Connect with us

ಬೆಂಗಳೂರು

ಕನ್ನಡದ ಒಂದೇ ಒಂದು ಸಿನಿಮಾ (Cinema) ಹಿಟ್ ಲಿಸ್ಟ್ ಸೇರಿಲ್ಲ Special Report

Published

on

ಕನ್ನಡದ ಮಾರ್ಕೆಟ್ ನ ಕಬ್ಜಾ ಮಾಡ್ಕೊತಿದ್ದಾವಾ ಪರಭಾಷೆ ಸಿನಿಮಾಗಳು? ಮಲಯಾಳಂ ಸಿನಿಮಾಗಳು (Malayalam Cinema) ಗಳಿಸ್ತಿವೆ ಕೋಟಿ ಕೋಟಿ ಹಣ? ಈ ವರ್ಷ ಕನ್ನಡದ ಒಂದೇ ಒಂದು ಸಿನಿಮಾ (Cinema) ಹಿಟ್ ಲಿಸ್ಟ್ ಸೇರಿಲ್ಲ. ಆ ಕುರಿತ ಆ ಸ್ಪೆಷಲ್ ರಿಪೋರ್ಟ್ ಇಲ್ಲಿದೆ .

ಕನ್ನಡ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮ. ಈ ಮಾತು ಸಿನಿಮಾ ವಿಚಾರದಲ್ಲಿ ಸುಳ್ಳಾಗ್ತಿದೆ. ಕನ್ನಡಿಗರು ಕನ್ನಡ ಸಿನಿಮಾಗಳತ್ತ ಬೆನ್ನು ಮಾಡಿ ಕೂತಿದ್ದಾರೆ. ಅದರಲ್ಲೂ ಥಿಯೇಟರಿಗೆ ಬರಲು ಜಪ್ಪಯ್ಯ ಅಂದ್ರೂ ಒಪ್ಪುತ್ತಿಲ್ಲ ಕನ್ನಡ ಸಿನಿರಸಿಕರು.

ಪರಿಣಾಮ ಈ ವರ್ಷ ಶುರುವಾಗಿ ನಾಲ್ಕು ತಿಂಗಳಾದ್ರೂ ಒಂದೇ ಒಂದು ಕನ್ನಡ ಸಿನಿಮಾ ಹಿಟ್ ಲಿಸ್ಟ್ ಸೇರಿಲ್ಲ. ಬಾಕ್ಸಾಫೀಸ್ ನಲ್ಲಿ ಝಣ ಝಣ ಕಾಂಚಾಣ ಎಣಿಸಿಲ್ಲ.

ಹೌದು, 2025 ಸ್ಯಾಂಡಲ್ ವುಡ್ ಪಾಲಿಗೆ ದುಸ್ವಪ್ನವಾಗಿದೆ. ಎಷ್ಟು ಒಳ್ಳೆಯ ಸಿನಿಮಾ ಕೊಟ್ರೂ ಜನ ಬರ್ತಿಲ್ಲ. ಇನ್ನೆಂಥ ಸಿನಿಮಾ ಕೊಡಬೇಕು ಗುರು ಅಂತ ಸಿನಿಮಾ ಮಂದಿ ತಲೆ ಕೆರೆದುಕೊಳ್ಳುವಂತೆ ಮಾಡಿದೆ.

ಜನವರಿಯಿಂದ ಏಪ್ರಿಲ್ ಕೊನೆಯ ತನಕ ಕನ್ನಡದ 80 ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಛೂಮಂತರ್, ಯುದ್ಧಕಾಂಡ, ಫಾರೆಸ್ಟ್ ನಂತಹ ಸಿನಿಮಾಗಳು ಪಾಸಿಟಿವ್ ರಿಪೋರ್ಟ್ ಪಡ್ಕೊಂಡಿವೆ. ಪರ್ವಾಗಿಲ್ಲ ಒಮ್ಮೆ ನೋಡಬಹುದು ಎಂಬ ಟಾಕ್ ಪಡ್ಕೊಂಡಿವೆ.. ಆದ್ರೆ ರಿಸಲ್ಟ್ ಮಾತ್ರ ಶೂನ್ಯ.

ಅತ್ಯಧಿಕ ಗಳಿಕೆಯೇ 6 ಕೋಟಿಯಾ?

ಕನ್ನಡದ ಸಿನಿಮಾವೊಂದು ಈ ವರ್ಷ ಹೈಯೆಸ್ಟ್ ಗಳಿಕೆ ಕಂಡಿದೆ ಅಂದ್ರೆ? ಅದು ಶರಣ್ ನಟನೆಯ ಛೂಮಂತರ್ ಸಿನಿಮಾ. ಈ ಸಿನಿಮಾ 5 ರಿಂದ 6 ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಇದುವೆ ಈ ವರ್ಷದ ಹೈಯೆಸ್ಟ್ ಗಳಿಕೆ ಇಲ್ಲಿತನಕ ಅಂದ್ರೆ? ಅದು ನಿಜಕ್ಕೂ ದುರಂತವೇ ಸರಿ.

ಕನ್ನಡ ಸಿನಿಮಾಗಳ ಕಡೆ ಮಾತ್ರ ಯಾಕೆ ನಿರಾಸಕ್ತಿ?

ಇದು ಕನ್ನಡ ನೆಲದಲ್ಲಿ ಕನ್ನಡ ಸಿನಿಮಾಗಳಿಗೆ ಮಾತ್ರ ನಿರಾಸಕ್ತಿ. ಆದ್ರೆ ಇದೇ ಕನ್ನಡ ಮಣ್ಣಲ್ಲಿ ಪರಭಾಷೆಯ ಸಿನಿಮಾಗಳು ಕೋಟಿ ಕೋಟಿಯನ್ನ ಲೂಟಿ ಮಾಡ್ತಾ ಇವೆ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ? ಮೋಹನ್ ಲಾಲ್ ನಟನೆಯ ಎಂಪುರಾನ್ ಸಿನಿಮಾ.. ಈ ಸಿನಿಮಾ ಬಗ್ಗೆ ಅಂತಹ ಪಾಸಿಟಿವ್ ಟಾಕ್ ಏನು ಕೇಳಿ ಬರಲಿಲ್ಲ.. ನೋಡಿದವರೆಲ್ಲಾ ಬಯ್ಕೊಂಡೇ ಆಚೆ ಬಂದ್ರು.. ಆದ್ರೂ ಸಹ ಈ ಸಿನಿಮಾ ಕರ್ನಾಟಕದಲ್ಲಿಯೇ 15 ಕೋಟಿ ಹಣ ಗಳಿಸಿದೆ.. ಹಂಗಂತ ಕೇವಲ ಮಲಯಾಳಿಗಳು ಮಾತ್ರ ಈ ಸಿನಿಮಾವನ್ನ ನೋಡಿಲ್ಲ.. ಕನ್ನಡಿಗರು ಸಹ ಮುಗಿಬಿದ್ದು ನೋಡಿದ್ದಾರೆ.

ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ ಪರಭಾಷೆ ಸಿನಿಮಾ

ಅಷ್ಟೇ ಅಲ್ಲದೆ ರಿಸೆಂಟಾಗಿ ಬಿಡುಗಡೆಯಾದ ತುಡರುಮ್ ಎಂಬ ಸಿನಿಮಾ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಬಿಡುಗಡೆಯಾದ 9 ದಿನಗಳಾದ್ರೂ ಸಹ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

ಬೆಂಗಳೂರಿನಲ್ಲಿಯೇ ತುಡರುಮ್ ಮಲಯಾಳಂ ವರ್ಷನ್ 300 ಪ್ಲಸ್ ಶೋ ಪ್ರದರ್ಶನ ಕಾಣ್ತಿದೆ. ಅಷ್ಟೂ ಶೋಸ್ ಫಾಸ್ಟ್ ಫಿಲ್ಲಿಂಗ್ ಆಗ್ತಿವೆ ಅಂದ್ರೆ? ಕರ್ನಾಟಕ ನೆಲದಲ್ಲಿ ಪರಭಾಷೆ ಸಿನಿಮಾಗಳ ಅಬ್ಬರ ಹೇಗಿದೆ ಎಂಬುದಕ್ಕೆ ಸಾಕ್ಷಿ.

ಕನ್ನಡ ಸಿನಿಮಾಗೆ ಮಾತ್ರ ನೀರಸ ಪ್ರತಿಕ್ರಿಯೆ

ಹಾಗೆ ಅಜಿತ್ ನಟನೆಯ ಗುಡ್ ಬ್ಯಾಡ್ ಅಗ್ಲಿ, ವೆಂಕಟೇಶ್ ನಟನೆಯ ಸಂಕ್ರಾತಿಕಿ ವಸ್ತುನ್ನಾಮ್, ನಾನಿ ನಟನೆಯ ಹಿಟ್3 ಸಿನಿಮಾಗಳು ಸಹ ಕರ್ನಾಟಕದಲ್ಲಿ ಒಳ್ಳೆಯ ಗಳಿಕೆಯನ್ನ ಕಾಣ್ತಿವೆ.. ಆದ್ರೆ ಕನ್ನಡ ಸಿನಿಮಾಗಳು ಮಾತ್ರ ಯಾವುದೇ ಪೈಪೋಟಿಯನ್ನ ಕೊಡಲಾಗದೆ ನೀರಸ ಪ್ರತಿಕ್ರಿಯೆಯನ್ನ ಪಡ್ಕೊಳ್ತಿವೆ.

ಕರ್ನಾಟಕದ ಎಷ್ಟೋ ಸಿನಿಮಾ ಮಂದಿರಗಳು ಹಾಕಲು ಒಳ್ಳೆಯ ಕನ್ನಡ ಸಿನಿಮಾಗಳಿಲ್ಲದೆ. ಅನಿವಾರ್ಯವಾಗಿ ಪರಭಾಷೆ ಸಿನಿಮಾಗಳಿಗೆ ಮಣೆ ಹಾಕುವ ನಿರ್ಧಾರಕ್ಕೆ ಬಂದಿವೆ.. ಇಷ್ಟೆಲ್ಲಾ ಆದ್ರೂ ಸಹ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಾಗಲಿ, ಕಲಾವಿದರ ಸಂಘವಾಗಲಿ, ನಿರ್ಮಾಪಕರ ಸಂಘವಾಗಲಿ ಮುಂದೇನು ಮಾಡಬೇಕು ಎಂಬ ಚಿಂತನೆ ನಡೆಸಿದಂತೆ ಇಲ್ಲ.

ಕನ್ನಡ ಸಿನಿಮಾಗಳ ಈ ಸ್ಥಿತಿಗೆ ಈ ಗತಿಗೆ ಪ್ಯಾನ್ ಇಂಡಿಯಾ ಎಂಬ ಟ್ರೆಂಡ್ ನ ಹಿಂದೆ ಬಿದ್ದಿದ್ದೇ ಕಾರಣ. ಸ್ಟಾರ್ ನಟರು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡ್ಕಂಡು ಕಾಲಹರಣ ಮಾಡ್ತಿರೋದೆ ಕಾರಣ ಎಂಬುದು ಸಿನಿರಂಗದಲ್ಲಿಯೇ ಕೇಳಿ ಬರ್ತಿರೋ ಅಪಸ್ವರ. ಸದ್ಯಕ್ಕಂತೂ ಕನ್ನಡ ಚಿತ್ರರಂಗಕ್ಕೆ ಯಾವುದೇ ಆಶಕಿರಣ ಕಾಣಿಸ್ತಾ ಇಲ್ಲ. ಸದ್ಯದ ಪರಿಸ್ಥಿತಿ ಕಂಡು ದೊಡ್ಡ ದೊಡ್ಡವರೇ ಹೆದರುವಂತಹ ಪರಿಸ್ತಿತಿ ಇದೆ. ಹಾಗೆ ಕನ್ನಡ ಸಿನಿಮಾಗಳು ಅಂದ್ರೆ ಸ್ಯಾಟ್ ಲೈಟ್ ರೈಟ್ಸ್ ಸೇಲಾಗ್ತಿಲ್ಲ. ಒಟಿಟಿಗೆ ಕೇಳೋರೆ ಇಲ್ಲ.

ಹಿಂಗಾದ್ರೆ ಹೆಂಗೆ ಗುರು? ಇದಕ್ಕೆ ಶಾಸ್ವತ ಪರಿಹಾರ ಕಂಡು ಹಿಡಿಯೋ ನಿಟ್ಟಿನಲ್ಲಿ ಚಿತ್ರರಂಗ ಒಮ್ಮತದಿಂದ ಕಾರ್ಯಕ್ರಮವನ್ನ ರೂಪಿಸಬೇಕಿದೆ.

ದೇಶ

ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ: ಸಿದ್ದರಾಮಯ್ಯ ಸ್ಪಷ್ಟನೆ

Published

on

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಲೋಕಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹೈಕಮಾಂಡ್ ಹೇಳಿದ ತಕ್ಷಣ ನಾನು ರಾಜೀನಾಮೆ ನೀಡುವುದಾಗಿ ಮೊದಲೇ ಹೇಳಿದ್ದೆ. ಅದರಂತೆಯೇ ಇಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದೇನೆ” ಎಂದರು.

ರಾಜೀನಾಮೆ ಪ್ರಕ್ರಿಯೆ ಕುರಿತು ವಿವರಿಸಿದ ಸಿದ್ದರಾಮಯ್ಯ, “ನಾನು ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡಲು ಹೋದೆ. ಆದರೆ ರಾಜ್ಯಪಾಲರು ಸದ್ಯ ನಗರದಲ್ಲಿ ಇರಲಿಲ್ಲ. ಅವರು ಇಂದು ರಾತ್ರಿ ವಾಪಸ್ ಬರುತ್ತಾರೆ ಎಂದು ಕಚೇರಿಯಲ್ಲಿ ತಿಳಿಸಿದರು. ಹೀಗಾಗಿ ಅವರ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದ್ದೇನೆ. ರಾಜ್ಯಪಾಲರು ಬಂದ ಬಳಿಕ ಸಂವಿಧಾನಾತ್ಮಕವಾಗಿ ಅದನ್ನು ಅಂಗೀಕರಿಸಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ರಾಜ್ಯದ ರಾಜಕೀಯ ಸ್ಥಿತಿಗತಿ ಬಗ್ಗೆ ಮಾತನಾಡಿದ ಅವರು, “ನಮ್ಮ ಪಕ್ಷಕ್ಕೆ 135ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ. ಇಬ್ಬರು ಪಕ್ಷೇತರ ಶಾಸಕರೂ ನಮ್ಮೊಂದಿಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಹೊಂದಿದ್ದು ಯಾವುದೇ ಗೊಂದಲವಿಲ್ಲದೆ ಮುಂದಿನ ಮುಖ್ಯಮಂತ್ರಿಗೆ ಅವಕಾಶ ಕಲ್ಪಿಸಬೇಕು” ಎಂದು ಮನವಿ ಮಾಡಿದರು.

ತಮ್ಮ ರಾಜಕೀಯ ಬದುಕಿನ ಕುರಿತು ಭಾವುಕರಾಗಿ ಮಾತನಾಡಿದ ಸಿದ್ದರಾಮಯ್ಯ, “ಡಾ. ರಾಜ್‌ಕುಮಾರ್ ಜನರನ್ನು ‘ಅಭಿಮಾನಿ ದೇವರುಗಳು’ ಎಂದು ಕರೆಯುತ್ತಿದ್ದರು. ನನ್ನ ಪಾಲಿಗೂ ರಾಜ್ಯದ ಮತದಾರರೇ ಅಭಿಮಾನಿ ದೇವರುಗಳು. ಸಂವಿಧಾನವೇ ನನ್ನ ಧರ್ಮ ಎಂದು ನಂಬಿ ರಾಜಕೀಯ ಜೀವನ ನಡೆಸಿದ್ದೇನೆ” ಎಂದು ಹೇಳಿದರು.

“ರಾಜ್ಯದ ಜನತೆ ನನಗೆ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ನೀಡಿದ್ದಾರೆ. ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಅದಕ್ಕಾಗಿ ನಾನು ಜನರಿಗೆ ಸದಾ ಋಣಿ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದರು.

Continue Reading

ದೇಶ

“ಬಡವರಿಗೆ ಅನ್ನ ಕೊಟ್ಟ ತಾಯಿ ಹೃದಯ”: ಸಿದ್ದರಾಮಯ್ಯ ಕುರಿತು ಭಾವುಕರಾದ ಸಚಿವ ಆರ್.ಬಿ. ತಿಮ್ಮಾಪುರ

Published

on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರ ಸಚಿವ ಸಂಪುಟದ ಸಭೆಯಲ್ಲಿ ಭಾವುಕ ವಾತಾವರಣ ಸೃಷ್ಟಿಸಿತ್ತು ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ. ಬ್ರೇಕ್‌ಫಾಸ್ಟ್ ಸಭೆಯಲ್ಲಿ ಸಿಎಂ ತಮ್ಮ ನಿರ್ಧಾರ ತಿಳಿಸಿದ ಕ್ಷಣ ಇಡೀ ಸಚಿವ ಸಂಪುಟ ಮೌನಕ್ಕೆ ಶರಣಾಯಿತು ಎಂದು ಅವರು ವಿವರಿಸಿದ್ದಾರೆ.

“ಇವತ್ತು ಸಭೆಯಲ್ಲಿ ಸಿದ್ದರಾಮಯ್ಯ ಅವರು ‘ನಾನು ರಾಜೀನಾಮೆ ಕೊಡ್ತೇನೆ’ ಎಂದಾಗ, ಸಚಿವ ಸಂಪುಟದ ಎಲ್ಲ ಸದಸ್ಯರೂ ಭಾವುಕರಾದರು. ನನ್ನನ್ನೂ ಸೇರಿದಂತೆ ಹಲವರು ಕಣ್ಣೀರು ತಡೆಯಲಾಗಲಿಲ್ಲ. ಸಚಿವರ ಕಣ್ಣೀರು ಕಂಡು ಸಿದ್ದರಾಮಯ್ಯ ಅವರೂ ಭಾವುಕರಾದರು” ಎಂದು ತಿಮ್ಮಾಪುರ ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿದ ಅವರು, “ಬಡವರಿಗೆ ಇಷ್ಟು ಕೊಟ್ಟರೆ ಸೋಮಾರಿಗಳಾಗುತ್ತಾರೆ ಎಂದು ಹಲವರು ಟೀಕಿಸಿದ್ದರು. ಆದರೆ ‘ಬಡವರಿಗೆ ಅನ್ನ ಕೊಡಬೇಕಾದದ್ದು ನನ್ನ ಕರ್ತವ್ಯ’ ಎಂಬ ತಾಯಿ ಹೃದಯ ಸಿದ್ದರಾಮಯ್ಯ ಅವರದ್ದು” ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಅಸಹಾಯಕರ ಪರ ನಿಂತ ನಾಯಕ ಎಂದು ಬಣ್ಣಿಸಿದ ತಿಮ್ಮಾಪುರ, “ಒಳಮೀಸಲಾತಿಯಂತಹ ಜಟಿಲ ಸಮಸ್ಯೆಗಳಿಗೂ ದಿಟ್ಟ ನಿರ್ಧಾರ ತೆಗೆದುಕೊಂಡವರು. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದ ನಾಯಕತ್ವ ಅವರದ್ದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ವೈಯಕ್ತಿಕ ರಾಜಕೀಯ ಬದುಕಿನ ಬಗ್ಗೆ ಮಾತನಾಡಿದ ಅವರು, “ನಾನು ಮೂರು ಬಾರಿ ಚುನಾವಣೆಯಲ್ಲಿ ಸೋತು ರಾಜಕೀಯ ಮುಗಿದಿದೆ ಎಂದುಕೊಂಡಿದ್ದೆ. ಆಗ ನನ್ನನ್ನು ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡಿ ಮರುಜೀವ ಕೊಟ್ಟವರು ಸಿದ್ದರಾಮಯ್ಯ” ಎಂದು ಭಾವುಕರಾದರು.

ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಸಿದ್ದರಾಮಯ್ಯ ಮಾತನಾಡಿದ್ದು, “ಎಐಸಿಸಿ ನಾಯಕರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗುತ್ತಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದೆ, ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ನಿಮ್ಮ ಮಾರ್ಗದರ್ಶನದಲ್ಲಿ ನಾನು ನಡೆದುಕೊಳ್ಳುತ್ತೇನೆ” ಎಂದು ಹೇಳಿರುವುದಾಗಿ ತಿಮ್ಮಾಪುರ ಮಾಹಿತಿ ನೀಡಿದ್ದಾರೆ.

Continue Reading

ದೇಶ

“ಒಗ್ಗಟ್ಟೇ ನಮ್ಮ ಶಕ್ತಿ”: ಸಿದ್ದು-ಡಿಕೆಶಿ ಫೋಟೋ ಹಂಚಿಕೊಂಡ ಕಾಂಗ್ರೆಸ್, ವೈರಲ್ ಆದ ಪೋಸ್ಟ್

Published

on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಜನತೆಗೆ ಮಹತ್ವದ ಒಗ್ಗಟ್ಟಿನ ಸಂದೇಶ ರವಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಸೌಹಾರ್ದತೆಯನ್ನು ತೋರಿಸುವ ಫೋಟೋವನ್ನು ಕೆಪಿಸಿಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ಭಾರೀ ವೈರಲ್ ಆಗಿದೆ.

“ಅಂದು, ಇಂದು, ಎಂದೆಂದೂ… ಒಗ್ಗಟ್ಟೇ ನಮ್ಮ ಶಕ್ತಿ! ಎಂದೆಂದಿಗೂ ಜನಸೇವೆಯೇ ನಮ್ಮ ಬದ್ಧತೆ!” ಎಂಬ ಘೋಷವಾಕ್ಯದೊಂದಿಗೆ ಕಾಂಗ್ರೆಸ್ ಈ ಪೋಸ್ಟ್ ಪ್ರಕಟಿಸಿದೆ. ನಾಯಕತ್ವ ಬದಲಾವಣೆ ನಡೆಯುತ್ತಿರುವ ಸಂದರ್ಭದಲ್ಲೂ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಇದಾಗಿದೆ.

ಇಂದು ಬೆಳಗ್ಗೆ ಮುಖ್ಯಮಂತ್ರಿ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಹೈವೋಲ್ಟೇಜ್ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಭಾವುಕ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಸಭೆಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ನೇರವಾಗಿ ಸಿದ್ದರಾಮಯ್ಯ ಅವರ ಬಳಿ ತೆರಳಿ ಪಾದ ಮುಟ್ಟಿ ಗೌರವ ಸಲ್ಲಿಸಿದರು. ತಕ್ಷಣವೇ ಸಿದ್ದರಾಮಯ್ಯ ಅವರು ಡಿಕೆಶಿಯನ್ನು ಕೈಹಿಡಿದು ಎಬ್ಬಿಸಿ ಆತ್ಮೀಯವಾಗಿ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ರಾಜ್ಯದ ಇಬ್ಬರು ಪ್ರಮುಖ ನಾಯಕರ ನಡುವೆ ಕಂಡುಬಂದ ಈ ಅಪರೂಪದ ಸೌಹಾರ್ದತೆ ಸಭೆಯಲ್ಲಿ ಇದ್ದ ಸಚಿವರು ಹಾಗೂ ಕಾಂಗ್ರೆಸ್ ನಾಯಕರಲ್ಲಿ ಭಾವುಕ ಕ್ಷಣಗಳನ್ನು ಸೃಷ್ಟಿಸಿತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಇದೇ ವೇಳೆ ಸಚಿವರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾನು ಯಾವುದೇ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುತ್ತಿಲ್ಲ. ಸಂಪೂರ್ಣ ಸ್ವಇಚ್ಛೆಯಿಂದಲೇ ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯ ಬಳಿಕ ಸಿದ್ದರಾಮಯ್ಯ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿದ್ದು, ರಾಜ್ಯ ರಾಜಕೀಯದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಕಾಂಗ್ರೆಸ್ ನಾಯಕತ್ವ ಬದಲಾವಣೆಯ ನಡುವೆಯೂ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಜನಸೇವೆಯ ಬದ್ಧತೆ ಮುಂದುವರಿಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Continue Reading

Trending