ಅಪರಾಧ
ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯಾದ್ಯಂತ Karnataka Lokayukta ದಾಳಿ
ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ Karnataka Lokayukta ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ, ಯಾದಗಿರಿ, ಮಂಡ್ಯ, ಧಾರವಾಡ, ಹಾಸನ, ಮೈಸೂರು, ವಿಜಯಪುರ ಹಾಗೂ ಗದಗ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆದಿದೆ.
ಮಂಡ್ಯದಲ್ಲಿ ಪಿಡಬ್ಲ್ಯೂಡಿ ಎಇಇ ಮನೆ ಮೇಲೆ ದಾಳಿ
ಮಂಡ್ಯದಲ್ಲಿ ಪಿಡಬ್ಲ್ಯೂಡಿ ಎಇಇ ಸತೀಶ್ ಅವರ ಮನೆ ಮತ್ತು ಕಚೇರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆದಿದೆ. ಬಂದಿಗೌಡ ಬಡಾವಣೆಯ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಕ್ರಮ ಆಸ್ತಿ ಗಳಿಕೆ ಕುರಿತು ಬಂದ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಬಾಗಲಕೋಟೆಯಲ್ಲಿ ಮುಖ್ಯ ಎಂಜಿನಿಯರ್ ನಿವಾಸ ಶೋಧ
ಬೆಂಗಳೂರಿನ ಕರ್ನಾಟಕ ರೋಡ್ ಡೆವೆಲಪ್ಮೆಂಟ್ ಕಾರ್ಪೋರೇಷನ್ ಮುಖ್ಯ ಎಂಜಿನಿಯರ್ ವಸಂತ ವಾಲಪ್ಪ ನಾಯಕ್ ಅವರ ಬಾಗಲಕೋಟೆ ನಿವಾಸ, ಬಿಲ್ ಕೆರೂರ ಗ್ರಾಮದಲ್ಲಿನ ಮನೆ, ಬಸವ ನಗರದಲ್ಲಿರುವ ತಾಯಿ ಮನೆ ಹಾಗೂ ಸಹೋದರ ಭೀಮಸೇನ ನಾಯಕ್ ಮನೆ ಮೇಲೂ ದಾಳಿ ನಡೆದಿದೆ. ಎರಡು ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಆರಂಭದಲ್ಲಿ ಬಾಗಿಲು ತೆರೆಯಲು ನಿರಾಕರಿಸಿದ ಘಟನೆ ನಡೆದಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಸಿಇಒ, ಸಹಾಯಕ ಪ್ರಾಧ್ಯಾಪಕ ಮನೆಗಳಲ್ಲೂ ಶೋಧ
ಸಿಂಗನಾಯಕನ ಹಳ್ಳಿ ರೈತಸೇವಾ ಸಹಕಾರ ಸಂಘ, ಯಲಹಂಕದ ಸಿಇಒ ಆರ್. ಶಶಿಧರ್ ಅವರ ಮನೆ ಮೇಲೂ ದಾಳಿ ನಡೆದಿದೆ. ಹೆಬ್ಬಾಳ ವೆಟರ್ನರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಚ್.ಸಿ. ಇಂದ್ರೇಶ್ ಸಂಬಂಧಿತ ಸ್ಥಳಗಳಲ್ಲೂ ಶೋಧ ಕಾರ್ಯ ನಡೆದಿದೆ.
ಇನ್ನೂ ಎಲ್ಲೆಲ್ಲಿ ದಾಳಿ?
- ಯಾದಗಿರಿ – ಉಪ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ವೀರೇಶ್ ಹಿರೇಮಠ್
- ಧಾರವಾಡ – ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಎಂ.ಕೆ. ಸುರಕೋಡ
- ಹಾಸನ – ಮಹಾನಗರ ಪಾಲಿಕೆ ಎಇಇ ಎಂ.ಸಿ. ಸತ್ಯನಾರಾಯಣ
- ಮೈಸೂರು – ಜಲಭವನದ ಎಇಇ ಇ. ಆಸಿಫ್ ಇಕ್ಬಾಲ್
- ವಿಜಯಪುರ (ಜಯಪುರ) – ಕೃಷ್ಣ ಭಾಗ್ಯ ಜಲನಿಗಮದ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ.
ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಈ ದಾಳಿಗಳಿಂದ ಅಧಿಕಾರಿಗಳಲ್ಲಿ ಆತಂಕ ಉಂಟಾಗಿದೆ. ಹೆಚ್ಚಿನ ದಾಖಲೆಗಳು ಮತ್ತು ಆಸ್ತಿ ವಿವರಗಳ ಪರಿಶೀಲನೆ ಮುಂದುವರಿದಿದೆ.
ಅಪರಾಧ
ಮಟನ್ ಬದಲು ಚಿಕನ್ ಬಡಿಸಿದ ಪರಿಣಾಮ! ಮದುವೆ ಮನೆಯಲ್ಲಿ ಭೀಕರ ಗಲಾಟೆ
ಬಿಹಾರ: ಬಿಹಾರದಲ್ಲಿ ಮದುವೆ ಸಮಾರಂಭಗಳ ವೇಳೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆಗಳು ನಡೆಯುವುದು ಹೊಸದಲ್ಲ. ಇದೀಗ ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಿಯಾರ್ಪುರದಲ್ಲಿ ನಡೆದ ಮದುವೆ ಸಮಾರಂಭವೊಂದು ಊಟದ ಮೆನು ಬದಲಾವಣೆಯಿಂದ ರಣರಂಗವಾಗಿ ಮಾರ್ಪಟ್ಟಿದೆ. ಮಟನ್ (ಕುರಿಮರಿ ಮಾಂಸ) ಬಡಿಸಲಾಗುತ್ತದೆ ಎಂದು ನಿರೀಕ್ಷಿಸಿದ್ದ ಅತಿಥಿಗಳಿಗೆ ಚಿಕನ್ (ಕೋಳಿ ಮಾಂಸ) ಬಡಿಸಿದ ಕಾರಣ ವಧು ಹಾಗೂ ವರನ ಕಡೆಯವರ ನಡುವೆ ತೀವ್ರ ಘರ್ಷಣೆ ನಡೆದಿದೆ.
ಗುರುವಾರ (ಜುಲೈ 9) ರಾತ್ರಿ ನಡೆದ ಈ ಘಟನೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಅತಿಥಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕೆಲವೇ ಕ್ಷಣಗಳಲ್ಲಿ ಅದು ಹೊಡೆದಾಟಕ್ಕೆ ತಿರುಗಿದೆ. ಪರಿಸ್ಥಿತಿ ಕೈಮೀರಿದ ಪರಿಣಾಮ ಉಭಯ ಕಡೆಯ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವರದಿಗಳ ಪ್ರಕಾರ, ಸಿಮ್ರಿ ಭಕ್ತಿಯಾರ್ಪುರದ ನಿವಾಸಿ ಮೊಹಮ್ಮದ್ ಅನ್ವರ್ ಅವರ ಪುತ್ರ ಮೊಹಮ್ಮದ್ ಅಬ್ದುಲ್ಲಾ ಅವರ ವಿವಾಹವು ರಾಜನ್ಪುರದ ನಿವಾಸಿ ಮೊಹಮ್ಮದ್ ಜಾವಿದ್ ಅಲಿಯಾಸ್ ಮೋಟೋ ಅವರ ಪುತ್ರಿಯೊಂದಿಗೆ ನಡೆಯುತ್ತಿತ್ತು. ವಿವಾಹ ವಿಧಿವಿಧಾನಗಳು ಸುಸೂತ್ರವಾಗಿ ಪೂರ್ಣಗೊಂಡಿದ್ದರೂ, ಊಟ ಆರಂಭವಾಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ.
ವರನ ಕಡೆಯವರು, ಮದುವೆ ಮೆನುವಿನಲ್ಲಿ ಮಟನ್ ನೀಡಲಾಗುತ್ತದೆ ಎಂದು ಮೊದಲೇ ತಿಳಿಸಲಾಗಿತ್ತು. ಆದರೆ ಊಟದ ವೇಳೆ ಚಿಕನ್ ಬಡಿಸಿದ್ದರಿಂದ ಅಸಮಾಧಾನ ಉಂಟಾಯಿತು ಎಂದು ಆರೋಪಿಸಿದ್ದಾರೆ. ಇದೇ ವೇಳೆ ವರನ ಚಿಕ್ಕಪ್ಪ ಮೊಹಮ್ಮದ್ ಇರ್ಫಾನ್ ಮಾತನಾಡಿ, ಆಹಾರದ ವಿಚಾರದಲ್ಲಿ ಪ್ರಶ್ನಿಸಿದ ತಕ್ಷಣ ವಧುವಿನ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಘಟನೆಯ ತೀವ್ರತೆಯನ್ನು ಅರಿತ ಹಿರಿಯರು ಹಾಗೂ ಸ್ಥಳೀಯ ಗಣ್ಯರು ತಕ್ಷಣ ಮಧ್ಯಪ್ರವೇಶಿಸಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆಸಿದರು. ಬಳಿಕ ವಿವಾದವನ್ನು ಸ್ಥಳದಲ್ಲೇ ಬಗೆಹರಿಸಿ ಮದುವೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಪರಾಧ
ತರಗತಿಯಲ್ಲಿ ಏನಾಯಿತು? 8 ತಿಂಗಳ ಬಳಿಕ ಹೊರಬಂದ CCTV ವಿಡಿಯೋ ಪ್ರಶ್ನೆ ಎಬ್ಬಿಸಿದೆ
ಜೈಪುರ: ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ಕಳೆದ ವರ್ಷ ಶಾಲಾ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದ 9 ವರ್ಷದ ವಿದ್ಯಾರ್ಥಿನಿಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆ ನಡೆದ ಸುಮಾರು ಎಂಟು ತಿಂಗಳ ಬಳಿಕ ಬಾಲಕಿಯ ಕುಟುಂಬವು ತರಗತಿಯ ಸಿಸಿಟಿವಿ (CCTV) ದೃಶ್ಯವನ್ನು ಸಾರ್ವಜನಿಕಗೊಳಿಸಿದ್ದು, ತಮ್ಮ ಪುತ್ರಿಗೆ ಸಹಪಾಠಿಗಳಿಂದ ನಿರಂತರವಾಗಿ ಬುಲ್ಲಿಯಿಂಗ್ (Bullying) ನಡೆಯುತ್ತಿತ್ತು ಎಂದು ಆರೋಪಿಸಿದೆ.
ಕುಟುಂಬದ ಪ್ರಕಾರ, ವಿಡಿಯೋದಲ್ಲಿ ವಿದ್ಯಾರ್ಥಿನಿ ಸಾಮಾನ್ಯವಾಗಿ ತರಗತಿಗೆ ಪ್ರವೇಶಿಸಿ ಸಹಪಾಠಿಯೊಂದಿಗೆ ಮಾತನಾಡುವುದು ಹಾಗೂ ನೃತ್ಯ ಚಟುವಟಿಕೆಯಲ್ಲಿ ಭಾಗವಹಿಸುವುದು ಕಾಣಿಸುತ್ತದೆ. ಬಳಿಕ ಕೆಲ ವಿದ್ಯಾರ್ಥಿಗಳು ಆಕೆಯನ್ನು ಪದೇ ಪದೇ ಕಿರುಕುಳ ನೀಡುತ್ತಿರುವ ದೃಶ್ಯಗಳು ಸೆರೆಯಾಗಿವೆ ಎಂದು ಪೋಷಕರು ಹೇಳಿದ್ದಾರೆ. ಬಾಲಕಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರೂ ಶಿಕ್ಷಕರಿಂದ ಸೂಕ್ತ ಸಹಾಯ ಅಥವಾ ರಕ್ಷಣೆ ದೊರೆಯಲಿಲ್ಲ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ನವೆಂಬರ್ 1ರಂದು ನಾಲ್ಕನೇ ಮಹಡಿಯಿಂದ ಬಾಲಕಿ ಕೆಳಗೆ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ರಾಜಸ್ಥಾನ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಬಾಲಕಿಯ ಪೋಷಕರು, ಶಾಲಾ ಆಡಳಿತ ಹಾಗೂ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಜುವೆನೈಲ್ ಜಸ್ಟಿಸ್ (ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್) ಕಾಯ್ದೆ ಸೇರಿದಂತೆ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ, ತನಿಖೆ ಶಾಲಾ ಆಡಳಿತದ ಪ್ರಭಾವದಲ್ಲಿ ನಡೆದಿದ್ದು, ನಿಷ್ಪಕ್ಷಪಾತ ತನಿಖೆ ನಡೆಯಲಿಲ್ಲ ಎಂದು ಆರೋಪಿಸಿದ್ದಾರೆ.
ಈ ಘಟನೆ ಮಕ್ಕಳ ಸುರಕ್ಷತೆ, ಶಾಲೆಗಳಲ್ಲಿ ಬುಲ್ಲಿಯಿಂಗ್ ತಡೆ ವ್ಯವಸ್ಥೆ, ಸಮಾಲೋಚಕರ ನೇಮಕ ಹಾಗೂ ಪರಿಣಾಮಕಾರಿ ದೂರು ನಿವಾರಣಾ ವ್ಯವಸ್ಥೆಯ ಅಗತ್ಯವನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ.
ಸೂಚನೆ: ಈ ಪ್ರಕರಣದಲ್ಲಿ ಬುಲ್ಲಿಯಿಂಗ್ ಮತ್ತು ಆತ್ಮಹತ್ಯೆ ಕುರಿತ ಆರೋಪಗಳಿವೆ. ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯುತ್ತಿರುವುದರಿಂದ ಅಂತಿಮ ತೀರ್ಪು ಇನ್ನೂ ಹೊರಬಿದ್ದಿಲ್ಲ.
ಅಪರಾಧ
ಅಪರಾಧಿಗಳಿಗೆ ನಡುಕ ಹುಟ್ಟಿಸಿದ ಬೆಂಗಳೂರು ಪೊಲೀಸರ ತಡರಾತ್ರಿ ಸ್ಪೆಷಲ್ ಆಪರೇಷನ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಾನೂನು ಸುವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು (Bengaluru Police) ತಡರಾತ್ರಿ ಭರ್ಜರಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಕೇಂದ್ರ (Central Division) ಹಾಗೂ ಆಗ್ನೇಯ (South East Division) ವಿಭಾಗದ ಪೊಲೀಸರು ಜಂಟಿಯಾಗಿ ರೌಡಿ ಪರೇಡ್, ವಾಹನ ತಪಾಸಣೆ ಹಾಗೂ ರೌಡಿಶೀಟರ್ಗಳ ಮನೆಗಳ ಮೇಲೆ ದಿಢೀರ್ ಪರಿಶೀಲನೆ ನಡೆಸುವ ಮೂಲಕ ಅಪರಾಧ ಚಟುವಟಿಕೆಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಹಾಗೂ ಮಾದಕ ದ್ರವ್ಯ (NDPS) ಜಾಲಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಾಚರಣೆ ಆಯೋಜಿಸಲಾಗಿತ್ತು. ಆಡುಗೋಡಿ, ವಿಲ್ಸನ್ ಗಾರ್ಡನ್, ವಿವೇಕನಗರ, ಅಶೋಕ್ ನಗರ ಸೇರಿದಂತೆ ಕೇಂದ್ರ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಡರಾತ್ರಿವರೆಗೂ ತಪಾಸಣೆ ಮುಂದುವರಿಯಿತು. ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 400ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಾಚರಣೆಯ ವೇಳೆ ರೌಡಿಶೀಟರ್ಗಳು ಹಾಗೂ ಎನ್ಡಿಪಿಎಸ್ ಪ್ರಕರಣಗಳ ಹಳೆಯ ಆರೋಪಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಮನೆಗಳು ಮತ್ತು ವಾಹನಗಳನ್ನು ತಪಾಸಣೆ ಮಾಡಿದ ಪೊಲೀಸರು, ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಸಾರ್ವಜನಿಕ ಶಾಂತಿ ಕದಡುವ ಅಥವಾ ಕಾನೂನು ಉಲ್ಲಂಘಿಸುವ ಯಾವುದೇ ಪ್ರಯತ್ನ ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇದೇ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಅನುಮಾನಾಸ್ಪದ ವಾಹನಗಳನ್ನು ತಡೆದು ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಈ ಹಠಾತ್ ಕಾರ್ಯಾಚರಣೆಯಿಂದ ರೌಡಿ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಪರಾಧ ಚಟುವಟಿಕೆಗಳಿಗೆ ತಡೆ ಬೀಳುವ ನಿರೀಕ್ಷೆ ವ್ಯಕ್ತವಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಮುಂದಿನ ದಿನಗಳಲ್ಲೂ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
-
ದೇಶ11 hours agoಬಿಹಾರ ರಾಜಕೀಯದಲ್ಲಿ ಭಾರಿ ಟ್ವಿಸ್ಟ್: ನಾಮಪತ್ರದ ಮರುದಿನವೇ BJP ಅಭ್ಯರ್ಥಿ ಬದಲಾವಣೆ, ಪ್ರಶಾಂತ್ ಕಿಶೋರ್ ವಿರುದ್ಧ ಹೊಸ ಮುಖ!
-
ದೇಶ11 hours ago20 ಗಂಟೆಗಳ ಕಾಲ ನೀರಿನಡಿ ಸಾಹಸ! ‘ಮೈಸಾ’ ಸಿನಿಮಾದಲ್ಲಿ ಇತಿಹಾಸ ಸೃಷ್ಟಿಸಿದ ರಶ್ಮಿಕಾ ಮಂದಣ್ಣ
-
ದೇಶ12 hours agoIran-ಅಮೆರಿಕ ಯುದ್ಧ ಆತಂಕ: ಮಂಗಳೂರಿನಲ್ಲಿ ಮತ್ತೊಂದು ಬೃಹತ್ ತೈಲ ಸಂಗ್ರಹಾಗಾರ, ಭಾರತದ ಇಂಧನ ಭದ್ರತೆಗೆ ONGC ಮಹತ್ವದ ನಿರ್ಧಾರ
-
ದೇಶ12 hours ago40 ವರ್ಷಗಳ ಬಳಿಕ ಭಾರತೀಯ ಪ್ರಧಾನಿ ನ್ಯೂಜಿಲ್ಯಾಂಡ್ಗೆ; FTA ಮೂಲಕ ಹೊಸ ಅಧ್ಯಾಯ
-
ಚುನಾವಣೆ10 hours agoನರೋತ್ತಮ್ ಮಿಶ್ರಾಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಭಾರೀ ಬಂಡಾಯ! ರಸ್ತೆ ತಡೆ, ಕಲ್ಲು ತೂರಾಟ, ಹಲವು ರಾಜೀನಾಮೆ
-
ದೇಶ12 hours agoಪ್ರಧಾನಿ ಮೋದಿ ಭದ್ರತೆಗೆ ಬೆದರಿಕೆ? ಆಸ್ಟ್ರೇಲಿಯಾದ ಹೋಟೆಲ್ನಲ್ಲಿ ಖಲಿಸ್ತಾನಿ ಘೋಷಣೆ
-
ದೇಶ10 hours ago14 ಗಂಟೆಯಲ್ಲಿ 265 ಕಿ.ಮೀ ಪಯಣ; MLA ಸುರೇಶ್ ಕುಮಾರ್ ಅವರ ಫಿಟ್ನೆಸ್ಗೆ ಜನ ಫಿದಾ
-
ದೇಶ9 hours agoಕಾಶ್ಮೀರ ನಕ್ಷೆ ತಪ್ಪಾಗಿ ಪ್ರದರ್ಶನ; ಬಾಂಗ್ಲಾದೇಶದಲ್ಲೇ ಭಾರತದ ಅಧಿಕಾರಿ ಖಡಕ್ ಆಕ್ಷೇಪ
