ಕ್ರೀಡೆ
Team India ಗೆ ದೊಡ್ಡ ಹಿನ್ನಡೆ! ಬುಮ್ರಾ ಆಡಲ್ಲ, ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಕಾಶ್ಮೀರದ ವೇಗಿ
ನವದೆಹಲಿ: Team India ತಂಡಕ್ಕೆ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ದೊಡ್ಡ ಹಿನ್ನಡೆಯಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯದ ಸಮಸ್ಯೆಯಿಂದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ ಅಧಿಕೃತವಾಗಿ ಪ್ರಕಟಿಸಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಎಡ ಮೊಣಕಾಲಿಗೆ ಗಾಯಗೊಂಡಿದ್ದ ಬುಮ್ರಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಮೊಣಕಾಲಿನ ಊತ ನಿರೀಕ್ಷೆಗಿಂತ ಗಂಭೀರವಾಗಿದೆ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ, ಮುಂಬರುವ ಅಂತರರಾಷ್ಟ್ರೀಯ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ವಿಶ್ರಾಂತಿಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಬುಮ್ರಾ ಸ್ಥಾನಕ್ಕೆ ಜಮ್ಮು-ಕಾಶ್ಮೀರದ ಪ್ರತಿಭಾವಂತ ವೇಗದ ಬೌಲರ್ ಔಕಿಬ್ ನಬಿ (Auqib Nabi) ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದು 29 ವರ್ಷದ ನಬಿ ಅವರ ಚೊಚ್ಚಲ ಹಿರಿಯ ರಾಷ್ಟ್ರೀಯ ತಂಡದ ಕರೆಯಾಗಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಬಿಸಿಸಿಐ, ಪುರುಷರ ಆಯ್ಕೆ ಸಮಿತಿಯು ಬುಮ್ರಾ ಬದಲಿಗೆ ನಬಿಯನ್ನು ತಂಡಕ್ಕೆ ಸೇರಿಸಿದೆ ಎಂದು ತಿಳಿಸಿದೆ.
ಬಾರಾಮುಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದ ನಿವಾಸಿಯಾಗಿರುವ ಔಕಿಬ್ ನಬಿ, ಭಾರತ ಹಿರಿಯ ತಂಡಕ್ಕೆ ಆಯ್ಕೆಯಾದ ಜಮ್ಮು-ಕಾಶ್ಮೀರದ ಮೂರನೇ ಆಟಗಾರರಾಗಿದ್ದಾರೆ. ಇದಕ್ಕೂ ಮೊದಲು ಪರ್ವೇಜ್ ರಸೂಲ್ ಹಾಗೂ ಉಮ್ರಾನ್ ಮಲಿಕ್ ಭಾರತವನ್ನು ಪ್ರತಿನಿಧಿಸಿದ್ದರು.
ದೇಶೀಯ ಕ್ರಿಕೆಟ್ನಲ್ಲಿ ನಬಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ರಣಜಿ ಟ್ರೋಫಿ ಋತುಗಳಲ್ಲಿ ಒಟ್ಟು 104 ವಿಕೆಟ್ಗಳನ್ನು ಕಬಳಿಸಿದ್ದು, 2025-26ರ ಋತುವಿನಲ್ಲಿ ಮಾತ್ರ 60 ವಿಕೆಟ್ ಪಡೆದು ಜಮ್ಮು-ಕಾಶ್ಮೀರ ತಂಡ ತನ್ನ ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವೇಗದ ಬೌಲಿಂಗ್ ಜೊತೆಗೆ ಉಪಯುಕ್ತ ಬ್ಯಾಟಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿರುವ ಅವರು, ಆಯ್ಕೆದಾರರ ಗಮನ ಸೆಳೆದಿದ್ದರು.
ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ‘ಎ’ ತಂಡದಲ್ಲೂ ನಬಿ ಸ್ಥಾನ ಪಡೆದಿದ್ದರು. ಅಲ್ಲಿ ನಡೆದ ಎರಡು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆರು ವಿಕೆಟ್ಗಳನ್ನು ಕಬಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಇದೇ ಪ್ರದರ್ಶನ ಅವರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆದಿದೆ.
ಇನ್ನು ಬ್ಯಾಟರ್ ಬಿ. ಸಾಯಿ ಸುದರ್ಶನ್ ಅವರ ಫಿಟ್ನೆಸ್ ಕೂಡ ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ವೈದ್ಯಕೀಯ ಅನುಮತಿ ಪಡೆದ ನಂತರವೇ ಸರಣಿಯಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15ರಿಂದ ಗಾಲೆನಲ್ಲಿ ಆರಂಭವಾಗಲಿದೆ. ನಾಯಕ ಶುಭಮನ್ ಗಿಲ್ ನೇತೃತ್ವದ ಭಾರತ ತಂಡದಲ್ಲಿ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಸೇರಿದಂತೆ ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ವೇಗದ ದಾಳಿಯ ಹೊಣೆಗಾರಿಕೆ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಅವರ ಮೇಲಿದೆ.
ಕ್ರೀಡೆ
Commonwealth Games 2026 ಗ್ಲಾಸ್ಗೋಗೆ ಗುಡ್ಬೈ.. ಭಾರತಕ್ಕೆ ಗ್ರ್ಯಾಂಡ್ ವೆಲ್ಕಮ್! 2030 ಕಾಮನ್ವೆಲ್ತ್ ಧ್ವಜ ಅಹಮದಾಬಾದ್ಗೆ
ಗ್ಲಾಸ್ಗೋ: 11 ದಿನಗಳ ಕಾಲ ಕ್ರೀಡಾಭಿಮಾನಿಗಳನ್ನು ರಂಜಿಸಿದ್ದ 2026ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ (Commonwealth Games 2026) ಭಾನುವಾರ ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ತೆರೆ ಬಿದ್ದಿದೆ. ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿರುವ OVO Hydro ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2030ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಸಮಾರೋಪ ಸಮಾರಂಭದ ಪ್ರಮುಖ ಕ್ಷಣದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದ ಧ್ವಜ ಮತ್ತು ಅಧಿಕೃತ ದಂಡವನ್ನು ಭಾರತೀಯ ಪ್ರತಿನಿಧಿಗಳಾದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಸಂಸ್ಥೆ (IOA) ಅಧ್ಯಕ್ಷೆ ಪಿ.ಟಿ. ಉಷಾ ಹಾಗೂ ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ ಸಾಂಘವಿ ಅವರಿಗೆ ಹಸ್ತಾಂತರಿಸಲಾಯಿತು. ಈ ಮೂಲಕ 2030ರ ಕಾಮನ್ವೆಲ್ತ್ ಗೇಮ್ಸ್ಗೆ ಅಹಮದಾಬಾದ್ ಅಧಿಕೃತ ಆತಿಥೇಯ ನಗರವಾಗಿ ಗುರುತಿಸಲ್ಪಟ್ಟಿದೆ.
ಸಮಾರೋಪ ಸಮಾರಂಭದಲ್ಲಿ ಮೊದಲು ಸ್ಕಾಟ್ಲೆಂಡ್ನ ಸಂಸ್ಕೃತಿ, ಸಂಗೀತ ಮತ್ತು ನೃತ್ಯದ ವೈಭವ ಅನಾವರಣಗೊಂಡಿತು. ಬಳಿಕ ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ವೈವಿಧ್ಯತೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಇಂಡೋ–ಸ್ಕಾಟಿಷ್ ಸಂಸ್ಕೃತಿಗಳ ‘ಜುಗಲ್ಬಂದಿ’ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತು. ಭಾರತದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ನೃತ್ಯ, ಸಂಗೀತ ಹಾಗೂ ‘ವಂದೇ ಮಾತರಂ’ ಗೀತೆಯ ವಿಶೇಷ ಪ್ರದರ್ಶನ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.
2030ರ ಕಾಮನ್ವೆಲ್ತ್ ಕ್ರೀಡಾಕೂಟದ ಯಶಸ್ವಿ ಆಯೋಜನೆಗಾಗಿ ಗುಜರಾತ್ನ ಅಹಮದಾಬಾದ್ನಲ್ಲಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ವಿಶ್ವಮಟ್ಟದ ಕ್ರೀಡಾ ಮೂಲಸೌಕರ್ಯ, ಕ್ರೀಡಾಂಗಣಗಳ ಅಭಿವೃದ್ಧಿ ಹಾಗೂ ಆತಿಥ್ಯ ವ್ಯವಸ್ಥೆಗಳನ್ನು ಬಲಪಡಿಸುವ ಕಾರ್ಯಗಳಿಗೆ ವೇಗ ನೀಡಲಾಗಿದೆ.
ಇನ್ನು ಕ್ರೀಡಾ ಸಾಧನೆಯ ವಿಚಾರದಲ್ಲಿ ಭಾರತ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದೆ. 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 39 ಪದಕಗಳನ್ನು ಗೆದ್ದಿರುವ ಭಾರತ, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಗಮನಾರ್ಹ ಸಂಗತಿಯೆಂದರೆ, 2010ರಲ್ಲಿ ನವದೆಹಲಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜಿಸಿದ್ದ ಭಾರತ, ಇದೀಗ 2030ರಲ್ಲಿ ಮತ್ತೊಮ್ಮೆ ಆತಿಥ್ಯ ವಹಿಸುವ ಮೂಲಕ ಆಸ್ಟ್ರೇಲಿಯಾ ನಂತರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಒಂದಕ್ಕಿಂತ ಹೆಚ್ಚು ಬಾರಿ ಆಯೋಜಿಸುವ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ದೇಶ
Commonwealth Games ನಲ್ಲಿ ಭಾರತದ ನಕ್ಷೆ ಎಡವಟ್ಟು! ಲೊವ್ಲಿನಾ ಬೊರ್ಗೊಹೈನ್ ಆಕ್ರೋಶ
ಗ್ಲಾಸ್ಗೋ: ಕಾಮನ್ವೆಲ್ತ್ ಗೇಮ್ಸ್ 2026 (Commonwealth Games 2026) ವೇಳೆ ಭಾರತದ ಕ್ರೀಡಾಪಟುಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಭೋಜನ ಕಾರ್ಯಕ್ರಮದಲ್ಲಿ ಭಾರತದ ನಕ್ಷೆ (India Map) ಸಂಬಂಧ ಹೊಸ ವಿವಾದ ಭುಗಿಲೆದ್ದಿದೆ. ಗ್ಲಾಸ್ಗೋದಲ್ಲಿರುವ ‘ಮಿಸ್ಟರ್ ಸಿಂಗ್ಸ್ ಇಂಡಿಯಾ – ಕರಿ ಹೌಸ್’ ರೆಸ್ಟೋರೆಂಟ್ನಲ್ಲಿ ನೀಡಲಾದ ಪೇಪರ್ ನ್ಯಾಪ್ಕಿನ್ನಲ್ಲಿ ಭಾರತದ ನಕ್ಷೆ ಮುದ್ರಿಸಲಾಗಿದ್ದು, ಅದರಲ್ಲಿ ಸಂಪೂರ್ಣ ಈಶಾನ್ಯ ಭಾರತವೇ ಕಾಣೆಯಾಗಿರುವುದು ಭಾರತೀಯ ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಎಡವಟ್ಟನ್ನು ಮೊದಲಿಗೆ ಗಮನಿಸಿದ ಒಲಿಂಪಿಕ್ ಕಂಚಿನ ಪದಕ ವಿಜೇತೆ ಹಾಗೂ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾರತದ ಪ್ರತಿಯೊಂದು ಭಾಗವೂ ದೇಶದ ಅವಿಭಾಜ್ಯ ಅಂಗವಾಗಿದ್ದು, ಈಶಾನ್ಯ ರಾಜ್ಯಗಳನ್ನು ನಕ್ಷೆಯಿಂದ ಕೈಬಿಡುವುದು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಅವರು ಹೇಳಿದ್ದಾರೆ.
ಈ ಘಟನೆಗೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಅಜಯ್ ಸಿಂಗ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಪ್ಕಿನ್ನಲ್ಲಿ ಜಮ್ಮು-ಕಾಶ್ಮೀರದ ಚಿತ್ರಣದಲ್ಲೂ ದೋಷವಿದೆ ಎಂದು ಅವರು ಸೂಚಿಸಿದ್ದು, ರೆಸ್ಟೋರೆಂಟ್ ಆಡಳಿತ ಕೂಡಲೇ ಈ ತಪ್ಪನ್ನು ಸರಿಪಡಿಸಿ, ತಪ್ಪಾಗಿ ಮುದ್ರಿಸಿರುವ ನ್ಯಾಪ್ಕಿನ್ಗಳನ್ನು ಬಳಕೆ ಮಾಡದಂತೆ ಒತ್ತಾಯಿಸಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಂತಹ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಭೌಗೋಳಿಕ ಚಿತ್ರಣದ ಬಗ್ಗೆ ಇಂತಹ ನಿರ್ಲಕ್ಷ್ಯ ಕಂಡುಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನೇಕರು ಭಾರತದ ಅಧಿಕೃತ ನಕ್ಷೆಯನ್ನು ಗೌರವಿಸುವಂತೆ ಹಾಗೂ ಇಂತಹ ತಪ್ಪುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಈ ವಿವಾದದ ಬಗ್ಗೆ ‘ಮಿಸ್ಟರ್ ಸಿಂಗ್ಸ್ ಇಂಡಿಯಾ – ಕರಿ ಹೌಸ್’ ರೆಸ್ಟೋರೆಂಟ್ ಆಡಳಿತದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ತಪ್ಪು ಉದ್ದೇಶಪೂರ್ವಕವಾಗಿದೆಯೇ ಅಥವಾ ಮುದ್ರಣದ ಎಡವಟ್ಟೇ ಎಂಬ ಕುರಿತು ಸ್ಪಷ್ಟನೆಗಾಗಿ ಭಾರತೀಯ ಅಭಿಮಾನಿಗಳು ಹಾಗೂ ಕ್ರೀಡಾಪಟುಗಳು ಕಾಯುತ್ತಿದ್ದಾರೆ.
ಭಾರತದ ನಕ್ಷೆಗೆ ಸಂಬಂಧಿಸಿದ ಯಾವುದೇ ತಪ್ಪುಗಳು ದೇಶದ ಭಾವನೆಗಳಿಗೆ ಧಕ್ಕೆ ತರುವ ವಿಚಾರವಾಗಿರುವುದರಿಂದ, ಈ ಘಟನೆ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.
ಕ್ರೀಡೆ
CWG 2026: Jasmine Lamboria ಯಾ ಚಿನ್ನ; ಭಾರತಕ್ಕೆ ಸತತ 2ನೇ ಗೋಲ್ಡ್
ನವದೆಹಲಿ: 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಬಾಕ್ಸರ್ Jasmine Lamboria ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 57 ಕೆಜಿ ವಿಭಾಗದ ಬಾಕ್ಸಿಂಗ್ ಫೈನಲ್ ಪಂದ್ಯದಲ್ಲಿ ಉತ್ತರ ಐರ್ಲೆಂಡ್ನ ಮೈಕೆಲಾ ವಾಲ್ಷ್ ಅವರನ್ನು 5-0 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಇದಕ್ಕೂ ಕೆಲವೇ ನಿಮಿಷಗಳ ಮೊದಲು 54 ಕೆಜಿ ವಿಭಾಗದಲ್ಲಿ ಪ್ರೀತಿ ಪನ್ವಾರ್ ಚಿನ್ನ ಗೆದ್ದಿದ್ದರು. ಹೀಗಾಗಿ ಭಾರತ ಬಾಕ್ಸಿಂಗ್ನಲ್ಲಿ ಸತತ ಎರಡು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಭಾರತದ ಪದಕ ಬೇಟೆಗೆ ಮತ್ತಷ್ಟು ಬಲ
ಜಾಸ್ಮಿನ್ ಲಂಬೋರಿಯಾ ಅವರ ಚಿನ್ನದೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನಕ್ಕೆ ಏರಿದೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಬಾಕ್ಸರ್ಗಳ ಅದ್ಭುತ ಪ್ರದರ್ಶನಕ್ಕೆ ಈ ಗೆಲುವು ಮತ್ತೊಂದು ಗರಿ ಮೂಡಿಸಿದೆ.
ಎರಡನೇ ಕಾಮನ್ವೆಲ್ತ್ ಪದಕ
ಜಾಸ್ಮಿನ್ ಲಂಬೋರಿಯಾ ಅವರಿಗೆ ಇದು ಎರಡನೇ ಕಾಮನ್ವೆಲ್ತ್ ಗೇಮ್ಸ್ ಪದಕವಾಗಿದೆ. 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಲೈಟ್ವೇಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಈಗ ಚಿನ್ನ ಗೆಲ್ಲುವ ಮೂಲಕ ತಮ್ಮ ಸಾಧನೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲೂ ಮಿಂಚಿದ್ದ ಜಾಸ್ಮಿನ್
2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾಸ್ಮಿನ್, ಫೈನಲ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್ನ ಜೂಲಿಯಾ ಸ್ಜೆರೆಮೆಟಾ ಅವರನ್ನು ಸೋಲಿಸಿ ವಿಶ್ವದ ಗಮನ ಸೆಳೆದಿದ್ದರು.
ಕ್ರೀಡಾ ಪರಂಪರೆಯ ಕುಟುಂಬ
ಜಾಸ್ಮಿನ್ ಅವರ ತಂದೆ ಜೈವೀರ್ ಲಂಬೋರಿಯಾ ಗೃಹರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮುತ್ತಜ್ಜ ಹವಾ ಸಿಂಗ್ ಭಾರತದ ಹೆಸರಾಂತ ಹೆವಿವೇಯ್ಟ್ ಬಾಕ್ಸರ್ ಆಗಿದ್ದು, ಎರಡು ಏಷ್ಯನ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು. ಆ ಕ್ರೀಡಾ ಪರಂಪರೆಯನ್ನು ಜಾಸ್ಮಿನ್ ಇದೀಗ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
-
ದೇಶ18 ಗಂಟೆಗಳು agoಪ್ರತಿ ಶಿಕ್ಷಣ ಸಂಸ್ಥೆ ‘Drug Free Campus’ ಆಗಲಿ; Governor Thawarchand Gehlot
-
ದೇಶ17 ಗಂಟೆಗಳು agoNEET ಪ್ರತಿಭಟನೆ ವಿವಾದಕ್ಕೆ ಹೊಸ ಟ್ವಿಸ್ಟ್! ಪ್ರಧಾನಿ ಮೋದಿಗೆ ತಾಯಿಯ ಭಾವನಾತ್ಮಕ ಸಂದೇಶ ವೈರಲ್
-
ದೇಶ48 ನಿಮಿಷಗಳು agoWorld War ದ ಭೀತಿ ತಪ್ಪಿತೇ? ಇರಾನ್ ಮೇಲಿನ ದಾಳಿಯನ್ನು ಕೊನೇ ಕ್ಷಣದಲ್ಲಿ ರದ್ದು
-
ದೇಶ17 ಗಂಟೆಗಳು agoIndonesia ದಲ್ಲಿ ದೋಣಿ ದುರಂತ; ಬೆಂಕಿ ಹೊತ್ತಿಕೊಂಡು ಭಸ್ಮ, 225 ಮಂದಿಯ ರಕ್ಷಣೆ
-
ದೇಶ17 ಗಂಟೆಗಳು agoCommonwealth Games ನಲ್ಲಿ ಭಾರತದ ನಕ್ಷೆ ಎಡವಟ್ಟು! ಲೊವ್ಲಿನಾ ಬೊರ್ಗೊಹೈನ್ ಆಕ್ರೋಶ
-
ರಾಜ್ಯ17 ಗಂಟೆಗಳು ago‘Karntaka-Tamil Nadu India-Pakisthan ಅಲ್ಲ’; ಕಾವೇರಿ ವಿವಾದಕ್ಕೆ ಕಾಂಗ್ರೆಸ್ ಸಂಸದರ ಹೊಸ ಸಲಹೆ
-
ಕ್ರೀಡೆ2 ಗಂಟೆಗಳು agoCommonwealth Games 2026 ಗ್ಲಾಸ್ಗೋಗೆ ಗುಡ್ಬೈ.. ಭಾರತಕ್ಕೆ ಗ್ರ್ಯಾಂಡ್ ವೆಲ್ಕಮ್! 2030 ಕಾಮನ್ವೆಲ್ತ್ ಧ್ವಜ ಅಹಮದಾಬಾದ್ಗೆ
-
ರಾಜ್ಯ2 ಗಂಟೆಗಳು agoCauvery ವಿವಾದ: ಸರ್ವಪಕ್ಷ ಸಭೆಯಲ್ಲಿ ಮೇಕೆದಾಟಿಗೆ ಒಮ್ಮತ; ರಾಜ್ಯ ಹಿತಕ್ಕಾಗಿ ಪಕ್ಷಾತೀತ ಹೋರಾಟಕ್ಕೆ ನಿರ್ಧಾರ
