ರಾಜಕೀಯ
ದ್ವೇಷದ ರಾಜಕಾರಣ ಬೇಡ, ಚಂದ್ರಶೇಖರ್ ಸ್ವಾಮೀಜಿ ಪ್ರಕರಣ ಕೈಬಿಡಿ ಎಂದು ಡಿ ಕೆ ಸುರೇಶ್
ಬೆಂಗಳೂರು: ಮುಸ್ಲಿಂ ಸಮುದಾಯವರಿಗೆ ಮತದಾನ ವಿಚಾರವಾಗಿ ಒಕ್ಕಲಿಗರ ಮಹಾಸಂಸ್ಧಾನ ಮಠಾಧೀಶ ಚಂದ್ರಶೇಖರ ಸ್ವಾಮೀಜಿ ನೀಡಿದ್ದ ಹೇಳಿಕೆ ವಿರುದ್ಧ ದಾಖಲಾದ ಪ್ರಕರಣ ಕೈಬಿಡಬೇಕು ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಅವರು ಸರ್ಕಾರಕ್ಕೆ ಮನವಿ ಮಾಡಿದರು,
ತಮ್ಮ ಹೇಳಿಕೆ ಕುರಿತಾಗಿ ಈಗಾಗಲೇ ಸ್ವಾಮೀಜಿ ಅವರು ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ, ಅದಾದ ಮೇಲೂ ದೂರು ದಾಖಲಿಸುವುದು, ದ್ವೇಷದ ರಾಜಕಾರಣ ಮಾಡುವುದು ಬೇಡ, ಯಾರು ಸಹ ದ್ವೇಷ ರಾಜಕಾರಣ ಮಾಡವುದು ಸಮಾಜಕ್ಕೆ ಒಳ್ಳೆಯದಲ್ಲ, ಸ್ವಾಮೀಜಿ ವಿರುದ್ಧವೂ ಕೂಡ ಈ ರೀತಿ ಯಾರು ದ್ವೇಷ ಭಾವನೆ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಡಿಕೆ ಸುರೇಶ್ ಅವರು ಅಭಿಪ್ರಾಯಪಟ್ಟರು,
ಸಂವಿಧಾನದಲ್ಲಿ ಎಲ್ಲಾ ಹಕ್ಕುಗಳನ್ನು ಕಲ್ಪಿಸಲಾಗಿದೆ, ಸ್ವಾಮೀಜಿಯವರು ಮಾತನಾಡುವಾಗ ನೀಡಿದ ಹೇಳಿಕೆಗೆ ತಪ್ಪಾಗಿದೆ ಎಂದು ವಿಷಾದಿಸಿದ್ದಾರೆ, ಹೀಗಿದ್ದೂ ದೂರು ದಾಖಲಾಗಿದ್ದು ಒಳ್ಳೆಯದಲ್ಲ, ದಯವಿಟ್ಟು ಇಲ್ಲಿಗೆ ಎಲ್ಲರೂ ಬಿಟ್ಟುಬಿಡಬೇಕು ಎಂದು ಅವರು ಪುನರಚ್ಛರಿಸಿದರು.
ದೇಶ
Karnataka SIR : ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸುಳ್ಳು ಮಾಹಿತಿ? ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು ಸಲ್ಲಿಕೆ
ಬೆಂಗಳೂರು, ಜು.8: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಸುಳ್ಳು ಹಾಗೂ ದಾರಿ ತಪ್ಪಿಸುವ ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಬಿಜೆಪಿ, ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಅಧಿಕೃತ ದೂರು ಸಲ್ಲಿಸಿದೆ.
ಬಿಜೆಪಿ ನೀಡಿರುವ ದೂರಿನಲ್ಲಿ, ಭಾರತೀಯ ಚುನಾವಣಾ ಆಯೋಗವು ಸಂವಿಧಾನದ ವಿಧಿ 324ರ ಅಡಿಯಲ್ಲಿ ಸ್ಥಾಪಿತವಾದ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಷ್ಕರಣೆ ಅದರ ಕಾನೂನುಬದ್ಧ ಕರ್ತವ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 15ರ ಅನ್ವಯ ಪ್ರತಿಯೊಂದು ಚುನಾವಣಾ ಕ್ಷೇತ್ರಕ್ಕೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರ ಆಯೋಗಕ್ಕಿದೆ ಎಂದು ತಿಳಿಸಲಾಗಿದೆ.
ಬಿಜೆಪಿ ಪ್ರಕಾರ, ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ನಿಖರವಾಗಿಡುವುದು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯನ್ನು ತಡೆಯುವುದು, ಮೃತಪಟ್ಟವರ ಹೆಸರನ್ನು ತೆಗೆದುಹಾಕುವುದು ಹಾಗೂ ಅನರ್ಹ ವ್ಯಕ್ತಿಗಳ ಹೆಸರು ಸೇರ್ಪಡೆಯಾಗದಂತೆ ನೋಡಿಕೊಳ್ಳುವುದಾಗಿದೆ.
ಆದರೆ ಕಾಂಗ್ರೆಸ್, ಬಿಜೆಪಿ ಪ್ರೇರಣೆಯಿಂದಲೇ SIR ಪ್ರಕ್ರಿಯೆ ನಡೆಯುತ್ತಿದೆ ಎಂದು ಕರಪತ್ರಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಆರೋಪ ಮಾಡುತ್ತಿದೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ. ಚುನಾವಣಾ ಆಯೋಗವು ಬಿಜೆಪಿ ಜೊತೆಗೂಡಿ ಮತದಾರರ ಹೆಸರುಗಳನ್ನು ತೆಗೆದುಹಾಕುತ್ತಿದೆ ಎಂಬ ಆರೋಪವು ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಬಿಜೆಪಿ ವಾದಿಸಿದೆ.
ಇಂತಹ ಸುಳ್ಳು ಮಾಹಿತಿಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗುವ ಸಾಧ್ಯತೆ ಇದ್ದು, ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಚುನಾವಣಾ ಸಿಬ್ಬಂದಿಯ ಸುರಕ್ಷತೆಗೂ ಅಪಾಯ ಎದುರಾಗಬಹುದು ಎಂದು ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, SIR ಪ್ರಕ್ರಿಯೆಗೆ ಅಡ್ಡಿಪಡಿಸದಂತೆ ಚುನಾವಣಾ ಆಯೋಗ ಕ್ರಮ ವಹಿಸಬೇಕೆಂದು ಬಿಜೆಪಿ ತನ್ನ ದೂರಿನಲ್ಲಿ ಆಗ್ರಹಿಸಿದೆ.
ಸೂಚನೆ: ಈ ಆರೋಪಗಳು ಬಿಜೆಪಿಯ ದೂರಿನಲ್ಲಿರುವ ಅಂಶಗಳಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಈ ಕುರಿತು ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ.
ದೇಶ
‘ಮೋದಿ ಒಂದೂವರೆ ಗಂಟೆ ನನಗೆ ಬುದ್ಧಿ ಹೇಳಿದರು’ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಕೇಂದ್ರ ಸಚಿವರಾಗಿದ್ದರೂ ರಾಜ್ಯ ರಾಜಕೀಯದಲ್ಲಿ ಮತ್ತೆ ಸಕ್ರಿಯರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆ ಕರ್ನಾಟಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಗ್ಗೆ ಹೇಳಿದ್ದ ಮಾತನ್ನು ಕುಮಾರಸ್ವಾಮಿ ಮತ್ತೊಮ್ಮೆ ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಟೀಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದ ಅವಧಿಯನ್ನು ನೆನಪಿಸಿಕೊಂಡರು. “ಪ್ರಧಾನಿ ಮೋದಿ ಅವರು ಒಂದೂವರೆ ಗಂಟೆ ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿದ್ದರು. ಕರ್ನಾಟಕಕ್ಕೆ ನಿಮ್ಮಲ್ಲಿ ಉತ್ತಮ ಆಡಳಿತದ ದೃಷ್ಟಿ ಇದೆ. ರಾಜೀನಾಮೆ ನೀಡಿ, ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎಂದು ಸಲಹೆ ನೀಡಿದ್ದರು. ಆದರೆ ನಾನು ಆ ಸಲಹೆಯನ್ನು ಒಪ್ಪಲಿಲ್ಲ” ಎಂದು ಅವರು ಹೇಳಿದರು.
ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮತ್ತಷ್ಟು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿರುವ ಹೊತ್ತಿನಲ್ಲಿ ಕುಮಾರಸ್ವಾಮಿ ನೀಡಿರುವ ಈ ಹೇಳಿಕೆಗೆ ವಿಶೇಷ ರಾಜಕೀಯ ಮಹತ್ವ ಸಿಕ್ಕಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದನ್ನು ಅವರು ಪುನರುಚ್ಚರಿಸಿರುವುದು ರಾಜ್ಯ ಬಿಜೆಪಿ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.
ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ವಿಚಾರ, ಒಳಜಗಳ ಹಾಗೂ ಸಂಘಟನಾ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತಿರುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೋ ಕೂಡ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಗಳು ಬಿಜೆಪಿ ಒಳಗಿನ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ-ಜೆಡಿಎಸ್ ಮೈತ್ರಿಯ ಭವಿಷ್ಯ, ನಾಯಕತ್ವ ಹಾಗೂ ಚುನಾವಣಾ ತಂತ್ರಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗಳು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದ ಪ್ರಮುಖ ಚರ್ಚೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಅವರ ಹೇಳಿಕೆಗಳು ಕಾಂಗ್ರೆಸ್ ವಿರುದ್ಧದ ರಾಜಕೀಯ ವಾಗ್ದಾಳಿಗಿಂತಲೂ ಮೈತ್ರಿ ರಾಜಕಾರಣದ ಸಂದೇಶವನ್ನೇ ಹೆಚ್ಚು ಪ್ರತಿಬಿಂಬಿಸುತ್ತಿವೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.
ದೇಶ
ರಾಮಮಂದಿರ ದೇಣಿಗೆ ಪ್ರಕರಣ ಸಿಬಿಐಗೆ ವಹಿಸಿ: ಮೋದಿ, ಅಮಿತ್ ಶಾ, ಯೋಗಿ ರಾಜೀನಾಮೆಗೆ ಕೆಪಿಸಿಸಿ ಆಗ್ರಹ
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ (KPCC) ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಐದು ಮಹತ್ವದ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಹಿಸಿದ್ದರು. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ₹10,000 ಕೋಟಿ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮೊದಲ ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗಗಳಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆ ಗಂಭೀರವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಇನ್ನೊಂದು ಪ್ರಮುಖ ನಿರ್ಣಯದಲ್ಲಿ ರಾಮಮಂದಿರ ದೇಣಿಗೆ ಹಾಗೂ ಹುಂಡಿ ಹಣದ ದುರ್ಬಳಕೆ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು. ಪ್ರಕರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಸಭೆ ನಿರ್ಣಯದಲ್ಲಿ ತಿಳಿಸಿತು. ಆರೋಪದಲ್ಲಿ ಭಾಗಿಯಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಇದರ ಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ನೇಮಕಗೊಂಡ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯ ಹಾಗೂ ಪಕ್ಷದ ಸಂಘಟನೆಗೆ ಸಂಬಂಧಿಸಿದ ಮತ್ತೊಂದು ಅಭಿನಂದನಾ ನಿರ್ಣಯವನ್ನೂ ಸಭೆ ಅಂಗೀಕರಿಸಿತು.
ಕೆಪಿಸಿಸಿ ಸಭೆಯಲ್ಲಿ ಕೈಗೊಂಡ ಈ ಐದು ನಿರ್ಣಯಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬರ ನಿರ್ವಹಣೆ ಹಾಗೂ ರಾಮಮಂದಿರ ದೇಣಿಗೆ ಪ್ರಕರಣದ ಕುರಿತಾಗಿ ಕಾಂಗ್ರೆಸ್ ತನ್ನ ಅಧಿಕೃತ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
-
ದೇಶ14 hours agoರಸ್ತೆ ಮಧ್ಯೆ ಹೆಡೆ ಎತ್ತಿ ನಿಂತ ನಾಗರಹಾವು: ಪ್ಯಾಲೇಸ್ ರಸ್ತೆಯಲ್ಲಿ ಅರ್ಧ ಗಂಟೆ ಸಂಚಾರ ಅಸ್ತವ್ಯಸ್ತ
-
ಅಪರಾಧ13 hours agoಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಮತ್ತೆ ರೌಡಿಗಳ ದಾಳಿ: ಫ್ಲೈ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ
-
ದೇಶ8 hours agoMLA ವಾಹನ ಬಳಕೆಗೆ ಹೊಸ ನಿಯಮ ಜಾರಿ; ವೇತನ, ಪಿಂಚಣಿಯಿಂದಲೇ ಶುಲ್ಕ ಕಡಿತ!
-
ದೇಶ18 hours agoಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡಿದರೆ ಕ್ರೆಡಿಟ್ ಕಾರ್ಡ್ ಬಂದ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
-
ದೇಶ13 hours ago‘ಮೋದಿ ಒಂದೂವರೆ ಗಂಟೆ ನನಗೆ ಬುದ್ಧಿ ಹೇಳಿದರು’ : ಎಚ್.ಡಿ.ಕುಮಾರಸ್ವಾಮಿ
-
ಅಪರಾಧ11 hours agoವೈರಲ್ ವಿಡಿಯೋ: ಲಾರಿ ಡಿಕ್ಕಿ ಹೊಡೆದರೂ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿನಿ
-
ದೇಶ14 hours agoಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್: ಬಾಡಿಗೆ ಒಪ್ಪಂದ ಇಲ್ಲದಿದ್ದರೂ ಉಚಿತ ವಿದ್ಯುತ್ ಪಡೆಯಬಹುದು!
-
ಕ್ರೀಡೆ10 hours agoಇಂಗ್ಲೆಂಡ್ ವಿರುದ್ಧ ಮುಖಭಂಗ; ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
