Connect with us

ರಾಜ್ಯ

Preetham Gowda ಗೆ ಮತ್ತೆ ಸಂಕಷ್ಟ! ಆದಾಯ ಮೀರಿ ಆಸ್ತಿ ಆರೋಪದ ಮರು ತನಿಖೆಗೆ ಕೋರ್ಟ್ ಆದೇಶ

Published

on

ಬೆಂಗಳೂರು: ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ (Preetham Gowda) ಅವರು ಶಾಸಕರಾಗಿದ್ದ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಹಾಸನ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಆದೇಶದಿಂದ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ವಕೀಲ ಬಿ.ಪಿ. ಸಂದೀಪ್ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ. ಶಿವ ಪ್ರಸಾದ್ ಅವರು ಮರು ತನಿಖೆಗೆ ಆದೇಶ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದ್ದಾರೆ.

5 ವರ್ಷದಲ್ಲಿ ಆಸ್ತಿಯಲ್ಲಿ 10 ಪಟ್ಟು ಹೆಚ್ಚಳ ಆರೋಪ

ದೂರುದಾರರ ಪ್ರಕಾರ, ಪ್ರೀತಂ ಗೌಡ ಅವರು 2018 ಹಾಗೂ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರಗಳಲ್ಲಿನ ಆಸ್ತಿ ವಿವರಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಸುಮಾರು ಐದು ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆಸ್ತಿಯಲ್ಲಿ ಸುಮಾರು 10 ಪಟ್ಟು ಹೆಚ್ಚಳವಾಗಿದೆ ಎಂಬ ಆರೋಪ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಆದಾಯದ ಮೂಲ ಮತ್ತು ಆಸ್ತಿ ಹೆಚ್ಚಳದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಕೀಲ ಬಿ.ಪಿ. ಸಂದೀಪ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ಈ ಹಿಂದೆ ‘ಬಿ ವರದಿ’ ಸಲ್ಲಿಸಿದ್ದ ಲೋಕಾಯುಕ್ತ

ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಹಿಂದೆ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಅದರಂತೆ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಪ್ರೀತಂ ಗೌಡ ವಿರುದ್ಧ ‘ಬಿ ವರದಿ’ ಸಲ್ಲಿಸಿದ್ದರು.

ಆದರೆ, ಈ ವರದಿಯನ್ನು ಪ್ರಶ್ನಿಸಿ ದೂರುದಾರ ಬಿ.ಪಿ. ಸಂದೀಪ್ ಅವರು ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳ ಕುರಿತು ಮತ್ತೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಮರು ತನಿಖೆಯ ವರದಿ ಇದೀಗ ಪ್ರಕರಣದ ಮುಂದಿನ ಹಂತದಲ್ಲಿ ಮಹತ್ವ ಪಡೆದುಕೊಳ್ಳಲಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಪ್ರಕರಣದಲ್ಲಿ ಪ್ರೀತಂ ಗೌಡಗೆ ಮತ್ತೊಂದು ಸವಾಲು ಎದುರಾದಂತಾಗಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru Cloudnine ಸೇರಿ ಹಲವು ಆಸ್ಪತ್ರೆಗಳಿಗೆ ಭಾರೀ ದಂಡ! KPME ಉಲ್ಲಂಘನೆಗೆ ಬೆಂಗಳೂರು ಜಿಲ್ಲಾಡಳಿತದ ಕ್ರಮ

Published

on

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ (KPME) ನಿಯಮಗಳನ್ನು ಉಲ್ಲಂಘಿಸಿರುವ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ KPME ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ, ಜಿಲ್ಲಾಧಿಕಾರಿ ಕಾಂತರಾಜು ಅವರು ನಿಯಮ ಉಲ್ಲಂಘಿಸಿದ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳ ವಿಚಾರಣೆ ನಡೆಸಿ ದಂಡ ಹಾಗೂ ಇತರ ಕ್ರಮಗಳಿಗೆ ಆದೇಶಿಸಿದ್ದಾರೆ.

ನಿಯಮ ಉಲ್ಲಂಘನೆ ಗಂಭೀರವಾಗಿದ್ದ ಮೂರು ವೈದ್ಯಕೀಯ ಸಂಸ್ಥೆಗಳ KPME ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಟಿ.ದಾಸರಹಳ್ಳಿಯ ಶ್ರೀ ಅಯ್ಯಪ್ಪ ಟೆಂಪಲ್ ಮೆಡಿಕಲ್ ಸೆಂಟರ್‌ಗೆ ₹50,000, ಜಿಗಣಿಯ ಶ್ರೀ ಪದ್ಮಗಿರಿ ಕ್ಲಿನಿಕ್‌ಗೆ ₹1 ಲಕ್ಷ ಹಾಗೂ ಬಿ.ಜಿ. ರಸ್ತೆಯ ಶ್ರೀ ಹರ್ಷವರ್ಧನ್ ಆಸ್ಪತ್ರೆಗೆ ₹20,000 ದಂಡ ವಿಧಿಸಿ ಪರವಾನಗಿ ರದ್ದುಗೊಳಿಸಲಾಗಿದೆ.

ಹಲವು ಆಸ್ಪತ್ರೆಗಳಿಗೆ ದಂಡ

KPME ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತಷ್ಟು ವೈದ್ಯಕೀಯ ಸಂಸ್ಥೆಗಳಿಗೂ ಜಿಲ್ಲಾಡಳಿತ ದಂಡ ವಿಧಿಸಿದೆ. ಎಚ್‌ಎಎಲ್ ರಸ್ತೆಯ Cloudnine Hospital ಆಸ್ಪತ್ರೆಗೆ ₹50,000, ಹುಲ್ಲಹಳ್ಳಿಯ ಆರ್.ವಿ. ಕ್ಲಿನಿಕ್‌ಗೆ ₹1 ಲಕ್ಷ, ಮುನೇಶ್ವರ ಲೇಔಟ್‌ನ ಇಕ್ಷಾ ಕ್ಲಿನಿಕ್‌ಗೆ ₹10,000 ಹಾಗೂ ರಾಜಾಜಿನಗರದ ಎನ್‌ಯು ಹಾಸ್ಪಿಟಲ್ಸ್‌ಗೆ ₹10,000 ದಂಡ ವಿಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಥವಾ ನ್ಯೂನತೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ಮುಚ್ಚಳಿಕೆ ಪತ್ರವನ್ನೂ ಪಡೆಯಲಾಗಿದೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮದಿನಿ ಸೇರಿದಂತೆ ಹಲವು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು KPME ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ಸ್ಪಷ್ಟ ಸಂದೇಶ ನೀಡಿದೆ.

Continue Reading

ಬೆಂಗಳೂರು

Varamahalakshmi ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ! K R Market ನಲ್ಲಿ ಭಾರೀ ಜನಜಂಗುಳಿ

Published

on

ಬೆಂಗಳೂರು: ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿ (Varamahalakshmi) ಆಚರಣೆಗೆ ಕೇವಲ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ (Bengaluru) ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್ ಸೇರಿದಂತೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ದಿಢೀರ್ ಹೆಚ್ಚಾಗಿರುವುದರಿಂದ ಹೂವು ಮತ್ತು ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಪೂಜೆ ಹಾಗೂ ಅಲಂಕಾರಕ್ಕೆ ಅಗತ್ಯವಾದ ಕೆಲವು ಹೂವುಗಳ ದರ ಶೇ.100ರಿಂದ 200ರಷ್ಟು ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಹೂವುಗಳ ಬೆಲೆ ಎಷ್ಟು?

ಕೆ.ಆರ್. ಮಾರುಕಟ್ಟೆಯಲ್ಲಿ ಕನಕಾಂಬರ ಹೂವಿನ ಬೆಲೆ ಕೆಜಿಗೆ ಸುಮಾರು ₹2,000ರಿಂದ ₹5,000-₹6,000 ವರೆಗೆ ಏರಿಕೆಯಾಗಿದೆ. ಮಲ್ಲಿಗೆ ಕೆಜಿಗೆ ₹1,000ರಿಂದ ₹2,000, ಸೇವಂತಿಗೆ ₹150ರಿಂದ ₹450 ಹಾಗೂ ಗುಲಾಬಿ ಸುಮಾರು ₹400 ದರದಲ್ಲಿ ಮಾರಾಟವಾಗುತ್ತಿದೆ.

ಇನ್ನು ವರಮಹಾಲಕ್ಷ್ಮಿ ಪೂಜೆಗೆ ಹೆಚ್ಚಿನ ಬೇಡಿಕೆಯಿರುವ ತಾವರೆ ಹೂವಿನ ಒಂದು ಜೋಡಿ ₹100 ವರೆಗೆ ಮಾರಾಟವಾಗುತ್ತಿದೆ.

ಹಣ್ಣುಗಳಿಗೂ ದುಬಾರಿ ಶಾಕ್

ಪೂಜೆ ಮತ್ತು ನೈವೇದ್ಯಕ್ಕೆ ಬಳಸುವ ಹಣ್ಣುಗಳ ದರದಲ್ಲೂ ಗಣನೀಯ ಏರಿಕೆಯಾಗಿದೆ. ಸೇಬು ಕೆಜಿಗೆ ₹110ರಿಂದ ₹270, ದಾಳಿಂಬೆ ₹120ರಿಂದ ₹260, ಕಿತ್ತಳೆ ₹80ರಿಂದ ₹180, ಮೂಸಂಬಿ ₹100ರಿಂದ ₹150 ಹಾಗೂ ಎಲಕ್ಕಿ ಬಾಳೆಹಣ್ಣು ₹50ರಿಂದ ₹100 ವರೆಗೆ ಮಾರಾಟವಾಗುತ್ತಿದೆ.

ಬೆಲೆ ಹೆಚ್ಚಿದರೂ ಖರೀದಿ ಭರ್ಜರಿ

ಹೂವು, ಹಣ್ಣು ಮತ್ತು ಇತರೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದರೂ ವರಮಹಾಲಕ್ಷ್ಮಿ ಹಬ್ಬದ ಉತ್ಸಾಹಕ್ಕೆ ಯಾವುದೇ ಕೊರತೆ ಕಂಡುಬಂದಿಲ್ಲ. ದುಬಾರಿ ದರದ ನಡುವೆಯೂ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.

ವಿಶೇಷವಾಗಿ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ಭಾರಿ ಜನಸಂದಣಿ ಕಂಡುಬಂದಿದ್ದು, ವಾಹನ ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೂವು ಮತ್ತು ಹಣ್ಣುಗಳ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Continue Reading

ಬೆಂಗಳೂರು

GBA ಮೇಲೆ ನಂಬಿಕೆ ಇಲ್ಲವೇ? ರಸ್ತೆ ಕಾಮಗಾರಿ ವಿಳಂಬ ಭೀತಿಯಿಂದ WFH ತಿರಸ್ಕರಿಸಿದ ಕಂಪನಿಗಳು

Published

on

ಬೆಂಗಳೂರು: ನಗರದ ಔಟರ್ ರಿಂಗ್‌ರೋಡ್ (Outer Ring Road) ವ್ಯಾಪ್ತಿಯಲ್ಲಿ ನಡೆಯಲಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು 50:50 ಅನುಪಾತದಲ್ಲಿ ವರ್ಕ್ ಫ್ರಮ್ ಹೋಂ (Work From Home) ಜಾರಿಗೆ ತರಬೇಕೆಂಬ ಜಿಬಿಎ (GBA) ಮನವಿಗೆ ಐಟಿ ಸಂಸ್ಥೆಗಳು ಒಪ್ಪಿಗೆ ನೀಡಿಲ್ಲ. ಸದ್ಯ ವರ್ಕ್ ಫ್ರಮ್ ಹೋಂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಕಂಪನಿಗಳ ಅಸೋಸಿಯೇಷನ್ ಬಂದಿದೆ.

ಔಟರ್ ರಿಂಗ್‌ರೋಡ್‌ನ ಸುಮಾರು 20 ಕಿಲೋಮೀಟರ್ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಇದೇ ಅಕ್ಟೋಬರ್‌ನಿಂದ ಆರಂಭಿಸಲು ಜಿಬಿಎ ಸಿದ್ಧತೆ ನಡೆಸಿದೆ. ಕಾಮಗಾರಿ ವೇಗವಾಗಿ ಪೂರ್ಣಗೊಳಿಸುವ ಹಾಗೂ ಈ ಭಾಗದ ಟ್ರಾಫಿಕ್ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಶೇಕಡಾ 50ರಷ್ಟು ವರ್ಕ್ ಫ್ರಮ್ ಹೋಂ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು.

ಆದರೆ ಕಂಪನಿಗಳ ಮುಖ್ಯಸ್ಥರು ಮತ್ತು ಅಸೋಸಿಯೇಷನ್ ಸಭೆಯಲ್ಲಿ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ವರ್ಕ್ ಫ್ರಮ್ ಹೋಂ ಜಾರಿಯಿಂದ ಸಂಸ್ಥೆಗಳ ಕಾರ್ಯಕ್ಷಮತೆ ಮತ್ತು ಕೆಲಸದ ವೇಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

GBA ಮೇಲೆ ಕಂಪನಿಗಳಿಗೆ ನಂಬಿಕೆ ಇಲ್ಲವೇ?

ಜಿಬಿಎ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಕಂಪನಿಗಳಿಗೆ ಅನುಮಾನವಿದೆ ಎನ್ನಲಾಗಿದೆ. ಹಿಂದೆ ಹಲವು ಯೋಜನೆಗಳು ವಿಳಂಬವಾಗಿರುವ ಹಿನ್ನೆಲೆಯಲ್ಲಿ, ORR ವೈಟ್ ಟ್ಯಾಪಿಂಗ್ ಕಾಮಗಾರಿಯೂ ನಿಗದಿತ ಅವಧಿಯಲ್ಲಿ ಮುಗಿಯದಿದ್ದರೆ ದೀರ್ಘಕಾಲ ವರ್ಕ್ ಫ್ರಮ್ ಹೋಂ ಮುಂದುವರಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಈ ಮಾರ್ಗದಲ್ಲಿ ಈಗಾಗಲೇ ಮೆಟ್ರೋ ಕಾಮಗಾರಿಯೂ ನಡೆಯುತ್ತಿರುವುದರಿಂದ ವಾಹನ ಸಂಚಾರ ಹಾಗೂ ಉದ್ಯೋಗಿಗಳ ಓಡಾಟಕ್ಕೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ. ಹೀಗಾಗಿ ನವೆಂಬರ್ ನಂತರ ಕಾಮಗಾರಿ ಆರಂಭಿಸುವುದು, ಮೊದಲು ಸರ್ವೀಸ್ ರಸ್ತೆಗಳನ್ನು ಸುಗಮಗೊಳಿಸುವುದು ಮತ್ತು ಹಂತ ಹಂತವಾಗಿ ರಸ್ತೆ ಕಾಮಗಾರಿ ಕೈಗೊಳ್ಳುವುದು ಸೂಕ್ತ ಎಂಬ ಸಲಹೆಯನ್ನು ಅಸೋಸಿಯೇಷನ್ ನೀಡಿದೆ.

ಜಿಬಿಎ ಜೊತೆ ಮುಂದಿನ ಸಭೆಯಲ್ಲಿ ಈ ವಿಚಾರಗಳನ್ನು ಚರ್ಚಿಸಿ ಪರ್ಯಾಯ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಕಂಪನಿಗಳ ಅಸೋಸಿಯೇಷನ್ ಮುಂದಾಗಿದೆ.

Continue Reading

Trending