ಬೆಂಗಳೂರು

ನಿಮ್ಮ ಕೆಟ್ಟ ರಸ್ತೆಗಳಿಂದ ಕುತ್ತಿಗೆ, ಬೆನ್ನು ನೋವು – 50 ಲಕ್ಷ ಪರಿಹಾರ ಕೋರಿ ಬಿಬಿಎಂಪಿಗೆ ಲೀಗಲ್‌ ನೋಟಿಸ್‌

ಬೆಂಗಳೂರು: ವಾಹನ ಚಲಾಯಿಸಲು ಯೋಗ್ಯವಲ್ಲದ ರಸ್ತೆಗಳಿಂದ ನಿರಂತರ ದೈಹಿಕ ಯಾತನೆ ಅನುಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ತೆರಿಗೆದಾರರೊಬ್ಬರು 50 ಲಕ್ಷ ರೂ. ಪರಿಹಾರ ಕೋರಿ ಬಿಬಿಎಂಪಿಗೆ (BBMP) ಲೀಗಲ್‌ ನೋಟಿಸ್‌ (Legal Notice) ಕಳುಹಿಸಿದ್ದಾರೆ.

ರಿಚ್ಮಂಡ್ ಟೌನ್ ನಿವಾಸಿಯಾಗಿರುವ ದಿವ್ಯ ಕಿರಣ್ ಅವರು ಕಳುಹಿಸಿದ ನೋಟಿಸ್‌ನಲ್ಲಿ, ನಾನು ತೆರಿಗೆ ಪಾವತಿಸುವ (Tax Payer) ನಾಗರಿಕನಾಗಿದ್ದೇನೆ. ಆದರೆ ಬಿಬಿಎಂಪಿ (BBMP) ಮೂಲಭೂತ ಮೂಲಸೌಕರ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಇದರಿಂದ ನಾನು ದೈಹಿಕ ಯಾತನೆ ಮತ್ತು ಮಾನಸಿಕ ಯಾತನೆಯನ್ನು ನಿರಂತರವಾಗಿ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕೆಟ್ಟ ರಸ್ತೆಯಿಂದ ತೀವ್ರ ಕುತ್ತಿಗೆ ಮತ್ತು ಬೆನ್ನು ನೋವಿನ ಸಮಸ್ಯೆ ಅನುಭವಿಸುತ್ತಿದ್ದೇನೆ. ಮೂಳೆ ನೋವಿನ ಸಂಬಂಧ ಐದು ಬಾರಿ ಭೇಟಿ ನೀಡಿದ್ದೇನೆ ಅಷ್ಟೇ ಅಲ್ಲದೇ ನಾಲ್ಕು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ ಎಂದು ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ತೀವ್ರ ನೋವನ್ನು ನಿವಾರಿಸಲು ಚುಚ್ಚುಮದ್ದು ಹಾಕಿಸಿದ್ದೇನೆ. ಹಲವಾರು ಔಷಧಿಗಳು ಮತ್ತು ನೋವು ನಿವಾರಕಗಳನ್ನು ತೆಗೆದುಕೊಂಡಿದ್ದೇನೆ. ನೋವನ್ನು ತಡೆಯಲು ಸಾಧ್ಯವಾಗದೇ ಅತ್ತಿದ್ದೇನೆ. ಮಾನಸಿಕ ಯಾತನೆಯಿಂದ ನಿದ್ದೆಯೂ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಆರೋಗ್ಯ ಮತ್ತು ದೈನಂದಿನ ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಹಿಂದೆ ಅಧಿಕಾರಿಗಳಿಗೆ ಈ ಸಮಸ್ಯೆಗಳನ್ನು ತಿಳಿಸಿದ್ದರೂ ಯಾವುದೇ ಫಲಪ್ರದವಾಗಿಲ್ಲ. ನಾವು ತೆರಿಗೆಯನ್ನು ಪಾವತಿಸುತ್ತಿದ್ದೇನೆ. ನಮಗೆ ಉತ್ತಮ ರಸ್ತೆಗಳನ್ನು ಒದಗಿಸುವುದು ಬಿಬಿಎಂಪಿಯ ಕೆಲಸ. ಉತ್ತಮ ಮೂಲಸೌಕರ್ಯಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬಾ ದುಃಖಕರ. ಈ ಕಾರಣಕ್ಕೆ ನೋಟಿಸ್‌ ಕಳುಹಿಸಿ 15 ದಿನಗಳ ಒಳಗಡೆ ಪರಿಹಾರ ಪಾವತಿಸಬೇಕೆಂದು ಕೋರಿದ್ದೇನೆ. ಒಂದು ವೇಳೆ ಪರಿಹಾರ ನೀಡದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version