Blog
Namma Metro: ಪಾನಮತ್ತ ಪ್ರಯಾಣಿಕರಿಂದ ಭದ್ರತಾ ಅಧಿಕಾರಿ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ಮಹಿಳಾ ಸಿಬ್ಬಂದಿಗೆ ನಿಂದನೆ!

ಬೆಂಗಳೂರು: ಪಾನಮತ್ತ ನಾಲ್ವರು ಯುವ ಪ್ರಯಾಣಿಕರು ಪುರುಷ ಭದ್ರತಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದು, ಮಹಿಳಾ ಭದ್ರತಾ ಸಿಬ್ಬಂದಿ ಹಾಗೂ ಟಿಕೆಟ್ ಕೌಂಟರ್ ನಲ್ಲಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಕಾಡುಗೋಡಿ ಟ್ರೀ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಭಾನುವಾರ ರಾತ್ರಿ ನಡೆದಿದೆ. ನಾಲ್ವರು ಪೈಕಿ ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಇನ್ನುಳಿದವರು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು TNIE ಜೊತೆಗೆ ಮಾಹಿತಿ ಹಂಚಿಕೊಂಡ BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್, ಸಂಜೆ 7 ರ ಸುಮಾರಿನಲ್ಲಿ ಈ ಘಟನೆ ಸಂಭವಿಸಿದೆ. ಇಪತ್ತು ವಯಸ್ಸಿನ ನಾಲ್ವರ ಗುಂಪು ಕಾಡುಗೋಡಿ ಮೆಟ್ರೋ ನಿಲ್ದಾಣ ಪ್ರವೇಶಿಸುತಿತ್ತು. ಅವರಲ್ಲಿ ಇಬ್ಬರು ಕಂಠಪೂರ್ತಿ ಕುಡಿದಿದ್ದರು. ಅವರಿಗೆ ನಡೆಯಲು ಆಗುತ್ತಿರಲಿಲ್ಲ. ತಪಾಸಣೆ ನಡೆಸಿದ ಭದ್ರತಾ ಸಿಬ್ಬಂದಿ ಇಬ್ಬರಿಗೂ ಪ್ರವೇಶ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಗುಂಪು ಗದ್ದಲ ಸೃಷ್ಟಿಸಿತು ಎಂದು ತಿಳಿಸಿದರು.
ಭದ್ರತಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ಗುಂಪು, ಅವಾಚ್ಯ ಶಬ್ದಗಳಿಂದ ಮಹಿಳಾ ಭದ್ರತಾ ಮತ್ತು ಟಿಕೆಟ್ ನೀಡುವ ಮಹಿಳಾ ಸಿಬ್ಬಂದಿಯನ್ನು ನಿಂದಿಸಿದರು. ಈ ವೇಳೆ ಮೊಹಮ್ಮದ್ ಐರಿಸ್ ಎಂಬ ಯುವಕ ಸಹಾಯಕ ಭದ್ರತಾ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಇತರ ಮೂವರು ಪರಾರಿಯಾಗಿದ್ದಾರೆ. ನಿಲ್ದಾಣದ ಕಾರ್ಯಾಚರಣೆಗೆ ಅಡ್ಡಿಯಾಗಲಿಲ್ಲ. ಸೇವೆ ಮುಗಿಯುವವರೆಗೂ ಗೇಟ್ಗಳನ್ನು ಮುಚ್ಚಿರಲಿಲ್ಲ ಎಂದು ತಿಳಿಸಿದರು.
ಗಲಾಟೆ ಮಾಡಿದ ಯುವಕರು ಸ್ಥಳೀಯ ನಿವಾಸಿಗಳಾಗಿದ್ದರು. ಸದ್ಯಕ್ಕೆ ಅವರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.