ಚುನಾವಣೆ
ಬಿಹಾರ ಚುನಾವಣೆ 2025: ಕಾಂಗ್ರೆಸ್ ಗ್ಯಾರಂಟಿ ಮಾದರಿ ಮತ್ತೆ ಟ್ರೆಂಡ್ನಲ್ಲಿ
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ (Bihar Elections) ಕಣ ಈಗ ರಂಗೇರಿದೆ. ಪ್ರಮುಖ ಪಕ್ಷಗಳ ರಾಜಕೀಯ ಚಟುವಟಿಕೆ ಗರಿಗೆದರುತ್ತಿದ್ದು, ರಾಜ್ಯದ ರಾಜಕೀಯ ವಾತಾವರಣ ಕಾವು ಹಿಡಿದಿದೆ.
ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ (Mahagathbandhan), ಕರ್ನಾಟಕ ಮಾದರಿಯ ಗ್ಯಾರಂಟಿಗಳನ್ನು ನೀಡಿ ಬಿಹಾರ ಮತದಾರರನ್ನು ಸೆಳೆಯುವ ತಂತ್ರ ರೂಪಿಸಿದೆ. ಪಾಟ್ನಾದಲ್ಲಿ ಪ್ರಣಾಳಿಕೆ ಬಿಡುಗಡೆಗೆ ಮುನ್ನ ಕಾಂಗ್ರೆಸ್ ನಾಯಕ ಕೃಷ್ಣ ಅಲ್ಲವರು, ಬಿಹಾರ ಜನತೆಗೆ ಮಹಾಘಟಬಂಧನ್ನ ಪ್ರಮುಖ ಭರವಸೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಅವರ ಪ್ರಕಾರ, ಮಹಿಳೆಯರಿಗೆ ಪ್ರತಿ ತಿಂಗಳು ₹2,500, 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಹಾಗೂ ಭೂರಹಿತ ಕುಟುಂಬಗಳಿಗೆ 3–5 ಡಿಸ್ಮಿಲ್ (ಸುಮಾರು 1300–2176 ಚದರ ಅಡಿ) ಭೂಮಿ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಇದಕ್ಕೆ ಸೇರಿ ಯುವಕರಿಗೆ ಉದ್ಯೋಗ ಸೃಷ್ಟಿ, ಶಿಕ್ಷಣದಲ್ಲಿ ಹೂಡಿಕೆ ಮತ್ತು ರೈತರ ಸಾಲಮನ್ನಾ ಕುರಿತು ಸಹ ಮಹತ್ವದ ಘೋಷಣೆಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆಯೇ, ರಾಷ್ಟ್ರೀಯ ಜನತಾ ದಳ (RJD) ಪಕ್ಷದ ಒಳ ಅಸಮಾಧಾನ ಸ್ಪಷ್ಟವಾಗಿದೆ. ಸೋಮವಾರ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ 27 ನಾಯಕರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಆರ್ಜೆಡಿ ರಾಜ್ಯ ಪ್ರಧಾನ ಕಚೇರಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಕೆಲವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವುದು ಹಾಗೂ ಅಧಿಕೃತ ಅಭ್ಯರ್ಥಿಗಳನ್ನು ವಿರೋಧಿಸುತ್ತಿರುವ ವರದಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಬಿಹಾರ ಚುನಾವಣಾ ಕಣದಲ್ಲೀಗ ಭರವಸೆಗಳು, ಬಂಡಾಯ ಮತ್ತು ಬದಲಾವಣೆಯ ರಾಜಕೀಯದ ನಡುವೆ ಹೋರಾಟ ತೀವ್ರಗೊಂಡಿದ್ದು, ಕರ್ನಾಟಕ ಮಾದರಿಯ ಗ್ಯಾರಂಟಿಗಳು ಬಿಹಾರದಲ್ಲಿ ಎಷ್ಟು ಫಲ ನೀಡುತ್ತವೆ ಎಂಬುದೇ ಕುತೂಹಲದ ವಿಷಯವಾಗಿದೆ.
ಚುನಾವಣೆ
Bhabanipur Shock: 700 ಮತದಾರರ ಬೂತ್ನಲ್ಲಿ ಮಮತಾ ಬ್ಯಾನರ್ಜಿ ಪಡೆದದ್ದು ಕೇವಲ 28 ಮತ!
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಮುಖ್ಯಮಂತ್ರಿ Mamata Banerjee ಅವರಿಗೆ ಭಾರೀ ಹಿನ್ನಡೆಯಾಗಿದೆ. ಟಿಎಂಸಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿ ನಾಯಕ Suvendu Adhikari ಐತಿಹಾಸಿಕ ಜಯ ಸಾಧಿಸಿದ್ದು, ಮಮತಾ ಬ್ಯಾನರ್ಜಿ ಅವರ ಸ್ವಂತ ವಾರ್ಡ್ನಲ್ಲಿಯೇ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಬೂತ್ವಾರು ಅಂಕಿ-ಅಂಶಗಳ ಪ್ರಕಾರ, ಭವಾನಿಪುರ ಕ್ಷೇತ್ರದ 267 ಬೂತ್ಗಳ ಪೈಕಿ 207 ಬೂತ್ಗಳಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸವಿರುವ ವಾರ್ಡ್ ನಂಬರ್ 73ರಲ್ಲಿ ಸುವೇಂದು ಅಧಿಕಾರಿ 8,932 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ ಕೇವಲ 4,284 ಮತಗಳಿಗೆ ಸೀಮಿತರಾಗಿದ್ದಾರೆ.
ಚುನಾವಣೆಗೆ ಮುನ್ನ Amit Shah ಬಿಜೆಪಿ ಕಾರ್ಯಕರ್ತರಿಗೆ “ಮಮತಾ ಬ್ಯಾನರ್ಜಿಯನ್ನು ಅವರದೇ ಕೋಟೆಯಲ್ಲಿ ಸೋಲಿಸಿ” ಎಂದು ಕರೆ ನೀಡಿದ್ದರು. ಇದೀಗ ಸುವೇಂದು ಅಧಿಕಾರಿ ಆ ಸವಾಲನ್ನು ಯಶಸ್ವಿಯಾಗಿ ಈಡೇರಿಸಿದ್ದಾರೆ ಎಂದು ಬಿಜೆಪಿ ಪಾಳಯದಲ್ಲಿ ಸಂಭ್ರಮ ವ್ಯಕ್ತವಾಗಿದೆ.
ಸುವೇಂದು ಅಧಿಕಾರಿಗೆ ದಕ್ಷಿಣ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಲ್ಲಿ ಮೊದಲಿನಿಂದ ರಾಜಕೀಯ ನೆಲೆ ಕಡಿಮೆ ಇತ್ತು. ಆದರೂ ಕ್ಷೇತ್ರದಲ್ಲಿ ಶೇಕಡಾ 63 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮಮತಾ ಬ್ಯಾನರ್ಜಿ ಕೇವಲ ಶೇಕಡಾ 30 ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ.
ಇನ್ನು ಹಲವು ಬೂತ್ಗಳಲ್ಲಿ ಮಮತಾ ಬ್ಯಾನರ್ಜಿ 50 ಮತಗಳ ಗಡಿ ದಾಟಲೂ ವಿಫಲರಾಗಿರುವುದು ಟಿಎಂಸಿ ಪಾಳಯಕ್ಕೆ ದೊಡ್ಡ ಆಘಾತವಾಗಿದೆ. 2021ರ ಉಪಚುನಾವಣೆಯಲ್ಲಿ ಏಳು ವಾರ್ಡ್ಗಳಲ್ಲೂ ಗೆದ್ದಿದ್ದ ದೀದಿ, ಈ ಬಾರಿ ತಮ್ಮ ಹಿಡಿತವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅಂತಿಮವಾಗಿ ಮಮತಾ ಬ್ಯಾನರ್ಜಿ 58,812 ಮತಗಳನ್ನು ಪಡೆದರೆ, ಸುವೇಂದು ಅಧಿಕಾರಿ 73,917 ಮತಗಳನ್ನು ಪಡೆದು ಟಿಎಂಸಿ ಕೋಟೆಯನ್ನು ಧೂಳೀಪಟ ಮಾಡಿದ್ದಾರೆ.
ಚುನಾವಣೆ
ಜಿಬಿಎ ಚುನಾವಣೆಗೆ ಕೌಂಟ್ಡೌನ್ ಶುರು! ಜೂನ್ನಲ್ಲಿ ಡೇಟ್ ಫಿಕ್ಸ್
ಬೆಂಗಳೂರು: ಬಹುನಿರೀಕ್ಷಿತ Greater Bengaluru Authority (GBA) ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಜೂನ್ 14ರಿಂದ 24ರೊಳಗೆ ಚುನಾವಣಾ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ G. A. Sangreshi ಸೂಚನೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ Maheshwar Rao ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಜಿಬಿಎ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಭೆಗೆ ಗೈರಾಗಿದ್ದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಎ ಸಂಗ್ರೇಶಿ, “ರಾಜ್ಯ ಚುನಾವಣಾ ಆಯೋಗ ಮತ್ತು ಜಿಬಿಎ ಸಮಾಲೋಚನೆ ನಡೆಸಿ ದಿನಾಂಕ ನಿಗದಿಪಡಿಸುವುದು ಕಾನೂನುಬದ್ಧ ಪ್ರಕ್ರಿಯೆ. ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ದಿನಾಂಕ ನಿಗದಿ ಮಾತ್ರ ಬಾಕಿಯಿದೆ” ಎಂದು ತಿಳಿಸಿದರು.
ಜನಗಣತಿ, ಮನೆ ಸಮೀಕ್ಷೆ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆ ಸಮಯ ಪರಿಶೀಲಿಸಿ ದಿನಾಂಕ ಘೋಷಿಸುವಂತೆ ಜಿಬಿಎಗೆ ಸೂಚಿಸಲಾಗಿದೆ. ಆದರೆ ಜೂನ್ 30ರೊಳಗೆ ಚುನಾವಣೆ ದಿನಾಂಕ ನಿಗದಿಪಡಿಸಲೇಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಬೇಕಿರುವುದಾಗಿ ಆಯುಕ್ತರು ಹೇಳಿದರು.
ಇನ್ನೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಾತನಾಡಿ, ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಹಾಗೂ ಮೀಸಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು. ಚುನಾವಣಾ ಕಾರ್ಯಕ್ಕಾಗಿ RO, AERO ಮತ್ತು BLOಗಳ ನೇಮಕಾತಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಚುನಾವಣೆ
‘ನೀವು ಸೋತಿಲ್ಲ, ಗೆದ್ದಿದ್ದೀರಿ’ – ಮಮತಾ ಭೇಟಿ ಬಳಿಕ ಅಖಿಲೇಶ್ ಯಾದವ್ ಹೇಳಿಕೆ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ Akhilesh Yadav ಕೋಲ್ಕತ್ತಾಗೆ ಭೇಟಿ ನೀಡಿ Mamata Banerjee ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಗುರುವಾರ ಕಾಲಿಘಾಟ್ನಲ್ಲಿರುವ ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆದ ಭೇಟಿಯ ವೇಳೆ ಅಖಿಲೇಶ್ ಯಾದವ್, “ನೀವು ಸೋತಿಲ್ಲ, ಗೆದ್ದಿದ್ದೀರಿ” ಎಂದು ಹೇಳಿ ಮಮತಾಗೆ ಸನ್ಮಾನ ಸಲ್ಲಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅಖಿಲೇಶ್ ಯಾದವ್, ಬಂಗಾಳದಲ್ಲಿ ಚುನಾವಣೆಗಳನ್ನು ಉತ್ತರ ಪ್ರದೇಶ ಮಾದರಿಯಲ್ಲಿ ನಡೆಸಲಾಗಿದ್ದು, ಬೆದರಿಕೆ ಹಾಗೂ ಕುತಂತ್ರದ ರಾಜಕಾರಣ ಬಳಸಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ, ಚುನಾವಣಾ ಆಯೋಗ ಹಾಗೂ ಭೂಗತ ಶಕ್ತಿಗಳ ಸಂಚುಗಳಿಂದ ಚುನಾವಣೆ ಪ್ರಭಾವಿತವಾಗಿದೆ ಎಂದು ಆರೋಪಿಸಿದರು.
ಅಲ್ಲದೇ, ಮಮತಾ ಬ್ಯಾನರ್ಜಿ ಮತ್ತು Abhishek Banerjee ಅವರ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಬಿಜೆಪಿ ಮಹಿಳಾ ವಿರೋಧಿ ಪಕ್ಷ ಎಂದು ಟೀಕಿಸಿದರು. ದೇಶದ ಪ್ರಜಾಪ್ರಭುತ್ವ ಶಕ್ತಿಗಳು ಒಂದಾಗಬೇಕೆಂದು ಕರೆ ನೀಡಿದರು.
ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ ಟಿಎಂಸಿ ಕೇವಲ 80 ಸ್ಥಾನಗಳಲ್ಲಿ ಜಯ ಸಾಧಿಸಿತು. ಬಿಜೆಪಿ 207 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ.
ಟಿಎಂಸಿ ಸೋಲಿನ ಬಳಿಕ ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ನಾಯಕರು ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತಿರುವುದು ಇದೀಗ ದೇಶದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
-
ದೇಶ19 hours agoಆತ್ಮೀಯ ಆಲಿಂಗನದಿಂದ ಗಮನ ಸೆಳೆದ ಡಿಕೆಶಿ ಮತ್ತು ಯಡಿಯೂರಪ್ಪ
-
ದೇಶ19 hours agoಡಿಕೆಶಿ ಕ್ಯಾಬಿನೆಟ್ ಘೋಷಣೆ: ಪರಮೇಶ್ವರ್ ಡಿಸಿಎಂ, ಪ್ರಿಯಾಂಕ್ಗೆ ಗೃಹ ಖಾತೆ
-
ದೇಶ15 hours agoಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ; ಸಂವಿಧಾನ ಪುಸ್ತಕ ಹಿಡಿದು ಅಧಿಕಾರ ಸ್ವೀಕಾರ
-
ದೇಶ19 hours agoGBA : ‘1 ಕಿಲೋಮೀಟರ್ ಚಾಲೆಂಜ್’ಗೆ ನೆಟ್ಟಿಗರ ಆಕ್ರೋಶ; “ಮೊದಲು ಫುಟ್ಪಾತ್ ಸರಿಪಡಿಸಿ”
-
ದೇಶ22 hours agoಮಾನವೀಯತೆ ಮೆರೆದ CM ಡಿಕೆಶಿ: ತಾವು ಓದಿದ ಶಾಲೆಯ ಮಕ್ಕಳಿಗೆ ಪಟ್ಟಾಭಿಷೇಕ ವೀಕ್ಷಣೆಯ ಅವಕಾಶ
-
ದೇಶ15 hours agoಸಿಎಂ ಪ್ರಮಾಣವಚನಕ್ಕೂ ಮುನ್ನ ರಾಹುಲ್ ಗಾಂಧಿಗೆ ಕೈಮುಗಿದ ಡಿಕೆ ಶಿವಕುಮಾರ್; ವೇದಿಕೆಯಲ್ಲಿ ಗಮನ ಸೆಳೆದ ಅಪರೂಪದ ಕ್ಷಣ
-
ದೇಶ21 hours agoಮಮತಾ ಬ್ಯಾನರ್ಜಿ ಎದುರು ಅಸಮಾಧಾನದ ಅಲೆ, ಏನಾಗಲಿದೆ ಟಿಎಂಸಿ ಭವಿಷ್ಯ?
-
ಅಪರಾಧ19 hours agoದೆಹಲಿ ರೆಸ್ಟೋರೆಂಟ್ನಲ್ಲಿ ಭೀಕರ ಅಗ್ನಿ ಅವಘಡ; 10 ಮಂದಿ ಸಾವು, ಹಲವರ ರಕ್ಷಣೆ
