ದೇಶ
Kangana Ranaut VsBaba Ramdev! ‘ನನ್ನ ಯೌವನದ ಬಗ್ಗೆ ಹಗಲುಗನಸು ಕಾಣುವುದನ್ನು ನಿಲ್ಲಿಸಿ’ !
ನವದೆಹಲಿ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತು ಯೋಗ ಗುರು ಬಾಬಾ ರಾಮ್ದೇವ್ (Baba Ramdev) ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಜೆನ್ ಝಿ (Gen Z) ಯುವಪೀಳಿಗೆಯ ಕುರಿತು ಕಂಗನಾ ನೀಡಿದ್ದ ಹೇಳಿಕೆಯಿಂದ ಆರಂಭವಾದ ವಿವಾದ ಇದೀಗ ವೈಯಕ್ತಿಕ ಆರೋಪ-ಪ್ರತ್ಯಾರೋಪದ ಹಂತಕ್ಕೆ ತಲುಪಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಕಂಗನಾ ರಣಾವತ್ ಅವರು ಇಂದಿನ ಯುವಪೀಳಿಗೆಯನ್ನು ‘ಗಟರ್ ಜನರೇಷನ್’ ಎಂದು ಟೀಕಿಸಿದ್ದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಾಬಾ ರಾಮ್ದೇವ್, ದೇಶದ ಯುವಶಕ್ತಿಯನ್ನು ಈ ರೀತಿಯಾಗಿ ಅವಮಾನಿಸುವುದು ಸರಿಯಲ್ಲ ಎಂದು ಹೇಳಿದ್ದರು. ಇದೇ ವೇಳೆ ಕಂಗನಾ ಅವರ ಹಿಂದಿನ ಜೀವನಶೈಲಿ ಹಾಗೂ ನಡೆನುಡಿಗಳ ಬಗ್ಗೆಯೂ ಪ್ರಶ್ನೆ ಎತ್ತಿದ್ದರು.
ರಾಮ್ದೇವ್ಗೆ ಕಂಗನಾ ಖಡಕ್ ತಿರುಗೇಟು
ಬಾಬಾ ರಾಮ್ದೇವ್ ಅವರ ಹೇಳಿಕೆಗೆ ಇನ್ಸ್ಟಾಗ್ರಾಮ್ ಮೂಲಕ ಕಟುವಾಗಿ ಪ್ರತಿಕ್ರಿಯಿಸಿರುವ ಕಂಗನಾ, ತಮ್ಮ ಯೌವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅನಗತ್ಯವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಬಗ್ಗೆ ಹರಿದಾಡುವ ವದಂತಿಗಳು ಮತ್ತು ಗಾಸಿಪ್ಗಳ ಆಧಾರದ ಮೇಲೆ ವ್ಯಕ್ತಿತ್ವವನ್ನು ಅಳೆಯುವುದು ಸರಿಯಲ್ಲ ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ನೀತಿ ಬೋಧಿಸುವುದಕ್ಕೂ ರಾಮ್ದೇವ್ಗೆ ಕಂಗನಾ ತಿರುಗೇಟು ನೀಡಿದ್ದಾರೆ.
ಪತಂಜಲಿ ಜಾಹೀರಾತು ವಿವಾದ ಪ್ರಸ್ತಾಪಿಸಿದ ಕಂಗನಾ
ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿರುವ ಕಂಗನಾ, ಪತಂಜಲಿ ಸಂಸ್ಥೆಗೆ ಸಂಬಂಧಿಸಿದ ತಪ್ಪು ವೈದ್ಯಕೀಯ ಜಾಹೀರಾತುಗಳ ಪ್ರಕರಣವನ್ನೂ ಪ್ರಸ್ತಾಪಿಸಿದ್ದಾರೆ. ಜನರನ್ನು ದಾರಿ ತಪ್ಪಿಸುವ ವೈದ್ಯಕೀಯ ಜಾಹೀರಾತುಗಳಿಗೆ ಸಂಬಂಧಿಸಿದ ಆರೋಪಗಳು ಮತ್ತು ಈ ಕುರಿತು ನಡೆದ ನ್ಯಾಯಾಂಗ ವಿಚಾರಣೆಯನ್ನು ಉಲ್ಲೇಖಿಸಿ ರಾಮ್ದೇವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸಂಸದೆಯಾದ ಬಳಿಕವೂ ತಮ್ಮ ಆಕ್ರಮಣಕಾರಿ ಹಾಗೂ ನೇರವಾದ ಹೇಳಿಕೆಗಳ ಶೈಲಿಯನ್ನು ಕಂಗನಾ ಮುಂದುವರಿಸಿದ್ದು, ಇದೀಗ Kangana Ranaut vs Baba Ramdev ವಾಕ್ಸಮರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Gen Z ಕುರಿತು ಆರಂಭವಾದ ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಬೆಂಗಳೂರು
Bengaluru Cloudnine ಸೇರಿ ಹಲವು ಆಸ್ಪತ್ರೆಗಳಿಗೆ ಭಾರೀ ದಂಡ! KPME ಉಲ್ಲಂಘನೆಗೆ ಬೆಂಗಳೂರು ಜಿಲ್ಲಾಡಳಿತದ ಕ್ರಮ
ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ (KPME) ನಿಯಮಗಳನ್ನು ಉಲ್ಲಂಘಿಸಿರುವ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ KPME ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ, ಜಿಲ್ಲಾಧಿಕಾರಿ ಕಾಂತರಾಜು ಅವರು ನಿಯಮ ಉಲ್ಲಂಘಿಸಿದ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳ ವಿಚಾರಣೆ ನಡೆಸಿ ದಂಡ ಹಾಗೂ ಇತರ ಕ್ರಮಗಳಿಗೆ ಆದೇಶಿಸಿದ್ದಾರೆ.
ನಿಯಮ ಉಲ್ಲಂಘನೆ ಗಂಭೀರವಾಗಿದ್ದ ಮೂರು ವೈದ್ಯಕೀಯ ಸಂಸ್ಥೆಗಳ KPME ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಟಿ.ದಾಸರಹಳ್ಳಿಯ ಶ್ರೀ ಅಯ್ಯಪ್ಪ ಟೆಂಪಲ್ ಮೆಡಿಕಲ್ ಸೆಂಟರ್ಗೆ ₹50,000, ಜಿಗಣಿಯ ಶ್ರೀ ಪದ್ಮಗಿರಿ ಕ್ಲಿನಿಕ್ಗೆ ₹1 ಲಕ್ಷ ಹಾಗೂ ಬಿ.ಜಿ. ರಸ್ತೆಯ ಶ್ರೀ ಹರ್ಷವರ್ಧನ್ ಆಸ್ಪತ್ರೆಗೆ ₹20,000 ದಂಡ ವಿಧಿಸಿ ಪರವಾನಗಿ ರದ್ದುಗೊಳಿಸಲಾಗಿದೆ.
ಹಲವು ಆಸ್ಪತ್ರೆಗಳಿಗೆ ದಂಡ
KPME ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತಷ್ಟು ವೈದ್ಯಕೀಯ ಸಂಸ್ಥೆಗಳಿಗೂ ಜಿಲ್ಲಾಡಳಿತ ದಂಡ ವಿಧಿಸಿದೆ. ಎಚ್ಎಎಲ್ ರಸ್ತೆಯ Cloudnine Hospital ಆಸ್ಪತ್ರೆಗೆ ₹50,000, ಹುಲ್ಲಹಳ್ಳಿಯ ಆರ್.ವಿ. ಕ್ಲಿನಿಕ್ಗೆ ₹1 ಲಕ್ಷ, ಮುನೇಶ್ವರ ಲೇಔಟ್ನ ಇಕ್ಷಾ ಕ್ಲಿನಿಕ್ಗೆ ₹10,000 ಹಾಗೂ ರಾಜಾಜಿನಗರದ ಎನ್ಯು ಹಾಸ್ಪಿಟಲ್ಸ್ಗೆ ₹10,000 ದಂಡ ವಿಧಿಸಲಾಗಿದೆ.
ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಥವಾ ನ್ಯೂನತೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ಮುಚ್ಚಳಿಕೆ ಪತ್ರವನ್ನೂ ಪಡೆಯಲಾಗಿದೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮದಿನಿ ಸೇರಿದಂತೆ ಹಲವು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳು KPME ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ಸ್ಪಷ್ಟ ಸಂದೇಶ ನೀಡಿದೆ.
ದೇಶ
Vande Mataram ಸಂಪೂರ್ಣ ಹಾಡಲ್ಲ ಎಂದ Congress! ‘ಹೊಸ ಮುಸ್ಲಿಂ ಲೀಗ್’ ಎಂದ ಬಿಜೆಪಿ ವಾಗ್ದಾಳಿ
ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ (Vande Mataram) ಕುರಿತ ರಾಜಕೀಯ ವಿವಾದ ಮತ್ತಷ್ಟು ತೀವ್ರಗೊಂಡಿದೆ. ದೇಶದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಇದೀಗ ಹೊಸ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ತನ್ನ ಹಿಂದಿನ ನಿಲುವನ್ನೇ ಮುಂದುವರಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ದೇಶಭಕ್ತಿ ಮತ್ತು ರಾಷ್ಟ್ರೀಯ ಗೀತೆಯ ಬಗ್ಗೆ ಹೊಂದಿರುವ ನಿಲುವಿನ ಕುರಿತು ಪ್ರಶ್ನೆಗಳನ್ನು ಎತ್ತಿದೆ.
‘ಹೊಸ ಮುಸ್ಲಿಂ ಲೀಗ್’ ಎಂದ ಬಿಜೆಪಿ ವಾಗ್ದಾಳಿ
ಸೋನಿಯಾ ಗಾಂಧಿ ವಂದೇ ಮಾತರಂ ಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನ ಈ ನಿರ್ಧಾರವು 1930ರ ದಶಕದಲ್ಲಿ ವಂದೇ ಮಾತರಂನ ಸಂಪೂರ್ಣ ಆವೃತ್ತಿಗೆ ವಿರೋಧ ವ್ಯಕ್ತಪಡಿಸಿದ್ದ ಮುಸ್ಲಿಂ ಲೀಗ್ನ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಪರಂಪರೆಯ ಬಗ್ಗೆ ಮಾತನಾಡುತ್ತಿದೆಯಾದರೂ, ರಾಷ್ಟ್ರೀಯ ಗೀತೆಯ ವಿಚಾರದಲ್ಲಿ ಅದರ ನಿಲುವು ದೇಶದ ಮೇಲಿನ ನಿಷ್ಠೆ ಕುರಿತು ಪ್ರಶ್ನೆ ಹುಟ್ಟುಹಾಕುತ್ತದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಹೇಳುವುದೇನು?
ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಪ್ರಕಾರ, ಪಕ್ಷದ ನಿಲುವು 1937ರಲ್ಲಿ ಕಾಂಗ್ರೆಸ್ ನಾಯಕತ್ವ ಕೈಗೊಂಡ ಐತಿಹಾಸಿಕ ನಿರ್ಧಾರಕ್ಕೆ ಅನುಗುಣವಾಗಿದೆ.
ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕಾಲದಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಸರ್ಕಾರದ ನಿಲುವು ಮತ್ತು ವಿವಾದ
ಸಾರ್ವಜನಿಕ ಹಾಗೂ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವ ಕುರಿತು ಸರ್ಕಾರದ ನಿಲುವು ಮತ್ತು ಸಂಸತ್ತಿನಲ್ಲಿ ನಡೆದ ಬೆಳವಣಿಗೆಗಳ ನಡುವೆಯೂ ಕಾಂಗ್ರೆಸ್ ತನ್ನ ಹಿಂದಿನ ಪದ್ಧತಿಯನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಮ್ಮೆ ರಾಜಕೀಯ ವಾಕ್ಸಮರ ಆರಂಭವಾಗಿದೆ.
ಸ್ವಾತಂತ್ರ್ಯ ದಿನಾಚರಣೆ ವೇಳೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡಿದ ವಿಚಾರವೂ ಈ ವಿವಾದಕ್ಕೆ ಮತ್ತಷ್ಟು ಇಂಬು ನೀಡಿದೆ. ರಾಷ್ಟ್ರೀಯ ಗೀತೆಯ ವಿಚಾರ ಮುಂದಿನ ದಿನಗಳಲ್ಲಿ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ.
ಬೆಂಗಳೂರು
Varamahalakshmi ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ! K R Market ನಲ್ಲಿ ಭಾರೀ ಜನಜಂಗುಳಿ
ಬೆಂಗಳೂರು: ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿ (Varamahalakshmi) ಆಚರಣೆಗೆ ಕೇವಲ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ (Bengaluru) ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್ ಸೇರಿದಂತೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ದಿಢೀರ್ ಹೆಚ್ಚಾಗಿರುವುದರಿಂದ ಹೂವು ಮತ್ತು ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಪೂಜೆ ಹಾಗೂ ಅಲಂಕಾರಕ್ಕೆ ಅಗತ್ಯವಾದ ಕೆಲವು ಹೂವುಗಳ ದರ ಶೇ.100ರಿಂದ 200ರಷ್ಟು ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಹೂವುಗಳ ಬೆಲೆ ಎಷ್ಟು?
ಕೆ.ಆರ್. ಮಾರುಕಟ್ಟೆಯಲ್ಲಿ ಕನಕಾಂಬರ ಹೂವಿನ ಬೆಲೆ ಕೆಜಿಗೆ ಸುಮಾರು ₹2,000ರಿಂದ ₹5,000-₹6,000 ವರೆಗೆ ಏರಿಕೆಯಾಗಿದೆ. ಮಲ್ಲಿಗೆ ಕೆಜಿಗೆ ₹1,000ರಿಂದ ₹2,000, ಸೇವಂತಿಗೆ ₹150ರಿಂದ ₹450 ಹಾಗೂ ಗುಲಾಬಿ ಸುಮಾರು ₹400 ದರದಲ್ಲಿ ಮಾರಾಟವಾಗುತ್ತಿದೆ.
ಇನ್ನು ವರಮಹಾಲಕ್ಷ್ಮಿ ಪೂಜೆಗೆ ಹೆಚ್ಚಿನ ಬೇಡಿಕೆಯಿರುವ ತಾವರೆ ಹೂವಿನ ಒಂದು ಜೋಡಿ ₹100 ವರೆಗೆ ಮಾರಾಟವಾಗುತ್ತಿದೆ.
ಹಣ್ಣುಗಳಿಗೂ ದುಬಾರಿ ಶಾಕ್
ಪೂಜೆ ಮತ್ತು ನೈವೇದ್ಯಕ್ಕೆ ಬಳಸುವ ಹಣ್ಣುಗಳ ದರದಲ್ಲೂ ಗಣನೀಯ ಏರಿಕೆಯಾಗಿದೆ. ಸೇಬು ಕೆಜಿಗೆ ₹110ರಿಂದ ₹270, ದಾಳಿಂಬೆ ₹120ರಿಂದ ₹260, ಕಿತ್ತಳೆ ₹80ರಿಂದ ₹180, ಮೂಸಂಬಿ ₹100ರಿಂದ ₹150 ಹಾಗೂ ಎಲಕ್ಕಿ ಬಾಳೆಹಣ್ಣು ₹50ರಿಂದ ₹100 ವರೆಗೆ ಮಾರಾಟವಾಗುತ್ತಿದೆ.
ಬೆಲೆ ಹೆಚ್ಚಿದರೂ ಖರೀದಿ ಭರ್ಜರಿ
ಹೂವು, ಹಣ್ಣು ಮತ್ತು ಇತರೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದರೂ ವರಮಹಾಲಕ್ಷ್ಮಿ ಹಬ್ಬದ ಉತ್ಸಾಹಕ್ಕೆ ಯಾವುದೇ ಕೊರತೆ ಕಂಡುಬಂದಿಲ್ಲ. ದುಬಾರಿ ದರದ ನಡುವೆಯೂ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.
ವಿಶೇಷವಾಗಿ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ಭಾರಿ ಜನಸಂದಣಿ ಕಂಡುಬಂದಿದ್ದು, ವಾಹನ ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೂವು ಮತ್ತು ಹಣ್ಣುಗಳ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
-
ಬೆಂಗಳೂರು19 ಗಂಟೆಗಳು agoKarnataka Housing Board ಅಧ್ಯಕ್ಷರಾಗಿ MLA Srinivas Mane ಪದಗ್ರಹಣ; ಜನಸೇವೆಗೆ ಮೊದಲ ಆದ್ಯತೆ ಎಂದ ಶಾಸಕ
-
ದೇಶ20 ಗಂಟೆಗಳು agoDog Mask Protest ನಾಯಿ ಕಾಟಕ್ಕೆ ಜನ ಹೈರಾಣ! ಜಿಲ್ಲಾಧಿಕಾರಿ ಕಚೇರಿಗೆ ನಾಯಿ ವೇಷದಲ್ಲಿ ಬಂದ ವ್ಯಕ್ತಿ, ವಿಡಿಯೋ ವೈರಲ್
-
ದೇಶ19 ಗಂಟೆಗಳು agoStrait of Hormuz ಮೇಲೆ ಟ್ರಂಪ್ ಹೊಸ ಘೋಷಣೆ; ಇರಾನ್ಗೆ ಭಾರೀ ಸವಾಲು!
-
ರಾಜ್ಯ20 ಗಂಟೆಗಳು agoTamil Nadu CM ವಿಜಯ್-ತ್ರಿಷಾ ಭೇಟಿಗೆ ರಾಜಕೀಯ ಬಣ್ಣ! Murasoli ಸಂಪಾದಕೀಯದಿಂದ ತಮಿಳುನಾಡಿನಲ್ಲಿ ಹೊಸ ವಿವಾದ
-
ದೇಶ21 ಗಂಟೆಗಳು agoBihar ‘ಸರ್ಕಾರ ತಲೆಬಾಗಲೇಬೇಕು’: ವಾಟರ್ ಕ್ಯಾನನ್ ಪ್ರಯೋಗಕ್ಕೂ ಜಗ್ಗದ Tejashwi Yadav
-
ಸಿನಿಮಾ22 ಗಂಟೆಗಳು ago‘Toxic’ ಅಬ್ಬರ ಶುರು! ವಿಶ್ವದಾದ್ಯಂತ 12,000+ ಸ್ಕ್ರೀನ್ಗಳಲ್ಲಿ Yash ಸಿನಿಮಾ, ಇಲ್ಲಿದೆ ರಿಲೀಸ್ ಡೇಟ್
-
ಬೆಂಗಳೂರು22 ಗಂಟೆಗಳು agoಶ್ರಾವಣ ಶುಕ್ರವಾರ ವಿಶೇಷ ಪೂಜೆ: ಯಶವಂತಪುರ MLA S T Somashekhar ಕಚೇರಿಯಲ್ಲಿ ಭಕ್ತಿಭಾವದ ಸಂಭ್ರಮ
-
ದೇಶ22 ಗಂಟೆಗಳು ago‘ನಾನು ಯಾರೆಂದು ಅವರಿಗೆ ಗೊತ್ತಿರಲಿಲ್ಲ…’: ಕನ್ನಡಿಗರ ಮಾನವೀಯತೆ ಬಗ್ಗೆ Akkineni Nagarjuna ಮಾತು ವೈರಲ್
