ಕ್ರೀಡೆ
IPL 2025: ಕಾಲು ಫ್ರಾಕ್ಟರ್; ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್ ಗೆ ಬಂದ Rahul Dravid
ಜೈಪುರ: ಕ್ರಿಕೆಟ್ ಆಡುವಾಗ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರಿಗೆ ಕೋಚಿಂಗ್ ನೀಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಬೆಂಗಳೂರಿನಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದ ಸಮಯದಲ್ಲಿ ರಾಹುಲ್ ದ್ರಾವಿಡ್ ಗಾಯಗೊಂಡಿದ್ದರು. ಬೆಂಗಳೂರಿನ ಎಸ್ಎಲ್ಎಸ್ ಕ್ರೀಡಾಂಗನ ಕ್ರಿಕೆಟ್ ಮೈದಾನದಲ್ಲಿ ಯಂಗ್ ಲಯನ್ಸ್ ಕ್ಲಬ್ ವಿರುದ್ಧದ 50 ಓವರ್ಗಳ ಪಂದ್ಯದಲ್ಲಿ ದ್ರಾವಿಡ್ ಮತ್ತು ಅವರ ಮಗ ಅನ್ವಯ್ ವಿಜಯ ಕ್ರಿಕೆಟ್ ಕ್ಲಬ್ (ಮಾಲೂರು) ಅನ್ನು ಪ್ರತಿನಿಧಿಸಿದ್ದರು. ಅಲ್ಲಿ ದ್ರಾವಿಡ್ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಎಂಟು ಎಸೆತಗಳಲ್ಲಿ 10 ರನ್ ಗಳಿಸಿದರು. ತಂದೆ-ಮಗ ಜೋಡಿ ಐದನೇ ವಿಕೆಟ್ಗೆ 17 ರನ್ಗಳ ಸಂಕ್ಷಿಪ್ತ ಜೊತೆಯಾಟವಾಡಿತು.
ಆದರೆ ಅದೇ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಗಾಯಗೊಂಡರು. ಅವರ ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಕಾಲಿಗೆ ದೊಡ್ಡ ಮಟ್ಟದಲ್ಲೇ ಬ್ಯಾಂಡೇಜ್ ಕಟ್ಟಲಾಗಿತ್ತು. ಇದು ಅವರು ಮತ್ತೆ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಹೇಳಲಾಗಿತ್ತು. ಇದೇ ವಿಚಾರ ಅವರು ಕೋಚಿಂಗ್ ಮಾಡುತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ಆತಂಕಕ್ಕೂ ಕಾರಣವಾಗಿತ್ತು.
ಕೋಚಿಂಗ್ ಗೆ ಬಂದು ಅಚ್ಚರಿ ಮೂಡಿಸಿದ ಜಾಮಿ
ಇನ್ನು ದ್ರಾವಿಡ್ ಗುಣಮುಖರಾಗುವುದಿಲ್ಲ. ಹೀಗಾಗಿ ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ಅವರ ಸಲಹೆ ತರಬೇತಿ ಸಿಗುವುದಿಲ್ಲ ಎಂದು ರಾಜಸ್ತಾನ ರಾಯಲ್ಸ್ ತಂಡ ಭಾವಿಸಿತ್ತು. ಆದರೆ ಅಚ್ಚರಿ ಎಂಬಂತೆ ಇದೀಗ ರಾಹುಲ್ ದ್ರಾವಿಡ್ ಮೈದಾನಕ್ಕೆ ಆಗಮಿಸಿದ್ದಾರೆ. ಅಂದು ಎದ್ದು ನಿಲ್ಲಲೂ ಸಾಧ್ಯವಾಗದೇ ಅವರು ಕ್ರಚಸ್ ಅವಲಂಬಿಸಿದ್ದ ದ್ರಾವಿಡ್ ಇಂದು ಅದೇ ಕ್ರಚಸ್ ನೆರವಿನಿಂದ ಮೈದಾನಕ್ಕೆ ಬಂದಿದ್ದಾರೆ.
ಮಾತ್ರವಲ್ಲದೇ ಕಾಲಿನ ಗಾಯದ ಹೊರತಾಗಿಯೂ ತಂಡದ ತರಬೇತಿ ಅವಧಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡು ಆಟಗಾರರಿಗೆ ತರಬೇತಿ ಕೂಡ ನೀಡಿದ್ದಾರೆ. ಪ್ರಸ್ತುತ ಸರಿಯಾಗಿ ನಡೆಯಲು ಸಾಧ್ಯವಾಗದ ದ್ರಾವಿಡ್, ಗಾಲ್ಫ್ ಕಾರ್ಟ್ನಲ್ಲಿ ಮೈದಾನಕ್ಕೆ ಆಗಮಿಸಿದ್ದು, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ಗೆ ಮಾರ್ಗದರ್ಶನ ನೀಡುತ್ತಾ ಕ್ರಚಸ್ ಸಹಾಯದಿಂದ ನಿಂತಿದ್ದರು.
ಈ ವಿಡಿಯೋವನ್ನು ರಾಜಸ್ತಾನ ರಾಯಲ್ಸ್ ತಂಡ ಟ್ವೀಟ್ ಮಾಡಿದ್ದು, ಟ್ವೀಟ್ ನಲ್ಲಿ, ‘ದಂತಕಥೆ ಭಾರತದ ಮಾಜಿ ಕೋಚ್ 10 ವರ್ಷಗಳ ನಂತರ ಆರ್ಆರ್ಗೆ ಮರಳುತ್ತಿದ್ದಾರೆ. ಈ ಹಿಂದೆ ನಾಯಕ ಮತ್ತು ಮಾರ್ಗದರ್ಶಕರಾಗಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೀಗ ಕೋಚ್ ಆಗಿ ಮತ್ತೆ ತಂಡ ಸೇರ್ಪಡೆಯಾಗಿದ್ದಾರೆ ಎಂದು ಟ್ವೀಟ್ ಮಾಡಿದೆ.
ಶೇನ್ ವಾರ್ನ್ ನೇತೃತ್ವದಲ್ಲಿ ಐಪಿಎಲ್ನ ಉದ್ಘಾಟನಾ ಆವೃತ್ತಿಯನ್ನು ಗೆದ್ದ ನಂತರ, ರಾಜಸ್ಥಾನ್ ರಾಯಲ್ಸ್ ತಂಡವು ಎರಡನೇ ಬಾರಿಗೆ ಯಶಸ್ಸಿನ ಉತ್ತುಂಗದಲ್ಲಿದೆ. ಆದಾಗ್ಯೂ, ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ತಂಡವು 2025 ರಲ್ಲಿ ತಮ್ಮ ಎರಡನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ರಾಯಲ್ಸ್ ತಂಡವು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿತ್ತು ಮತ್ತು ಪ್ಲೇ-ಆಫ್ ಪಂದ್ಯದಲ್ಲಿ ಸನ್ರೈಸರ್ಸ್ ತಂಡವು ಅವರನ್ನು 37 ರನ್ಗಳಿಂದ ಸೋಲಿಸಿ ಆರ್ ಆರ್ ತಂಡದ ಅಭಿಯಾನವನ್ನು ಕೊನೆಗೊಳಿಸಿತ್ತು.
ಅಂದಹಾಗೆ ಹಾಲಿ ಆವೃತ್ತಿಯ ಆರ್ ಆರ್ ತಂಡದಲ್ಲಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೈರ್, ಸಂದೀಪ್ ಶರ್ಮಾ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ವನಿಂದು ಹಸರಂಗ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ನಿತೀಶ್ ರಾಣಾ, ತುಷಾರ್ ದೇಶಪಾಂಡೆ, ಶುಭಂ ದುಬೆ, ಯುಧ್ವೀರ್ ಸಿಂಗ್, ಫಜಲ್ಹಕ್ ಫಾರೂಕಿ, ಕ್ವೇನಾ ಮಾಫಕ, ಕುನಾಲ್ ರಾಥೋಡ್, ಅಶೋಕ್ ಶರ್ಮಾಇದ್ದು, ಇವರಲ್ಲದೇ 13 ವರ್ಷದ ವೈಭವ್ ಸೂರ್ಯವಂಶಿ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಕ್ರೀಡೆ
ಮುಂಬೈ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಎಬಿ ಡಿ ವಿಲಿಯರ್ಸ್! ಅಭಿಮಾನಿಗಳ ಹೃದಯ ಗೆದ್ದ RCB ದಿಗ್ಗಜ
ಮುಂಬೈ: ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಶಸ್ತಿ ಗೆಲುವಿನ ಸಂಭ್ರಮ ಇನ್ನೂ ಮುಂದುವರಿದಿರುವಾಗ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ಆರ್ಸಿಬಿ ದಿಗ್ಗಜ AB de Villiers ಮುಂಬೈನ ಸ್ಥಳೀಯ ಮೈದಾನವೊಂದರಲ್ಲಿ ಸಾಮಾನ್ಯ ಆಟಗಾರರು ಮತ್ತು ಅಭಿಮಾನಿಗಳೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.
‘ಮಿಸ್ಟರ್ 360’ ಎಂದೇ ಖ್ಯಾತರಾಗಿರುವ ಎಬಿ ಡಿ ವಿಲಿಯರ್ಸ್, ಐಪಿಎಲ್ 2026ರಲ್ಲಿ ಆರ್ಸಿಬಿಯ ಎರಡನೇ ಟ್ರೋಫಿ ಗೆಲುವನ್ನು ನೇರವಾಗಿ ವೀಕ್ಷಿಸಲು ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಮುಂಬೈನ ಸ್ಥಳೀಯ ಮೈದಾನದಲ್ಲಿ ಕಾಣಿಸಿಕೊಂಡ ಅವರು, ಅಭಿಮಾನಿಗಳೊಂದಿಗೆ ಬೆರೆತು ಕ್ರಿಕೆಟ್ ಆಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಸ್ಥಳೀಯ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡಿದ ಡಿ ವಿಲಿಯರ್ಸ್ ತಮ್ಮ ವಿಶಿಷ್ಟ ಶೈಲಿಯ ಹಲವು ಆಕರ್ಷಕ ಶಾಟ್ಗಳನ್ನು ಬಾರಿಸಿ ಅಭಿಮಾನಿಗಳಿಗೆ ಮನರಂಜನೆ ನೀಡಿದರು. ವಿಶ್ವದರ್ಜೆಯ ಕ್ರಿಕೆಟಿಗನಾಗಿದ್ದರೂ ಯಾವುದೇ ಅಹಂಕಾರವಿಲ್ಲದೆ ಸಾಮಾನ್ಯ ಆಟಗಾರರೊಂದಿಗೆ ಬೆರೆತು ಆಡಿದ ಅವರ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ ಅವರು, ಕ್ರಿಕೆಟ್ ಬಗ್ಗೆ ಮಾತನಾಡಿ ಯುವ ಆಟಗಾರರಿಗೆ ಪ್ರೋತ್ಸಾಹ ತುಂಬಿದರು. ಈ ಅಪರೂಪದ ಕ್ಷಣವನ್ನು ಕಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಆರ್ಸಿಬಿ ಪರ ದಶಕಕ್ಕೂ ಹೆಚ್ಚು ಕಾಲ ಆಡಿರುವ ಡಿ ವಿಲಿಯರ್ಸ್, Virat Kohli ಜೊತೆಗೂಡಿ ಅನೇಕ ಸ್ಮರಣೀಯ ಗೆಲುವುಗಳಿಗೆ ಕಾರಣರಾಗಿದ್ದರು. ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ವಿನಮ್ರ ವ್ಯಕ್ತಿತ್ವ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಮುಂಬೈನ ಗಲ್ಲಿ ಕ್ರಿಕೆಟ್ನಲ್ಲಿ ಭಾಗವಹಿಸಿದ ಈ ಸಣ್ಣ ಘಟನೆ, ಎಬಿ ಡಿ ವಿಲಿಯರ್ಸ್ ಮೇಲಿರುವ ಅಭಿಮಾನಿಗಳ ಅಪಾರ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕ್ರಿಕೆಟ್ ಲೋಕದ ದಿಗ್ಗಜ ಆಟಗಾರನೊಬ್ಬ ಸಾಮಾನ್ಯ ಅಭಿಮಾನಿಗಳೊಂದಿಗೆ ಬೆರೆತು ಆಡಿದ ಈ ಕ್ಷಣ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ನೆನಪಾಗಿ ಉಳಿಯಲಿದೆ.
ಕ್ರೀಡೆ
ಟಿ20 ತಂಡದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ; ಸೂರ್ಯಕುಮಾರ್ ಸ್ಥಾನ ಅಪಾಯದಲ್ಲಿ!
ಮುಂಬೈ: ಭಾರತ ಟಿ20 ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ದಟ್ಟವಾಗಿದ್ದು, ಸ್ಟಾರ್ ಬ್ಯಾಟರ್ Suryakumar Yadav ಅವರ ಸ್ಥಾನಕ್ಕೆ ಕುತ್ತು ಬಂದಿದೆ ಎನ್ನುವ ವರದಿಗಳು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿವೆ. ಇತ್ತೀಚಿನ ಟಿ20 ವಿಶ್ವಕಪ್ ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಹಿನ್ನೆಲೆಯಲ್ಲಿ, ಬಿಸಿಸಿಐ ನಾಯಕತ್ವ ಬದಲಾವಣೆ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಜೂನ್ ಅಂತ್ಯದ ವೇಳೆಗೆ ನಡೆಯಲಿರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಸಜ್ಜಾಗುತ್ತಿದ್ದು, ಈ ಸರಣಿಯಿಂದಲೇ ಹೊಸ ನಾಯಕನ ಆಯ್ಕೆ ಸಾಧ್ಯತೆ ಇದೆ. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಯಲಿದ್ದು, ಅಧಿಕೃತ ನಿರ್ಧಾರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ನಾಯಕತ್ವದ ರೇಸ್ನಲ್ಲಿ Shreyas Iyer ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಐಪಿಎಲ್ನಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿರುವ ಅಯ್ಯರ್, ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನ ಅನುಭವವನ್ನು ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಿರುವುದು ಅವರ ಪರದ ಪ್ರಮುಖ ಅಂಶವಾಗಿದೆ.
ಇನ್ನೊಂದೆಡೆ, ಯುವ ಆಟಗಾರ Tilak Varma ಅವರ ಹೆಸರೂ ಬಲವಾಗಿ ಕೇಳಿಬರುತ್ತಿದೆ. ಕೇವಲ 23 ವರ್ಷ ವಯಸ್ಸಿನ ತಿಲಕ್ ಭವಿಷ್ಯದ ನಾಯಕನಾಗಿ ರೂಪುಗೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಆಯ್ಕೆ ಸಮಿತಿಯ ಕೆಲ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಅವರನ್ನು ಮುಂಬರುವ ಭಾರತ ‘ಎ’ ತಂಡದ ಸರಣಿಗೆ ನಾಯಕರನ್ನಾಗಿ ಮಾಡುವ ಸಾಧ್ಯತೆ ಇದೆ.
ಮತ್ತೊಂದು ಆಯ್ಕೆಯಾಗಿ Sanju Samson ಹೆಸರು ಚರ್ಚೆಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಟಿ20 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸ್ಯಾಮ್ಸನ್ಗೆ ಮುಖ್ಯ ಕೋಚ್ Gautam Gambhir ಬೆಂಬಲವಿದೆ ಎನ್ನಲಾಗಿದೆ.
ಆದಾಗ್ಯೂ, ಈ ಎಲ್ಲ ವರದಿಗಳ ಬಗ್ಗೆ ಬಿಸಿಸಿಐಯಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಗುರುವಾರದ ಸಭೆಯ ಬಳಿಕ ಭಾರತ ಟಿ20 ತಂಡದ ನಾಯಕತ್ವದ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.
ಕ್ರೀಡೆ
ಹರ್ಮನ್ಪ್ರೀತ್ ಕೌರ್ ವಿಶ್ವದಾಖಲೆ: ಮಹಿಳಾ ಕ್ರಿಕೆಟ್ನಲ್ಲಿ ಹೊಸ ಇತಿಹಾಸ
ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ Harmanpreet Kaur ಅವರು ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಹರ್ಮನ್ಪ್ರೀತ್ ತಮ್ಮ 368ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು.
ಈ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರ್ತಿಯಾಗಿ ಅವರು ಹೊರಹೊಮ್ಮಿದ್ದಾರೆ. ಇದುವರೆಗೆ ಈ ದಾಖಲೆ ನ್ಯೂಜಿಲೆಂಡ್ನ Suzie Bates ಅವರ ಹೆಸರಿನಲ್ಲಿದ್ದು, ಅವರು 367 ಪಂದ್ಯಗಳನ್ನು ಆಡಿದ್ದರು. ಇದೀಗ 368 ಪಂದ್ಯಗಳೊಂದಿಗೆ ಹರ್ಮನ್ಪ್ರೀತ್ ಅಗ್ರಸ್ಥಾನಕ್ಕೇರಿದ್ದಾರೆ.
2009ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಹರ್ಮನ್ಪ್ರೀತ್, ಕಳೆದ 17 ವರ್ಷಗಳಿಂದ ಭಾರತೀಯ ಮಹಿಳಾ ಕ್ರಿಕೆಟ್ಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅವರು 143 ಪಂದ್ಯಗಳಿಂದ 4,541 ರನ್ಗಳನ್ನು ಗಳಿಸಿದ್ದು, ಏಳು ಶತಕ ಹಾಗೂ 24 ಅರ್ಧಶತಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.
ಆದಾಗ್ಯೂ ಈ ದಾಖಲೆಗಾಗಿ ಸ್ಪರ್ಧೆ ಇನ್ನೂ ಮುಂದುವರಿದಿದೆ. ಸುಜಿ ಬೇಟ್ಸ್ ಇನ್ನೂ ವೈಟ್ಬಾಲ್ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದು, ಮುಂದಿನ ಪಂದ್ಯಗಳಲ್ಲಿ ಹರ್ಮನ್ಪ್ರೀತ್ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ. ಆದರೆ ಬೇಟ್ಸ್ ಮುಂಬರುವ ಟಿ20 ವಿಶ್ವಕಪ್ ಬಳಿಕ ನಿವೃತ್ತಿಯಾಗಲಿದ್ದು, ಹರ್ಮನ್ಪ್ರೀತ್ ಇನ್ನಷ್ಟು ಪಂದ್ಯಗಳನ್ನು ಆಡುವ ಮೂಲಕ ದಾಖಲೆಯನ್ನು ಮತ್ತಷ್ಟು ಭದ್ರಪಡಿಸುವ ಸಾಧ್ಯತೆ ಇದೆ.
ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರ್ತಿಯರ ಪಟ್ಟಿಯಲ್ಲಿ Ellyse Perry (357), Mithali Raj (333) ಹಾಗೂ Sophie Devine (313) ಕ್ರಮವಾಗಿ ಮುಂದಿನ ಸ್ಥಾನಗಳಲ್ಲಿ ಇದ್ದಾರೆ.
ಪುರುಷ ಮತ್ತು ಮಹಿಳಾ ಕ್ರಿಕೆಟ್ ಸೇರಿ ಒಟ್ಟಾರೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು Sachin Tendulkar 664 ಪಂದ್ಯಗಳೊಂದಿಗೆ ಹೊಂದಿದ್ದಾರೆ.
-
ದೇಶ18 hours agoBig News : ಸಂಪುಟದಲ್ಲಿ ಮೊದಲ ವಿಕೆಟ್ ಪತನ? ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಣೆ
-
ಬೆಂಗಳೂರು16 hours agoವಾಹನ ಸವಾರರಿಗೆ ಬಂಪರ್ ಆಫರ್! ಟ್ರಾಫಿಕ್ ಫೈನ್ಗೆ 50% ರಿಯಾಯಿತಿ
-
ದೇಶ15 hours agoಡಿಕೆಶಿ ಸರ್ಕಾರಕ್ಕೆ ಮತ್ತೊಂದು ಶಾಕ್! ರಾಮಲಿಂಗಾ ರೆಡ್ಡಿ ಬಳಿಕ ಕೆ.ಹೆಚ್. ಮುನಿಯಪ್ಪ ಅಸಮಾಧಾನ ಸ್ಫೋಟ
-
ಕ್ರೀಡೆ14 hours agoಮುಂಬೈ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಎಬಿ ಡಿ ವಿಲಿಯರ್ಸ್! ಅಭಿಮಾನಿಗಳ ಹೃದಯ ಗೆದ್ದ RCB ದಿಗ್ಗಜ
-
ದೇಶ15 hours agoಹೊಸ ಪಕ್ಷ, ಹೊಸ ಹೋರಾಟ! ತಮಿಳುನಾಡಿನಲ್ಲಿ ಅಣ್ಣಾಮಲೈ ರಾಜಕೀಯ ಕ್ರಾಂತಿ
-
ದೇಶ16 hours agoರಾಮಲಿಂಗಾರೆಡ್ಡಿ ರಾಜೀನಾಮೆ: ಕಾರಿನ ಚಕ್ರದಡಿ ಮಲಗಿ ಅಭಿಮಾನಿಗಳ ಕಣ್ಣೀರು!
-
ದೇಶ17 hours agoತಮಿಳುನಾಡು ಬಿಜೆಪಿಯಲ್ಲಿ ಭೂಕಂಪ: ಕೆ. ಅಣ್ಣಾಮಲೈ ಪಕ್ಷಕ್ಕೆ ಗುಡ್ಬೈ
-
ದೇಶ11 hours agoಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ
