ದೇಶ
FCRA ತಿದ್ದುಪಡಿ ಮಸೂದೆ 2026: ವಿದೇಶಿ ನಿಧಿಗಳ ಮೇಲೆ ಕೇಂದ್ರದ ಬಿಗಿ ಹಿಡಿತ ಏಕೆ?
ನವದೆಹಲಿ: ವಿದೇಶಿ ಅನುದಾನ ಪಡೆಯುವ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ FCRA (Foreign Contribution Regulation Act) ತಿದ್ದುಪಡಿ ಮಸೂದೆ 2026 ಅನ್ನು ಮುಂದಿಟ್ಟಿದ್ದು, ಇದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿದೇಶಿ ಅನುದಾನ ಸ್ವೀಕಾರ, ಬಳಕೆ ಮತ್ತು ವರದಿ ಮಾಡುವಿಕೆಯನ್ನು ನಿಯಂತ್ರಿಸುವ FCRA ಕಾಯ್ದೆಗೆ ಈ ಹಿಂದೆಯೂ ಹಲವು ಬಾರಿ ತಿದ್ದುಪಡಿ ತರಲಾಗಿತ್ತು. ಈಗ ಮಂಡಿಸಲಾಗಿರುವ ಹೊಸ ಮಸೂದೆ, ಈ ಹಿಂದಿನ ನಿಯಮಗಳಲ್ಲಿ ಇದ್ದ ಲೋಪದೋಷಗಳನ್ನು ಸರಿಪಡಿಸುವ ಜೊತೆಗೆ ಸಂಸ್ಥೆಗಳ ಆಡಳಿತ ಮಂಡಳಿಯ ಜವಾಬ್ದಾರಿಯನ್ನೂ ಸ್ಪಷ್ಟಪಡಿಸುವ ಗುರಿ ಹೊಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಈ ಮಸೂದೆಯ ಬಗ್ಗೆ ವಿಸ್ತೃತ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಮಸೂದೆಯ ಹಿನ್ನೆಲೆ
ಅಧಿಕೃತ ಅಂಕಿಅಂಶಗಳ ಪ್ರಕಾರ, 2019ರಿಂದ 2022ರ ಅವಧಿಯಲ್ಲಿ 13,500ಕ್ಕೂ ಹೆಚ್ಚು ಸಂಸ್ಥೆಗಳು ಸುಮಾರು ₹55,741 ಕೋಟಿಯಷ್ಟು ವಿದೇಶಿ ಅನುದಾನ ಪಡೆದಿವೆ. ಇಷ್ಟು ದೊಡ್ಡ ಪ್ರಮಾಣದ ಹಣದ ಹರಿವಿನ ಮೇಲೆ ಪರಿಣಾಮಕಾರಿ ನಿಗಾ ಇಡುವುದು ಅಗತ್ಯ ಎಂಬುದು ಮಸೂದೆಯ ಬೆಂಬಲಿಗರ ವಾದ. ಇಷ್ಟೊಂದು ದೊಡ್ಡ ಮೊತ್ತದ ಹಣ ದೇಶದ ವಿವಿಧ ವಲಯಗಳಿಗೆ – ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ, ಧಾರ್ಮಿಕ ಚಟುವಟಿಕೆ ಸೇರಿದಂತೆ – ಹರಿದುಬರುತ್ತಿರುವ ಹಿನ್ನೆಲೆಯಲ್ಲಿ, ಈ ಹಣದ ಮೂಲ ಮತ್ತು ಅಂತಿಮ ಬಳಕೆಯ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ನಿಧಿಗಳು ಅಭಿವೃದ್ಧಿ ವಿರೋಧಿ ಚಟುವಟಿಕೆಗಳಿಗೆ, ಭಯೋತ್ಪಾದನೆಗೆ ಸಂಬಂಧಿಸಿದ ಹಣಕಾಸು ನೆರವಿಗೆ ಅಥವಾ ಸಂಘಟಿತ ಧಾರ್ಮಿಕ ಮತಾಂತರಗಳಂತಹ ಚಟುವಟಿಕೆಗಳಿಗೆ ದುರುಪಯೋಗವಾಗುವುದನ್ನು ತಡೆಯುವುದೇ ಈ ತಿದ್ದುಪಡಿಯ ಪ್ರಮುಖ ಗುರಿ ಎಂದು ಅವರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ, ನೋಂದಣಿ ಪ್ರಕ್ರಿಯೆ, ವಾರ್ಷಿಕ ವರದಿ ಸಲ್ಲಿಕೆ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಸಂಬಂಧಿಸಿದ ನಿಯಮಗಳನ್ನೂ ಮತ್ತಷ್ಟು ಬಿಗಿಗೊಳಿಸುವ ಪ್ರಸ್ತಾವನೆ ಮಸೂದೆಯಲ್ಲಿ ಸೇರಿಸಲಾಗಿದೆ.
ಮಸೂದೆಯ ಪ್ರಮುಖ ಅಂಶಗಳು
ಆಸ್ತಿ ವಿಲೇವಾರಿಗೆ ಕಡಿವಾಣ: FCRA ನೋಂದಣಿ ರದ್ದಾದಾಗ, ಸಂಸ್ಥೆ ಸ್ವಯಂಪ್ರೇರಿತವಾಗಿ ಶರಣಾದಾಗ ಅಥವಾ ನೋಂದಣಿ ಅವಧಿ ಮುಗಿದಾಗ ವಿದೇಶಿ ಹಣದಿಂದ ಖರೀದಿಸಿದ ಆಸ್ತಿಗಳನ್ನು ತಕ್ಷಣ ವಿಲೇವಾರಿ ಮಾಡುವ ಅವಕಾಶವನ್ನು ಈ ಮಸೂದೆ ತಡೆಯುತ್ತದೆ. ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಿಸಿ, ಅಗತ್ಯವಿದ್ದಲ್ಲಿ ಅಂತಹ ಆಸ್ತಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯುವ ಅಧಿಕಾರ ಸರ್ಕಾರಕ್ಕೆ ದೊರೆಯಲಿದೆ. ಇದರಿಂದ ಹಿಂದೆ ಇದ್ದ “ಲ್ಯಾಪ್ಸ್ ಅಂಡ್ ಕೀಪ್” ಎಂಬ ಲೋಪಕ್ಕೆ – ಅಂದರೆ ನೋಂದಣಿ ಮುಗಿದ ಮೇಲೂ ವಿದೇಶಿ ಅನುದಾನದ ಆಸ್ತಿಗಳನ್ನು ಅನಿಯಮಿತವಾಗಿ ಬಳಸುವ ಸಾಧ್ಯತೆಗೆ – ತೆರೆ ಬೀಳಲಿದೆ ಎಂದು ಬೆಂಬಲಿಗರು ಹೇಳುತ್ತಾರೆ. ಇಂತಹ ಆಸ್ತಿಗಳ ಪಟ್ಟಿಯನ್ನು ಕಾಲಕಾಲಕ್ಕೆ ನವೀಕರಿಸಿ, ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಮಾಡುವುದನ್ನೂ ಸಂಸ್ಥೆಗಳಿಗೆ ಕಡ್ಡಾಯಗೊಳಿಸಲಾಗುತ್ತದೆ ಎಂದು ಮಸೂದೆಯ ಕರಡಿನಲ್ಲಿ ಉಲ್ಲೇಖಿಸಲಾಗಿದೆ.
ಪದಾಧಿಕಾರಿಗಳಿಗೆ ವೈಯಕ್ತಿಕ ಹೊಣೆಗಾರಿಕೆ: ಸಂಸ್ಥೆಯ ಪ್ರಮುಖ ಹುದ್ದೆಗಳಲ್ಲಿ ಇರುವವರು ವಿದೇಶಿ ನಿಧಿಯ ಬಳಕೆಗೆ ವೈಯಕ್ತಿಕವಾಗಿ ಹೊಣೆಗಾರರಾಗಲಿದ್ದಾರೆ. ಹಣದ ದುರುಪಯೋಗ ಕಂಡುಬಂದಲ್ಲಿ, ಕೇವಲ ಸಂಸ್ಥೆಯ ಮೇಲಷ್ಟೇ ಅಲ್ಲದೆ ನಿರ್ಧಾರ ಕೈಗೊಂಡ ವ್ಯಕ್ತಿಗಳ ಮೇಲೂ ಕಾನೂನು ಕ್ರಮ ಜರುಗಿಸುವ ಅವಕಾಶ ಇದರಿಂದ ಸಿಗಲಿದೆ. ಆಡಳಿತ ಮಂಡಳಿಯ ಸದಸ್ಯರು, ಟ್ರಸ್ಟಿಗಳು ಹಾಗೂ ಪ್ರಮುಖ ಹಣಕಾಸು ನಿರ್ಧಾರ ಕೈಗೊಳ್ಳುವ ಅಧಿಕಾರಿಗಳು ಈ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದರಿಂದ ಸಂಸ್ಥೆಗಳು ಹಣಕಾಸು ನಿರ್ಧಾರಗಳನ್ನು ಕೈಗೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಧಾರ್ಮಿಕ ಚಟುವಟಿಕೆ ಮತ್ತು ಮತಾಂತರ ನಿಷೇಧ: ಧಾರ್ಮಿಕ ಶಿಕ್ಷಣ, ಧರ್ಮೋಪದೇಶ, ಧಾರ್ಮಿಕ ಶಿಬಿರಗಳು ಹಾಗೂ ಸ್ಥಳೀಯ ನಂಬಿಕೆಗಳ ಸಂರಕ್ಷಣೆಗೆ ವಿದೇಶಿ ಅನುದಾನ ಬಳಸುವುದನ್ನು ಮಸೂದೆ ನಿರ್ಬಂಧಿಸುವುದಿಲ್ಲ. ಆದರೆ ಧಾರ್ಮಿಕ ಮತಾಂತರಕ್ಕಾಗಿ ವಿದೇಶಿ ಹಣ ಬಳಸುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಜೊತೆಗೆ, ವಿದೇಶಿ ನಿಧಿಯಿಂದ ನಿರ್ಮಿಸಿದ ಆರಾಧನಾ ಸ್ಥಳಗಳ ಮೂಲ ಧಾರ್ಮಿಕ ಸ್ವರೂಪವನ್ನು ಕಾಪಾಡುವುದನ್ನೂ ಕಡ್ಡಾಯಗೊಳಿಸಲಾಗಿದೆ. ಈ ನಿಬಂಧನೆಯನ್ನು ಉಲ್ಲಂಘಿಸಿದಲ್ಲಿ ನೋಂದಣಿ ಅಮಾನತು ಅಥವಾ ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನೂ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನೀಡಲಾಗುತ್ತದೆ.
ಗುಪ್ತಚರ ಮೌಲ್ಯಮಾಪನ ಮತ್ತು ಪ್ರಸ್ತಾವಿತ ಆರೋಪಗಳು
ಮಸೂದೆಯ ಬೆಂಬಲಿಗರ ಪ್ರಕಾರ, ಕೆಲವು ಗುಪ್ತಚರ ಸಂಸ್ಥೆಗಳ ಮೌಲ್ಯಮಾಪನದಲ್ಲಿ ವಿದೇಶಿ ಅನುದಾನ ಪಡೆಯುವ ಕೆಲವು ಸಂಘಟನೆಗಳು ಪರಿಸರ ಹೋರಾಟದ ಹೆಸರಿನಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುವುದು, ಸಾಮಾಜಿಕ ವಿಭಜನೆ ಉಂಟುಮಾಡುವುದು, ತೀವ್ರವಾದಕ್ಕೆ ಹಣಕಾಸು ನೆರವು ಹಾಗೂ ದುರ್ಬಲ ವರ್ಗಗಳಲ್ಲಿ ಮತಾಂತರ ಚಟುವಟಿಕೆಗಳಿಗೆ ಬೆಂಬಲ ನೀಡಿರುವ ಆರೋಪಗಳಿವೆ. ಇಂತಹ ದುರುಪಯೋಗಕ್ಕೆ ಕಡಿವಾಣ ಹಾಕಲು ಮಸೂದೆ ನೆರವಾಗಲಿದೆ ಎಂಬುದು ಅವರ ವಾದ.
ಈ ಸಂದರ್ಭದಲ್ಲಿ Greenpeace India, Amnesty International India, Lawyers Collective, Rajiv Gandhi Foundation ಹಾಗೂ ನಿಷೇಧಿತ PFI ಸಂಘಟನೆಯಂತಹ ಪ್ರಕರಣಗಳನ್ನು ಬೆಂಬಲಿಗರು ಉದಾಹರಣೆಯಾಗಿ ಉಲ್ಲೇಖಿಸುತ್ತಾರೆ. ಈ ಸಂಸ್ಥೆಗಳ ವಿರುದ್ಧ ವಿವಿಧ ಸಂದರ್ಭಗಳಲ್ಲಿ FCRA ಉಲ್ಲಂಘನೆ, ಹಣಕಾಸು ಅಕ್ರಮ ಅಥವಾ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆರೋಪಗಳ ಆಧಾರದ ಮೇಲೆ ತನಿಖೆ ನಡೆಸಲಾಗಿದೆ ಎಂದು ಅವರು ಹೇಳುತ್ತಾರೆ. ಕೆಲವು ಪ್ರಕರಣಗಳಲ್ಲಿ ನೋಂದಣಿ ಅಮಾನತು, ಇನ್ನು ಕೆಲವು ಪ್ರಕರಣಗಳಲ್ಲಿ ಸಂಪೂರ್ಣ ರದ್ದತಿಯಂತಹ ಕ್ರಮಗಳನ್ನೂ ಈ ಹಿಂದೆ ಜರುಗಿಸಲಾಗಿತ್ತು ಎಂದು ಅಧಿಕಾರಿಗಳು ನೆನಪಿಸುತ್ತಾರೆ.
PFI ವಿರುದ್ಧವಂತೂ ವಿದೇಶಿ ಹಣವನ್ನು ಭಯೋತ್ಪಾದನೆ ಮತ್ತು ತೀವ್ರವಾದ ಚಟುವಟಿಕೆಗಳಿಗೆ ಬಳಸಿದ ಆರೋಪದ ಮೇಲೆ 2022ರಲ್ಲಿ ನಿಷೇಧ ಹೇರಲಾಗಿತ್ತು. ಇಂತಹ ಪ್ರಕರಣಗಳೇ ಕಟ್ಟುನಿಟ್ಟಿನ ಮೇಲ್ವಿಚಾರಣೆಯ ಅಗತ್ಯವನ್ನು ತೋರಿಸುತ್ತವೆ ಎಂದು ಬೆಂಬಲಿಗರು ಪ್ರತಿಪಾದಿಸುತ್ತಾರೆ. ಇಂತಹ ಸಂಸ್ಥೆಗಳ ಮೇಲಿನ ಕ್ರಮಗಳು ಕೇವಲ ಪ್ರತ್ಯೇಕ ಪ್ರಕರಣಗಳಲ್ಲ, ಬದಲಿಗೆ ವ್ಯವಸ್ಥಿತ ದೌರ್ಬಲ್ಯದ ಸಂಕೇತ ಎಂದೂ ಬೆಂಬಲಿಗರು ವಾದಿಸುತ್ತಾರೆ; ಈ ಕಾರಣಕ್ಕಾಗಿಯೇ ಕಾನೂನಿನಲ್ಲಿ ಸ್ಪಷ್ಟ ಮತ್ತು ಕಠಿಣ ನಿಬಂಧನೆಗಳ ಅಗತ್ಯವಿದೆ ಎಂಬುದು ಅವರ ನಿಲುವು.
ವಿರೋಧದ ಧ್ವನಿಗಳು
ಆದರೆ ಈ ಪ್ರಸ್ತಾವನೆಯನ್ನು ಹಲವು ಸ್ವಯಂಸೇವಾ ಸಂಸ್ಥೆಗಳು, ನಾಗರಿಕ ಸಮಾಜದ ಸಂಘಟನೆಗಳು ಹಾಗೂ ಕೆಲವು ಧಾರ್ಮಿಕ ಸಂಸ್ಥೆಗಳು ವಿರೋಧಿಸಿವೆ. ಅತಿಯಾದ ನಿಯಂತ್ರಣದಿಂದ ಸಾಮಾಜಿಕ ಸೇವೆ, ಮಾನವ ಹಕ್ಕುಗಳ ರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬುದು ಅವರ ಆತಂಕ. ಪದಾಧಿಕಾರಿಗಳ ಮೇಲಿನ ವೈಯಕ್ತಿಕ ಹೊಣೆಗಾರಿಕೆಯ ನಿಬಂಧನೆ ಸ್ವಯಂಸೇವಾ ವಲಯದಲ್ಲಿ ಕೆಲಸ ಮಾಡಲು ಇಚ್ಛಿಸುವವರನ್ನು ಹಿಂಜರಿಯುವಂತೆ ಮಾಡಬಹುದು ಎಂಬ ಆತಂಕವನ್ನೂ ಕೆಲವು ಸಂಘಟನೆಗಳು ವ್ಯಕ್ತಪಡಿಸಿವೆ. ಅಲ್ಲದೆ, “ಅಭಿವೃದ್ಧಿ ವಿರೋಧಿ ಚಟುವಟಿಕೆ” ಎಂಬಂತಹ ಪದಗಳ ವ್ಯಾಖ್ಯಾನ ಅಸ್ಪಷ್ಟವಾಗಿದ್ದು, ಇದನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ನೀತಿಗಳನ್ನು ಟೀಕಿಸುವ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂಬ ವಾದವನ್ನೂ ವಿಮರ್ಶಕರು ಮುಂದಿಡುತ್ತಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಬೆಂಬಲಿಗರು ಈ ನಿಯಮಗಳು ಯಾವುದೇ ಕಾನೂನುಬದ್ಧ ಸಂಸ್ಥೆಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಬದಲಾಗಿ, ವಿದೇಶಿ ಹಣದ ಮೂಲ, ಬಳಕೆ ಮತ್ತು ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಹೆಚ್ಚಿಸುವುದೇ ಇದರ ಮೂಲ ಉದ್ದೇಶ ಎಂದು ಅವರು ಪ್ರತಿಪಾದಿಸುತ್ತಾರೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಈ ನಿಯಮಗಳಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನೂ ಅವರು ಒತ್ತಿ ಹೇಳುತ್ತಾರೆ.
ಮಸೂದೆಯ ಹಿಂದಿನ ಮೂಲ ತತ್ವ
FCRA ತಿದ್ದುಪಡಿ ಮಸೂದೆ 2026ರ ಬೆಂಬಲಿಗರ ಪ್ರಕಾರ, ಭಾರತಕ್ಕೆ ಬರುವ ವಿದೇಶಿ ನಿಧಿಗಳು ಸಂಪೂರ್ಣವಾಗಿ ಪಾರದರ್ಶಕ, ಹೊಣೆಗಾರಿಕೆಯುತ ಮತ್ತು ದೇಶದ ಕಾನೂನುಗಳಿಗೆ ಅನುಗುಣವಾಗಿ ಬಳಕೆಯಾಗಬೇಕು ಎಂಬುದೇ ಇದರ ಮೂಲ ತತ್ವ. ಪ್ರತಿಯೊಂದು ಸಾರ್ವಭೌಮ ರಾಷ್ಟ್ರಕ್ಕೂ ತನ್ನ ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಆದ್ಯತೆಗಳು ಹಾಗೂ ಸಾಮಾಜಿಕ ಸೌಹಾರ್ದವನ್ನು ಕಾಪಾಡುವ ಉದ್ದೇಶದಿಂದ ವಿದೇಶಿ ಪ್ರಭಾವವನ್ನು ನಿಯಂತ್ರಿಸುವ ಹಕ್ಕಿದೆ ಎಂಬುದು ಅವರ ವಾದ.
ಒಟ್ಟಾರೆಯಾಗಿ, FCRA ತಿದ್ದುಪಡಿ ಮಸೂದೆ 2026 ಪಾರದರ್ಶಕತೆ ಮತ್ತು ರಾಷ್ಟ್ರೀಯ ಭದ್ರತೆಯ ಪರವಾದ ವಾದ ಒಂದೆಡೆ ಇದ್ದರೆ, ನಾಗರಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೇವೆಗೆ ಅಡ್ಡಿಯಾಗುವ ಆತಂಕ ಇನ್ನೊಂದೆಡೆ ಇರುವ ಈ ವಿಷಯ, ಸಂಸತ್ತಿನಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ರಾಜ್ಯ
Karnataka ದ ಟೆಕ್ ಶಕ್ತಿ ವಿಶ್ವ ಮಟ್ಟದಲ್ಲಿ ಮೆರೆಯುತ್ತಿದೆ: ಡಿಕೆ ಶಿವಕುಮಾರ್
ಬೆಂಗಳೂರು: Karnataka ವು ಭಾರತದ ತಂತ್ರಜ್ಞಾನ ರಾಜಧಾನಿ (Technology Capital) ಮಾತ್ರವಲ್ಲ, ದೇಶದ ನವೋದ್ಯಮ (Innovation) ಮತ್ತು ಡಿಜಿಟಲ್ ಆರ್ಥಿಕತೆಯನ್ನು ಮುನ್ನಡೆಸುವ ಪ್ರಮುಖ ಶಕ್ತಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ಕರ್ನಾಟಕ ದೇಶದ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡುತ್ತಿದ್ದು, ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಪ್ರಕಾರ, ದೇಶದ ಒಟ್ಟು ಸಾಫ್ಟ್ವೇರ್ ರಫ್ತಿನ (Software Exports) ಶೇ.41ರಷ್ಟು ಪಾಲು ಕರ್ನಾಟಕದಿಂದಲೇ ಬರುತ್ತಿದೆ. ಇದಲ್ಲದೆ, ಭಾರತದ ಒಟ್ಟು ರಫ್ತಿನ (Total Exports) ಶೇ.24ರಷ್ಟು ಪಾಲನ್ನು ಕರ್ನಾಟಕವೇ ನೀಡುತ್ತಿದೆ. ಈ ಅಂಕಿಅಂಶಗಳು ರಾಜ್ಯದ ತಾಂತ್ರಿಕ ಸಾಮರ್ಥ್ಯ ಹಾಗೂ ಕೈಗಾರಿಕಾ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ವಿಶ್ವದರ್ಜೆಯ ಪ್ರತಿಭಾವಂತ ಮಾನವ ಸಂಪನ್ಮೂಲ, ಬಲಿಷ್ಠ ಸ್ಟಾರ್ಟ್ಅಪ್ ಹಾಗೂ ನವೋದ್ಯಮ ಪರಿಸರ (Innovation Ecosystem) ಮತ್ತು ಕೈಗಾರಿಕೆಗಳಿಗೆ ಪೂರಕವಾದ ನೀತಿಗಳಿಂದಾಗಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ ತನ್ನ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ದಿನಗಳಲ್ಲಿಯೂ ಉದ್ಯೋಗ ಸೃಷ್ಟಿ, ಜಾಗತಿಕ ಹೂಡಿಕೆಗಳನ್ನು (Global Investments) ಆಕರ್ಷಿಸುವುದು ಹಾಗೂ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
“ಕರ್ನಾಟಕವು ಭಾರತದ ಪ್ರಗತಿಗೆ ವೇಗ ನೀಡುವ ಎಂಜಿನ್ ಆಗಿಯೇ ಮುಂದುವರಿಯಲಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವಲ್ಲಿ ನಮ್ಮ ರಾಜ್ಯ ಮಹತ್ವದ ಪಾತ್ರ ವಹಿಸುತ್ತದೆ” ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ತಂತ್ರಜ್ಞಾನ, ಡಿಜಿಟಲ್ ಆರ್ಥಿಕತೆ, ಕೃತಕ ಬುದ್ಧಿಮತ್ತೆ (AI), ಸ್ಟಾರ್ಟ್ಅಪ್ಗಳು ಹಾಗೂ ಜಾಗತಿಕ ಕಂಪನಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವ ಮೂಲಕ ಕರ್ನಾಟಕವನ್ನು ಇನ್ನಷ್ಟು ಬಲಿಷ್ಠ ಹೂಡಿಕೆ ತಾಣವನ್ನಾಗಿ ರೂಪಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರಗಳು ಐಟಿ, ಬಯೋಟೆಕ್, ಫಿನ್ಟೆಕ್, ಡೀಪ್ ಟೆಕ್ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ದೇಶದ ಮುಂಚೂಣಿಯಲ್ಲಿದ್ದು, ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳ ಹೂಡಿಕೆಯನ್ನು ಸೆಳೆಯುತ್ತಿವೆ. ಇದೇ ಬೆಳವಣಿಗೆ ಕರ್ನಾಟಕವನ್ನು ಭಾರತದ ಡಿಜಿಟಲ್ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಯನ್ನಾಗಿ ರೂಪಿಸಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೇಶ
Delhi ಮೆಟ್ರೋಗೆ ಬಿಗಿ ಭದ್ರತೆ: 16 ಪ್ರಮುಖ ನಿಲ್ದಾಣಗಳು ತಾತ್ಕಾಲಿಕ ಬಂದ್
ನವದೆಹಲಿ: Delhi ಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ದೆಹಲಿ ಮೆಟ್ರೋ ರೈಲು ನಿಗಮ (DMRC), ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಮಂಡಿ ಹೌಸ್ ಸೇರಿದಂತೆ ಒಟ್ಟು 16 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಬುಧವಾರ ಬೆಳಗ್ಗೆಯಿಂದ ತಾತ್ಕಾಲಿಕವಾಗಿ ಮುಚ್ಚಿದೆ.
ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ಈ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ DMRC ಸೂಚಿಸಿದೆ.
ಯಾವೆಲ್ಲಾ ಮೆಟ್ರೋ ನಿಲ್ದಾಣಗಳು ಬಂದ್?
DMRC ಪ್ರಕಟಿಸಿರುವ ಪಟ್ಟಿಯ ಪ್ರಕಾರ ಈ ಕೆಳಗಿನ 16 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
- ಲೋಕ ಕಲ್ಯಾಣ ಮಾರ್ಗ
- ರಾಜೀವ್ ಚೌಕ್
- ಪಟೇಲ್ ಚೌಕ್
- ರಾಮಕೃಷ್ಣ ಆಶ್ರಮ ಮಾರ್ಗ
- ಬಾರಾಖಂಬಾ ರೋಡ್
- ಸುಪ್ರೀಂ ಕೋರ್ಟ್
- ಸೇವಾ ತೀರ್ಥ
- ಜನಪಥ್
- ಮಂಡಿ ಹೌಸ್
- ಸೆಂಟ್ರಲ್ ಸೆಕ್ರೆಟರಿಯೇಟ್
- ಐಟಿಒ
- ದೆಹಲಿ ಗೇಟ್
- ಇಂದ್ರಪ್ರಸ್ಥ
- ಖಾನ್ ಮಾರ್ಕೆಟ್
- ಜೋರ್ ಬಾಗ್
- ಶಿವಾಜಿ ಸ್ಟೇಡಿಯಂ
ಇಂಟರ್ಚೇಂಜ್ ಸೇವೆ ಮುಂದುವರಿಕೆ
ಪ್ರಯಾಣಿಕರಿಗೆ ಕೆಲವು ಮಟ್ಟಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣಗಳಲ್ಲಿ ಇಂಟರ್ಚೇಂಜ್ (ಲೈನ್ ಬದಲಾವಣೆ) ಸೇವೆ ಎಂದಿನಂತೆ ಮುಂದುವರಿಯಲಿದೆ. ಆದರೆ ಈ ನಿಲ್ದಾಣಗಳಲ್ಲಿ ಪ್ರವೇಶ ಅಥವಾ ನಿರ್ಗಮನಕ್ಕೆ ಅವಕಾಶ ಇರುವುದಿಲ್ಲ.
ಪ್ರತಿಭಟನೆ ಹಿನ್ನೆಲೆ ಬಿಗಿ ಭದ್ರತೆ
ನೀಟ್ ಪರೀಕ್ಷೆ ಸಂಬಂಧಿತ ಅಕ್ರಮಗಳನ್ನು ಖಂಡಿಸಿ CJP ಜುಲೈ 20ರಂದು ಹಮ್ಮಿಕೊಂಡಿದ್ದ ‘ಸಂಸದ್ ಚಲೋ’ ಪ್ರತಿಭಟನೆಗೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ದೆಹಲಿಯಲ್ಲಿ ಸೇರಿದ್ದರು. ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈಗಾಗಲೇ ಹಲವು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿತ್ತು.
ಇದೀಗ ಪ್ರತಿಭಟನೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪ್ರಯಾಣಿಕರಿಗೆ DMRC ಸಲಹೆ
ದೆಹಲಿ ಮೆಟ್ರೋ ಬಳಕೆ ಮಾಡುವ ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ಅಧಿಕೃತ ಮಾಹಿತಿ ಪರಿಶೀಲಿಸಿ, ಅಗತ್ಯವಿದ್ದರೆ ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವಂತೆ DMRC ಮನವಿ ಮಾಡಿದೆ. ಭದ್ರತಾ ಪರಿಸ್ಥಿತಿಯನ್ನು ಅವಲಂಬಿಸಿ ನಿಲ್ದಾಣಗಳನ್ನು ಪುನಃ ತೆರೆಯುವ ಕುರಿತು ನಂತರ ಮಾಹಿತಿ ನೀಡಲಾಗುವುದು.
ಸಿನಿಮಾ
‘LENIN’ ಸಕ್ಸಸ್ ಮೀಟ್ನಲ್ಲಿ ನಾಗಾರ್ಜುನ ಸ್ಫೋಟಕ ಮಾತು; ರಿಲೀಸ್ ಸಂಸ್ಕೃತಿ ಬದಲಾಗಬೇಕು
ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ (Tollywood) ದೊಡ್ಡ ಬಜೆಟ್ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂಚಿತವಾಗಿ ಘೋಷಿಸಿ, ಕೊನೆಯ ಕ್ಷಣದಲ್ಲಿ ಮುಂದೂಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಪ್ರೇಕ್ಷಕರು ನಿರಾಸೆಗೊಳ್ಳುವುದರ ಜೊತೆಗೆ ಚಿತ್ರರಂಗದ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತಿದೆ ಎಂದು ಹಿರಿಯ ನಟ ನಾಗಾರ್ಜುನ (Nagarjuna) ಕಳವಳ ವ್ಯಕ್ತಪಡಿಸಿದ್ದಾರೆ.
‘ಲೆನಿನ್ (Lenin Movie)‘ ಚಿತ್ರದ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ಅವರು, ಸಿನಿಮಾ ನಿರ್ಮಾಣದಲ್ಲಿ ಮತ್ತೆ ಶಿಸ್ತು ತರಬೇಕೆಂದು ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಸಂಗೀತ ನಿರ್ದೇಶಕರಿಗೆ ಮನವಿ ಮಾಡಿದರು. ಬಿಡುಗಡೆಯ ಕನಿಷ್ಠ ಎರಡು ವಾರಗಳ ಮುಂಚೆಯೇ ಸಿನಿಮಾ ಸಂಪೂರ್ಣ ಸಿದ್ಧವಾಗಿರಬೇಕು ಎಂದು ಅವರು ಸಲಹೆ ನೀಡಿದರು.
ಪೋಸ್ಟ್ ಪ್ರೊಡಕ್ಷನ್ಗೆ ಸಮಯ ಕೊಡಬೇಕು
“ನಾನು ತಂತ್ರಜ್ಞರು, ನಿರ್ದೇಶಕರು ಮತ್ತು ಸಂಗೀತ ಸಂಯೋಜಕರನ್ನು ವಿನಂತಿಸುತ್ತೇನೆ. ಬಿಡುಗಡೆಯ ಎರಡು ವಾರಗಳ ಮೊದಲು ಚಿತ್ರವನ್ನು ಪೋಸ್ಟ್ ಪ್ರೊಡಕ್ಷನ್ ತಂಡಕ್ಕೆ ಹಸ್ತಾಂತರಿಸಬೇಕು. ಕೊನೆಯ ಕ್ಷಣದವರೆಗೂ ಬದಲಾವಣೆ ಮಾಡುತ್ತಾ ಹೋದರೆ ಗುಣಮಟ್ಟಕ್ಕೂ, ಬಿಡುಗಡೆಯ ವೇಳಾಪಟ್ಟಿಗೂ ಸಮಸ್ಯೆಯಾಗುತ್ತದೆ,” ಎಂದು ನಾಗಾರ್ಜುನ ಹೇಳಿದರು.
ಇದು ಯಾರನ್ನಾದರೂ ಟೀಕಿಸುವ ಉದ್ದೇಶದಿಂದ ಹೇಳುತ್ತಿರುವುದಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಲೆನಿನ್ ಸಿನಿಮಾದಲ್ಲೂ ಕೊನೆಯ ಕ್ಷಣದವರೆಗೂ ನಾನು ಕೆಲಸ ಮಾಡಿದ್ದೇನೆ. ನನ್ನ ಮೇಲೂ ಇದೇ ಮಾತು ಅನ್ವಯಿಸುತ್ತದೆ,” ಎಂದು ಆತ್ಮಾವಲೋಕನ ಮಾಡಿಕೊಂಡರು.
ಹಿಂದೆ ಎರಡು ತಿಂಗಳು ಮೊದಲೇ ಸಿನಿಮಾ ರೆಡಿ ಆಗುತ್ತಿತ್ತು
ಹಳೆಯ ದಿನಗಳನ್ನು ನೆನಪಿಸಿಕೊಂಡ ನಾಗಾರ್ಜುನ, “‘ನಿನ್ನೆ ಪೆಲ್ಲಾಡತಾ’ ಮತ್ತು ‘ಅನ್ನಮಯ್ಯ’ ಸಿನಿಮಾಗಳು ಬಿಡುಗಡೆಯ ಎರಡು ತಿಂಗಳ ಮೊದಲೇ ಫೈನಲ್ ಕಾಪಿ ಸಿದ್ಧವಾಗುತ್ತಿತ್ತು. ಆದರೆ ಈಗ ಆ ರೀತಿಯ ಶಿಸ್ತು ಕಾಣುತ್ತಿಲ್ಲ. ಹಿಂದೆ ಸಾಧ್ಯವಾಗಿದ್ದದ್ದು ಈಗ ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಪ್ರಶ್ನಿಸಿದರು.
‘ಒಡಿಸ್ಸಿ’ ಉದಾಹರಣೆ ನೀಡಿದ ನಾಗಾರ್ಜುನ
ಹಾಲಿವುಡ್ನ ‘ದಿ ಒಡಿಸ್ಸಿ (The Odyssey)’ ಸಿನಿಮಾವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ನಾಗಾರ್ಜುನ, “ಅವರು ಒಂದು ವರ್ಷದ ಮೊದಲೇ ಬಿಡುಗಡೆಯ ದಿನಾಂಕ ಘೋಷಿಸಿ, ಅದೇ ದಿನ ಚಿತ್ರವನ್ನು ಬಿಡುಗಡೆ ಮಾಡಿದರು. ಆದರೆ ನಾವು ಘೋಷಿಸಿದ ದಿನಾಂಕಕ್ಕೆ ಸಿನಿಮಾ ತರಲು ಏಕೆ ಸಾಧ್ಯವಾಗುತ್ತಿಲ್ಲ? ಬಿಡುಗಡೆ ದಿನಾಂಕವನ್ನು ಏಕೆ ಮುಂದೂಡಬೇಕು?” ಎಂದು ಪ್ರಶ್ನಿಸಿದರು.
‘ಲೆನಿನ್’ ಸಿನಿಮಾ ಏಕೆ ತಡವಾಯಿತು?
‘ಲೆನಿನ್’ ಚಿತ್ರವನ್ನು ಮೊದಲಿಗೆ ಜೂನ್ 26ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳದ ಕಾರಣ ಬಿಡುಗಡೆ ಮುಂದೂಡಬೇಕಾಯಿತು ಎಂದು ನಾಗಾರ್ಜುನ ಬಹಿರಂಗಪಡಿಸಿದರು.
ಚಿತ್ರರಂಗದಲ್ಲಿ ಉತ್ತಮ ಯೋಜನೆ ಮತ್ತು ಸಮಯ ನಿರ್ವಹಣೆ ಇದ್ದರೆ ಇಂತಹ ಪರಿಸ್ಥಿತಿಗಳನ್ನು ತಪ್ಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಅಖಿಲ್ ಅಕ್ಕಿನೇನಿ ಸಂತಸ
ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ನಟ ಅಖಿಲ್ ಅಕ್ಕಿನೇನಿ, “ಲೆನಿನ್ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಮಾತನಾಡಿದ್ದೇವೆ. ಬಿಡುಗಡೆಯ ಎರಡನೇ ದಿನದಿಂದಲೇ ಚಿತ್ರಕ್ಕೆ ಹೆಚ್ಚಿನ ಥಿಯೇಟರ್ಗಳನ್ನು ನೀಡಿದ ವಿತರಕರಿಗೆ ಧನ್ಯವಾದಗಳು. ಕೇವಲ ಮೂರು ದಿನಗಳಲ್ಲಿ ಸಿನಿಮಾ ಬ್ರೇಕ್ ಈವನ್ ಸಾಧಿಸಿರುವುದು ತುಂಬಾ ಸಂತೋಷ ತಂದಿದೆ,” ಎಂದು ಹೇಳಿದರು.
ಚಿತ್ರದ ಯಶಸ್ಸಿಗೆ ಶ್ರಮಿಸಿದ ನಿರ್ದೇಶಕರು, ತಂತ್ರಜ್ಞರು, ಕಲಾವಿದರು, ವಿತರಕರು ಹಾಗೂ ಅಭಿಮಾನಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಚಿತ್ರರಂಗದಲ್ಲಿ ಸಮಯ ಪಾಲನೆಗೆ ಒತ್ತು
ನಾಗಾರ್ಜುನ ಅವರ ಈ ಹೇಳಿಕೆಗಳು ಟಾಲಿವುಡ್ನಲ್ಲಿ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳು ಘೋಷಿಸಿದ ದಿನಾಂಕಕ್ಕೆ ಬಿಡುಗಡೆಯಾಗದೆ ಮುಂದೂಡಲ್ಪಟ್ಟಿರುವ ಹಿನ್ನೆಲೆ, ಸಿನಿಮಾ ನಿರ್ಮಾಣದಲ್ಲಿ ಉತ್ತಮ ಯೋಜನೆ, ಸಮಯ ಪಾಲನೆ ಮತ್ತು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಚಿತ್ರರಂಗದಲ್ಲಿ ಬಿಡುಗಡೆಯ ದಿನಾಂಕದ ಮೇಲಿನ ಪ್ರೇಕ್ಷಕರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದರೆ, ನಿರ್ಮಾಪಕರು ಮತ್ತು ಚಿತ್ರತಂಡಗಳು ಸಮಯಕ್ಕೆ ತಕ್ಕಂತೆ ಕೆಲಸ ಪೂರ್ಣಗೊಳಿಸಿ ಯೋಜಿತ ವೇಳಾಪಟ್ಟಿಯಲ್ಲೇ ಸಿನಿಮಾ ಬಿಡುಗಡೆ ಮಾಡುವ ಸಂಸ್ಕೃತಿಯನ್ನು ಬೆಳೆಸಬೇಕು ಎಂಬ ಸಂದೇಶವನ್ನು ನಾಗಾರ್ಜುನ ನೀಡಿದ್ದಾರೆ.
-
ಬೆಂಗಳೂರು21 hours agoCongress Government 5 ಡೆಡ್ಲೈನ್; ರಾಜ್ಯ ಮುಸ್ಲಿಂ ಒಕ್ಕೂಟದ ಎಚ್ಚರಿಕೆ
-
ಬೆಂಗಳೂರು21 hours agoGandhi Bazaar Street Vendors: ಗಾಂಧಿ ಬಜಾರ್ನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಹೊಸ ನಿಯಮ; ಗುರುತಿಸಿದ ಸ್ಥಳದಲ್ಲೇ ವ್ಯಾಪಾರಕ್ಕೆ ಸೂಚನೆ
-
ದೇಶ22 hours agoCJP ಪ್ರತಿಭಟನೆ ಕಾವು; Rahul Gandhi ಸೇರಿ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು
-
ಬೆಂಗಳೂರು22 hours agoArt of Living ಆಶ್ರಮದ ವಿರುದ್ಧ ಭೂ ಒತ್ತುವರಿ ಆರೋಪ; ದಲಿತರ ಜಮೀನು ಪ್ರಕರಣಕ್ಕೆ SIT ರಚನೆ, ಸರ್ಕಾರದ ಮಹತ್ವದ ಆದೇಶ
-
ದೇಶ22 hours agoINTERNET ಇಲ್ಲದಿದ್ದರೂ UPI ಮೂಲಕ ಹಣ ಪಾವತಿ! NPCIಯಿಂದ ಹೊಸ ತಂತ್ರಜ್ಞಾನ
-
ಬೆಂಗಳೂರು3 hours ago112 ಕರೆ ಬಂದರೆ ಠಾಣೆ ವ್ಯಾಪ್ತಿ ನೆಪ ಹೇಳುವಂತಿಲ್ಲ! ಬೆಂಗಳೂರಿನಲ್ಲಿ ಪೊಲೀಸರಿಗೆ ಹೊಸ ಕಟ್ಟುನಿಟ್ಟಿನ ಆದೇಶ
-
ಕ್ರೀಡೆ23 hours agoFifa World Cup 2026 ಗೋಲ್ಡನ್ ಬೂಟ್ನೊಂದಿಗೆ ಎಂಬಪ್ಪೆ ಮಿಂಚು, ಗೋಲ್ಡನ್ ಬಾಲ್ ರೋಡ್ರಿಗೆ; ಜಾಗತಿಕ ಸುದ್ದಿಗಳ ಹೈಲೈಟ್ಸ್!
-
ಆರೋಗ್ಯ2 hours ago🍎 Apple ಆರೋಗ್ಯಕರ, ಆದರೆ ಎಲ್ಲರಿಗೂ ಅಲ್ಲ! ಯಾರಿಗೆ ಎಚ್ಚರಿಕೆ ಅಗತ್ಯ?
