ಆನೆ ಶಿಬಿರದಲ್ಲಿ ಪಳಗಿಸಲಾಯಿತು. ವಿಪರ್ಯಾಸವೆಂಬಂತೆ, ಸಕಲೇಶಪುರ ಸಮೀಪ ಕಾಡಾನೆ ಸೆರೆಹಿಡಿಯುವ ವೇಳೆ 2023ರ ಡಿಸೆಂಬರ್ ಮೊದಲ ವಾರದಂದು ಅರ್ಜುನ ಸಾವನ್ನಪ್ಪಿದ.

ಈ ಸಂಬಂಧ ನಾಗರಹೊಳೆ ರಾಷ್ಟ್ರೀಯ ನಿರ್ದೇಶಕಿ ಪಿ.ಎ.ಸೀಮಾ ಮಾತನಾಡಿ, ”ಸರ್ಕಾರದ ಆದೇಶದಂತೆ ಸ್ಥಳಾಂತರಿಸಲಾಗಿದೆ. ಬಳ್ಳೆ ಶಿಬಿರದಲ್ಲಿ ಯಾವುದೇ ಆನೆಗಳಿಲ್ಲದಿರುವುದರಿಂದ ಹುಲಿ, ಆನೆ ಕಾರ್ಯಾಚರಣೆಗಳಿದ್ದಾಗ ಇಲ್ಲಿಂದ ಆನೆಗಳನ್ನು ಕರೆತರುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಮಹೇಂದ್ರ ಮತ್ತು ಲಕ್ಷ್ಮೀ ಆನೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ‌” ಎಂದಿದ್ದಾರೆ.

ದೇಶ

ಇರಾನ್ ಶಾಕ್: ಹೊಸ ಸರ್ವೋಚ್ಚ ನಾಯಕ ಗಂಭೀರ ಸ್ಥಿತಿ!

Published

on

By

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಇರಾನ್ ರಾಜಕೀಯ ವಲಯದಲ್ಲಿ ಸಂಚಲನಕಾರಿ ಮಾಹಿತಿ ಹೊರಬಂದಿದೆ. ಹೊಸದಾಗಿ ಸರ್ವೋಚ್ಚ ನಾಯಕರಾಗಿ ಆಯ್ಕೆಯಾಗಿರುವ Mojtaba Khamenei ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, Qom ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಡಳಿತಾತ್ಮಕ ನಿರ್ಧಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಗುಪ್ತಚರ ಮೂಲಗಳು ಸೂಚಿಸಿವೆ.

ಈ ದಾಳಿಯಲ್ಲೇ ಅವರ ತಂದೆ, ಇರಾನ್‌ನ ಹಿಂದಿನ ಸರ್ವೋಚ್ಚ ನಾಯಕ Ali Khamenei ಮೃತಪಟ್ಟಿರುವುದಾಗಿ ಹೇಳಲಾಗಿದೆ. ಶಿಯಾ ಧರ್ಮಗುರುಗಳ ಕೇಂದ್ರವಾಗಿರುವ ಕೋಮ್‌ನಲ್ಲಿ ಅವರ ಅಂತ್ಯಕ್ರಿಯೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.

ಯುದ್ಧದ ಆರಂಭದಿಂದಲೇ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಹೆಸರಿನಲ್ಲಿ ಪ್ರಕಟವಾಗಿರುವ ಹೇಳಿಕೆಗಳನ್ನು ರಾಜ್ಯ ಮಾಧ್ಯಮಗಳು ಓದುತ್ತಿದ್ದರೂ, ಅವರ ಧ್ವನಿ ದಾಖಲೆ ಇಲ್ಲದಿರುವುದು ಅವರ ಆರೋಗ್ಯದ ಬಗ್ಗೆ ಅನುಮಾನ ಮೂಡಿಸಿದೆ.

ಇದಲ್ಲದೆ, Iran ಸರ್ಕಾರ ಕೃತಕ ಬುದ್ಧಿಮತ್ತೆ ಬಳಸಿ ಬಿಡುಗಡೆ ಮಾಡಿದ ವಿಡಿಯೋವೂ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಖಮೇನಿ ಯುದ್ಧ ತಂತ್ರಗಳನ್ನು ಪರಿಶೀಲಿಸುತ್ತಿರುವಂತೆ ತೋರಿಸಲಾಗಿದೆ.

ಒಟ್ಟಿನಲ್ಲಿ, ಇರಾನ್‌ನಲ್ಲಿ ನಾಯಕತ್ವದ ಅನಿಶ್ಚಿತತೆ ಹಾಗೂ ಯುದ್ಧದ ಪರಿಣಾಮ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟಿಸಿದೆ.

Continue Reading

ದೇಶ

Bengaluru : ₹180ಗೆ ತೆಂಗಿನ ನೀರು? ಬೆಂಗಳೂರಲ್ಲಿ ಏನಾಗ್ತಿದೆ ನೋಡಿ!

Published

on

By

ಬೆಂಗಳೂರು: ಬೇಸಿಗೆ ತಾಪಮಾನ ಏರಿಕೆಯಾಗುತ್ತಿದ್ದಂತೆ ತಂಪು ಪಾನೀಯಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ನೈಸರ್ಗಿಕ ಪಾನೀಯವಾದ ತೆಂಗಿನ ನೀರಿಗೆ ಸಿಕ್ಕಿರುವ ಬೇಡಿಕೆ ಈಗ ಅಚ್ಚರಿಯ ಮಟ್ಟ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ತೆಂಗಿನ ನೀರನ್ನು ಲೀಟರ್‌ಗೆ ಮಾರಾಟ ಮಾಡಲಾಗುತ್ತಿದ್ದು, ಅದರ ಬೆಲೆ ಕೇಳಿದವರು ಬೆಚ್ಚಿಬಿದ್ದಿದ್ದಾರೆ.

ನಗರದ ಕೆಲವು ಭಾಗಗಳಲ್ಲಿ ಒಂದು ಲೀಟರ್ ತೆಂಗಿನ ನೀರಿಗೆ ₹180 ವರೆಗೆ ದರ ನಿಗದಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಒಂದೇ ತೆಂಗಿನಕಾಯಿ ₹70ರಿಂದ ₹80ರೊಳಗೆ ಮಾರಾಟವಾಗುತ್ತಿದ್ದರೂ, ಬೇಡಿಕೆ ಹೆಚ್ಚಾದ ಕಾರಣ ವ್ಯಾಪಾರಿಗಳು ಹೊಸ ರೀತಿಯಲ್ಲಿ ಲೀಟರ್ ಲೆಕ್ಕದಲ್ಲಿ ಮಾರಾಟ ಆರಂಭಿಸಿದ್ದಾರೆ.

ಬೆಂಗಳೂರಿನ ನವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ “1 ಲೀಟರ್ ತೆಂಗಿನ ನೀರು – ₹180” ಎಂಬ ಬೋರ್ಡ್‌ಗಳು ಕಾಣಿಸಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೇಸಿಗೆ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಜನರು ಹೆಚ್ಚು ತಂಪು ಮತ್ತು ಆರೋಗ್ಯಕರ ಪಾನೀಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೆಂಗಿನ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ, ಪೂರೈಕೆ ಕಡಿಮೆ ಹಾಗೂ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಸಾಮಾನ್ಯ ಜನರು ಮಾತ್ರ ಈ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಇಷ್ಟು ದುಬಾರಿ ದರದಲ್ಲಿ ತೆಂಗಿನ ನೀರು ಖರೀದಿಸಲು ಸಾಧ್ಯವೇ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಸಮತೋಲನದಿಂದ ಬೆಂಗಳೂರಿನಲ್ಲಿ ತೆಂಗಿನ ನೀರಿನ ಬೆಲೆ ಗಗನಕ್ಕೇರಿದೆ.

Continue Reading

ದೇಶ

12 ವರ್ಷದ ಗೊಂದಲಕ್ಕೆ ತೆರೆ: ಅಮರಾವತಿ ರಾಜಧಾನಿ ಘೋಷಣೆ

Published

on

By

ಅಮರಾವತಿ: ಆಂಧ್ರ ಪ್ರದೇಶದ ರಾಜಧಾನಿ ಕುರಿತಾಗಿ ಹನ್ನೆರಡು ವರ್ಷಗಳ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯದ ಏಕೈಕ ರಾಜಧಾನಿಯಾಗಿ Amaravati ನಗರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ನಿರ್ಧಾರದಿಂದ ದೀರ್ಘಕಾಲದ ರಾಜಕೀಯ ಚರ್ಚೆಗಳಿಗೆ ಅಂತ್ಯ ಕಂಡಿದೆ.

2014ರಲ್ಲಿ ಆಂಧ್ರ ಪ್ರದೇಶ ವಿಭಜನೆಯಾಗಿ Telangana ಹುಟ್ಟಿಕೊಂಡ ನಂತರ, Hyderabad ಅನ್ನು ತಾತ್ಕಾಲಿಕ ಜಂಟಿ ರಾಜಧಾನಿಯಾಗಿ ಘೋಷಿಸಲಾಗಿತ್ತು. ಆ ಅವಧಿ ಮುಗಿದರೂ ಹೊಸ ರಾಜಧಾನಿ ಕುರಿತು ಸ್ಪಷ್ಟತೆ ಬರದೇ ಹನ್ನೆರಡು ವರ್ಷಗಳ ಕಾಲ ಗೊಂದಲ ಮುಂದುವರಿದಿತ್ತು.

ಹಿಂದಿನ ಮುಖ್ಯಮಂತ್ರಿ Y. S. Jagan Mohan Reddy ಮೂರು ರಾಜಧಾನಿಗಳ ಯೋಜನೆ (ಅಮರಾವತಿ – ಶಾಸನ, ಕರುನೂಲ್ – ನ್ಯಾಯಾಂಗ, ವಿಶಾಖಪಟ್ಟಣಂ – ಆಡಳಿತ) ಮುಂದಿಟ್ಟಿದ್ದು ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಯಿತು. ಈ ಪ್ರಸ್ತಾವನೆಗೆ ಕೇಂದ್ರದ ಅನುಮೋದನೆ ಸಿಗದೇ ಯೋಜನೆ ಮುಂದುವರಿಯಲಿಲ್ಲ.

ಇದಾದ ಬಳಿಕ 2024ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ N. Chandrababu Naidu ಅಮರಾವತಿಯನ್ನು ಏಕೈಕ ರಾಜಧಾನಿಯಾಗಿ ಘೋಷಿಸಿ, ಸಂಬಂಧಿಸಿದ ಕಾನೂನು ಕ್ರಮಗಳನ್ನು ಕೈಗೊಂಡರು. ಜೊತೆಗೆ, ಭವಿಷ್ಯದಲ್ಲಿ ರಾಜಧಾನಿ ಬದಲಾವಣೆಗೆ ಅವಕಾಶವಿಲ್ಲದಂತೆ ಸಂಸತ್ತಿನಲ್ಲಿ ತಿದ್ದುಪಡಿ ಕಾಯಿದೆ ಅಂಗೀಕರಿಸಲಾಗಿದೆ.

ಈ ಕ್ರಮದೊಂದಿಗೆ ಆಂಧ್ರ ಪ್ರದೇಶ ಪುನರ್‌ವಿಂಗಡಣೆ (ತಿದ್ದುಪಡಿ) ಕಾಯಿದೆ–2026 ಅಂಗೀಕಾರಗೊಂಡಿದ್ದು, ರಾಜ್ಯದ ರಾಜಧಾನಿ ಪ್ರಶ್ನೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ರಾಜಕೀಯ ಪಕ್ಷಗಳ ನಡುವಿನ ಹಗ್ಗಜಗ್ಗಾಟ ಮತ್ತು ವಿಭಿನ್ನ ಪ್ರಸ್ತಾವನೆಗಳೇ ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದವು.

ಒಟ್ಟಿನಲ್ಲಿ, ಅಮರಾವತಿ ಈಗ ಆಂಧ್ರ ಪ್ರದೇಶದ ಕಾನೂನಾತ್ಮಕ ಹಾಗೂ ಶಾಶ್ವತ ರಾಜಧಾನಿಯಾಗಿ ಘೋಷಣೆಗೊಂಡಿದೆ.

Continue Reading

Trending