ದೇಶ

ಬೆಂಗಳೂರು 2 ನೇ ಏರ್‌ಪೋರ್ಟ್‌ಗೆ ಸರ್ವೆ; 6 ಸಾವಿರ ಎಕರೆ ಜಾಗದ ನಕ್ಷೆ ಸಿದ್ಧ! 23 ಹಳ್ಳಿ ರೈತರಿಗೆ ಆತಂಕ

ಬೆಂಗಳೂರು: ರಾಜಧಾನಿ ಬೆಂಗಳೂರು ಸಮೀಪದಲ್ಲೇ 2ನೇ ವಿಮಾನ ನಿಲ್ದಾಣ ನಿರ್ಮಿಸಲು ನೆಲಮಂಗಲ – ಕುಣಿಗಲ್‌ ರಾಷ್ಟ್ರೀಯ ಹೆದ್ದಾರಿ 75ರ ಸಮೀಪ ರಾಜ್ಯ ಸರ್ಕಾರ ಗುರುತಿಸಿರುವ 6 ಸಾವಿರ ಎಕರೆ ಜಾಗವನ್ನು ಹೆಲಿಕಾಪ್ಟರ್‌ ಮೂಲಕ ಡಿಜಿಟಲ್‌ ಸರ್ವೆ ನಡೆಸಿ ಪೂರ್ವ ನಿಯೋಜಿತ ಸ್ಥಳದ ನಕ್ಷೆ ತಯಾರಿಸಿದೆ. ಇದಕ್ಕೆ ಸ್ಥಳೀಯ ರೈತರ ವಿರೋಧ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದಷ್ಟೇ ಮಾಗಡಿಯ ಮೋಟಗೊಂಡನಹಳ್ಳಿ, ನೆಲಮಂಗಲ ಸೋಮಪುರದ ಯಂಟಗಾನಹಳ್ಳಿ ಹಾಗೂ ಸೋಲದೇವನಹಳ್ಳಿ ವ್ಯಾಪ್ತಿಯ ಮೂರು ಪಂಚಾಯಿತಿಗಳಲ್ಲಿ ಪರಿಸರ ಮಾಲಿನ್ಯ ಅಧಿಕಾರಿಗಳು ಮತ್ತು ಸರ್ವೆ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ಸ್ಥಳ ಸಮೀಕ್ಷೆ ನಡೆಸಿ ಅನೇಕ ಕಡೆಗಳಲ್ಲಿ ಎಸ್‌ಸಿಪಿ ಎಂಬ ಅಂಕಿಗಳ ಗುರುತು ಹಾಕಿತ್ತು.

ಹೆಲಿಕಾಪ್ಟರ್‌ನಲ್ಲಿ ಸರ್ವೆ

ಇದಾಗಿ ಕೆಲವು ದಿನ ಕಳೆಯುವುದರೊಳಗೆ ಅಂದರೆ ನಾಲ್ಕೈದು ದಿನಗಳಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ವ್ಯಾಪ್ತಿಯೊಳಗೆ ಬರುವ ಹಾಗೂ ಅರ್ಕಾವತಿ ಮತ್ತು ಕುಮಧ್ವತಿ ನದಿ ಪಾತ್ರಕ್ಕೆ ಸೇರುವ ಇದೇ ಜಾಗದಲ್ಲಿರುವ ಫಲವತ್ತಾದ ಕೃಷಿ ಭೂಮಿಯನ್ನು ಹೆಲಿಕಾಪ್ಟರ್‌ ಮೂಲಕ ಸರ್ವೇ ನಡೆಸಲಾಗುತ್ತಿದೆ.

ಎಲ್ಲೆಲ್ಲಿ 6 ಸಾವಿರ ಎಕರೆ ಜಾಗ?

ಸೋಲದೇವನಹಳ್ಳಿ, ಮೋಟಗಾನಹಳ್ಳಿ, ಯಂಟಗಾನಹಳ್ಳಿಯ 3 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 13 ಗ್ರಾಮಗಳು ಮತ್ತು 10ಕ್ಕೂ ಹೆಚ್ಚು ಹಳ್ಳಿಗಳ 6000 ಎಕರೆ ಪ್ರದೇಶ ವಿಮಾನ ನಿಲ್ದಾಣಕ್ಕೆ ಬಳಸುವ ಭೂಮಿಯ ವ್ಯಾಪ್ತಿಗೆ ಸೇರಿದೆ.

ಗುಟ್ಟು ಬಿಡದ ಅಧಿಕಾರಿಗಳು

ಸ್ಥಳ ಪರಿಶೀಲನೆ, ಹೆಲಿಕಾಪ್ಟರ್‌ ಸರ್ವೆ ಸೇರಿದಂತೆ ದಿನಕ್ಕೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳ ತಂಡ, ಈ ಸಂಬಂಧ ರೈತರಿಗೆ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಏಕೆ ಸರ್ವೆ ನಡೆಸುತ್ತಿದ್ದೀರಿ ಎಂಬ ರೈತರ ಪ್ರಶ್ನೆಗೆ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳ ಶಂಕಾಸ್ಪದ ನಡುವಳಿಕೆ ರೈತರಲ್ಲಿಆತಂಕ ಹೆಚ್ಚಲು ಕಾರಣವಾಗಿದೆ. ನೈಜ ಕಾರಣ ತಿಳಿಸುವಂತೆ ರೈತರು ಜನಪ್ರತಿನಿಧಿಗಳ ಹಿಂದೆ ಬಿದ್ದಿದ್ದಾರೆ.

ಸಿಎಂ, ಡಿಸಿಎಂ ಒಪ್ಪಿದ ಬಳಿಕ ಸರ್ವೆ

ದೇವನಹಳ್ಳಿ ವಿಮಾನ ನಿಲ್ದಾಣದ ಒತ್ತಡ ತಗ್ಗಿಸಲು ರಾಜಧಾನಿಯ ಸುತ್ತಮುತ್ತಲ ಬಿಡದಿ, ಹಾರೋಹಳ್ಳಿ, ದಾಬಸ್‌ಪೇಟೆ, ಶಿರಾ, ನೆಲಮಂಗಲ ವಯಾ ಮಾಗಡಿ ಮೂಲಕ ಹಾದು ಹೋಗುವ ಕುಣಿಗಲ್‌ ರಾಷ್ಟ್ರೀಯ ಹೆದ್ದಾರಿ ಸೇರಿ 5 ಜಾಗವನ್ನು ಬೃಹತ್‌ ಕೈಗಾರಿಕಾ ಸಚಿವಾಲಯ ಆಯ್ಕೆ ಮಾಡಿ ಸಚಿವ ಸಂಪುಟದ ಅನುಮೋದನೆ ಪಡೆದಿತ್ತು. ಅಂತಿಮವಾಗಿ ನೆಲಮಂಗಲ-ಕುಣಿಗಲ್‌ ರಾಷ್ಟ್ರೀಯ ಹೆದ್ದಾರಿ 75ರ ಜಾಗಕ್ಕೆ ಸಿಎಂ, ಡಿಸಿಎಂ ಇಬ್ಬರೂ ಸಹಮತ ಸೂಚಿಸಿದ ಬಳಿಕ ಸರ್ವೆ ಕಾರ್ಯ ನಡೆದಿದೆ.

ನಾನಾ ಯೋಜನೆಗಳು ಇಲ್ಲಿವೆ

ಸರ್ಕಾರ ಆಯ್ಕೆ ಮಾಡಿರುವ ಜಾಗದಲ್ಲಿಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಯೇ ಬೆಂಗಳೂರು-ಹಾಸನ, ಕುಕ್ಕೆಸುಬ್ರಹ್ಮಣ್ಯ ಮಾರ್ಗವಾಗಿ ಮಂಗಳೂರಿನ ರೈಲ್ವೆ ಹಳಿಗಳಿವೆ. ಇದರ ಜತೆಗೆ ಸೋಲೂರನ್ನು ಉಪನಗರ ಮಾಡುವ ನಿಟ್ಟಿನಲ್ಲಿಟೌನ್‌ಶಿಪ್‌ಗೆ ಆಯ್ಕೆಯಾಗಿದೆ. ಸಂಸದರಾದ ಡಾ. ಸಿ.ಎನ್‌. ಮಂಜುನಾಥ್‌ ಪೆರಿಫೆರಲ್‌ ರಿಂಗ್‌ ರೋಡ್‌ ಮಾಡುವ ಸಂಬಂಧ ಈಗಾಗಲೇ ಇದೇ ಜಾಗವನ್ನು ಆಯ್ಕೆ ಮಾಡಿಸಿದ್ದಾರೆ. ಇದೇ ಮಾರ್ಗದಲ್ಲಿ ಹೇಮಾವತಿ ನೀರಿನ ಪೈಪ್‌ಲೈನ್‌ಗಳ ಕಾಮಗಾರಿ ನಡೆಯಬೇಕಿದೆ.

ಯೋಜನೆ ಕೈಬಿಡಲು ಮನವಿ

ನೆಲಮಂಗಲ- ಕುಣಿಗಲ್‌ ರಸ್ತೆಯಲ್ಲಿ ಪ್ರಸ್ತಾಪಿಸಿರುವ ಎರಡನೇ ವಿಮಾನ ನಿಲ್ದಾಣ ಸರ್ವೆ ಕಾರ್ಯದ ಕುರಿತು ಈಗಾಗಲೇ ಮಾಹಿತಿ ತರಿಸಿಕೊಂಡಿದ್ದೇನೆ. ಫಲವತ್ತಾದ ಭೂಮಿಯಾಗಿರುವುದರಿಂದ ನಮಗೆ ವಿಮಾನ ನಿಲ್ದಾಣದ ಅವಶ್ಯಕತೆಗಿಂತ ರೈತರ ಹಿತವೇ ಮುಖ್ಯ. ಹೀಗಾಗಿ ಈ ಭಾಗದಲ್ಲಿ ವಿಮಾನ ನಿಲ್ದಾಣ ಯೋಜನೆ ಕೈ ಬಿಡುವಂತೆ ಸಿಎಂ ಮತ್ತು ಡಿಸಿಎಂ ಅವರಿಗೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ನೆಲಮಂಗಲ ಶಾಸಕ ಎನ್‌. ಶ್ರೀನಿವಾಸ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version