Connect with us

ಬೆಂಗಳೂರು

ಇಂದಿನಿಂದ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ; ಈ ದಾಖಲೆ ಸಿದ್ಧವಿಡಿ

Published

on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (ಜಿಜೆವೈ) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಇಂದಿನಿಂದ (ಜುಲೈ 1) ಕೈಗೊಳ್ಳಲಿದ್ದಾರೆ. 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಈ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ಇದಾಗಿದೆ.

ಎಸ್ಕಾಂಗಳ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿ, ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ.

ಯಾವೆಲ್ಲಾ ದಾಖಲೆ ಸಿದ್ಧವಿಡಬೇಕು?
ಮನೆ-ಮನೆ ಭೇಟಿ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದ ಪತ್ರ (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರವನ್ನು ಸಿಬ್ಬಂದಿಗೆ ತೋರಿಸುವಂತೆ ಎಸ್ಕಾಂ ವಿನಂತಿಸಿದೆ.

ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿರುವುದರಿಂದ, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್‌ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ. ರಾಜ್ಯದ ಐದು ಎಸ್ಕಾಂಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ ಈ ಪರಿಶೀಲನಾ ಕಾರ್ಯ ನಡೆಯಲಿದೆ.

ಅಪರಾಧ

ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರೀ ನೇಮಕಾತಿ ಅಕ್ರಮ? ₹20 ಲಕ್ಷ ಲಂಚ ಆರೋಪ ಸ್ಫೋಟ!

Published

on

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿರುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗಂಭೀರ ಭ್ರಷ್ಟಾಚಾರ ಮತ್ತು ಅವ್ಯವಹಾರದ ಆರೋಪಗಳು ಕೇಳಿಬಂದಿದ್ದು, ಸಂಘದ ಆಡಳಿತ ಮಂಡಳಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಸಂಘದಲ್ಲಿ ಸುಮಾರು 480 ಹುದ್ದೆಗಳ ನೇಮಕಾತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಭಾರೀ ಅಕ್ರಮ ನಡೆದಿದೆ ಎಂದು ಕೆಲ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಆರೋಪಗಳ ಪ್ರಕಾರ, ಒಂದು ಹುದ್ದೆಗೆ ₹10 ಲಕ್ಷದಿಂದ ₹20 ಲಕ್ಷವರೆಗೆ ಲಂಚ ಪಡೆದು ನೇಮಕಾತಿ ಮಾಡಲಾಗಿದೆ ಎನ್ನಲಾಗಿದೆ. ಕೇಡರ್ ಮತ್ತು ರಿಕ್ರೂಟ್ಮೆಂಟ್ (C&R) ನಿಯಮಗಳ ಪ್ರಕಾರ, ಯಾವುದೇ ಹುದ್ದೆ ಭರ್ತಿ ಮಾಡುವ ಮುನ್ನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಬೇಕು. ಜೊತೆಗೆ ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಅನುಭವ, ಸಂದರ್ಶನ ಹಾಗೂ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು. ಆದರೆ ಈ ಎಲ್ಲ ನಿಯಮಗಳನ್ನು ಕಡೆಗಣಿಸಿ, ಸಂಬಂಧಿಕರು ಹಾಗೂ ಹಣ ನೀಡಿದವರಿಗೆ ಉದ್ಯೋಗ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಜಾಹೀರಾತು ನೀಡದೇ, ಅರ್ಜಿ ಆಹ್ವಾನಿಸದೇ ನೇಮಕಾತಿ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಕಂಪ್ಯೂಟರ್ ಜ್ಞಾನವಿಲ್ಲದವರಿಗೂ ಎಸ್‌ಡಿಎ/ಕಂಪ್ಯೂಟರ್ ಆಪರೇಟರ್ ಹುದ್ದೆ ನೀಡಲಾಗಿದೆ ಎಂದು ದೂರಲಾಗಿದೆ.

ಈ ಸಂಬಂಧ ಸಹಕಾರ ಸಂಘಗಳ ನೋಂದಣಾಧಿಕಾರಿಗೆ ದೂರು ಸಲ್ಲಿಸಿರುವುದಾಗಿ ಆರೋಪಿಸಿರುವ ಪದಾಧಿಕಾರಿಗಳು, ತಮ್ಮ ಬಳಿ ದಾಖಲೆಗಳು, ಆಡಿಯೊ ಮತ್ತು ವಿಡಿಯೊ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ. ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ, ಪ್ರಕರಣವನ್ನು ನ್ಯಾಯಾಲಯಕ್ಕೂ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.

ಆದರೆ, ಈ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ. ಆರೋಪಗಳ ಸತ್ಯಾಸತ್ಯತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ತನಿಖೆಯ ಬಳಿಕವೇ ಸ್ಪಷ್ಟತೆ ದೊರೆಯಲಿದೆ.

Continue Reading

ದೇಶ

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು? ರಹಸ್ಯ ವರದಿಯಿಂದ ದೋಸ್ತಿಯಲ್ಲಿ ಭಾರಿ ಬಿಕ್ಕಟ್ಟು

Published

on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಸೋಲಿನ ನಂತರ ಬಿಜೆಪಿ-ಜೆಡಿಎಸ್ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳು ಈಗ ಬಹಿರಂಗವಾಗಿವೆ. ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ನೇತೃತ್ವದ ಸತ್ಯಶೋಧನಾ ಸಮಿತಿ ಸಿದ್ಧಪಡಿಸಿರುವ ಆಂತರಿಕ ತನಿಖಾ ವರದಿಯು ಮೈತ್ರಿ ಪಕ್ಷಗಳ ನಡುವೆ ಹೊಸ ವಿವಾದಕ್ಕೆ ಕಾರಣವಾಗಿದೆ.

ಜೂನ್ 27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಲಾದ ಈ ವರದಿಯಲ್ಲಿ, ಬಿಜೆಪಿಯ ಮೂವರು ಶಾಸಕರು ಅಡ್ಡ ಮತದಾನ ಮಾಡಿದ್ದು, ಒಂದು ಮತ ಅಸಿಂಧುವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರ ಜೊತೆಗೆ, ಜೆಡಿಎಸ್‌ನ ಎಂಟು ಶಾಸಕರು ಮೈತ್ರಿ ಅಭ್ಯರ್ಥಿಯ ವಿರುದ್ಧವೇ ಅಡ್ಡ ಮತದಾನ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ವರದಿಯಲ್ಲಿ ದಾಖಲಾಗಿದೆ.

ಈ ಆರೋಪಗಳನ್ನು ಜೆಡಿಎಸ್ ಶಾಸಕರು ತೀವ್ರವಾಗಿ ತಳ್ಳಿಹಾಕಿದ್ದು, ಯಾವುದೇ ದೃಢ ಸಾಕ್ಷ್ಯವಿಲ್ಲದೆ ತಮ್ಮ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಬಿಜೆಪಿ ಇಂತಹ ವರದಿ ಸಿದ್ಧಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈತ್ರಿ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಿಜೆಪಿ ನಾಯಕರ ವಿರುದ್ಧವೂ ಅವರು ಅಸಮಾಧಾನ ಹೊರಹಾಕಿದ್ದಾರೆ.

ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಜೆಡಿಎಸ್ ಶಾಸಕರು ಪಕ್ಷದ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಮಾಧ್ಯಮಗಳಿಗೆ ರಹಸ್ಯ ವರದಿ ಸೋರಿಕೆಯಾಗಿರುವುದರ ಬಗ್ಗೆಯೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರ ಅಥವಾ ಚುನಾವಣಾ ಹೊಂದಾಣಿಕೆ ಯಶಸ್ವಿಯಾಗಬೇಕಾದರೆ ಪರಸ್ಪರ ವಿಶ್ವಾಸ ಅತ್ಯಗತ್ಯ ಎಂದು ಜೆಡಿಎಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕವಾಗಿ ಆರೋಪ-ಪ್ರತ್ಯಾರೋಪ ನಡೆಸುವುದನ್ನು ನಿಲ್ಲಿಸಿ, ಉಭಯ ಪಕ್ಷಗಳ ಹಿರಿಯ ನಾಯಕರು ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ರಾಜಕೀಯ ಚರ್ಚೆಗಳು ರಾಜ್ಯದಲ್ಲಿ ಜೋರಾಗಿವೆ.

Continue Reading

ದೇಶ

100 ರೂ. ಗಡಿ ದಾಟಿದ್ದ ಆಟೋ ಎಲ್‌ಪಿಜಿ ಈಗ 85 ರೂ.ಗೆ ಇಳಿಕೆ: ಟೋಟಲ್ ಗ್ಯಾಸ್ ಕೊಡುಗೆ

Published

on

ಬೆಂಗಳೂರು: ನಿರಂತರ ಎಲ್‌ಪಿಜಿ ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ ಚಾಲಕರಿಗೆ ಕೊನೆಗೂ ದೊಡ್ಡ ನಿರಾಳ ಸಿಕ್ಕಿದೆ. ಪ್ರಮುಖ ಇಂಧನ ವಿತರಕ ಸಂಸ್ಥೆ ಟೋಟಲ್ ಗ್ಯಾಸ್ ತನ್ನ ಬಂಕ್‌ಗಳಲ್ಲಿ ಆಟೋ ಎಲ್‌ಪಿಜಿ ದರವನ್ನು ಪ್ರತಿ ಲೀಟರ್‌ಗೆ ಭರ್ಜರಿ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಏರುಪೇರಾಗಿತ್ತು. ಇದರ ಪರಿಣಾಮ ಆಟೋ ಎಲ್‌ಪಿಜಿ ದರ ಸಾರ್ವಕಾಲಿಕ ದಾಖಲೆಯ 100 ರೂಪಾಯಿ ಗಡಿ ದಾಟಿ, ಆಟೋ ಬಾಡಿಗೆಯನ್ನೇ ನಂಬಿಕೊಂಡಿದ್ದ ಲಕ್ಷಾಂತರ ಚಾಲಕರ ಜೇಬಿಗೆ ಕತ್ತರಿ ಹಾಕಿತ್ತು.

ಜಾಗತಿಕ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಇತ್ತೀಚೆಗೆ ಹಂತ-ಹಂತವಾಗಿ 95 ರೂಪಾಯಿಗಳಿಗೆ ಇಳಿಕೆಯಾಗಿದ್ದ ದರ ಇದೀಗ ಮತ್ತೊಂದು ದೊಡ್ಡ ಕುಸಿತ ಕಂಡಿದೆ. 95 ರೂಪಾಯಿಗಳಿಂದ ನೇರವಾಗಿ 85 ರೂಪಾಯಿಗಳಿಗೆ ದರ ಇಳಿಕೆ ಮಾಡಲಾಗಿದೆ (ಸಾಗಣೆ ವೆಚ್ಚದಿಂದ ಈ ದರ ನಗರದಿಂದ ನಗರಕ್ಕೆ ಬದಲಾಗುತ್ತದೆ). ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಸರಬರಾಜು ಸುಧಾರಿಸಿರುವುದು ಮತ್ತು ಇಂಧನ ಲಭ್ಯತೆ ಹೆಚ್ಚಾಗಿರುವುದೇ ಈ ಬೆಲೆ ಇಳಿಕೆಗೆ ಮುಖ್ಯ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

ದಿನಕ್ಕೆ ದುಡಿಯುವ ಹಣದಲ್ಲಿ ಅರ್ಧಕ್ಕರ್ಧ ಗ್ಯಾಸ್‌ಗೆ ಖರ್ಚಾಗುತ್ತಿದ್ದ ಕಾರಣ, ಈಗ ಲೀಟರ್‌ಗೆ 10 ರೂಪಾಯಿ ಕಡಿಮೆಯಾಗಿರುವುದು ಆಟೋ ಚಾಲಕರಿಗೆ ದೊಡ್ಡ ರಿಲೀಫ್ ಆಗಿದೆ ಎಂದು ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬೆಲೆ ಇಳಿಕೆಯಿಂದ ಸಾರ್ವಜನಿಕ ಸಾರಿಗೆ ದರಗಳ ಒತ್ತಡವೂ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ.

Continue Reading

Trending