ರಾಜಕೀಯ

ನಾವೇ ರಾಜ್ಯಕ್ಕೆ ಬರಬೇಕೇ? ಶೀಘ್ರವೇ ಎಲ್ಲದ್ದಕ್ಕೂ ಬ್ರೇಕ್‌ – ಡಿಕೆಶಿಗೆ ಹೈಕಮಾಂಡ್‌ ಹೇಳಿದ್ದೇನು?

ಬೆಂಗಳೂರು: ಎರಡು ವಾರದ ಒಳಗಡೆ ಎಲ್ಲಾ ಗೊಂದಲಗಳನ್ನು ಬಗೆ ಹರಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಕಾಂಗ್ರೆಸ್‌ ಹೈಕಮಾಂಡ್‌ ಭರವಸೆ ನೀಡಿದೆ.

ವಿದೇಶ ಪ್ರವಾಸ ಮುಗಿಸಿ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಡಿಕೆ ಶಿವಕುಮಾರ್‌ ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭೇಟಿ ಮಾಡಿ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಕ್ಕೆ ತಂದಿದ್ದಾರೆ. ಈ ಭೇಟಿಯ ಬಳಿಕ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಸೂಚನೆ ಮೇರೆಗೆ ಪರಮೇಶ್ವರ್‌ ಅವರು ತಾವು ಆಯೋಜನೆ ಮಾಡಿದ್ದ ಡಿನ್ನರ್‌ ಮುಂದೂಡಿದ್ದಾರೆ.

ಶೀಘ್ರವೇ ಎಲ್ಲದ್ದಕ್ಕೂ ಬ್ರೇಕ್‌ ಹಾಕುತ್ತೇವೆ. ನಾವು ರಾಜ್ಯಕ್ಕೆ ಬರಬೇಕಾ? ಅಥವಾ ದೆಹಲಿಗೆ ನಾಯಕರನ್ನು ಕರೆಸಿಕೊಳ್ಳಬೇಕಾ ಎಂಬುದನ್ನು ನಿರ್ಧರಿಸುತ್ತೇವೆ. ಎರಡು ವಾರದೊಳಗೆ ಎಲ್ಲಾ ಗೊಂದಲ ಬಗೆಹರಿಸುತ್ತೇವೆ ಎಂಬ ಭರವಸೆಯನ್ನು ಹೈಕಮಾಂಡ್‌ ನೀಡಿದೆ ಎನ್ನಲಾಗುತ್ತಿದೆ.

ಡಿಕೆಶಿ ದೂರು:
ಡಿಕೆಶಿ ವಿದೇಶ ಪ್ರವಾಸ ಕೈಗೊಂಡಿದ್ದಾಗಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಆಪ್ತರ ಜೊತೆ ಡಿನ್ನರ್ ಪಾಲಿಟಿಕ್ಸ್ (Dinner Politics) ನಡೆಸಿದ್ದರು. ಕನಕ ಜಯಂತಿ ನೆಪದಲ್ಲಿ ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಬಲ ಪ್ರದರ್ಶನ ಮಾಡಿದ್ದರು.

ವಿದೇಶದಿಂದ ಭಾರತಕ್ಕೆ ವಾಪಸ್ಸಾಗಿ 2 ದಿನ ಕಳೆದರೂ ಬೆಂಗಳೂರಿನತ್ತ ಮುಖ ಮಾಡದೇ ಇದ್ದ ಡಿಕೆಶಿ ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭೇಟಿ ಮಾಡಿ ಸಿಎಂ ಬಣದ ನಡೆಯನ್ನು ಆಕ್ಷೇಪಿಸಿದ್ದರು. ನಾನು ವಿದೇಶಕ್ಕೆ ಹೋಗಿದ್ದಾಗ ಸಿಎಂ ಬಣ ಸಭೆ ಮಾಡಿದ್ದಾರೆ. ಡಿನ್ನರ್ ಹೆಸರಲ್ಲಿ ಪ್ರತ್ಯೇಕ ಸಭೆ ಮಾಡಿದ್ದು ಸರಿಯಲ್ಲ. ಡಿನ್ನರ್ ಮೀಟಿಂಗ್ ಬಗ್ಗೆ ತರಹೇವಾರಿ ಸುದ್ದಿ ಹಬ್ಬಿದೆ. ಡಿನ್ನರ್ ರಾಜಕೀಯದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಇಂತಹ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಬೇಕು. ನಾನು ಡಿನ್ನರ್ ಪಾಲಿಟಿಕ್ಸ್ ಮಾಡಿದರೆ ಬೇರೆ ಸಂದೇಶ ಹೋಗುತ್ತದೆ. ಪಕ್ಷದ ಅಧ್ಯಕ್ಷನಾಗಿ ಪಕ್ಷದ ಶಿಸ್ತು ಮುಖ್ಯ ಎಂದು ಸುಮ್ಮನಿದ್ದೇನೆ ಎಂದು ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

Trending

Exit mobile version