PM Modi

 ಚೀನಾ ಹೇಳಿಕೆ ನಿರಾಕರಿಸಿದ ಭಾರತ ಸರ್ಕಾರ

ಚೀನಾ ಹೇಳಿಕೆ ನಿರಾಕರಿಸಿದ ಭಾರತ ಸರ್ಕಾರ

ನವದೆಹಲಿ: 15ನೇ ಬ್ರಿಕ್ಸ್​ ಶೃಂಗಸಭೆಯಲ್ಲಿ ಕೋರಿಕೆಯ ಮೇರೆಗೆ ಚೀನಾ – ಭಾರತ ಮಾತುಕತೆ ನಡೆದಿವೆ ಎಂದು ಚೀನಾ ನೀಡಿರುವ ಹೇಳಿಕೆಯನ್ನು ಭಾರತ ಸರ್ಕಾರದ ಮೂಲಗಳು ನಿರಾಕರಿಸಿವೆ.

ಚೀನಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ”ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರು ಆಗಸ್ಟ್ 23 ರಂದು ಮನವಿ ಮಾಡಿದ್ದು, ಬಳಿಕ ಬ್ರಿಕ್ಸ್​ ಶೃಂಗಸಭೆ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ” ಎಂದು ತಿಳಿಸಿದೆ. ಆದರೆ ದ್ವಿಪಕ್ಷೀಯ ಸಭೆಗಾಗಿ ಚೀನಾ ಕಡೆಯಿಂದ ಕೆಲ ವಿನಂತಿಗಳು ಬಾಕಿ ಉಳಿದಿವೆ ಎಂದು ಭಾರತ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ. ಭಾರತ ಮತ್ತು ಚೀನಾ ನಾಯಕರು ಬ್ರಿಕ್ಸ್​ ಶೃಂಗಸಭೆ ಸಂದರ್ಭ ಸಂಭಾಷಣೆ ನಡೆಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.

ಇಬ್ಬರು ನಾಯಕರು ಪ್ರಸ್ತುತ ಚೀನಾ – ಭಾರತ ಸಂಬಂಧಗಳ ಸುಧಾರಣೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತಂತೆ ಪ್ರಾಮಾಣಿಕವಾದ ಸಮಾಲೋಚನೆ ಮಾಡಿದ್ದಾರೆ. ಚೀನಾ-ಭಾರತದ ಸಂಬಂಧಗಳ ಸುಧಾರಣೆ ಉಭಯ ರಾಷ್ಟ್ರಗಳ ನಡುವಣ ಮೊದಲ ಆದ್ಯತೆ ಆಗಿದೆ ಎಂಬುದನ್ನು ಅಧ್ಯಕ್ಷ ಕ್ಸಿ ಒತ್ತಿ ಹೇಳಿದರು. ಎರಡು ದೇಶಗಳ ಜನರ ನಡುವಣ ಶಾಂತಿ- ಸೌಹಾರ್ದತೆ ಕಾಪಾಡುವುದು, ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ, ಸ್ಥಿರತೆ ಕಾಪಾಡುವುದು ಮತ್ತು ಜಾಗತಿಕ ದೃಷ್ಟಿಯಿಂದಲೂ ಒಳ್ಳೆಯದು ಎಂಬುದನ್ನ ಚೀನಾ ಅಧ್ಯಕ್ಷರು ಪ್ರತಿಪಾದಿಸಿದರು ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತ್ತು.

ಇಬ್ಬರು ನಾಯಕರು ಚೀನಾ ಮತ್ತು ಭಾರತ ಸಂಬಂಧ ಹಾಗೂ ಇನ್ನಿತರ ಅಂತಾರಾಷ್ಟ್ರೀಯ ವಿಷಯಗಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಉಭಯ ದೇಶ ದೇಶಗಳ ಸಂಬಂಧ ಸುಧಾರಿಸುವುದಿಂದ ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಬಹುದು” ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಪ್ರತಿಪಾದಿಸಿದರು ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದರು.

ಭಾರತ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದೇನು?: ಜೋಹಾನ್ಸ್‌ಬರ್ಗ್‌ನಲ್ಲಿ ಗುರುವಾರ ಮುಕ್ತಾಯಗೊಂಡ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಸಂದರ್ಭದಲ್ಲಿ ಭಾರತ – ಚೀನಾ ನಡುವಿನ ಮಾತುಕತೆಯ ವಿವರಗಳನ್ನು ಹಂಚಿಕೊಂಡ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರೊಂದಿಗಿನ ಮಾತುಕತೆಯಲ್ಲಿ ಪ್ರಧಾನಿ ಮೋದಿ ಭಾರತದ ಗಡಿ ಕಾಳಜಿಯನ್ನು ಎತ್ತಿ ತೋರಿಸಿದ್ದಾರೆ ಎಂದು ಹೇಳಿದರು.

ಗಡಿ ಸಮಸ್ಯೆ ಕುರಿತು ಭಾರತದ ಕಳವಳ: ಬ್ರಿಕ್ಸ್ ಶೃಂಗಸಭೆಯ ಹೊರತಾಗಿ ಪ್ರಧಾನ ಮಂತ್ರಿ ಮೋದಿ ಅವರು ಇತರ ಬ್ರಿಕ್ಸ್ ನಾಯಕರೊಂದಿಗೂ ಮಾತುಕತೆಗಳನ್ನು ನಡೆಸಿದರು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಭಾರತ – ಚೀನಾದ ಪಶ್ಚಿಮ ವಲಯದ ಗಡಿ ಸಮಸ್ಯೆಗಳ ಕುರಿತು ಭಾರತ ಹೊಂದಿರುವ ಕಳವಳಗಳನ್ನು ಪ್ರಧಾನಿ ಮೋದಿ, ಜಿನ್​ಪಿಂಗ್​​​​​ಗೆ ಎತ್ತಿ ತೋರಿಸಿದರು ಎಂದು ವಿನಯ್ ಕ್ವಾತ್ರಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು ಮತ್ತು ಭಾರತ – ಚೀನಾ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ LAC ಕಡೆ ಗಮನ ಹರಿಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಉಭಯ ರಾಷ್ಟ್ರಗಳ ನಡುವಣ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಇಬ್ಬರು ನಾಯಕರು ತಮ್ಮ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಒಪ್ಪಿಕೊಂಡರು ಎಂದು ವಿನಯ್ ಕ್ವಾತ್ರಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Trending

Exit mobile version