Connect with us

ದೇಶ

ಅವಿವಾಹಿತರಿಗೆ ಮದುವೆ ಭಾಗ್ಯ: ಉತ್ತರಕನ್ನಡದಲ್ಲಿ ‘ಜೀವನ ಸಂಗಮ’ ಪೋರ್ಟಲ್ ಆರಂಭ – Jeevana Sangama Portal

Published

on

ಕಾರವಾರ: ಇತ್ತೀಚೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಯುವ ರೈತರೊಬ್ಬರು ತಮಗೆ ಮದುವೆಯಾಗಲು ಕನ್ಯೆ ಹುಡುಕಿಕೊಡುವಂತೆ ಅರ್ಜಿ ಸಲ್ಲಿಸಿರುವ ವಿಷಯ ವ್ಯಾಪಕವಾಗಿ ಸುದ್ದಿಯಾಗಿತ್ತು. ರೈತರು ವಿವಾಹವಾಗಲು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಜದ ಕಣ್ತೆರೆಸಿತ್ತು. ಇದಕ್ಕೆ ಪರಿಹಾರವೆಂಬಂತೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲಾಡಳಿತದ ಮೂಲಕ ರೈತ ಯುವಕರು ಮಾತ್ರವಲ್ಲದೇ, ವಿಕಲಚೇತನರು, ಹೆಚ್​ಐವಿ ಪೀಡಿತರಿಗೆ ವಿವಾಹವಾಗಲು ಸೂಕ್ತ ವೇದಿಕೆ ಒದಗಿಸುವ ವಿನೂತನ ಪ್ರಯತ್ನಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದೆ.

ಉತ್ತರಕನ್ನಡ ಜಿಲ್ಲಾಡಳಿತದ ವೆಬ್​​ಸೈಟ್ https://uttarakannada.nic.in/ನಲ್ಲಿ ‘ಜೀವನ ಸಂಗಮ’ ಎಂಬ ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಜಿಲ್ಲೆಯಲ್ಲಿನ ಯುವ ರೈತರು, ವಿಕಲಚೇತನರು ಹಾಗೂ ವಿಧವೆಯರಿಗೆ ಸೂಕ್ತ ಸಂಗಾತಿಯ ಆಯ್ಕೆಯನ್ನು ಪರಿಚಯಿಸಲು ಹಾಗೂ ಹೆಚ್​ಐವಿ ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ ಸಂಬಂಧಗಳನ್ನು ಬೆಸೆದು, ಅವರು ವಿವಾಹವಾಗಲು ವೇದಿಕೆ ಸಿಗಲಿದೆ. ಈ ಮೂಲಕ ಅವರ ಬದುಕಿನಲ್ಲಿ ಸುಗಮ, ಅರ್ಥಪೂರ್ಣ ಸಂಬಂಧಗಳು ಏರ್ಪಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.

ನೋಂದಣಿಗೆ ಶುಲ್ಕವಿಲ್ಲ: ಜೀವನ ಸಂಗಮ ಪೋರ್ಟಲ್​ಗೆ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಬಳಕೆದಾರರಿಗೆ ಅವರ ವಿವಾಹ ಸಂಬಂಧಗಳಲ್ಲಿ ಸುರಕ್ಷಿತ ಮತ್ತು ಗೌರವಾನ್ವಿತ ವಾತಾವರಣವನ್ನು ಖಾತ್ರಿಪಡಿಸುವ ಜೊತೆಗೆ, ವ್ಯಕ್ತಿಯ ಹಿನ್ನೆಲೆಯನ್ನು ಲೆಕ್ಕಿಸದೆ, ಸಂಬಂಧಗಳನ್ನು ಬಯಸುವ ವ್ಯಕ್ತಿಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಈ ಪೋರ್ಟಲ್ ಸೇವೆ ಪಡೆಯಲು ಬಳಕೆದಾರರು ಯಾವುದೇ ಶುಲ್ಕಗಳಿಲ್ಲದೇ ನೋಂದಾಯಿಸಿಕೊಳ್ಳಬಹುದು. ಆರ್ಥಿಕವಾಗಿ ಹಿಂದುಳಿದ ವರ್ಗದವರೂ ಒಳಗೊಂಡಂತೆ, ಶಿಕ್ಷಣದ ಕೊರತೆ ಮತ್ತು ಯಾವುದೇ ಉದ್ಯೋಗವಿಲ್ಲದ ಕಾರಣ ಸೂಕ್ತ ಜೀವನ ಸಂಗಾತಿ ಸಿಗದ ರೈತ ಯುವಕರಿಗೆ ಉತ್ತಮ ವೇದಿಕೆ ಒದಗಿಸಲಿದೆ.

ಇದು ಎಲ್ಲ ಬಳಕೆದಾರರಿಗೆ ಅತ್ಯಂತ ಸುರಕ್ಷಿತ ಪೋರ್ಟಲ್ ಆಗಿದ್ದು, ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ಎಲ್ಲರ ಗೌಪ್ಯತೆ ಮತ್ತು ಘನತೆಗೆ ಆದ್ಯತೆ ನೀಡಲಾಗಿದೆ. ವಿವಾಹ ಹೊಂದಾಣಿಕೆಯ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ಬಳಸಲಾಗುತ್ತದೆ. ವಿವಾಹವಾಗಲು ಸಲ್ಲಿಸುವ ಅರ್ಜಿ ಮತ್ತು ಪ್ರೊಫೈಲ್​ಗಳನ್ನು ವ್ಯಕ್ತಿಯು ವಾಸವಾಗಿರುವ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸೇರಿದಂತೆ ಉತ್ತರ ಕನ್ನಡ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಅರ್ಜಿದಾರರ ಪ್ರೊಫೈಲ್​ಗಳಲ್ಲಿನ ನೈಜತೆ ಮತ್ತು ವಿಶ್ವಾಸಾರ್ಹತೆಯನ್ನು ಅವರು ಖಚಿತಪಡಿಸುತ್ತಾರೆ.

ವಿವಾಹವಾಗಲು ಅರ್ಜಿ ಸಲ್ಲಿಸುವ ವ್ಯಕ್ತಿಯ ಹಿನ್ನೆಲೆ, ವಾಸಸ್ಥಳ, ಉದ್ಯೋಗ, ಕೌಟುಂಬಿಕ ಪರಿಸ್ಥಿತಿ, ಆತನ ಆದಾಯ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿತಿಗತಿ ಬಗ್ಗೆ ಜಿಲ್ಲೆಯ ವಿವಿಧ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಮಾತ್ರ ಹೊಂದಾಣಿಕೆಯ ಮುಂದಿನ ಪ್ರಕ್ರಿಯೆಯಲ್ಲಿ ಮುಂದುವರೆಯಲು ಅವಕಾಶ ನೀಡಲಾಗುತ್ತದೆ.

ಉತ್ತರ ಕನ್ನಡದವರಿಗೆ ಮಾತ್ರ: ಈ ಸೇವೆಯು ಎಲ್ಲ ಧರ್ಮದವರಿಗೂ ಮುಕ್ತವಾಗಿದ್ದು, ಸಾರ್ವಜನಿಕರು ತಮ್ಮ ಧಾರ್ಮಿಕ ಅದ್ಯತೆಗಳನ್ನು ಮ್ಯಾಚ್ ಮೇಕಿಂಗ್‌ಗೆ ನಿರ್ದಿಷ್ಟಪಡಿಸಲು ಅವಕಾಶ ನೀಡುವುದರ ಜೊತೆಗೆ, ತಮ್ಮದೇ ಆದ ಜಾತಿಯೊಳಗೆ ಹೊಂದಾಣಿಕೆಗಳನ್ನು ಆಯ್ಕೆ ಮಾಡಬಹುದು. ಜೊತೆಗೆ, ಅಂತರ್ಜಾತಿ ಆಯ್ಕೆಗಳಿಗೂ ಅವಕಾಶವಿದ್ದು, ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ತಮಗೆ ಇಚ್ಚಿಸುವ ಹೊಂದಾಣಿಕೆಯನ್ನು ಆಯ್ಕೆ ಮಾಡಬಹುದು. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ – ಯುವತಿಯರಿಗೆ ಮಾತ್ರ ಈ ವಿವಾಹ ಹೊಂದಾಣಿಕೆಗೆ ಅವಕಾಶವಿದೆ.

ಅಂತರ್ಜಾತಿ ಮತ್ತು ವಿಕಲಚೇತನರನ್ನು ವಿವಾಹವಾಗುವವರಿಗೆ ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ಸೇರಿದಂತೆ ಎಲ್ಲ ರೀತಿಯ ನೆರವು ಒದಗಿಸಲಾಗುವುದು. 10ಕ್ಕಿಂತ ಹೆಚ್ಚು ಜೋಡಿಗಳು ಒಪ್ಪಿಗೆ ನೀಡಿದಲ್ಲಿ ವಿವಿಧ ಸಂಘ – ಸಂಸ್ಥೆಗಳ ನೆರವಿನಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಚಿಂತನೆ ಇದೆ. ಜಿಲ್ಲೆಯ ಅನಾಥಾಶ್ರಮಗಳಲ್ಲಿನ ಯುವತಿಯರಿಗೂ ಸಹ ಈ ಪೋರ್ಟಲ್ ಮೂಲಕ ಸೂಕ್ತ ಜೀವನ ಸಂಗಾತಿ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶ

Sakkath Santhe 2026: ಗೃಹ ಉತ್ಪನ್ನಗಳಿಗೆ ವೇದಿಕೆ, ಇಂದಿರಾನಗರದಲ್ಲಿ ಜನಸಾಗರ

Published

on

ಬೆಂಗಳೂರು: ನಗರದ ಇಂದಿರಾನಗರ ಬಡಾವಣೆಯಲ್ಲಿ ಆಯೋಜಿಸಲಾದ ‘ಸಕ್ಕತ್ ಸಂತೆ 2026’ (Sakkath Santhe 2026) ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ನೂರಾರು ವೈವಿಧ್ಯಮಯ ಮಳಿಗೆಗಳಲ್ಲಿ ಪ್ರದರ್ಶನಗೊಂಡ ಗೃಹ ಉತ್ಪನ್ನಗಳು, ಕೈಗಾರಿಕಾ ವಸ್ತುಗಳು ಹಾಗೂ ಸ್ಥಳೀಯ ಉದ್ಯಮಿಗಳ ಉತ್ಪನ್ನಗಳನ್ನು ವೀಕ್ಷಿಸಲು ಸಾವಿರಾರು ಜನರು ಭೇಟಿ ನೀಡಿ ಖರೀದಿಸಿದರು.

ವಿಶೇಷವಾಗಿ ಮಹಿಳಾ ಕಿರು ಉದ್ಯಮಿಗಳು, ಗೃಹಾಧಾರಿತ ಉದ್ಯಮಿಗಳು ಹಾಗೂ ಸ್ಥಳೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಸಂತೆ ಆಯೋಜಿಸಲಾಗಿತ್ತು. ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸುವ ಅವಕಾಶ ದೊರೆತಿದ್ದು, ಉತ್ತಮ ವ್ಯಾಪಾರವೂ ನಡೆದಿರುವುದಾಗಿ ಭಾಗವಹಿಸಿದ ಉದ್ಯಮಿಗಳು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಮಿಸೆಸ್ ಇಂಡಿಯಾ 2021 ವಿಜೇತೆ ಡಾ. ಸ್ಮಿತಾ ಪ್ರಭು ಚಾಲನೆ ನೀಡಿದರು. ಬಳಿಕ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಪ್ರದರ್ಶನಗೊಂಡಿದ್ದ ನವೀನ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ವೀಕ್ಷಿಸಿದರು. ಅಲ್ಲದೆ ಮಹಿಳಾ ಉದ್ಯಮಿಗಳು ಹಾಗೂ ಪ್ರತಿಭಾವಂತ ಕಿರು ಉದ್ಯಮಿಗಳೊಂದಿಗೆ ಸಂವಾದ ನಡೆಸಿ, ಅವರ ಪ್ರಯತ್ನಗಳನ್ನು ಶ್ಲಾಘಿಸಿ ಇನ್ನಷ್ಟು ಬೆಳೆಯುವಂತೆ ಪ್ರೋತ್ಸಾಹಿಸಿದರು.

ಈ ಯಶಸ್ವಿ ಕಾರ್ಯಕ್ರಮದ ಹಿಂದೆ ಶ್ರಮಿಸಿದ ಸ್ವಾತಿ ಶೆಟ್ಟಿ ಹಾಗೂ ಅವರ ಸಂಪೂರ್ಣ ತಂಡಕ್ಕೆ ಸಾರ್ವಜನಿಕರು, ಭಾಗವಹಿಸಿದ ಉದ್ಯಮಿಗಳು ಮತ್ತು ಅತಿಥಿಗಳು ಅಭಿನಂದನೆ ಸಲ್ಲಿಸಿದರು. ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮಗಳು ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ನಿರ್ಮಿಸುವುದರ ಜೊತೆಗೆ ಸಣ್ಣ ಉದ್ಯಮಗಳ ಬೆಳವಣಿಗೆಗೂ ನೆರವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ‘ಸಕ್ಕತ್ ಸಂತೆ’ ಆಯೋಜಿಸಲು ತಂಡಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Continue Reading

ದೇಶ

ಇಂದಿನ ರಾಶಿ ಭವಿಷ್ಯ: ಮೇಷದಿಂದ ಮೀನದವರೆಗೆ ಯಾರಿಗೆ ಶುಭ? ಯಾರಿಗೆ ಎಚ್ಚರಿಕೆ?

Published

on

ಬೆಂಗಳೂರು: ಇಂದು ಜುಲೈ 6, 2026, ಸೋಮವಾರ. ಹಿಂದೂ ಪಂಚಾಂಗದ ಪ್ರಕಾರ ಇಂದು ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯಣ, ಕೃಷ್ಣ ಪಕ್ಷದ ಷಷ್ಠಿ ತಿಥಿ ಹಾಗೂ ಪೂರ್ವಾಭಾದ್ರಪದ ನಕ್ಷತ್ರ ಇರುತ್ತದೆ. ಧಾರ್ಮಿಕ ಕಾರ್ಯಗಳು, ಶುಭಾರಂಭಗಳು ಮತ್ತು ದೈನಂದಿನ ನಿರ್ಧಾರಗಳಿಗೆ ಪಂಚಾಂಗವನ್ನು ಅನುಸರಿಸುವವರಿಗೆ ಇಂದಿನ ದಿನದ ಪ್ರಮುಖ ಸಮಯಗಳ ಮಾಹಿತಿ ಇಲ್ಲಿದೆ.

ಇಂದು ಸೂರ್ಯೋದಯ ಬೆಳಗ್ಗೆ 5:55ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 6:49ಕ್ಕೆ ಸಂಭವಿಸುತ್ತದೆ. ಅಮೃತಕಾಲ ಮಧ್ಯಾಹ್ನ 1:59ರಿಂದ 3:36ರವರೆಗೆ ಇದ್ದು, ಈ ಅವಧಿಯನ್ನು ಶುಭ ಕಾರ್ಯಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ದುರ್ಮುಹೂರ್ತ ಮಧ್ಯಾಹ್ನ 12:19ರಿಂದ 1:07ರವರೆಗೆ ಹಾಗೂ 2:43ರಿಂದ 3:31ರವರೆಗೆ ಇರುತ್ತದೆ. ರಾಹುಕಾಲ ಬೆಳಗ್ಗೆ 7:32ರಿಂದ 9:09ರವರೆಗೆ ಇರುವುದರಿಂದ ಈ ಸಮಯದಲ್ಲಿ ಹೊಸ ಕೆಲಸಗಳನ್ನು ಆರಂಭಿಸುವುದನ್ನು ಅನೇಕರು ತಪ್ಪಿಸುತ್ತಾರೆ.

ರಾಶಿ ಭವಿಷ್ಯದ ಪ್ರಕಾರ ಮೇಷ ರಾಶಿಯವರಿಗೆ ಪರಿಶ್ರಮಕ್ಕೆ ತಕ್ಕ ಯಶಸ್ಸು ದೊರೆಯುವ ಸಾಧ್ಯತೆ ಇದೆ. ವೃಷಭ ರಾಶಿಯವರು ಆರಂಭಿಕ ಸವಾಲುಗಳ ಬಳಿಕ ಗುರಿ ಸಾಧಿಸಲಿದ್ದಾರೆ. ಮಿಥುನ ರಾಶಿಯವರಿಗೆ ವ್ಯಾಪಾರ ಹಾಗೂ ಸಾಮಾಜಿಕ ಚಟುವಟಿಕೆಗಳು ಅನುಕೂಲಕರವಾಗಿವೆ. ಸಿಂಹ ರಾಶಿಯವರು ಕೋಪ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ತುಲಾ ರಾಶಿಯವರಿಗೆ ಪ್ರವಾಸದ ಅವಕಾಶಗಳು ದೊರೆಯಬಹುದು. ಧನು ರಾಶಿಯವರಿಗೆ ನಿರೀಕ್ಷೆಗಿಂತ ಹೆಚ್ಚಿನ ಫಲ ದೊರೆಯುವ ಸಾಧ್ಯತೆ ಇದೆ. ಕುಂಭ ರಾಶಿಯವರು ವಾಸ್ತವಿಕ ನಿರ್ಧಾರಗಳನ್ನು ಕೈಗೊಳ್ಳುವುದು ಒಳಿತು.

ದೈನಂದಿನ ಜೀವನದಲ್ಲಿ ಪಂಚಾಂಗದ ಜೊತೆಗೆ ರಾಶಿ ಭವಿಷ್ಯವನ್ನು ಗಮನಿಸುವುದು ಅನೇಕರು ಅನುಸರಿಸುವ ಸಂಪ್ರದಾಯವಾಗಿದೆ. ಇಂದಿನ ಶುಭ ಸಮಯಗಳನ್ನು ಗಮನದಲ್ಲಿಟ್ಟುಕೊಂಡು ದಿನದ ಕಾರ್ಯಗಳನ್ನು ಯೋಜಿಸಬಹುದು.

Continue Reading

ದೇಶ

SIR ಎಂದರೇನು? ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಂಪೂರ್ಣ ಮಾಹಿತಿ

Published

on

ಬೆಂಗಳೂರು: ಕರ್ನಾಟಕದಲ್ಲಿ Special Intensive Revision (SIR) ಅಥವಾ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರ ಪಟ್ಟಿಯನ್ನು ಹೆಚ್ಚು ನಿಖರಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ (ECI) ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ನಡೆಸುತ್ತಿದೆ.

ಈ ಪ್ರಕ್ರಿಯೆಯ ಪ್ರಮುಖ ಉದ್ದೇಶ ಸತ್ತವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಾಗಿದೆ. ಕರ್ನಾಟಕದಲ್ಲಿ 5.54 ಕೋಟಿಗೂ ಅಧಿಕ ಮತದಾರರು ನೋಂದಾಯಿತರಾಗಿದ್ದು, ಅವರಲ್ಲಿ ಸುಮಾರು 91.61% ಮತದಾರರ ವಿವರಗಳು ಈಗಾಗಲೇ ಮ್ಯಾಪ್ ಆಗಿವೆ. ಉಳಿದ ಮತದಾರರ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸಾವಿರಾರು ಅಧಿಕಾರಿಗಳು ಹಾಗೂ 5,950 BLOಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರಿಗೆ ಅಗತ್ಯ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಸೇವಾ ಸಿಂಧು, ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯುವ ವ್ಯವಸ್ಥೆಯನ್ನೂ ಸರ್ಕಾರ ಕಲ್ಪಿಸಿದೆ.

ಇದೀಗ SIR ಪ್ರಕ್ರಿಯೆ ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ಕೆಲವು ರಾಜಕೀಯ ಪಕ್ಷಗಳು ಮನೆ-ಮನೆ ಪರಿಶೀಲನೆಯ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ವಿತರಣೆ, ನಿಯಮ ಉಲ್ಲಂಘನೆ ಹಾಗೂ ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನು ಮಾಡಿವೆ. ಆದರೆ, ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ಇನ್ನೂ ಮ್ಯಾಪ್ ಆಗದ ಮತದಾರರ ಹೆಸರುಗಳು ತಕ್ಷಣವೇ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಕರಡು ಪಟ್ಟಿ ಪ್ರಕಟವಾದ ಬಳಿಕ ದಾಖಲೆ ಸಲ್ಲಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ನಿಖರವಾಗಿಡುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.

Continue Reading

Trending