ಯೋಗ
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕೆಎಎಸ್ ಅಧಿಕಾರಿ ಹಣೆಗೆ ತಿಲಕವಿಟ್ಟ ಸಂಸದ ಸುನೀಲ್ ಬೋಸ್: Photo ವೈರಲ್

ಮೈಸೂರು: ಚಾಮರಾಜನಗರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಸಂಸದ ಸುನೀಲ್ ಬೋಸ್ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಚಾಮುಂಡೇಶ್ವರಿ ತಾಯಿ ಗರ್ಭಗುಡಿಯಲ್ಲಿಯೇ ಕೆಎಎಸ್ ಅಧಿಕಾರಿ ಹಣೆಗೆ ಕುಂಕುಮ ಇಟ್ಟಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಇಬ್ಬರೂ ಜೊತೆಯಾಗಿ ಬಂದಿದ್ದರು. ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿಯಾಗಿರುವ ಸವಿತಾ ಅವರ ಹಣೆಗೆ ಸಂಸದ ಸುನೀಲ್ಬೋಸ್ ಕುಂಕುಮ ಇರಿಸಿದ್ದಾರೆ. ಈ ವೇಳೆ ಇಬ್ಬರೂ ಗರ್ಭ ಗುಡಿಯಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ನೆರವೇರಿಸುವ ವೇಳೆ ಸುನೀಲ್ ಬೋಸ್ ಹಾಗೂ ಕಾಂಗ್ರೆಸ್ನ ಅನೇಕ ಬೆಂಬಲಿಗರು ಹಾಜರಿದ್ದರು. ಅವರ ಸಮ್ಮುಖದಲ್ಲೇ ಸವಿತಾ ಅವರ ಹಣೆಗೆ ಸುನೀಲ್ಬೋಸ್ ತಿಲಕ ಇರಿಸಿದ್ದಾರೆ.
ಸುನೀಲ್ ಬೋಸ್ ಅವರ ನಡೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಮದುವೆ ಆಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ಬೋಸ್ ಅಫಿಡವಿಟ್ ಸಲ್ಲಿಸಿದ್ದರು. ಈ ಬಗ್ಗೆ ಚಾಮರಾಜನಗರ ಜಿಲ್ಲೆಯ ಬಿಜೆಪಿ ಸದಸ್ಯರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಸುನೀಲ್ ಬೋಸ್ ಅವರಿಗೆ ಮದುವೆಯಾಗಿದೆ. ಆದರೆ ಅವರು ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು. ಸುನೀಲ್ಬೋಸ್ ಹಾಗೂ ಸವಿತಾ ಅವರು ಜೊತೆಯಲ್ಲಿ ಇರುವ ಪೋಟೋಗಳನ್ನು ಬಿಜೆಪಿ ಸದಸ್ಯರು ಚುನಾವಣಾ ಆಯೋಗಕ್ಕೆ ಪುರಾವೆಯಾಗಿ ನೀಡಿದ್ದರು. ವೈವಾಹಿಕ ಜೀವನದ ಮಾಹಿತಿಯನ್ನು ಸುನೀಲ್ ಬೋಸ್ ಮರೆಮಾಚಿರುವುದು ಅನುಮಾನಾಸ್ಪದವಾಗಿದೆ. ಸವಿತಾ ಮತ್ತು ಸುನೀಲ್ ಬೋಸ್ ಮದುವೆಯಾಗಿದ್ದು, ಅವರಿಗೆ ಆರು ವರ್ಷದ ಹೆಣ್ಣುಮಗು ಕೂಡ ಇದೆ ಎಂದು ಅವರು ಆರೋಪಿಸಿದ್ದರು.