Connect with us

ದೇಶ

ಬೆಂಗಳೂರು ಅಂತಾರಾಷ್ಟ್ರೀಯ 17ನೇ ಚಲನಚಿತ್ರೋತ್ಸವ: ‘ಕೇಳಿಸಿಕೊಳ್ಳುವ ಮಾರ್ಗವಾಗಿ ಸಿನಿಮಾ’ – ಸೌಂಡ್ ಡಿಸೈನರ್ ಬಿಸ್ವದೀಪ್ ಚಟರ್ಜಿ ಮಾಸ್ಟರ್‌ಕ್ಲಾಸ್

Published

on

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ 17ನೇ ಚಲನಚಿತ್ರೋತ್ಸವ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ದೇಶಿ–ವಿದೇಶಿ ಸಿನಿಮಾಗಳ ಪ್ರದರ್ಶನದ ಜೊತೆಗೆ ಸಿನಿಮಾ ಸಂಬಂಧಿತ ಸಂವಾದಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಈ ಹಿನ್ನೆಲೆ, ‘3 ಇಡಿಯಟ್ಸ್’, ‘ಬಾಜಿರಾವ್ ಮಸ್ತಾನಿ’, ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಮತ್ತು ಇತ್ತೀಚಿನ ‘ಧುರಂಧರ್’ ಚಿತ್ರಗಳ ಸೌಂಡ್ ಡಿಸೈನರ್ ಬಿಸ್ವದೀಪ್ ಚಟರ್ಜಿ, ‘Cinema as a Way of Listening (ಕೇಳಿಸಿಕೊಳ್ಳುವ ಮಾರ್ಗವಾಗಿ ಸಿನಿಮಾ)’ ಎಂಬ ಮಾಸ್ಟರ್‌ಕ್ಲಾಸ್‌ನಲ್ಲಿ ಮಾತನಾಡಿದರು.

ಸಂಸ್ಕೃತಿ, ಪರಿಸರ ಮತ್ತು ಅಕೌಸ್ಟಿಕ್ಸ್ (ಧ್ವನಿವಿಜ್ಞಾನ) ಸಿನಿಮಾ ಶಬ್ದ ವಿನ್ಯಾಸವನ್ನಷ್ಟೇ ಅಲ್ಲದೆ, ದೈನಂದಿನ ಜೀವನದಲ್ಲಿ ನಾವು ಕೇಳಿಸಿಕೊಳ್ಳುವ ಹಾಗೂ ಸಂವಹನ ಮಾಡುವ ವಿಧಾನವನ್ನೂ ಹೇಗೆ ರೂಪಿಸುತ್ತವೆ ಎಂಬುದನ್ನು ಚಟರ್ಜಿ ವಿವರಿಸಿದರು.


ಕೇಳಿಸಿಕೊಳ್ಳುವುದು ಒಂದು ಸಾಂಸ್ಕೃತಿಕ ಅಭ್ಯಾಸ

ಭಾರತೀಯರು ಸಾಮಾನ್ಯವಾಗಿ ಜೋರಾಗಿ ಮಾತನಾಡುವ ಪ್ರವೃತ್ತಿ ಹೊಂದಿದ್ದಾರೆ ಎಂದು ಚಟರ್ಜಿ ಹೇಳಿದರು. ಇದು ನಾವು ವಾಸಿಸುವ ಭೌತಿಕ ಮತ್ತು ಸಾಮಾಜಿಕ ಪರಿಸರದಿಂದ ರೂಪುಗೊಂಡ ಗುಣವಾಗಿದೆ. ಪಾಶ್ಚಿಮಾತ್ಯ ದೇಶಗಳ ತಂಪಾದ ಹವಾಮಾನ, ಶಾಂತ ಪರಿಸರ ಹಾಗೂ ಉತ್ತಮ ನಗರ ಯೋಜನೆ ಶಬ್ದದೊಂದಿಗೆ ವಿಭಿನ್ನ ಸಂಬಂಧವನ್ನು ಸೃಷ್ಟಿಸುತ್ತದೆ ಎಂದು ಅವರು ವಿವರಿಸಿದರು.


ಪಾಶ್ಚಿಮಾತ್ಯ ನಗರಗಳಲ್ಲಿ ಮೌನದ ಸಂಸ್ಕೃತಿ

ಅನೇಕ ಪಾಶ್ಚಿಮಾತ್ಯ ನಗರಗಳಲ್ಲಿ ಸುತ್ತಮುತ್ತಲಿನ ಗದ್ದಲ ಕಡಿಮೆಯಿರುತ್ತದೆ. ಮೃದುವಾದ ಪೀಠೋಪಕರಣಗಳು, ಮರದ ನೆಲಹಾಸು, ಕಾರ್ಪೆಟ್‌ಗಳು ಹಾಗೂ ಸಂಸ್ಕರಿತ ಗೋಡೆಗಳು ಶಬ್ದವನ್ನು ಪ್ರತಿಧ್ವನಿಸುವ ಬದಲು ಹೀರಿಕೊಳ್ಳುತ್ತವೆ. ಇದರಿಂದ ಜನರು ಪರಸ್ಪರ ಕೇಳಿಸಿಕೊಳ್ಳಲು ಧ್ವನಿಯನ್ನು ಏರಿಸುವ ಅಗತ್ಯವಿರುವುದಿಲ್ಲ ಎಂದರು.


ಧ್ವನಿ ವಿಜ್ಞಾನ ಅರಿವಿನ ಕೊರತೆಯೇ ಸಮಸ್ಯೆ

ಕಟ್ಟಡಗಳು ಮತ್ತು ಸ್ಥಳಗಳನ್ನು ವಿನ್ಯಾಸಗೊಳಿಸುವಾಗ ಅಕೌಸ್ಟಿಕ್ಸ್‌ಗೆ ಆದ್ಯತೆ ನೀಡಿದರೆ, ಸ್ಪಷ್ಟತೆ ಮತ್ತು ಸಮಾಧಾನ ಎರಡೂ ಹೆಚ್ಚಾಗುತ್ತವೆ ಎಂದು ಚಟರ್ಜಿ ಅಭಿಪ್ರಾಯಪಟ್ಟರು. ಗದ್ದಲದ ನಡುವೆ ಜನರು ಅರಿವಿಲ್ಲದೇ ತಮ್ಮ ಧ್ವನಿಯನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆ ಎಂಬುದಕ್ಕೂ ಅವರು ಉದಾಹರಣೆ ನೀಡಿದರು.


ಸಿನಿಮಾದ ಶಬ್ದ ವಿನ್ಯಾಸದ ತತ್ವ

ಅನುಭವಿ ಮಾತುಗಾರರು ಜೋರಾಗಿ ಕೂಗುವುದಕ್ಕಿಂತ ಧ್ವನಿಯ ಪಿಚ್ ಮತ್ತು ಫ್ರೀಕ್ವೆನ್ಸಿಯನ್ನು ಹೊಂದಿಸಿಕೊಳ್ಳುತ್ತಾರೆ. ಇದೇ ತತ್ವ ಸಿನಿಮಾದ ಶಬ್ದ ಮುದ್ರಣ ಮತ್ತು ಮಿಕ್ಸಿಂಗ್‌ನ ಮೂಲಾಧಾರ. ಶಬ್ದ ವಿನ್ಯಾಸದ ಗುರಿ ಒಂದೇ – ಗೊಂದಲವಿಲ್ಲದ ಸ್ಪಷ್ಟತೆ ಎಂದು ಚಟರ್ಜಿ ಹೇಳಿದರು.

ತಮ್ಮ ಮಾಸ್ಟರ್‌ಕ್ಲಾಸ್‌ನಲ್ಲಿ ಅವರು ಕೆಲಸ ಮಾಡಿದ ಸಿನಿಮಾಗಳ ಕೆಲವು ದೃಶ್ಯಗಳನ್ನು ಪ್ರದರ್ಶಿಸಿ, ಶಬ್ದ ವಿನ್ಯಾಸವು ಕಥೆ ಹೇಳುವಿಕೆಗೆ ಹೇಗೆ ಆಳವನ್ನು ನೀಡುತ್ತದೆ ಎಂಬುದನ್ನು ವಿವರಿಸಿದರು.

ದೇಶ

ಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ

Published

on

ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಭಾನುವಾರ ಭಾವುಕ ವಿದಾಯ ನೀಡಲಾಯಿತು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದ್ದು, ಮೈಸೂರು ಜಿಲ್ಲಾಡಳಿತದಿಂದ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ಎಸ್. ಜಾನಕಿ ಅವರ ಪತಿ ರಾಮಪ್ರಸಾದ್ ಅವರು 1997ರಲ್ಲೇ ನಿಧನರಾಗಿದ್ದರು. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಕೂಡ 2026ರ ಜನವರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬದಲ್ಲಿ ಪುರುಷ ವಾರಸುದಾರರಿಲ್ಲದ ಕಾರಣ, ಜಾನಕಿ ಅವರ ಮೊಮ್ಮಗಳು ಅಪ್ಸರಾ ಕುಟುಂಬದ ಪರವಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಭಾವುಕ ಕ್ಷಣ ಕಂಡು ಸ್ಥಳದಲ್ಲಿದ್ದ ಅಭಿಮಾನಿಗಳು ಕಣ್ಣೀರಿಟ್ಟರು.

1956ರಲ್ಲಿ ರಾಮಪ್ರಸಾದ್ ಅವರನ್ನು ವಿವಾಹವಾಗಿದ್ದ ಎಸ್. ಜಾನಕಿ, ತಮ್ಮ ಪತಿಯನ್ನು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದರು. ಜಾನಕಿ ಅವರ ಸಂಗೀತ ಪಯಣದಲ್ಲಿ ರಾಮಪ್ರಸಾದ್ ಸದಾ ಬೆಂಬಲವಾಗಿ ನಿಂತಿದ್ದು, ಅವರ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದರು ಎಂದು ಕುಟುಂಬದವರು ನೆನಪಿಸಿಕೊಂಡರು.

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಅಮರ ಗೀತೆಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ, 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಾಯನಕ್ಕೆ ವಿದಾಯ ಹೇಳಿದ್ದರು. ಮಲಯಾಳಂ ಚಿತ್ರದ ‘ಅಮ್ಮ ಪೂವಿನುಂ’ ಜೋಗುಳ ಗೀತೆ ಅವರ ಗಾಯನ ಬದುಕಿನ ಕೊನೆಯ ದಾಖಲಾದ ಹಾಡಾಗಿ ಉಳಿದಿದೆ.

ಗಾನಕೋಗಿಲೆ ಎಸ್. ಜಾನಕಿ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಮಧುರ ಕಂಠ, ಅಮರ ಗೀತೆಗಳು ಮತ್ತು ಅಪಾರ ಸಂಗೀತ ಸೇವೆ ಭಾರತೀಯ ಸಂಗೀತ ಲೋಕದಲ್ಲಿ ಸದಾಕಾಲ ಜೀವಂತವಾಗಿರಲಿವೆ.

Continue Reading

ದೇಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ

Published

on

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ‘Legends and Personalities of Jammu and Kashmir’ ಪುಸ್ತಕದ ಪ್ರಕಟಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ ವಿಂಗ್ (CIK) ಮೂವರು ಪ್ರಕಾಶಕರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದೆ.

ತನಿಖಾಧಿಕಾರಿಗಳ ಪ್ರಕಾರ, ಪುಸ್ತಕದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವು ಉಗ್ರರು ಮತ್ತು ಪ್ರತ್ಯೇಕತಾವಾದಿ ನಾಯಕರನ್ನು ಜಮ್ಮು-ಕಾಶ್ಮೀರದ ಪ್ರಮುಖ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಬಂಧಿತರಲ್ಲಿ ಇಬ್ಬರು ದೆಹಲಿ ಮೂಲದವರಾಗಿದ್ದು, ಮತ್ತೊಬ್ಬರು ಜಮ್ಮುವಿನ ನಿವಾಸಿಯಾಗಿದ್ದಾರೆ. ಈ ಹಿಂದೆ ದೆಹಲಿ ಮತ್ತು ಜಮ್ಮುವಿನ ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ ಆರೋಪವೂ ಕೇಳಿಬಂದಿದ್ದು, ತನಿಖಾ ತಂಡ ಡೇಟಾವನ್ನು ಮರುಪಡೆದಿದೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖೆಯ ಭಾಗವಾಗಿ ಪುಸ್ತಕದ ಲೇಖಕರೊಬ್ಬರನ್ನು ರಾಜಸ್ಥಾನದಲ್ಲಿ ವಿಚಾರಣೆ ನಡೆಸಲಾಗಿದೆ. ಮತ್ತೊಬ್ಬ ಲೇಖಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದ ಅನುಮೋದನೆ ಪ್ರಕ್ರಿಯೆಯಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಪ್ರಾಂಶುಪಾಲರು ಸೇರಿದಂತೆ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪುಸ್ತಕದ ಪ್ರಕಟಣೆ, ಮುದ್ರಣ ಹಾಗೂ ಪ್ರಚಾರಕ್ಕೆ ಸಂಬಂಧಿಸಿದವರ ವಿರುದ್ಧ ಯುಎಪಿಎ (UAPA) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Continue Reading

ಬೆಂಗಳೂರು

Shakthi Scheme ಬಳಿಕ BMTC ಸೇವೆ ಹೇಗಿದೆ? ಬಸ್‌ನಲ್ಲಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕ ಉತ್ತರ

Published

on

ಬೆಂಗಳೂರು: Shakthi Scheme ಜಾರಿಯಾದ ಬಳಿಕ ಬಿಎಂಟಿಸಿ ಸೇವೆಗಳ ನೈಜ ಸ್ಥಿತಿ ತಿಳಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದರು. ಜಯಮಹಲ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ ಹಾಗೂ ನಾಗವಾರ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಸಾರ್ವಜನಿಕರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದರು.

ಈ ವೇಳೆ ಹೆಬ್ಬಾಳ ಮಾರ್ಗದ ಬಸ್‌ನಲ್ಲಿ ಸಚಿವರಿಗೆ ಅಚ್ಚರಿಯ ಅನುಭವ ಎದುರಾಯಿತು. ಟಿಕೆಟ್ ಪಡೆಯಲು ಅವರು ₹100 ಮುಖಬೆಲೆಯ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬಸ್‌ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಸಚಿವರು ಯಾವುದೇ ವಾಗ್ವಾದ ನಡೆಸದೆ ಬಸ್‌ನಿಂದ ಇಳಿದು, ಬಳಿಕ ಚಿಲ್ಲರೆ ಹಣ ಹೊಂದಿಸಿಕೊಂಡು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪರಿಶೀಲನೆ ವೇಳೆ ಮತ್ತೊಂದು ಗಂಭೀರ ಲೋಪವೂ ಸಚಿವರ ಗಮನಕ್ಕೆ ಬಂತು. ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೇ ಚಾಲಕ ಮುಂದಕ್ಕೆ ಚಲಿಸಿದ್ದನ್ನು ಅವರು ಖುದ್ದಾಗಿ ವೀಕ್ಷಿಸಿದರು. ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಿಸಿದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರ ಆದೇಶದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸಾರಿಗೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೈರತಿ ಸುರೇಶ್ ನೀಡಿದ್ದಾರೆ.

Continue Reading

Trending