Connect with us

ದೇಶ

ಮದ್ಯಕ್ಕೆ ಬದಲು ಹಾಲು: ಜೈಪುರದಲ್ಲಿ ವಿಶೇಷ ಸಂದೇಶದೊಂದಿಗೆ ಹೊಸ ವರ್ಷದ ಸ್ವಾಗತ

Published

on

ಜೈಪುರ (ರಾಜಸ್ಥಾನ): ಹೊಸ ವರ್ಷದ ಮುನ್ನಾದಿನವಾದ ಬುಧವಾರ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ವಿಶಿಷ್ಟ ಹಾಗೂ ಆರೋಗ್ಯಪರ ಸಂದೇಶದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ನಗರದಾದ್ಯಂತ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು ಒಂದು ಲಕ್ಷ ಲೀಟರ್ ಹಾಲನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ, ಮದ್ಯದ ಬದಲು ಹಾಲಿನೊಂದಿಗೆ ಹೊಸ ವರ್ಷವನ್ನು ಆಚರಿಸೋಣ ಎಂಬ ಸಂದೇಶ ನೀಡಲಾಯಿತು.

ರಾಜಸ್ಥಾನ ಯುವ ವಿದ್ಯಾರ್ಥಿಗಳ ಸಂಘಟನೆ ಹಾಗೂ ಭಾರತೀಯ ಅಸ್ತಮಾ ಆರೈಕೆ ಸಂಘದ ಸಹಯೋಗದಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯದ ದ್ವಾರದಲ್ಲಿ ಹಾಲು ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಲು ಸ್ವೀಕರಿಸಿ ಸೇವಿಸಿದರು.

ಈ ಕಾರ್ಯಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ಪಚಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, “ರಾಜಸ್ಥಾನ ವಿಶ್ವವಿದ್ಯಾಲಯದ ದ್ವಾರದಲ್ಲಿ ಹಾಲು ವಿತರಿಸುವುದು ಅತ್ಯಂತ ಶ್ಲಾಘನೀಯ. ಹೊಸ ವರ್ಷವನ್ನು ಮದ್ಯದ ಬದಲು ಹಾಲಿನೊಂದಿಗೆ ಪ್ರಾರಂಭಿಸುವ ಸಂದೇಶ ಸಮಾಜಕ್ಕೆ ಒಳ್ಳೆಯ ದಿಕ್ಕು ತೋರಿಸುತ್ತದೆ. ಹೊಸ ವರ್ಷದ ಮೊದಲ ದಿನದಿಂದಲೇ ಒಳ್ಳೆಯ ಆರಂಭ ಅತ್ಯಗತ್ಯ. ಎಲ್ಲರೂ ಶಾಂತಿಯುತವಾಗಿ ಹೊಸ ವರ್ಷ ಆಚರಿಸೋಣ” ಎಂದು ಮನವಿ ಮಾಡಿದ್ದಾರೆ.

ವಿಶೇಷವೆಂದರೆ, ಈ ಹಾಲು ವಿತರಣಾ ಕಾರ್ಯಕ್ರಮವು 21 ವರ್ಷಗಳ ಹಿಂದೆ ಹೊಸ ವರ್ಷದ ಮುನ್ನಾದಿನ ಕೇವಲ 500 ಲೀಟರ್ ಹಾಲು ವಿತರಿಸುವ ಮೂಲಕ ಆರಂಭಗೊಂಡಿತ್ತು. ವರ್ಷದಿಂದ ವರ್ಷಕ್ಕೆ ವ್ಯಾಪಕತೆ ಪಡೆದು ಇದೀಗ ಜೈಪುರ ನಗರಾದ್ಯಂತ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಯುವ ಮಟ್ಟಕ್ಕೆ ಬೆಳೆದಿದೆ.

ಅಸ್ತಮಾ ತಜ್ಞ ಡಾ. ವೀರೇಂದ್ರ ಸಿಂಗ್ ಮಾತನಾಡಿ, “ಹೊಸ ವರ್ಷವನ್ನು ಮದ್ಯದಿಂದಲ್ಲ, ಹಾಲಿನಿಂದ ಪ್ರಾರಂಭಿಸುವುದು ಅತ್ಯುತ್ತಮ ಚಿಂತನೆ. ಮದ್ಯ ದೇಹಕ್ಕೆ ಹಾನಿಕಾರಕ. ಹಾಲು ಆರೋಗ್ಯಕ್ಕೆ ಬಹಳ ಉಪಕಾರಿಯಾಗುತ್ತದೆ. ಯುವಕರು ದೇಶದ ಭವಿಷ್ಯವಾಗಿರುವುದರಿಂದ, ವ್ಯಸನದ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ” ಎಂದು ಹೇಳಿದರು. ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ, ಒಳ್ಳೆಯ ಜೀವನಶೈಲಿಯನ್ನು ಅಳವಡಿಸಿಕೊಳ್ಳೋಣ ಎಂದು ಅವರು ಕರೆ ನೀಡಿದರು.

ರಾಜ್ಯ

Karnataka SIR ಅಭಿಯಾನಕ್ಕೆ ಭರ್ಜರಿ ವೇಗ; ಶೇ.92.95 ಕೆಲಸ ಪೂರ್ಣ

Published

on

ಬೆಂಗಳೂರು: Karnataka SIR ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಗವಾಗಿ ಸಾಗುತ್ತಿದ್ದು, ರಾಜ್ಯವು ಮಹತ್ವದ ಮೈಲಿಗಲ್ಲು ತಲುಪಿದೆ. ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, ರಾಜ್ಯಾದ್ಯಂತ SIR ಗಣತಿ ಕಾರ್ಯವು ಈಗಾಗಲೇ ಶೇ.92.95ರಷ್ಟು ಪೂರ್ಣಗೊಂಡಿದ್ದು, 5.15 ಕೋಟಿಗೂ ಅಧಿಕ ಗಣತಿ ಅರ್ಜಿಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ.

ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು, ನಕಲಿ ಹೆಸರುಗಳನ್ನು ತೆಗೆದುಹಾಕುವುದು ಹಾಗೂ ಅರ್ಹ ಮತದಾರರ ಮಾಹಿತಿಯನ್ನು ಮರುಪರಿಶೀಲಿಸುವ ಉದ್ದೇಶದಿಂದ ಈ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ನಮೂನೆಗಳನ್ನು ವಿತರಿಸಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ವಿತರಿಸಲಾದ 5.15 ಕೋಟಿ ಅರ್ಜಿಗಳ ಪೈಕಿ ಹೆಚ್ಚಿನ ಸಂಖ್ಯೆಯ ನಮೂನೆಗಳನ್ನು ಮತದಾರರು ಭರ್ತಿ ಮಾಡಿ ಸಹಿಯೊಂದಿಗೆ ಅಧಿಕಾರಿಗಳಿಗೆ ವಾಪಸ್ ಸಲ್ಲಿಸಿದ್ದಾರೆ. ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಶೇ.100ರಷ್ಟು ಅರ್ಜಿ ವಿತರಣೆ ಪೂರ್ಣಗೊಂಡಿದ್ದು, ಉಳಿದ ಪ್ರದೇಶಗಳಲ್ಲಿಯೂ ಶೀಘ್ರದಲ್ಲೇ ಗುರಿ ತಲುಪುವ ವಿಶ್ವಾಸವನ್ನು ಚುನಾವಣಾ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ, ಮತದಾರರ ಪಟ್ಟಿಯಲ್ಲಿ ಹೆಸರು ಸುರಕ್ಷಿತವಾಗಿರಲು SIR ನಮೂನೆಯನ್ನು ನಿಗದಿತ ಅವಧಿಯಲ್ಲಿ ಭರ್ತಿ ಮಾಡಿ ಸಲ್ಲಿಸುವುದು ಅತ್ಯಂತ ಮಹತ್ವದ್ದಾಗಿದೆ. ಅರ್ಜಿಯನ್ನು ಭರ್ತಿ ಮಾಡಿ ವಾಪಸ್ ನೀಡದಿದ್ದರೆ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಭೌತಿಕವಾಗಿ ಅರ್ಜಿ ಸಲ್ಲಿಸುವುದರ ಜೊತೆಗೆ ಆನ್‌ಲೈನ್ ಮೂಲಕವೂ ನಮೂನೆ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ದಾಖಲಾಗಿರುವ ಶೇ.92.95ರಷ್ಟು ಪ್ರಗತಿಯು ದೇಶದ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿದ್ದು, ಉಳಿದ ಕಾರ್ಯವನ್ನು ಮುಂದಿನ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲು ಚುನಾವಣಾ ಇಲಾಖೆ ಸಜ್ಜಾಗಿದೆ.

Continue Reading

ದೇಶ

Kadapa ದಲ್ಲಿ ಕೋವಿಡ್ ಆತಂಕ; ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ

Published

on

ಆಂಧ್ರಪ್ರದೇಶ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 (Covid-19) ಸೋಂಕಿನ ಆತಂಕ ಮತ್ತೊಮ್ಮೆ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಳ್ಳತೊಡಗಿದೆ. ವೈಎಸ್‌ಆರ್ ಕಡಪ ಜಿಲ್ಲೆಯಲ್ಲೇ ಇತ್ತೀಚೆಗೆ ಎಂಟು ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಆರೋಗ್ಯ ಇಲಾಖೆಯನ್ನು ಎಚ್ಚರಕ್ಕೆ ತಂದಿದೆ.

ಮೃತರಲ್ಲಿ ರಾಜಂಪೇಟೆಯ 52 ವರ್ಷದ ವ್ಯಕ್ತಿಯೊಬ್ಬರು ವೇಲ್ಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬ 43 ವರ್ಷದ ವ್ಯಕ್ತಿ ಕಡಪ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರಿಗೂ ಸೋಂಕು ದೃಢಪಟ್ಟಿದ್ದು, ಅವರು ಸದ್ಯ ಗೃಹಬಂಧನದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ. ಸೋಂಕು ಪೀಡಿತ ಪ್ರದೇಶಗಳಿಂದ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಪ್ರಸ್ತುತ ಹರಡುತ್ತಿರುವ ವೈರಸ್ ಯಾವ ರೂಪಾಂತರಕ್ಕೆ ಸೇರಿದೆ ಎಂಬುದನ್ನು ತಿಳಿಯಲು ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ರವಾನಿಸಲಾಗಿದೆ.

ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವೆ ಸವಿತಾ ಅವರು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಸೂಚಿಸಿದ್ದಾರೆ. ಸಾರ್ವಜನಿಕರು ಹೆಚ್ಚು ಜನಸಂದಣಿ ಇರುವ ಪ್ರದೇಶಗಳು ಹಾಗೂ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ವೈದ್ಯಕೀಯ ಇಲಾಖೆ ಸಲಹೆ ನೀಡಿದೆ.

ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್‌ಗಳು ಮತ್ತು ಅಗತ್ಯ ಹಾಸಿಗೆಗಳನ್ನು ಸಜ್ಜುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ನಾಗರಿಕರು ಅನಗತ್ಯ ಆತಂಕಕ್ಕೆ ಒಳಗಾಗದೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Continue Reading

ದೇಶ

Thailand ಪಬ್‌ನಲ್ಲಿ ಭೀಕರ ಅಗ್ನಿ ಅವಘಡ; 27 ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

Published

on

ಬ್ಯಾಂಕಾಕ್: Thailand ರಾಜಧಾನಿ ಬ್ಯಾಂಕಾಕ್‌ನ ಜನಪ್ರಿಯ ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮುಂಜಾನೆ ಸಂಭವಿಸಿದ ಈ ದುರಂತದಿಂದ ಮನರಂಜನಾ ಕೇಂದ್ರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಸುಮಾರು ಅರ್ಧ ಗಂಟೆಯ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ಆದರೆ ಅಷ್ಟರಲ್ಲಾಗಲೇ ಹಲವು ಮಂದಿ ಹೊಗೆ ಮತ್ತು ಜ್ವಾಲೆಯಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಜನರು ಪಬ್‌ನ ಮುಖ್ಯ ದ್ವಾರದ ಮೂಲಕ ಓಡಿ ಬರುತ್ತಿರುವ ದೃಶ್ಯಗಳು ಕಂಡುಬಂದಿವೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ಮೃತರಲ್ಲಿ 9 ಪುರುಷರು ಮತ್ತು 18 ಮಹಿಳೆಯರು ಸೇರಿದ್ದಾರೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಾಥಮಿಕ ಮಾಹಿತಿಯಂತೆ, ವಿದ್ಯುತ್ ಸಂಪರ್ಕದ ಕಟ್-ಔಟ್ ಸ್ವಿಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಘಟನೆ ವೇಳೆ ಕಾರ್ಯಕ್ರಮ ನೀಡುತ್ತಿದ್ದ ಸಂಗೀತಗಾರರೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.

ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯಲ್ಲಿ ಇರುವ ಈ ಪಬ್ ಸ್ಥಳೀಯವಾಗಿ ಜನಪ್ರಿಯ ಮನರಂಜನಾ ಕೇಂದ್ರವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬ್ಯಾಂಕಾಕ್ ಗವರ್ನರ್ ಚಾಟ್‌ಚಾರ್ಟ್ ಸಿಟ್ಟಿಪುಂಟ್, ಕಟ್ಟಡದ ಒಳಾಂಗಣ ಅಲಂಕಾರಗಳು ಬೆಂಕಿ ವೇಗವಾಗಿ ಹರಡಲು ಕಾರಣವಾಗಿರಬಹುದು ಎಂದು ಪ್ರಾಥಮಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ಮುಂದುವರಿದಿದ್ದು, ಸುರಕ್ಷತಾ ನಿಯಮ ಉಲ್ಲಂಘನೆಯ ಆಯಾಮದಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

Trending