Blog
ಡಿ.ಕೆ ಶಿವಕುಮಾರ್ ಮೇಲೆ ಗರಂ ಆದ ಸಚಿವ ಸತೀಶ್ ಜಾರಕಿಹೊಳಿ; ನಾವೆಲ್ಲಾ ಹೆದರಲ್ಲ ಅಂದಿದ್ದೇಕೆ ಸಾಹುಕಾರ್?

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಲೇ ಇದೆ. ಮುಡಾ ಹಾಗೂ ವಾಲ್ಮೀಕಿ ಹಗರಣಗಳ ಆರೋಪ ಪಕ್ಷದ ಮೇಲೆ ಬಂದಾಗಿನಿಂದಲೂ ಸಿಎಂ ಬದಲಾವಣೆ ಎಂಬ ಗಾಳಿ ಜೋರಾಗಿ ಬೀಸಿತ್ತು. ಸಿಎಂ ಕುರ್ಚಿಗೆ ಒಬ್ಬರಾದ ಮೇಲೆ ಒಬ್ಬರು ಟವಲ್ ಹಾಕುತ್ತಲೇ ಇದ್ದರು. ಈಗಾಗಲೇ ರಾಜ್ಯ ಕಾಂಗ್ರೆಸ್ ಹಲವು ಟೀಮ್ಗಳಾಗಿ ಹೋಳಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಗುಪ್ತ ಸಭೆಗಳು ಕೂಡ ಆಗಾಗ ನಡೆದ ಬಗ್ಗೆ ಸುದ್ದಿಯಾಗಿತ್ತು. ಇತ್ತೀಚೆಗಷ್ಟೆ ಸತೀಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಈ ರಹಸ್ಯ ಸಭೆಗಳ ಬಗ್ಗೆ ಹೈಕಮಾಂಡ್ಗೆ ವರದಿ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಇತ್ತೀಚೆಗಷ್ಟೇ ಹೇಳಿದ್ದರು. ಡಿಕೆಶಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ಈಗ ಟಾಂಗ್ ಕೊಟ್ಟಿದ್ದಾರೆ.
ರಹಸ್ಯ ಸಭೆಗಳ ಬಗ್ಗೆ ಹೈಕಮಾಂಡ್ಗೆ ವರದಿ ನೀಡಿದ ವಿಚಾರವಾಗಿ ಮಾತನಾಡಿರುವ ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಪರವಾಗಿ ನಾವಿದ್ದೇವೆ ಪಕ್ಷಕ್ಕೆ 12 ಗಂಟೆ ಟೈಮ್ ಕೊಟ್ಟಿದ್ದೇವೆ.ಹೀಗಾಗಿ ನಾವೆಲ್ಲಾ ಹೆದರುವ ಪರಿಸ್ಥಿತಿಯೇ ಇಲ್ಲ ಎಂದು ಹೇಳಿದ್ದಾರೆ. ಪಕ್ಷಕ್ಕಾಗಿ ಕೆಲವರು ತೆರೆಮರೆಯಲ್ಲಿ ದುಡಿಯುತ್ತಿದ್ದಾರೆ. ಕೆಲವರು ಹೈಲೈಟ್ ಆಗುತ್ತಾರೆ, ಕೆಲವರು ಆಗೋದಿಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಬಾಣ ಬಿಟ್ಟಿದ್ದಾರೆ.