Connect with us

ಕ್ರೀಡೆ

ICC WORLD CUP 2026 : ಮೊದಲು ಬ್ಯಾಟ್ ಮಾಡಿದರೆ ಪಾಕಿಸ್ತಾನ್ ಗೆಲುವಿನ ಅಂತರ ಎಷ್ಟು ಬೇಕು?

Published

on

**ICC Men’s T20 World Cup 2026**‌ನ 50ನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. **ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂ**ನಲ್ಲಿ ನಡೆಯಲಿರುವ ಈ ಪಂದ್ಯ ಪಾಕಿಸ್ತಾನ್ ಪಾಲಿಗೆ ‘ಡೂ ಆರ್ ಡೈ’ ಪಂದ್ಯವಾಗಿದೆ.


ಗ್ರೂಪ್–2 ಅಂಕಪಟ್ಟಿ: ಪಾಕಿಸ್ತಾನ್‌ಗೆ ಕಠಿಣ ಲೆಕ್ಕಾಚಾರ

ಗ್ರೂಪ್–2ರಲ್ಲಿ ಇಂಗ್ಲೆಂಡ್ 6 ಅಂಕಗಳೊಂದಿಗೆ ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.

  • ನ್ಯೂಝಿಲೆಂಡ್: 3 ಅಂಕ (NRR +1.390)
  • ಪಾಕಿಸ್ತಾನ್: 1 ಅಂಕ (NRR -0.461)
  • ಶ್ರೀಲಂಕಾ: 0 ಅಂಕ (ಟೂರ್ನಿಯಿಂದ ಹೊರಬಿದ್ದಿದೆ)

ಪಾಕಿಸ್ತಾನ್ ತಂಡವು ನ್ಯೂಝಿಲೆಂಡ್‌ನ ನೆಟ್ ರನ್ ರೇಟ್ ಹಿಂದಿಕ್ಕಿದರೆ ಮಾತ್ರ ಸೆಮಿಫೈನಲ್‌ಗೆ ಲಗ್ಗೆಯಿಡಬಹುದು.


ಮೊದಲು ಬ್ಯಾಟ್ ಮಾಡಿದರೆ ಪಾಕಿಸ್ತಾನ್ ಗೆಲುವಿನ ಅಂತರ ಎಷ್ಟು ಬೇಕು?

ಪಾಕಿಸ್ತಾನ್ ಮೊದಲು ಬ್ಯಾಟ್ ಮಾಡಿದರೆ ಭಾರೀ ಅಂತರದ ಗೆಲುವು ಅನಿವಾರ್ಯ:

  • 200 ರನ್ ಮಾಡಿದರೆ → ಶ್ರೀಲಂಕಾವನ್ನು 135 ರನ್ ಒಳಗೆ ನಿಯಂತ್ರಿಸಬೇಕು
  • 180 ರನ್ ಮಾಡಿದರೆ → ಲಂಕಾ ಪಡೆಯನ್ನು 115 ರನ್ ಒಳಗೆ ಕಟ್ಟಿಹಾಕಬೇಕು
  • 150 ರನ್ ಮಾಡಿದರೆ → ಶ್ರೀಲಂಕಾವನ್ನು 85 ರನ್ ಅಥವಾ ಅದಕ್ಕಿಂತ ಕಡಿಮೆಗೆ ತಡೆಹಿಡಿಯಬೇಕು

ಅಂದರೆ ಪಾಕಿಸ್ತಾನ್ ಕನಿಷ್ಠ 64+ ರನ್ ಅಂತರದ ಗೆಲುವು ಸಾಧಿಸಲೇಬೇಕು.


ಚೇಸಿಂಗ್ ಮಾಡಿದರೆ ಎಷ್ಟು ಓವರ್‌ಗಳಲ್ಲಿ ಪಂದ್ಯ ಮುಗಿಸಬೇಕು?

ಪಾಕಿಸ್ತಾನ್ ಚೇಸಿಂಗ್ ಆಯ್ಕೆ ಮಾಡಿದರೆ ಸಮಯದ ಲೆಕ್ಕಾಚಾರ ನಿರ್ಣಾಯಕವಾಗಲಿದೆ:

  • ಲಂಕಾ 200 ರನ್ ಮಾಡಿದರೆ → 13.5 ಓವರ್‌ಗಳಲ್ಲಿ ಗುರಿ ಮುಟ್ಟಬೇಕು
  • ಲಂಕಾ 181 ರನ್ ನೀಡಿದರೆ → 13.4 ಓವರ್‌ಗಳಲ್ಲಿ ಚೇಸ್
  • ಲಂಕಾ 150 ರನ್ ಮಾಡಿದರೆ → 12.4 ಓವರ್‌ಗಳಲ್ಲಿ 151 ರನ್ ಗಳಿಸಬೇಕು

14 ಓವರ್‌ಗಳಿಗಿಂತ ಹೆಚ್ಚು ತೆಗೆದುಕೊಂಡರೆ ಪಾಕಿಸ್ತಾನ್ ಹೊರಬೀಳಲಿದೆ.


ಟಾಸ್ ಗೆದ್ದರೆ ಚೇಸಿಂಗ್ ಆಯ್ಕೆ? ಪಾಕ್ ತಂತ್ರವೇನು?

ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ್ ತಂಡವು ಟಾಸ್ ಗೆದ್ದರೆ ಚೇಸಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಶ್ರೀಲಂಕಾವನ್ನು ಕಡಿಮೆ ಮೊತ್ತಕ್ಕೆ ತಡೆದು, ನಿರ್ದಿಷ್ಟ ಓವರ್‌ಗಳಲ್ಲಿ ಗುರಿ ಬೆನ್ನತ್ತುವ ತಂತ್ರ ರೂಪಿಸಲಾಗಿದೆ.
ಒಂದು ಸಣ್ಣ ತಪ್ಪಾದರೂ **ನ್ಯೂಝಿಲೆಂಡ್**ಗೆ ಲಾಭವಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ಪ್ರತಿ ಓವರ್, ಪ್ರತಿ ರನ್‌ನ್ನೂ ಲೆಕ್ಕ ಹಾಕಿ ಆಡಬೇಕಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕ್ರೀಡೆ

India ದ ಶ್ರೇಷ್ಠ ಕ್ರಿಕೆಟಿಗ ಯಾರು? ಅಶ್ವಿನ್ ಆಯ್ಕೆಯಲ್ಲಿ ಕೊಹ್ಲಿ, ಬುಮ್ರಾ, ಧೋನಿಗೆ ಬಿಗ್ ಟ್ವಿಸ್ಟ್

Published

on

ನವದೆಹಲಿ: India ದ ಕ್ರಿಕೆಟ್ ಇತಿಹಾಸದ ದಿಗ್ಗಜ ಆಟಗಾರರನ್ನು ಮುಖಾಮುಖಿಯಾಗಿಸಿ, ಸಾರ್ವಕಾಲಿಕ ಶ್ರೇಷ್ಠ ಪುರುಷ ಕ್ರಿಕೆಟಿಗರನ್ನು ಆಯ್ಕೆ ಮಾಡುವ ಕುತೂಹಲಕಾರಿ ಜವಾಬ್ದಾರಿಯನ್ನು ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತೆಗೆದುಕೊಂಡಿದ್ದಾರೆ. ವಿವಿಧ ತಲೆಮಾರುಗಳ ಶ್ರೇಷ್ಠ ಆಟಗಾರರನ್ನು ಒಳಗೊಂಡ ಈ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ರೋಚಕ ಪೈಪೋಟಿಗಳು ಎದುರಾಗಿದ್ದು, ವಿಶೇಷವಾಗಿ ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ನಡುವಿನ ಆಯ್ಕೆಯು ಇದೀಗ ಚರ್ಚೆಗೆ ಕಾರಣವಾಗಿದೆ.

ಅಶ್ವಿನ್ ಅವರ ಆಯ್ಕೆ ಪ್ರಕಾರ, ವಿರಾಟ್ ಕೊಹ್ಲಿ ಅವರಂತಹ ದಿಗ್ಗಜ ಬ್ಯಾಟರ್‌ಗಿಂತ ಜಸ್‌ಪ್ರೀತ್ ಬುಮ್ರಾ ಅವರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ. ಕೊಹ್ಲಿಯ ಸಾಧನೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡ ಅಶ್ವಿನ್, ಈ ನಿರ್ಧಾರ ಸುಲಭವಲ್ಲ ಎಂದು ಹೇಳಿದ್ದಾರೆ.

ಕೊಹ್ಲಿ ವಿರುದ್ಧ ಬುಮ್ರಾ; ಅಶ್ವಿನ್ ಆಯ್ಕೆ ಯಾರಿಗೆ?

ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಸಂದರ್ಭ ಎದುರಾದಾಗ ಅಶ್ವಿನ್ ಅವರು ಬುಮ್ರಾ ಅವರನ್ನು ಆಯ್ಕೆ ಮಾಡಿದರು.

“ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಸಂಪೂರ್ಣ ದಿಗ್ಗಜ. ಅವರು ಅದ್ಭುತವಾಗಿ ಆಡಿದ್ದಾರೆ. ಆದರೆ ಇದು ಒಂದು ಟೂರ್ನಿ. ನಾನು ಜಸ್‌ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡುತ್ತೇನೆ,” ಎಂದು ಅಶ್ವಿನ್ ಹೇಳಿದ್ದಾರೆ.

ತಾವು ಬೌಲರ್ ಆಗಿರುವ ಕಾರಣ ಈ ಆಯ್ಕೆಯಲ್ಲಿ ಸ್ವಲ್ಪ ವೈಯಕ್ತಿಕ ಪಕ್ಷಪಾತವೂ ಇರಬಹುದು ಎಂದು ಅಶ್ವಿನ್ ಒಪ್ಪಿಕೊಂಡಿದ್ದಾರೆ. ಆದರೆ ಟೆಸ್ಟ್ ಮತ್ತು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಬುಮ್ರಾ ಅವರ ಪಂದ್ಯ ಗೆಲ್ಲಿಸುವ ಸಾಮರ್ಥ್ಯವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರೆ, ಬುಮ್ರಾ ಭಾರತದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ತಮ್ಮ ವಿಭಿನ್ನ ಶೈಲಿ ಹಾಗೂ ನಿಖರತೆಯಿಂದ ಬುಮ್ರಾ ವಿಶ್ವದ ಶ್ರೇಷ್ಠ ಬೌಲರ್‌ಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.

ಜಡೇಜಾಗಿಂತ ಧೋನಿಗೆ ಅಶ್ವಿನ್ ಮಣೆ

ಮತ್ತೊಂದು ಕುತೂಹಲಕಾರಿ ಪೈಪೋಟಿಯಲ್ಲಿ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ನಡುವೆ ಅಶ್ವಿನ್ ಆಯ್ಕೆ ಮಾಡಬೇಕಾಯಿತು. ಇಲ್ಲಿ ಆರಂಭದಲ್ಲಿ ಜಡೇಜಾ ಅವರನ್ನು ಆಯ್ಕೆ ಮಾಡುವ ಬಯಕೆ ಹೊಂದಿದ್ದರೂ, ಅಂತಿಮವಾಗಿ ಧೋನಿ ಅವರ ಸಾಧನೆಗೆ ಮಣೆ ಹಾಕಿದರು.

ನಾಯಕನಾಗಿ ಧೋನಿ ಸಾಧನೆ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿನ ಕೊಡುಗೆ ಹಾಗೂ ಭಾರತ ತಂಡವನ್ನು ಅಗ್ರ ಶ್ರೇಯಾಂಕಕ್ಕೆ ಕೊಂಡೊಯ್ದಿರುವುದನ್ನು ಪರಿಗಣಿಸಿ ಅವರನ್ನು ಆಯ್ಕೆ ಮಾಡಿರುವುದಾಗಿ ಅಶ್ವಿನ್ ಹೇಳಿದ್ದಾರೆ.

ಜಡೇಜಾ ಅವರ ಆಲ್‌ರೌಂಡ್ ಸಾಮರ್ಥ್ಯವೂ ಅಶ್ವಿನ್ ಅವರನ್ನು ಆಕರ್ಷಿಸಿತ್ತು. ಆದರೆ ಮೂರು ಮಾದರಿಗಳಲ್ಲಿನ ಧೋನಿ ಅವರ ಪ್ರಭಾವ ಹಾಗೂ ನಾಯಕತ್ವದ ಸಾಧನೆ ಅಂತಿಮ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸಿದೆ.

ಸೆಹ್ವಾಗ್-ಗವಾಸ್ಕರ್ ಆಯ್ಕೆಯಲ್ಲೂ ಅಶ್ವಿನ್‌ಗೆ ಗೊಂದಲ

ಆರಂಭಿಕ ಸುತ್ತಿನಲ್ಲೇ ವೀರೇಂದ್ರ ಸೆಹ್ವಾಗ್ ಮತ್ತು ಸುನಿಲ್ ಗವಾಸ್ಕರ್ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಪರಿಸ್ಥಿತಿ ಎದುರಾದಾಗ ಅಶ್ವಿನ್ ಗೊಂದಲಕ್ಕೊಳಗಾದರು.

ಇಬ್ಬರೂ ವಿಭಿನ್ನ ಕಾಲಘಟ್ಟಗಳಲ್ಲಿ ಭಾರತದ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿರುವುದರಿಂದ ಒಬ್ಬರನ್ನು ಆಯ್ಕೆ ಮಾಡುವುದು ಅನ್ಯಾಯದಂತಿದೆ ಎಂದು ಅವರು ಅಭಿಪ್ರಾಯಪಟ್ಟರು. ಅಂತಿಮವಾಗಿ ಅವರ ಆಯ್ಕೆ ಪ್ರಕ್ರಿಯೆ ಮುಂದುವರಿದು, ಹಲವು ದಿಗ್ಗಜರು ಮುಂದಿನ ಹಂತಗಳಿಗೆ ಪ್ರವೇಶಿಸಿದರು.

ಇದೇ ವೇಳೆ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರೆ, ರಾಹುಲ್ ದ್ರಾವಿಡ್ ಅವರು ವಿನೂ ಮಂಕಡ್ ಅವರನ್ನು ಮೀರಿದರು. ಜಸ್‌ಪ್ರೀತ್ ಬುಮ್ರಾ ಅವರು ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿ ಮುಂದಿನ ಹಂತಕ್ಕೆ ಪ್ರವೇಶಿಸಿದರು.

ಸ್ವತಃ ತಮ್ಮ ಬದಲು ಗಂಗೂಲಿಗೆ ಮತ ನೀಡಿದ ಅಶ್ವಿನ್

ಸ್ವತಃ ರವಿಚಂದ್ರನ್ ಅಶ್ವಿನ್ ಅವರಿಗೂ ಮಾಜಿ ಭಾರತ ನಾಯಕ ಸೌರವ್ ಗಂಗೂಲಿ ಎದುರಾಗಿದ್ದರು. ಈ ಸಂದರ್ಭದಲ್ಲಿ ತಮ್ಮನ್ನೇ ಆಯ್ಕೆ ಮಾಡಿಕೊಳ್ಳುವ ಬದಲು ಗಂಗೂಲಿ ಅವರನ್ನು ಆಯ್ಕೆ ಮಾಡುವ ಮೂಲಕ ಅಶ್ವಿನ್ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು.

ಮುಂದಿನ ಹಂತದಲ್ಲಿ ಸಚಿನ್ ತೆಂಡೂಲ್ಕರ್ ಅವರು ಸೌರವ್ ಗಂಗೂಲಿ ಅವರನ್ನು ಸೋಲಿಸಿದರು. ಕಪಿಲ್ ದೇವ್ ಅವರು ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದರು. ಸೆಹ್ವಾಗ್ ಅವರು ಧೋನಿ ಅವರನ್ನು ಸೋಲಿಸಿದರೆ, ಬುಮ್ರಾ ಅವರು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದರು.

ಸೆಮಿಫೈನಲ್‌ನಲ್ಲಿ ಸಚಿನ್ ಮತ್ತು ಕಪಿಲ್ ದೇವ್ ಗೆಲುವು

ಸೆಮಿಫೈನಲ್ ಹಂತದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ನಡುವೆ ಪೈಪೋಟಿ ನಡೆಯಿತು. ಮತ್ತೊಂದೆಡೆ ಕಪಿಲ್ ದೇವ್ ಮತ್ತು ಜಸ್‌ಪ್ರೀತ್ ಬುಮ್ರಾ ಮುಖಾಮುಖಿಯಾದರು.

ಸಚಿನ್ ಅವರು ಸೆಹ್ವಾಗ್ ಅವರನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಿದರೆ, ಕಪಿಲ್ ದೇವ್ ಅವರು ಬುಮ್ರಾ ಅವರ ಅದ್ಭುತ ಪಯಣಕ್ಕೆ ಅಂತ್ಯ ಹಾಡಿದರು.

1983ರ ವಿಶ್ವಕಪ್ ಗೆಲುವಿನಲ್ಲಿ ಕಪಿಲ್ ದೇವ್ ಅವರ ನಾಯಕತ್ವ ಹಾಗೂ ಆಲ್‌ರೌಂಡ್ ಪ್ರದರ್ಶನ ಅಶ್ವಿನ್ ಅವರನ್ನು ಪ್ರಭಾವಿಸಿತು. ಹೀಗಾಗಿ ಬುಮ್ರಾ ಅವರಂತಹ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಿಂತ ಕಪಿಲ್ ದೇವ್ ಅವರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿದರು.

ಅಂತಿಮವಾಗಿ ಸಚಿನ್ ತೆಂಡೂಲ್ಕರ್‌ಗೆ ಅಶ್ವಿನ್ ಪಟ್ಟ

ಅಂತಿಮ ಸುತ್ತಿನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕಪಿಲ್ ದೇವ್ ನಡುವೆ ಭಾರತದ ಸಾರ್ವಕಾಲಿಕ ಶ್ರೇಷ್ಠ ಪುರುಷ ಕ್ರಿಕೆಟಿಗನ ಆಯ್ಕೆ ನಡೆಯಿತು.

ಎರಡೂ ದಿಗ್ಗಜರು ಭಾರತೀಯ ಕ್ರಿಕೆಟ್‌ಗೆ ವಿಭಿನ್ನ ರೀತಿಯಲ್ಲಿ ಐತಿಹಾಸಿಕ ಕೊಡುಗೆ ನೀಡಿದ್ದಾರೆ. ಕಪಿಲ್ ದೇವ್ ಭಾರತಕ್ಕೆ 1983ರ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿದ್ದರೆ, ಸಚಿನ್ ತೆಂಡೂಲ್ಕರ್ ದಶಕಗಳ ಕಾಲ ಬ್ಯಾಟಿಂಗ್ ಕ್ಷೇತ್ರದಲ್ಲಿ ಅಸಾಧಾರಣ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಅಂತಿಮವಾಗಿ ವೈಯಕ್ತಿಕ ಅಭಿಪ್ರಾಯಕ್ಕೂ ಮಹತ್ವ ನೀಡಿದ ಅಶ್ವಿನ್, ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಆಯ್ಕೆಯ ಶ್ರೇಷ್ಠ ಆಟಗಾರನಾಗಿ ಘೋಷಿಸಿದರು.

ಹೀಗಾಗಿ ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ, ಎಂಎಸ್ ಧೋನಿ, ರಾಹುಲ್ ದ್ರಾವಿಡ್, ಕಪಿಲ್ ದೇವ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ದಿಗ್ಗಜರ ಪೈಪೋಟಿಯ ಬಳಿಕ ಸಚಿನ್ ತೆಂಡೂಲ್ಕರ್ ಅವರು ರವಿಚಂದ್ರನ್ ಅಶ್ವಿನ್ ಅವರ ಆಯ್ಕೆಯ ಭಾರತದ ಸಾರ್ವಕಾಲಿಕ ಶ್ರೇಷ್ಠ ಪುರುಷ ಕ್ರಿಕೆಟಿಗ ಎಂಬ ಗೌರವ ಪಡೆದಿದ್ದಾರೆ.

Continue Reading

ಕ್ರೀಡೆ

Shreyas Iyer ನಾಯಕತ್ವ, ತಮ್ಮ ಆಯ್ಕೆ ಕೈತಪ್ಪಿದ್ದಕ್ಕೆ Suryakumar Yadav ಕೊಟ್ಟ ಸ್ಪಷ್ಟನೆ

Published

on

ನವದೆಹಲಿ: ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದಿದ್ದರೂ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡದಿಂದ ಹೊರಗುಳಿದಿರುವ ಬಗ್ಗೆ ಮಾಜಿ ಟಿ20 ನಾಯಕ Suryakumar Yadav ಮೊದಲ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಂಡದಿಂದ ಕೈಬಿಟ್ಟ ನಿರ್ಧಾರವನ್ನು ಆರಂಭದಲ್ಲಿ ಒಪ್ಪಿಕೊಳ್ಳಲು ಪ್ರಯತ್ನಿಸಿದ್ದರೂ, ಬಳಿಕ ‘ಇದು ಹೇಗೆ ಸಾಧ್ಯ?’ ಎಂಬ ಪ್ರಶ್ನೆ ತಮ್ಮನ್ನು ಕಾಡುತ್ತಿತ್ತು ಎಂದು ಅವರು ಹೇಳಿದ್ದಾರೆ.

ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಸೂರ್ಯಕುಮಾರ್, ಆಯ್ಕೆದಾರರ ನಿರ್ಧಾರದಿಂದ ತಮಗೆ ಉಂಟಾದ ನಿರಾಸೆ ಹಾಗೂ ಆ ಸಂದರ್ಭವನ್ನು ಹೇಗೆ ಎದುರಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

‘ಆರಂಭದಲ್ಲಿ ನಿರ್ಧಾರ ಒಪ್ಪಿಕೊಳ್ಳಲು ಪ್ರಯತ್ನಿಸಿದೆ’

ಐರ್ಲೆಂಡ್ ಪ್ರವಾಸದ ಭಾರತ ತಂಡದಲ್ಲಿ ತಮ್ಮ ಹೆಸರು ಇಲ್ಲದಿರುವುದು ತಿಳಿದಾಗ ತಾವು ಮುಗುಳ್ನಗುತ್ತಿದ್ದೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ. ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದಾಗಲೆಲ್ಲ ಶಾಂತವಾಗಿರಲು ಪ್ರಯತ್ನಿಸುತ್ತಿದ್ದೆ. ತಮಗೆ ದೊರೆತ ಅವಕಾಶಗಳಿಗಾಗಿ ಯಾವಾಗಲೂ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಆದರೆ ತಂಡದಿಂದ ಹೊರಗುಳಿಸುವ ನಿರ್ಧಾರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಸ್ವಲ್ಪ ಸಮಯದ ನಂತರ, ‘ಇದು ಹೇಗೆ ನಡೆಯಬಹುದು? ಹೇಗೆ ಸಾಧ್ಯ?’ ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡತೊಡಗಿದವು ಎಂದು ಅವರು ಹೇಳಿದ್ದಾರೆ.

‘ಮುಂದಿನ ಎರಡು ವರ್ಷ ತಂಡ ಮುನ್ನಡೆಸುತ್ತೇನೆ ಅಂದುಕೊಂಡಿದ್ದೆ’

2026ರ ಆರಂಭದಲ್ಲಿ ತಂಡದಿಂದ ಹೊರಗುಳಿಯಬೇಕಾಗುತ್ತದೆ ಎಂಬ ನಿರೀಕ್ಷೆ ತಮಗಿರಲಿಲ್ಲ ಎಂದು ಸೂರ್ಯಕುಮಾರ್ ಹೇಳಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆಯಲ್ಲಿದ್ದೆ. ಒಲಿಂಪಿಕ್ಸ್ ಮತ್ತು ಮುಂದಿನ ಟಿ20 ವಿಶ್ವಕಪ್‌ನಂತಹ ದೊಡ್ಡ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವುದಿಲ್ಲ. ಆಯ್ಕೆದಾರರು ಭವಿಷ್ಯದ ದೃಷ್ಟಿಯಿಂದ ಇದು ಉತ್ತಮ ನಿರ್ಧಾರ ಎಂದು ಭಾವಿಸಿದ್ದರೆ, ಅದನ್ನು ಗೌರವಿಸಬೇಕು. ಹೀಗಾಗಿ ಆ ನಿರ್ಧಾರಕ್ಕೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

‘ಎಲ್ಲವೂ ಚೆನ್ನಾಗಿದ್ದಾಗ ಬದಲಾವಣೆ ಏಕೆ?’

ತಂಡದಿಂದ ಹೊರಗುಳಿಸುವ ನಿರ್ಧಾರದ ನಂತರ ಸೂರ್ಯಕುಮಾರ್ ಅವರನ್ನು ಹೆಚ್ಚು ಕಾಡಿದ ಪ್ರಶ್ನೆ ಇದೇ ಆಗಿತ್ತು. ಎರಡು ವರ್ಷಗಳಲ್ಲಿ ತಂಡ ಒಂದೇ ಒಂದು ಸರಣಿಯನ್ನೂ ಸೋತಿರಲಿಲ್ಲ. ವಿಶ್ವಕಪ್ ಮತ್ತು ಏಷ್ಯಾಕಪ್ ಗೆದ್ದಿದ್ದೆವು. ಎಲ್ಲವೂ ಉತ್ತಮವಾಗಿ ಸಾಗುತ್ತಿರುವಾಗ ಬದಲಾವಣೆ ಏಕೆ ಅಗತ್ಯವಾಯಿತು ಎಂಬ ಪ್ರಶ್ನೆ ತಮ್ಮ ಮನಸ್ಸಿನಲ್ಲಿ ನಿರಂತರವಾಗಿ ಓಡುತ್ತಿತ್ತು ಎಂದು ಅವರು ಹೇಳಿದ್ದಾರೆ.

ತಂಡದ ಯಶಸ್ಸನ್ನು ಮುಂದುವರಿಸಬೇಕು ಎಂಬ ಆಸೆ ಸಹಜವಾಗಿತ್ತು. ಆದರೆ ಆಯ್ಕೆದಾರರು ಬೇರೆ ರೀತಿಯ ಭವಿಷ್ಯದ ಯೋಜನೆ ಹೊಂದಿದ್ದಿರಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ.

‘ಒಂದೂವರೆ ತಿಂಗಳು ಈ ಪ್ರಶ್ನೆಯನ್ನೇ ಯೋಚಿಸಿದೆ’

ತಂಡದಿಂದ ಹೊರಗುಳಿದ ಬಳಿಕ ಸುಮಾರು ಒಂದೂವರೆ ತಿಂಗಳು ಮನೆಯಲ್ಲಿದ್ದಾಗ ಇದೇ ವಿಚಾರವನ್ನು ಯೋಚಿಸುತ್ತಿದ್ದೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

‘ನಾವು ವಿಶ್ವಕಪ್ ಗೆದ್ದಿದ್ದೆವು. ಐಪಿಎಲ್ ನಾನು ಬಯಸಿದಷ್ಟು ಉತ್ತಮವಾಗಿರಲಿಲ್ಲ. ಆದರೆ ವಿಶ್ವಕಪ್ ಯಶಸ್ಸಿನ ಬಳಿಕವೂ ಇಂತಹ ಬದಲಾವಣೆ ಏಕೆ?’ ಎಂಬ ಪ್ರಶ್ನೆ ಕಾಡುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಆ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬದವರು ತಮ್ಮನ್ನು ಭೇಟಿ ಮಾಡಿ, ಇದು ಜೀವನದ ಒಂದು ಭಾಗ ಎಂದು ಧೈರ್ಯ ತುಂಬಿದ್ದರು. ಆದರೆ ಎಲ್ಲರೂ ಹಿಂತಿರುಗಿದ ಬಳಿಕ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ನಿರಾಸೆಯ ಭಾವನೆ ಮತ್ತಷ್ಟು ಕಾಡುತ್ತಿತ್ತು ಎಂದು ಸೂರ್ಯಕುಮಾರ್ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ತಂಡ ಘೋಷಣೆಗೆ ಮುನ್ನವೇ ಕರೆ ಮಾಡಿದ್ದ ಆಯ್ಕೆ ಸಮಿತಿ

ತಂಡದ ಘೋಷಣೆಗೆ ಸುಮಾರು ಎರಡು ಅಥವಾ ಮೂರು ದಿನಗಳ ಮುನ್ನ ಆಯ್ಕೆ ಸಮಿತಿಯವರು ತಮ್ಮನ್ನು ಸಂಪರ್ಕಿಸಿದ್ದರು ಎಂದು ಸೂರ್ಯಕುಮಾರ್ ಬಹಿರಂಗಪಡಿಸಿದ್ದಾರೆ.

ತಂಡದಿಂದ ಹೊರಗುಳಿಸುವ ನಿರ್ಧಾರದ ಬಗ್ಗೆ ಆಯ್ಕೆದಾರರು ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಅದು ತಮ್ಮ ಕೈಯಲ್ಲಿದ್ದ ನಿರ್ಧಾರವಲ್ಲದ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.

ಯಾರು ನಿರ್ಧಾರ ತೆಗೆದುಕೊಂಡಿದ್ದರೂ, ಅದು ತಂಡದ ಭವಿಷ್ಯಕ್ಕೆ ಉತ್ತಮ ಎಂದು ಅವರು ಭಾವಿಸಿರಬೇಕು. ಹೀಗಾಗಿ ಅದನ್ನು ಗೌರವಿಸುವುದಾಗಿ ಸೂರ್ಯಕುಮಾರ್ ತಿಳಿಸಿದ್ದಾರೆ.

ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಸೂರ್ಯಕುಮಾರ್ ಬೆಂಬಲ

ತಮ್ಮ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ನೇಮಿಸಿರುವ ಬಗ್ಗೆ ಸೂರ್ಯಕುಮಾರ್ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ಶ್ರೇಯಸ್ ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ಅವರು ಉತ್ತಮ ಆಟಗಾರ ಮಾತ್ರವಲ್ಲದೆ ಒಳ್ಳೆಯ ವ್ಯಕ್ತಿ ಮತ್ತು ಉತ್ತಮ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ತಮ್ಮ ವೈಯಕ್ತಿಕ ನಿರಾಸೆಯ ನಡುವೆಯೂ ತಂಡದ ಹಿತವೇ ಮುಖ್ಯ ಎಂಬ ಸಂದೇಶವನ್ನು ಸೂರ್ಯಕುಮಾರ್ ಅವರ ಮಾತುಗಳು ಸಾರಿವೆ. ಆಯ್ಕೆದಾರರ ನಿರ್ಧಾರದ ಬಗ್ಗೆ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದ್ದರೂ, ತಂಡದ ಹೊಸ ನಾಯಕತ್ವಕ್ಕೆ ಬೆಂಬಲ ನೀಡಿರುವುದು ಅವರ ಪ್ರಬುದ್ಧ ನಿಲುವಿಗೆ ಸಾಕ್ಷಿಯಾಗಿದೆ.

Continue Reading

ಕ್ರೀಡೆ

ವಿಶ್ವ ಚೆಸ್‌ನಲ್ಲಿ Praggnanandhaa ಹೊಸ ಇತಿಹಾಸ; ಕರುವಾನಾಗೆ ಶಾಕ್ ನೀಡಿ ಐತಿಹಾಸಿಕ ಪ್ರಶಸ್ತಿ ಗೆಲುವು

Published

on

By

ಸೆಂಟ್ ಲೂಯಿಸ್: ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್. Praggnanandhaa ಅವರು ವಿಶ್ವ ಚೆಸ್‌ ರಂಗದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಂಟ್ ಲೂಯಿಸ್‌ನಲ್ಲಿ ನಡೆದ ಪ್ರತಿಷ್ಠಿತ ಗ್ರಾಂಡ್ ಚೆಸ್ ಟೂರ್ 2026 ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಭರ್ಜರಿ ಪುನರಾಗಮನ ಸಾಧಿಸಿದ ಪ್ರಜ್ಞಾನಂದ, ತಮ್ಮ 2026ರ ಅದ್ಭುತ ಪ್ರದರ್ಶನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರಿಸಿದ್ದಾರೆ.

6 ಅಂಕಗಳ ಹಿನ್ನಡೆಯಿಂದ ರೋಚಕ ಕಮ್‌ಬ್ಯಾಕ್

ಕ್ಲಾಸಿಕಲ್ ಪಂದ್ಯಗಳ ಅಂತ್ಯದಲ್ಲಿ ಪ್ರಜ್ಞಾನಂದ ಅವರು ಕರುವಾನಾ ವಿರುದ್ಧ 3-9 ಅಂಕಗಳಿಂದ ಆರು ಅಂಕಗಳ ಹಿನ್ನಡೆಯಲ್ಲಿದ್ದರು. ಹೀಗಾಗಿ ಪ್ರಶಸ್ತಿ ಗೆಲ್ಲುವ ಅವಕಾಶ ಕ್ಷೀಣಿಸಿತ್ತು. ಆದರೆ ಅಂತಿಮ ದಿನ ರ್ಯಾಪಿಡ್ ಪಂದ್ಯಗಳಲ್ಲಿ ಅದ್ಭುತ ಆಟವಾಡಿದ ಪ್ರಜ್ಞಾನಂದ ಸತತ ಎರಡು ಗೆಲುವು ದಾಖಲಿಸಿ 11-9 ಅಂಕಗಳ ಮುನ್ನಡೆ ಪಡೆದರು.

ಬಳಿಕ ನಡೆದ ಬ್ಲಿಟ್ಸ್ ಪಂದ್ಯದಲ್ಲಿ ಮೊದಲ ಪಂದ್ಯ ಡ್ರಾಗೊಂಡರೆ, ಎರಡನೇ ಪಂದ್ಯವನ್ನು ಕರುವಾನಾ ಗೆದ್ದು 12-12ರಲ್ಲಿ ಸಮಬಲ ಸಾಧಿಸಿದರು. ಆದರೆ ಮೂರನೇ ಬ್ಲಿಟ್ಸ್ ಪಂದ್ಯದಲ್ಲಿ ಪ್ರಜ್ಞಾನಂದ ಮತ್ತೆ ಗೆದ್ದು ನಿರ್ಣಾಯಕ ಮುನ್ನಡೆ ಪಡೆದುಕೊಂಡರು.

‘ತ್ರೀಫೋಲ್ಡ್ ರಿಪಿಟಿಷನ್’ ಮೂಲಕ ಪ್ರಶಸ್ತಿ ಖಚಿತ

ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಪ್ರಶಸ್ತಿ ತನ್ನದಾಗುವ ಪರಿಸ್ಥಿತಿಯಲ್ಲಿದ್ದ ಪ್ರಜ್ಞಾನಂದ, ಯಾವುದೇ ಅನಗತ್ಯ ಅಪಾಯ ತೆಗೆದುಕೊಳ್ಳಲಿಲ್ಲ. ಮೂರು ಬಾರಿ ಒಂದೇ ಸ್ಥಾನ ಪುನರಾವರ್ತನೆಯಾಗುವ ‘ತ್ರೀಫೋಲ್ಡ್ ರಿಪಿಟಿಷನ್’ ನಿಯಮವನ್ನು ಚಾಣಾಕ್ಷವಾಗಿ ಬಳಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡರು. ಇದರೊಂದಿಗೆ ಪ್ರಶಸ್ತಿ ಅವರ ಪಾಲಾಯಿತು.

ಫೈನಲ್‌ನ ಒಟ್ಟು ಆರು ಪಂದ್ಯಗಳಲ್ಲಿ ಪ್ರಜ್ಞಾನಂದ ಮೂರು ಗೆಲುವು ದಾಖಲಿಸಿದರೆ, ಎರಡು ಪಂದ್ಯಗಳು ಡ್ರಾಗೊಂಡವು. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದರು.

2026ರಲ್ಲಿ ಮುಂದುವರಿದ ಪ್ರಜ್ಞಾನಂದ ಗೆಲುವಿನ ಓಟ

ಈ ಗೆಲುವಿನೊಂದಿಗೆ 2026ರಲ್ಲಿ ಪ್ರಜ್ಞಾನಂದ ಅವರ ಯಶಸ್ಸಿನ ಪಯಣ ಮತ್ತಷ್ಟು ಗಟ್ಟಿಯಾಗಿದೆ. ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಹಿನ್ನಡೆ ಕಂಡಿದ್ದರೂ, ನಂತರ ಅದ್ಭುತವಾಗಿ ಚೇತರಿಸಿಕೊಂಡ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಎರಡು ಬಾರಿ ಮಣಿಸಿ ಪ್ರಶಸ್ತಿ ಗೆದ್ದಿದ್ದರು.

ಇದೀಗ ಗ್ರಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನೂ ಗೆಲ್ಲುವ ಮೂಲಕ ವಿಶ್ವದ ಅಗ್ರ ಚೆಸ್ ಆಟಗಾರರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಕೇವಲ 21ನೇ ವಯಸ್ಸಿನಲ್ಲೇ ಪ್ರಜ್ಞಾನಂದ ಸಾಧಿಸುತ್ತಿರುವ ಈ ಸರಣಿ ಗೆಲುವುಗಳು ಭಾರತೀಯ ಚೆಸ್‌ನ ಭವಿಷ್ಯದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸಿವೆ.

Continue Reading

Trending