Connect with us

ದೇಶ

ಕಾವೇರಿ ವಿವಾದ: ಅಗತ್ಯವಿದ್ದಲ್ಲಿ ಸುಪ್ರೀಂ ಮೆಟ್ಟಿಲೇರಲು ನಿರ್ಧರಿಸಿದ ತಮಿಳುನಾಡು ಸರ್ವಪಕ್ಷ ಸಭೆ, ಕರ್ನಾಟಕದ ನಡೆಗೆ ಖಂಡನೆ

Published

on

ಚೆನ್ನೈ: ಕಾವೇರಿ ವಿವಾದದ ಬಗ್ಗೆ ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಸಿಡಬ್ಲ್ಯುಆರ್ ಎ ಸೂಚನೆಯ ಪ್ರಕಾರ ನೀರು ಹರಿಸಲು ಮುಂದಾಗದ ಕರ್ನಾಟಕದ ನಡೆಯ ಬಗ್ಗೆ ಖಂಡನೆ ವ್ಯಕ್ತವಾಗಿದೆ.

ಕರ್ನಾಟಕದ ನಡೆಯ ವಿಷಯವಾಗಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಭೆಯಲ್ಲಿ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಹೇಳಿದ್ದು, ಅಗತ್ಯವಿದ್ದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಕ್ಕೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕರ್ನಾಟಕ ಸಿಡಬ್ಲ್ಯುಆರ್ ಎ ಸೂಚನೆ ಅನುಸರಿಸಲು ವಿಫಲವಾದರೆ, ತಮಿಳುನಾಡಿಗೆ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಾವು ಸಿದ್ಧರಿದ್ದೇವೆ” ಎಂದು ಸಿಎಂ ಸ್ಟಾಲಿನ್ ದೃಢಪಡಿಸಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನದಂತೆ ಪ್ರತಿದಿನ ಒಂದು ಟಿಎಂಸಿ ಅಡಿ ನೀರು ಬಿಡಲು ನಿರಾಕರಿಸುತ್ತಿರುವ ಕರ್ನಾಟಕ ಸರ್ಕಾರವನ್ನು ಸಭೆಯಲ್ಲಿ ಅಂಗೀಕರಿಸಿದ ನಿರ್ಣಯ ತೀವ್ರವಾಗಿ ಖಂಡಿಸಿದೆ.

ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ನೀರು ಬಿಡುವಂತೆ ನಿರ್ದೇಶನ ನೀಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸ್ಟಾಲಿನ್, ಈ ವರ್ಷ ಸಾಕಷ್ಟು ಮಳೆಯಾಗಿದ್ದರೂ ಕರ್ನಾಟಕ ಸಿಡಬ್ಲ್ಯೂಆರ್‌ಎ ಶಿಫಾರಸುಗಳನ್ನು ಪಾಲಿಸಲು ನಿರಾಕರಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

“ಕಳೆದ ವರ್ಷ, ಕರ್ನಾಟಕ, ಆದೇಶಗಳನ್ನು ಅನುಸರಿಸದ ಕಾರಣ, ಕಾವೇರಿ ನೀರಿನ ನಮ್ಮ ಹಕ್ಕಿನ ಪಾಲನ್ನು ಪಡೆಯಲು ನಾವು ಸುಪ್ರೀಂ ಕೋರ್ಟ್ ಸಂಪರ್ಕಿಸುವ ಪರಿಸ್ಥಿತಿ ನಿರ್ಮಾಣವಾಯಿತು.” ಎಂದು ಸ್ಟಾಲಿನ್ ಟೀಕಿಸಿದ್ದಾರೆ.

ಸ್ಥಳೀಯ ನೀರಿನ ಕೊರತೆಯ ಕಳವಳವನ್ನು ಉಲ್ಲೇಖಿಸಿ ಕಾವೇರಿ ನೀರು ಬಿಡುಗಡೆಯನ್ನು ನಿರ್ಬಂಧಿಸುವ ಕರ್ನಾಟಕದ ಇತ್ತೀಚಿನ ನಿರ್ಧಾರದಿಂದ ಉಭಯ ರಾಜ್ಯಗಳ ನಡುವಿನ ಉದ್ವಿಗ್ನತೆಗಳು ಹೆಚ್ಚಿವೆ. ಕರ್ನಾಟಕದ ಈ ನಡೆ ತಮಿಳುನಾಡಿನ ಕೃಷಿ ವಲಯದ ಮೇಲೆ ವಿಶೇಷವಾಗಿ ಪರಿಣಾಮ ಬೀರುವುದರೊಂದಿಗೆ, ಸಮಾನ ನೀರಿನ ಹಂಚಿಕೆಯ ಕುರಿತು ಎರಡು ರಾಜ್ಯಗಳ ನಡುವಿನ ದೀರ್ಘಕಾಲದ ಅಸಮಾಧಾನವನ್ನು ಉಲ್ಬಣಗೊಳಿಸಿದೆ.

ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ನಡೆಯುವುದಕ್ಕೂ ಹಿಂದಿನ ದಿನ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂವಾದಕ್ಕೆ ಮುಕ್ತವಾಗಿರುವುದಾಗಿ ಹೇಳಿದ್ದರು.

ದೇಶ

Nepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್

Published

on

By

ಬಹ್ರೈಚ್: Nepal flood ದಲ್ಲಿ ಉಂಟಾದ ಭೀಕರ ಜಲಪ್ರಳಯದ ರಭಸಕ್ಕೆ ಸಿಲುಕಿದ್ದ 5 ಕಾಡಾನೆಗಳ ಹಿಂಡು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಟರ್ನಿಯಾಘಾಟ್ ಬಳಿಯ ಗಿರ್ಜಾಪುರಿ ಬ್ಯಾರೇಜ್ ಸಮೀಪ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದೆ. ಆಗಸ್ಟ್ 25ರಂದು ನಡೆದ ಈ ಘಟನೆಯಲ್ಲಿ ಮೂರು ವಯಸ್ಕ ಆನೆಗಳು ಹಾಗೂ ಎರಡು ಮರಿಗಳು ಪ್ರವಾಹದ ಸುಳಿಗೆ ಸಿಲುಕಿದ್ದವು.

ಕೌಡಿಯಾಲ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಸಂಕಷ್ಟಕ್ಕೆ ಸಿಲುಕಿತ್ತು. ನೀರಿನ ರಭಸ ಹೆಚ್ಚಿದ್ದರಿಂದ ಆನೆ ಮರಿಗಳಿಗೆ ತೇಲುವುದು ಕಷ್ಟವಾಗಿತ್ತು. ಈ ವೇಳೆ ವಯಸ್ಕ ಆನೆಗಳು ಮರಿಗಳನ್ನು ಸುತ್ತುವರಿದು ನಿಂತು, ಅವುಗಳನ್ನು ಪ್ರವಾಹದ ರಭಸದಿಂದ ರಕ್ಷಿಸಲು ಪ್ರಯತ್ನಿಸಿರುವುದು ಗಮನ ಸೆಳೆದಿದೆ.

ಮರಿಗಳನ್ನು ಬಿಟ್ಟು ಕದಲದ ದೊಡ್ಡ ಆನೆಗಳು

ಪ್ರವಾಹದ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದರೂ ವಯಸ್ಕ ಆನೆಗಳು ಮರಿಗಳನ್ನು ಏಕಾಂಗಿಯಾಗಿ ಬಿಡಲಿಲ್ಲ. ಅವುಗಳ ಸುತ್ತಲೂ ನಿಂತು ಮರಿಗಳಿಗೆ ರಕ್ಷಣೆ ನೀಡುವ ಮೂಲಕ ಸುರಕ್ಷಿತವಾಗಿ ದಡ ಸೇರುವಂತೆ ನೆರವಾದವು.

ಈ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿದ ಅಧಿಕಾರಿಗಳು

ಆನೆಗಳ ಹಿಂಡು ಅಪಾಯದಲ್ಲಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬಳಿಕ ಗಿರ್ಜಾಪುರಿ ಬ್ಯಾರೇಜ್‌ನ ಗೇಟ್‌ಗಳನ್ನು ಮುಚ್ಚಲಾಗಿದ್ದು, ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ನೀರಿನ ರಭಸ ಕಡಿಮೆಯಾದ ಬಳಿಕ ವಯಸ್ಕ ಆನೆಗಳು ಚೇತರಿಸಿಕೊಂಡಿವೆ. ನಂತರ ಅವು ಎರಡು ಆನೆ ಮರಿಗಳನ್ನು ಸುರಕ್ಷಿತವಾಗಿ ದಂಡೆಯತ್ತ ಕರೆದೊಯ್ದಿವೆ.

ಸುರಕ್ಷಿತವಾಗಿ ಕಾಡಿಗೆ ಮರಳಿದ ಆನೆಗಳು

ಆನೆಗಳ ಹಿಂಡು ದಡ ತಲುಪಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಬ್ಯಾರೇಜ್ ಪ್ರದೇಶದಿಂದ ದೂರಕ್ಕೆ ಕಳುಹಿಸಿ ಸುರಕ್ಷಿತವಾಗಿ ಕಾಡಿನತ್ತ ಸಾಗುವಂತೆ ಮಾಡಿದ್ದಾರೆ.

ಆಪತ್ತಿನ ಸಮಯದಲ್ಲೂ ಮರಿಗಳನ್ನು ಬಿಟ್ಟು ಹೋಗದೆ ಅವುಗಳನ್ನು ಸುತ್ತುವರಿದು ರಕ್ಷಿಸಿದ ಆನೆಗಳ ವರ್ತನೆ ಸಾರ್ವಜನಿಕರ ಗಮನ ಸೆಳೆದಿದೆ. ಮತ್ತೊಂದೆಡೆ, ಪರಿಸ್ಥಿತಿಯನ್ನು ತ್ವರಿತವಾಗಿ ಅರಿತು ನೀರಾವರಿ ಇಲಾಖೆಯ ಸಹಕಾರದೊಂದಿಗೆ ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿ ಆನೆಗಳ ಜೀವ ಉಳಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಗೂ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

ರಾಜ್ಯ

Mysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ

Published

on

By

ಮೈಸೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಬೆನ್ನಲ್ಲೇ ಇದೀಗ Mysuru ಜಿಲ್ಲೆಯಲ್ಲೂ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 165 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದ್ದು, ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದ ಸಮೀಪದಲ್ಲಿರುವ ವರುಣಾ ಕ್ಷೇತ್ರದ ಮರಸೆ ಹಾಗೂ ಮದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಈ ಪ್ರದೇಶದ ಜಮೀನುಗಳಲ್ಲಿ ರೈತರು ಅಡಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಿವಿಧ ವಾಣಿಜ್ಯ ಹಾಗೂ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಫಲವತ್ತಾದ ಜಮೀನು ಕೈಗಾರಿಕೆಗೆ?

ತಮ್ಮ ಜೀವನಾಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ಜಮೀನುಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಸ್ಥಳೀಯ ರೈತರು ಪಟ್ಟುಹಿಡಿದಿದ್ದಾರೆ.

ವಿಮಾನ ನಿಲ್ದಾಣದ ಸಮೀಪವಿರುವ ಮರಸೆ-ಮದರಗಳ್ಳಿ ಭಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಉದ್ದೇಶದಿಂದ KIADB ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದಾಗಿ ತಿಳಿದುಬಂದಿದೆ. ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದರೆ ತಮ್ಮ ಕೃಷಿ ಮತ್ತು ಜೀವನೋಪಾಯಕ್ಕೆ ತೀವ್ರ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಡದಿ ಮಾದರಿಯಲ್ಲಿ ಮೈಸೂರಲ್ಲೂ ಹೋರಾಟ?

ಬೆಂಗಳೂರು ಸಮೀಪದ ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಮಾದರಿಯಲ್ಲೇ ಮೈಸೂರಿನಲ್ಲೂ ಪ್ರತಿಭಟನೆ ತೀವ್ರಗೊಳಿಸಲು ರೈತ ಸಂಘಟನೆಗಳು ಹಾಗೂ ಭೂಮಾಲೀಕರು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

165 ಎಕರೆ ಕೃಷಿ ಭೂಮಿ ಸ್ವಾಧೀನದ ವಿಚಾರ ಇದೀಗ ವರುಣಾ ಕ್ಷೇತ್ರದಲ್ಲಿ ರಾಜಕೀಯ ಹಾಗೂ ರೈತ ಹೋರಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸರ್ಕಾರದ ಭೂಸ್ವಾಧೀನ ಪ್ರಸ್ತಾವನೆಗೆ ರೈತರ ಪ್ರತಿಕ್ರಿಯೆ ಮತ್ತು ಮುಂದಿನ ಕ್ರಮಗಳತ್ತ ಇದೀಗ ಗಮನ ಹರಿದಿದೆ

Continue Reading

ಬೆಂಗಳೂರು

Bengaluru ಪಾರ್ಕ್‌ ಜಾಗ ಬಳಕೆಗೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು, 6 ಪ್ರಮುಖ ಬೇಡಿಕೆ

Published

on

By

ಬೆಂಗಳೂರು: ರಾಜ್ಯ ಸರ್ಕಾರದ ಮೂಲಸೌಕರ್ಯ ಯೋಜನೆಗಳಿಗೆ Bengaluru ರಿನ ಉದ್ಯಾನವನ ಹಾಗೂ ಉದ್ಯಾನಗಳ ಜಾಗವನ್ನು ಬಳಸಿಕೊಳ್ಳುವ ಸಚಿವ ಸಂಪುಟದ ನಿರ್ಧಾರಕ್ಕೆ ನಾಗರಿಕರು ಮತ್ತು ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪಾರ್ಕ್‌ಗಳ ಭೂಮಿಯನ್ನು ಇತರ ಕಾಮಗಾರಿಗಳಿಗೆ ಬಳಸುವುದರಿಂದ ನಗರದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಲಾಲ್‌ಬಾಗ್‌ನಲ್ಲಿ ಬೃಹತ್ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ನಾಗರಿಕರು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಮುಖ್ಯಮಂತ್ರಿ ಅವರಿಗೆ ಜಂಟಿ ಮನವಿ ಸಲ್ಲಿಸಿ, ಉದ್ಯಾನವನಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಾಗರಿಕ ಸಂಘಟನೆಗಳ ಪ್ರಕಾರ, ಉದ್ಯಾನವನಗಳು ಖಾಲಿ ಜಾಗವಲ್ಲ. ಅವು ನಗರದ ಉಷ್ಣಾಂಶ ನಿಯಂತ್ರಣ, ಮಳೆನೀರು ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಮೂಲಸೌಕರ್ಯಗಳಾಗಿವೆ.

ಸಂಶೋಧನೆಗಳನ್ನು ಉಲ್ಲೇಖಿಸಿರುವ ಸಂಘಟನೆಗಳು, ಬೆಂಗಳೂರಿನ ಹಸಿರು ಪ್ರದೇಶಗಳು ಸುತ್ತಮುತ್ತಲಿನ ಪ್ರದೇಶಗಳಿಗಿಂತ ಸರಾಸರಿ 2.23 ಡಿಗ್ರಿ ಸೆಲ್ಸಿಯಸ್‌ವರೆಗೆ ತಂಪಾಗಿರುತ್ತವೆ ಎಂದು ಹೇಳಿದ್ದಾರೆ. ಉದ್ಯಾನವನಗಳಿಂದ ಉಂಟಾಗುವ ಈ ತಂಪಿನ ಪರಿಣಾಮ ಸುಮಾರು 347 ಮೀಟರ್‌ ವ್ಯಾಪ್ತಿಯವರೆಗೆ ಕಂಡುಬರುತ್ತದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಶೇ.28ರಷ್ಟು ವಾರ್ಡ್‌ಗಳಲ್ಲಿ ಪಾರ್ಕ್‌ಗಳೇ ಇಲ್ಲ!

ಐಐಹೆಚ್‌ಎಸ್‌ ಸಂಶೋಧನೆಯನ್ನು ಉಲ್ಲೇಖಿಸಿರುವ ನಾಗರಿಕ ಗುಂಪುಗಳು, ಬೆಂಗಳೂರಿನ ಸುಮಾರು 28 ಪ್ರತಿಶತ ವಾರ್ಡ್‌ಗಳಲ್ಲಿ ಒಂದೇ ಒಂದು ಉದ್ಯಾನವನ ಅಥವಾ ಸೂಕ್ತ ಹಸಿರು ಪ್ರದೇಶವಿಲ್ಲ ಎಂದು ಹೇಳಿದ್ದಾರೆ. ಈಗಿರುವ ಉದ್ಯಾನವನಗಳ ಜಾಗವನ್ನೂ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಂಡರೆ ಪರಿಸರದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆ

ನಾಗರಿಕ ಸಂಘಟನೆಗಳು ಸರ್ಕಾರದ ಮುಂದೆ ಪ್ರಮುಖವಾಗಿ ಆರು ಬೇಡಿಕೆಗಳನ್ನು ಇಟ್ಟಿವೆ.

  1. ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ಕಾಯ್ದೆಗೆ ಉದ್ದೇಶಿಸಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು.
  2. ಅಸ್ತಿತ್ವದಲ್ಲಿರುವ ಉದ್ಯಾನವನಗಳನ್ನು ನಿರ್ಮಾಣ ಕಾಮಗಾರಿಗಳಿಗೆ ಬಳಸುವುದನ್ನು ತಡೆಯಬೇಕು.
  3. ಯೋಜನೆಗಳಿಗೆ ಉದ್ಯಾನವನಗಳನ್ನು ಹೊರತುಪಡಿಸಿ ಪರ್ಯಾಯ ಜಾಗಗಳನ್ನು ಮೊದಲು ಪರಿಶೀಲಿಸಬೇಕು.
  4. ಹಸಿರು ಪ್ರದೇಶಗಳಿಗೆ ಸಂಬಂಧಿಸಿದ ಯೋಜನೆಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು.
  5. ಪರಿಸರ, ಸಾಮಾಜಿಕ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಯೋಜನೆಗಳ ಪರಿಣಾಮದ ಸಮಗ್ರ ಅಧ್ಯಯನ ನಡೆಸಬೇಕು.
  6. ನಗರ ಯೋಜನೆಯಲ್ಲಿ ಉದ್ಯಾನವನಗಳನ್ನು ಅತ್ಯಗತ್ಯ ಸಾರ್ವಜನಿಕ ಆಸ್ತಿಯಾಗಿ ಗುರುತಿಸಿ ರಕ್ಷಿಸಬೇಕು.

ಬೆಂಗಳೂರು ನಗರಕ್ಕೆ ಇನ್ನಷ್ಟು ಹಸಿರು ಪ್ರದೇಶಗಳ ಅಗತ್ಯವಿದೆ. ಇರುವ ಉದ್ಯಾನವನಗಳ ಜಾಗವನ್ನು ಕಡಿಮೆ ಮಾಡುವ ಬದಲು ಅವುಗಳನ್ನು ಮತ್ತಷ್ಟು ಸಂರಕ್ಷಿಸಿ ವಿಸ್ತರಿಸಬೇಕು ಎಂದು ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Continue Reading

Trending