ಬೆಂಗಳೂರು
ಅಮಿತ್ ಶಾ ಭಾಷಣ ತಿರುಚಿ ಕಾಂಗ್ರೆಸ್ ಅಪಪ್ರಚಾರ: BL ಸಂತೋಷ್ ಎಂದಿಗೂ ಅಧಿಕಾರಕ್ಕೆ ಆಸೆಪಟ್ಟವರಲ್ಲ; ಎಚ್.ಡಿ ದೇವೇಗೌಡ
ಬೆಂಗಳೂರು: ಸಂಸತ್ ಅಧಿವೇಶನದಲ್ಲಿ ನಾನು ಅಮಿತ್ ಶಾ ಅವರ ಭಾಷಣ ಕೇಳಿದ್ದೇನೆ. ಕೇಂದ್ರ ಗೃಹ ಸಚಿವರ ಭಾಷಣ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಡಿಡಿ ಪಾಲ್ಗೋಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವದ ಹೆಸರಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಳ್ಳುತ್ತಿದೆ ಎಂದರೆ ದೇಶದ ಜನರು ತಲೆ ತಗ್ಗಿಸಬೇಕು ಹಾಗೆ ಮಾಡ್ತಾರೆ. ಅಧಿವೇಶನದಲ್ಲಿ ನಾನು ಅಮಿತ್ ಶಾ ಭಾಷಣ ಕೇಳಿದ್ದೇನೆ. ಗೃಹ ಸಚಿವ ಅಮಿತ್ ಶಾ ಭಾಷಣ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ ಎಂದು ಗರಂ ಆದರು.
ಅಟಲ್ ಜೀ ವಿರೋಧ ಪಕ್ಷದಲ್ಲಿ ಇದ್ದಾಗ ನಾನು ಅವರ ಭಾಷಣ ಕಾರಿನಲ್ಲಿ ಹೋಗುವಾಗ ಕೇಳ್ತಿದ್ದೆ. ಅಟಲ್ ಜೀ ಭಾಷಣ ಕೇಳಿ, ನಾನು ವಿರೋಧ ಪಕ್ಷ ನಾಯಕನಾದಾಗ ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳುತ್ತಿದ್ದೆ.
ಎಲ್ಲ ರಾಜ್ಯಗಳಲ್ಲಿ ಸುಶಾಸನ ದಿನಾಚರಣೆ ನಡೀತಾ ಇದೆ. ಅನಾರೋಗ್ಯ ಕಾರಣ ಕಾರ್ಯಕ್ರಮಕ್ಕೆ ಬರಲು ಆಗಲ್ಲ ಎಂದಿದ್ದೆ. ಆದ್ರೆ ತುಂಬ ಒತ್ತಾಯ ಮಾಡಿದ ಕಾರಣ ಬಂದೆ. ಅಟಲ್ ಅವರ ಹೆಸರಲ್ಲಿ ನಡೆಯುವ ಕಾರ್ಯಕ್ರಮ ತಪ್ಪಿಸಿಕೊಳ್ಳಬಾರದು ಎಂದು ಬಂದೆ. ಒಂದು ಗಂಟೆಗೂ ಹೆಚ್ಚುಕಾಲ ಸಂತೋಷ್ ಅವರು ಮಾತಾಡಿದ್ದಾರೆ. ಪ್ರಜಾಪ್ರಭುತ್ವ, ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಬಗ್ಗೆ ಮಾತಾಡಿದ್ದಾರೆ. ಅನಾವಶ್ಯಕ ಬಿಜೆಪಿ ಬಗ್ಗೆ ಟೀಕೆ ಮಾಡ್ತಾರೆ, ಆ ಎಲ್ಲ ವಿಷಯದ ಬಗ್ಗೆ ಮಾತಾಡಿದ್ದಾರೆ. ವಾಜಪೇಯಿ ಅವರ ಕೊಡುಗೆ ಬಗ್ಗೆ ಎಳೆಎಳೆಯಾಗಿ ಹೇಳಿದ್ದಾರೆ. ನಾನು ಆಳುವ ಪಕ್ಷದಲ್ಲಿದ್ದೆ, ವಾಜಪೇಯಿ ವಿಪಕ್ಷ ನಾಯಕ ಎಂದು ಮೆಲುಕು ಹಾಕಿದರು.
ಕರ್ನಾಟಕ ವಿಧಾನ ಸಭೆಯಲ್ಲಿ ವಿಪಕ್ಷ ನಾಯಕನಾಗಿ ನಾನು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳಲು ವಾಜಪೇಯಿ ಅವರ ಭಾಷಣ ಕೇಳ್ತಿದ್ದೆ. ವಾಜಪೇಯಿ ವಿಪಕ್ಷ ನಾಯಕನಾಗಿ ಹೇಗೆ ನಡೆದುಕೊಂಡ್ರು ಅನ್ನೋದನ್ನ ಎಲ್ಲರು ಓದಬೇಕು. ನಿಮ್ಮ ಹಿಂದಿ ಈ ದೇಶದ ಸಮಸ್ಯೆ ಬಗೆಹರಿಸಲ್ಲ ಎಂದು ನಾನು ಅವರಲ್ಲಿ ತಮಾಷೆ ಮಾಡ್ತಿದ್ದೆ, ಗ್ರೇಟ್ ಮ್ಯಾನ್. ಒಂದು ವೋಟ್ನಲ್ಲಿ 13 ತಿಂಗಳ ಸರ್ಕಾರ ಬಿತ್ತು. ಕಾಂಗ್ರೆಸ್ನವರು ಮಂತ್ರಿಯಾಗಿದ್ದವರನ್ನ ತಂದು ವೋಟ್ ಮಾಡಿಸಿದ್ದರು ಎಂದು ನೆನಪಿಸಿಕೊಂಡರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತುಗಳನ್ನು ಮೆಚ್ಚಿಕೊಂಡ ದೇವೇಗೌಡ, ಸಂತೋಷ್ ಅವರು ಯಾವುದೇ ಅಧಿಕಾರಕ್ಕೆ ಆಸೆಪಟ್ಟವರಲ್ಲ. ಕೇಂದ್ರ, ರಾಜ್ಯದಲ್ಲಿ ಮಂತ್ರಿ ಆಗಬೇಕು ಎಂದು ಆಸೆಪಟ್ಟವರಲ್ಲ. ನಿಸ್ವಾರ್ಥದಿಂದ ಪಕ್ಷ ಕಟ್ಟುತ್ತಿದ್ದಾರೆ ಎಂದರು.
ಮೊದಲ ಬಾರಿಗೆ ನಿಮ್ಮ ಭಾಷಣ ಕೇಳಿದ್ದೇನೆ. ಪ್ರಜಾಪ್ರಭುತ್ವದ ಬಗ್ಗೆ, ಮೋದಿ, ಶಾ ಅವರ ಬಗ್ಗೆ ಎದುರಾಳಿಗಳು ಮಾತನಾಡುತ್ತಾರೆ. ಅವರ ಮಾತು ಪೊಳ್ಳು. ಅದಕ್ಕೆ ಬೆಲೆ ಇಲ್ಲ ಎನ್ನುವುದನ್ನು ಜನರ ಮನ ಮುಟ್ಟುವಂತೆ ಮಾತಾಡಿದ್ದೀರಿ. ಮೊದಲ ಬಾರಿಗೆ ನಿಮ್ಮ ಜೊತೆ ನಾನು ವೇದಿಕೆ ಹಂಚಿಕೊಂಡಿದ್ದೇನೆ. ನಿಮ್ಮಲ್ಲಿ ಏನು ಶಕ್ತಿ ಇದೆ ಎಂದು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದರು.
ದೇಶ
Cockroach Janata Party ಗೆ ಬೆಂಗಳೂರು ಪೊಲೀಸರ ಶಾಕ್! ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಇದೀಗ Bengaluru City Police ದೊಡ್ಡ ಶಾಕ್ ನೀಡಿದೆ. ಮೇ 24ರಂದು ಟೌನ್ ಹಾಲ್ ಬಳಿ ಆಯೋಜಿಸಲು ಯೋಜಿಸಲಾಗಿದ್ದ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟ್ಗಳಲ್ಲಿ, ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ಬಳಿ ಮಾನವ ಸರಪಳಿ ನಿರ್ಮಿಸಲು ಕರೆ ನೀಡಲಾಗಿತ್ತು. ಆದರೆ ಈ ಸಂಬಂಧ ಯಾವುದೇ ಅಧಿಕೃತ ಮನವಿ ಪೊಲೀಸ್ ಇಲಾಖೆಗೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಅರ್ಜಿ ಸಲ್ಲಿಸಿದರೂ ಟೌನ್ ಹಾಲ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
Town Hall Bengaluru ಬಳಿ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆಗಳಿಗೆ ಅನುಮತಿ ನೀಡಬಾರದು ಎಂಬ High Court of Karnataka ಆದೇಶ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ Freedom Park ಹೊರತುಪಡಿಸಿ ನಗರದ ಬೇರೆ ಭಾಗಗಳಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು Abhijeet Dipke ಸ್ಥಾಪಿಸಿದ್ದು, ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಪಕ್ಷದ ಎಕ್ಸ್ ಖಾತೆ ಒಂದೇ ವಾರದಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಪಡೆದಿತ್ತು. ನಂತರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸೂಚನೆಯ ಮೇರೆಗೆ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ Surya Kant ಯುವಕರನ್ನು ‘ಜಿರಳೆ’ಗಳಿಗೆ ಹೋಲಿಸಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮೀಮ್ಸ್ ಮತ್ತು ಟ್ರೋಲಿಂಗ್ಗಳ ನಡುವೆ ‘ಕಾಕ್ರೋಚ್ ಜನತಾ ಪಾರ್ಟಿ’ ಟ್ರೆಂಡ್ ಆಗಿತ್ತು.
ಪಕ್ಷದ ಇನ್ಸ್ಟಾಗ್ರಾಮ್ ಖಾತೆಗೆ 5 ಮಿಲಿಯನ್ಗಿಂತ ಹೆಚ್ಚು ಫಾಲೋವರ್ಸ್ ಸೇರಿದ್ದು, ವೆಬ್ಸೈಟ್ನಲ್ಲಿ ಲಕ್ಷಾಂತರ ಮಂದಿ ನೋಂದಾಯಿಸಿಕೊಂಡಿದ್ದರು. ಇದೀಗ ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಹೊಸ ಚರ್ಚೆಗೆ ಕಾರಣವಾಗಿದೆ.
ದೇಶ
ತೈಲ ದರ ಮತ್ತೆ ಏರಿಕೆ! 10 ದಿನಗಳಲ್ಲಿ ಮೂರನೇ ಬಾರಿ ಶಾಕ್ ಕೊಟ್ಟ ಪೆಟ್ರೋಲ್-ಡೀಸೆಲ್
ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರ್ಗೆ 91 ಪೈಸೆವರೆಗೆ ಹೆಚ್ಚಿಸಿದ್ದು, ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ 10 ದಿನಗಳಲ್ಲಿ ಇದು ಮೂರನೇ ಬಾರಿಗೆ ಇಂಧನ ದರ ಏರಿಕೆಯಾಗಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಪರಿಷ್ಕೃತ ದರದ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 99.51 ರೂ.ಗೆ ಏರಿಕೆಯಾದರೆ, ಡೀಸೆಲ್ ದರ 92.49 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 108.09 ರೂ. ಹಾಗೂ ಡೀಸೆಲ್ ದರ 95.99 ರೂ. ಆಗಿದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈ ನಗರಗಳಲ್ಲಿಯೂ ಇಂಧನ ದರಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಮೇ 15ರಂದು ಪ್ರತಿ ಲೀಟರ್ಗೆ 3 ರೂ. ಏರಿಕೆ ಮಾಡಲಾಗಿತ್ತು. ಬಳಿಕ ಮೇ 19ರಂದು 90 ಪೈಸೆ ಹೆಚ್ಚಿಸಲಾಗಿದ್ದು, ಇದೀಗ ಮತ್ತೆ 91 ಪೈಸೆ ಏರಿಕೆ ಮಾಡಲಾಗಿದೆ. ಈ ಮೂಲಕ ಎರಡು ವಾರಗಳಲ್ಲಿ ಒಟ್ಟು 5 ರೂ.ವರೆಗೆ ಇಂಧನ ದರ ಏರಿಕೆಯಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಭಾರತ ತನ್ನ ಕಚ್ಚಾ ತೈಲದ ಅವಶ್ಯಕತೆಗಳ ಶೇ 85ರಷ್ಟು ಆಮದು ಮಾಡಿಕೊಳ್ಳುವುದರಿಂದ ಅಂತಾರಾಷ್ಟ್ರೀಯ ಬೆಲೆ ಏರಿಳಿತದ ನೇರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೆ ಬೀಳುತ್ತಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 104 ಡಾಲರ್ ದಾಟಿರುವುದು ತೈಲ ಕಂಪನಿಗಳ ಮೇಲೆ ಒತ್ತಡ ಹೆಚ್ಚಿಸಿದೆ.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದ್ದು, ಇದರ ಪರಿಣಾಮವಾಗಿ ದಿನನಿತ್ಯದ ವಸ್ತುಗಳ ಬೆಲೆಯಲ್ಲೂ ಏರಿಕೆ ಕಂಡುಬರುವ ಆತಂಕ ಎದುರಾಗಿದೆ.
ದೇಶ
ವಿಕಾಸ ದಶಕೋತ್ಸವ 2026: ಹಿರಿಯ ಪತ್ರಕರ್ತರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ
ತುಮಕೂರು/ಗುಬ್ಬಿ: ಸಮಾನ ಮನಸ್ಕ ಮಾಧ್ಯಮ ಮಿತ್ರರ ಸಂಘಟನೆಯಾದ ‘ವಿಕಾಸ’ ಸಂಸ್ಥೆ ತನ್ನ ಯಶಸ್ವಿ ಹತ್ತು ವರ್ಷಗಳ ಪಯಣವನ್ನು ಸಂಭ್ರಮಿಸುವ ಅಂಗವಾಗಿ ‘ವಿಕಾಸ ದಶಕದ ಸಂಭ್ರಮ: 2026’ ಹಾಗೂ ತುಮಕೂರು ಜಿಲ್ಲಾ ಸಮಾವೇಶವನ್ನು ಆಯೋಜಿಸಿದೆ. ಮೇ 24, 2026ರ ಭಾನುವಾರ ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಗುಬ್ಬಿಯ ಪ್ರಸಿದ್ಧ ಶ್ರೀ ಚಿದಂಬರ ಆಶ್ರಮದ ಆವರಣದಲ್ಲಿ ಈ ಭವ್ಯ ಸಮಾವೇಶ ನಡೆಯಲಿದೆ ಎಂದು ತುಮಕೂರು ಜಿಲ್ಲಾ ಸಂಚಾಲಕರಾದ ಭಾರತೀಶ ರಾವ್ ಹೊನ್ನಾಳಿ ಹಾಗೂ ಸುರೇಶ್ ವತ್ಸ ತಿಳಿಸಿದ್ದಾರೆ.
ಕಳೆದ ಒಂದು ದಶಕದಿಂದ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ‘ವಿಕಾಸ’ ಸಂಸ್ಥೆ, ರಾಜ್ಯದ ವಿವಿಧ ಜಿಲ್ಲೆಗಳ ಮಾಧ್ಯಮ ಮಿತ್ರರನ್ನು ಒಂದೇ ವೇದಿಕೆಗೆ ತರಲು ಯಶಸ್ವಿಯಾಗಿದೆ. ಪತ್ರಿಕೋದ್ಯಮ, ಡಿಜಿಟಲ್ ಮೀಡಿಯಾ, ವ್ಯಂಗ್ಯಚಿತ್ರ, ವರದಿಗಾರಿಕೆ ಸೇರಿದಂತೆ ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರನ್ನು ಒಗ್ಗೂಡಿಸಿ ಕ್ರಿಯಾಶೀಲ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂಸ್ಥೆಯ ವಿಶೇಷತೆ.
ಗಣ್ಯರಿಂದ ಉದ್ಘಾಟನೆ
ವಿಕಾಸದ ಗೌರವಾಧ್ಯಕ್ಷ ಬಿ.ಎಲ್. ಹನುಮಂತ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾವೇಶವನ್ನು ಖ್ಯಾತ ವೈದಿಕ ಜ್ಯೋತಿಷಿ ಹಾಗೂ ರಾಜಗುರು ದ್ವಾರಕಾನಾಥ ಗುರೂಜಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸೊಗಡು ಶಿವಣ್ಣ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಎಸ್.ಆರ್. ಶ್ರೀನಿವಾಸ್ (ವಾಸು), ವಿಜಯವಾಣಿ ಹಿರಿಯ ಉಪ ಪ್ರಧಾನ ಸಂಪಾದಕ ರಾಘವೇಂದ್ರ ಗಣಪತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ಎಂಎಲ್ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರ, ಖ್ಯಾತ ವಾಗ್ಮಿ ವೈ.ವಿ. ಗುಂಡುರಾವ್, ಆರ್ಟ್ ಆಫ್ ಲಿವಿಂಗ್ ಟ್ರಸ್ಟಿ ರಂಗನಾಥ ಪ್ರಸಾದ್, ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ ಹಾಗೂ ಗುಬ್ಬಿ ಶ್ರೀ ಚಿದಂಬರ ಆಶ್ರಮದ ಅಧ್ಯಕ್ಷ ಸಚ್ಚಿದಾನಂದ ಶರ್ಮಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿಶೇಷ ಉಪನ್ಯಾಸ ಮತ್ತು ಚರ್ಚಾಗೋಷ್ಠಿ
ಸಮಾವೇಶದ ಅಂಗವಾಗಿ ‘ಆಧುನಿಕ ಸಮಾಜಕ್ಕೆ ಮನುಸ್ಮೃತಿಯ ಅವಶ್ಯಕತೆ’ ವಿಷಯದ ಕುರಿತು ಡಾ. ರಾಘವೇಂದ್ರ ಭಟ್ಟ ಉಪನ್ಯಾಸ ನೀಡಲಿದ್ದು, ಆರ್ಎಸ್ಎಸ್ ಹಿರಿಯ ಪ್ರಚಾರಕ ಮಂಜುನಾಥ ಸ್ವಾಮಿ ಉಪಸ್ಥಿತರಿರಲಿದ್ದಾರೆ.
ಇನ್ನೊಂದು ವಿಶೇಷ ಚರ್ಚಾಗೋಷ್ಠಿಯಲ್ಲಿ ‘ಮಾಧ್ಯಮ ಕ್ಷೇತ್ರದ ಭವಿಷ್ಯ’ ಕುರಿತು ಡಾ. ಆಶಾ ಕೃಷ್ಣಸ್ವಾಮಿ, ಡಾ. ನಂದಿನಿ ಲಕ್ಷ್ಮೀಕಾಂತ್ ಹಾಗೂ ಉದಯ ಕಾಲ ದಿನಪತ್ರಿಕೆಯ ಕಾರ್ಯಕಾರಿ ಸಂಪಾದಕ ಪಿ. ರಾಜೇಂದ್ರ ವಿಚಾರ ಮಂಡನೆ ನಡೆಸಲಿದ್ದಾರೆ.
ಹಿರಿಯ ಪತ್ರಕರ್ತರಿಗೆ ಸನ್ಮಾನ
‘ನಮ್ಮ ಹಿರಿಯರು – ನಮ್ಮ ಹೆಮ್ಮೆ’ ಕಾರ್ಯಕ್ರಮದಡಿ ಹಿರಿಯ ವ್ಯಂಗ್ಯಚಿತ್ರಕಾರ ರಘುಪತಿ ಶೃಂಗೇರಿ, ಶ್ರೀಧರ್ ಕೋಮರವಳ್ಳಿ, ಅಂಕಣಕಾರ ತುರುವೇಕೆರೆ ಪ್ರಸಾದ್, ಹಿರಿಯ ಪತ್ರಕರ್ತರಾದ ಕರ್ಣಂ ರಮೇಶ್, ಸೊಗಡು ಸತ್ಯಣ್ಣ, ಆರ್. ಲಕ್ಷ್ಮಣ್, ಸಿ.ಟಿ. ಜೋಶಿ, ಜಿ.ಎಂ. ಜಗನ್ನಾಥ್, ಎಸ್.ಎನ್. ರಾಜಗೋಪಾಲ್ ಸೇರಿದಂತೆ ಹಲವು ಮಾಧ್ಯಮ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುತ್ತದೆ.
ವಿಕಾಸ ಸ್ಮಾರಕ ಪ್ರಶಸ್ತಿ ಪ್ರದಾನ
‘ವಿಕಾಸ ಸ್ಮಾರಕ ಪ್ರಶಸ್ತಿ – 2026’ಗೆ ಕೆ.ಬಿ. ಚಂದ್ರಮೌಳಿ, ಎಸ್.ಎನ್. ಪ್ರಸನ್ನ ಮೂರ್ತಿ, ವಾಸುದೇವ ಜಹಗೀರದಾರ್, ಕೃಷ್ಣಮೂರ್ತಿ ಚಿ.ಸು., ಸಿ.ಡಿ. ರವಿ, ಆರ್.ಎಸ್. ಅಯ್ಯರ್, ಎನ್.ಎಸ್. ಮಾರುತಿ ಪ್ರಸಾದ್, ಭಾನುಪ್ರಶಾಂತ, ಶ್ರೀನಿವಾಸ್ ಮೂರ್ತಿ, ಗುರುದತ್ತ ಹಾಗೂ ನಾಗಭೂಷಣ ಎಸ್. ಆಯ್ಕೆಯಾಗಿದ್ದಾರೆ.
ಇದೇ ವೇಳೆ ಲೇಖಕ ಪ್ರಕಾಶ್ ನಾಡಿಗ್ ಅವರಿಗೆ ‘ದಿ. ಸುಬ್ಬರಾಯರು ಸ್ಮಾರಕ ವಿಕಾಸ ಪ್ರಶಸ್ತಿ – 2025’ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎನ್. ವೆಂಕಟನಾರಾಯಣ, ವಾಮಾನಾಚಾರ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ. ಎಸ್. ಸುದರ್ಶನ್ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಕಾರ್ಯಕ್ರಮದ ಯಶಸ್ಸಿಗಾಗಿ ವಿಕಾಸದ ಪ್ರಧಾನ ಸಂಚಾಲಕ ಬಿ.ವಿ. ಗೋಪಿನಾಥ್, ರಾಜ್ಯಾಧ್ಯಕ್ಷ ಶ್ರೀನಾಥ್ ಜೋಶಿ, ಹಿರಿಯ ಉಪಾಧ್ಯಕ್ಷ ಬಿ.ಎನ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಹನುಮೇಶ್ ಕೆ. ಯಾವಗಲ್, ಖಜಾಂಚಿ ಬಿ.ಎನ್. ಮುರಳಿ ಪ್ರಸಾದ್, ಕಾರ್ಯದರ್ಶಿ ಗೋದಾವರಿ ಡಿ.ಎಸ್. ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
-
ದೇಶ23 hours agoCockroach Janata Party ಗೆ ಬೆಂಗಳೂರು ಪೊಲೀಸರ ಶಾಕ್! ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ
-
ದೇಶ23 hours agoಮೋದಿ ಸರ್ಕಾರದ 2025 ರಿಪೋರ್ಟ್ ಕಾರ್ಡ್ ಬಿಡುಗಡೆ! ಯಾವ ಸಚಿವಾಲಯ ಟಾಪ್, ಯಾವುದು ಹಿಂದುಳಿತು?
-
ಕ್ರೀಡೆ23 hours agoಕೃಣಾಲ್ ಪಾಂಡ್ಯ ಬೌಲಿಂಗ್ಗೆ ಕಾವ್ಯ ಮಾರನ್ ಆಕ್ಷೇಪ? ವೈರಲ್ ಆಯ್ತು SRH ಮಾಲಕಿಯ ರಿಯಾಕ್ಷನ್
-
ದೇಶ24 hours agoಲಡಾಖ್ನಲ್ಲಿ ಸೇನಾ ಹೆಲಿಕಾಪ್ಟರ್ ಪತನ! ಕೂದಲೆಳೆ ಅಂತರದಲ್ಲಿ ಪಾರಾದ ಅಧಿಕಾರಿಗಳ ಸೆಲ್ಫಿ ವೈರಲ್
