ರಾಜಕೀಯ
40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ
ಹೈದರಾಬಾದ್: ಒಂದೊಂದು ರಾಜ್ಯಗಳು ಒಂದೊಂದು ರಾಜಕೀಯ ಇತಿಹಾಸವನ್ನು ಹೊಂದಿವೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಜಕೀಯ ಇತಿಹಾಸಗಳು ಒಂದೊಂದು ರಾಜ್ಯದಲ್ಲಿಯೂ ವಿಭಿನ್ನ ಹಾಗೂ ಅಧ್ಯಯನಕಾರಕ ಅಂಶಗಳನ್ನೇ ಹೊಂದಿವೆ. ಕರ್ನಾಟಕದ್ದು ಒಂದು ಚರಿತ್ರೆಯಾದ್ರೆ, ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನಲ್ಲಿ ಇನ್ನೊಂದು ಚರಿತ್ರೆಯಿದೆ. ಆದ್ರೆ ಈ ಆಂಧ್ರಪ್ರದೇಶ ರಾಜಕೀಯ ಚರಿತ್ರೆಯೇ ವಿಭಿನ್ನ. ಇಲ್ಲಿ ವಾಗ್ಯುದ್ಧಗಳಿಗಿಂತ, ಟೀಕೆ ಟಿಪ್ಪಣಿಗಳಿಗಿಂತ ಜಾಸ್ತಿ ಚಾಲ್ತಿಯಲ್ಲಿದ್ದಿದ್ದು ಈಗ ಇರೋದು ಕೂಡ ರಕ್ತ ಚರಿತ್ರೆಯೇ. ಇಲ್ಲಿ ಸಣ್ಣ, ಸಣ್ಣ ವಿಷಯಗಳಿಗೆ ಕತ್ತಿ ಝಳಪಿಸುತ್ತೆ. ಕಲ್ಲು ತೂರಿ ಬರುತ್ವೆ, ಇನ್ಯಾರೋ ಇನ್ಯಾರನ್ನೋ ನೇಣಿಗೆ ಬಿಗಿದು ಉಸಿರು ನಿಲ್ಲಿಸುತ್ತಾರೆ. ಈ ಚರಿತ್ರೆ ಈಗ 21ನೇ ಶತಮಾನದಲ್ಲಿಯೂ ಮುಂದುವರಿದಿದೆ. ಈ ರಾಜಕೀಯ ರಕ್ತ ಚರಿತ್ರೆಯ ಕುರಿತು ಅನೇಕ ಸಿನಿಮಾಗಳು ಬಂದಿವೆ. ಕಥೆ ಕಾದಂಬರಿಗಳನ್ನು ಬರೆಯಲಾಗಿದೆ. ಆದರೂ ಕೂಡ ಇಲ್ಲಿನ ರಕ್ತಚರಿತ್ರೆಯ ರಾಜಕೀಯ ಮಾತ್ರ ಬದಲಾಗಿಲ್ಲ. 12ನೇ ಶತಮಾನದಿಂದ ಆರಂಭವಾದ ಈ ರಕ್ತ ರಾಜಕೀಯ ಈಗಲೂ ಕೂಡ ತನ್ನ ಕರಾಳ ಯುದ್ಧವೊಂದನ್ನು ಜಾರಿಯಲ್ಲಿಯೇ ಇಟ್ಟಿದೆ.
2024ರಲ್ಲಿ ಲೋಕಸಭಾ ಚುನಾವಣೆ ಜೊತೆ ಜೊತೆಗೆ ವಿಧಾನಸಭಾ ಚುನಾವಣೆಯನ್ನೂ ಕೂಡ ಎದುರಿಸಿತ್ತು ಆಂಧ್ರಪ್ರದೇಶ. ಐದು ವರ್ಷದ ಜಗನ್ ಸರ್ಕಾರವನ್ನು ತಿರಸ್ಕರಿಸಿದ ಜನರು ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ ಜನಸೇನಾ ಪಕ್ಷದ ಮೈತ್ರಿ ಸರ್ಕಾರಕ್ಕೆ ಬಹುಮತ ನೀಡಿದರು. ಅಂದಿನಿಂದ ಇಂದಿನವರೆಗೂ ಆಂಧ್ರಪ್ರದೇಶದ ದಿನಪತ್ರಿಕೆಗಳಲ್ಲಿ ಹರಿದಾಡಿದ್ದು ಕೇವಲ ರಕ್ತ ರಾಜಕೀಯದ ಸುದ್ದಿ. ಚುನಾವಣಾ ಫಲಿತಾಂಶ ಬಂದ ಕೆಲವೇ ಗಂಟೆಗಳಲ್ಲಿ ಗುಂಟೂರಿನಲ್ಲಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ದಾಳಿ ನಡೆಯಿತು, ಕಲ್ಲು ತೂರಾಟಗಳು ನಡೆದವು. ಎರಡು ಪಕ್ಷಗಳ ನಡುವಿನ ವೈರತ್ವ ಬೇರೆಯದ್ದೇ ಸೀಮೆ ತಲುಪಿತು ಕೊನೆಗೆ ಟಿಡಿಪಿಯ ನಾಯಕನೊಬ್ಬ ವೈಎಸ್ಆರ್ ಕಾಂಗ್ರೆಸ್ ಮುಖಂಡನ ಹತ್ಯೆ ಮಾಡಿದ ಮೇಲೆ ಆಂಧ್ರಪ್ರದೇಶ ಮತ್ತೊಂದು ಬಾರಿ ರಕ್ತ ರಾಜಕೀಯಕ್ಕೆ ಸಾಕ್ಷಿಯಾಯ್ತು.
ಪಲ್ನಾಡು ಜಿಲ್ಲೆಯಲ್ಲಿ ಜುಲೈ 17ನೇ ತಾರೀಖಿನ ರಾತ್ರಿ ಸುಮಾರು 8.30ಕ್ಕೆ ಬರ್ಬರ ಹತ್ಯೆಯೊಂದು ಈಗ ಆಂಧ್ರಪ್ರದೇಶದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಎಸ್.ಕೆ ಜೈಲಾನಿ ಅನ್ನೋ ವ್ಯಕ್ತಿ ರಶೀದ್ ಎಂಬು 25 ವರ್ಷದ ಯುವಕನನ್ನು ನಟ್ಟನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಹತ್ಯೆಯಾದ ಯುವಕ ರಶೀದ್ನನ್ನು ವೈಎಸ್ಆರ್ಪಿ ಕಾಂಗ್ರೆಸ್ನ ಯುವ ಘಟಕದ ಸದಸ್ಯ ಎಂದು ಗುರುತಿಸಲಾಗಿದೆ. ಚಾಕುವಿನಿಂದ ಇರಿದು ಕೊಂದಿದ್ದಲ್ಲದೇ ಆತನ ಕೈಗಳನ್ನು ಕತ್ತರಿಸಿ ಹಾಕಲಾಗಿತ್ತು. ಜನನಿಬೀಡ ಪ್ರದೇಶದಲ್ಲಿಯೇ, ನಟ್ಟ ನಡು ರಸ್ತೆಯಲ್ಲಿಯೇ ನಡೆದು ಹೋದ ಈ ಭೀಕರ ಹತ್ಯೆ ಕಂಡ ಜನರು ಬೆಚ್ಚಿ ಬಿದ್ದು ಹೋಗಿದ್ದರು. ಈ ಒಂದು ಕೊಲೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ನಾಯಕರ ನಡುವೆ ಜೋರಾದ ವಾಗ್ಯುದ್ಧಗಳಿಗೆ ಸಾಕ್ಷಿಯಾಗಿದೆ.
ಎಕ್ಸ್ ಖಾತೆಯಲ್ಲಿ ಉಭಯ ಪಾರ್ಟಿಗಳ ನಾಯಕರು ಒಬ್ಬರ ಮೇಲೋಬ್ಬರು ಮುಗಿಬೀಳುತ್ತಿದ್ದಾರೆ. ಟಿಡಿಪಿ ಸರ್ಕಾರ ರಚನೆಯಾಗಿ ಕೇವಲ ಒಂದೇ ಒಂದು ತಿಂಗಳಲ್ಲಿ ಒಟ್ಟು 31 ಜನರ ಹತ್ಯೆಯಾಗಿದೆ. 300 ಜನರ ಮೇಲೆ ಮಾರಣಾಂತಿಕ ಹಲ್ಲೆಗಳಾಗಿವೆ. 35 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಇವೆಲ್ಲವೂ ಕೂಡ ಟಿಡಿಪಿ ಪಕ್ಷದ ನಾಯಕರ ಶೋಷಣೆಯಿಂದಲೇ ನಡೆದಿವೆ. ಇಷ್ಟು ಮಾತ್ರವಲ್ಲ 560 ಖಾಸಗಿಯವರ ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆ. 490 ಸರ್ಕಾರಿ ಆಸ್ತಿಗಳ ಮೇಲೆ ದಾಳಿ ನಡೆದಿದೆ. 2700 ಜನರು ತಮ್ಮ ಹಳ್ಳಿಗಳನ್ನು ತೊರೆದು ಬೇರೆಡೆಗೆ ಹೋಗಿದ್ದಾರೆ. ಇವೆಲ್ಲವೂ ಟಿಡಿಪಿ ಪಕ್ಷದ ಶೋಷಣೆ, ದುರ್ವತನೆಯಿಂದಲೇ ನಡೆಯುತ್ತಿವೆ ಎಂದು ವೈಎಸ್ಆರ್ ಕಾಂಗ್ರೆಸ್ ನಾಯಕರು ನಾಯ್ಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶ
Karnataka BJP President: ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯುವುದು ಬಹುತೇಕ ಖಚಿತ!
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ (Karnataka BJP President) ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾಹಿತಿ ಪಕ್ಷದ ಆಂತರಿಕ ವಲಯದಿಂದ ಹೊರಬಿದ್ದಿದೆ. ಪಕ್ಷದ ಹಿರಿಯ ನಾಯಕರು ನಡೆಸಿದ ಆಂತರಿಕ ಅಭಿಪ್ರಾಯ ಸಂಗ್ರಹದಲ್ಲೂ ವಿಜಯೇಂದ್ರ ಪರವಾಗಿ ಬಹುಮತದ ಬೆಂಬಲ ವ್ಯಕ್ತವಾಗಿದ್ದು, ಈ ವರದಿ ಇದೀಗ ಬಿಜೆಪಿ ಹೈಕಮಾಂಡ್ಗೆ ಸಲ್ಲಿಕೆಯಾಗಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕುರಿತ ಗೊಂದಲ ಕಳೆದ ಕೆಲವು ವಾರಗಳಿಂದ ಪಕ್ಷದ ಒಳಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರ ಪಕ್ಷದ ಸಂಘಟನೆ ಹಾಗೂ ಹೋರಾಟದ ರಾಜಕಾರಣದ ಮೇಲೂ ಪರಿಣಾಮ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದ ಹಿನ್ನೆಲೆ, ಗೊಂದಲ ನಿವಾರಣೆಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹ ನಡೆಸಿದ್ದರು.
ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಈ ವರದಿಯನ್ನು ದೆಹಲಿಗೆ ಕಳುಹಿಸುವ ಸಾಧ್ಯತೆ ಇದೆ. ಸೋಮವಾರದ ನಂತರ ಅಧಿಕೃತವಾಗಿ ರಾಷ್ಟ್ರೀಯ ನಾಯಕತ್ವದ ಮುಂದೆ ವರದಿ ಮಂಡನೆಯಾಗಲಿದ್ದು, ಅದರ ಬಳಿಕ ರಾಜ್ಯಾಧ್ಯಕ್ಷರ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ವಿಜಯೇಂದ್ರ ಪರ ಬಹುಮತ ಬೆಂಬಲ
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. “ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕೇ? ಬದಲಿಸಿದರೆ ಯಾರಿಗೆ ಅವಕಾಶ ನೀಡಬೇಕು?” ಎಂಬ ಪ್ರಶ್ನೆಗಳ ಆಧಾರದಲ್ಲಿ ನಾಯಕರು ಹಾಗೂ ಶಾಸಕರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.
ಕೆಲವರು ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೂ, ಬಹುತೇಕ ನಾಯಕರು ಮತ್ತು ಸಂಘಟನಾ ವಲಯ ವಿಜಯೇಂದ್ರ ಪರವೇ ಅಭಿಪ್ರಾಯ ನೀಡಿರುವುದು ಅವರ ಸ್ಥಾನ ಇನ್ನಷ್ಟು ಬಲಪಡಿಸಿದೆ.
ದೆಹಲಿಯಲ್ಲಿ ಮಹತ್ವದ ಚರ್ಚೆ ಸಾಧ್ಯತೆ
ಶಿವಪ್ರಕಾಶ್ ಹಾಗೂ ಬೈಜಯಂತ್ ಪಾಂಡಾ ಈಗಾಗಲೇ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಜೊತೆಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಸಂಘಟನೆ, ಮುಂಬರುವ ರಾಜಕೀಯ ಹೋರಾಟಗಳು ಹಾಗೂ ಅಧ್ಯಕ್ಷರ ಆಯ್ಕೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರಮಣಕಾರಿ ಹೋರಾಟ ಸಂಘಟಿಸಲು ಮುಂದಿನ ದಿನಗಳಲ್ಲಿ ಹೊಸ ತಂತ್ರ ರೂಪಿಸುವ ಸಾಧ್ಯತೆ ಇದ್ದು, ವಿಜಯೇಂದ್ರ ಮುಂದುವರಿದರೆ ಪಕ್ಷದ ಸಂಘಟನೆಗೆ ಮತ್ತಷ್ಟು ಚೈತನ್ಯ ಸಿಗಲಿದೆ ಎನ್ನುವ ಲೆಕ್ಕಾಚಾರವೂ ಪಕ್ಷದೊಳಗೆ ಕೇಳಿಬರುತ್ತಿದೆ.
ದೇಶ
ಶಿವಲಿಂಗ ಅಪವಿತ್ರ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ವಾಪಸ್
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು (State Govt) ಮತ್ತೊಮ್ಮೆ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಮುಂದಾಗಿದೆ ಎಂಬ ಆರೋಪಗಳ ನಡುವೆಯೇ, ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಪ್ರಸಿದ್ಧ ಲಾಡ್ಲೆ ಮುಶಾಕ್ ದರ್ಗಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಕೇಸ್ಗಳನ್ನು ವಾಪಸ್ ಪಡೆಯುವ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರದ ಕ್ರಮ ಈಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯ ಆಧಾರದ ಮೇಲೆ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 2022ರ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಲವು ಸ್ಥಳೀಯ ಮುಖಂಡರು ಹಾಗೂ ಯುವಕರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.
2022ರ ಶಿವರಾತ್ರಿ ಸಂದರ್ಭದಲ್ಲಿ ಆಳಂದ ಪಟ್ಟಣದ ಲಾಡ್ಲೆ ಮುಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಯ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಭಾರೀ ಉದ್ವಿಗ್ನತೆ ಉಂಟಾಗಿತ್ತು. ಶಿವಲಿಂಗದ ಮೇಲೆ ಕಿಡಿಗೇಡಿಗಳು ಮಲಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದ ಬಳಿಕ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು.
ಈ ಹಿನ್ನೆಲೆಯಲ್ಲಿ ಶಿವಲಿಂಗ ಶುದ್ಧೀಕರಣ ಹಾಗೂ ಮಹಾಪೂಜೆಗೆ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಹಲವರು ಸ್ಥಳಕ್ಕೆ ತೆರಳಿದ್ದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಉದ್ರಿಕ್ತ ಗುಂಪೊಂದು ಕಲ್ಲು ತೂರಾಟ ನಡೆಸಿ ಅಧಿಕಾರಿಗಳು ಹಾಗೂ ನಾಯಕರ ವಾಹನಗಳ ಮೇಲೆ ದಾಳಿ ಮಾಡಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯಾಗಿದೆ ಎಂಬ ಆರೋಪದಡಿ ಪೊಲೀಸರು ಹಲವು ಎಫ್ಐಆರ್ ದಾಖಲಿಸಿದ್ದರು.
ಈಗ ಆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 13 ಪ್ರಮುಖ ಪ್ರಕರಣಗಳನ್ನು ಸರ್ಕಾರ ಅಧಿಕೃತವಾಗಿ ವಾಪಸ್ ಪಡೆದಿದೆ. ಸರ್ಕಾರದ ಈ ಕ್ರಮದ ವಿರುದ್ಧ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಕಾನೂನು ಸುವ್ಯವಸ್ಥೆ ಹಾಳು ಮಾಡಿದವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ” ಎಂದು ಆರೋಪಿಸಿವೆ.
ಇನ್ನೊಂದೆಡೆ, ಸರ್ಕಾರದ ನಿರ್ಧಾರವನ್ನು ಬೆಂಬಲಿಸುವವರು “ಸಾಮಾಜಿಕ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಂಡ ತೀರ್ಮಾನ” ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಈ ನಿರ್ಧಾರ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.
ದೇಶ
‘ನೀಟ್ ಅಕ್ರಮಕ್ಕೆ ಮೋದಿ-ಧರ್ಮೇಂದ್ರ ಪ್ರಧಾನ್ ಹೊಣೆ’: CM ಸಿದ್ದರಾಮಯ್ಯ
ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ NEET ವೈದ್ಯಕೀಯ ಪ್ರವೇಶ ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಪ್ರಧಾನಿ Narendra Modi ಹಾಗೂ ಕೇಂದ್ರ ಶಿಕ್ಷಣ ಸಚಿವ Dharmendra Pradhan ನೇರ ಹೊಣೆ ಹೊರಬೇಕು ಎಂದು ಮುಖ್ಯಮಂತ್ರಿ Siddaramaiah ಒತ್ತಾಯಿಸಿದರು.
ಬೆಂಗಳೂರಿನ Freedom Park ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, “ಈ ಹಿಂದೆ ರಾಜ್ಯಗಳು ತಮ್ಮದೇ CET ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುತ್ತಿದ್ದರು. ಆದರೆ 2016ರಲ್ಲಿ ಮೋದಿ ಸರ್ಕಾರ ಬಲವಂತವಾಗಿ NEET ಜಾರಿಗೆ ತಂದ ಬಳಿಕ ಅಕ್ರಮಗಳು ಹೆಚ್ಚಾಗಿವೆ” ಎಂದು ಆರೋಪಿಸಿದರು.
“ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯ ವಿಷಯ. ರಾಜ್ಯಗಳಿಗೆ ಸ್ವಾಯತ್ತತೆ ಇರಬೇಕು. ಆದರೆ ಕೇಂದ್ರ ಸರ್ಕಾರ ಎಲ್ಲಾ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡ ಪರಿಣಾಮ ಇಂತಹ ಹಗರಣಗಳು ಮರುಕಳಿಸುತ್ತಿವೆ” ಎಂದು ಅವರು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ವರ್ಷವಿಡೀ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ ಪೇಪರ್ ಲೀಕ್ ಮೂಲಕ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಸಿಎಂ, “ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹತಾಶರಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಬಿಜೆಪಿ ಆಡಳಿತದಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ PSI ನೇಮಕಾತಿ ಹಗರಣವನ್ನೂ ಉಲ್ಲೇಖಿಸಿದರು. “ದೇಶದ ಯುವಜನತೆ ಆಕ್ರೋಶದಲ್ಲಿದ್ದರೂ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ” ಎಂದು ಟೀಕಿಸಿದರು.
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ದೊರೆಯುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
