ದೇಶ
ಮಹಾದೇವಪುರದಲ್ಲಿ ಮತಗಳ್ಳತನದ ಬೃಹತ್ ಆರೋಪ: ರಾಹುಲ್ ಗಾಂಧಿಯಿಂದ ದಾಖಲೆ ಸಮೇತ ಸ್ಫೋಟಕ ವಿವರಣೆ
ಬೆಂಗಳೂರು, ಆಗಸ್ಟ್ 7 – ಲೋಕಸಭಾ ಚುನಾವಣೆಯ ವೇಳೆ ಮಹಾದೇವಪುರದಲ್ಲಿ ಭಾರೀ ಮತಗಳ್ಳತನ ನಡೆದಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಾಡಿದ್ರು. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸ್ಫೋಟಕ ದಾಖಲೆಗಳೊಂದಿಗೆ ಈ ಆರೋಪ ಮಾಡಿದ್ದಾರೆ.
16 ಸ್ಥಾನ ಗೆದ್ದ ಬಿಜೆಪಿಗೆ 1.14 ಲಕ್ಷ ಮತಗಳ ಮುನ್ನಡೆ ಹೇಗೆ?
ರಾಹುಲ್ ಗಾಂಧಿ ಪ್ರಕಾರ, ಮಹಾದೇವಪುರ ಕ್ಷೇತ್ರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 2,29,632 ಮತಗಳು, ಕಾಂಗ್ರೆಸ್ 1,15,586 ಮತಗಳನ್ನು ಪಡೆದಿದ್ದು, ಬಿಜೆಪಿಗೆ 1,14,046 ಮತಗಳ ಮುನ್ನಡೆ ದೊರೆತಿದೆ. ಆದರೆ ಈ ಅಂತರ ಅನುಮಾನಾಸ್ಪದವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೀಗ ಬಹಿರಂಗಗೊಂಡ ಅಕ್ರಮ ವಿವರಗಳು:
- 11,965 ನಕಲಿ ಮತದಾರರು
- 40,009 ನಕಲಿ ವಿಳಾಸದ ಮತಗಳು
- 10,452 ಒಂದೇ ವಿಳಾಸದಲ್ಲಿ ಹಲವಾರು ಮತದಾರರು
- 4,132 ಫೋಟೋ ಇಲ್ಲದ ಮತಗಳು
- 33,692 ಫಾರಂ 6 ದುರ್ಬಳಕೆ
ಇವುಗಳನ್ನು ಉಲ್ಲೇಖಿಸಿ ಅವರು ಚುನಾವಣಾ ಆಯೋಗದ ನಿಷ್ಕ್ರಿಯತೆಯನ್ನು ತೀವ್ರವಾಗಿ ಟೀಕಿಸಿದರು.
ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಸೇರಿ ಮತಗಟ್ಟೆಗಳಲ್ಲಿ ಅವ್ಯವಸ್ಥೆ?
ಕೇವಲ ಕರ್ನಾಟಕವಲ್ಲದೆ, ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿಯೂ ಮತಗಳ್ಳತನ ನಡೆಯುತ್ತಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಅಕ್ರಮವಾಗಿ ಜನಸಂಖ್ಯೆಗಿಂತ ಹೆಚ್ಚು ಮತದಾರರು ಸೇರ್ಪಡೆಯಾಗಿರುವುದು ಗಮನ ಸೆಳೆಯುವ ವಿಷಯ ಎಂದು ಹೇಳಿದರು.
ಚುನಾವಣಾ ಆಯೋಗ ನಿರ್ಲಕ್ಷ್ಯ ಆರೋಪ
ಈ ಗಂಭೀರ ಆರೋಪಗಳ ಬಗ್ಗೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಇಲ್ಲದಿರುವುದನ್ನು ಅವರು ಖಂಡಿಸಿದ್ದಾರೆ. ಅಲ್ಲದೆ, ಮತದಾರರ ಪಟ್ಟಿ ನೀಡಲು ನಿರಾಕರಿಸಿರುವುದು, ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿರುವುದು, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಘಟನೆಗಳು ಎಂದು ಹೇಳಿದರು.
ದೇಶ
Dark Web ನಿಂದ WhatsApp, Telegramಗೆ! ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಪತ್ರದ ಹಿಂದೆ ಯಾರು?
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರಿಗೆ ಮತ್ತೊಮ್ಮೆ ಉಗ್ರ ಸಂಘಟನೆಗಳಿಂದ Dark Web ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ. ಪ್ರಧಾನಮಂತ್ರಿ ಪ್ಯಾಕೇಜ್ ಅಡಿ ಜಮ್ಮು-ಕಾಶ್ಮೀರದಲ್ಲಿ ನೇಮಕಗೊಂಡಿರುವ ಕಾಶ್ಮೀರಿ ಪಂಡಿತ ನೌಕರರನ್ನು ಗುರಿಯಾಗಿಸಿಕೊಂಡು ಕೆಲಸ ತೊರೆಯುವಂತೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.
ಲಷ್ಕರ್-ಎ-ತಯ್ಬಾ (Lashkar-e-Taiba) ಜೊತೆ ಸಂಪರ್ಕ ಹೊಂದಿರುವುದಾಗಿ ಭದ್ರತಾ ಮೂಲಗಳು ಹೇಳಿರುವ ಯುನೈಟೆಡ್ ಲಿಬರೇಷನ್ ಕೌನ್ಸಿಲ್ ಎಂಬ ಸಂಘಟನೆ ಈ ಬೆದರಿಕೆಗಳನ್ನು ನೀಡಿದೆ ಎನ್ನಲಾಗಿದೆ. ಕೆಲಸ ಮುಂದುವರಿಸಿದರೆ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
7 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಬೆದರಿಕೆ?
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ ಪ್ರಧಾನಮಂತ್ರಿ ಪ್ಯಾಕೇಜ್ ಅಡಿ ಕೆಲಸ ಮಾಡುತ್ತಿರುವ ಸುಮಾರು 7 ಸಾವಿರ ಕಾಶ್ಮೀರಿ ಪಂಡಿತ ಉದ್ಯೋಗಿಗಳು ಈ ಬೆದರಿಕೆಯ ವ್ಯಾಪ್ತಿಯಲ್ಲಿದ್ದಾರೆ ಎನ್ನಲಾಗಿದೆ.
ಇವರನ್ನು ಗುರಿಯಾಗಿಸಿಕೊಂಡು ಮೊಬೈಲ್ ಫೋನ್ ಸಂಖ್ಯೆಗಳು, ಮನೆ ವಿಳಾಸಗಳು ಹಾಗೂ ವಾಹನ ನೋಂದಣಿ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಆನ್ಲೈನ್ನಲ್ಲಿ ಸೋರಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ವೈಯಕ್ತಿಕ ಮಾಹಿತಿಯ ಇಂತಹ ಸೋರಿಕೆ ನೌಕರರ ಭದ್ರತೆಯ ಬಗ್ಗೆ ಆತಂಕ ಹೆಚ್ಚಿಸಿದೆ. ವಿಶೇಷವಾಗಿ ಸರ್ಕಾರಿ ನೌಕರರ ಸ್ಥಳ, ಸಂಚಾರ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ದುಷ್ಕರ್ಮಿಗಳು ಬಳಸಿಕೊಳ್ಳುವ ಸಾಧ್ಯತೆಯಿರುವುದರಿಂದ ಭದ್ರತಾ ಸಂಸ್ಥೆಗಳು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿವೆ ಎನ್ನಲಾಗಿದೆ.
ಡಾರ್ಕ್ ವೆಬ್ನಿಂದ WhatsApp, Telegramಗೆ ಬೆದರಿಕೆ ಪತ್ರ?
ಈ ಪ್ರಕರಣದಲ್ಲಿ ಮತ್ತೊಂದು ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ. ಕೆಲವು ಬೆದರಿಕೆ ಪತ್ರಗಳು ಮೊದಲು ಡಾರ್ಕ್ ವೆಬ್ನಲ್ಲಿ ಕಾಣಿಸಿಕೊಂಡು, ನಂತರ WhatsApp ಮತ್ತು Telegram ಸೇರಿದಂತೆ ವಿವಿಧ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಹರಿದಾಡಿವೆ ಎನ್ನಲಾಗಿದೆ.
ಇದರಿಂದ ಬೆದರಿಕೆ ಪತ್ರಗಳ ಮೂಲವನ್ನು ಪತ್ತೆಹಚ್ಚುವುದು ಭದ್ರತಾ ಹಾಗೂ ಸೈಬರ್ ಕ್ರೈಂ ತನಿಖಾಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ವೈಯಕ್ತಿಕ ಮಾಹಿತಿಯನ್ನು ಎಲ್ಲಿಂದ ಸಂಗ್ರಹಿಸಲಾಗಿದೆ, ಅದನ್ನು ಆನ್ಲೈನ್ಗೆ ಅಪ್ಲೋಡ್ ಮಾಡಿದವರು ಯಾರು ಮತ್ತು ಈ ಕೃತ್ಯದ ಹಿಂದೆ ಸ್ಥಳೀಯ ಅಥವಾ ವಿದೇಶಿ ಜಾಲವಿದೆಯೇ ಎಂಬುದರ ಕುರಿತು ತನಿಖೆ ನಡೆಯಬೇಕಿದೆ.
ಒಂದೇ ತಿಂಗಳಲ್ಲಿ ಐದು ಬೆದರಿಕೆ ಪತ್ರ?
ಕಳೆದ ಒಂದು ತಿಂಗಳ ಅವಧಿಯಲ್ಲಿ ಕಾಶ್ಮೀರಿ ಪಂಡಿತ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ಕನಿಷ್ಠ ಐದು ಬೆದರಿಕೆ ಪತ್ರಗಳು ಹೊರಬಂದಿವೆ ಎನ್ನಲಾಗಿದೆ.
ಸೆಪ್ಟೆಂಬರ್ 5ರಂದು ಮತ್ತೊಂದು ಬೆದರಿಕೆ ಪತ್ರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 6ರಂದು ಈ ಕುರಿತು ದೂರು ಸಲ್ಲಿಸಲಾಗಿದೆ ಎಂದು ಮಾಹಿತಿ ತಿಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಪೊಲೀಸ್ ಸೈಬರ್ ಕ್ರೈಂ ವಿಭಾಗದ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ ಎನ್ನಲಾಗಿದೆ.
ಸರ್ಕಾರಿ ನೌಕರರಲ್ಲಿ ಹೆಚ್ಚಿದ ಆತಂಕ
ಕಾಶ್ಮೀರಿ ಪಂಡಿತ ಸಮುದಾಯದ ನೌಕರರಿಗೆ ಭದ್ರತೆ ಒದಗಿಸುವುದು ಇದೀಗ ಪ್ರಮುಖ ವಿಚಾರವಾಗಿದೆ. ಈ ಹಿಂದೆ ಕೂಡ ಕಾಶ್ಮೀರ ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ಬೆದರಿಕೆಗಳು ಮತ್ತು ದಾಳಿಗಳು ನಡೆದಿದ್ದವು.
ಪ್ರಧಾನಮಂತ್ರಿ ಪ್ಯಾಕೇಜ್ ಅಡಿ ನೇಮಕಗೊಂಡಿರುವ ನೌಕರರು ಕಾಶ್ಮೀರದಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಸುರಕ್ಷತೆ ಕುರಿತು ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಈ ನಡುವೆ ವೈಯಕ್ತಿಕ ಮಾಹಿತಿಯ ಸೋರಿಕೆಯ ಮೂಲ, ಬೆದರಿಕೆ ಪತ್ರಗಳ ನೈಜತೆ ಮತ್ತು ಅವುಗಳ ಹಿಂದೆ ಕಾರ್ಯನಿರ್ವಹಿಸುತ್ತಿರುವ ಜಾಲದ ಬಗ್ಗೆ ತನಿಖಾ ಸಂಸ್ಥೆಗಳು ಹೆಚ್ಚಿನ ಮಾಹಿತಿ ಕಲೆಹಾಕಬೇಕಿದೆ.
ಉಗ್ರರ ಬೆದರಿಕೆ ಬೆನ್ನಲ್ಲೇ ಭದ್ರತೆಗೆ ಒತ್ತು
ಬೆದರಿಕೆ ಪತ್ರಗಳು ನಿಜವೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವುದೇ ಎಂಬುದನ್ನು ತನಿಖೆಯ ಬಳಿಕವೇ ಖಚಿತಪಡಿಸಬೇಕಿದೆ. ಆದರೆ ಸರ್ಕಾರಿ ನೌಕರರ ವೈಯಕ್ತಿಕ ಮಾಹಿತಿಯ ಸೋರಿಕೆ ಹಾಗೂ ಜೀವ ಬೆದರಿಕೆಯ ಆರೋಪಗಳು ಗಂಭೀರವಾಗಿರುವುದರಿಂದ ಸೈಬರ್ ಭದ್ರತೆ ಮತ್ತು ನೆಲಮಟ್ಟದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯ ಎದುರಾಗಿದೆ.
ಕಾಶ್ಮೀರಿ ಪಂಡಿತ ನೌಕರರಿಗೆ ಬಂದಿರುವ ಈ ಹೊಸ ಬೆದರಿಕೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ದೇಶ
UP Election 2027: 2024ರ ಸೋಲಿನ ಲೆಕ್ಕ ಚುಕ್ತಾ ಮಾಡಲು ಯೋಗಿ ಮಾಸ್ಟರ್ಪ್ಲಾನ್; 115 ಕ್ಷೇತ್ರಗಳೇ ಟಾರ್ಗೆಟ್!
ಲಖನೌ:UP Election 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎದುರಾದ ಭಾರೀ ಹಿನ್ನಡೆಯನ್ನು 2027ರ ವಿಧಾನಸಭಾ ಚುನಾವಣೆಯಲ್ಲಿ ಸರಿಪಡಿಸಲು ಬಿಜೆಪಿ ಭರ್ಜರಿ ತಂತ್ರ ರೂಪಿಸುತ್ತಿದೆ. ದೇಶದ ರಾಜಕೀಯದಲ್ಲಿ ಅತ್ಯಂತ ಮಹತ್ವದ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯನ್ನೂ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಬಿಜೆಪಿಗೆ ದೊಡ್ಡ ಆಘಾತ ನೀಡಿತ್ತು. 80 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಕೇವಲ 33 ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಾರ್ಟಿ 37 ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿತ್ತು. 2019ರಲ್ಲಿ ಬಿಜೆಪಿ 62 ಸ್ಥಾನಗಳನ್ನು ಗೆದ್ದಿದ್ದ ಹಿನ್ನೆಲೆಯಲ್ಲಿ, ಕೇವಲ ಐದು ವರ್ಷಗಳಲ್ಲಿ 29 ಸ್ಥಾನಗಳ ಕುಸಿತ ಕಂಡಿತ್ತು.
ಈ ಫಲಿತಾಂಶದ ಬಳಿಕ 2027ರ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಕಳೆದ ಬಾರಿ ಹಿನ್ನಡೆ ಕಂಡ ಪ್ರದೇಶಗಳಲ್ಲಿ ಈಗಿನಿಂದಲೇ ಸಂಘಟನಾತ್ಮಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
‘ಟಾರ್ಗೆಟ್ 115’ ಮೇಲೆ ಬಿಜೆಪಿ ಕಣ್ಣು
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ತಂದ ಪ್ರಮುಖ ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿ, ಸುಮಾರು 115 ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ. ಈ 115 ಕ್ಷೇತ್ರಗಳ ಪೈಕಿ 67ರಲ್ಲಿ 2024ರ ಲೋಕಸಭಾ ಚುನಾವಣೆಯ ವೇಳೆ ಸಮಾಜವಾದಿ ಪಾರ್ಟಿ-ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ ಸಾಧಿಸಿತ್ತು. SP 54 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 47 ಕ್ಷೇತ್ರಗಳಲ್ಲಿ ಹಾಗೂ ಅದರ ಮಿತ್ರ RLD ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿತ್ತು.
ಹೀಗಾಗಿ ಈ 115 ಕ್ಷೇತ್ರಗಳನ್ನು 2027ರ ಚುನಾವಣೆಗೆ ಮುನ್ನ ಬಿಜೆಪಿಯ ‘ವಲ್ನರಬಲ್’ ಕ್ಷೇತ್ರಗಳಾಗಿ ಪರಿಗಣಿಸಿ, ಅಲ್ಲಿನ ಜನರ ಸಮಸ್ಯೆಗಳು, ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನದ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
44 ಜಿಲ್ಲೆಗಳಲ್ಲಿ ಯೋಗಿ ಪ್ರವಾಸ
2027ರ ಫೆಬ್ರವರಿ ವೇಳೆಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ತಮ್ಮ ಸಾರ್ವಜನಿಕ ಸಂಪರ್ಕ ಅಭಿಯಾನವನ್ನು ಚುರುಕುಗೊಳಿಸಿದ್ದಾರೆ.
ಮೇ 2026ರಿಂದ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 44ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಪ್ರಮುಖವಾಗಿ ಈ 115 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.
ರಸ್ತೆ, ಶಾಲೆ, ಆಸ್ಪತ್ರೆ, ವಿದ್ಯುತ್, ನೀರು, ಪಂಚಾಯತ್ ಭವನ, ಪ್ರವಾಸೋದ್ಯಮ ಮತ್ತು ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ₹38,000 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಈ ಅಭಿಯಾನದ ಭಾಗವಾಗಿ ಘೋಷಿಸಲಾಗಿದೆ ಅಥವಾ ಆರಂಭಿಸಲಾಗಿದೆ.
ರಾಯ್ಬರೇಲಿ, ಕನೌಜ್ಗೂ ವಿಶೇಷ ಗಮನ
ವಿರೋಧ ಪಕ್ಷಗಳ ಪ್ರಮುಖ ನಾಯಕರ ಕ್ಷೇತ್ರಗಳ ಮೇಲೂ ಬಿಜೆಪಿ ಸರ್ಕಾರ ವಿಶೇಷ ಗಮನ ಹರಿಸುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ರಾಯ್ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸುಮಾರು ₹879 ಕೋಟಿ ಮೊತ್ತದ ಕಾಮಗಾರಿಗಳಿಗೆ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದಾರೆ.
ಅದೇ ರೀತಿ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಪ್ರತಿನಿಧಿಸುವ ಕನೌಜ್ ಕ್ಷೇತ್ರ ಸೇರಿದಂತೆ ವಿರೋಧ ಪಕ್ಷಗಳ ಪ್ರಭಾವವಿರುವ ಪ್ರದೇಶಗಳಲ್ಲೂ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ.
ಮಾಯಾವತಿ ಮತ್ತು BSPಗೆ ದೊಡ್ಡ ಸವಾಲು
ಒಂದು ಕಾಲದಲ್ಲಿ ಉತ್ತರ ಪ್ರದೇಶದ ದಲಿತ ರಾಜಕೀಯದ ಪ್ರಮುಖ ಶಕ್ತಿಯಾಗಿದ್ದ ಬಹುಜನ ಸಮಾಜ ಪಾರ್ಟಿ ಇತ್ತೀಚಿನ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. 2019ರಲ್ಲಿ ಉತ್ತರ ಪ್ರದೇಶದಲ್ಲಿ 10 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ BSP, 2024ರಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ.
ಇದಕ್ಕೆ ವಿರುದ್ಧವಾಗಿ ಸಮಾಜವಾದಿ ಪಾರ್ಟಿ ತನ್ನ ರಾಜಕೀಯ ನೆಲೆಯನ್ನು ಮತ್ತೆ ಬಲಪಡಿಸಿಕೊಂಡಿದೆ. 2024ರ ಲೋಕಸಭಾ ಚುನಾವಣೆಯಲ್ಲಿ 37 ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತರ ಪ್ರದೇಶದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಹೀಗಾಗಿ 2027ರ ಚುನಾವಣೆಯಲ್ಲಿ ಬಿಜೆಪಿ ಮತ್ತು SP ನಡುವಿನ ನೇರ ಹಣಾಹಣಿ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.
2022ರಲ್ಲಿ ಬಿಜೆಪಿಯದ್ದೇ ಮೇಲುಗೈ
ಇದೇ ಉತ್ತರ ಪ್ರದೇಶದಲ್ಲಿ 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ 255 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಾರ್ಟಿ 111 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಿಗೆ ಸೀಮಿತವಾಗಿತ್ತು.
ಆದರೆ 2024ರ ಲೋಕಸಭಾ ಫಲಿತಾಂಶವು ರಾಜಕೀಯ ಸಮೀಕರಣ ಬದಲಾಗಬಹುದು ಎಂಬ ಸಂದೇಶ ನೀಡಿದೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಕಂಡ ಕ್ಷೇತ್ರಗಳತ್ತ ಈಗಿನಿಂದಲೇ ಬಿಜೆಪಿ ಗಮನ ಹರಿಸುತ್ತಿದೆ.
ಅಖಿಲೇಶ್-ರಾಹುಲ್ ಲೆಕ್ಕಾಚಾರಕ್ಕೆ ಯೋಗಿ ಸವಾಲು?
2027ರ ಚುನಾವಣೆಯಲ್ಲಿ ಬಿಜೆಪಿ ಎದುರಿಸುವ ಪ್ರಮುಖ ಸವಾಲು ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ನ ರಾಹುಲ್ ಗಾಂಧಿ ನೇತೃತ್ವದ ರಾಜಕೀಯ ತಂತ್ರವಾಗಿದೆ.
2024ರಲ್ಲಿ SP ಮತ್ತು ಕಾಂಗ್ರೆಸ್ ಮೈತ್ರಿ ಬಿಜೆಪಿಗೆ ಭಾರೀ ಹೊಡೆತ ನೀಡಿತ್ತು. ಆದರೆ 2027ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ‘ಟಾರ್ಗೆಟ್ 115’ ಮೂಲಕ ತನ್ನ ದುರ್ಬಲ ಕ್ಷೇತ್ರಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.
ಅಭಿವೃದ್ಧಿ ಕಾಮಗಾರಿಗಳು, ಕಲ್ಯಾಣ ಯೋಜನೆಗಳು, ಯೋಗಿ ಆದಿತ್ಯನಾಥ್ ಅವರ ನಿರಂತರ ಪ್ರವಾಸ ಮತ್ತು ಸಂಘಟನಾತ್ಮಕ ಬಲವರ್ಧನೆ—ಇವೆಲ್ಲವೂ ಬಿಜೆಪಿಯ ಚುನಾವಣಾ ತಂತ್ರದ ಪ್ರಮುಖ ಭಾಗಗಳಾಗಿವೆ.
ಹೀಗಾಗಿ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 2024ರ ಲೋಕಸಭಾ ಸೋಲಿನ ಲೆಕ್ಕವನ್ನು ಬಿಜೆಪಿ ಹೇಗೆ ಚುಕ್ತಾ ಮಾಡಲಿದೆ? ‘ಟಾರ್ಗೆಟ್ 115’ ತಂತ್ರ ಯೋಗಿ ಸರ್ಕಾರಕ್ಕೆ ಎಷ್ಟು ಲಾಭ ತಂದುಕೊಡಲಿದೆ? ಎಂಬುದು ಈಗ ಉತ್ತರ ಪ್ರದೇಶ ರಾಜಕೀಯದ ಪ್ರಮುಖ ಪ್ರಶ್ನೆಯಾಗಿದೆ.
ದೇಶ
$45,000 Cash Gift: ಟ್ರಂಪ್ ಆಪ್ತರಿಗೆ ಭಾರೀ ಹಣದ ಉಡುಗೊರೆ; ವೈಟ್ಹೌಸ್ನಲ್ಲಿ ಶುರುವಾಯ್ತು ಚರ್ಚೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಆಪ್ತ ವೈಟ್ಹೌಸ್ ಸಿಬ್ಬಂದಿಗೆ ನೀಡಿರುವ ಭಾರಿ ಮೊತ್ತದ ನಗದು ಉಡುಗೊರೆ ಇದೀಗ ಅಮೆರಿಕದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಸಾರ್ವಜನಿಕ ಹಣಕಾಸು ಬಹಿರಂಗಪಡಿಸುವಿಕೆ ದಾಖಲೆಗಳ ಪ್ರಕಾರ, ಟ್ರಂಪ್ ತಮ್ಮ ಮೂವರು ಆಪ್ತ ಸಿಬ್ಬಂದಿಗೆ ತಲಾ $45,000 ನಗದು ಉಡುಗೊರೆ ನೀಡಿದ್ದಾರೆ. ಮತ್ತೊಬ್ಬ ಆಪ್ತ ಸಿಬ್ಬಂದಿಗೆ $20,000 ನೀಡಿರುವುದು ಕೂಡ ದಾಖಲೆಗಳಿಂದ ಬಹಿರಂಗವಾಗಿದೆ.
ಈ ವಿವರಗಳು ಸಿಬ್ಬಂದಿಯ ವಾರ್ಷಿಕ ಹಣಕಾಸು ಬಹಿರಂಗಪಡಿಸುವಿಕೆ ದಾಖಲೆಗಳಲ್ಲಿ ಕಾಣಿಸಿಕೊಂಡಿವೆ. ನ್ಯಾಟಲಿ ಹಾರ್ಪ್ (Natalie Harp), ಮಾರ್ಗೊ ಮಾರ್ಟಿನ್ (Margo Martin) ಮತ್ತು ಚೇಂಬರ್ಲೇನ್ ಹ್ಯಾರಿಸ್ (Chamberlain Harris) ತಲಾ $45,000 ಉಡುಗೊರೆ ಪಡೆದಿದ್ದಾರೆ. ಓವಲ್ ಆಫೀಸ್ ಕಾರ್ಯಾಚರಣೆಗಳ ನಿರ್ದೇಶಕ ವಾಲ್ಟ್ ನೌಟಾ (Walt Nauta) ಅವರಿಗೆ $20,000 ನೀಡಲಾಗಿದೆ ಎಂದು ದಾಖಲೆಗಳು ತಿಳಿಸುತ್ತವೆ.
ತಲಾ $45,000 ಪಡೆದವರು ಯಾರು?
ನ್ಯಾಟಲಿ ಹಾರ್ಪ್, ಮಾರ್ಗೊ ಮಾರ್ಟಿನ್ ಮತ್ತು ಚೇಂಬರ್ಲೇನ್ ಹ್ಯಾರಿಸ್ ಅವರು ತಲಾ $150,000 ವಾರ್ಷಿಕ ಸರ್ಕಾರಿ ವೇತನ ಪಡೆಯುತ್ತಿದ್ದಾರೆ. ಹೀಗಾಗಿ $45,000 ಮೊತ್ತವು ಅವರ ವಾರ್ಷಿಕ ವೇತನದ ಸುಮಾರು ಮೂರನೇ ಒಂದು ಭಾಗದಷ್ಟಾಗಿದೆ. ವಾಲ್ಟ್ ನೌಟಾ ಅವರು ವಾರ್ಷಿಕ $175,000 ವೇತನ ಪಡೆಯುತ್ತಿದ್ದು, ಅವರಿಗೆ $20,000 ನಗದು ಉಡುಗೊರೆ ನೀಡಲಾಗಿದೆ.
ಹಣಕಾಸು ದಾಖಲೆಗಳಲ್ಲಿ ಈ ಮೊತ್ತಗಳನ್ನು “Cash Gift for Holidays” ಎಂದು ನಮೂದಿಸಲಾಗಿದೆ. ಅಂದರೆ ರಜಾದಿನ ಅಥವಾ ಕ್ರಿಸ್ಮಸ್ ಸಂದರ್ಭದಲ್ಲಿ ನೀಡಿದ ವೈಯಕ್ತಿಕ ಉಡುಗೊರೆ ಎಂದು ದಾಖಲಿಸಲಾಗಿದೆ.
‘ಹ್ಯೂಮನ್ ಪ್ರಿಂಟರ್’ ನ್ಯಾಟಲಿ ಹಾರ್ಪ್
ಈ ಉಡುಗೊರೆಗಳಲ್ಲಿ ವಿಶೇಷವಾಗಿ ನ್ಯಾಟಲಿ ಹಾರ್ಪ್ ಹೆಸರು ಗಮನ ಸೆಳೆದಿದೆ. ಟ್ರಂಪ್ ಅವರ ಅತ್ಯಂತ ಆಪ್ತ ಸಹಾಯಕರಲ್ಲಿ ಒಬ್ಬರಾಗಿರುವ ಹಾರ್ಪ್, ಅಧ್ಯಕ್ಷರ ಸುತ್ತಮುತ್ತ ಸದಾ ಕಾಣಿಸಿಕೊಳ್ಳುತ್ತಾರೆ.
ಟ್ರಂಪ್ ಅವರಿಗೆ ಸುದ್ದಿಗಳು ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳನ್ನು ಮುದ್ರಿಸಿ ನೀಡಲು ಪೋರ್ಟಬಲ್ ಪ್ರಿಂಟರ್ ಬಳಸುವುದರಿಂದ ವೈಟ್ಹೌಸ್ನಲ್ಲಿ ಅವರಿಗೆ ‘ಹ್ಯೂಮನ್ ಪ್ರಿಂಟರ್’ ಎಂಬ ಅಡ್ಡಹೆಸರು ಬಂದಿದೆ. ಅವರ ಈ ನಿಕಟ ಸಂಬಂಧದ ಹಿನ್ನೆಲೆಯಲ್ಲಿ $45,000 ಉಡುಗೊರೆ ಮತ್ತಷ್ಟು ಗಮನ ಸೆಳೆದಿದೆ.
ಮಾರ್ಗೊ ಮಾರ್ಟಿನ್, ಚೇಂಬರ್ಲೇನ್ ಹ್ಯಾರಿಸ್ಗೂ ಭರ್ಜರಿ ಗಿಫ್ಟ್
ಟ್ರಂಪ್ ಅವರ ಸಂವಹನ ಸಲಹೆಗಾರ್ತಿ ಮಾರ್ಗೊ ಮಾರ್ಟಿನ್ ಕೂಡ $45,000 ನಗದು ಉಡುಗೊರೆ ಪಡೆದಿದ್ದಾರೆ. ಟ್ರಂಪ್ ಅವರ ಮೊದಲ ಅವಧಿಯಿಂದಲೇ ಅವರೊಂದಿಗೆ ಕೆಲಸ ಮಾಡುತ್ತಿರುವ ಮಾರ್ಟಿನ್, ಅಧ್ಯಕ್ಷರ ದೈನಂದಿನ ಚಟುವಟಿಕೆಗಳು ಮತ್ತು ಪ್ರವಾಸಗಳಿಗೆ ಸಂಬಂಧಿಸಿದ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಚೇಂಬರ್ಲೇನ್ ಹ್ಯಾರಿಸ್ ಕೂಡ $45,000 ಪಡೆದಿದ್ದು, ಅವರು ಓವಲ್ ಆಫೀಸ್ ಕಾರ್ಯಾಚರಣೆಗಳ ಉಪ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಟ್ರಂಪ್ ಅವರು ಈ ವರ್ಷದ ಆರಂಭದಲ್ಲಿ ಅವರನ್ನು ಅಮೆರಿಕದ Commission of Fine Arts ಸದಸ್ಯರನ್ನಾಗಿ ನೇಮಕ ಮಾಡಿದ್ದರು.
ವಾಲ್ಟ್ ನೌಟಾಗೆ $20,000
ಟ್ರಂಪ್ ಅವರ ಮತ್ತೊಬ್ಬ ಆಪ್ತ ಸಿಬ್ಬಂದಿ ವಾಲ್ಟ್ ನೌಟಾ ಅವರಿಗೆ $20,000 ನಗದು ಉಡುಗೊರೆ ನೀಡಲಾಗಿದೆ. ಅವರು ಓವಲ್ ಆಫೀಸ್ ಕಾರ್ಯಾಚರಣೆಗಳ ನಿರ್ದೇಶಕರಾಗಿದ್ದಾರೆ. ನೌಟಾ ಅವರು ಟ್ರಂಪ್ ಅವರ ಮೊದಲ ಅವಧಿಯಲ್ಲೂ ಅವರೊಂದಿಗೆ ಕೆಲಸ ಮಾಡಿದ್ದರು.
ವೈಟ್ಹೌಸ್ ಹೇಳಿದ್ದೇನು?
ವೈಟ್ಹೌಸ್ ಅಧಿಕಾರಿಯೊಬ್ಬರು ಟ್ರಂಪ್ ಅವರಿಗೆ ತಮ್ಮ ಸುತ್ತಮುತ್ತಲಿನವರಿಗೆ, ಕೆಲವೊಮ್ಮೆ ಸರ್ಕಾರಿ ಸಿಬ್ಬಂದಿ ಹಾಗೂ ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೂ ಕ್ರಿಸ್ಮಸ್ ಉಡುಗೊರೆ ನೀಡುವ ದೀರ್ಘಕಾಲದ ಪದ್ಧತಿ ಇದೆ ಎಂದು ತಿಳಿಸಿದ್ದಾರೆ.
ಈ ಹಣವು ಸಿಬ್ಬಂದಿಯ ಅಧಿಕೃತ ಸರ್ಕಾರಿ ಕರ್ತವ್ಯಗಳಿಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಸಂಬಂಧಿತ ಕಾನೂನು ಮತ್ತು ನೈತಿಕ ನಿಯಮಗಳ ಅಡಿಯಲ್ಲಿ ಈ ಉಡುಗೊರೆಗಳು ಅನುಮತಿಸಲ್ಪಟ್ಟಿವೆ ಎಂದು ವೈಟ್ಹೌಸ್ ಪರವಾಗಿ ಸ್ಪಷ್ಟಪಡಿಸಲಾಗಿದೆ.
ಆದರೆ ನೈತಿಕ ಪ್ರಶ್ನೆಗಳು ಎದ್ದಿವೆ
ಇದೇ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಾಜಿ ವೈಟ್ಹೌಸ್ ನೈತಿಕತಾ ಅಧಿಕಾರಿಗಳಲ್ಲಿ ಕೆಲವರು ಇಷ್ಟು ದೊಡ್ಡ ಮೊತ್ತದ ಹಣವನ್ನು ಸರ್ಕಾರಿ ನೌಕರರಿಗೆ ನೀಡಿರುವುದು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ವೈಟ್ಹೌಸ್ ನೈತಿಕತಾ ವಕೀಲ ರಿಚರ್ಡ್ ಪೇಂಟರ್, ಇಂತಹ ಪಾವತಿಗಳು ಸರ್ಕಾರಿ ನೌಕರರ ವೇತನಕ್ಕೆ ಹೊರಗಿನಿಂದ ಹೆಚ್ಚುವರಿ ಹಣ ಸೇರ್ಪಡೆ ಮಾಡುವುದನ್ನು ನಿರ್ಬಂಧಿಸುವ ಫೆಡರಲ್ ಕಾನೂನುಗಳ ವ್ಯಾಪ್ತಿಗೆ ಬರಬಹುದೇ ಎಂಬ ಪ್ರಶ್ನೆ ಎತ್ತಿದ್ದಾರೆ. ಮತ್ತೊಂದೆಡೆ, ಮಾಜಿ Office of Government Ethics ಅಧಿಕಾರಿಯಾದ ಡಾನ್ ಫಾಕ್ಸ್, ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಕಾನೂನು ಉಲ್ಲಂಘನೆಯಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಟ್ರಂಪ್ ನೀಡಿರುವ ಈ ನಗದು ಉಡುಗೊರೆಗಳು ಸದ್ಯಕ್ಕೆ ಕಾನೂನುಬದ್ಧವೇ ಅಥವಾ ನಿಯಮ ಉಲ್ಲಂಘನೆಯೇ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಹೊರಬಂದಿಲ್ಲ. ಆದರೆ ಸರ್ಕಾರಿ ಅಧಿಕಾರಿಗಳಿಗೆ ಇಷ್ಟು ದೊಡ್ಡ ಮೊತ್ತದ ವೈಯಕ್ತಿಕ ಉಡುಗೊರೆ ನೀಡಿರುವುದು ಅಮೆರಿಕದ ಸರ್ಕಾರಿ ನೈತಿಕತೆ ಕುರಿತು ಹೊಸ ಚರ್ಚೆಗೆ ವೇದಿಕೆ ಸೃಷ್ಟಿಸಿದೆ.
-
ಬೆಂಗಳೂರು18 ಗಂಟೆಗಳು agoBasavanagudi ಯಲ್ಲಿ ಮತದಾರರ ಪಟ್ಟಿಗೆ ಬಿಗ್ ಸರ್ಜರಿ: 47,000 ಮಂದಿಗೆ ನೋಟಿಸ್ ಜಾರಿ, ಕಾರಣವೇನು?
-
ಬೆಂಗಳೂರು20 ಗಂಟೆಗಳು agoವಿಧಾನಸೌಧದಲ್ಲಿ CM D K Shiv Kumar ಗೆ ಸುಸ್ತು: ಸಿಎಂ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ
-
ಅಪರಾಧ19 ಗಂಟೆಗಳು agoDarshan ಅರ್ಜಿ ಭಾಗಶಃ ಪುರಸ್ಕರಿಸಿದ ಹೈಕೋರ್ಟ್; ಪ್ರದೋಶ್ ಅಪ್ರೂವರ್ ಆಗುವುದಕ್ಕೆ ಏನಾಯ್ತು?
-
ರಾಜ್ಯ19 ಗಂಟೆಗಳು agoBJP ಅಧ್ಯಕ್ಷ ಸ್ಥಾನಕ್ಕೆ ಕುತ್ತು? ವಿಜಯೇಂದ್ರ ಪಾದಯಾತ್ರೆ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
-
ಬೆಂಗಳೂರು20 ಗಂಟೆಗಳು agoAPMC ಯಲ್ಲಿ 93 ರೈತರ ಬೆಳೆ ವಿಮೆ ರದ್ದು: ಅಧಿಕಾರಿಗೆ ಗೇಟ್ಪಾಸ್ ನೀಡಲು ಡಿಕೆಶಿ ಆದೇಶ!
-
ರಾಜ್ಯ20 ಗಂಟೆಗಳು agoGruha Jyothi ಫಲಾನುಭವಿಗಳಿಗೆ ಮಹತ್ವದ ಮಾಹಿತಿ
-
ದೇಶ20 ಗಂಟೆಗಳು ago‘Jai Shri Ram ’ಗೆ ‘ಸರ್ ತನ್ ಸೇ ಜುದಾ’ ಹೋಲಿಕೆ ಸಾಧ್ಯವಿಲ್ಲ: ಅಲಹಾಬಾದ್ ಹೈಕೋರ್ಟ್
-
ರಾಜ್ಯ7 ಗಂಟೆಗಳು ago‘ಕರ್ನಾಟಕ ಉಡ್ತಾ ಪಂಜಾಬ್ ಆಗ್ತಿದೆ’! ಬಳ್ಳಾರಿಯಲ್ಲಿ BJP ವಿಜಯೇಂದ್ರರ ವಾಗ್ದಾಳಿ
