ರಾಜಕೀಯ

ನ್ಯಾಯಕ್ಕಾಗಿ ಕೈಯಲ್ಲಿ ವಿಷ ಹಿಡಿದು ದಂಪತಿ ಪ್ರತಿಭಟನೆ

ಕಲಬುರಗಿಯಲ್ಲಿ ನ್ಯಾಯಕ್ಕಾಗಿ ನಂದಿಕೂರ್ ಗ್ರಾಮದ ಮಲ್ಲಯ್ಯ ಸ್ವಾಮಿ ಮತ್ತು ಲಕ್ಷ್ಮೀ ದಂಪತಿಯು ಕೈಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯು ಕಲಬುರಗಿ ನಗರ ಪೊಲೀಸ್ ಕಮಿಷನರ್ ಕಚೇರಿಯ ಮುಂಭಾಗದಲ್ಲಿ ನಡೆದಿದ್ದು, ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು. ಆದರೆ, ಕಮಿಷನರ್ ಕಚೇರಿಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಅರ್ಧದಾರಿಯಲ್ಲೇ ತಡೆದಿದ್ದಾರೆ.

ಕಳೆದ ಮಾರ್ಚ್ 22, 2024ರಂದು ಮಲ್ಲಯ್ಯ ಸ್ವಾಮಿಯವರನ್ನು ಕಿಡ್ನಾಪ್ ಮಾಡಿ, ಹಲ್ಲೆಗೈದು, 20 ಲಕ್ಷ ರೂಪಾಯಿಗಳ ದರೋಡೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕಲಬುರಗಿಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್, ಹಲ್ಲೆ, ಮತ್ತು ಸುಲಿಗೆ ಕೇಸ್ ದಾಖಲಾಗಿತ್ತು. ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ದರೋಡೆಯಾದ 20 ಲಕ್ಷ ರೂಪಾಯಿಗಳನ್ನು ರಿಕವರಿ ಮಾಡಿಲ್ಲ, ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಿಲ್ಲ, ಮತ್ತು ಪೊಲೀಸರು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡುತ್ತಿಲ್ಲ ಎಂದು ದಂಪತಿಯು ಆರೋಪಿಸಿದ್ದಾರೆ.

ಮಲ್ಲಯ್ಯ ಸ್ವಾಮಿ ಮತ್ತು ಲಕ್ಷ್ಮೀಯವರು ತಮ್ಮ ಕೈಯಲ್ಲಿ ಜಿರಲೆಗೆ ಹೊಡೆಯುವ ವಿಷದ ಬಾಟಲಿಯನ್ನು ಹಿಡಿದುಕೊಂಡು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ದರೋಡೆಯಾದ ಹಣವನ್ನು ರಿಕವರಿ ಮಾಡಿಕೊಡಬೇಕು ಮತ್ತು ಆರೋಪಿಗಳಿಗೆ ಶಿಕ್ಷೆಯನ್ನು ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಪ್ರತಿಭಟನೆಯು ಕಲಬುರಗಿಯಲ್ಲಿ ಭಾರೀ ಗಮನ ಸೆಳೆದಿದ್ದು, ಸ್ಥಳೀಯ ಜನತೆಯಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ಪ್ರತಿಭಟನಾಕಾರರು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ವಿರುದ್ಧವೂ ಆರೋಪ ಮಾಡಿದ್ದಾರೆ. ಈ ಘಟನೆಯ ತನಿಖೆಯನ್ನು ಸರಿಯಾಗಿ ನಡೆಸಲಾಗುತ್ತಿಲ್ಲ ಮತ್ತು ರಾಜಕೀಯ ಕುಮ್ಮಕ್ಕಿನಿಂದ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನಾಕಾರರು ತಮ್ಮ ಕೋಪವನ್ನು ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version