ದೇಶ
ಪರೀಕ್ಷೆಗೆ ಮುನ್ನ 10 ನಿಮಿಷ ನಕ್ಕುಬಿಡಿ, ಜೋಕ್ ಮಾಡಿ: ಮಕ್ಕಳಿಗೆ ಪ್ರಧಾನಿ ಮೋದಿ ಕಿವಿಮಾತು
ಹೊಸದಿಲ್ಲಿ: ಪರೀಕ್ಷೆಗೂ ಮುನ್ನ ಆರಾಮವಾಗಿ ಕುಳಿತುಕೊಳ್ಳಿ; 5-10 ನಿಮಿಷ ಜೋಕ್ ಮಾಡಿ, ನಕ್ಕು ಮನಸ್ಸನ್ನು ಹಗರಾಗಿಸಿಕೊಳ್ಳಿ; ಪರೀಕ್ಷೆಯ ಹಾಲ್ಗೆ ಅರ್ಧ ಗಂಟೆ ಮೊದಲೇ ತಲುಪಿಕೊಳ್ಳಿ… ಇವೇ ಮುಂತಾದ ಹಲವು ಕಿವಿಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಹೇಳಿದ್ದಾರೆ.
10ನೇ ಮತ್ತು 12ನೇ ತರಗತಿಯ 2024ರ ಬೋರ್ಡ್ ಎಕ್ಸಾಮ್ಗೆ ಮುನ್ನ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುತ್ತಿರುವ ʼಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಇದೂ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು. ಸೋಮವಾರ ದಿಲ್ಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಕಾರ್ಯಕ್ರಮ ನಡೆಯಿತು. ದೇಶಾದ್ಯಂತದಿಂದ ಬಂದ ಹಲವು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ನೇರವಾಗಿ ಹಾಗೂ ಆನ್ಲೈನ್ ಮೂಲಕ ಪ್ರಧಾನಿಗೆ ಪ್ರಶ್ನೆಗಳನ್ನು ಕೇಳಿದರು. ಪ್ರಧಾನಿಯವರು ನೀಡಿದ ಹಲವು ಟಿಪ್ಸ್ ಈ ಕೆಳಗಿನಂತಿದ್ದವು:
• ಪರೀಕ್ಷೆಯ ಹಾಲ್ಗೆ ಅರ್ಧ ಗಂಟೆಗೂ ಮೊದಲು ತಲುಪಿಕೊಂಡರೆ ಯಾವುದೇ ಉದ್ವೇಗ ಇರುವುದಿಲ್ಲ. ಹತ್ತು ನಿಮಿಷದಷ್ಟು ಕಾಲ ಜೋಕ್ ಮಾಡಲು, ನಗಲು ಮೀಸಲಿಡಿ. ಅದರಿಂದ ಮನಸ್ಸು ಹಗುರಾಗುತ್ತದೆ. ನಂತರ ಪ್ರಶ್ನೆ ಪತ್ರಿಕೆ ನಿಮ್ಮ ಕೈಗೆ ಬಂದಾಗ, ನೀವು ಅದನ್ನು ಆರಾಮವಾಗಿ ಮಾಡಲು ಸಾಧ್ಯವಾಗುತ್ತದೆ.
• ಪರೀಕ್ಷಾ ಹಾಲ್ನಲ್ಲಿ ನಾವು ಸಬ್ಜೆಕ್ಟ್ ಹೊರತುಪಡಿಸಿ ಇತರ ವಿಷಯಗಳ ಮೇಲೆ ಮನಸ್ಸು ಕೇಂದ್ರೀಕರಿಸುವುದರಿಂದ ನಮ್ಮ ಶಕ್ತಿ ಅನಗತ್ಯವಾಗಿ ವ್ಯರ್ಥವಾಗುತ್ತದೆ. ನಾವು ನಮ್ಮಲ್ಲೇ ಕಳೆದುಹೋಗಬೇಕು. ಮಹಾಭಾರತದ ಅರ್ಜುನ ಮತ್ತು ಪಕ್ಷಿನೋಟದ ಕಥೆಯನ್ನು ನೀವು ಕೇಳಿರಬಹುದು. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
• ಆತಂಕಕ್ಕೆ ಕಾರಣವೇನೆಂದರೆ, ಪರೀಕ್ಷೆಯ ಸಮಯದಲ್ಲಿ, ಸಮಯ ಸಾಕಾಗಲಿಕ್ಕಿಲ್ಲ ಎಂದು ನೀವು ಭಾವಿಸುತ್ತೀರಿ. ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಸಮಗ್ರವಾಗಿ ಓದಿ. ಮೊದಲು ಯಾವ ಪ್ರಶ್ನೆಗಳನ್ನು ಪ್ರಯತ್ನಿಸಿದರೆ ಉತ್ತಮ ಎಂದು ನೋಟ್ ಮಾಡಿಕೊಳ್ಳಿ. ಪ್ರತೀ ಪ್ರಶ್ನೆಗೂ ಸಮಯ ನಿಗದಿಪಡಿಸಿಕೊಳ್ಳಿ.
• ಮೊಬೈಲ್ನಲ್ಲಿ ಒಂದರ ಹಿಂದೆ ಒಂದರಂತೆ ರೀಲುಗಳನ್ನು ನೋಡುತ್ತಾ ಹೋದರೆ ಸಮಯ ವ್ಯರ್ಥವಾಗುತ್ತದೆ. ನಿದ್ದೆ ಕೆಡುತ್ತದೆ, ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನಿದ್ರೆಯನ್ನು ಕೀಳಂದಾಜು ಮಾಡಬೇಡಿ. ಆಧುನಿಕ ಆರೋಗ್ಯ ವಿಜ್ಞಾನವು ನಿದ್ರೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಿಮಗೆ ಬೇಕಾದಷ್ಟು ನಿದ್ದೆ ಮಾಡುತ್ತೀರೋ ಇಲ್ಲವೋ ಎಂಬುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
• ನಿಮ್ಮ ಆಹಾರದಲ್ಲಿ ನಿಮ್ಮ ವಯಸ್ಸಿಗೆ ಅಗತ್ಯವಿರುವ ವಸ್ತುಗಳು ಇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಮ್ಮ ಆಹಾರದಲ್ಲಿ ಸಮತೋಲನವು ಆರೋಗ್ಯಕ್ಕೆ ಮುಖ್ಯವಾಗಿದೆ. ಫಿಟ್ನೆಸ್ಗಾಗಿ ವ್ಯಾಯಾಮವನ್ನು ಮಾಡಬೇಕು. ನೀವು ಪ್ರತಿದಿನ ಹಲ್ಲುಜ್ಜುವ ರೀತಿಯಲ್ಲಿ ವ್ಯಾಯಾಮ ಮಾಡಬೇಕು; ಅದರಲ್ಲಿ ಯಾವುದೇ ರಾಜಿ ಬೇಡ.
• ನಾವು ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡದಿದ್ದರೆ. ಅದರ ಬಳಕೆಯ ಅವಧಿ ಕಡಿಮೆಯಾಗುತ್ತದೆ. ಮೊಬೈಲ್ ಕೆಲಸ ಮಾಡಲು ಚಾರ್ಜ್ ಬೇಕಾದಂತೆ, ದೇಹವನ್ನೂ ಚಾರ್ಜ್ ಮಾಡಬೇಕು. ಮೊಬೈಲ್ ಫೋನ್ಗೆ ಚಾರ್ಜಿಂಗ್ ಅಗತ್ಯವಿರುವಂತೆ ದೇಹಕ್ಕೂ ಚಾರ್ಜ್ ಅಗತ್ಯವಿದೆ. ಅದಿಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ, ಹಾಗಾಗಿ ಜೀವನವನ್ನು ಸ್ವಲ್ಪ ಸಮತೋಲನಗೊಳಿಸಬೇಕು. ನಾವು ಆರೋಗ್ಯವಾಗಿಲ್ಲದಿದ್ದರೆ, ಮೂರು ಗಂಟೆಗಳ ಕಾಲ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗದಿರಬಹುದು. ಆರೋಗ್ಯಕರ ಮನಸ್ಸಿಗೆ ಆರೋಗ್ಯಕರ ದೇಹ ಅಗತ್ಯ. ಇದರರ್ಥ ನೀವು ಕುಸ್ತಿ ಮಾಡಬೇಕು ಎಂದಲ್ಲ. ಒಂದು ಪುಸ್ತಕವನ್ನು ತೆಗೆದುಕೊಂಡು ಅದನ್ನು ಸೂರ್ಯನ ಬೆಳಕಿನಲ್ಲಿ ಕುಳಿತು ಓದಿ. ಏಕೆಂದರೆ ದೇಹವನ್ನು ರೀಚಾರ್ಜ್ ಮಾಡಲು ಸೂರ್ಯನ ಬೆಳಕು ಕೂಡ ಬೇಕಾಗುತ್ತದೆ.
• ಹೆತ್ತವರಿಗೆ ಕಿವಿಮಾತು: ಇಂದು ಪರೀಕ್ಷೆ ಇರುವುದರಿಂದ ಮಗುವಿಗೆ ಹೊಸ ಪೆನ್ ಬೇಕು ಎಂದು ಭಾವಿಸಬೇಡಿ. ಆದರೆ ಮಗು ದಿನನಿತ್ಯ ಬಳಸುವ ಪೆನ್ನನ್ನೇ ಬಳಸಬೇಕು. ಅದು ಅಬ್ಯಾಸವಾಗಿರುತ್ತದೆ. ಅವನ ಬಟ್ಟೆಯ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಅವನಿಗೆ ಹಿತಕರವಾಗಿದ್ದನ್ನು ಅವನು ಧರಿಸಲಿ. ಪರೀಕ್ಷೆಯ ಸಮಯ ಮಕ್ಕಳಿಗೆ ಆರಾಮದಾಯಕವಾಗಿರುವಂತೆ ಮಾಡಿ.
• ಇಂದು, ಪರೀಕ್ಷೆಯಲ್ಲಿ ದೊಡ್ಡ ಸವಾಲು ಎಂದರೆ ಕೈಯಲ್ಲಿ ಬರೆಯುವುದು. ಇಂದು ಎಲ್ಲವೂ ಮೊಬೈಲ್, ಐಪ್ಯಾಡ್, ಕಂಪ್ಯೂಟರ್ನಲ್ಲಿ ನಡೆಯುತ್ತದಾದ್ದರಿಂದ ಬರೆಯುವ ಅಭ್ಯಾಸವೇ ಬಿಟ್ಟುಹೋಗಿದೆ. ಹೀಗಾಗಿ ದಿನನಿತ್ಯ ಅಧ್ಯಯನಕ್ಕಾಗಿ ಮೀಸಲಿಡುವ ಸಮಯದಲ್ಲಿ ಅರ್ಧ ಭಾಗ ಬರೆಯುವುದಕ್ಕಾಗಿಯೇ ಇಟ್ಟುಕೊಳ್ಳಿ.
• ಅಭ್ಯಾಸದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಪರೀಕ್ಷೆಯ ಮೊದಲು, ವಿಷಯದ ಬಗ್ಗೆ ನೀವು ಓದಿದ್ದನ್ನು ಬರೆಯಿರಿ ಮತ್ತು ನಂತರ ಅದನ್ನು ನೀವೇ ಸರಿಪಡಿಸಿ. ನಿಮಗೆ ಈಜಲು ತಿಳಿದಿದ್ದರೆ ನೀರಿಗೆ ಇಳಿಯುವ ಭಯವಿಲ್ಲ. ಅಭ್ಯಾಸ ಮಾಡುವವನಿಗೆ ತಾನು ಜಯಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ. ನೀವು ಎಷ್ಟು ಹೆಚ್ಚು ಬರೆಯುತ್ತೀರೋ ಅಷ್ಟು ತೀಕ್ಷ್ಣತೆ ನಿಮಗೆ ಸಿಗುತ್ತದೆ.
• ಪರೀಕ್ಷಾ ಹಾಲ್ನಲ್ಲಿ ನಿಮ್ಮ ಪಕ್ಕದ ವಿದ್ಯಾರ್ಥಿ ಎಷ್ಟು ವೇಗವಾಗಿ ಬರೆಯುತ್ತಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಯಾರಿಗೆ ಗೊತ್ತು, ಆತ ಸಿನಿಮಾ ಕಥೆ ಬರೆಯುತ್ತಿರಬಹುದು!
ದೇಶ
ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ: “ಭಾರತಕ್ಕೆ ಮರಳದಿದ್ದರೆ ಅರ್ಜಿ ವಿಚಾರಣೆ ಇಲ್ಲ”
ಮುಂಬೈ: ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಹಾಜರಾಗದ ಹಿನ್ನೆಲೆ, ಮುಂದಿನ ವಿಚಾರಣೆಯಲ್ಲಿಯೂ ಇದೇ ರೀತಿಯ ವರ್ತನೆ ತೋರಿದರೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕದ್ ಅವರ ಪೀಠ, ಮಲ್ಯ ಭಾರತಕ್ಕೆ ಮರಳುವ ಉದ್ದೇಶ ಹೊಂದಿದ್ದಾರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲು “ಕೊನೆಯ ಅವಕಾಶ” ನೀಡಿದೆ.
“ನೀವು ಭಾರತಕ್ಕೆ ಹಿಂತಿರುಗಲೇಬೇಕು. ಹಿಂತಿರುಗದಿದ್ದರೆ ನಿಮ್ಮ ಅರ್ಜಿಯನ್ನು ನಾವು ವಿಚಾರಣೆ ನಡೆಸಲು ಸಾಧ್ಯವಿಲ್ಲ,” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
FEOA ಕಾಯ್ದೆ ಪ್ರಶ್ನೆ
ವಿಜಯ್ ಮಲ್ಯ ಅವರು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಹಾಗೂ ಅವರನ್ನು ‘Fugitive Economic Offender’ ಎಂದು ಘೋಷಿಸುವ ಪ್ರಕ್ರಿಯೆಗಳ ವಿರುದ್ಧದ ಅರ್ಜಿಯನ್ನು ನ್ಯಾಯಾಲಯ ವಿಚಾರಿಸುತ್ತಿದೆ.
ಡಿಸೆಂಬರ್ನಲ್ಲಿ ನ್ಯಾಯಪೀಠ, ಮಲ್ಯ ಭಾರತಕ್ಕೆ ಮರಳಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟರೆ ಮಾತ್ರ ಅವರ ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿತ್ತು.
ನ್ಯಾಯಾಧೀಶರು, “ನೀವು ನ್ಯಾಯಾಲಯದ ಪ್ರಕ್ರಿಯೆಯಿಂದ ದೂರ ಓಡುತ್ತಿದ್ದೀರಿ. ಆದ್ದರಿಂದ ಸಮಾನ ಪರಿಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
ಇಡಿ ಪರ ವಾದ
ಜಾರಿ ನಿರ್ದೇಶನಾಲಯ (ED) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಲ್ಯ ಬ್ಯಾಂಕುಗಳ ಹಕ್ಕುಗಳನ್ನು ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿರುವುದನ್ನು ಉಲ್ಲೇಖಿಸಿ, ಅವರು ವಸೂಲಾತಿ ಪ್ರಕ್ರಿಯೆಗಳನ್ನು ಬೇರೆ ದಿಕ್ಕಿಗೆ ತಳ್ಳಲು ಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.
ಮಲ್ಯ ಅವರನ್ನು ಪರಾರಿಯಾಗಿದ್ದಾನೆಂದು ಘೋಷಿಸಿದ ನಂತರ ಹಾಗೂ ಲಂಡನ್ನಲ್ಲಿ ಹಸ್ತಾಂತರ ಪ್ರಕ್ರಿಯೆ ಮುಂದುವರಿದ ಹಂತದಲ್ಲಿದ್ದಾಗ ಮಾತ್ರ FEOAಗೆ ಸವಾಲು ಹಾಕಿದ್ದಾರೆ ಎಂದು ಮೆಹ್ತಾ ಹೇಳಿದರು.
“ಭಾರತೀಯ ನ್ಯಾಯಾಲಯಗಳಿಂದ ಪರಿಹಾರ ಕೇಳುವವರು ಭಾರತೀಯ ಕಾನೂನಿನ ಮೇಲೆ ನಂಬಿಕೆ ಇಡಬೇಕು,” ಎಂದು ಇಡಿ ಪರ ವಾದ ಮಂಡಿಸಲಾಯಿತು.
ಮಲ್ಯ ಪರ ವಾದ
ವಿಜಯ್ ಮಲ್ಯ ಪರ ವಕೀಲ ಅಮಿತ್ ದೇಸಾಯಿ, ಮಲ್ಯ ಭೌತಿಕವಾಗಿ ಭಾರತಕ್ಕೆ ಮರಳದಿದ್ದರೂ ಅವರ ಅರ್ಜಿಯನ್ನು ವಿಚಾರಣೆ ಮಾಡಬಹುದು ಎಂದು ವಾದಿಸಿದರು.
ಆದರೆ, ಮಲ್ಯ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರು ನಡೆದುಕೊಳ್ಳುತ್ತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದು:
- ಮಲ್ಯ ಭಾರತಕ್ಕೆ ಹಿಂದಿರುಗುವುದಿಲ್ಲವೆಂದು ಅಫಿಡವಿಟ್ ಸಲ್ಲಿಸಬಹುದು.
- ಆದರೆ ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
- ದೇಶಕ್ಕೆ ಮರಳಲು ಇದು ಅಂತಿಮ ಅವಕಾಶ.
ಮುಂದಿನ ವಾರ ವಿಚಾರಣೆ ಮುಂದುವರಿಯಲಿದೆ.
ಕ್ರೀಡೆ
IND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
ಟಿ20 ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತ ಭಾರತ–ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಶಿವರಾತ್ರಿ ಹಬ್ಬದಂದೇ ನಡೆಯಲಿರುವ ಈ ನಿರ್ಣಾಯಕ ಸಮರಕ್ಕಾಗಿ ಎರಡೂ ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಫೆ.12ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿದು ಗೆಲುವಿನ ಆತ್ಮವಿಶ್ವಾಸದೊಂದಿಗೆ ಪಾಕಿಸ್ತಾನ ಎದುರಿಸಲು ಸಜ್ಜಾಗಿದೆ.
ಈ ಮಧ್ಯೆ, ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಭಾರತಕ್ಕೆ ಬಲವಾದ ಎಚ್ಚರಿಕೆ ನೀಡಿದ್ದಾರೆ. “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ. ಅದಕ್ಕಾಗಿ ನನ್ನ ಬೌಲಿಂಗ್ ಶೈಲಿಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.
ಮಾತಿನ ಸಮರ ಜೋರಾಗಿದೆ
ಟಿ20 ವಿಶ್ವಕಪ್ ಈಗ ರೋಚಕ ಹಂತ ತಲುಪಿದ್ದು, ಈಗಾಗಲೇ 15ಕ್ಕೂ ಹೆಚ್ಚು ಪಂದ್ಯಗಳು ಪೂರ್ಣಗೊಂಡಿವೆ. ಭಾರತ–ಪಾಕಿಸ್ತಾನ ಪಂದ್ಯ ನಡೆಯುತ್ತದೆಯೇ? ಎಂಬ ಅನುಮಾನಕ್ಕೆ ತೆರೆಬಿದ್ದಿದ್ದು, ಪಾಕಿಸ್ತಾನ ಪಂದ್ಯಕ್ಕೆ ಒಪ್ಪಿಗೆ ನೀಡಿದೆ.
ಪಂದ್ಯ ಖಚಿತವಾದ ಬೆನ್ನಲ್ಲೇ ಎರಡೂ ತಂಡಗಳ ನಡುವೆ ಮಾತಿನ ಸಮರ ಜೋರಾಗಿದೆ. ಪಾಕಿಸ್ತಾನಿ ಆಟಗಾರರು ಭಾರತವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದರೆ, ಭಾರತೀಯರು ಪಾಕಿಸ್ತಾನವನ್ನು ಮಣಿಸುತ್ತೇವೆ ಎಂದು ತಿರುಗೇಟು ನೀಡುತ್ತಿದ್ದಾರೆ.
ತಾರಿಕ್ ಸಮರ್ಥನೆ
ಭಾರತೀಯರು ನನ್ನ ಬೌಲಿಂಗ್ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಐಸಿಸಿ ನಿಯಮಗಳ ಪ್ರಕಾರ ನನ್ನ ಬೌಲಿಂಗ್ ಶೈಲಿ ಮಾನ್ಯವಾಗಿದೆ ಎಂದು ಉಸ್ಮಾನ್ ತಾರಿಕ್ ಸಮರ್ಥಿಸಿಕೊಂಡಿದ್ದಾರೆ.
“ಭಾರತೀಯ ಆಟಗಾರರಿಗೆ ನನ್ನ ಬೌಲಿಂಗ್ನಿಂದ ಹೆಚ್ಚುವರಿ ಒತ್ತಡ ಇದೆ. ಅದಕ್ಕಾಗಿಯೇ ಆರೋಪ ಮಾಡುತ್ತಿದ್ದಾರೆ. ಫೆಬ್ರವರಿ 15ರಂದು ಭಾರತದ ಅಗ್ರ ಕ್ರಮಾಂಕವನ್ನು ಕೆಡವುತ್ತೇನೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನನ್ನ ಬಗ್ಗೆ ಏನು ಚರ್ಚೆ ನಡೆಯುತ್ತಿದೆ ಎಂಬುದನ್ನು ನಾನು ಪರಿಗಣಿಸುವುದಿಲ್ಲ. ನನ್ನ ಗಮನ ಪಂದ್ಯದಲ್ಲೇ ಇದೆ” ಎಂದು ತಾರಿಕ್ ಹೇಳಿದ್ದಾರೆ.
ದೇಶ
ಜೈರಾಮ್ ರಮೇಶ್ಗೆ ಸುಪ್ರೀಂಕೋರ್ಟ್ ಕಿಡಿ: “ಮಾಧ್ಯಮ ಪ್ರಚಾರಕ್ಕೇ ಅರ್ಜಿ?”
ಹೊಸದಿಲ್ಲಿ: ಪರಿಸರ ಪರವಾನಿಗೆಗೆ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. “ಇದೆಲ್ಲವನ್ನೂ ನೀವು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ಮಾಡುತ್ತಿದ್ದೀರಾ?” ಎಂದು ತ್ರಿಸದಸ್ಯ ಪೀಠ ಕಿಡಿಕಾರಿತು.
ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಲ್ಲಿ ನ್ಯಾ. ಸೂರ್ಯಕಾಂತ್, ನ್ಯಾ. ಜಾಯ್ಮಾಲ್ಯ ಬಾಗ್ಚಿ ಹಾಗೂ ನ್ಯಾ. ಉಜ್ಜಲ್ ಭುಯಾನ್ ಇದ್ದರು. ಪರಿಸರ ಪರವಾನಿಗೆಯನ್ನು ಪೂರ್ವ ಅನ್ವಯವಾಗುವಂತೆ (Retrospective Environmental Clearance) ನೀಡುವ ಕ್ರಮವನ್ನು ಪ್ರಶ್ನಿಸಿ ಜೈರಾಮ್ ರಮೇಶ್ ರಿಟ್ ಅರ್ಜಿ ಸಲ್ಲಿಸಿದ್ದರು.
ರಿಟ್ ಅರ್ಜಿ ಸ್ವೀಕರಿಸಲು ನಿರಾಕರಣೆ
ವಿಚಾರಣೆ ವೇಳೆ ಪೀಠ, ಈ ಅರ್ಜಿ ಕೇಂದ್ರ ಸರ್ಕಾರದ ಕುಂದುಕೊರತೆಯನ್ನು ಹೈಲೆಟ್ ಮಾಡುವ ಬದಲು ಸಾರ್ವಜನಿಕ ಗಮನ ಸೆಳೆಯಲು ಸಲ್ಲಿಸಿದಂತಿದೆ ಎಂದು ಅಭಿಪ್ರಾಯಪಟ್ಟಿತು. ನವೆಂಬರ್ 2025ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಫೆ.12) ಸ್ವೀಕರಿಸಲು ನಿರಾಕರಿಸಿತು.
“ದಂಡ ಎದುರಿಸಲು ಸಿದ್ದರಾಗಿ” ಎಚ್ಚರಿಕೆ
“ತೀರ್ಪಿನ ವಿರುದ್ಧ ರಿಟ್ ಅರ್ಜಿ ಯಾಕೆ? ಮರುಪರಿಶೀಲನಾ ಅರ್ಜಿ (Review Petition) ಸಲ್ಲಿಸಬಹುದು ಅಲ್ಲವೇ? ರಿಟ್ ಮೂಲಕ ಮರುಪರಿಶೀಲನೆ ಸಾಧ್ಯವಿಲ್ಲ ಎಂಬುದು ತಿಳಿದಿಲ್ಲವೇ? ದಂಡ ಎದುರಿಸಲು ಸಿದ್ದರಾಗಿ” ಎಂದು ನ್ಯಾ. ಸೂರ್ಯಕಾಂತ್ ಎಚ್ಚರಿಸಿದರು.
ನ್ಯಾಯಾಲಯದ ಎಚ್ಚರಿಕೆಯ ಬಳಿಕ ಜೈರಾಮ್ ರಮೇಶ್ ಪರ ವಕೀಲರು ಅರ್ಜಿಯನ್ನು ಹಿಂಪಡೆಯಲು ವಿನಂತಿಸಿಕೊಂಡರು. ನ್ಯಾಯಪೀಠ ಅದಕ್ಕೆ ಅನುಮತಿ ನೀಡಿ, ಕಾನೂನಿನ ಪ್ರಕಾರ ಲಭ್ಯವಿರುವ ಪರಿಹಾರವನ್ನು ಪಡೆಯುವಂತೆ ಸೂಚಿಸಿತು.
ಪ್ರಕರಣದ ಹಿನ್ನೆಲೆ
ಜೈರಾಮ್ ರಮೇಶ್ ಯಾವುದೇ ಯೋಜನೆ ಆರಂಭವಾದ ನಂತರ ಪರಿಸರ ಪರವಾನಿಗೆ ನೀಡುವ ಕ್ರಮವನ್ನು ಪ್ರಶ್ನಿಸಿದ್ದರು. ಈ ರೀತಿಯ ಅನುಮತಿ ಕಾನೂನುಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ವಾದಿಸಿದ್ದರು.
ಕೇಂದ್ರ ಸರ್ಕಾರದ ನಿಯಮ ಏನು?
- 2006ರಲ್ಲಿ ಯೋಜನೆ ಆರಂಭಿಸುವ ಮೊದಲು ಪರಿಸರ ಪರವಾನಿಗೆ ಕಡ್ಡಾಯಗೊಳಿಸಲಾಗಿತ್ತು.
- 2017 ಮತ್ತು 2021ರ ಅಧಿಸೂಚನೆಗಳ ಮೂಲಕ ಕೆಲವು ಯೋಜನೆಗಳಿಗೆ ಷರತ್ತುಬದ್ದ ಪೂರ್ವಾನ್ವಯ ಅನುಮತಿ ಅವಕಾಶ ನೀಡಲಾಗಿತ್ತು.
- ಮೇ 2025ರಲ್ಲಿ ಈ ಕ್ರಮವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು.
- ಆದರೆ ನವೆಂಬರ್ 2025ರಲ್ಲಿ CREDAI ಅರ್ಜಿಯ ವಿಚಾರಣೆ ವೇಳೆ ಹಿಂದಿನ ತೀರ್ಪಿನಲ್ಲಿ ಸಡಿಲಿಕೆ ನೀಡಲಾಗಿತ್ತು.
ಈ ಮರುಪರಿಶೀಲಿತ ತೀರ್ಪನ್ನೇ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.
-
ಬೆಂಗಳೂರು17 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ14 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ದೇಶ16 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ಕ್ರೀಡೆ11 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ14 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ಅಪರಾಧ16 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ12 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
-
ದೇಶ15 hours agoBHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ
