ಬೆಂಗಳೂರು
ಕೋವಿಡ್ ಅಕ್ರಮದ ಮಧ್ಯಂತರ ವರದಿ ಅಧ್ಯಯನಕ್ಕಾಗಿ ಸಿಎಸ್ ನೇತೃತ್ವದ ಅಧಿಕಾರಿಗಳ ತಂಡ ರಚನೆಗೆ ಸಂಪುಟ ಸಭೆ ತೀರ್ಮಾನ – A team of officers headed by CS
ಬೆಂಗಳೂರು: ಕೋವಿಡ್ ಅಕ್ರಮ ಬಗ್ಗೆ ನ್ಯಾ. ಡಿ ಕುನ್ಹಾ ನೀಡಿರುವ ವರದಿಯನ್ನು ಅಧ್ಯಯನ ಮಾಡಿ, ಆದಷ್ಟು ಬೇಗ ಸಚಿವ ಸಂಪುಟಕ್ಕೆ ವರದಿ ಮಂಡಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ತಂಡ ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕೋವಿಡ್ ಅಕ್ರಮ ಸಂಬಂಧ ನ್ಯಾ. ಡಿ ಕುನ್ಹಾ ವರದಿ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಯಿತು. ಕುನ್ಹಾ ವರದಿಯಲ್ಲಿ ಕೋವಿಡ್ ನಲ್ಲಿ ನೂರಾರು ಕೋಟಿ ಅಕ್ರಮ ಆಗಿರುವ ಬಗ್ಗೆ ಕೆಲ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರದಿಯಲ್ಲಿ ಕಡತ ಮಿಸ್ಸಿಂಗ್ ಆಗಿರುವ ಬಗ್ಗೆನೂ ಪ್ರಸ್ತಾಪಿಸಲಾಗಿದೆ. ಮುಖ್ಯ ಕಾರ್ಯದರ್ಶಿ, ಹಣಕಾಸು ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡಕ್ಕೆ ಪರಿಶೀಲಿಸಿ ಒಂದು ತಿಂಗಳ ಒಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದರು.
ಮಹದಾಯಿ ಬಗ್ಗೆ ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಲು ತೀರ್ಮಾನ: ಮಹದಾಯಿ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಬರುವ ನಿರೀಕ್ಷೆ ಇತ್ತು. ಆದರೆ ವನ್ಯಜೀವಿ ಮಂಡಳಿ ತನ್ನ 79ನೇ ಸಭೆಯಲ್ಲಿ ವಿಷಯವನ್ನು ಮುಂದೂಡಿದೆ. ಆ ಮೂಲಕ ನಮಗೆ ನಿರಾಶೆಯಾಗಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಆದರೆ ಗೋವಾ-ತಮ್ನೂರು 400 ಕೆ.ವಿ. ವಿದ್ಯುತ್ ಮಾರ್ಗ ಯೋಜನೆಗೆ ಮಂಡಳಿ ಒಪ್ಪಿಗೆ ನೀಡಿದೆ. ಆದರೆ ಮಹದಾಯಿ ಪ್ರಸ್ತಾವನೆಯನ್ನು ಮುಂದೂಡಿದೆ. 400 ಕೆ.ವಿ. ವಿದ್ಯುತ್ ಮಾರ್ಗಕ್ಕಾಗಿ 435 ಎಕರೆ ಅರಣ್ಯ ಭೂಮಿ ಬಳಕೆಯಾಗುತ್ತದೆ. ಆದರೂ ಸಮ್ಮತಿ ನೀಡಲಾಗಿದೆ. ಸಂಪುಟ ಸಭೆ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಸರ್ವ ಪಕ್ಷ ಸಭೆ ನಡೆಸಿ, ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿ ಕರೆದೊಯ್ಯಲು ತೀರ್ಮಾನಿಸಲಾಗಿದೆ ಹಾಗು ಕಾನೂನು ತಜ್ಞರ ಬಳಿ ಚರ್ಚಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಬಗ್ಗೆ ಪರಿಶೀಲನೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದರು.
ಮಸೂದೆ ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನ: “ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ ಸಂಖ್ಯೆ 26, 2024″ನ್ನು ಮುಂಬರುವ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಹಿಂಪಡೆಯಲು ಮತ್ತು ವಿಧಾನಸಭೆಯ ವಿಧೇಯಕ 27ಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯಪಾಲರನ್ನು ಕೋರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ ಬಿಲ್ ನ್ನು ರಾಜ್ಯಪಾಲರು ವಾಪಸು ಕಳಹಿಸಿದ್ದರು. ಅವರು ತಮ್ಮ ಆಕ್ಷೇಪಣೆಯಲ್ಲಿ ಈ ಸಂಬಂಧ ಈಗಾಗಲೇ ಮಸೂದೆ ಇದ್ದರೂ, ಮತ್ತೊಂದು ಮಸೂದೆ ಅಗತ್ಯತೆಯ ಬಗ್ಗೆ ಸ್ಪಷ್ಟೀಕರಣ ಕೇಳಿದ್ದರು. ಅದರ ಆಧಾರದಲ್ಲಿ ಹಿಂದಿನ ಮಸೂದೆಯನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ, 2024ವನ್ನು ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದರು.
ನ್ಯಾಯಾಂಗ ನಿಂದನೆ ಆಗಿಲ್ಲ: ಸಿಎಂ ನೇತೃತ್ಬದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆ ಮಾಡಲಾಗಿತ್ತು. ಅದರ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಹೇಳಿಕೆ ನೀಡಿದ್ದಾರೆ. ಕೋರ್ಟ್ ನಲ್ಲಿ ಈ ಬಗ್ಗೆ ತಡೆಯಾಜ್ಞೆ ಇದ್ದರೂ ಸಿಎಂ ಅವರು ಸಭೆ ಮಾಡಿರುವುದು ನ್ಯಾಯಂಗ ನಿಂದನೆ ಎಂದು ಅವರು ಆರೋಪಿಸಿದ್ದರು. ಆದರೆ ಪ್ರಮೋದಾ ದೇವಿ ಅವರಿಗೆ ತಪ್ಪು ಗ್ರಹಿಕೆ ಆಗಿದೆ. ಯಾವುದೇ ನ್ಯಾಯಾಂಗ ನಿಂದನೆ ಆಗಿಲ್ಲ ಎಂದು ಸ್ಪಷ್ಟನೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಡಿಬಿಟಿಯನ್ನೇ ಮುಂದುವರಿಸಲು ತೀರ್ಮಾನ: ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಫಲಾನುಭವಿಗಳಿಗೆ ನೀಡುತ್ತಿರುವ ನೇರ ನಗದು ವರ್ಗಾವಣೆ (DBT) ಬದಲಾಗಿ ಆಹಾರ ಕಿಟ್ ವಿತರಿಸುವ ಪ್ರಸ್ತಾವನೆಯನ್ನು ಮುಂದೂಡಲಾಗಿದ್ದು, ಸದ್ಯ ಡಿಬಿಟಿ ಪದ್ದತಿಯನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಆಹಾರ ಇಲಾಖೆ ಮೂರು ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಪೈಕಿ ಐದು ಕೆಜಿ ಅಕ್ಕಿ ಕೊಡುವುದು, ನೇರ ನಗದು ವರ್ಗಾವಣೆ ಮುಂದುವರಿಕೆ ಮಾಡುವುದು ಮತ್ತು ಆಹಾರ ಕಿಟ್ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಸಂಪುಟ ಸಭೆಯಲ್ಲಿ ಕೊನೆಗೆ ಈಗಿರುವ ಡಿಬಿಟಿ ಮುಂದುವರಿಸಲು ತೀರ್ಮಾನ ಮಾಡಲಾಗಿದೆ ಎಂದರು.
ಐದು ಬಿಲ್ ಗಳ ಬಗ್ಗೆ ಉತ್ತರ ನೀಡಲಾಗಿದೆ: 11 ಬಿಲ್ ಗಳನ್ನು ರಾಜ್ಯಪಾಲರು ವಾಪಾಸು ಮಾಡಿದ್ದರು. ಆ ಪೈಕಿ ಐದು ಬಿಲ್ ಗಳಿಗೆ ಉತ್ತರ ನೀಡಿದ್ದೇವೆ. ಆರು ಬಿಲ್ ಗಳ ಪೈಕಿ ಒಂದು ಬಿಲ್ ನ್ನು ಇಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಉಳಿದ ಬಿಲ್ ಗಳ ಬಗ್ಗೆ ಮುಂದಿನ ದಿನ ವಿವರಣೆ ನೀಡಿ ರಾಜ್ಯಪಾಲರಿಗೆ ಕಳುಹಿಸುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಸಂಪುಟ ಸಭೆಯ ಇತರ ತೀರ್ಮಾನಗಳು:
- ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿ, ನವೀಕರಣ, ತಿದ್ದುಪಡಿ ಮತ್ತಿತರ ಸೇವೆಗಳಿಗಾಗಿ ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕ, ದಂಡ ಮುಂತಾದ ದರಗಳ ಪರಿಷ್ಕರಣೆಗೆ ಅನುಮೋದನೆ. ಶುಲ್ಕ,ದಂಡ, ಮುಂತಾದ ದರಗಳನ್ನು ಶೇ.35 ಹೆಚ್ಚಿಸಲು ತೀರ್ಮಾನ.
- ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) (ತಿದ್ದುಪಡಿ) ನಿಯಮಗಳಿಗೆ ಅನುಮೋದನೆ.
- ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ (KIMS) ರೇಡಿಯೋಥೆರಪಿ ಚಿಕಿತ್ಸಾ ಮತ್ತು ರೋಗನಿರ್ಧಾರಕ ಉಪಕರಣಗಳನ್ನು ರೂ. 70 ಕೋಟಿಗಳ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ
- ಮೈಸೂರಿನ 40 ಹಾಸಿಗೆ ಸಾಮರ್ಥ್ಯದ ನೆಪ್ರೋ-ಯುರಾಲಜಿ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ 117.11 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಕೋಟಿಗಳ ಅನುಮೋದನೆ ನೀಡಲು ಆಡಳಿತಾತ್ಮಕ ಅನುಮೋದನೆ
- ಕಲಬುರಗಿಯಲ್ಲಿ 150 ಹಾಸಿಗೆ ಮಕ್ಕಳ ಆರೋಗ್ಯ ಇಂದಿತಾಗಾಂಧಿ ಮಕ್ಕಳ ಸಾಮರ್ಥ್ಯದ ಘಟಕವನ್ನು ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ರೂ. 221.51 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ
- ಬೆಂಗಳೂರಿನ ನೆಫ್ರೊ-ಯುರಾಲಜಿ ಸಂಸ್ಥೆಯ ಹೊರರೋಗಿ ವಿಭಾಗಕ್ಕೆ ನೂತನ ಕಟ್ಟಡವನ್ನು ರೂ. 16.15 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ
- ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ-4 (2024-29) ಕ್ಕೆ ಅನುಮೋದನೆ.
- ರಾಜ್ಯದ ವಿವಿಧ ಕಾರಾಗೃಹಗ ಳಲ್ಲಿರುವ ಕೇಂದ್ರ 59 ಜೀವಾವಧಿ ಶಿಕ್ಷಾಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ
- ಗದಗ ಜಿಲ್ಲೆಯ ಗದಗ ಬೆಟಗೇರಿಯಲ್ಲಿ ಕರ್ನಾಟಕ ಗೃಹ ಮಂಡಳಿಯ ವಸತಿ ಬಡಾವಣೆಯಲ್ಲಿನ 1 ಎಕರೆ 27 ಗುಂಟೆ ಜಮೀನಿನಲ್ಲಿ 2 ಬಿ.ಹೆಚ್.ಕೆ (2+3) ಮಾದರಿಯ ಬಹುಮಹಡಿ ಗುಂಪು ವಸತಿ ಯೋಜನೆಯ 239.55 ಕೋಟಿಗಳ ಪರಿಷ್ಕೃತ ಯೋಜನಾ ಅನುಮೋದನೆ
- ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಗೆ ಸೇರಿದ ಕೇಂದ್ರಸ್ಥಾನ ಸಹಾಯಕರು/ ಹಿರಿಯ ಉಪ ನೋಂದಣಾಧಿಕಾರಿ/ ಉಪ ನೋಂದಣಾಧಿಕಾರಿಗಳನ್ನು Guided Counselling based compulsory transfers/ counselling transfers ಮೂಲಕ ವರ್ಗಾವಣೆ ಮಾಡಲು ನಿಗದಿಪಡಿಸಿದ ಅವಧಿಯನ್ನು 10.08.2024 ರಿಂದ 30.10.2024 ರವರೆಗೆ ವಿಸ್ತರಿಸಲು ಅನುಮೋದನೆ.
- ಸ್ವ-ಸಹಾಯ ಗುಂಪುಗಳ ಸದಸ್ಯರಾಗಿರುವ 1 ಲಕ್ಷ ಮಹಿಳೆಯರಿಗೆ ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡುವುದರ ಜೊತೆಯಲ್ಲಿ 2500 ಕಾಫಿ ಕಿಯೋಸ್ಕ್ ಗಳನ್ನು 25 ಕೋಟಿಗಳ ವೆಚ್ಚದಲ್ಲಿ ಪ್ರಾರಂಭಿಸಲು ಹಾಗೂ ಸ್ವ-ಸಹಾಯ ಗುಂಪುಗಳ ಮಹಿಳೆಯರ ಮೂಲಕ ನಿರ್ವಹಿಸಲು ಆಡಳಿತಾತ್ಮಕ ಅನುಮೋದನೆ.
- ಅರ್ಹತಾ ಪತ್ರ ನವೀಕರಣಕ್ಕೆ ಬರುವ ವಾಹನಗಳಿಗೆ ಅರ್ಹತಾ ಪರೀಕ್ಷೆ ಕೈಗೊಳ್ಳಲು ರಾಜ್ಯದ 32 ಸ್ಥಳಗಳಲ್ಲಿ ಸ್ವಯಂಚಾಲಿತ ವಾಹನಗಳ ಪರೀಕ್ಷಾ ಕೇಂದ್ರಗಳನ್ನು (ATS) ರೂ. 341 ಕೋಟಿಗಳ ಒಟ್ಟು ಅಂದಾಜು ಮೊತ್ತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿ, 5.3.2024ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ.
- ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022 ಅನುಷ್ಠಾನಗೊಳಿಸಲು 15 ವರ್ಷಗಳನ್ನು ಪೊರೈಸಿರುವ ವಾಹನಗಳನ್ನು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನಾಶಗೊಳಿಸಲು ಉದ್ದೇಶಿಸಿರುವ ವಾಹನಗಳ ಮೇಲೆ ಕೊನೆಯ 01 ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿನ ಬಾಕಿ ದಂಡಗಳ ವಸೂಲಿಯಿಂದ ವಿನಾಯಿತಿ ನೀಡಿರುವ ಅವಧಿಯನ್ನು 31.03.2026 ರವರೆಗೆ ವಿಸ್ತರಿಸಲು ಅನುನೋದನೆ.
- ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವಳಿ ಪಾರ್ಕ್ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP)ದಲ್ಲಿ ರೂ.27.97 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ.
- ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಾಗತಿಕ ಸ್ಪರ್ಧಾತ್ಮಕತೆಗಾಗಿ ಸ್ಥಳೀಯ ಉದ್ಯೋಗಿಗಳನ್ನು ಕೌಶಲ್ಯಗೊಳಿಸಲು “ನಿಪುಣ್ ಕರ್ನಾಟಕ” ಉಪಕ್ರಮವನ್ನು ರೂ. 100 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಹಾಗೂ ಪ್ರಸ್ತುತ 2024-25ನೇ ಸಾಲಿನಲ್ಲಿ ರೂ. 10 ಕೋಟಿಗಳ ಮೊತ್ತದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆ.
- ಬೆಳಗಾವಿ ಜಿಲ್ಲೆ, ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 08 ಏತ ನೀರಾವರಿ ಯೋಜನೆಗಳ ಪುನ:ಶ್ವೇತನ ಕಾಮಗಾರಿಗಳ ರೂ. 149.70 ಕೋಟಿಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಅನುಮೋದನೆ.
- ಕಲಬುರಗಿ ಜಂಟಿ ಸಾರಿಗೆ ಆಯುಕ್ತರು ಹಾಗೂ ಉಪ ಸಾರಿಗೆ ಆಯುಕರು ಮತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ ಸ್ವಂತ ಕಟ್ಟಡ ನಿರ್ಮಾಣದ ಮತ್ತು ಒಳಾಂಗಣ ಕಾಮಗಾರಿಗಳ ರೂ. 10.50 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
- ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರವು ಹೊಸಪೇಟೆ ತಾಲ್ಲೂಕು ಇಂಗಳಗಿ ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿನ ಒಟ್ಟು 24.24 ಎಕರೆ ಜಮೀನಿನಲ್ಲಿ ಶೇಕಡಾ ಅನುಪಾತದಲ್ಲಿ ಉದ್ದೇಶಿಸಿರುವ 50:50 ವಸತಿ ಯೋಜನೆಯ ರೂ. 11.76 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
- ಕೇಂದ್ರ ಪುರಸ್ಕೃತ National Urban Digital Mission (NUDM) ಯೋಜನೆಯನ್ನು ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯ ಮುಖಾಂತರ ಕರ್ನಾಟಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರೂ. 37.50 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ
- ಮಹದಾಯಿ ಪ್ರವಾಹ ಪ್ರಾಧಿಕಾರದ ನಿಧಿಗೆ (Progressive River Authority for Welfare and Harmony)ಗೆ ಮೊದಲ ಹಂತದಲ್ಲಿ ರಾಜ್ಯದ ಪಾಲಿನ ರೂ. 1.67 ಕೋಟಿಗಳನ್ನು KNNL ನಿಂದ ಪಾವತಿಸಲು ತೀರ್ಮಾನ.
- ಉತ್ತರ ಕನ್ನಡ ಜಿಲ್ಲೆಯ ಕಾರವಾರ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ 450 ಹಾಸಿಗೆಗಳ ಆಸ್ಪತ್ರೆ ಮತ್ತು ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 198.27 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
- ಶ್ರೀ ಜಯದೇವ ಹೃದ್ರೋಗ ವಿಜ್ಞಾನ 2 ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖೆಯ ಕಟ್ಟಡ ಕಾಮಗಾರಿಯ ರೂ. 262.20 ಕೋಟೆಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
- ಬೆಂಗಳೂರು ನವೀಕರಿಸಬಹುದಾದ ಇಂಧನ ನಿಗಮ ನಿಯಮಿತ” ಎಂಬ ನವೀಕರಿಸಬಹುದಾದ ಇಂಧನ ಪಾರ್ಕ್ ಅನ್ನು ನಗರಾಭಿವೃದ್ಧಿ ಇಲಾಖೆಯ ವಿವಿಧ ಅಂಗಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಅನುಮೋದನೆ
- ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳಿಗೆ” ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು 3 ವರ್ಷಗಳಿಗೆ ಹೆಚ್ಚಿಸಲು ಒಂದು ಬಾರಿಯ ಕ್ರಮವಾಗಿ ಒಂದು ವರ್ಷದ ಅವಧಿಗೆ ಸಡಿಲಿಕೆಗೆ ಒಪ್ಪಿಗೆ
ದೇಶ
ವೀಕೆಂಡ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಧರ್ಮಸ್ಥಳ, ಕುಕ್ಕೆ ದರ್ಶನಕ್ಕೆ ಬಂಪರ್ ಆಫರ್
ಬೆಂಗಳೂರು: ವೀಕೆಂಡ್ ಬಂದರೆ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳ ದರ್ಶನಕ್ಕೆ ತೆರಳುವ ಯೋಜನೆ ಮಾಡುವ ಬೆಂಗಳೂರಿಗರಿಗೆ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಟ್ರಾಫಿಕ್ ಸಮಸ್ಯೆ, ವಸತಿ ವ್ಯವಸ್ಥೆಯ ಚಿಂತೆ ಮತ್ತು ದೇವಸ್ಥಾನಗಳಲ್ಲಿ ದೀರ್ಘ ಸರತಿ ಸಾಲಿನ ತೊಂದರೆಗಳನ್ನು ತಪ್ಪಿಸಲು ವಿಶೇಷ ಪ್ರವಾಸ ಪ್ಯಾಕೇಜ್ ಪರಿಚಯಿಸಲಾಗಿದ್ದು, ಕೇವಲ ₹3,350ರಿಂದಲೇ ಈ ಯಾತ್ರೆಯನ್ನು ಅನುಭವಿಸುವ ಅವಕಾಶ ಕಲ್ಪಿಸಲಾಗಿದೆ.
ಈ ಎರಡು ದಿನಗಳ ಪ್ರವಾಸದಲ್ಲಿ ಭಕ್ತರು Sri Kshetra Dharmasthala, Soutadka Mahaganapathi Temple ಹಾಗೂ Kukke Subrahmanya Temple ದರ್ಶನ ಪಡೆಯಬಹುದು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ವಿಶೇಷ ವಿಐಪಿ ದರ್ಶನ ವ್ಯವಸ್ಥೆಯೂ ಪ್ಯಾಕೇಜ್ನಲ್ಲಿ ಒಳಗೊಂಡಿದೆ. ಪ್ರೀಮಿಯಂ ಪ್ಯಾಕೇಜ್ ಆಯ್ಕೆ ಮಾಡಿದವರಿಗೆ ಹೆಚ್ಚುವರಿಯಾಗಿ Rama Kshetra ಭೇಟಿ ನೀಡುವ ಅವಕಾಶವೂ ದೊರೆಯಲಿದೆ.
ಪ್ರವಾಸಿಗರಿಗಾಗಿ ಬಜೆಟ್ ಹಾಗೂ ಪ್ರೀಮಿಯಂ ಎಂಬ ಎರಡು ಪ್ಯಾಕೇಜ್ಗಳನ್ನು ರೂಪಿಸಲಾಗಿದೆ. ಬಜೆಟ್ ಪ್ಯಾಕೇಜ್ನಲ್ಲಿ ಎಸಿ ಡಿಲಕ್ಸ್ ಬಸ್ ಪ್ರಯಾಣ, ಕನ್ಯಾಡಿಯಲ್ಲಿ ವಸತಿ ಮತ್ತು ವಿಶೇಷ ದರ್ಶನ ಸೌಲಭ್ಯ ಲಭ್ಯವಿದ್ದು, ದರ ₹3,350ರಿಂದ ಆರಂಭವಾಗುತ್ತದೆ. ಪ್ರೀಮಿಯಂ ಪ್ಯಾಕೇಜ್ನಲ್ಲಿ ನಿಡ್ಲೆಯಲ್ಲಿ ವಾಸ್ತವ್ಯ, ವಿಐಪಿ ದರ್ಶನ ಹಾಗೂ ಉಚಿತ ಉಪಹಾರ ಸೇರಿದ್ದು, ದರ ₹4,150ರಿಂದ ಆರಂಭವಾಗುತ್ತದೆ.
ಈ ವಿಶೇಷ ಪ್ರವಾಸವು ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ಆರಂಭವಾಗಲಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ವೇಳೆ ಸಾಂಪ್ರದಾಯಿಕ ಉಡುಪು ಧರಿಸುವುದು ಕಡ್ಡಾಯವಾಗಿದ್ದು, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಆಧ್ಯಾತ್ಮಿಕ ಪ್ರವಾಸವನ್ನು ಸುಲಭ ಮತ್ತು ಕೈಗೆಟುಕುವ ದರದಲ್ಲಿ ಅನುಭವಿಸಲು ಬಯಸುವವರಿಗೆ ಈ ಪ್ಯಾಕೇಜ್ ಉತ್ತಮ ಅವಕಾಶವಾಗಿದೆ.
ದೇಶ
ಇತಿಹಾಸ, ಸಂಸ್ಕೃತಿ ಮತ್ತು ಆರೋಗ್ಯದ ಸಂಗಮ: ಬೆಂಗಳೂರಿನಲ್ಲಿ ಹೆರಿಟೇಜ್ ಹಬ್ಬ
ಬೆಂಗಳೂರು: ನಗರದ ಸಾಂಸ್ಕೃತಿಕ ವೈಭವ, ಪರಂಪರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಇದೇ ಜೂನ್ 14ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ಬೆಂಗಳೂರು ಹೆರಿಟೇಜ್ ಹಬ್ಬ’ ಅದ್ದೂರಿಯಾಗಿ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಗರದ ಐತಿಹಾಸಿಕ ಪರಂಪರೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 5 ಗಂಟೆಗೆ ಶಂಖನಾದ, ಗಂಗಾ ಆರತಿ, ಮ್ಯಾರಥಾನ್, ಜುಂಬಾ ಹಾಗೂ ಯೋಗ ಪ್ರದರ್ಶನಗಳೊಂದಿಗೆ ಆರಂಭವಾಗಲಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಈ ವಿಶೇಷ ಹಬ್ಬದಲ್ಲಿ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಯದುವೀರ್, ಹಿರಿಯ ಚಲನಚಿತ್ರ ನಟ ಸಿಹಿಕಹಿ ಚಂದ್ರು, ಬೆಂಗಳೂರು ನಗರ ಗಣ್ಯರ ರಕ್ಷಣಾ ವಿಭಾಗದ ಉಪ ಪೊಲೀಸ್ ಆಯುಕ್ತ ಮಂಜುನಾಥ್ ಬಾಬು, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಗರುಡ ಪ್ರತಿಷ್ಠಾನದ ಮೇದಿನಿ ಗರುಡಾಚಾರ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ಡಾ. ಸಿ.ಎ. ಕಿಶೋರ್ ಹಾಗೂ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪ್ರತಿಷ್ಠಿತ ಬಿ.ಎನ್.ಎಂ.ಐ.ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ರಾವ್ ಮಾನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಎನ್.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ವಿಕಸನ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಬೆಂಗಳೂರು ನಗರದ ಪರಂಪರೆ, ಸಂಸ್ಕೃತಿ ಹಾಗೂ ಆರೋಗ್ಯ ಜಾಗೃತಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ‘ಬೆಂಗಳೂರು ಹೆರಿಟೇಜ್ ಹಬ್ಬ’ ಸಾರ್ವಜನಿಕರ ಗಮನ ಸೆಳೆದಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.
ದೇಶ
‘ನನಗೆ ಡಬಲ್ ಸಮಾಧಾನ ಸಿಕ್ಕಿದೆ’: ಸಿಎಂ ಹುದ್ದೆ ಚರ್ಚೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ಬೆಂಗಳೂರು: ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ Siddaramaiah ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿಗಳನ್ನು ಸಚಿವ Satish Jarkiholi ತಳ್ಳಿಹಾಕಿದ್ದು, ಕೆಲ ಐಟಿ ಸೆಲ್ಗಳು ಅನಗತ್ಯವಾಗಿ ಈ ವಿಚಾರವನ್ನು ದೊಡ್ಡದಾಗಿಸಿವೆ ಎಂದು ಹೇಳಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೂ ಸಿದ್ದರಾಮಯ್ಯ ಅವರಿಗೂ ಭಿನ್ನಾಭಿಪ್ರಾಯ ಇದೆ ಎಂದು ಯಾರು ಹೇಳಿದರು? ಈ ಬಗ್ಗೆ ನಾನು ಮೊದಲಿನಿಂದಲೂ ಸ್ಪಷ್ಟಪಡಿಸುತ್ತಿದ್ದೇನೆ. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಕೆಲವರು ಹೆಚ್ಚಿನ ಪ್ರಚಾರ ನೀಡಿ ಅನಗತ್ಯ ಚರ್ಚೆಗೆ ಕಾರಣರಾಗಿದ್ದಾರೆ” ಎಂದು ಹೇಳಿದರು.
ಅಹಿಂದ ಸಂಘಟನೆ ಕುರಿತಂತೆ ಮಾತನಾಡಿದ ಜಾರಕಿಹೊಳಿ, ಅದು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಪಕ್ಷದ ಹೊರತಾಗಿಯೂ ಸಾಮಾಜಿಕ ಸಂಘಟನೆಯಾಗಿ ತನ್ನ ಕೆಲಸವನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದರು. “ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ನಿರಂತರವಾಗಿ ಕೆಲಸ ಮಾಡುತ್ತೇನೆ” ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, “ಅಧ್ಯಕ್ಷರಾಗಿಯೇ ಪಕ್ಷದ ಕೆಲಸ ಮಾಡಬೇಕು ಎಂಬ ನಿಯಮವಿಲ್ಲ. ಪಕ್ಷಕ್ಕಾಗಿ ದುಡಿಯುವವರಿಗೆ ಅಧಿಕಾರ ಸಿಗಲೇಬೇಕು. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಲಸ ಮಾಡಿದವರಿಗೆ ಪಕ್ಷ ಸೂಕ್ತ ಜವಾಬ್ದಾರಿ ನೀಡಿದೆ” ಎಂದು ಹೇಳಿದರು.
2028ರ ನಾಯಕತ್ವದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, “ಇನ್ನೂ ಚುನಾವಣೆಗೆ ಸಾಕಷ್ಟು ಸಮಯವಿದೆ. ಮಗು ಹುಟ್ಟುವ ಮುನ್ನವೇ ಅದರ ಬಗ್ಗೆ ಚರ್ಚೆ ಮಾಡುವಂತಾಗಿದೆ. ನನಗೆ ಈಗಾಗಲೇ ಸಚಿವ ಸ್ಥಾನ ಸಿಕ್ಕಿದ್ದು, ಅದರಿಂದ ಸಮಾಧಾನವಾಗಿದೆ” ಎಂದರು.
ಇದೇ ವೇಳೆ ಕ್ರೀಡಾ ಖಾತೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಅವರು, “ಕ್ರೀಡಾ ಇಲಾಖೆ ನೀಡಿದ್ದರೆ ರಾಜ್ಯವನ್ನು ಕ್ರೀಡೆಯಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಲು ಪ್ರಯತ್ನಿಸುತ್ತಿದ್ದೆವು. ಆ ಖಾತೆಗಾಗಿ ಬೇಡಿಕೆಯನ್ನೂ ಇಟ್ಟಿದ್ದೆ” ಎಂದು ತಿಳಿಸಿದರು.
-
ಅಪರಾಧ7 hours agoಪುಣೆಯಲ್ಲಿ ಐಟಿ ಇಂಜಿನಿಯರ್ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ
-
ದೇಶ13 hours agoಇರಾನ್ ವಿರುದ್ಧ ಟ್ರಂಪ್ ಕಿಡಿ: ‘ಭಾರತೀಯ ಹಡಗುಗಳ ಮೇಲೆ ಡ್ರೋನ್ ದಾಳಿ ಒಪ್ಪಲಾಗದು
-
ದೇಶ2 hours agoವೀಕೆಂಡ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಧರ್ಮಸ್ಥಳ, ಕುಕ್ಕೆ ದರ್ಶನಕ್ಕೆ ಬಂಪರ್ ಆಫರ್
-
ದೇಶ13 hours agoಡೀಸೆಲ್ ಖರೀದಿಗೆ ಹೊಸ ಮಿತಿ: ದಿನಕ್ಕೆ 200 ಲೀಟರ್ ಮಾತ್ರ, ಕೇಂದ್ರ ಸರ್ಕಾರದ ಮಹತ್ವದ ಆದೇಶ
-
ದೇಶ7 hours agoಅಸ್ಸಾಂನಲ್ಲಿ ವಾಯುಪಡೆಗೆ ಆಘಾತ: ಎಎನ್-32 ಸಾರಿಗೆ ವಿಮಾನ ಪತನ, ಬೆಂಕಿಗಾಹುತಿ
-
ದೇಶ7 hours agoಕೆನಡಾಗೆ ಐತಿಹಾಸಿಕ ಪಾಯಿಂಟ್: ಬೋಸ್ನಿಯಾ ವಿರುದ್ಧ ಡ್ರಾ, ವಿಶ್ವಕಪ್ನಲ್ಲಿ ಹೊಸ ದಾಖಲೆ
-
ದೇಶ21 hours agoಇತಿಹಾಸ, ಸಂಸ್ಕೃತಿ ಮತ್ತು ಆರೋಗ್ಯದ ಸಂಗಮ: ಬೆಂಗಳೂರಿನಲ್ಲಿ ಹೆರಿಟೇಜ್ ಹಬ್ಬ
-
ದೇಶ13 hours agoಕೊಲ್ಲೂರು ಮೂಕಾಂಬಿಕೆಯಲ್ಲಿ ವಿಜಯ್ ವಿಶೇಷ ಪೂಜೆ: ‘ಶತ್ರು ಸಂಹಾರ ಸಂಕಲ್ಪ’ ಭಾರೀ ಚರ್ಚೆ
