ದೇಶ
NEET ಪ್ರತಿಭಟನೆ ವೇಳೆ ಏನಾಗಿತ್ತು? ಶಿಕ್ಷಣ ಸಚಿವ ಸ್ಥಾನ ತೊರೆದ ಕಾರಣ ಬಹಿರಂಗಪಡಿಸಿದ ಧರ್ಮೇಂದ್ರ ಪ್ರಧಾನ್
ಭುವನೇಶ್ವರ, ಆಗಸ್ಟ್ 9: ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ NEET Paper Leak ಪ್ರಕರಣ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಬಿಜೆಪಿ ನಾಯಕ Dharmendra Pradhan ಇದೀಗ ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಒಡಿಶಾದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, NEET ಪೇಪರ್ ಲೀಕ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ ಯುವ ಪೀಳಿಗೆಯನ್ನು, ವಿಶೇಷವಾಗಿ Gen Z, ದಾರಿ ತಪ್ಪಿಸಲು ಕೆಲವು ಶಕ್ತಿಗಳು ವ್ಯವಸ್ಥಿತವಾಗಿ ಪ್ರಯತ್ನಿಸಿದ್ದವು ಎಂದು ಆರೋಪಿಸಿದ್ದಾರೆ.
‘ನನಗೆ ಅಧಿಕಾರ ಮುಖ್ಯವಲ್ಲ, ಯುವಕರ ಭವಿಷ್ಯ ಮುಖ್ಯ’
ತಮ್ಮ ರಾಜೀನಾಮೆಯ ಕುರಿತು ಮಾತನಾಡಿದ ಧರ್ಮೇಂದ್ರ ಪ್ರಧಾನ್, ದೇಶದ ಯುವಜನತೆ ಭಾರತದ ಭವಿಷ್ಯವಾಗಿದ್ದು, ಅವರನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಪ್ರಯತ್ನಗಳು ನಡೆದವು ಎಂದು ಹೇಳಿದ್ದಾರೆ.
“ನನಗೆ ವೈಯಕ್ತಿಕವಾಗಿ ಯಾವುದೇ ಅಧಿಕಾರದ ಹಪಹಪಿ ಇಲ್ಲ. ದೇಶದ ಯುವಕರ ಭವಿಷ್ಯವೇ ಮುಖ್ಯ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಯುವಜನರ ಪಾತ್ರ ಬಹಳ ದೊಡ್ಡದು” ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ ಕೋಟ್ಯಂತರ ಮಕ್ಕಳು ಜನಿಸುತ್ತಿದ್ದು, ಕಳೆದ ಒಂದು ದಶಕದಲ್ಲಿ ದೊಡ್ಡ ಪ್ರಮಾಣದ ಯುವಜನಸಂಖ್ಯೆ ರೂಪುಗೊಂಡಿದೆ. ಅವರಲ್ಲಿ ದೇಶವನ್ನು ವಿಶ್ವಗುರುವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಇದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪ್ರಧಾನಿ ಮೋದಿಯನ್ನು ಭೇಟಿಯಾಗಿ ರಾಜೀನಾಮೆ
ಜುಲೈ 25ರಂದು ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಸಂದರ್ಭದಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಯಾವುದೇ ರೀತಿಯ ರಾಜಕೀಯ ಗೊಂದಲ ಉಂಟಾಗಬಾರದು ಎಂಬ ಕಾರಣದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.
ನವೀನ್ ಪಟ್ನಾಯಕ್ ವಿರುದ್ಧವೂ ವಾಗ್ದಾಳಿ
ಇದೇ ವೇಳೆ ಒಡಿಶಾದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ವಿರುದ್ಧವೂ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ ನಡೆಸಿದರು.
ಬಿಜೆಡಿ ಕಾರ್ಯಕರ್ತರು ತಮಗೆ ಕಪ್ಪು ಬಾವುಟ ಪ್ರದರ್ಶಿಸಿ ‘ಗೋ ಬ್ಯಾಕ್’ ಘೋಷಣೆ ಕೂಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ತಾನು ರೈತನ ಮಗನಾಗಿದ್ದು, ಜನರ ಸೇವೆಗಾಗಿ ಮತ್ತೆ ಒಡಿಶಾಕ್ಕೆ ಮರಳುವುದಾಗಿ ಹೇಳಿದ್ದಾರೆ.
ಒಡಿಶಾದ ಕೀರ್ತಿಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ತಾನು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಡಿಯಿಂದ ತಿರುಗೇಟು
ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಗೆ ಬಿಜೆಡಿ ನಾಯಕರು ತಿರುಗೇಟು ನೀಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ನಡೆಸಿದ ಪ್ರಯತ್ನಗಳು ಹಾಗೂ NEET Paper Leak ಪ್ರಕರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ಎದುರಿಸಿದ ಮಾನಸಿಕ ಒತ್ತಡವೇ ಅವರ ರಾಜೀನಾಮೆಗೆ ಪ್ರಮುಖ ಕಾರಣ ಎಂದು ಬಿಜೆಡಿ ನಾಯಕರು ಹೇಳಿದ್ದಾರೆ.
ಹೀಗಾಗಿ, ತಮ್ಮ ರಾಜೀನಾಮೆಯ ಹೊಣೆಯನ್ನು ಇತರರ ಮೇಲೆ ಹೊರಿಸುವ ಬದಲು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಉತ್ತರ ನೀಡಬೇಕು ಎಂದು ಬಿಜೆಡಿ ನಾಯಕರು ಟೀಕಿಸಿದ್ದಾರೆ.
ದೇಶ
August.12 ರಂದು ಅಪರೂಪದ ಸೂರ್ಯಗ್ರಹಣ: ಭಾರತದಲ್ಲಿ ಕಾಣಲ್ಲ, 12 ರಾಶಿಗಳಿಗೆ ಏನು ಫಲ?
ಬೆಂಗಳೂರು: August.12 ರಂದು ಅಪರೂಪದ ಸಂಪೂರ್ಣ ಸೂರ್ಯಗ್ರಹಣ (Solar Eclipse 2026) ಸಂಭವಿಸಲಿದ್ದು, ಖಗೋಳಾಸಕ್ತರಲ್ಲಿ ಕುತೂಹಲ ಮೂಡಿಸಿದೆ. ಈ ಸೂರ್ಯಗ್ರಹಣ ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಸ್ಪೇನ್, ರಷ್ಯಾ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸಂಪೂರ್ಣವಾಗಿ ಗೋಚರಿಸಲಿದೆ. ಯುರೋಪ್, ಆಫ್ರಿಕಾ ಹಾಗೂ ಉತ್ತರ ಅಮೆರಿಕದ ಹಲವು ಭಾಗಗಳಲ್ಲಿ ಭಾಗಶಃ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಆದರೆ ಭಾರತೀಯರಿಗೆ ಈ ಬಾರಿ ಗ್ರಹಣದ ವೀಕ್ಷಣೆಯ ಅವಕಾಶವಿಲ್ಲ.
NASA ಮಾಹಿತಿಯ ಪ್ರಕಾರ, ಸೂರ್ಯಗ್ರಹಣದ ಗರಿಷ್ಠ ಹಂತ ವಿದೇಶಿ ಕಾಲಮಾನ ಬೆಳಗ್ಗೆ 5.45ರ ಸುಮಾರಿಗೆ ಸಂಭವಿಸಲಿದೆ. ಸಂಪೂರ್ಣ ಗ್ರಹಣದ ಗರಿಷ್ಠ ಅವಧಿ ಸುಮಾರು 2 ನಿಮಿಷ 18 ಸೆಕೆಂಡ್ಗಳು ಇರಲಿದೆ ಎಂದು ತಿಳಿದುಬಂದಿದೆ.
ಭೀಮನ ಅಮಾವಾಸ್ಯೆಯಂದೇ ಸೂರ್ಯಗ್ರಹಣ
ಈ ಬಾರಿ ಸೂರ್ಯಗ್ರಹಣವು ಭೀಮನ ಅಮಾವಾಸ್ಯೆ ದಿನವೇ ಸಂಭವಿಸುತ್ತಿರುವುದು ಧಾರ್ಮಿಕವಾಗಿ ವಿಶೇಷ ಗಮನ ಸೆಳೆದಿದೆ. ಭಾರತೀಯ ಸಂಪ್ರದಾಯದಲ್ಲಿ ಭೀಮನ ಅಮಾವಾಸ್ಯೆಗೆ ವಿಶೇಷ ಮಹತ್ವವಿದ್ದು, ಪೂಜೆ, ವ್ರತ ಹಾಗೂ ದಾನಗಳನ್ನು ಮಾಡುವ ಪದ್ಧತಿಯಿದೆ.
ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲವಾದ್ದರಿಂದ ಖಗೋಳಶಾಸ್ತ್ರದ ದೃಷ್ಟಿಯಿಂದ ಗ್ರಹಣ ವೀಕ್ಷಣೆ ಅಥವಾ ಅದರ ಆಧಾರದ ಮೇಲೆ ವಿಶೇಷ ಆಚರಣೆ ಅಗತ್ಯವಿಲ್ಲ. ಧಾರ್ಮಿಕ ಹಾಗೂ ಜ್ಯೋತಿಷ್ಯ ನಂಬಿಕೆಗಳನ್ನು ಪಾಲಿಸುವವರು ಸ್ಥಳೀಯ ಪಂಚಾಂಗ ಅಥವಾ ಅರ್ಚಕರ ಸಲಹೆ ಪಡೆಯುವುದು ಸೂಕ್ತ.
ಜ್ಯೋತಿಷ್ಯದಲ್ಲಿ ಗ್ರಹಣ ಯೋಗ
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಕರ್ಕಾಟಕ ರಾಶಿ ಮತ್ತು ಆಶ್ಲೇಷ ನಕ್ಷತ್ರದಲ್ಲಿ ಸೂರ್ಯ, ಚಂದ್ರ ಹಾಗೂ ರಾಹುವಿನ ಸಂಯೋಜನೆಯಿಂದ ‘ಗ್ರಹಣ ಯೋಗ’ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದರ ಪರಿಣಾಮ ಕೆಲವು ರಾಶಿಗಳಿಗೆ ಸವಾಲುಗಳು ಎದುರಾಗಬಹುದು ಎಂಬ ನಂಬಿಕೆಯಿದೆ.
ಆದರೆ ಗ್ರಹಣದಿಂದ ಉದ್ಯೋಗ, ಆರ್ಥಿಕ ಪರಿಸ್ಥಿತಿ, ಆರೋಗ್ಯ, ಯುದ್ಧ ಅಥವಾ ಪ್ರಕೃತಿ ವಿಕೋಪಗಳು ಉಂಟಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಕೆಳಗಿನ ರಾಶಿಫಲಗಳು ಜ್ಯೋತಿಷ್ಯ ನಂಬಿಕೆಗಳ ಆಧಾರಿತವಾಗಿವೆ.
12 ರಾಶಿಗಳಿಗೆ ಏನು ಫಲ?
ಮೇಷ: ತಾಯಿ ಆರೋಗ್ಯ, ಮಾನಸಿಕ ಒತ್ತಡ ಹಾಗೂ ಹಿರಿಯರೊಂದಿಗೆ ಮನಸ್ತಾಪದ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹೇಳಲಾಗುತ್ತದೆ.
ಪರಿಹಾರ: ಸುಬ್ರಹ್ಮಣ್ಯನ ಆರಾಧನೆ ಹಾಗೂ ಗೋಧಿ ದಾನ.
ವೃಷಭ: ಕೆಲಸದಲ್ಲಿ ಅಡಚಣೆ, ಆರೋಗ್ಯದ ಬಗ್ಗೆ ಕಾಳಜಿ ಮತ್ತು ಹಿತಶತ್ರುಗಳಿಂದ ಎಚ್ಚರಿಕೆ ಅಗತ್ಯ.
ಪರಿಹಾರ: ಅವರೆಕಾಳು, ಫಲತಾಂಬೂಲ ದಾನ ಹಾಗೂ ದುರ್ಗಾ ಕವಚ ಪಠಣ.
ಮಿಥುನ: ಹಣಕಾಸಿನಲ್ಲಿ ತಪ್ಪು ನಿರ್ಧಾರ, ವ್ಯವಹಾರದಲ್ಲಿ ಮೋಸ ಹಾಗೂ ಕುಟುಂಬದಲ್ಲಿ ಕಲಹ ಉಂಟಾಗಬಹುದು ಎಂಬ ನಂಬಿಕೆ.
ಪರಿಹಾರ: ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಧಾನ್ಯ ದಾನ.
ಕರ್ಕಾಟಕ: ಆಶ್ಲೇಷ ನಕ್ಷತ್ರದವರಿಗೆ ಹೆಚ್ಚಿನ ಪ್ರಭಾವ ಇರಬಹುದು ಎಂದು ಜ್ಯೋತಿಷ್ಯ ನಂಬಿಕೆ ಹೇಳುತ್ತದೆ. ಆರೋಗ್ಯ ಹಾಗೂ ಮಾನಸಿಕ ಒತ್ತಡದ ಬಗ್ಗೆ ಎಚ್ಚರಿಕೆ ಅಗತ್ಯ.
ಪರಿಹಾರ: ಅನ್ನದಾನ, ಶಿವನ ದರ್ಶನ ಹಾಗೂ ರುದ್ರಾಭಿಷೇಕ.
ಸಿಂಹ: ಹಣಕಾಸಿನ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅಗತ್ಯ.
ಪರಿಹಾರ: ನವಗ್ರಹ ಪೂಜೆ ಮತ್ತು ನವಧಾನ್ಯ ದಾನ.
ಕನ್ಯಾ: ಹಣಕಾಸಿನ ಮೋಸ, ಸಾಲದ ಹೊರೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.
ಪರಿಹಾರ: ಭುವನೇಶ್ವರಿ ಹಾಗೂ ಅನ್ನಪೂರ್ಣೇಶ್ವರಿ ಆರಾಧನೆ.
ತುಲಾ: ಉದ್ಯೋಗ, ಕೆಲಸ ಮತ್ತು ವಿದ್ಯಾಭ್ಯಾಸದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಬಹುದು.
ಪರಿಹಾರ: ಗಣಪತಿ ಮತ್ತು ದುರ್ಗಾರಾಧನೆ.
ವೃಶ್ಚಿಕ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಅನಗತ್ಯ ಭಯಕ್ಕೆ ಒಳಗಾಗಬಾರದು.
ಪರಿಹಾರ: ಸುಬ್ರಹ್ಮಣ್ಯ ಹಾಗೂ ನಾಗಾರಾಧನೆ.
ಧನು: ತಂದೆ-ತಾಯಿ ಅಥವಾ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಾಲದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.
ಪರಿಹಾರ: ಗುರುಪೂಜೆ ಮತ್ತು ಕಡಲೆಕಾಳು ದಾನ.
ಮಕರ: ಪ್ರೀತಿ ಸಂಬಂಧ, ಸ್ನೇಹ ಹಾಗೂ ಶುಭಕಾರ್ಯಗಳಲ್ಲಿ ಕೆಲವು ಅಡಚಣೆಗಳು ಎದುರಾಗಬಹುದು ಎಂಬ ನಂಬಿಕೆ.
ಪರಿಹಾರ: ಸರ್ವಮಂಗಳ ಮಂತ್ರ ಪಠಣ ಮತ್ತು ಧಾನ್ಯ ದಾನ.
ಕುಂಭ: ಭಯ, ಆತಂಕ ಹಾಗೂ ಮಾನಸಿಕ ಒತ್ತಡ ಹೆಚ್ಚಾಗಬಹುದು. ಕುಟುಂಬದೊಂದಿಗೆ ಸಮಯ ಕಳೆಯುವುದು ಒಳಿತು.
ಪರಿಹಾರ: ಶನೈಶ್ಚರ ಮಂತ್ರ ಜಪ ಹಾಗೂ ದಾನ.
ಮೀನ: ಗ್ರಹಣದ ಪ್ರಭಾವ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಆರೋಗ್ಯ ಮತ್ತು ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ.
ಪರಿಹಾರ: ಗುರುಚರಿತ್ರೆ ಪಾರಾಯಣ ಹಾಗೂ ಕಡಲೆಕಾಳು ದಾನ.
ದೇಶ
Pakistan ದಲ್ಲಿ ಜನಾಕ್ರೋಶ ಸ್ಫೋಟ: 500ಕ್ಕೂ ಹೆಚ್ಚು ಕಡೆ ಪ್ರತಿಭಟನೆ, ಸರ್ಕಾರಕ್ಕೆ ಹೆಚ್ಚಿದ ಸಂಕಷ್ಟ
ಇಸ್ಲಾಮಾಬಾದ್: Pakistan ದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ ಹಾಗೂ ಪೆಟ್ರೋಲ್ ಮೇಲಿನ ಭಾರೀ ತೆರಿಗೆ ವಿರುದ್ಧ ಜನಾಕ್ರೋಶ ಮತ್ತಷ್ಟು ತೀವ್ರಗೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ವಿವಿಧ ಸಮಸ್ಯೆಗಳ ವಿರುದ್ಧ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಹಲವು ಪ್ರಮುಖ ನಗರಗಳಲ್ಲೂ ಜನರು ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ.
500ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆ
ಜಮಾತ್-ಎ-ಇಸ್ಲಾಮಿ ಪಕ್ಷದ ನೇತೃತ್ವದಲ್ಲಿ ಕರಾಚಿ, ಲಾಹೋರ್, ಪೇಶಾವರ, ಕ್ವೆಟ್ಟಾ, ಇಸ್ಲಾಮಾಬಾದ್, ರಾವಲ್ಪಿಂಡಿ ಹಾಗೂ ಅಬೋಟಾಬಾದ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಒಟ್ಟು 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಪೆಟ್ರೋಲ್ ಮೇಲೆ ವಿಧಿಸಲಾಗುತ್ತಿರುವ ಅಧಿಕ ತೆರಿಗೆ, ವಿದ್ಯುತ್ ದರ ಏರಿಕೆ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಆಕ್ರೋಶ
ಪ್ರತಿಭಟನೆ ವೇಳೆ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಜನರು, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ನೀತಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚುತ್ತಿರುವ ಜೀವನ ನಿರ್ವಹಣಾ ವೆಚ್ಚದಿಂದ ಸಾಮಾನ್ಯ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ವಿದ್ಯುತ್ ಬಿಲ್, ಇಂಧನ ಬೆಲೆ ಹಾಗೂ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಜನಸಾಮಾನ್ಯರಿಗೆ ಪರಿಹಾರ ಒದಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಪ್ರತಿಭಟನೆ ಹತ್ತಿಕ್ಕಿದರೆ ಸರ್ಕಾರಕ್ಕೆ ಎಚ್ಚರಿಕೆ
ಸರ್ಕಾರ ಶಾಂತಿಯುತ ಜನಾಂದೋಲನಕ್ಕೆ ಅಡ್ಡಿಪಡಿಸಲು ಮುಂದಾದರೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಜಮಾತ್-ಎ-ಇಸ್ಲಾಮಿ ನಾಯಕರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದರೆ, ಪ್ರಸ್ತುತ ನಡೆಯುತ್ತಿರುವ ಜನಪರ ಹೋರಾಟವೇ ಸರ್ಕಾರವನ್ನು ಉರುಳಿಸುವ ಆಂದೋಲನವಾಗಿ ಪರಿವರ್ತನೆಯಾಗಬಹುದು ಎಂದು ಎಚ್ಚರಿಸಿದ್ದಾರೆ.
PoK ಬಳಿಕ ಪಾಕಿಸ್ತಾನದಲ್ಲೂ ಹೆಚ್ಚಿದ ಅಸಮಾಧಾನ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿದ್ದ ಪ್ರತಿಭಟನೆಗಳ ನಂತರ ಇದೀಗ ಪಾಕಿಸ್ತಾನದ ಇತರ ಪ್ರಮುಖ ನಗರಗಳಲ್ಲೂ ಸರ್ಕಾರದ ವಿರುದ್ಧ ಜನರು ಧ್ವನಿ ಎತ್ತಿರುವುದು ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಸರ್ಕಾರಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.
ದೇಶದಲ್ಲಿ ಜೀವನ ನಿರ್ವಹಣೆಯ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ತೀವ್ರಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆಗಳು ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬುದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕ್ರೀಡೆ
‘ನನ್ನ ಜೊತೆ ಸೆಲ್ಫಿ ಕೇಳುವ ದಿನ ಬರುತ್ತೆ’: ಬಾಲ್ಯದ ಮಾತು ನಿಜ ಮಾಡಿದ ಜಮ್ಮು-ಕಾಶ್ಮೀರದ ಔಕಿಬ್ Auqib Nabi
ನವದೆಹಲಿ: Auqib Nabi “ನೀನು ಎಷ್ಟೋ ಕ್ರಿಕೆಟ್ ಸ್ಟಾರ್ಗಳ ಜೊತೆ ಆಡುತ್ತೀಯ. ಅವರೊಂದಿಗೆ ಸೆಲ್ಫಿ ಏಕೆ ತೆಗೆದುಕೊಳ್ಳುವುದಿಲ್ಲ?” ಎಂದು ಔಕಿಬ್ ನಬಿಗೆ ಅವರ ಸೋದರ ಸಂಬಂಧಿ ಬಿಲಾಲ್ ಅಹ್ಮದ್ ದಾರ್ ಒಮ್ಮೆ ಕೇಳಿದ್ದರು.
ಅದಕ್ಕೆ ಔಕಿಬ್ ನಗುತ್ತಾ, “ಒಂದು ದಿನ ನಾನು ಅವರೇ ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸುವಂತಹ ಸ್ಥಾನಕ್ಕೆ ತಲುಪುತ್ತೇನೆ” ಎಂದು ಉತ್ತರಿಸಿದ್ದರು. ಹಲವು ವರ್ಷಗಳ ಬಳಿಕ ಈ ಮಾತು ನಿಜವಾಗಿದೆ.
29 ವರ್ಷದ ಆಲ್ರೌಂಡರ್ ಔಕಿಬ್ ನಬಿ, ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ತಂಡಕ್ಕೆ ಸೇರ್ಪಡೆಯಾಗಿರುವ ಔಕಿಬ್, ಜಮ್ಮು-ಕಾಶ್ಮೀರದಿಂದ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಮೊದಲ ಕ್ರಿಕೆಟಿಗ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿ ಆಗಸ್ಟ್ 15ರಿಂದ ಆರಂಭವಾಗಲಿದೆ.
70 ಕಿ.ಮೀ ಪ್ರಯಾಣಿಸಿ ಕ್ರಿಕೆಟ್ ಅಭ್ಯಾಸ
ಬಾರಾಮುಲ್ಲಾ ಜಿಲ್ಲೆಯ ಸಣ್ಣ ಗ್ರಾಮದ ಹಿನ್ನೆಲೆಯಿಂದ ಬಂದಿರುವ ಔಕಿಬ್ ಬಾಲ್ಯದಲ್ಲಿ ಮೂಲಸೌಕರ್ಯಗಳ ಕೊರತೆಯ ನಡುವೆಯೇ ಕ್ರಿಕೆಟ್ ಆಡುತ್ತಿದ್ದರು. ಅವರ ತಂದೆ ಗುಲಾಮ್ ನಬಿ ದಾರ್ ಶಿಕ್ಷಕರಾಗಿದ್ದು, ಆರಂಭದಲ್ಲಿ ಮಗ ಕ್ರಿಕೆಟ್ಗಿಂತ ವಿದ್ಯಾಭ್ಯಾಸದತ್ತ ಗಮನಹರಿಸಿ ವೈದ್ಯನಾಗಬೇಕೆಂದು ಬಯಸಿದ್ದರು.
ಆದರೆ ಕ್ರಿಕೆಟ್ ಮೇಲಿನ ಔಕಿಬ್ ಅವರ ಅಪಾರ ಆಸಕ್ತಿ ತಂದೆಯ ಮನಸ್ಸನ್ನು ಬದಲಿಸಿತು. ಉತ್ತಮ ಪಿಚ್ಗಳಲ್ಲಿ ಅಭ್ಯಾಸ ಮಾಡಲು ಅವರು ನಿಯಮಿತವಾಗಿ ಸುಮಾರು 70 ಕಿ.ಮೀ ದೂರದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು.
ಮೊದಲ ಕ್ರಿಕೆಟ್ ಟ್ರಯಲ್ಗೆ ತೆರಳುವಾಗ ಅವರ ಬಳಿ ಸ್ಪೈಕ್ ಶೂ ಕೂಡ ಇರಲಿಲ್ಲ. ಆದರೂ ಪರಿಶ್ರಮ ಮಾತ್ರ ಕಡಿಮೆಯಾಗಲಿಲ್ಲ. ಪ್ರತಿದಿನ ಬೆಳಗ್ಗೆ ಜಿಮ್ಗೆ ತೆರಳಿ, ನಂತರ ದಿನವಿಡೀ ಅಭ್ಯಾಸ ಮಾಡುತ್ತಿದ್ದರು ಎಂದು ಅವರ ಕುಟುಂಬಸ್ಥರು ನೆನಪಿಸಿಕೊಳ್ಳುತ್ತಾರೆ.
ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ
2020ರಲ್ಲಿ ಜಮ್ಮು-ಕಾಶ್ಮೀರ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಔಕಿಬ್, ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ಗಳ ಸಾಧನೆ ಮಾಡಿದ್ದರು.
2024-25ರ ರಣಜಿ ಟ್ರೋಫಿ ಋತುವಿನಲ್ಲಿ 44 ವಿಕೆಟ್ ಪಡೆದು ಅತ್ಯುತ್ತಮ ವೇಗದ ಬೌಲರ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಅವರ ಹೆಸರು ಹೆಚ್ಚು ಚರ್ಚೆಯಾಗಲಿಲ್ಲ.
ಮುಂದಿನ ಋತುವಿನಲ್ಲಿ ಅವರು ಇನ್ನಷ್ಟು ಭರ್ಜರಿ ಪ್ರದರ್ಶನ ನೀಡಿದರು. ಕೇವಲ 10 ಪಂದ್ಯಗಳಲ್ಲಿ 60 ವಿಕೆಟ್ ಪಡೆದು ರಣಜಿ ಟ್ರೋಫಿಯ ಗರಿಷ್ಠ ವಿಕೆಟ್ಟೇಕರ್ ಎನಿಸಿಕೊಂಡರು. ಅವರ ಅಮೋಘ ಪ್ರದರ್ಶನದ ನೆರವಿನಿಂದ ಜಮ್ಮು-ಕಾಶ್ಮೀರ 67 ವರ್ಷಗಳ ಬಳಿಕ ತನ್ನ ಮೊದಲ ರಣಜಿ ಟ್ರೋಫಿ ಪ್ರಶಸ್ತಿ ಗೆದ್ದುಕೊಂಡಿತು.
ಈ ಪ್ರದರ್ಶನ ಔಕಿಬ್ಗೆ ಐಪಿಎಲ್ನಲ್ಲೂ ಅವಕಾಶ ತಂದುಕೊಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು ₹8.4 ಕೋಟಿ ಮೊತ್ತಕ್ಕೆ ತನ್ನ ತೆಕ್ಕೆಗೆ ತೆಗೆದುಕೊಂಡಿತು.
‘ಇದು ಇಡೀ ಜಮ್ಮು-ಕಾಶ್ಮೀರದ ಕನಸು’
ಜಮ್ಮು-ಕಾಶ್ಮೀರದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟಿಗ ಹಾಗೂ ಔಕಿಬ್ ಅವರ ಮಾಜಿ ನಾಯಕ ಪರ್ವೇಜ್ ರಸೂಲ್, ಅವರ ಯಶಸ್ಸನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಕ್ರಿಕೆಟ್ ಮೂಲಸೌಕರ್ಯ, ಅವಕಾಶಗಳು ಮತ್ತು ಹವಾಮಾನ ಸೇರಿದಂತೆ ಅನೇಕ ಸವಾಲುಗಳಿವೆ. ಇಂತಹ ಪರಿಸ್ಥಿತಿಯಿಂದ ಬಂದ ಔಕಿಬ್ ಭಾರತ ಟೆಸ್ಟ್ ತಂಡದ ಬಾಗಿಲು ತಟ್ಟಿರುವುದು ಇಡೀ ಪ್ರದೇಶದ ಯುವ ಕ್ರಿಕೆಟಿಗರಿಗೆ ಹೊಸ ಭರವಸೆ ಮೂಡಿಸಿದೆ.
“ಔಕಿಬ್ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಅವರ ಕುಟುಂಬಕ್ಕೆ ಮಾತ್ರವಲ್ಲ, ಜಮ್ಮು-ಕಾಶ್ಮೀರದ ಕ್ರಿಕೆಟ್ಗೆ ಐತಿಹಾಸಿಕ ಕ್ಷಣ” ಎಂದು ಪರ್ವೇಜ್ ರಸೂಲ್ ಹೇಳಿದ್ದಾರೆ.
ಬಾರಾಮುಲ್ಲಾದಲ್ಲಿರುವ ಔಕಿಬ್ ಅವರ ತಂದೆ ಗುಲಾಮ್ ನಬಿ ಇದೀಗ ಎಲ್ಲಿಗೆ ಹೋದರೂ ಜನರು ಅವರನ್ನು ಗುರುತಿಸಿ, ‘ಇವರು ಔಕಿಬ್ ಅವರ ತಂದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಮಗನ ಸಾಧನೆಯ ಬಗ್ಗೆ ಅವರು ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
-
ಬೆಂಗಳೂರು17 ಗಂಟೆಗಳು agoSri Padaraja Matha ದಲ್ಲಿ ವಿಶೇಷ ಪೂಜೆ; ಚಾತುರ್ಮಾಸ್ಯ ಸಂಕಲ್ಪ ನೆರವೇರಿಸಿದ ಶ್ರೀಸುಜಯನಿಧಿ ತೀರ್ಥರು
-
ಸಿನಿಮಾ16 ಗಂಟೆಗಳು ago‘Toxic’ Trailer Out: YASH ಅಬ್ಬರಕ್ಕೆ ಬೆಚ್ಚಿಬಿದ್ದ ಸಿನಿಪ್ರೇಮಿಗಳು, ಟ್ರೇಲರ್ಗೆ ಭರ್ಜರಿ ರೆಸ್ಪಾನ್ಸ್
-
ಬೆಂಗಳೂರು17 ಗಂಟೆಗಳು agoBengaluru ನಲ್ಲಿ ‘ಆಪರೇಷನ್ ಮುಕ್ತಾ’: 15 ಬಾಂಗ್ಲಾದೇಶಿ ಪ್ರಜೆಗಳು ಪತ್ತೆ, 500ಕ್ಕೂ ಹೆಚ್ಚು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
-
ಸೋಶಿಯಲ್ ಮೀಡಿಯಾ23 ಗಂಟೆಗಳು agoSara Tendulkar Spain Photos: ಕಿತ್ತಳೆ ಉಡುಗೆಯಲ್ಲಿ ಮಿಂಚಿದ ಸಚಿನ್ ಪುತ್ರಿ
-
ರಾಜ್ಯ17 ಗಂಟೆಗಳು agoCabinet ಸಂಪುಟ ದಲ್ಲಿ ಭರ್ಜರಿ ಬದಲಾವಣೆ ಸಾಧ್ಯತೆ; 3-4 ಸಚಿವರಿಗೆ ಕೊಕ್, ಹಿರಿಯರಿಗೆ ಅವಕಾಶ?
-
ರಾಜ್ಯ16 ಗಂಟೆಗಳು agoTungabhadra ನಾಲೆ ದುರಸ್ತಿಗೆ ವಿಳಂಬ: ಸಚಿವ ಶಿವರಾಜ್ ತಂಗಡಗಿ ವಿರುದ್ಧ ರೈತರ ಆಕ್ರೋಶ, ‘ಇಷ್ಟು ದಿನ ಎಲ್ಲಿದ್ದಿರಿ?’ ಎಂದು ತರಾಟೆ
-
ರಾಜ್ಯ23 ಗಂಟೆಗಳು agoಅಧಿಕಾರ ವಾಪಸ್ ಪಡೆದರೂ ಸಿಎಂ ಮಾತಿಗೆ ತಲೆಬಾಗುತ್ತೇನೆ: ಸಚಿವ Magadi Balakrishna
-
ರಾಜ್ಯ24 ಗಂಟೆಗಳು ago“ಸಚಿವನಾಗಿದ್ದೇನೆ, ಈಗೇನು ಮಾಡುತ್ತೀಯಪ್ಪಾ ಜಗದ್ಗುರು?”: Vijayananda Kashappanavar ಸವಾಲ್
