ಬೆಂಗಳೂರು

ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್: ಡಿಕೆ ಸುರೇಶ್‌ ಟೀಕೆ

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತೆಯೊಬ್ಬರ ದೂರಿನ ಆಧಾರದ ಮೇಲೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಶಾಸಕ ಮುನಿರತ್ನ ಜೊತೆಗೆ ಅವರ ಬೆಂಬಲಿಗರಾದ ವಸಂತ, ಚನ್ನಕೇಶವ, ಕಮಲ್ ಹಾಗೂ ಒಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧವೂ ಆರೋಪ ಹೊರಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿಕೆ ಸುರೇಶ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಮುನಿರತ್ನ ಕಿರುಕುಳ ನೀಡಿದ್ದಾರೆ. ಅವರಿಗಾದ ಅವಮಾನ ಮತ್ತು ದೌರ್ಜನ್ಯದ ಬಗ್ಗೆ ನಾನು ಕೇಳಿದ್ದೇನೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಎಲ್ಲಾ ವಿಷಯಗಳಿಗೆ ಬಿಜೆಪಿ ನಾಯಕರು ಉತ್ತರ ಕೊಡಬೇಕು. ಮುನಿರತ್ನ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ರೀತಿಯ ಬಗ್ಗೆ ಬಿಜೆಪಿ ನಾಯಕರು ಸ್ಪಷ್ಟನೆ ನೀಡಬೇಕು” ಎಂದು ಮಾಜಿ ಸಂಸದ ಡಿಕೆ ಸುರೇಶ್ ಆಗ್ರಹಿಸಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿಯಿಂದ ನಡೆದ ಪೋಸ್ಟರ್ ವಾರ್‌ಗೆ ತಿರುಗೇಟು ನೀಡಿದ ಸುರೇಶ್, “ಬಿಜೆಪಿ ಆಡಳಿತದ ಕಾಲದಲ್ಲಿ ಮಳೆ ಬಂದಾಗ ಬೆಂಗಳೂರು ತೇಲುತ್ತಿತ್ತು. ಅವರು ಯಾವುದೇ ಕಡಿವಾಣ ಹಾಕಿರಲಿಲ್ಲ. ಈಗ ನಮ್ಮ ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಕಾನೂನು ರೂಪಿಸಲು ಚಿಂತನೆ ನಡೆಸಿದೆ. ಬಿಜೆಪಿಯವರು ಲೂಟಿ ಮಾಡಿದ್ದನ್ನು ಸರಿಪಡಿಸಲು ಇನ್ನೂ ಮೂರು ವರ್ಷಗಳ ಕಾಲಾವಕಾಶ ಬೇಕು” ಎಂದು ಮಾಜಿ ಸಂಸದ ಡಿಕೆ ಸುರೇಶ್ ಟೀಕಿಸಿದರು.

ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿಯವರ “ಸಾಧನಾ ಸಮಾವೇಶದ ನಾಟಕ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, “ಕಳ್ ಸ್ವಾಮಿಗೆ ಉತ್ತರ ಕೊಡುವುದು ಸಾಧ್ಯವೇ? ಅವರು ಹಿಟ್‌ ಅಂಡ್‌ ರನ್‌ ಗಿರಾಕಿಗಳಂತೆ ವರ್ತಿಸುತ್ತಾರೆ. ಕಾಂಕ್ರಿಟ್ ರಸ್ತೆಗಳಿಂದಾಗಿ ಈ ರೀತಿಯ ಸಮಸ್ಯೆಗಳು ಎದುರಾಗಿವೆ. ನಮ್ಮ ಕಡೆ ಕೆರೆಗಳು, ಕಟ್ಟೆಗಳು ತುಂಬಿಲ್ಲ ಎಂದು ಜನ ದೂರುತ್ತಿದ್ದಾರೆ” ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದರು.

ಬಮೂಲ್‌ (BAMUL) ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಮಾತನಾಡಿದ ಸುರೇಶ್, “ನಾನು ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ. ಮೂರು ಜಿಲ್ಲೆಗಳ ನಾಯಕರ ಒತ್ತಾಯದಿಂದ ಬಮೂಲ್‌ಗೆ ಸ್ಪರ್ಧಿಸಿದೆ. ಜನರ ತೀರ್ಮಾನದಂತೆ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಕೆಎಂಎಫ್‌ಗೆ ಪ್ರತಿನಿಧಿಯಾಗುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಎಲ್ಲವೂ ಸಮಯ ಮತ್ತು ನಿರ್ದೇಶಕರ ಆಯ್ಕೆಯ ಮೇಲೆ ಅವಲಂಬಿತವಾಗಿದೆ” ಎಂದು ಮಾಜಿ ಸಂಸದ ಡಿಕೆ ಸುರೇಶ್ ಸ್ಪಷ್ಟಪಡಿಸಿದರು

Leave a Reply

Your email address will not be published. Required fields are marked *

Trending

Exit mobile version