ರಾಜಕೀಯ

ಜೆಡಿಎಸ್​ ಚಿಹ್ನೆಯಿಂದ ಸ್ಪರ್ಧಿಸಲು ಹೈಕಮಾಂಡ್​ ಹೇಳಿದರೆ, ಅದಕ್ಕೂ ಬದ್ಧ: ಸಿ.ಪಿ.ಯೋಗೇಶ್ವರ್ – C P Yogeshwar

ರಾಮನಗರ: “ಉಪ ಚುನಾವಣೆಯಲ್ಲಿ ತಮಗೆ ಟಿಕೆಟ್‌ ಸಿಗದಿದ್ದರೂ ಬಿಜೆಪಿ ತೊರೆಯುವುದಿಲ್ಲ. ನಾನು ಬಿಜೆಪಿ ಪಕ್ಷ ಬಿಡುವುದಿಲ್ಲ” ಎಂದು ಮೈತ್ರಿ ಟಿಕೆಟ್‌ ಪ್ರಬಲ ಆಕಾಂಕ್ಷಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ.

ದೆಹಲಿ ಭೇಟಿ ಬಳಿಕ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, “ಬಿಜೆಪಿ ರಾಜ್ಯ ಹಿರಿಯ ಮುಖಂಡರೊಂದಿಗೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕ್ಷೇತ್ರವನ್ನು ಜೆಡಿಎಸ್‌ ಉಳಿಸಿಕೊಂಡರೂ ಪರವಾಗಿಲ್ಲ. ನನ್ನ ಪಕ್ಷ ನಿಷ್ಠೆ ಅಚಲ” ಎಂದರು‌.

ಹೆಚ್​ಡಿಕೆ ರಾಜೀನಾಮೆಯಿಂದ ಕ್ಷೇತ್ರಕ್ಕೆ ಉಪಚುನಾವಣೆ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವುಗೊಂಡಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮಧ್ಯೆ ಪೈಪೋಟಿ ನಡೆಯುತ್ತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ಗೆ ಬಿಜೆಪಿಯಲ್ಲಿ ಸಿ.ಪಿ.ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾದರೆ, ಅತ್ತ ಹೇಗಾದರೂ ಮಾಡಿ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕು ಎಂದು ಜೆಡಿಎಸ್‌ ಪಣತೊಟ್ಟಿದೆ. ಇದರ ಭಾಗವಾಗಿಯೇ ಎಚ್‌.ಡಿ ಕುಮಾರಸ್ವಾಮಿ ತಾನು ಗೆದ್ದ ಕ್ಷೇತ್ರದಲ್ಲಿ ಮತ್ತೊಮ್ಮೆ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ನಿಲ್ಲಿಸಿ ರಾಜಕೀಯದಲ್ಲಿ ಮುನ್ನೆಲೆಗೆ ತರುವ ಪಣ ತೊಟ್ಟಿದ್ದಾರೆ. ಆದರೆ ಸದ್ಯ ಸವಾಲಿರುವುದು ಪಕ್ಷದೊಳಗೆ ಅಲ್ಲ, ಬಿಜೆಪಿಯಿಂದ. ಬಿಜೆಪಿ ಜೆಡಿಎಸ್ ಮೈತ್ರಿಯಾಗಿರೋದ್ರಿಂದ ಎರಡೂ ಪಕ್ಷಗಳು ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ.

ಜೆಡಿಎಸ್‌ನಿಂದಾದರೂ ಸ್ಪರ್ಧಿಸುತ್ತೇನೆ: ಮತ್ತೊಂದೆಡೆ, “ಜೆಡಿಎಸ್‌ ಚಿಹ್ನೆ ಮೂಲಕ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ತಿಳಿಸಿದರೂ ಕೂಡ ನಾನು ಬದ್ಧ” ಎಂದಿರುವ ಸಿ.ಪಿ.ಯೋಗೇಶ್ವರ್, ಈ ಮಧ್ಯೆ ಚನ್ನಪಟ್ಟಣ ಉಪ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ನಾಲ್ಕೈದು ಸಭೆ ನಡೆಸಿರೋದಕ್ಕೆ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ಅಕ್ಕೂರು ಜಿ.ಪಂ.ವ್ಯಾಪ್ತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಮುಖಂಡರ ಸಭೆ ನಡೆಸಿದ್ದರು. ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಜಯಮುತ್ತು ಈ ಸಭೆಯನ್ನು ಆಯೋಜನೆ ಮಾಡಿದ್ದು, ಈ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ ಜೆಡಿಎಸ್‌ ಪರ ಮಾತನಾಡಿದ್ದರು.

ಆ ಮೂಲಕ ಯೋಗೇಶ್ವರ್ ಜೆಡಿಎಸ್​ನಿಂದಲೂ ತಾನು ಸ್ಪರ್ಧೆಗೆ ಸಿದ್ಧ ಎನ್ನುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. “ಇದಲ್ಲದೆ ನಾನು ಬಿಜೆಪಿ ಪಕ್ಷದ ಜೊತೆ ನಿಲ್ಲಬೇಕು ಅಂತ ತೀರ್ಮಾನ ಮಾಡಿದ್ದೀನಿ. ನಾನು ಸ್ಪರ್ಧೆ ಮಾಡಬೇಕು ಅನ್ನೋದು ಕಾರ್ಯಕರ್ತರ ಒತ್ತಾಯ. ಇಷ್ಟು ವರ್ಷ ಪಕ್ಷದ ಜೊತೆ ಕೆಲಸ ಮಾಡಿದ್ದೀನಿ. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಹಾಗಾಗಿ, ಪಕ್ಷದ ಜೊತೆ ಹೋಗೋದು ಒಳ್ಳೆಯದು ಎಂಬುದು ಹಿತೈಷಿಗಳ ಭಾವನೆ” ಎಂದು ತಿಳಿಸಿದರು.

ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ಬದ್ಧ: “ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಜೆಡಿಎಸ್‌ಗೆ ಟಿಕೆಟ್‌ ತಕೊಂಡ್ರೆ ನಾನು ಕೆಲಸ ಮಾಡುತ್ತೇನೆ. ನಾನು ಹಾಗೂ ನಮ್ಮ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡುತ್ತೇವೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಮುಂದೆ ಅವಕಾಶ ಬರುತ್ತಿರುತ್ತದೆ ಕಾದು ನೋಡೋಣ” ಎಂದು ಮಾರ್ಮಿಕವಾಗಿ ನುಡಿದರು.

“ನಮ್ಮ ಹೈಕಮಾಂಡ್‌ ನಾಯಕರು ಹಲವು ಸಲಹೆ, ಸೂಚನೆ ನೀಡಿದ್ದಾರೆ. ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಚುನಾವಣೆಗೆ ಹೋಗಬೇಕು. ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು. ಕ್ಷೇತ್ರದ ವಿದ್ಯಮಾನದ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದೇನೆ. ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿ ಆಗಲಿ, ಬೇಗ ತೀರ್ಮಾನ ಆದ್ರೆ ಒಳ್ಳೆಯದು. ಇದು ಉಪಚುನಾವಣೆ ಆಗಿರುವುದರಿಂದ ಇಡೀ ಸರ್ಕಾರವೇ ಬಂದು ಇಲ್ಲಿ ಚುನಾವಣೆ ಪ್ರಚಾರ ಮಾಡುತ್ತದೆ. ಈ ನಿಟ್ಟಿನಲ್ಲಿ ಎರಡೂ ಪಕ್ಷದ ಹಿರಿಯರು ಆದಷ್ಟು ಬೇಗ ತೀರ್ಮಾನ ಮಾಡಬೇಕು” ಎಂದು ಅಭಿಪ್ರಾಯಪಟ್ಟರು.

ಉಪಚುನಾವಣೆ ಬಳಿಕ ಸರ್ಕಾರ ಉಳಿಯೋದು ಅನುಮಾನ: “ನೀನು ಆತುರ ಪಡಬೇಡ, ಪಕ್ಷ ಬಿಡಬೇಡ ಎಂದು ಹೈಕಮಾಂಡ್‌ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಹಾಗಾಗಿ, ಪಕ್ಷದ ಆದೇಶ ಮೀರಿ ಹೋಗಬಾರದು ಅನಿಸುತ್ತಿದೆ. ಈಗಾಗಲೇ ಆತಂತ್ರದತ್ತ ಸಾಗಿರುವ ಕಾಂಗ್ರೆಸ್‌ ಸರ್ಕಾರ ಏನು ಬೇಕಾದರೂ ಆಗಬಹುದು. ಉಪಚುನಾವಣೆ ಬಳಿಕ ಸರ್ಕಾರ ಇರುತ್ತಾ, ಇರಲ್ವಾ ಅಂತ ಗೊತ್ತಿಲ್ಲ. ಸರ್ಕಾರ ಹಗರಣಗಳಲ್ಲಿ ನಲುಗುತ್ತಿದೆ. ಈ ಸಂದರ್ಭದಲ್ಲಿ ಈ ಚುನಾವಣೆ ಗೆಲ್ಲಬೇಕು ಎನ್ನುವ ಹಠ ಮೈತ್ರಿ ಪಕ್ಷಗಳಲ್ಲಿದೆ” ಎಂದು ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ.

ಪಕ್ಷೇತರವಾಗಿ ಕ್ಷೇತ್ರದಲ್ಲಿ ನಿಲ್ಲುವ ನಿಲುವ ಹೊಂದಿದ್ದ ಸಿಪಿವೈ ದೆಹಲಿಗೆ ಹೋಗಿ‌ ಬಂದ ಬಳಿಕ ಹೈಕಮಾಂಡ್ ಹೇಳಿದರೆ ಮಾತ್ರ ನಿಲ್ಲುವುದಾಗಿ ತಿಳಿಸಿರುವುದನ್ನು ನೋಡಿದರೆ ಚನ್ನಪಟ್ಟಣ ಕ್ಷೇತ್ರಕ್ಕೆ ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಯಾಗಲಿದ್ದಾರೆಂಬ ಸ್ಪಷ್ಟ ಸೂಚನೆ ಸಿಕ್ಕಿದೆ.

Leave a Reply

Your email address will not be published. Required fields are marked *

Trending

Exit mobile version