ದೇಶ
BTS ಅಭಿಮಾನಿಗಳಿಗೆ ಶಾಕ್! 2027ರ Grammy Awardsಗೆ ಎಂಟ್ರಿಯೇ ಇಲ್ಲ
ಸಿಯೋಲ್: ವಿಶ್ವದ ಜನಪ್ರಿಯ ಕೆ-ಪಾಪ್ (K-Pop) ಸಂಗೀತ ತಂಡ BTS 2027ರ Grammy Awards ಪ್ರಶಸ್ತಿಗೆ ತಮ್ಮ ಸಂಗೀತವನ್ನು ಸಲ್ಲಿಸದಿರಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಘೋಷಣೆಯನ್ನು ತಂಡದ ಎಲ್ಲಾ ಏಳು ಸದಸ್ಯರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಒಂದೇ ರೀತಿಯ ಹೇಳಿಕೆ ಹಂಚಿಕೊಳ್ಳುವ ಮೂಲಕ ಪ್ರಕಟಿಸಿದ್ದಾರೆ.
“ಈ ವರ್ಷ ನಾವು ಗ್ರ್ಯಾಮಿ ಪ್ರಶಸ್ತಿಗೆ ನಮ್ಮ ಸಂಗೀತವನ್ನು ಸಲ್ಲಿಸದಿರಲು ತೀರ್ಮಾನಿಸಿದ್ದೇವೆ. ಸಂಗೀತವನ್ನು ಅದರ ಗುಣಮಟ್ಟಕ್ಕಾಗಿ ಪ್ರೀತಿಸಬೇಕು. ಪ್ರದೇಶ ಅಥವಾ ಭಾಷೆಯ ಆಧಾರದ ಮೇಲೆ ವಿಭಜಿಸಬಾರದು ಎಂದು ನಾವು ಆಶಿಸುತ್ತೇವೆ,” ಎಂದು BTS ತನ್ನ ಹೇಳಿಕೆಯಲ್ಲಿ ತಿಳಿಸಿದೆ.
BTSನ ಹೊಸ ಆಲ್ಬಮ್ ‘Arirang’ ಈ ವರ್ಷದ ಅತಿ ಹೆಚ್ಚು ಮಾರಾಟವಾದ ಆಲ್ಬಮ್ಗಳಲ್ಲಿ ಒಂದಾಗಿದ್ದು, ಅದರ ಪ್ರಮುಖ ಹಾಡು ‘Swim’ ಅಮೆರಿಕದಲ್ಲಿ ನಂಬರ್-1 ಸ್ಥಾನ ಪಡೆದಿತ್ತು. ಇದರಿಂದಾಗಿ ಈ ಬಾರಿ Album of the Year ಹಾಗೂ Song of the Year ವಿಭಾಗಗಳಲ್ಲಿ BTS ಪ್ರಮುಖ ಸ್ಪರ್ಧಿಯಾಗಲಿದೆ ಎಂಬ ನಿರೀಕ್ಷೆ ಇತ್ತು.
ಆದರೆ ಇತ್ತೀಚೆಗೆ Grammy Awards ಹೊಸದಾಗಿ ಪರಿಚಯಿಸಿರುವ Best Asian Pop Music Performance ವಿಭಾಗಕ್ಕೆ ಏಷ್ಯನ್ ಭಾಷೆಯ ಅರ್ಥಪೂರ್ಣ ಬಳಕೆ ಕಡ್ಡಾಯ ಎಂಬ ನಿಯಮ ಜಾರಿಯಾಗಿದೆ. BTSನ ‘Arirang’ ಆಲ್ಬಮ್ನ ಶೇ.80ಕ್ಕೂ ಹೆಚ್ಚು ಹಾಡುಗಳು ಇಂಗ್ಲಿಷ್ನಲ್ಲಿ ಇರುವುದರಿಂದ ಈ ವಿಭಾಗಕ್ಕೆ ಅರ್ಹವಾಗುತ್ತಿರಲಿಲ್ಲ.
ಈ ಹೊಸ ನಿಯಮಕ್ಕೆ ಕೆ-ಪಾಪ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಏಷ್ಯನ್ ಕಲಾವಿದರನ್ನು ಗೌರವಿಸುವ ಬದಲು ಅವರನ್ನು ಭಾಷೆಯ ಆಧಾರದ ಮೇಲೆ ಪ್ರತ್ಯೇಕಿಸಲಾಗುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. BTS ತನ್ನ ಹೇಳಿಕೆಯಲ್ಲಿ “ಪ್ರದೇಶ ಅಥವಾ ಭಾಷೆಯ ಆಧಾರದ ಮೇಲೆ ಸಂಗೀತವನ್ನು ವಿಭಜಿಸಬಾರದು” ಎಂದು ಹೇಳಿರುವುದು ಇದೇ ವಿವಾದಕ್ಕೆ ಪರೋಕ್ಷ ಪ್ರತಿಕ್ರಿಯೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೇಳಿಕೆಯ ಕೊನೆಯಲ್ಲಿ BTS ಸದಸ್ಯರಾದ RM, Jin, Suga, J-Hope, Jimin, V ಮತ್ತು Jungkook ತಮ್ಮ ಅಭಿಮಾನಿಗಳಾದ ARMYಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
2013ರಲ್ಲಿ ಆರಂಭವಾದ BTS, ಜಾಗತಿಕ ಸಂಗೀತ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿರುವ ತಂಡವಾಗಿದೆ. 2021ರಲ್ಲಿ ‘Dynamite’ ಹಾಡಿನ ಮೂಲಕ Grammy ನಾಮನಿರ್ದೇಶನ ಪಡೆದ ಮೊದಲ ಕೆ-ಪಾಪ್ ತಂಡ ಎಂಬ ಹೆಗ್ಗಳಿಕೆ ಪಡೆದಿದ್ದರೂ, ಇದುವರೆಗೆ ಯಾವುದೇ Grammy ಪ್ರಶಸ್ತಿಯನ್ನು ಗೆದ್ದಿಲ್ಲ.
ರಾಜ್ಯ
Davangere ಯಲ್ಲಿ ದುರಂತ: Expired ಔಷಧಿ ನೀಡಿದ ಆರೋಪ, 11 ತಿಂಗಳ ಮಗು ಸಾವು
ದಾವಣಗೆರೆ: Davangere ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನುಮನಹಳ್ಳಿ ಗ್ರಾಮದ 11 ತಿಂಗಳ ಹಸುಗೂಸು ಪೂರ್ವಿಕಾ ಸಾವಿನ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ Expired (ಕಾಲಾವಧಿ ಮುಗಿದ) ಔಷಧಿ ನೀಡಿದ್ದರಿಂದಲೇ ಮಗು ಮೃತಪಟ್ಟಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮೃತ ಮಗುವಿನ ತಂದೆ-ತಾಯಿ ಲೋಕೇಶ್ ಮತ್ತು ವಸುಂಧರ ದಂಪತಿ. ಮಗುವಿಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ತಕ್ಷಣವೇ ಸಾಸ್ವೇಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಆಸ್ಪತ್ರೆಯಲ್ಲಿ ವೈದ್ಯರು ಮಗುವಿಗೆ ಔಷಧಿ ನೀಡಿದ ಬಳಿಕ ಅದರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮಗುವಿನ ಸ್ಥಿತಿ ಗಂಭೀರಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಈ ದುರಂತದ ಬಳಿಕ ಆಸ್ಪತ್ರೆಯಲ್ಲಿ ನೀಡಲಾದ ಔಷಧಿಯ ಅವಧಿ ಈಗಾಗಲೇ ಮುಗಿದಿತ್ತು ಎಂದು ಆರೋಪಿಸಿರುವ ಪೋಷಕರು, ಇದೇ ಮಗುವಿನ ಸಾವಿಗೆ ಕಾರಣ ಎಂದು ಕಣ್ಣೀರಿಟ್ಟಿದ್ದಾರೆ. ವೈದ್ಯರು ಹಾಗೂ ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದಿಂದ ಅಮಾಯಕ ಜೀವ ಬಲಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ಮಾಹಿತಿ ದಾಖಲಾಗಿದ್ದು, ಪೋಷಕರ ದೂರಿನ ಆಧಾರದ ಮೇಲೆ ತನಿಖೆ ಮುಂದುವರಿದಿದೆ. ಔಷಧಿಯ ಅವಧಿ ಮುಗಿದಿತ್ತೇ, ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ನಡೆದಿತ್ತೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಮಗುವಿನ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮನೆಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ. ಪ್ರಕರಣದ ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ಮತ್ತು ಆಸ್ಪತ್ರೆಯ ಪಾತ್ರ ಸ್ಪಷ್ಟವಾಗುವ ನಿರೀಕ್ಷೆಯಿದೆ.
ದೇಶ
‘Prahlad Joshi ಶಿಕ್ಷಣ ಸಚಿವರಾದದ್ದು ಕನ್ನಡಿಗರಿಗೆ ತಲೆತಗ್ಗಿಸುವ ವಿಚಾರ’ : ಸಿದ್ದರಾಮಯ್ಯ
ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿ (Prahlad Joshi) ಅವರನ್ನು ನೇಮಕ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತೀವ್ರವಾಗಿ ಟೀಕಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಅವರು, ಪ್ರಹ್ಲಾದ್ ಜೋಶಿ ನೇಮಕ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ, ಅವರ ಸ್ಥಾನಕ್ಕೆ ಪ್ರಹ್ಲಾದ್ ಜೋಶಿ ಅವರನ್ನು ಕೇಂದ್ರ ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಿದ್ದರಾಮಯ್ಯ ತಮ್ಮ ಪೋಸ್ಟ್ನಲ್ಲಿ, “ಕರ್ನಾಟಕದ ಸಂಸದೊಬ್ಬರು ದೇಶದ ಶಿಕ್ಷಣ ಸಚಿವರಾಗಿರುವುದು ಹೆಮ್ಮೆಯ ವಿಷಯವಾಗಬೇಕಿತ್ತು. ಆದರೆ ಮಹಿಳೆಯರ ಮೇಲಿನ ಅಪರಾಧಿಗಳ ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿರುವ ಪ್ರಹ್ಲಾದ್ ಜೋಶಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿರುವುದರಿಂದ ಕನ್ನಡಿಗರು ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಹ್ಲಾದ್ ಜೋಶಿ ಇಬ್ಬರೂ ಸೈದ್ಧಾಂತಿಕವಾಗಿ ಭಿನ್ನರಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಬ್ಬರೂ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಾಗಿದ್ದು, ಆರ್ಎಸ್ಎಸ್ನ ವಿಚಾರಧಾರೆಯನ್ನೇ ಅನುಸರಿಸುತ್ತಾರೆ ಎಂದು ಅವರು ಟೀಕಿಸಿದ್ದಾರೆ.
“ಧರ್ಮೇಂದ್ರ ಪ್ರಧಾನ್ ಅವರ ಬದಲಿಗೆ ಪ್ರಹ್ಲಾದ್ ಜೋಶಿ ಅವರನ್ನು ನೇಮಿಸಿರುವುದರಿಂದ ಯಾವುದೇ ಮೂಲಭೂತ ಬದಲಾವಣೆ ಆಗುವುದಿಲ್ಲ. ಬದಲಾಗಿರುವುದು ವ್ಯಕ್ತಿ ಮಾತ್ರ, ಆದರೆ ನೀತಿಗಳು ಮತ್ತು ನಿರ್ದೇಶನಗಳು ಅದೇ ಆಗಿರುತ್ತವೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2022ರಲ್ಲಿ ಗುಜರಾತ್ ಸರ್ಕಾರ ಬಿಲ್ಕಿಸ್ ಬಾನು ಪ್ರಕರಣದ ಶಿಕ್ಷೆಗೊಳಗಾದ ಕೆಲವರ ಬಿಡುಗಡೆ ಕುರಿತು ತೆಗೆದುಕೊಂಡ ನಿರ್ಧಾರವನ್ನು ಪ್ರಹ್ಲಾದ್ ಜೋಶಿ ಸಮರ್ಥಿಸಿದ್ದರು ಎಂದು ಉಲ್ಲೇಖಿಸಿರುವ ಸಿದ್ದರಾಮಯ್ಯ, “ಅಂತಹ ವ್ಯಕ್ತಿಯ ಕೈಗೆ ದೇಶದ ಶಿಕ್ಷಣ ಇಲಾಖೆಯಂತಹ ಮಹತ್ವದ ಖಾತೆ ನೀಡಿರುವುದು ಆತಂಕದ ವಿಷಯ” ಎಂದು ಹೇಳಿದ್ದಾರೆ.
ಇದೇ ವೇಳೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರಹ್ಲಾದ್ ಜೋಶಿ ವಿರುದ್ಧ ಪ್ರಶ್ನೆಗಳನ್ನು ಎತ್ತಿರುವುದನ್ನೂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. “ಸಂಸತ್ತಿನಲ್ಲಿ ವಿರೋಧ ಪಕ್ಷದ ಧ್ವನಿಯನ್ನು ತಡೆಯಬಹುದು. ಆದರೆ ದೇಶದ ಜನರ ಪ್ರಶ್ನೆಗಳನ್ನು ಯಾರೂ ಮೌನಗೊಳಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಿತದ ಬಗ್ಗೆ ಕಾಳಜಿ ಇದ್ದರೆ, ಶಿಕ್ಷಣ ಖಾತೆಯನ್ನು ಪ್ರಹ್ಲಾದ್ ಜೋಶಿ ಅವರಿಂದ ಹಿಂಪಡೆದು ಅರ್ಹ ವ್ಯಕ್ತಿಗೆ ವಹಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪ್ರಹ್ಲಾದ್ ಜೋಶಿ ನೇಮಕದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ಮುಂದುವರಿದಿದ್ದು, ಈ ವಿಚಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ದೇಶ
Mantralaya ದಲ್ಲಿ ಗುರು ಪೂರ್ಣಿಮೆ ಆಚರಣೆ; ರಾಯರ ಮೂಲ ಬೃಂದಾವನದಲ್ಲಿ ವಿಶೇಷ ಸೇವೆ
ರಾಯಚೂರು: ಆಷಾಢ ಶುದ್ಧ ಪೂರ್ಣಿಮೆಯ ಅಂಗವಾಗಿ ವಿಶ್ವವಿಖ್ಯಾತ ಮಂತ್ರಾಲಯದ Guru Raghavendra Swamy ಗಳ ಮಠದಲ್ಲಿ ಗುರು ಪೂರ್ಣಿಮೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದು ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಅವರು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ರಾಯರ ಬೃಂದಾವನವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದ್ದು, ಬಂಗಾರದ ಕವಚ ಅಳವಡಿಸಿ ಭವ್ಯವಾಗಿ ಸಿಂಗರಿಸಲಾಯಿತು. ಬಳಿಕ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ ರಾಯರು ತಪಸ್ಸು ಮಾಡಿದ್ದರೆಂದು ನಂಬಲಾಗುವ ತುಳಸಿ ವನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಈ ವೇಳೆ ಸಂಪ್ರದಾಯದಂತೆ ಪವಿತ್ರ ಮೃತ್ತಿಕೆಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಭಕ್ತರಿಗೆ ದರ್ಶನ ನೀಡಲಾಯಿತು. ಮಂತ್ರಾಲಯದ ಸುತ್ತಮುತ್ತ ಭಕ್ತಿಗೀತೆಗಳು, ವೇದಘೋಷ ಮತ್ತು ಮಂಗಳ ವಾದ್ಯಗಳ ನಡುವೆ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ನಂತರ ಮೃತ್ತಿಕೆಯನ್ನು ರಾಯರ ಮೂಲ ಬೃಂದಾವನದ ಮೇಲೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಪವಿತ್ರ ಮೃತ್ತಿಕೆಗೆ ಒಂದು ವರ್ಷದವರೆಗೆ ಪ್ರತಿದಿನ ನಿತ್ಯ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಬಳಿಕ ಹೊಸದಾಗಿ ಬೃಂದಾವನ ನಿರ್ಮಾಣ ಮಾಡುವ ಸ್ಥಳಗಳಿಗೆ ಇದೇ ಮೃತ್ತಿಕೆಯನ್ನು ಬಳಸಲಾಗುತ್ತದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಗುರು ಪೂರ್ಣಿಮೆಯ ಪ್ರಯುಕ್ತ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದರು. ಭಕ್ತರ ಅನುಕೂಲಕ್ಕಾಗಿ ಶ್ರೀಮಠದ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆ ಕಲ್ಪಿಸಿತ್ತು. ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ದರ್ಶನ ವ್ಯವಸ್ಥೆಗಳನ್ನು ಸುಗಮವಾಗಿ ನಿರ್ವಹಿಸಲಾಯಿತು.
ರಾಯರ ಆಶೀರ್ವಾದ ಪಡೆಯಲು ಭಕ್ತರು ಬೆಳಗ್ಗೆಯಿಂದಲೇ ದೀರ್ಘ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಮಠದ ಆವರಣ ಭಕ್ತರ ಗೋವಿಂದನಾಮ ಸ್ಮರಣೆ ಮತ್ತು ಧಾರ್ಮಿಕ ವಾತಾವರಣದಿಂದ ಕಂಗೊಳಿಸಿತು. ಗುರು ಪೂರ್ಣಿಮೆಯ ಈ ವಿಶೇಷ ಆಚರಣೆ ಮಂತ್ರಾಲಯದಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಪ್ರದಾಯದ ಸಂಗಮವಾಗಿ ನೆರವೇರಿತು.
-
ರಾಜ್ಯ24 ಗಂಟೆಗಳು agoDK Shivkumar-Usha ದಂಪತಿಗೆ 33ನೇ ವಿವಾಹ ವಾರ್ಷಿಕೋತ್ಸವ; ಹಳೆಯ ಆಮಂತ್ರಣ ಪತ್ರ ವೈರಲ್
-
ಬೆಂಗಳೂರು4 ಗಂಟೆಗಳು agoNICE ಗೆ ಹೈಕೋರ್ಟ್ನಿಂದ ಭಾರಿ ಶಾಕ್! ರೈತರ ಪರ ಐತಿಹಾಸಿಕ ತೀರ್ಪು
-
ದೇಶ24 ಗಂಟೆಗಳು agoGoogle Pay, PhonePe, Paytm ಬಳಕೆದಾರರಿಗೆ ಹೊಸ ಅಪ್ಡೇಟ್; UPIನಲ್ಲಿ ಬದಲಾಗಲಿದೆ ಈ ನಿಯಮ
-
ದೇಶ4 ಗಂಟೆಗಳು agoMiddle East ದಲ್ಲಿ ಮತ್ತೆ ಯುದ್ಧದ ಮೋಡ! ಇರಾನ್ ಬೆಂಬಲಿತ ನೆಲೆಗಳ ಮೇಲೆ ಭೀಕರ ವಾಯುದಾಳಿ
-
ಬೆಂಗಳೂರು8 ಗಂಟೆಗಳು agoBengaluru ರಿನ ರಸ್ತೆ ಗುಂಡಿ ಮುಚ್ಚಿದ ಮಹಿಳೆ; ವೈರಲ್ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ, ಆಡಳಿತದ ವಿರುದ್ಧ ಆಕ್ರೋಶ
-
ದೇಶ5 ಗಂಟೆಗಳು agoಕೇಂದ್ರ ಸರ್ಕಾರಕ್ಕೆ CJP ಡೆಡ್ಲೈನ್! FIR ಹಿಂಪಡೆಯದಿದ್ದರೆ ದೇಶಾದ್ಯಂತ ಮತ್ತೆ ಬೃಹತ್ ಪ್ರತಿಭಟನೆ
-
ಅಪರಾಧ5 ಗಂಟೆಗಳು agoBengaluru ಶಾಕ್: ವರ್ತೂರು ಮೈದಾನದಲ್ಲಿ ವ್ಯಕ್ತಿಯ ರುಂಡ ಪತ್ತೆ; ಕೊಲೆಯೋ, ಆತ್ಮಹತ್ಯೆಯೋ? ಪೊಲೀಸರ ತನಿಖೆ
-
ದೇಶ7 ಗಂಟೆಗಳು agoPM Narendra Modi ವಿರುದ್ಧ ಪೋಸ್ಟ್ ಮಾಡಿದವರಿಗೆ ಶಾಕ್; X ಖಾತೆಗಳಿಗೆ ದೆಹಲಿ ಪೊಲೀಸರ ನೋಟಿಸ್
