ದೇಶ
ದೆಹಲಿಯ ಸುತ್ತಮುತ್ತ ಪ್ರಬಲ ಭೂಕಂಪ ಮನೆಯಿಂದ ಓಡಿ ಬಂದ ಜನ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಹಲವೆಡೆ ಮಂಗಳವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 4.6ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಮಧ್ಯಾಹ್ನ 2.20ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮವು ದೇಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಉಂಟಾಗಿದೆ ಎಂದು ತಿಳಿಸಿದೆ. ಭೂಮಿಯ ಮೇಲ್ಮೈನ 5 ಕಿಲೋಮೀಟರ್ ಕೆಳಗೆ ಭೂಮಿ ನಲುಗಿದೆ ಎಂದು ಮಾಹಿತಿ ನೀಡಿದೆ.
ಉತ್ತರಾಖಂಡದ ಡೆಹ್ರಾಡೂನ್, ಉತ್ತರ ಪ್ರದೇಶದ ನೊಯ್ಡಾ, ಹರಿಯಾಣ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಬಂದಿದ್ದಾರೆ. ಅಪಾರ್ಟ್ಮೆಂಟ್ಗಳು, ಮನೆಗಳು ಸೇರಿ ಹಲವೆಡೆ ಜನ ಕಟ್ಟಡದ ಹೊರಗೆ ಬಂದು ನಿಂತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಭೂಕಂಪ ಸಂಭವಿಸುತ್ತಲೇ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಎಚ್ಚರಿಸಿದರು. ಭೂಮಿಯ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಬರಬೇಕು. ಯಾರು ಕೂಡ ಎಲೆವೇಟರ್ಗಳನ್ನು ಬಳಸಬಾರದು. ಯಾವುದೇ ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.