Connect with us

ಕ್ರೀಡೆ

ಐರನ್ ಮ್ಯಾನ್ 70.3 ರೇಸ್‌ನಲ್ಲಿ ತೇಜಸ್ವಿ ಸೂರ್ಯಗೆ ಗೆಲುವು: ಈ ಸಾಧನೆ ಮಾಡಿದ ಮೊದಲ ಜನಪ್ರತಿನಿಧಿ!

ಪಣಜಿ (ಗೋವಾ): ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಗೋವಾದಲ್ಲಿ ಜರುಗಿದ ಐರನ್‌ಮ್ಯಾನ್ 70.3 ಚಾಲೆಂಜ್ ರೇಸ್​ ಜಯಿಸಿದ ದೇಶದ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೇಸ್​ನ 2 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21 ಕಿ.ಮೀ ಓಟ ಸೇರಿ ಮೂರು ವಿಭಾಗಗಳಲ್ಲಿ ಅವರು ಭಾಗವಹಿಸಿದ್ದರು.

ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದು, ತೇಜಸ್ವಿ ಸೂರ್ಯ 8 ಗಂಟೆ, 27 ನಿಮಿಷ 32 ಸೆಕೆಂಡುಗಳಲ್ಲಿ ಸ್ಪರ್ಧೆಯ ಮೂರು ವಿಭಾಗಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಐರನ್‌ಮ್ಯಾನ್ 70.3 ಗೋವಾದ ನಾಲ್ಕನೇ ಆವೃತ್ತಿಯನ್ನು ರೇಸ್​ನ ರಾಯಭಾರಿ ಮತ್ತು ಟೆನಿಸ್ ದಂತಕಥೆ ಲಿಯಾಂಡರ್ ಪೇಸ್, ​​ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಸಂಸ್ಥಾಪಕ ಮತ್ತು ಸಿಇಒ ಯೋಸ್ಕಾ ಮತ್ತು ಐರನ್‌ಮ್ಯಾನ್ 70.3 ಗೋವಾ ರೇಸ್ ನಿರ್ದೇಶಕ ದೀಪಕ್​ ರಾಜ್​, ಹರ್ಬಲೈಫ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕ ಗಣೇಶನ್ ವಿ.ಎಸ್. ಅವರು ಭಾನುವಾರ ಮಿರಾಮರ್ ಬೀಚ್‌ನಲ್ಲಿ ಚಾಲನೆ ನೀಡಿದರು.

ಪ್ರಧಾನಿ ಮೋದಿ ಶ್ಲಾಘನೆ: ಈ ಸಾಧನೆಗಾಗಿ ತೇಜಸ್ವಿ ಸೂರ್ಯ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ”ಶ್ಲಾಘನೀಯ ಸಾಧನೆ! ಇದು ಅನೇಕ ಯುವಕರಿಗೆ ಫಿಟ್‌ನೆಸ್ ಸಂಬಂಧಿತ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೇರೇಪಣೆ ಎಂದು ನನಗೆ ಖಾತ್ರಿಯಿದೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫಿಟ್ ಇಂಡಿಯಾವು ಸ್ಫೂರ್ತಿ: ತಮ್ಮ ಸಾಧನೆಯ ಬಗ್ಗೆ ಸೂರ್ಯ ಸಂತಸ ವ್ಯಕ್ತಪಡಿಸಿದ್ದು, ಸ್ಪರ್ಧೆಗೆ ಕಟ್ಟುನಿಟ್ಟಿನ ತಯಾರಿ ನಡೆಸಿರುವುದಾಗಿ ತಿಳಿಸಿದ್ದಾರೆ. “ಐರನ್‌ಮ್ಯಾನ್ 70.3 ಗೋವಾ, 50ಕ್ಕೂ ಹೆಚ್ಚು ದೇಶಗಳ ಅಥ್ಲೀಟ್‌ಗಳನ್ನು ಆಕರ್ಷಿಸುತ್ತ ಹೆಸರುವಾಸಿಯಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತದ ಫಿಟ್‌ನೆಸ್ ಉತ್ಸಾಹಿಗಳಿಗೆ ಒಂದು ಪ್ರಮುಖ ವೇದಿಕೆಯಾಗಿದೆ. ಸವಾಲೆಂಬುದು ಸಹಿಷ್ಣುತೆ, ದೈಹಿಕ ಮತ್ತು ಮಾನಸಿಕ ಸದೃಢತೆಯ ಅಂತಿಮ ಪರೀಕ್ಷೆಯಾಗಿದೆ. ಕಳೆದ 4 ತಿಂಗಳುಗಳಲ್ಲಿ, ನನ್ನ ಫಿಟ್‌ನೆಸ್ ಸುಧಾರಣೆಗೆ ನಾನು ಕಠಿಣ ತರಬೇತಿ ಪಡೆದಿದ್ದೇನೆ. ಈ ಸವಾಲನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಂತೋಷವಾಗಿದೆ. ಪ್ರಧಾನಿ ಮೋದಿಯವರು ಆರಂಭಿಸಿದ ಫಿಟ್ ಇಂಡಿಯಾವು ನನಗೆ ಸ್ಫೂರ್ತಿಯಾಗಿದೆ. ಅದು ನನ್ನ ಫಿಟ್‌ನೆಸ್ ಗುರಿ ತಲುಪಲು ನೆರವಾಯಿತು” ಎಂದು ಸೂರ್ಯ ಹೇಳಿದ್ದಾರೆ.

ಆರೋಗ್ಯಕರ ರಾಷ್ಟ್ರವಾಗಬೇಕು: ಭಾರತಕ್ಕಾಗಿ ಪ್ರಶಸ್ತಿ ಗೆಲ್ಲಲು ತೀವ್ರ ತರಬೇತಿ ಮತ್ತು ಕಠಿಣ ಪರಿಶ್ರಮಪಡುವ ದೇಶದ ಕ್ರೀಡಾಪಟುಗಳಿಗೆ ತಮ್ಮ ಸಾಧನೆಯನ್ನು ಸೂರ್ಯ ಅರ್ಪಿಸಿದರು. ”ದೊಡ್ಡ ಮಹತ್ವಾಕಾಂಕ್ಷೆಗಳನ್ನು ಬೆನ್ನಟ್ಟುತ್ತಿರುವ ಯುವ ರಾಷ್ಟ್ರವಾಗಿ, ನಾವು ನಮ್ಮ ದೈಹಿಕ ಸಾಮರ್ಥ್ಯವನ್ನು ಪೋಷಿಸಬೇಕು ಮತ್ತು ಹೆಚ್ಚು ಆರೋಗ್ಯಕರ ರಾಷ್ಟ್ರವಾಗಬೇಕು. ಫಿಟ್ ಆಗುವ ಪ್ರಯತ್ನದಿಂದ ನಮಗೆ ಹೆಚ್ಚು ಶಿಸ್ತು ಮತ್ತು ಆತ್ಮವಿಶ್ವಾಸ ಮೂಡುತ್ತದೆ. ಅಲ್ಲದೆ, ನೀವು ಕೈಗೊಳ್ಳುವ ಯಾವುದೇ ಉದ್ಯಮದಲ್ಲಿ ಕೂಡ ಯಶಸ್ಸಿಗೆ ಅದು ನೆರವಾಗುತ್ತದೆ” ಎಂದರು.

”ಫಿಟ್‌ ಇಂಡಿಯಾ ಆಂದೋಲನವು ಫಿಟ್‌ನೆಸ್ ಬಗ್ಗೆ ಈ ಜಾಗೃತಿ ಹೆಚ್ಚಿಸುತ್ತ, ನಮ್ಮ ರಾಷ್ಟ್ರಕ್ಕೆ ಮೂಲಭೂತವಾಗಿ ಅಗತ್ಯವಿರುವ ಫಿಟ್‌ನೆಸ್ ದಿನಚರಿಯತ್ತ ಹೆಚ್ಚಿನ ಜನರನ್ನು ಆಕರ್ಷಿಸುವಲ್ಲಿ ಸಾಕಷ್ಟು ನೆರವಾಗಿದೆ. ರೇಸ್​​ನಲ್ಲಿ ನಾನೊಬ್ಬ ಫಿನಿಶರ್ ಆಗಿ, ಫಿಟ್‌ನೆಸ್ ಗುರಿಯು ನಿಜವಾಗಿಯೂ ನಿಮ್ಮನ್ನು ನಿಖರ ಗಡಿಯತ್ತ ಕೊಂಡೊಯ್ಯುತ್ತದೆ ಮತ್ತು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂಬುದನ್ನು ಯುವಜನರಿಗೆ ಹೇಳಬಲ್ಲೆ” ಎಂದು ತಿಳಿಸಿದರು.

ಕ್ರೀಡೆ

ರಿಷಭ್ ಪಂತ್ ಮಾನವೀಯತೆ: ಬಡ ವಿದ್ಯಾರ್ಥಿನಿಗೆ BCA ಪ್ರವೇಶಕ್ಕೆ ₹40,000 ನೆರವು!

ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಹಾಗೂ ತೀಕ್ಷ್ಣ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಕ್ರೀಡಾಕ್ಷೇತ್ರದಷ್ಟೇ ದಾನಶೀಲತೆಯಲ್ಲೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಆರ್ಥಿಕ ನೆರವು ನೀಡಿ ಜನಮನ ಗೆದ್ದಿದ್ದಾರೆ.

ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಗಳಿಸಿದ್ದರೂ, ಮನೆ ಪರಿಸ್ಥಿತಿಯಿಂದ BCA ಕೋರ್ಸ್‌ಗೆ ಸೇರುವ ಕನಸು ತೊಡೆತಗೊಂಡಿತ್ತು. ತಂದೆ ಚಿಕ್ಕ ಟೀ ಅಂಗಡಿ ನಡೆಸುವವರಾಗಿದ್ದು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ.

ಇದನ್ನು ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರು ಗಮನಿಸಿ, ತಮ್ಮ ಸಂಪರ್ಕಗಳಿಂದ ರಿಷಭ್ ಪಂತ್ ಅವರ ಗಮನಕ್ಕೆ ತಂದರು. ಇದನ್ನು ಕೇಳಿದ ಪಂತ್, ಜುಲೈ 17ರಂದು ₹40,000 ನೇರವಾಗಿ BLDE ಕಾಲೇಜಿನ ಖಾತೆಗೆ ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.

ಜ್ಯೋತಿ ಎಮೋಶನಲ್ ಆಗಿ, “ರಿಷಭ್ ಪಂತ್ ಸಹಾಯದಿಂದ ನನ್ನ ಕನಸು ಸಾಧ್ಯವಾಯಿತು. ಅವರಿಗೆ ದೇವರು ಆಯುಷ್ಯ ಕೊಡಲಿ,” ಎಂದಿದ್ದಾರೆ.

Continue Reading

ಕ್ರೀಡೆ

ಭಾರತೀಯ ತಂಡದ ಕೋಚ್ ಗೌತಮ್ ಗಂಭೀರ್ ವಿರುದ್ಧ ಟೀಕೆ, ಬಿಸಿಸಿಐ ಸಹಾಯಕ ಕೋಚ್ ಮಾರ್ನೆ ಮಾರ್ಕೆಲ್-ಟೆನ್ ಡೊಶ್ಕಾಟೆ ಬದಲಾವಣೆ ಸಾಧ್ಯತೆ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿಯನ್ನು ಮಾಜಿ ಕ್ರಿಕೆಟಿಗರು ಸೇರಿದಂತೆ ಸುನಿಲ್ ಗವಾಸ್ಕರ್, ರಿಕಿ ಪಾಂಟಿಂಗ್ ಸೇರಿದಂತೆ ಹಲವು ಹಿರಿಯರು ಭಾರೀ ಟೀಕೆ ಮಾಡಿದ್ದಾರೆ. ಈ ಟೀಕೆಗಳಿಗೆ ಸಂಬಂಧಿಸಿ, ಗಂಭೀರ್ ಮನವಿ ಮಾಡಿಕೊಂಡ ಸಹಾಯಕ ಕೋಚ್‌ಗಳಾದ ಮಾರ್ನೆ ಮಾರ್ಕೆಲ್ (ಬೌಲಿಂಗ್ ಕೋಚ್) ಮತ್ತು ರ್ಯಾನ್ ಟೆನ್ ಡೊಶ್ಕಾಟೆ ಶೀಘ್ರದಲ್ಲೇ ತಮ್ಮ ಹುದ್ದೆಯಿಂದ ವಜಾಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತಿವೆ.

ಕಳೆದ ವರ್ಷ ಜುಲೈನಲ್ಲಿ ಗಂಭೀರ್ ಭಾರತದ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಮನವಿ ಮೇರೆಗೆ ಐಪಿಎಲ್ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದ ಅಭಿಷೇಕ್ ನಾಯರ್, ಮಾರ್ಕೆಲ್ ಮತ್ತು ಡೊಶ್ಕಾಟೆ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧ ವೈಟ್ ವಾಷ್ ಹಾಗೂ ಆಸ್ಟ್ರೇಲಿಯಾ ತಂಡದ ಸೋಲುಗಳು ಬಿಸಿಸಿಐನಲ್ಲಿ ಅಸಮಾಧಾನ ಮೂಡಿಸಿದ ಕಾರಣ, ಮೊದಲನೆಯದಾಗಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಹುದ್ದೆಯಿಂದ ವಜಾಗೊಂಡಿದ್ದರು.

ಇದೇ ಹಿನ್ನೆಲೆಯಲ್ಲಿ, ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತು ರ್ಯಾನ್ ಟೆನ್ ಡೊಶ್ಕಾಟೆ ಸಹ ಇನ್ನೂ ಸಹ ಹುದ್ದೆಯಿಂದ ವಜಾಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತಂಡದ ಆಯ್ಕೆ ಪ್ರಕ್ರಿಯೆ, ಆಟಗಾರರ ಕಾರ್ಯದೊತ್ತಡ, ಪಿಚ್ ಅನ್ವಯ 11 ಆಟಗಾರರ ಆಯ್ಕೆ ಮತ್ತು ಸಮತೋಲನ ಕಾಯ್ದುಕೊಳ್ಳುವ ವಿಚಾರದಲ್ಲಿ ಕೋಚ್‌ಗಳ ಕಾರ್ಯವೈಖರಿಗೆ ಬಿಸಿಸಿಐ ಅತೃಪ್ತಿ ವ್ಯಕ್ತಪಡಿಸಿದೆ.

ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಥಾನಕ್ಕೂ ಸವಾಲು ಎದುರಾಗಿದೆ. 2023ರ ಜುಲೈನಲ್ಲಿ ನೇಮಕಗೊಂಡ ಈ ಸಮಿತಿ ಮುಖ್ಯಸ್ಥರ ನೇತೃತ್ವದಲ್ಲಿ ಭಾರತ ತಂಡದ ಪ್ರದರ್ಶನ ಕಳೆದ ಒಂದು ವರ್ಷದಿಂದ ತೀರಾ ಕಳಪೆಯಾಗಿದ್ದು, ಸಮರ್ಥ ಆಟಗಾರರ ಆಯ್ಕೆಯಲ್ಲಿ ನಿರಂತರ ಎಡವಾಟಗಳು ನಡೆದಿವೆ ಎಂದು ವಿಶ್ಲೇಷಣೆಗಳು ತಿಳಿಸುತ್ತಿವೆ.

Continue Reading

ಕ್ರೀಡೆ

ಕನ್ನಡಿಗ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟ

ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರು ‘ಹುಬ್ಬಳ್ಳಿ ಟೈಗರ್ಸ್’ ತಂಡಕ್ಕೆ 13.20 ಲಕ್ಷ ರೂಪಾಯಿಗೆ ಮಾರಾಟ ಆಗಿದ್ದು, ಈ ಮೊತ್ತವು ಮಹಾರಾಜ ಟ್ರೋಫಿಯ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಯಾಗಿದೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಉತ್ತಮ ಪ್ರದರ್ಶನ ನೀಡಿ, ಅವರು ಈ ಯಶಸ್ಸಿಗೆ ಪಾತ್ರರಾಗಿದ್ದಾರೆ.

ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಗಾಯದಿಂದ ಕೆಲವು ಪಂದ್ಯಗಳಿಂದ ದೂರ ಉಳಿದರೂ, ದೇವದತ್ ಪಡಿಕ್ಕಲ್ ಅವರ ಸಾಮರ್ಥ್ಯ ಎಲ್ಲರ ಮನಸ್ಸಿಗೆ ತಲುಪಿತ್ತು. 2024ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನಿಂದ ಹೊರಬಂದ ಬಳಿಕ ಆರ್‌ಸಿಬಿ ತಂಡವು ಅವರನ್ನು 3.20 ಕೋಟಿ ರೂಪಾಯಿಗೆ ಖರೀದಿಸಿದೆ. ಇದೀಗ ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು 13.20 ಲಕ್ಷ ರೂಪಾಯಿಗೆ ದೇವದತ್ ಪಡಿಕ್ಕಲ್ ಅವರನ್ನು ಪಡೆದಿದ್ದು, ಇದು ಟೂರ್ನಿಯ ದಾಖಲೆಯ ಬೆಲೆಯಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಜುಲೈ 15ರಂದು ಬೆಂಗಳೂರಿನಲ್ಲಿ ಆಯೋಜಿಸಿದ ಈ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕನ್ನಡಿಗ ಕ್ರಿಕೆಟಿಗರಾಗಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಪ್ರತಿ ಫ್ರಾಂಚೈಸಿಯು ಕನಿಷ್ಠ ಇಬ್ಬರು ಸ್ಥಳೀಯ ಆಟಗಾರರನ್ನು ತಂಡದಲ್ಲಿ ಇರಿಸಬೇಕು ಎಂಬ ನಿಯಮವಿದ್ದು, ಇದರಿಂದ ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಕ್ಕೆ ದೊಡ್ಡ ಅವಕಾಶ ಸಿಗುತ್ತದೆ.

ಈ ವರ್ಷದ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಭಿಮಾನಿಗಳಿಗೆ ಮೈದಾನದಲ್ಲಿ ವೀಕ್ಷಣೆಗೆ ಅವಕಾಶ ಇಲ್ಲ. ಆದರೂ ದೇವದತ್ ಪಡಿಕ್ಕಲ್ ಅವರ ಸಾಧನೆ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿದೆ.

Continue Reading

Trending