ಬೆಂಗಳೂರು
ಸಿಂಗಲ್ ಆಗಿ ಬರಲ್ಲ, ಹೈಕಮಾಂಡ್ ಗೆ ಬುಲಾವ್ ಗೆ ಯತ್ನಾಳ್ ಉತ್ತರ!

ವಿಜಯಪುರ: ರಾಜ್ಯ ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ & ಟೀಂ ಹಾಗೂ ಪಕ್ಷದ ರಾಜ್ಯಾಧ್ಯಾಕ್ಷ ಬಿ.ವೈ.ವಿಜಯೇಂದ್ರ ಅವರ ಬಣದ ನಡುವಿನ ಬಡಿದಾಟದ ಚೆಂಡು ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ವರಿಷ್ಠರು ಯತ್ನಾಳ್ ಅವರನ್ನು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ,
ರಾಜ್ಯ ಬಿಜೆಪಿ ಬಣಗಳ ಬಡಿದಾಟ ವಿಚಾರವಾಗಿ ಚರ್ಚಿಸಲು ದೂರವಾಣಿ ಕರೆ ಮಾಡಿ ವರಿಷ್ಠರು ದೆಹಲಿಗೆ ಆಗಮಿಸುವಂತೆ ಯತ್ನಾಳ್ ಅವರಿಗೆ ಸೂಚಿಸಿದ್ದಕ್ಕೆ ನಾನು ಒಬ್ಬನೇ ಬರಲ್ಲ, ತಂಡದ ಜೊತೆಗೆ ಬರುವೆ ಎಂದು ಯತ್ನಾಳ್ ಅವರು ಹೇಳಿದ್ದಾರೆಂದು ತಿಳಿದುಬಂದಿದೆ, ಹೀಗಾಗಿ ಯತ್ನಾಳ್ ಅವರು ವಕ್ಫ್ ವಿರುದ್ಧದ ತಮ್ಮ ಪ್ರತ್ಯೇಕ ಹೋರಾಟವನ್ನು ಮೊಟಕುಗೊಳಿಸುತ್ತಾರೋ ಇಲ್ಲವೋ ಚಾಮರಾಜನಗರದವರೆಗೆ ತಮ್ಮ ಹೋರಾಟ ತಲುಪಿದ ನಂತರದ ದಿನಗಳಲ್ಲಿ ದೆಹಲಿಗೆ ಹೋಗುತ್ತಾರೋ ಎಂಬುವುದು ಕಾದು ನೋಡಬೇಕಿದೆ,
ವಕ್ಫ್ ವಿರುದ್ಧದ ಪ್ರತ್ಯೇಕ ಹೋರಾಟದ ಮೂಲಕ ಹಾಗೂ ಉಪಚುನಾವಣೆಯ ಸೋಲಿಗೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಕಾರಣ ಎಂದು ಯತ್ನಾಳ್ ಗುಡುಗಿದ್ದರು, ಅಲ್ಲದೇ ಪ್ರತ್ಯೇಕ ಹೋರಾಟ ಕೈಬಿಡಿ ಎಂದು ಬಿಎಸ್ವೈ ಹೇಳಿದ್ದಲ್ಲದೇ, ಯತ್ನಾಳ್ ನಡೆ-ನುಡಿಯಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ ಎಂದು ವಿಜಯೇಂದ್ರ ಬಣದ ನಾಯಕರೂ ಯತ್ನಾಳ್ ವಿರುದ್ಧ ಗುಡುಗಿದ್ದರು,