Connect with us

ಬೆಂಗಳೂರು

Tunnel Roadಗೆ ವಿರೋಧ: ಲಾಲ್‌ಬಾಗ್‌ಗೆ ಧಕ್ಕೆ ಬೇಡ ಎಂದು ವಾಕರ್ಸ್ ಪ್ರತಿಭಟನೆ

Published

on

ಬೆಂಗಳೂರು: ನಗರದ ಬಹುಚರ್ಚಿತ ಸುರಂಗ ರಸ್ತೆ ಯೋಜನೆ (Tunnel Road Project) ವಿರುದ್ಧ ವಾಕರ್ಸ್ ಅಸೋಸಿಯೇಷನ್ ವಿನೂತನ ಪ್ರತಿಭಟನೆ ನಡೆಸಿದೆ. ಲಾಲ್‌ಬಾಗ್‌ನಲ್ಲಿರುವ ಐತಿಹಾಸಿಕ ಬಂಡೆಯನ್ನು ತಬ್ಬಿಕೊಂಡ ಪ್ರತಿಭಟನಾಕಾರರು “Save Lalbagh” ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಬಂಡೆಯನ್ನು ತಬ್ಬಿಕೊಳ್ಳಿ’ ಹೆಸರಿನಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್ ಪರಿಸರ ಹಾಗೂ ಅದರ ಸ್ವರೂಪಕ್ಕೆ ಸಮಸ್ಯೆಯಾಗುವ ಆತಂಕವಿದೆ ಎಂದು ವಾಕರ್ಸ್ ಅಸೋಸಿಯೇಷನ್ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಲಾಲ್‌ಬಾಗ್‌ಗೆ ಯಾವುದೇ ಧಕ್ಕೆ ಆಗಬಾರದು

ಬೆಂಗಳೂರು ನಗರದ ಪ್ರಮುಖ ಹಸಿರು ಪ್ರದೇಶಗಳಲ್ಲಿ ಒಂದಾಗಿರುವ ಲಾಲ್‌ಬಾಗ್‌ಗೆ ಯಾವುದೇ ಕಾರಣಕ್ಕೂ ಹಾನಿಯಾಗಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸುರಂಗ ರಸ್ತೆ ಯೋಜನೆಯ ಕಾಮಗಾರಿಯಿಂದ ಉದ್ಯಾನದ ಪರಿಸರ, ಮರಗಳು ಹಾಗೂ ಐತಿಹಾಸಿಕ ಪ್ರದೇಶದ ಮೇಲೆ ಪರಿಣಾಮ ಬೀರದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಲಾಲ್‌ಬಾಗ್‌ನಲ್ಲಿರುವ ಬಂಡೆಯನ್ನು ತಬ್ಬಿಕೊಂಡು ಪ್ರತಿಭಟನೆ ನಡೆಸುವ ಮೂಲಕ ಪರಿಸರ ಮತ್ತು ಪರಂಪರೆಯ ಸಂರಕ್ಷಣೆಯ ಮಹತ್ವವನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಲಾಯಿತು.

ಅನುಮತಿ ಇಲ್ಲದೆ ಪ್ರತಿಭಟನೆಗೆ ಅವಕಾಶವಿಲ್ಲ ಎಂದ ಪೊಲೀಸರು

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗತ್ಯ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದರು. ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಅಲ್ಲಿಂದ ತೆರಳಿದರು.

ಮುಂದಿನ ದಿನಗಳಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ವಾಕರ್ಸ್ ಅಸೋಸಿಯೇಷನ್ ಸದಸ್ಯರು ತಿಳಿಸಿದ್ದಾರೆ.

ಈ ಹಿಂದೆಯೂ ಮಾನವ ಸರಪಳಿ ಮೂಲಕ ಪ್ರತಿಭಟನೆ

ಸುರಂಗ ರಸ್ತೆ ಯೋಜನೆ ವಿರುದ್ಧ ವಾಕರ್ಸ್ ಅಸೋಸಿಯೇಷನ್ ಈ ಹಿಂದೆಯೂ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಿತ್ತು. ಈ ಹಿಂದೆ ಮಾನವ ಸರಪಳಿ ರಚಿಸುವ ಮೂಲಕ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಈಗ ಮತ್ತೊಮ್ಮೆ ‘ಲಾಲ್‌ಬಾಗ್ ಉಳಿಸಿ’ ಎಂಬ ಘೋಷಣೆಯೊಂದಿಗೆ ಬಂಡೆಯನ್ನು ತಬ್ಬಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿರುವ ವಾಕರ್ಸ್‌ಗಳು, ನಗರದ ಪರಿಸರ ಹಾಗೂ ಐತಿಹಾಸಿಕ ಪರಂಪರೆಗೆ ಯಾವುದೇ ಧಕ್ಕೆ ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

Doctors Unemployment: ಮುಂದಿನ 4 ವರ್ಷಗಳಲ್ಲಿ ವೈದ್ಯರಿಗೂ ನಿರುದ್ಯೋಗದ ಅಪಾಯ CN Manjunath

Published

on

ಬೆಂಗಳೂರು: ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ವೈದ್ಯರು ಹೊರಬರುತ್ತಿದ್ದರೂ, ಸೂಕ್ತ ನೇಮಕಾತಿ ವ್ಯವಸ್ಥೆ ಇಲ್ಲದ ಕಾರಣ ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಮುಂದುವರಿದಿದೆ ಎಂದು ಸಂಸದ ಸಿ.ಎನ್. ಮಂಜುನಾಥ್ (CN Manjunath) ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ನಾಲ್ಕು ವರ್ಷಗಳಲ್ಲಿ ವೈದ್ಯರಲ್ಲಿಯೂ ಸ್ವಲ್ಪ ಮಟ್ಟಿನ ನಿರುದ್ಯೋಗ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ಲಿನಿಕಲ್ ಪರ್ಫ್ಯೂಷನಿಸ್ಟ್ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರ್ಫ್ಯೂಷನಿಸ್ಟ್ ಅಸೋಸಿಯೇಷನ್‌ನ ಕೃತಿಯನ್ನು ಸಹ ಬಿಡುಗಡೆ ಮಾಡಿದರು.

ಪ್ರತಿವರ್ಷ 1.20 ಲಕ್ಷ ವೈದ್ಯರು ಹೊರಬರುತ್ತಿದ್ದಾರೆ

ದೇಶದಲ್ಲಿ ಪ್ರಸ್ತುತ 825 ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿವರ್ಷ ಸುಮಾರು 1.20 ಲಕ್ಷ ವೈದ್ಯರು ಹಾಗೂ 90 ಸಾವಿರ ಸ್ನಾತಕೋತ್ತರ ವೈದ್ಯರು ಹೊರಬರುತ್ತಿದ್ದಾರೆ ಎಂದು ಸಿ.ಎನ್. ಮಂಜುನಾಥ್ ಮಾಹಿತಿ ನೀಡಿದರು.

ಆರೋಗ್ಯ ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದ್ದು, ಔಷಧ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನ ಗಳಿಸಿದೆ ಎಂದರು. ವಿಶ್ವದಲ್ಲಿ ಬಳಕೆಯಾಗುವ ಪ್ರತಿ ನಾಲ್ಕನೇ ಜನರಿಕ್ ಮಾತ್ರೆಯೊಂದು ಭಾರತದಲ್ಲಿ ಉತ್ಪಾದನೆಯಾಗುತ್ತಿದೆ ಎಂದು ಅವರು ಹೇಳಿದರು.

ಎಂಆರ್‌ಐ, ಸಿಟಿ ಸ್ಕ್ಯಾನ್, ವೆಂಟಿಲೇಟರ್ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿಯೂ ಭಾರತ ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದು ತಿಳಿಸಿದರು.

ವೈದ್ಯರ ಸಂಖ್ಯೆ ಹೆಚ್ಚಿದರೂ ಗ್ರಾಮಗಳಲ್ಲಿ ಕೊರತೆ

ಲಕ್ಷಾಂತರ ವೈದ್ಯರನ್ನು ದೇಶ ಸೃಷ್ಟಿಸುತ್ತಿದ್ದರೂ, ಅಗತ್ಯವಿರುವ ಪ್ರದೇಶಗಳಲ್ಲಿ ಸೂಕ್ತ ನೇಮಕಾತಿ ನಡೆಯುತ್ತಿಲ್ಲ ಎಂಬುದು ಪ್ರಮುಖ ಸಮಸ್ಯೆಯಾಗಿದೆ ಎಂದು ಮಂಜುನಾಥ್ ಹೇಳಿದರು.

ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಎದುರಾಗುತ್ತಿದೆ. ಮತ್ತೊಂದೆಡೆ, ವೈದ್ಯರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಕಾರಣ ಉದ್ಯೋಗಾವಕಾಶಗಳನ್ನು ಸಮರ್ಪಕವಾಗಿ ಸೃಷ್ಟಿಸದಿದ್ದರೆ ಮುಂದಿನ ನಾಲ್ಕು ವರ್ಷಗಳಲ್ಲಿ ವೈದ್ಯರು ಕೂಡ ನಿರುದ್ಯೋಗದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ಪರ್ಫ್ಯೂಷನಿಸ್ಟ್‌ಗಳ ಪಾತ್ರ ಮಹತ್ವದ್ದು

ತೆರೆದ ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಸಂಕೀರ್ಣ ಚಿಕಿತ್ಸಾ ಸಂದರ್ಭಗಳಲ್ಲಿ ಕ್ಲಿನಿಕಲ್ ಪರ್ಫ್ಯೂಷನಿಸ್ಟ್‌ಗಳು ವೈದ್ಯರಿಗೆ ಪ್ರಮುಖ ನೆರವು ನೀಡುತ್ತಾರೆ ಎಂದು ಸಿ.ಎನ್. ಮಂಜುನಾಥ್ ಹೇಳಿದರು.

ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಮಾತ್ರ ಇಂತಹ ಕೋರ್ಸ್‌ಗಳಿಗೆ ಅನುಮತಿ ನೀಡುವ ಕುರಿತು ವೈದ್ಯಕೀಯ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು.

ಕ್ಲಿನಿಕಲ್ ಪರ್ಫ್ಯೂಷನಿಸ್ಟ್‌ಗಳ ಸಂಘಕ್ಕೆ ಮಾನ್ಯತೆ ಇದ್ದರೂ, ಅವರಿಗೆ ಪ್ರತ್ಯೇಕ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಸಿಪಿಎ ವೈಜ್ಞಾನಿಕ ಸಮಿತಿಯ ಮದನ್ ಕುಮಾರ್, ಅಧ್ಯಕ್ಷ ಟಿ.ಎಚ್. ಕೃಷ್ಣ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಗೋಪು ಸಭಾಪತಿ, ಜಂಟಿ ಕಾರ್ಯದರ್ಶಿ ಜಾನ್ ಪೀಟರ್ ಪ್ಯಾಟ್ರಿಕ್, ಐಸೆಟ್ ಪ್ರಧಾನ ಕಾರ್ಯದರ್ಶಿ ಲೋಕನಾಥ್ ತಿವಾರಿ ಹಾಗೂ ಕಾರ್ಯನಿರ್ವಾಹಕ ಸಮಿತಿಯ ತೇಜಸ್ ಮಂಜು ಉಪಸ್ಥಿತರಿದ್ದರು.

Continue Reading

ಬೆಂಗಳೂರು

Nation First ನಮ್ಮ ಯುವಜನತೆಯ ಆದ್ಯತೆ ಆಗಬೇಕು: ಸಿ.ಎಂ.ಸತ್ಯನಾರಾಯಣ (CMC)

Published

on

ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದ Shirkey ಅಪಾರ್ಟ್‌ಮೆಂಟ್‌ನಲ್ಲಿ ದೇಶಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿಜೆಪಿ ನಾಯಕಿ ಲಾವಣ್ಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಸಮಾಜದ ಮುಖಂಡರು ಹಾಗೂ ಶಿರ್ಕೆ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಬಿಎ ಪಾಲಿಕೆ ಆಕಾಂಕ್ಷಿ ಸಿ.ಎಂ.ಸತ್ಯನಾರಾಯಣ (CMC)) ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದು, ಅವರ ಹೋರಾಟ ಮತ್ತು ತ್ಯಾಗವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಹೇಳಿದರು.

ಯುವಜನತೆ ದೇಶ ನಿರ್ಮಾಣದಲ್ಲಿ ಭಾಗಿಯಾಗಬೇಕು: ಸತ್ಯ

ಮಾತನಾಡಿದ ಸತ್ಯ ಅವರು, “ಸ್ವಾತಂತ್ರ್ಯ ಎಂಬುದು ಕೇವಲ ಒಂದು ದಿನ ಆಚರಿಸುವ ಹಬ್ಬವಲ್ಲ. ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ಪ್ರತಿದಿನವೂ ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ವಿಶೇಷವಾಗಿ ಯುವಜನತೆ ದೇಶದ ಭವಿಷ್ಯವನ್ನು ನಿರ್ಮಿಸುವ ಜವಾಬ್ದಾರಿಯನ್ನು ಅರಿತು ಮುಂದೆ ಬರಬೇಕು” ಎಂದು ಹೇಳಿದರು.

ಭಾರತದ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮಹತ್ವದ್ದಾಗಿದ್ದು, ಜಾತಿ, ಧರ್ಮ ಮತ್ತು ಭಾಷೆಯ ಭೇದವನ್ನು ಮೀರಿ ದೇಶದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮರೆಯಬಾರದು: ಅನಿಲ್ ಚಲಗೇರಿ

ಮಾಜಿ ಅಧ್ಯಕ್ಷ ಅನಿಲ್ ಚಲಗೇರಿ ಅವರು ಮಾತನಾಡಿ, “ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಹೋರಾಟ ಮತ್ತು ಬಲಿದಾನವಿದೆ. ಅವರ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಹೇಳಿದರು.

ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ತಿಳಿಸಿದರು.

ಏಕತೆ ಮತ್ತು ಸೌಹಾರ್ದತೆಯೇ ಭಾರತದ ಶಕ್ತಿ: ಅನುರಾಧಾ ಶ್ಯಾಮ್

ಈನಾಡು ವರದಿಗಾರ್ತಿ ಅನುರಾಧಾ ಶ್ಯಾಮ್ ಅವರು ಮಾತನಾಡಿ, ಭಾರತದ ವೈವಿಧ್ಯತೆಯೇ ಅದರ ದೊಡ್ಡ ಶಕ್ತಿ ಎಂದು ಹೇಳಿದರು.

“ನಮ್ಮ ದೇಶದಲ್ಲಿ ವಿವಿಧ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಿದ್ದರೂ ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮನ್ನು ಒಗ್ಗೂಡಿಸುತ್ತದೆ. ಸಮಾಜದಲ್ಲಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಒಗ್ಗಟ್ಟು ಹೆಚ್ಚಾದಾಗ ಮಾತ್ರ ದೇಶ ಇನ್ನಷ್ಟು ಬಲಿಷ್ಠವಾಗುತ್ತದೆ” ಎಂದು ಅವರು ತಿಳಿಸಿದರು.

ಲಾವಣ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ

ಕಾರ್ಯಕ್ರಮವನ್ನು ಆಯೋಜಿಸಿದ್ದ ಬಿಜೆಪಿ ನಾಯಕಿ ಶ್ರೀಮತಿ ಲಾವಣ್ಯ ಅವರು ಮಾತನಾಡಿ, ಶಿರ್ಕೆ ಅಪಾರ್ಟ್‌ಮೆಂಟ್‌ನ ಎಲ್ಲ ನಿವಾಸಿಗಳನ್ನು ಒಂದೇ ವೇದಿಕೆಗೆ ಕರೆತಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದು ಸಂತಸದ ಸಂಗತಿ ಎಂದು ಹೇಳಿದರು.

“ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಮತ್ತು ಯುವಜನರಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಭಾವನೆ ಬೆಳೆಸಲು ಸಹಕಾರಿಯಾಗುತ್ತವೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ವಾರ್ಡ್ ಅಧ್ಯಕ್ಷ ಸಂತೋಷ್, ಜಂಗಮ ರಮೇಶ್, ಅರುಣ್ ಸೇರಿದಂತೆ ಶಿರ್ಕೆ ಅಪಾರ್ಟ್‌ಮೆಂಟ್‌ನ ಹಲವು ನಿವಾಸಿಗಳು ಭಾಗವಹಿಸಿದ್ದರು. ಈ ವೇಳೆ ಭಾಗವಹಿಸಿದ್ದ ನಿವಾಸಿಗಳೂ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಅಭಿವೃದ್ಧಿ ಮತ್ತು ಸಮಾಜದಲ್ಲಿ ಒಗ್ಗಟ್ಟಿನ ಅಗತ್ಯತೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಎಲ್ಲರೂ ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಸಂಕಲ್ಪದೊಂದಿಗೆ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸಿದರು.

Continue Reading

ರಾಜ್ಯ

Ration Card e-KYCಗೆ ಡೆಡ್‌ಲೈನ್ ಘೋಷಣೆ! ಸಚಿವ ರಿಜ್ವಾನ್ ಅರ್ಷದ್ ಮಹತ್ವದ ಮಾಹಿತಿ

Published

on

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಪಡಿತರ ಚೀಟಿ (Ration Card) ಫಲಾನುಭವಿಗಳು ಸೆಪ್ಟೆಂಬರ್ 30ರೊಳಗೆ ಕಡ್ಡಾಯವಾಗಿ e-KYC ಮಾಡಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ (Rizwan Arshad) ತಿಳಿಸಿದ್ದಾರೆ.

ಆಹಾರ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಪಡಿತರ ಚೀಟಿಗಳ e-KYC ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಸುಮಾರು ಐದು ವರ್ಷಗಳ ಬಳಿಕ ರಾಜ್ಯದ 2.65 ಕೋಟಿ ರೇಷನ್ ಕಾರ್ಡ್‌ಗಳ e-KYC ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹೊಸ ರೇಷನ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರದ ನಿರ್ಬಂಧ

ಪ್ರಸ್ತುತ ಹೊಸ ಪಡಿತರ ಚೀಟಿಗಳ ವಿತರಣೆಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ ಎಂದು ಸಚಿವರು ತಿಳಿಸಿದ್ದಾರೆ. ಈಗ ನಡೆಯುತ್ತಿರುವ e-KYC ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಕಲಿ ಹಾಗೂ ಅನರ್ಹ ಕಾರ್ಡ್‌ಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ನಂತರ ಹೊಸ ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್ ನೀಡುವ ಕುರಿತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಇದೇ ವೇಳೆ, BPL ರೇಷನ್ ಕಾರ್ಡ್ ಪಡೆಯಲು ಇರುವ ಪ್ರಸ್ತುತ ಆದಾಯ ಮಿತಿಯನ್ನು ಹೆಚ್ಚಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯಕ್ಕೆ ಹೆಚ್ಚುವರಿ 50 ಲಕ್ಷ ಫಲಾನುಭವಿಗಳ ಬೇಡಿಕೆ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಗ್ರಾಮೀಣ ಪ್ರದೇಶದ ಶೇ.75 ಹಾಗೂ ನಗರ ಪ್ರದೇಶದ ಶೇ.50 ಜನರಿಗೆ ಆಹಾರ ಭದ್ರತಾ ಸೌಲಭ್ಯ ದೊರೆಯಬೇಕು. ರಾಜ್ಯದ ಪ್ರಸ್ತುತ ಜನಸಂಖ್ಯೆಯನ್ನು ಪರಿಗಣಿಸಿ ಹೆಚ್ಚುವರಿಯಾಗಿ 50 ಲಕ್ಷ ಹೊಸ ಫಲಾನುಭವಿಗಳನ್ನು ಸೇರ್ಪಡೆ ಮಾಡಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ.

7 ಲಕ್ಷ ಅನುಮಾನಾಸ್ಪದ ಕಾರ್ಡ್‌ಗಳ ಪರಿಶೀಲನೆ

ಆದಾಯ ತೆರಿಗೆ ಪಾವತಿದಾರರು, GST ಪಾವತಿದಾರರು ಹಾಗೂ ಕಳೆದ 12 ತಿಂಗಳುಗಳಿಂದ ಪಡಿತರ ಧಾನ್ಯ ಪಡೆಯದ ಸುಮಾರು 7 ಲಕ್ಷ ರೇಷನ್ ಕಾರ್ಡ್‌ಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿದೆ ಎನ್ನಲಾಗಿದೆ. ಈ ಕಾರ್ಡ್‌ಗಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಅನರ್ಹ ಫಲಾನುಭವಿಗಳ ಕಾರ್ಡ್‌ಗಳು ರದ್ದಾಗುವ ಸಾಧ್ಯತೆಯಿದೆ.

ತಾಂತ್ರಿಕ ಕಾರಣಗಳಿಂದ ರದ್ದಾಗಿರುವ ಅರ್ಹ ಕಾರ್ಡ್‌ಗಳನ್ನು ಮರುಸ್ಥಾಪಿಸಲು ಸದ್ಯ ಅವಕಾಶ ನೀಡಲಾಗಿದೆ. ಸಾರ್ವಜನಿಕರಲ್ಲಿ ಗೊಂದಲ ಉಂಟಾಗದಂತೆ ತಾತ್ಕಾಲಿಕವಾಗಿ ಪಡಿತರ ಚೀಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Continue Reading

Trending