ಸಿನಿಮಾ
Dhurandhar ಟೀಕೆಗೆ ಸಿಡಿದೆದ್ದ R Madhavan; ‘ಅತಿಯಾದ ಭಾರತೀಯತೆ ಎಂದರೇನು?’
ಮುಂಬೈ: ಆದಿತ್ಯ ಧರ್ ನಿರ್ದೇಶನದ ಬಹುಚರ್ಚಿತ ‘ಧುರಂಧರ್’ (Dhurandhar) ಹಾಗೂ ‘ಧುರಂಧರ್: ದಿ ರಿವೇಂಜ್’ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದರೂ, ಚಿತ್ರಗಳ ಕಥೆ ಮತ್ತು ನಿರೂಪಣೆ ಕುರಿತು ಪರ-ವಿರೋಧದ ಚರ್ಚೆ ಮುಂದುವರಿದಿದೆ. ಕೆಲವರು ಸಿನಿಮಾವನ್ನು ಸರ್ಕಾರದ ಲೋಪಗಳನ್ನು ಮುಚ್ಚಿಹಾಕುವ ಪ್ರೋಪಗಂಡ ಸಿನಿಮಾ ಎಂದು ಟೀಕಿಸಿದ್ದರೆ, ಇದೀಗ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ R Madhavan ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
‘ಭಾರತದ ಬಗ್ಗೆ ಹೆಮ್ಮೆಪಡುವುದರಲ್ಲಿ ತಪ್ಪೇನು?’
ಸಂದರ್ಶನವೊಂದರಲ್ಲಿ ಮಾತನಾಡಿದ ಆರ್. ಮಾಧವನ್, ಭಾರತೀಯನಾಗಿ ತನ್ನ ದೇಶದ ಬಗ್ಗೆ ಹೆಮ್ಮೆಪಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ಭಾರತೀಯತೆಯನ್ನು ಎತ್ತಿಹಿಡಿಯುವುದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವ ಅಗತ್ಯವಿಲ್ಲ ಎಂದಿರುವ ಅವರು, ‘ಅತಿಯಾದ ಭಾರತೀಯತೆ’ ಎಂದರೆ ಏನು ಎಂಬುದೇ ಅರ್ಥವಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
‘ಧುರಂಧರ್’ ಕಥೆ ಪಾಕಿಸ್ತಾನದ ಹಿನ್ನೆಲೆಯಲ್ಲಿದೆ. ಅಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಅಂಶಗಳಿವೆ. ಹೀಗಿರುವಾಗ ಸಿನಿಮಾವನ್ನು ಕೇವಲ ಪ್ರೋಪಗಂಡ ಎಂದು ಕರೆಯುವುದು ಹೇಗೆ ಸಾಧ್ಯ ಎಂದು ಮಾಧವನ್ ಪ್ರಶ್ನಿಸಿದ್ದಾರೆ.
‘ರಾಕೆಟ್ರಿ’ ಉದಾಹರಣೆ ನೀಡಿದ ಮಾಧವನ್
ತಮ್ಮ ನಿರ್ದೇಶನದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ ಮಾಧವನ್, ನಂಬಿ ನಾರಾಯಣನ್ ಅವರ ನೈಜ ಜೀವನದ ಘಟನೆಗಳನ್ನು ಆಧರಿಸಿಯೇ ಚಿತ್ರ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಒಬ್ಬ ನಟ ಹಾಗೂ ನಿರ್ದೇಶಕನಾಗಿ ಪಾತ್ರ ಮತ್ತು ಕಥೆಗೆ ಪ್ರಾಮಾಣಿಕವಾಗಿರುವುದು ತಮ್ಮ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ. ನಂಬಿ ನಾರಾಯಣನ್ ಧಾರ್ಮಿಕ ನಂಬಿಕೆ ಹೊಂದಿದ್ದರೆ, ವಿಜ್ಞಾನಿ ಜಿ.ಡಿ. ನಾಯ್ಡು ನಾಸ್ತಿಕರಾಗಿದ್ದರು. ಪಾತ್ರಗಳ ನೈಜ ಸ್ವಭಾವವನ್ನು ಬದಲಿಸುವುದು ಕಥೆಗೆ ದ್ರೋಹ ಮಾಡಿದಂತಾಗುತ್ತದೆ ಎಂದು ಮಾಧವನ್ ಅಭಿಪ್ರಾಯಪಟ್ಟಿದ್ದಾರೆ.
‘ಭಾರತದ ಹಿರಿಮೆ ಎತ್ತಿಹಿಡಿಯುವುದು ಅಪರಾಧವಲ್ಲ’
ಬಾಲ್ಯದಿಂದಲೂ ದೇಶಕ್ಕೆ ಮೊದಲ ಆದ್ಯತೆ ನೀಡುವುದನ್ನು ಕಲಿಸಲಾಗಿದೆ ಎಂದು ಹೇಳಿರುವ ಮಾಧವನ್, ಸಾಮಾಜಿಕ ಜಾಲತಾಣ ಅಥವಾ ಸಂದರ್ಶನಗಳಲ್ಲಿ ಯಾವುದೇ ರಾಜಕೀಯ ನಾಯಕ ಅಥವಾ ಪಕ್ಷದ ವಿರುದ್ಧ ಕೆಟ್ಟದಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹಣ ನೀಡಿ ಮಾಡಿಸುವ ಟ್ರೋಲ್ಗಳು ಮತ್ತು ನಕಲಿ ಖಾತೆಗಳ ಮೂಲಕ ನಡೆಯುವ ವಿಮರ್ಶೆಗಳನ್ನು ಗುರುತಿಸುವ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಸದ್ಯ ಆರ್. ಮಾಧವನ್ ಅಭಿನಯದ ‘ಜಿಡಿಎನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ವಿಜ್ಞಾನಿ ಜಿ.ಡಿ. ನಾಯ್ಡು ಅವರ ಜೀವನವನ್ನು ಆಧರಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಿನಿಮಾ
Red Carpet ನಲ್ಲಿ ನಟಿಗೆ ಶಾಕ್! ಸೆಲ್ಫಿ ನೆಪದಲ್ಲಿ ಮಹಿಳಾ ಅಭಿಮಾನಿಯಿಂದ ಬಲವಂತದ ಲಿಪ್ ಕಿಸ್, ವಿಡಿಯೋ ವೈರಲ್
ಮುಂಬೈ, ಆ.09: ಸಿನಿಮಾ ಕಾರ್ಯಕ್ರಮವೊಂದರ Red Carpet ನಲ್ಲಿ ಬಾಲಿವುಡ್ ನಟಿ ನಿಖಿತಾ ರಾವಲ್ ಅವರಿಗೆ ಅಹಿತಕರ ಅನುಭವ ಎದುರಾಗಿದೆ. ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದ ವೇಳೆ ಸೆಲ್ಫಿ ಕೇಳಿಕೊಂಡು ಬಂದ ಮಹಿಳಾ ಅಭಿಮಾನಿಯೊಬ್ಬರು ಏಕಾಏಕಿ ನಟಿಯನ್ನು ಬಲವಂತವಾಗಿ ಚುಂಬಿಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸೆಲ್ಫಿ ಕೇಳಿ ಬಂದ ಅಭಿಮಾನಿ ಮಾಡಿದ್ದೇನು?
ಆಗಸ್ಟ್ 8ರಂದು ಮುಂಬೈನಲ್ಲಿ ನಡೆದ ಸಿನಿಮಾ ಕಾರ್ಯಕ್ರಮದಲ್ಲಿ ನಿಖಿತಾ ರಾವಲ್ ರೆಡ್ ಕಾರ್ಪೆಟ್ನಲ್ಲಿ ಪಾಪರಾಜಿಗಳಿಗಾಗಿ ಪೋಸ್ ನೀಡುತ್ತಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ನಟಿಯ ಬಳಿ ಬಂದಿದ್ದಾರೆ.
ನಿಖಿತಾ ಕೂಡ ಅಭಿಮಾನಿಯೊಂದಿಗೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಬಳಿಕ ಆಕೆ ನಟಿಯನ್ನು ಅಪ್ಪಿಕೊಂಡಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಅಹಿತಕರ ತಿರುವು ಪಡೆದುಕೊಂಡಿದೆ ಎನ್ನಲಾಗಿದೆ.
ಮಹಿಳಾ ಅಭಿಮಾನಿ ಏಕಾಏಕಿ ನಿಖಿತಾ ಅವರನ್ನು ಹಿಡಿದು ಬಲವಂತವಾಗಿ ಚುಂಬಿಸಲು ಮುಂದಾಗಿದ್ದಾರೆ. ನಟಿ ದೂರ ಸರಿಯಲು ಹಾಗೂ ಆಕೆಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಕೆಲ ಕ್ಷಣಗಳ ಕಾಲ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ ಎನ್ನಲಾಗಿದೆ.
ನಟಿ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ…
ವೈರಲ್ ವಿಡಿಯೋದಲ್ಲಿ ನಿಖಿತಾ ರಾವಲ್ ಅಸಹಜ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ ಎನ್ನಲಾಗಿದೆ. ಬಳಿಕ ಅಭಿಮಾನಿ ತಾನಾಗಿಯೇ ನಟಿಯನ್ನು ಬಿಟ್ಟಿದ್ದಾರೆ.
ಘಟನೆಯ ನಂತರ ನಿಖಿತಾ ಕೆಲ ಕ್ಷಣ ಆಘಾತಕ್ಕೊಳಗಾದಂತೆ ಕಾಣಿಸಿಕೊಂಡಿದ್ದು, ಕಾರ್ಯಕ್ರಮದ ಸಿಬ್ಬಂದಿ ಮಧ್ಯಪ್ರವೇಶಿಸಿ ಮಹಿಳೆಯನ್ನು ಅಲ್ಲಿಂದ ದೂರ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ವಿಡಿಯೋ ವೈರಲ್; ಭದ್ರತೆ ಬಗ್ಗೆ ಪ್ರಶ್ನೆ
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಸಿನಿಮಾ ಕಾರ್ಯಕ್ರಮಗಳಲ್ಲಿನ ಸೆಲೆಬ್ರಿಟಿಗಳ ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆಗಳು ಎದ್ದಿವೆ.
ಅಭಿಮಾನಿಗಳು ಸೆಲೆಬ್ರಿಟಿಗಳೊಂದಿಗೆ ಫೋಟೋ ಅಥವಾ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾದರೂ, ಅವರ ಅನುಮತಿಯಿಲ್ಲದೆ ದೈಹಿಕವಾಗಿ ಹತ್ತಿರವಾಗುವುದು ಅಥವಾ ಚುಂಬಿಸುವುದು ಸ್ವೀಕಾರಾರ್ಹವಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಘಟನೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸದಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೆಡ್ ಕಾರ್ಪೆಟ್ನಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟ-ನಟಿಯರ ಸುತ್ತಲೂ ಸೂಕ್ತ ಭದ್ರತಾ ವ್ಯವಸ್ಥೆ ಇರಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಸೆಲೆಬ್ರಿಟಿಗಳ ವೈಯಕ್ತಿಕ ಗಡಿಗೆ ಗೌರವ ಅಗತ್ಯ
ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನವನ್ನು ಸೆಲೆಬ್ರಿಟಿಗಳು ಸಾಮಾನ್ಯವಾಗಿ ಸ್ವೀಕರಿಸುತ್ತಾರೆ. ಆದರೆ ಫೋಟೋ, ಸೆಲ್ಫಿ ಅಥವಾ ಭೇಟಿಯ ಸಂದರ್ಭದಲ್ಲೂ ವೈಯಕ್ತಿಕ ಗಡಿ ಮತ್ತು ಒಪ್ಪಿಗೆಯನ್ನು ಗೌರವಿಸುವುದು ಅಗತ್ಯ ಎಂಬ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ನಿಖಿತಾ ರಾವಲ್ ಅವರೊಂದಿಗೆ ನಡೆದಿರುವ ಈ ಘಟನೆ, ಸೆಲೆಬ್ರಿಟಿಗಳ ಭದ್ರತೆ ಮಾತ್ರವಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವೈಯಕ್ತಿಕ ಒಪ್ಪಿಗೆಯ ಮಹತ್ವದ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ.
ಸಿನಿಮಾ
Yash ಗಾಗಿ ಚೆನ್ನೈನಿಂದ ಬೆಂಗಳೂರಿಗೆ ಬಂದ ನಯನತಾರಾ! ‘ರಾಕಿಭಾಯ್’ಗೆ ಲೇಡಿ ಸೂಪರ್ಸ್ಟಾರ್ ಫಿದಾ, ಭಾವುಕರಾದ ಗೀತು ಮೋಹನ್ದಾಸ್
ಬೆಂಗಳೂರು: ರಾಕಿಂಗ್ ಸ್ಟಾರ್ Yash ಅಭಿನಯದ ಬಹುನಿರೀಕ್ಷಿತ ‘Toxic’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಭರ್ಜರಿ ಸದ್ದು ಮಾಡಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಡಿ ಸೂಪರ್ಸ್ಟಾರ್ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿದಂತೆ ಹಲವು ತಾರೆಯರು ಭಾಗವಹಿಸಿ ಯಶ್ ಹಾಗೂ ಚಿತ್ರತಂಡದ ಪರಿಶ್ರಮವನ್ನು ಕೊಂಡಾಡಿದರು.
ಟಾಕ್ಸಿಕ್ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಹಾಜರಾಗದ ನಯನತಾರಾ, ಈ ಬಾರಿ ವಿಶೇಷವಾಗಿ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿರುವುದು ಕಾರ್ಯಕ್ರಮದ ಪ್ರಮುಖ ಹೈಲೈಟ್ ಆಗಿತ್ತು. ಯಶ್ಗಾಗಿ ಹಾಗೂ ಟಾಕ್ಸಿಕ್ ಸಿನಿಮಾಗಾಗಿ ಬಂದಿರುವುದಾಗಿ ಹೇಳಿದ ನಯನತಾರಾ, ರಾಕಿಂಗ್ ಸ್ಟಾರ್ರನ್ನು ವೇದಿಕೆಯಲ್ಲೇ ಮನಸಾರೆ ಹೊಗಳಿದರು.
‘ರಾಕಿಭಾಯ್’ ಎಂದು ಯಶ್ರನ್ನು ಕೊಂಡಾಡಿದ ನಯನತಾರಾ
ಮೊದಲ ಬಾರಿಗೆ ಯಶ್ ಅವರನ್ನು ಭೇಟಿಯಾದಾಗಲೇ ಅವರಲ್ಲಿರುವ ವಿಭಿನ್ನ ವ್ಯಕ್ತಿತ್ವ ಗಮನಕ್ಕೆ ಬಂದಿತ್ತು ಎಂದು ನಯನತಾರಾ ಹೇಳಿದ್ದಾರೆ.
ಯಶ್ರಂತಹ ಕಠಿಣ ಪರಿಶ್ರಮದ ನಟರನ್ನು ತಮ್ಮ ವೃತ್ತಿಜೀವನದಲ್ಲಿ ನೋಡಿಲ್ಲ ಎಂದು ಹೇಳಿದ ಅವರು, ಟಾಕ್ಸಿಕ್ ಸಿನಿಮಾಗಾಗಿ ಯಶ್ ಸುಮಾರು ನಾಲ್ಕೂವರೆ ವರ್ಷ ತ್ಯಾಗ ಮಾಡಿದ್ದಾರೆ ಎಂಬುದು ತಮ್ಮನ್ನು ಅಚ್ಚರಿಗೊಳಿಸಿದೆ ಎಂದರು.
ಕುಟುಂಬ ಹಾಗೂ ಮಕ್ಕಳಿಗೆ ಸಮಯ ನೀಡುವುದರ ಜೊತೆಗೆ ಸಿನಿಮಾಗಾಗಿ ಯಶ್ ನೀಡಿರುವ ಸಮರ್ಪಣೆಯನ್ನು ನಯನತಾರಾ ಶ್ಲಾಘಿಸಿದರು.
“ಯಶ್ ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್. ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ” ಎಂದು ಅವರು ಹೇಳಿದರು.
‘ಯಶ್ರ ದೊಡ್ಡ ಶಕ್ತಿ ರಾಧಿಕಾ ಪಂಡಿತ್’
ಯಶ್ ಅವರ ಯಶಸ್ಸಿನ ಹಿಂದೆ ಪತ್ನಿ ರಾಧಿಕಾ ಪಂಡಿತ್ ಅವರ ಪಾತ್ರವನ್ನೂ ನಯನತಾರಾ ವಿಶೇಷವಾಗಿ ಉಲ್ಲೇಖಿಸಿದರು.
ಹೆಣ್ಣುಮಕ್ಕಳು ಮತ್ತು ಮಹಿಳೆಯರು ಮಾಡುವ ತ್ಯಾಗದ ಬಗ್ಗೆ ಸಾಕಷ್ಟು ಬಾರಿ ಯಾರೂ ಮಾತನಾಡುವುದಿಲ್ಲ ಎಂದು ಹೇಳಿದ ನಯನತಾರಾ, ರಾಧಿಕಾ ಪಂಡಿತ್ ಅವರೇ ಯಶ್ ಅವರ ದೊಡ್ಡ ಶಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಯಶ್-ಗೀತು ಮ್ಯಾನಿಫೆಸ್ಟ್ ಮಾಡಿದ ಸಿನಿಮಾ’ ಎಂದ ಕಿಯಾರಾ
ಟಾಕ್ಸಿಕ್ ಸಿನಿಮಾದ ಮತ್ತೊಂದು ಪ್ರಮುಖ ತಾರೆ ಕಿಯಾರಾ ಅಡ್ವಾಣಿ, ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಕನಸು ಮತ್ತು ದೃಷ್ಟಿಕೋನದಿಂದ ರೂಪುಗೊಂಡ ಚಿತ್ರವೇ ಟಾಕ್ಸಿಕ್ ಎಂದು ಹೇಳಿದ್ದಾರೆ.
ಟಾಕ್ಸಿಕ್ ಒಂದು ಮ್ಯಾಜಿಕ್ ಇದ್ದಂತೆ. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ ಕಿಯಾರಾ, ಚಿತ್ರದ ತಾಂತ್ರಿಕ ತಂಡದ ಪರಿಶ್ರಮವನ್ನೂ ಶ್ಲಾಘಿಸಿದರು.
ಕನ್ನಡದಲ್ಲಿ ಮಾತನಾಡಿ ಭಾವುಕರಾದ ಗೀತು ಮೋಹನ್ದಾಸ್
ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ದಾಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು. ತಾಯಿಗೆ ಧನ್ಯವಾದ ಹೇಳುವ ಮೂಲಕ ಮಾತು ಆರಂಭಿಸಿದ ಗೀತು, ಯಶ್ ಕೇವಲ ನಿರ್ಮಾಪಕ, ನಟ ಅಥವಾ ಬರಹಗಾರ ಮಾತ್ರವಲ್ಲ, ಒಂದು ಭಾವನೆ ಎಂದು ಬಣ್ಣಿಸಿದರು.
ತಮ್ಮ ಮೇಲೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾಗ ಯಶ್ ಅವಕಾಶ ನೀಡಿ, ತಮ್ಮ ಕನಸನ್ನು ಬೆಂಬಲಿಸಿದರು ಎಂದು ಗೀತು ಹೇಳಿದರು.
“ಯಶ್ ನನ್ನ ಕನಸನ್ನು ತನ್ನ ಹೆಗಲ ಮೇಲೆ ಹೊತ್ತಿದ್ದಾರೆ. ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ” ಎಂದು ಹೇಳುವಾಗ ಗೀತು ಭಾವುಕರಾದರು.
ರಾಧಿಕಾ ಪಂಡಿತ್ಗೆ ‘ಐ ಲವ್ ಯೂ’ ಎಂದ ರುಕ್ಮಿಣಿ
ನಟಿ ರುಕ್ಮಿಣಿ ವಸಂತ್ ಕೂಡ ಕಾರ್ಯಕ್ರಮದಲ್ಲಿ ತಮ್ಮ ಅಭಿಮಾನವನ್ನು ಬಹಿರಂಗಪಡಿಸಿದರು. ಟಾಕ್ಸಿಕ್ ಪ್ರಮೋಷನ್ನ ಮೊದಲ ಹೆಜ್ಜೆ ಇಟ್ಟಿರುವುದಕ್ಕೆ ಸಂತೋಷ ಹಾಗೂ ಹೆಮ್ಮೆ ಇದೆ ಎಂದು ಹೇಳಿದ ಅವರು, ಯಶ್ ಬಗ್ಗೆ ಹೇಳಲು ಸಾಕಷ್ಟು ವಿಷಯಗಳಿವೆ ಎಂದರು.
ಆದರೆ, “ರಾಧಿಕಾ, ನಿಮ್ಮ ದೊಡ್ಡ ಅಭಿಮಾನಿ ನಾನು. ಐ ಲವ್ ಯೂ” ಎಂದು ವೇದಿಕೆಯಲ್ಲೇ ಹೇಳಿ ಗಮನ ಸೆಳೆದರು.
ಹುಮಾ ಖುರೇಷಿ, ತಾರಾ ಸುತಾರಿಯಾ ಮಾತಿನಲ್ಲೂ ಯಶ್ ಗುಣಗಾನ
ಬಾಲಿವುಡ್ ನಟಿ ಹುಮಾ ಖುರೇಷಿ ಬೆಂಗಳೂರಿಗೆ ಕನ್ನಡದಲ್ಲೇ ನಮಸ್ಕಾರ ಹೇಳಿ ಮಾತು ಆರಂಭಿಸಿದರು. ಟಾಕ್ಸಿಕ್ ಸಿನಿಮಾದಲ್ಲಿನ ತಮ್ಮ ಪಾತ್ರ ಎಲಿಜಬೆತ್ಗೆ ಬೆಂಗಳೂರು ತುಂಬಾ ಇಷ್ಟ ಎಂದು ಹೇಳಿದ ಅವರು, ಯಶ್ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.
ತಾರಾ ಸುತಾರಿಯಾ ಟಾಕ್ಸಿಕ್ ಒಂದು ಸಾಮೂಹಿಕ ದೃಷ್ಟಿಕೋನದಿಂದ ರೂಪುಗೊಂಡ ಸಿನಿಮಾ ಎಂದು ಹೇಳಿ ಇಡೀ ಚಿತ್ರತಂಡದ ಪರಿಶ್ರಮವನ್ನು ಮೆಚ್ಚಿಕೊಂಡರು.
ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಕೂಡ ಟ್ರೈಲರ್ ನೋಡಿ “ಬಾಸ್, ಏನ್ ಟ್ರೈಲರ್ ಇದು?” ಎಂದು ಯಶ್ರನ್ನು ಕೊಂಡಾಡಿದರು. ಮಲಯಾಳಂ ನಟ ಸುದೇವ್ ನಾಯರ್ ಟಾಕ್ಸಿಕ್ ತಮ್ಮ ಪಾಲಿಗೆ ಎರಡು ವರ್ಷಗಳ ಕಲಿಕೆಯ ಅನುಭವವಾಗಿತ್ತು ಎಂದು ಹೇಳಿದರು.
ಯಶ್ರ ಪರಿಶ್ರಮ ಕೊಂಡಾಡಿದ ನಿರ್ಮಾಪಕ ಕೆವಿಎನ್
ನಿರ್ಮಾಪಕ ಕೆ. ವೆಂಕಟ್ ನಾರಾಯಣ್ (KVN) ಕೂಡ ಯಶ್ ಅವರ ಪರಿಶ್ರಮ ಹಾಗೂ ಸಿನಿಮಾದ ಮೇಲಿನ ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸಿನಿಮಾಸಕ್ತರ ಕನಸುಗಳನ್ನು ನನಸು ಮಾಡುವಷ್ಟು ದೊಡ್ಡದಾಗಿದೆ ತಮ್ಮ ಜೇಬು ಎಂದು ಹಾಸ್ಯಮಯವಾಗಿ ಹೇಳಿದ ಕೆವಿಎನ್, ಟಾಕ್ಸಿಕ್ಗಾಗಿ ಯಶ್ ನೀಡಿರುವ ಶ್ರಮ ಮತ್ತು ಕಮಿಟ್ಮೆಂಟ್ ಬಗ್ಗೆ ಮಾತನಾಡಿದರು.
ಟಾಕ್ಸಿಕ್ ನಂತರ KVN Productions ಅನ್ನು ಮೂರು ಪ್ರಮುಖ ತಂಡಗಳಾಗಿ ವಿಂಗಡಿಸುವ ಯೋಜನೆ ಇರುವ ಬಗ್ಗೆಯೂ ಅವರು ಸುಳಿವು ನೀಡಿದರು.
ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಯಶ್ರ ಮೇಲಿನ ಸಹನಟರು ಮತ್ತು ಚಿತ್ರತಂಡದ ಮೆಚ್ಚುಗೆ ಗಮನ ಸೆಳೆದಿದ್ದು, ‘Toxic’ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಆಗಸ್ಟ್ 26ರಂದು ‘Toxic’ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದ್ದು, ಯಶ್ ಅಭಿಮಾನಿಗಳಲ್ಲಿ ಈಗಾಗಲೇ ಕೌಂಟ್ಡೌನ್ ಶುರುವಾಗಿದೆ.
ಸಿನಿಮಾ
‘Toxic’ನಲ್ಲಿ ಯುವಪೀಳಿಗೆಯ ಗೊಂದಲಗಳ ಪ್ರತಿಬಿಂಬ: ಟ್ರೇಲರ್ ಬಿಡುಗಡೆ ವೇಳೆ ಯಶ್ ಮಾತು
ಬೆಂಗಳೂರು: ರಾಕಿಂಗ್ ಸ್ಟಾರ್ Yash ಅಭಿನಯದ ಬಹುನಿರೀಕ್ಷಿತ ‘Toxic: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic Trailer) ಚಿತ್ರದ ಟ್ರೇಲರ್ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನದ ಈ ಡಾರ್ಕ್ ಹಾಗೂ ಸ್ಟೈಲಿಶ್ ಸಿನಿಮಾದ ಮೊದಲ ಝಲಕ್ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ Toxic Trailer ಅನಾವರಣಗೊಂಡಿದ್ದು, ಯಶ್ ರಾಯ್, ರೂಮಿ ಹಾಗೂ ಟಿಕೆಟ್ ಸೇರಿದಂತೆ ಪ್ರಮುಖ ಪಾತ್ರಗಳ ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ದಾರಿ ಯಾವುದಾದರೂ ಇರಬಹುದು, ಗುರಿ ಮುಟ್ಟಬೇಕು’
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಜೀವನದಲ್ಲಿ ಗುರಿ ಸಾಧಿಸುವುದೇ ಮುಖ್ಯವಾಗಿದ್ದು, ಆ ಹಾದಿಯಲ್ಲಿ ಹೋರಾಟ ಸಹಜ ಎಂದು ಹೇಳಿದ್ದಾರೆ.
“ದಾರಿ ಯಾವುದಾದರೂ ಆಗಬಹುದು, ಗುರಿ ಮುಟ್ಟಬೇಕು. ಆ ದಾರಿಗಳಲ್ಲಿ ಹೋರಾಟ ಇರುತ್ತದೆ. ಹೋರಾಡಿಕೊಂಡೇ ಗುರಿ ಮುಟ್ಟಬೇಕು” ಎಂದು ಯಶ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ವರನಟ ಡಾ. ರಾಜ್ಕುಮಾರ್ ಅವರ ಸಿನಿಮಾದ ಜನಪ್ರಿಯ ಗೀತೆ ಸಾಲುಗಳನ್ನು ನೆನಪಿಸಿಕೊಂಡ ಯಶ್, ‘ಕಾಲಕ್ಕೆ ತಕ್ಕಂತೆ ನಡೀಬೇಕು, ತಾಳಕ್ಕೆ ತಕ್ಕಂತೆ ಕುಣೀಬೇಕು’ ಎಂದರು.
‘ಕನ್ನಡಿಗರು ತಲೆ ತಗ್ಗಿಸೋಕೆ ನಾವ್ ಬಿಡಲ್ಲ’
ಟಾಕ್ಸಿಕ್ ಚಿತ್ರವು ಇಂದಿನ ಯುವಪೀಳಿಗೆಯ ಮನಸ್ಥಿತಿ ಹಾಗೂ ಅವರಲ್ಲಿರುವ ಗೊಂದಲಗಳನ್ನು ಪ್ರತಿನಿಧಿಸುವ ಸಿನಿಮಾ ಆಗಲಿದೆ ಎಂದು ಯಶ್ ಹೇಳಿದ್ದಾರೆ.
ಚಿತ್ರ ತುಂಬಾ ಆಳವಾದ ವಿಷಯಗಳನ್ನು ಒಳಗೊಂಡಿದ್ದು, ಮನುಷ್ಯರಿಗೆ ಬೇಕಾದಂತಹ ಒಂದು ಅದ್ಭುತ ಸಿನಿಮಾವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
“ಕನ್ನಡಿಗರು ಹೆಮ್ಮೆಯಿಂದ ಹೇಳಬಹುದು. ಕನ್ನಡಿಗರು ತಲೆ ತಗ್ಗಿಸೋಕೆ ನಾವ್ ಬಿಡಲ್ಲ. ತಲೆ ಎತ್ತಿಕೊಂಡೇ ಓಡಾಡುವ ಹಾಗಿರುತ್ತೆ. ಹೆಮ್ಮೆಯಿಂದ ಸಿನಿಮಾ ನೋಡಬಹುದು” ಎಂದು ಯಶ್ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
‘ಟಾಕ್ಸಿಕ್ಗಾಗಿ ಸೇರಿರುವುದಕ್ಕೆ ಕಾರಣ ಕರ್ನಾಟಕದ ಜನತೆ’
ಕಾರ್ಯಕ್ರಮದ ಆರಂಭದಲ್ಲೇ ‘ಮೊದಲು ನಾನು ಕನ್ನಡದಲ್ಲೇ ಮಾತನಾಡುತ್ತೀನಿ’ ಎಂದು ಹೇಳಿದ ಯಶ್, ಟಾಕ್ಸಿಕ್ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಕರ್ನಾಟಕದ ಜನತೆ ನೀಡಿದ ಪ್ರೀತಿ ಮತ್ತು ಬೆಂಬಲವೇ ಪ್ರಮುಖ ಕಾರಣ ಎಂದು ಹೇಳಿದರು.
ತಮ್ಮ ಪ್ರತಿಯೊಂದು ಗೆಲುವಿನ ಹಿಂದೆಯೂ ಅಭಿಮಾನಿಗಳು ನೀಡಿದ ಶಕ್ತಿ ಮತ್ತು ಜವಾಬ್ದಾರಿ ಇದೆ. ಪ್ರತಿ ಸಿನಿಮಾದ ಗೆಲುವನ್ನು ವೈಯಕ್ತಿಕ ಗೆಲುವಾಗಿ ನೋಡುವುದಿಲ್ಲ. ಬದಲಿಗೆ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಬೇಕು ಎಂಬ ಜವಾಬ್ದಾರಿಯಾಗಿ ಪರಿಗಣಿಸುತ್ತೇನೆ ಎಂದು ಯಶ್ ಹೇಳಿದರು.
‘ನಿಮ್ಮ ಆಶೀರ್ವಾದ ಇರಲಿ, ಯಶ್ ಮೇಲೆ ನಂಬಿಕೆ ಇರಲಿ’
‘ಟಾಕ್ಸಿಕ್’ ಸಿನಿಮಾ ಅಭಿಮಾನಿಗಳು ನೀಡಿದ ಹಿಂದಿನ ಗೆಲುವಿನ ಪ್ರತೀಕವಾಗಿದ್ದು, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಯಶ್ ಹೇಳಿದರು.
ಕರ್ನಾಟಕದ ಜನತೆ ತಮ್ಮ ಮೇಲೆ ಇಟ್ಟಿರುವ ನಂಬಿಕೆ ಮುಂದುವರಿಯಬೇಕು. ಸಿನಿಮಾಗೆ ಎಲ್ಲರ ಆಶೀರ್ವಾದ ಇರಲಿ ಎಂದು ರಾಕಿಂಗ್ ಸ್ಟಾರ್ ಮನವಿ ಮಾಡಿದರು.
ಇದೇ ವೇಳೆ ನಟಿಯರಾದ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಸೇರಿದಂತೆ ಚಿತ್ರದ ಸಹ ಕಲಾವಿದರನ್ನೂ ಯಶ್ ಮುಕ್ತಕಂಠದಿಂದ ಶ್ಲಾಘಿಸಿದರು.
-
ರಾಜ್ಯ4 ಗಂಟೆಗಳು agoBidadi Township ಗೆ ಜಮೀನು ಕೊಟ್ಟ ರೈತರಿಗೆ ₹3 ಕೋಟಿ+; CM ಡಿಕೆಶಿ ಮಹತ್ವದ ಘೋಷಣೆ
-
ಬೆಂಗಳೂರು2 ಗಂಟೆಗಳು agoಆ.13ರ Karnataka Bandh ರದ್ದಾಗುತ್ತಾ? ವಾಟಾಳ್ ನಾಗರಾಜ್ ಖಡಕ್ ಉತ್ತರ
-
ಸಿನಿಮಾ6 ಗಂಟೆಗಳು agoRed Carpet ನಲ್ಲಿ ನಟಿಗೆ ಶಾಕ್! ಸೆಲ್ಫಿ ನೆಪದಲ್ಲಿ ಮಹಿಳಾ ಅಭಿಮಾನಿಯಿಂದ ಬಲವಂತದ ಲಿಪ್ ಕಿಸ್, ವಿಡಿಯೋ ವೈರಲ್
-
ದೇಶ2 ಗಂಟೆಗಳು ago‘Narendra’ ಹೆಸರು ನನಗೆ ಇಷ್ಟವಿಲ್ಲ ಎಂದಿದ್ದ ಪಾಕ್ ಬಾಕ್ಸರ್; ಮೋದಿ ಮುಂದೆ ರಹಸ್ಯ ಬಿಚ್ಚಿಟ್ಟ ಬೆರ್ವಾಲ್!
-
ರಾಜ್ಯ6 ಗಂಟೆಗಳು agoBidadi Township ಗೆ ಕುಮಾರಸ್ವಾಮಿಯೇ ಪಿತಾಮಹ! ಜೆಡಿಎಸ್ ಪಾದಯಾತ್ರೆ ‘ರಾಜಕೀಯ ನಾಟಕ’ ಎಂದ ಎಂ.ಬಿ. ಪಾಟೀಲ್
-
ದೇಶ6 ಗಂಟೆಗಳು agoShashi Tharoor ಗೆ ಕಾಂಗ್ರೆಸ್ ವಾರ್ನಿಂಗ್; ಬಿಜೆಪಿ ಸಮಾಧಾನಪಡಿಸುವ ಹೇಳಿಕೆ ನೀಡದಂತೆ ಕೆ.ಸಿ. ವೇಣುಗೋಪಾಲ್ ಸೂಚನೆ
-
ಬೆಂಗಳೂರು9 ಗಂಟೆಗಳು agoBengaluru ರಿನ ರಸ್ತೆಗಳಲ್ಲಿ ವಾಹನಗಳ ಮಹಾಪೂರ: Traffic Congestionನಲ್ಲಿ ವಿಶ್ವದಲ್ಲೇ 2ನೇ ಸ್ಥಾನ!
-
ರಾಜ್ಯ3 ಗಂಟೆಗಳು agoMantralaya ದಲ್ಲಿ ಸುಬುಧೇಂದ್ರ ತೀರ್ಥರ 14ನೇ ಚಾತುರ್ಮಾಸ್ಯ ದೀಕ್ಷೆ ಆರಂಭ
