ಆರೋಗ್ಯ
ಕರ್ನಾಟಕದಲ್ಲಿ ಕೋವಿಡ್ ನಿರ್ಬಂಧ ಇಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಕರ್ನಾಟಕದಲ್ಲಿ ಸದ್ಯ ಕೋವಿಡ್-19ಗೆ ಸಂಬಂಧಿಸಿದ ಯಾವುದೇ ನಿರ್ಬಂಧಗಳಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಕೋವಿಡ್ ಜೆ-1 ಉಪತಳಿಯು ಗಂಭೀರ ದುಷ್ಪರಿಣಾಮಗಳನ್ನು ಉಂಟುಮಾಡಿಲ್ಲ ಎಂದು ತಿಳಿಸಿರುವ ಅವರು, ರಾಜ್ಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದಿದ್ದಾರೆ. ಪ್ರತಿ ವಾರ ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಕೋವಿಡ್ ಜೆ-1 ಉಪತಳಿಯಿಂದ ಗಂಭೀರ ಪರಿಣಾಮಗಳಿಲ್ಲ ಎಂದು ದೃಢಪಡಿಸಿದ್ದಾರೆ. “ಅನಗತ್ಯ ಆತಂಕ ಬೇಡ. ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸದ್ಯಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಹೊರತುಪಡಿಸಿ ಯಾವುದೇ ನಿರ್ಬಂಧಗಳ ಅಗತ್ಯವಿಲ್ಲ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಪರೀಕ್ಷೆ ಆರಂಭಿಸಲು ಸೂಚನೆ ನೀಡಲಾಗಿದೆ. ಎರಡು ದಿನಗಳಲ್ಲಿ ಆರ್ಟಿ-ಪಿಸಿಆರ್ ಮತ್ತು ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಕಿಟ್ಗಳನ್ನು ವಿತರಿಸಲಾಗಿದೆ. ತೀವ್ರ ಉಸಿರಾಟ ಸೋಂಕು (ಸಾರಿ), ಶೀತಜ್ವರ ಮಾದರಿ ಅನಾರೋಗ್ಯ (ಐಎಲ್ಐ), ಉಸಿರಾಟ ಸಮಸ್ಯೆ, ಹೃದ್ರೋಗ ಇರುವ ಮಕ್ಕಳು ಮತ್ತು ವೃದ್ಧರಿಗೆ ಕಡ್ಡಾಯ ಪರೀಕ್ಷೆಗೆ ಸೂಚಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮಗಳಲ್ಲಿ ಯಾವುದೇ ಕೊರತೆ ಇಲ್ಲ. ಮಂಗಳೂರು, ಮಡಿಕೇರಿಯಂತಹ ಕಡೆಗಳಲ್ಲಿ ಭೀತಿಯ ವಾತಾವರಣವಿಲ್ಲ. ಆದ್ದರಿಂದ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ರಾಜ್ಯದ ಒಳಗೆ ಅಥವಾ ಹೊರಗೆ ಯಾತ್ರೆಗೆ ತಡೆಯಿಲ್ಲ,” ಎಂದು ದಿನೇಶ್ ಗುಂಡೂರಾವ್ ಒತ್ತಿ ಹೇಳಿದ್ದಾರೆ. ಒಂದು ಪ್ರಶ್ನೆಗೆ ಉತ್ತರವಾಗಿ, “ಲಾಕ್ಡೌನ್ ಇಷ್ಟವಿದ್ದರೆ ಹೇಳಿ, ಘೋಷಣೆ ಮಾಡುತ್ತೇವೆ,” ಎಂದು ಹಾಸ್ಯದಿಂದ ಹೇಳಿದರು